Wednesday, February 20, 2013

ಲೋಕಭರಿತನೋ ರಂಗ ಅನೇಕಚರಿತನೋ

ಲೋಕಭರಿತನೋ ರಂಗ ಅನೇಕಚರಿತನೋ


ಕಾಕುಜನರ ಮುರಿದು ತನ್ನ ಏಕಾಂತಭಕ್ತರ ಪೊರೆವ ಕೃಷ್ಣ//


ರಾಜಸೂಯಯಾಗದಲ್ಲಿ ರಾಜರಾಜರಿರಲು ಧರ್ಮ

ರಾಜಸೂಯತನುಯೀತನೆ ಸಭಾಪೂಜ್ಯನೆಂದು ಮನ್ನಿಸಿದಾಗ//


ಮಿಕ್ಕ ನೃಪರ ಜರಿದು ಅಮಿತವಿಕ್ರಮ ಯದುವರನೆ ತನಗೆ

ತಕ್ಕ ರಮಣನೆಂದು ರುಕ್ಮಿಣಿ ಉಕ್ಕಿ ಮಾಲೆಯಿಕ್ಕಿದಳಾಗ//


ಜ್ಞಾನಶೂನ್ಯನಾಗಿ ಸೊಕ್ಕಿ ತಾನೇ ವಾಸುದೇವನೆನಲು

ಹೀನ ಪೌ೦ಡ್ರಕನ ಶಿರವ ಜಾಣರಾಯ ತರಿದನಾಗ//


ಉತ್ತರೆಯ ಗರ್ಭದಲ್ಲಿ ಸುತ್ತಿಮುತ್ತಿದಸ್ತ್ರವನು

ಒತ್ತಿ ಚಕ್ರದಿಂದ ನಿಜಭಕ್ತ ಪರೀಕ್ಷಿತನ ಕಾಯ್ದ//


ತನ್ನ ಸೇವಕಜನರಿಗೊಲಿದು ಅನಂತ ಉಡುಪಿಯಲಿ ನಿಂತು

ಘನಮಂದಿರ ಮಾಡಿಕೊಂಡ ಪ್ರಸನ್ನ ಹಯವದನ ಕೃಷ್ಣ//

No comments:

Post a Comment