Monday, January 28, 2013

ಶ್ರೀ ಹರಿಕಥಾಮೃತಸಾರ - ಫಲಸ್ತುತಿ

//ಶ್ರೀ ಫಲಶ್ರುತಿ ಸಂಧಿ//

ಶ್ರೀ ಜಗನ್ನಾಥ ದಾಸಾರ್ಯರ ಪರಮ ಮುಖ್ಯ

ಶಿಷ್ಯರಾದ ಶ್ರೀ ಶ್ರೀದವಿಠಲರು (ಕರ್ಜಿಗಿ ದಾಸರಾಯರು) ರಚಿಸಿದ

ಶ್ರೀಮದ್ ಹರಿಕಥಾಮೃತಸಾರದ ಫಲಸ್ತುತಿ ಸಂಧಿ



ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಹರಿಕಥಾಮೃತಸಾರ ಶ್ರೀಮದ್ಗುರುವರ

ಜಗನ್ನಾಥ ದಾಸರ ಕರತಲಾಮಲಕವನೆ

ಪೇಳಿದ ಸಕಲ ಸಂಧಿಗಳ

ಪರಮ ಪಂಡಿತ ಮಾನಿಗಳು

ಮತ್ಸರಿಸಲೆದೆಗಿಚ್ಚಾಗಿ ತೋರುವುದರಿಸಕರಿಗಿದು

ತೋರಿ ಪೇಳುವದಲ್ಲ ಧರೆಯೊಳಗೆ//1//


ಭಾಮಿನೀ ಷಟ್ಪದಿಯ ರೂಪದಲೀ

ಮಹಾದ್ಭುತ ಕಾವ್ಯದಾದಿಯೊಳಾ

ಮನೋಹರ ತರತರಾತ್ಮಕ ನಾಂದಿ ಪದ್ಯಗಳ

ಯಾಮಯಾಮಕೆ ಪಠಿಸುವವರ

ಸುಧಾಮಸ ಕೈಪಿಡಿಯಲೋಸುಗ

ಪ್ರೇಮದಿಂದಲಿ ಪೇಳ್ದ ಗುರು ಕಾರುಣ್ಯಕೇನೆಂಬೆ//2//


ಸಾರವೆಂದರೆ ಹರಿಕಥಾಮೃತ

ಸಾರವೆಂಬುದೆಮ್ಮ ಗುರುವರ

ಸಾರಿದಲ್ಲದೆ ತಿಳಿಯದೆನುತ ಮಹೇಂದ್ರ ನಂದನನ

ಸಾರಥಿಯ ಬಲಗೊಂಡು ಸಾರಾ

ಸಾರಗಳ ನಿರ್ಣೈಸಿ ಪೇಳ್ದನು

ಸಾರ ನಡೆವ ಮಹಾತ್ಮರಿಗೆ ಸಂಸಾರವೆಲ್ಲಿಹುದೋ//3//


ದಾಸವರ್ಯರ ಮುಖದಿ ನಿಂದು

ರಮೇಶನನು ಕೀರ್ತಿಸುವ ಮನದಭಿಲಾಷೆಯಲಿ

ವರ್ಣಾಭಿಮಾನಿಗಳೊಲಿದು ಪೇಳಿಸಿದ

ಈ ಸುಲಕ್ಷಣ ಕಾವ್ಯದೊಳಗ್ಯತಿ

ಪ್ರಾಸಗಳಿಗೆ ಪ್ರಯತ್ನವಿಲ್ಲದೆ

ಲೇಸುಲೇಸನೆ ಶ್ರಾವ್ಯ ಮಾಡುದೆ ಕುರುಹು ಕವಿಗಳಿಗೆ//4//


ಪ್ರಾಕೃತೋಕ್ತಿಗಳೆಂದು ಬರಿದೆ

ಮಹಾಕೃತಘ್ನರು ಜರಿವರಲ್ಲದೆ

ಸ್ವೀಕೃತವ ಮಾಡದಲೆ ಬಿಡುವರೇ ಸುಜನರಾದವರು

ಶ್ರೀಕೃತೀಪತಿ ಅಮಲ ಗುಣಗಳು

ಈ ಕೃತಿಯೊಳುoಟಾದ ಬಳಿಕ

ಪ್ರಾಕೃತವೆ ಸಂಸ್ಕೃತದ ಸಡಗರವೇನು ಸುಜನರಿಗೆ//5//


ಶ್ರುತಿಗೆ ಶೋಭನಮಾಗದಡೆ

ಜಡಮತಿಗೆ ಮಂಗಳವೀಯದಡೆ

ಶ್ರುತಿಸ್ಮ್ರುತಿಗೆ ಸಮ್ಮತವಾಗದಿದ್ದಡೆ ನಮ್ಮ ಗುರುರಾಯ

ಮಥಿಸಿ ಮಧ್ವಾಗಮ ಪಯೋಬ್ಧಿಯ

ಕ್ಷಿತಿಗೆ ತೋರಿದ ಬ್ರಹ್ಮ ವಿದ್ಯಾ

ರತರಿಗೀಪ್ಸಿತ ಹರಿಕಥಾಮೃತಸಾರವೆನಿಸುವುದು//6//


ಭಕ್ತಿವಾದದಿ ಪೇಳ್ದನೆಂಬ

ಪ್ರಸಕ್ತಿ ಸಲ್ಲದು ಕಾವ್ಯದೊಳು ಪುನರುಕ್ತಿ

ಶುಷ್ಕ ಸಮಾನ ಪದ ವ್ಯತ್ಯಾಸ ಮೊದಲಾದ

ಯುಕ್ತಿ ಶಾಸ್ತ್ರ ವಿರುದ್ಧ ಶಬ್ದ

ವಿಭಕ್ತಿ ವಿಷಮಗಳಿರಲು

ಜೀವನ್ಮುಕ್ತ ಭೋಗ್ಯವಿದೆಂದು ಸಿರಿಮದನಂದ ಮೆಚ್ಚುವನೆ?//7//


ಆಶುಕವಿಕುಲ ಕಲ್ಪತರು

ದಿಗ್ದೇಶವರಿಯಲು ರಂಗನೊಲುಮೆಯ

ದಾಸಕೂಟಸ್ಥರಿಗೆರಗಿ ನಾ ಬೇಡಿಕೊಂಬೆನು

ಈ ಸುಲಕ್ಷಣ ಹರಿಕಥಾಮೃತ

ಮೀಸಲರಿಯದೆ ಸಾರದೀರ್ಘ

ದ್ವೇಷಿಗಳಿಗೆರೆಯದಲೆ ಸಲಿಸುವದೆನ್ನ ಬಿನ್ನಪವ//8//


ಪ್ರಾಸಗಳ ಪೊಂದಿಸದೆ ಶಬ್ದ

ಶ್ಲೇಷಗಳ ಶೋಧಿಸದೆ ದೀರ್ಘ

ಹ್ರಾಸಗಳ ಸಲ್ಲಿಸದೆ ಷಟ್ಪದಿಗತಿಗೆ ನಿಲ್ಲಿಸದೆ

ದೂಷಕರು ದಿನದಿನದಿ ಮಾಡುವ

ದೂಷಣೆಯೆ ಭೂಷಣಗಳೆಂದುಪ

ದೇಶಗಮ್ಯವು ಹರಿಕಥಾಮೃತಸಾರ ಸಾಧ್ಯರಿಗೆ//9//


ಅಶ್ರುತಾಗಮ ಇದರ ಭಾವ

ಪರಿಶ್ರಮವು ಬಲ್ಲವರಿಗಾನಂದಾಶ್ರುಗಳ

ಮಳೆಗರೆಸಿ ಮರೆಸುವ ಚಮತ್ಕ್ರುತಿಯ

ಮಿಶ್ರರಿಗೆ ಮರೆ ಮಾಡಿ ದಿವಿಜರ

ಜಸ್ರದಲಿ ಕಾಯ್ದಿಪ್ಪರಿದರೊಳು

ಪಃಶ್ರುತಿಗಳೈತಪ್ಪವೇ ನಿಜ ಭಕ್ತಿ ಉಳ್ಳವರಿಗೆ//10//


ನಿಚ್ಚ ನಿಜಜನ ನೆಚ್ಚ ನೆಲೆಗೊಂಡಚ್ಚ

ಭಾಗ್ಯವು ಪೆಚ್ಚ ಪೇರ್ಮೆಯು

ಕೆಚ್ಚ ಕೇಳ್ವನು ಮೆಚ್ಚ ಮಲಮರ ಮುಚ್ಚಲೆಂದೆನುತ

ಉಚ್ಚವಿಗಳಿಗೆ ಪೊಚ್ಚ ಪೊಸೆದನ

ಲುಚ್ಚರಿಸದೀ ಸಚ್ಚರಿತ್ರೆಯನುಚ್ಚರಿಸೆ

ಸಿರಿವತ್ಸ ಲಾಂಛನ ಮೆಚ್ಚಲೇನರಿದು//11//


ಸಾಧು ಸಭೆಯೊಳು ಮೆರೆಯೆ ತತ್ವ

ಸುಬೋಧ ವೃಷ್ಟಿಯಗರೆಯೆ ಕಾಮಕ್ರೋಧ

ಬೀಜವು ಹುರಿಯೆ ಖಳರದೆ ಬಿರಿಯೆ ಕರಕರಿಯ

ವಾದಿಗಳ ಪಲ್ಮುರಿಯೆ ಪರಮ

ವಿನೋದಿಗಳ ಮೈಮರೆಯಲೋಸುಗ

ಹಾದಿತೋರಿದ ಹಿರಿಯ ಬಹುಚಾತುರ್ಯ ಹೊಸಪರಿಯ//12//


ವ್ಯಾಸತೀರ್ಥರೊಲವೆಯೊ ವಿಠಲೋಪಾಸಕ

ಪ್ರಭುವರ್ಯ ಪುರಂದರದಾಸರಾಯರ

ದಯವೋ ತಿಳಿಯದು ಓದಿ ಕೇಳದಲೆ

ಕೇಶವನ ಗುಣಮಣಿಗಳನು

ಪ್ರಾಣೇಶಗರ್ಪಿಸಿ ವಾದಿರಾಜರ

ಕೋಶಕೊಪ್ಪುವ ಹರಿಕಥಾಮೃತಸಾರ ಪೇಳಿದರು//13//


ಹರಿಕಥಾಮೃತಸಾರ ನವರಸಭರಿತ

ಬಹು ಗಂಭೀರ ರತ್ನಾಕರ

ರುಚಿರ ಶೃಂಗಾರ ಸಾಲಂಕಾರ ವಿಸ್ತಾರ

ಸರಸ ನರ ಕಂಠೀರವಾಖ್ಯಾರ್ಯರ

ಜನಿತ ಸುಕುಮಾರ ಸಾತ್ವೀಕರಿಗೆ

ಪರಮೋದಾರ ಮಾಡಿದ ಮರೆಯದುಪಕಾರ//14//


ಅವನಿಯೊಳು ಜ್ಯೋತಿಷ್ಮತೀ ತೈಲವನು

ಪಾಮರನುಂಡು ಜೀರ್ಣಿಸಲವನೆ

ಪಂಡಿತನೋಕರಿಪವಿವೇಕಿಯಪ್ಪಂತೆ

ಶ್ರವಣ ಮಂಗಳ ಹರಿಕಥಾಮೃತ

ಸವಿದು ನಿರ್ಗುಣಸಾರ ಮಕ್ಕಿಸಲವ

ನಿಪುಣನೈ ಯೋಗ್ಯಗಲ್ಲದೆ ದಕ್ಕಲರಿಯದಿದು//15//


ಅಕ್ಕರದೊಳೀ ಕಾವ್ಯದೊಳೊಂದಕ್ಕರವ

ಬರೆದೋದಿದವ ದೇವರ್ಕಳಿಂ

ದುಸ್ತಜ್ಯನೆನಿಸಿ ಧರ್ಮಾರ್ಥಕಾಮಗಳ

ಲೆಕ್ಕಿಸದೆ ಲೋಕೈಕನಾಥನ

ಭಕ್ತಿ ಭಾಗ್ಯವ ಪಡೆವ ಜೀವನ್ಮುಕ್ತಗಲ್ಲದೆ

ಹರಿಕಥಾಮೃತಸಾರ ಸೊಗಸುವದೆ//16//


ವತ್ತಿಬಹ ವಿಘ್ನಗಳ ತಡೆದಪ

ಮೃತ್ಯುವಿಗೆ ಮರೆಮಾಡಿ ಕಾಲನ

ಭೃತ್ಯರಿಗೆ ಭೀಕರವ ಪುಟ್ಟಿಸಿ ಸಕಲ ಸಿದ್ಧಿಗಳ

ಎತ್ತಿಗೊಳ್ಳಿಸಿ ವನರುಹೇಕ್ಷಣ

ನ್ರುತ್ಯಮಾಡುವವನ ಮನೆಯೊಳು

ನಿತ್ಯಮಂಗಳ ಹರಿಕಥಾಮೃತಸಾರ ಪಠಿಸುವರ//17//


ಆಯುರಾರೋಗ್ಯೈಶ್ವರ್ಯ ಮಾಹಾಯಶೋ

ಧೈರ್ಯ ಬಲ ಸಮ ಸಹಾಯ

ಶೌರ್ಯೋದಾರ್ಯ ಗುಣಗಾಂಭೀರ್ಯ ಮೊದಲಾದ

ಆಯುತಗಳುಂಟಾಗಲೊಂದಧ್ಯಾಯ

ಪಠಿಸಿದ ಮಾತ್ರದಿಂ ಶ್ರವಣೀಯವಲ್ಲದೆ

ಹರಿಕಥಾಮೃತಸಾರ ಸುಜನರಿಗೆ//18//


ಕುರುಡ ಕಂಗಳ ಪಡೆವ ಬಧಿರನಿಗೆರೆಡು

ಕಿವಿ ಕೇಳ್ಬಹವು ಬೆಳೆಯದ

ಮುರುಡ ಮದನಾಕೃತಿಯ ತಾಳ್ವನು ಕೇಳ್ದ ಮಾತ್ರದಲಿ

ಬರಡು ಹೈನಾಗುವದು ಪೇಳ್ದರೆ

ಕೊರಡು ಪಲ್ಲೈಸುವದು ಪ್ರತಿದಿನ

ಹುರುಡಿಲಾದರು ಹರಿಕಥಾಮೃತಸಾರವನು ಪಠಿಸೆ//19//


ನಿರ್ಜರ ತರಂಗಿಣಿಯೊಳನುದಿನ

ಮಜ್ಜನಾದಿ ಸಮಸ್ತ ಕರ್ಮ

ವಿವರ್ಜಿತಾಶಾಪಾಶದಿಂದಲಿ ಮಾಡಿದಧಿಕ ಫಲ

ಹೆಜ್ಜೆಹೆಜ್ಜೆಗೆ ದೊರೆಯದಿಪ್ಪವೆ

ಸಜ್ಜನರು ಶಿರತೂಗುವಂದದಿ

ಘರ್ಜಿಸುತಲೀ ಹರಿಕಥಾಮೃತಸಾರ ಪಠಿಸುವರ//20//


ಸತಿಯರಿಗೆ ಪತಿಭಕುತಿ ಪತ್ನೀವ್ರತ

ಪುರುಷರಿಗೆ ಹರುಷ ನೆಲೆಗೊಂಡತಿ

ಮನೋಹರರಾಗಿ ಗುರು ಹಿರಿಯರಿಗೆ ಜಗದೊಳಗೆ

ಸತತ ಮಂಗಳವೀವ ಬಹು

ಸುಕೃತಿಗಳೆನಿಸುತ ಸುಲಭದಿಂ ಸದ್ಗತಿಯ

ಪಡೆವರು ಹರಿಕಥಾಮೃತಸಾರವನು ಪಠಿಸೆ//21//


ಎಂತು ಬಣ್ಣಿಸಲೆನ್ನಳವೆ

ಭಗವಂತನಮಲ ಗುಣಾನುವಾದಗಳೆಂತು

ಪರಿಯಲಿ ಪೂರ್ಣಬೋಧರ ಮತವ ಪೊಂದಿದರ

ಚಿಂತನಗೆ ಬಪ್ಪಂತೆ ಬಹು ದೃಷ್ಟಾಂತ

ಪೂರ್ವಕವಾಗಿ ಪೇಳ್ದ ಮಹಂತರಿಗೆ

ನರರೆಂದು ಬಗೆವರೆ ನಿರಯ ಭಾಗಿಗಳು//22//


ಮಣಿಖಚಿತ ಹರಿವಾಣದೊಳು ವಾರಣ

ಸುಭೋಜ್ಯ ಪದಾರ್ಥ ಕೃಷ್ಣಾರ್ಪಣವೆನುತ

ಪಸಿದವರಿಗೋಸುಗ ನೀಡುವಂದದಲಿ

ಪ್ರಣತರಿಗೆ ಪೊಂಗನಡ ವರ

ವಾನ್ಗ್ಮಣಿಗಳಿಂ ವಿರಚಿಸಿದ ಕೃತಿಯೊಳುಣಿಸಿ

ನೋಡುವ ಹರಿಕಥಾಮೃತಸಾರ ವನುದಾರ//23//


ದುಷ್ಟರೆನ್ನದೆ ದುರ್ವಿಷಯದಿಂ

ಪುಷ್ಟರೆನ್ನದೆ ಪೂತಕರ್ಮ

ಭ್ರಷ್ಟರೆನ್ನದೆ ಶ್ರೀದವಿಠಲ ವೇಣುಗೋಪಾಲ

ಕೃಷ್ಣ ಕೈಪಿಡಿವನು ಸುಸತ್ಯ

ವಿಶಿಷ್ಟ ದಾಸತ್ವವನು ಪಾಲಿಸಿ

ನಿಷ್ಠೆಯಿಂದಲಿ ಹರಿಕಥಾಮೃತಸಾರ ಪಠಿಸುವರ//24//


//ಇತಿ ಶ್ರೀ ಕರ್ಜಿಗಿ ದಸರಾಯ ವಿರಚಿತ ಫಲಶ್ರುತಿ ಸಂಧಿ ಸಂಪೂರ್ಣಂ//

//ಇತಿ ಶ್ರೀ ಕೃಷ್ಣಾರ್ಪಣಮಸ್ತು//

ಶ್ರೀ ಹರಿಕಥಾಮೃತಸಾರ - 32

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಶ್ರೀ ದೈತ್ಯತಾರತಮ್ಯ ಸಂಧಿ//


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಶ್ರೀಶ ಮುಕ್ತಾಮುಕ್ತ ಸುರವರ ವಾಸುದೇವಗೆ ಭಕ್ತಿಯಲಿ

ಕಮಲಾಸನನು ಪೇಳಿದನು ದೈತ್ಯ ಸ್ವಭಾವ ಗುಣಗಳನು//


ಎನಗೆ ನಿನ್ನಲಿ ಭಕ್ತಿ ಜ್ಞಾನಗಳು ಎನಿತಿಹವೊ ಪ್ರಾಣನಲಿ ತಿಳಿಯದೆ

ಹನುಮದಾದಿ ಅವತಾರಗಳ ಭೇದಗಳ ಪೇಳುವವ ದನುಜ

ಘೋರಾಂಧಂತಮಸಿಗೆ ಯೋಗ್ಯನು ನಸಂಶಯ

ನಿನ್ನ ಬೈವರ ಕೊನೆಯ ನಾಲಿಗೆ ಪಿಡಿದು ಛೇದಿಪೆನು ಎಂದನು ಅಬ್ಜ ಭವ//1//


ಜ್ಞಾನ ಬಲ ಸುಖ ಪೂರ್ಣ ವ್ಯಾಪ್ತಗೆ ಹೀನ ಗುಣನೆಂಬುವನು

ಈಶ್ವರ ತಾನೇ ಎಂಬುವ ಸಚ್ಚಿದಾನಂದಾತ್ಮಗೆ ಉತ್ಪತ್ತಿ

ಶ್ರೀನಿತಂಬಿನಿಗೆ ಈಶಗೆ ವಿಯೋಗಾನು ಚಿಂತನೆ

ಛೇದ ಭೇದ ವಿಹೀನ ದೇಹಗೆ ಶಸ್ತ್ರಗಳ ಭಯ ಪೇಳುವವ ದೈತ್ಯ//2//


ಲೇಶ ಭಯ ಶೋಕಾದಿ ಶೂನ್ಯಗೆ ಕ್ಲೇಶಗಳು ಪೇಳುವವ

ರಾಮ ವ್ಯಾಸ ರೂಪಂಗಳಿಗೆ ಋಷಿ ವಿಪ್ರತ್ವ ಪೇಳುವವ

ದಾಶರಥಿ ಕೃಷ್ಣಾದಿ ರೂಪಕೆ ಕೇಶಖಂಡನೆ ಪೇಳ್ವ

ಮಕ್ಕಳಿಗೋಸುವ ಶಿವಾರ್ಚನೆಯ ಮಾಡಿದನು ಎಂಬುವವ ದೈತ್ಯ//3//


ಪಾಪ ಪರಿಹಾರಾರ್ಥ ರಾಮ ಉಮಾಪತಿಯ ನಿರ್ಮಿಸಿದ

ಭಗವದ್ರೂಪ ರೂಪಕೆ ಭೇದ ಚಿಂತನೆ ಮಾಳ್ಪ ಮಾನವನು

ಆಪಗಳು ಸದೀರ್ಥ ಗುರು ಮಾತಾಪಿತರ ಪ್ರಭು ಪ್ರತಿಮ ಭೂತ ದಯಾಪರರು

ಕಂಡವರೆ ದೇವರು ಎಂಬುವನೆ ದೈತ್ಯ//4//


ಸುಂದರ ಸ್ವಯಂವ್ಯಕ್ತವು ಚಿದಾನಂದ ರೂಪಗಳು ಎಂಬುವನು

ನರರಿಂದ ನಿರ್ಮಿತ ಈಶ್ವರಗೆ ಅಭಿನಮಿಸುತಿಹ ನರನು

ಕಂದುಗೊರಳ ದಿವಾಕರನು ಹರಿಯೊಂದೆ ಸೂರ್ಯ ಸುರೋತ್ತಮ

ಜಗದ್ವಂದ್ಯನೆಂಬುವ ವಿಷ್ಣು ದೂಷಣೆ ಮಾಡಿದವ ದೈತ್ಯ//5//


ನೇಮದಿಂದ ಅಶ್ವತ್ಥ ತುಳಸೀ ಸೋಮಧರನಲಿ ವಿಮಲ ಸಾಲಿಗ್ರಾಮಗಳನಿಟ್ಟು

ಅಭಿನಮಿಪ ನರ ಮುಕ್ತಿಯೋಗ್ಯ ಸದಾ

ಭೂಮಿಯೊಳು ಧರ್ಮಾರ್ಥ ಮುಕ್ತಿ ಸುಕಾಮ ಅಪೇಕ್ಷೆಗಳಿಂದ

ಸಾಲಿಗ್ರಾಮಗಳ ವ್ಯತಿರಿಕ್ತ ವಂದಿಸೆ ದುಃಖವೈದುವನು //6//


ವಿತ್ತ ಮಹಿಮನ ಬಿಟ್ಟು ಸುರರಿಗೆ ಪೃಥಕು ವಂದನೆ ಮಾಳ್ಪ ಮಾನವ

ದಿತಿಜನೆ ಸರಿ ಹರಿಯು ತಾ ಸಂಸ್ಥಿತನು ಎನಿಸನಲ್ಲಿ

ಚತುರ ಮುಖ ಮೊದಲಾದ ಅಖಿಳ ದೇವತೆಗಳೊಳಗಿಹನೆಂದು

ಲಕ್ಷ್ಮೀಪತಿಗೆ ವಂದಿಸೆ ಒಂದರೆಕ್ಷಣ ಬಿಟ್ಟಗಲನು ಅವರ//7//


ಶೈವ ಶೂದ್ರ ಕರಾರ್ಚಿತ ಮಹಾದೇವ ವಾಯು ಹರಿ ಪ್ರತಿಮೆ

ವೃಂದಾವನದಿ ಮಾಸದ್ವಯದೊಳಿಹ ತುಳಸಿ

ಅಪ್ರಸವ ಗೋ ವಿವಾಹವರ್ಜಿತ ಅಶ್ವತ್ಥಾ ವಿಟಪಿಗಳ

ಭಕ್ತಿಪೂರ್ವಕ ಸೇವಿಸುವ ನರ ನಿತ್ಯ ಶಾಶ್ವತ ದುಃಖವೈದುವನು//8//


ಕಮಲ ಸಂಭವ ಮುಖ್ಯ ಮನುಜೋತ್ತಮರ ಪರ್ಯಂತರದಿ ಮುಕ್ತರು

ಸಮ ಶತಾಯುಷ್ಯ ಉಳ್ಳವನು ಕಲಿ ಬ್ರಹ್ಮನುಪಾದಿ

ಕ್ರಮದಿ ನೀಚರು ದೈತ್ಯರು ನರಾಧಮರ ವಿಡಿದು

ಕುಲಕ್ಷ್ಮಿ ಕಲಿ ಅನುಪಮರು ಎನಿಸುವರು ಅಸುರರೊಳು ದ್ವೇಷಾದಿ ಗುಣದಿಂದ//9//


ವನಜ ಸಂಭವನ ಅಬ್ದ ಶತ ಒಬ್ಬನೇ ಮಹಾ ಕಲಿ ಶಬ್ದ ವಾಚ್ಯನು

ದಿನದಿನಗಳಲಿ ಬೀಳ್ವರು ಅಂಧಂತಮದಿ ಕಲಿ ಮಾರ್ಗ

ದನುಜರೆಲ್ಲರ ಪ್ರತೀಕ್ಷಿಸುತ ಬ್ರಹ್ಮನ ಶತಾಬ್ದಾಂತದಲಿ

ಲಿಂಗವು ಅನಿಲನ ಗದಾ ಪ್ರಹಾರದಿಂದಲಿ ಭಂಗವೈದುವದು//10//


ಮಾರುತನ ಗದೆಯಿಂದ ಲಿಂಗ ಶರೀರ ಪೋದ ಅನಂತರ

ತಮೋ ದ್ವಾರವೈದಿ ಸ್ವರೂಪ ದುಃಖಗಳ ಅನುಭವಿಸುತಿಹರು

ವೈರ ಹರಿ ಭಕ್ತರಲಿ ಹರಿಯಲಿ ತಾರತಮ್ಯದಲಿ ಇರುತಿಹುದು ಸಂಸಾರದಲ್ಲಿ

ತಮಸ್ಸಿನಲ್ಲಿ ಅತ್ಯಧಿಕ ಕಲಿಯಲ್ಲಿ//11//


ಜ್ನಾನವೆಂಬುದೇ ಮಿಥ್ಯ ಅಸಮೀಚೀನ ದುಃಖ ತರಂಗವೇ

ಸಮೀಚೀನ ಬುದ್ಧಿ ನಿರಂತರದಿ ಕಲಿಗಿಹುದು

ದೈತ್ಯರೊಳು ಹೀನಳೆನಿಪಳು ಶತ ಗುಣದಿ ಕಲಿ ಮಾನಿನಿಗೆ ಶತ ವಿಪ್ರಚಿತ್ತಿಗೆ

ಊನ ಶತ ಗುಣ ಕಾಲನೇಮಿಯೇ ಕಂಸನೆನಿಸಿದನು//12//


ಕಾಲನೇಮಿಗೆ ಪಂಚ ಗುಣದಿಂ ಕೀಳು ಮಧು ಕೈಟಭರು

ಜನ್ಮವ ತಾಳಿ ಇಳೆಯೊಳು ಹಂಸಡಿಭಿಕ ಆಹ್ವಯದಿ ಕರೆಸಿದರು

ಐಳ ನಾಮಕ ವಿಪ್ರಚಿತ್ತ ಸಮಾಳುಯೆನಿಪ

ಹಿರಣ್ಯ ಕಶ್ಯಪು ಶೂಲ ಪಾಣೀ ಭಕ್ತ ನರಕಗೆ ಶತ ಗುಣ ಅಧಮನು//13//


ಗುಣಗಳ ತ್ರಯ ನೀಚರೆನಿಸುವ ಕನಕ ಕಸಿಪುಗೆ ಹಾಟಕಾಂಬಗೆ

ಎಣೆಯೆನಿಪ ಮಣಿಮಂತಗಿಂತಲಿ ಕಿಂಚಿದೂನ ಬಕ

ದನುಜವರ ತಾರಕನು ವಿಂಶತಿ ಗುಣದಿ ನೀಚನು

ಲೋಕ ಕಂಟಕನು ಎನಿಪ ಶಂಬರ ತಾರಕಾಸುರಗೆ ಅಧಮ ಷಡ್ಗುಣದಿ//14//


ಸರಿಯೆನಿಸುವರು ಸಾಲ್ವನಿಗೆ ಸಂಕರನಿಗೆ ಅಧಮನು ಶತಗುಣದಿ ಶಂಬರಗೆ

ಷಡ್ಗುಣ ನೀಚನೆನಿಪ ಹಿಡಿಂಬಕಾ ಬಾಣಾಸುರನು ದ್ವಾಪರ ಕೀಚಕನು

ನಾಲ್ವರು ಸಮರು ದ್ವಾಪರನೆ ಶಕುನೀ ಕರೆಸಿದನು ಕೌರವಗೆ

ಸಹೋದರ ಮಾವನು ಅಹುದೆಂದು//15//


ನಮುಚಿಲ್ವರ ಪಾಕನಾಮಕ ಸಮರು ಬಾಣಾದ್ಯರಿಗೆ ದಶಗುಣ ನಮುಚಿ ನೀಚನು

ನೂರು ಗುಣದಿಂ ಅಧಮ ವಾತಾಪಿ

ಕುಮತಿ ಧೇನುಕ ನೂರು ಗುಣದಿಂದ ಅಮರರಿಪು ವಾತಾಪಿಗಧಮನು

ವಮನ ಧೇನುಕಗಿಂದಲಿ ಅರ್ಧ ಗುಣ ಅಧಮನು ಕೇಶಿ//16//


ಮತ್ತೆ ಕೇಶಿ ನಾಮಕ ತ್ರುಣಾವರ್ತ ಸಮ ಲವಣಾಸುರನು ಒಂಭತ್ತು ನೀಚ

ಅರಿಷ್ಟ ನಾಮಕ ಪಂಚ ಗುಣದಿಂದ

ದೈತ್ಯ ಸತ್ತಮ ಹಂಸ ಡಿಭಿಕ ಪ್ರಮತ್ತವೇನನು ಪೌಂಡ್ರಕನು

ಒಂಭತ್ತು ಗುಣದಿಂದ ಅಧಮ ಮೂವರು ಲವಣ ನಾಮಕರಿಗೆ//17//


ಈಶನೆ ನಾನೆಂಬ ಖಳ ದುಶ್ಯಾಶನ ವೃಷಸೇನ ದೈತ್ಯಾಗ್ರೇಸರ ಜರಾಸಂಧ ಸಮ

ಪಾಪಿಗಳೊಳು ಅತ್ಯಧಿಕ

ಕಂಸ ಕೂಪ ವಿಕರ್ಣ ಸರಿ ರುಗ್ಮೀ ಶತಾಧಮ

ರುಗ್ಮಿಗಿಂತ ಮಹಾಸುರನು ಶತಧನ್ವಿ ಕಿರ್ಮೀರರು ಶತಾಧಮರು//18//


ಮದಿರಪಾನೀ ದೈತ್ಯ ಗಣದೊಳಗೆ ಅಧಮರೆನಿಪರು ಕಾಲಿಕೇಯರು

ಅಧಿಕರಿಗೆ ಸಮರು ಅಹರು ದೇವ ಆವೇಶಬಲದಿಂದ

ವಾದನ ಪಾಣೀ ಪಾದ ಶ್ರೋತ್ರೀಯ ಗುದ ಉಪಸ್ಥ ಘ್ರಾಣ ತ್ವಕ್ಮನಕೆ

ಅಧಿಪ ದೈತ್ಯರು ನೀಚರೆನಿಪರು ಕಾಲಿಕೇಯರಿಗೆ//19//


ಜ್ಞಾನ ಕರ್ಮ ಇಂದ್ರಿಯಗಳಿಗೆ ಅಭಿಮಾನಿ ಕಲ್ಯಾದಿ ಅಖಿಳ ದೈತ್ಯರು

ಹೀನ ಕರ್ಮವ ಮಾಡಿ ಮಾಡಿಸುತಿಹರು ಸರ್ವರೊಳು

ವಾಣಿ ಭಾರತಿ ಕಮಲಭವ ಪವಮಾನರಿವರು ಅಚ್ಚಿನ್ನ ಭಕ್ತರು

ಪ್ರಾಣಾಸುರ ಆವೇಶ ರಹಿತರು ಆಖನಾಶ್ಮ ಸಮ//20//


ಹುತವಹಾಕ್ಷಾದಿ ಅಮರರೆಲ್ಲರು ಯುತರು ಕಲ್ಯಾವೇಶ

ವಿಧಿ ಮಾರುತಿ ಸರಸ್ವತಿ ಭಾರತಿಯ ಅವತಾರದೊಳಗಿಲ್ಲ

ಕೃತ ಪುಟ ಅಂಜಲಿಯಿಂದ ತನ್ನಯ ಪಿತನ ಸಮ್ಮುಖದಲ್ಲಿ ನಿಂದು ಆನತಿಸಿ

ಬಿನ್ನೈಸಿದನು ಎನ್ನೊಳು ಕೃಪೆಯ ಮಾಡೆಂದು//21//


ದ್ವೇಷಿ ದೈತ್ಯರ ತಾರತಮ್ಯವು ದೂಷಣೆಯು ಭೂಷಣಗಳೆನ್ನದೆ

ದೋಷವೆಂಬುವ ದ್ವೇಷಿ ನಿಶ್ಚಯ

ಇವರ ನೋಡಲ್ಕೆ ಕ್ಲೇಶಗಳನು ಐದುವನು ಬಹು ವಿಧ

ಸಂಶಯವು ಪಡ ಸಲ್ಲ ವೇದವ್ಯಾಸ ಗರುಡ ಪುರಾಣದಲ್ಲಿ ಪೇಳಿದನು ಋಷಿಗಳಿಗೆ//22//


ಜಾಲಿ ನೆಗ್ಗಿಲು ಕ್ಷುದ್ರ ಶಿಲೆ ಬರಿಗಾಲ ಪುರುಷನ ಭಾದಿಪವು

ಚಮ್ಮೊಳಿಗೆಯ ಮೆಟ್ಟಿದವಗೆ ಉಂಟೆ ಕಂಟಕಗಳ ಭಯ

ಚೇಳು ಸರ್ಪವ ಕೊಂದ ವಾರ್ತೆಯ ಕೇಳಿ ಮೋದಿಪರಿಗೆ ಇಲ್ಲವು ಅಘ

ಯಮನ ಆಳುಗಳ ಭಯವಿಲ್ಲ ದೈತ್ಯರ ನಿಂದಿಸುವ ನರಗೆ//23//


ಪುಣ್ಯ ಕರ್ಮವ ಪುಷ್ಕರಾದಿ ಹಿರಣ್ಯ ಗರ್ಭಾಂತರ್ಗತ

ಬ್ರಹ್ಮಣ್ಯ ದೇವನಿಗೆ ಅರ್ಪಿಸುತಲಿರು

ಕರ್ಮಗಳ ದುಃಖವ ಕಲಿ ಮುಖಾದ್ಯರಿಗೆ ಉಣ್ಣಲೀವನು

ಸಕಲ ಲೋಕ ಶರಣ್ಯ ಶಾಶ್ವತ ಮಿಶ್ರ ಜನರಿಗೆ ಮಿಶ್ರ ಫಲವೀವ//24//


ತ್ರಿವಿಧ ಗುಣಗಳ ಮಾಣಿ ಶ್ರೀ ಭಾರ್ಗವಿ ರಮಣ ಗುಣ ಗುಣಿಗಳೊಳಗೆ

ಅವರವರ ಯೋಗ್ಯತೆ ಕರ್ಮಗಳನು ಅನುಸರಿಸಿ ಕರ್ಮ ಫಲ

ಸ್ವವಶರು ಆದ ಅಮರಾಸುರರ ಗಣಕೆ ಅವಧಿಯಿಲ್ಲದೆ ಕೊಡುವ

ದೇವ ಪ್ರವರವರ ಜಗನ್ನಾಥ ವಿಠಲ ವಿಶ್ವ ವ್ಯಾಪಕನು//25//


//ಇತಿ ಶ್ರೀ ದೈತ್ಯತಾರತಮ್ಯ ಸಂಧಿ ಸಂಪೂರ್ಣಂ//

//ಶ್ರೀ ಕೃಷ್ಣಾರ್ಪಣಮಸ್ತು//

Sunday, January 27, 2013

ಶ್ರೀ ಹರಿಕಥಾಮೃತಸಾರ - 31

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಶ್ರೀ ಕಕ್ಷಾತಾರತಮ್ಯ ಸಂಧಿ//


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಶ್ರೀರಮಣ ಸರ್ವೇಶ ಸರ್ವಗ ಸಾರಭೋಕ್ತ ಸ್ವತಂತ್ರ

ದೋಷ ವಿದೂರ ಜ್ಞಾನಾನಂದ ಬಲೈಶ್ವರ್ಯ ಸುಖ ಪೂರ್ಣ

ಮೂರುಗುಣ ವರ್ಜಿತ ಸಗುಣ ಸಾಕಾರ ವಿಶ್ವ ಸ್ಥಿತಿ ಲಯೋದಯ ಕಾರಣ

ಕೃಪಾಸಾಂದ್ರ ನರಹರೆ ಸಲಹೊ ಸಜ್ಜನರ//1//


ನಿತ್ಯ ಮುಕ್ತಳೆ ನಿರ್ವಿಕಾರಳೆ ನಿತ್ಯ ಸುಖ ಸಂಪೂರ್ಣೆ

ನಿತ್ಯಾನಿತ್ಯ ಜಗದಾಧಾರೆ ಮುಕ್ತಾಮುಕ್ತ ಗಣ ವಿನುತೆ

ಚಿತ್ತೈಸು ಬಿನ್ನಪವ ಶ್ರೀ ಪುರುಷೋತ್ತಮನ ವಕ್ಷೋ ನಿವಾಸಿನಿ

ಭೃತ್ಯ ವರ್ಗವ ಕಾಯೆ ತ್ರಿಜಗನ್ಮಾತೆ ವಿಖ್ಯಾತೆ//2//


ರೋಮ ಕೂಪಗಳಲ್ಲಿ ಪೃಥ್ ಪೃಥಕು ಆ ಮಹಾ ಪುರುಷನ

ಸ್ವಮೂರ್ತಿ ತಾಮರಸಜಾಂಡಗಳ ತದ್ಗತ ವಿಶ್ವ ರೂಪಗಳ

ಶ್ರೀ ಮಹಿಳೆ ರೂಪಗಳ ಗುಣಗಳ ಸೀಮೆಗಾಣದೆ ಯೋಚಿಸುತ

ಮಮ ಸ್ವಾಮಿ ಮಹಿಮೆಯದು ಎಂತೋ ಎಂದು ಅಡಿಗಡಿಗೆ ಬೆರಗಾದೆ//3//


ಒಂದು ಅಜಾಂಡದೊಳು ಒಂದು ರೂಪದೊಳು ಒಂದು ಅವಯವದೊಳು ಒಂದು ನಖದೊಳಗೆ

ಒಂದು ಗುಣಗಳ ಪಾರುಗಾಣದೆ ಕೃತ ಪುಟಾಂಜಲಿಯಿಂ

ಮಂದಜಾಸನ ಪುಳಕ ಪುಳಕಾನಂದ ಬಾಷ್ಪ ತೊದಲು ನುಡಿಗಳಿಂದ

ಇಂದಿರಾವಲ್ಲಭನ ಮಹಿಮೆ ಗಂಭೀರ ತೆರವೆಂದ//4//


ಏನು ಧನ್ಯರೋ ಬ್ರಹ್ಮ ಗುರು ಪವಮಾನ ರಾಯರು

ಈ ಪರಿಯಲಿ ರಮಾ ನಿವಾಸನ ವಿಮಲ ಲಾವಣ್ಯ ಅತಿಶಯಗಳನು

ಸಾನುರಾಗದಿ ನೋಡಿ ಸುಖಿಪ ಮಹಾನುಭಾವರ ಭಾಗ್ಯವೆಂತೋ

ಭವಾನಿಧವನಿಗೆ ಅಸಾಧ್ಯವೆನಿಸಲು ನರರ ಪಾಡೇನು//5//


ಆ ಪಿತಾಮಹ ನೂರು ಕಲ್ಪ ರಮಾಪತಿಯ ಗುಣ ಜಪಿಸಿ ಒಲಿಸಿ

ಮಹಾ ಪರಾಕ್ರಮ ಹನುಮ ಭೀಮ ಆನಂದ ಮುನಿಯೆನಿಸಿ

ಆ ಪರಬ್ರಹ್ಮನ ಸುನಾಭೀ ಕೂಪಸಂಭವ ನಾಮದಲಿ ಮೆರೆವ

ಆ ಪಯೋಜಾಸನ ಸಮೀರರಿಗೆ ಅಭಿನಮಿಪೆ ಸತತ//6//


ವಾಸುದೇವನ ಮೂರ್ತಿ ಹೃದಯ ಆಕಾಶ ಮಂಡಲ ಮಧ್ಯದಲಿ

ತಾರೇಶನಂದದಿ ಕಾಣುತ ಅತಿ ಸಂತೋಷದಲಿ ತುತಿಪ

ಆ ಸರಸ್ವತಿ ಭಾರತೀಯರಿಗೆ ನಾ ಸತತ ವಂದಿಸುವೆ

ಪರಮೋಲ್ಲಾಸದಲಿ ಸುಜ್ಞಾನ ಭಕುತಿಯ ಸಲಿಸಲಿ ಎಮಗೆಂದು//7//


ಜಗದುದರನ ಸುರೋತ್ತಮನ ನಿಜಪೆಗಳೊಂತಾತು ಕರಾಬ್ಜದೊಳು ಪದಯುಗ ಧರಿಸಿ

ನಖ ಪಂಕ್ತಿಯೊಳು ರಮಣೀಯ ತರವಾದ ನಗಧರನ ಪ್ರತಿಬಿಂಬ ಕಾಣುತ

ಮಿಗೆ ಹರುಷದಿಂ ಪೊಗಳಿ ಹಿಗ್ಗುವ ಖಗ ಕುಲಾಧಿಪ

ಕೊಡಲಿ ಮಂಗಳ ಸರ್ವ ಸುಜನರಿಗೆ//8//


ಯೋಗಿಗಳ ಹೃದಯಕೆ ನಿಲುಕ ನಿಗಮಾಗಮೈಕ ವಿನುತನ

ಪರಮಾನುರಾಗದಲಿ ದ್ವಿಸಹಸ್ರ ಜಿಹ್ವೆಗಳಿಂದ ವರ್ಣಿಸುವ

ಭೂಗಗನ ಪಾತಾಳ ವ್ಯಾಪ್ತನ ಯೋಗ ನಿದ್ರಾಸ್ಪದನು ಎನಿಪ

ಗುರು ನಾಗರಾಜನ ಪದಕೆ ನಮಿಸುವೆ ಮನದೊಳು ಅನವರತ//9//


ದಕ್ಷ ಯಜ್ಞ ವಿಭಂಜನನೆ ವಿರುಪಾಕ್ಷ ವೈರಾಗ್ಯಾಧಿಪತಿ

ಸಂರಕ್ಷಿಸೆಮ್ಮನು ಸರ್ವಕಾಲದಿ ಸನ್ಮುದವನಿತ್ತು

ಯಕ್ಷಪತಿ ಸಖ ಯಜಪರಿಗೆ ಸುರವೃಕ್ಷ ವೃಕ್ಷದಾನುಜಾರಿ

ಲೋಕಾಧ್ಯಕ್ಷ ಶುಕ ದೂರ್ವಾಸ ಜೈಗೀಷವ್ಯ ಸಂತೈಸು//10//


ನಂದಿವಾಹನ ನಳಿನಿಧರ ಮೌಳಿ ಇಂದು ಶೇಖರ ಶಿವ ತ್ರಿಯಂಬಕ

ಅಂಧಕಾಸುರ ಮಥನ ಗಜ ಶಾರ್ದೂಲ ಚರ್ಮಧರ

ಮಂದಜಾಸನ ತನಯ ತ್ರಿಜಗದ್ವಂದ್ಯ ಶುದ್ಧ ಸ್ಫಟಿಕ ಸನ್ನಿಭ

ವಂದಿಸುವೆನು ಅನವರತ ಕರುಣಿಸಿ ಕಾಯೋ ಮಹದೇವ//11//


ಹತ್ತು ಕಲ್ಪದಿ ಲವ ಜಲಧಿಯೊಳು ಉತ್ತಮ ಶ್ಲೋಕನ ಒಲಿಸಿ

ಕೃತಕ್ರುತ್ಯನಾಗಿ ಜಗತ್ಪತಿಯ ನೇಮದಿ ಕುಶಾಸ್ತ್ರಗಳ ಬಿತ್ತರಿಸಿ ಮೋಹಿಸಿ

ದುರಾತ್ಮರ ನಿತ್ಯ ನಿರಯ ನಿವಾಸರೆನಿಸಿದ

ಕೃತ್ತಿ ವಾಸನೆ ನಮಿಪೆ ಪಾಲಿಸೊ ಪಾರ್ವತೀ ರಮಣ//12//


ಫಣಿ ಫಣಾoಚಿತ ಮಕುಟ ರಂಜಿತ ಕ್ವಣಿತ ಡಮರು ತ್ರಿಶೂಲ

ಶಿಖಿ ದಿನ ಮಣಿ ನಿಶಾಕರ ನೇತ್ರ ಪರಮ ಪವಿತ್ರ ಸುಚರಿತ್ರ

ಪ್ರಣತ ಕಾಮದ ಪ್ರಮಥ ಸುರಮುನಿ ಗಣ ಸುಪೂಜಿತ ಚರಣಯುಗ

ರಾವಣ ಮದ ವಿಭಂಜನ ಶೇಷ ಪದ ಅರ್ಹನು ಅಹುದೆಂದು//13//


ಕಂಬುಪಾಣಿಯ ಪರಮ ಪ್ರೇಮ ನಿತಂಬಿನಿಯರು ಎಂದೆನಿಪ

ಲಕ್ಷಣೆ ಜಾಂಬವತಿ ಕಾಳಿಂದಿ ನೀಲಾ ಭದ್ರ ಸಖ ವಿಂದಾರೆಂಬ

ಷಣ್ಮಹಿಷಿಯರ ದಿವ್ಯ ಪದಾಂಬುಜಗಳಿಗೆ ನಮಿಪೆ

ಮಮ ಹೃದಯಾಂಬರದಿ ನೆಲೆಸಲಿ ಬಿಡದೆ ತಮ್ಮರಸನ ಒಡಗೂಡಿ//14//


ಆ ಪರಂತಪನ ಒಲುಮೆಯಿಂದ ಸದಾ ಅಪರೋಕ್ಷಿಗಳೆನಿಸಿ

ಭಗವದ್ರೂಪ ಗುಣಗಳ ಮಹಿಮೆ ಸ್ವಪತಿಗಳ ಆನನದಿ ತಿಳಿವ

ಸೌಪರ್ಣಿ ವಾರುಣಿ ನಗಾತ್ಮಜರ ಆಪನಿತು ಬಣ್ಣಿಸುವೆ

ಎನ್ನ ಮಹಾಪರಾಧಗಳ ಎಣಿಸದೆ ಈಯಲಿ ಪರಮ ಮಂಗಳವ//15//


ತ್ರಿದಿವತರು ಮಣಿ ಧೇನುಗಳಿಗೆ ಆಸ್ಪದನೆನಿಪ ತ್ರಿದಶಾಲಯಾಬ್ಧಿಗೆ

ಬದರನಂದದಲಿ ಒಪ್ಪುತಿಪ್ಪ ಉಪೇಂದ್ರ ಚಂದ್ರಮನ

ಮೃಧು ಮಧುರ ಸುಸ್ತವನದಿಂದಲಿ ಮಧು ಸಮಯ ಪಿಕನಂತೆ ಪಾಡುವ

ಮುದಿರ ವಾಹನನಂಘ್ರಿ ಯುಗ್ಮಂಗಳಿಗೆ ನಮಿಸುವೆನು//16//


ಕೃತಿ ರಮಣ ಪ್ರದ್ಯುಮ್ನ ದೇವನ ಅತುಳ ಬಲ ಲಾವಣ್ಯ ಗುಣ ಸಂತತ ಉಪಾಸನ

ಕೇತು ಮಾಲಾ ಖಂಡದೊಳು ರಚಿಪ

ರತಿ ಮನೋಹರನಂಘ್ರಿ ಕಮಲಕೆ ನತಿಸುವೆನು ಭಕುತಿಯಲಿ

ಮಮ ದುರ್ಮತಿ ಕಳೆದು ಸನ್ಮತಿಯನು ಈಯಲಿ ನಿರುತ ಎಮಗೊಲಿದು//17//


ಚಾರುತರ ನವವಿಧ ಭಕುತಿ ಗಂಭೀರ ವಾರಾಶಿಯೊಳು

ಪರಮೋದಾರ ಮಹಿಮನ ಹೃದಯ ಫಣಿಪತಿ ಪೀಠದಲಿ ಭಜಿಪ

ಭೂರಿ ಕರ್ಮಾಕರನು ಎನಿಸುವ ಶರೀರಮಾನಿ ಪ್ರಾಣಪತಿ ಪದ ವಾರಿರುಹಕೆ ಅನಮಿಪೆ

ಮದ್ಗುರುರಾಯನು ಅಹುದೆಂದು//18//


ವಿತತ ಮಹಿಮನ ವಿಶ್ವತೋ ಮುಖನ ಅತುಳ ಭುಜ ಬಲ ಕಲ್ಪತರುವು

ಆಶ್ರಿತರೆನಿಸಿ ಸಕಲ ಇಷ್ಟ ಪಡೆದು ಅನುದಿನದಿ ಮೋದಿಸುವ

ರತಿ ಸ್ವಯಂಭುವ ದಕ್ಷ ವಾಚಸ್ಪತಿ ಬಿಡೌಜನ ಮಡದಿ ಶಚಿ

ಮನ್ಮಥ ಕುಮಾರ ಅನಿರುದ್ಧರು ಎಮಗೀಯಲಿ ಸುಮಂಗಲವ//19//


ಭವ ವನದಿ ನವ ಪೋತ ಪುಣ್ಯ ಶ್ರವಣ ಕೀರ್ತನ ಪಾದವನರುಹ

ಭವನ ನಾವಿಕನಾಗಿ ಭಕುತರ ತಾರಿಸುವ ಬಿಡದೆ

ಪ್ರವಹ ಮಾರುತದೇವ ಪರಮೋತ್ಸವ ವಿಶೇಷ ನಿರಂತರ

ಮಹಾ ಪ್ರವಹದಂದದಿ ಕೊಡಲಿ ಭಗವದ್ಭಕ್ತ ಸಂತತಿಗೆ//20//


ಜನರನು ಉದ್ಧರಿಸುವೆನೆನುತ ನಿಜ ಜನಕನ ಅನುಮತದಲಿ

ಸ್ವಯಂಭುವ ಮನುವಿನಿಂದಲಿ ಪಡೆದೆ ಸುಕುಮಾರಕರನು ಒಲುಮೆಯಲಿ

ಜನನಿ ಶತ ರೂಪಾ ನಿತಂಬಿನಿ ಮನವಚನಕಾಯದಲಿ ತಿಳಿದು

ಅನುದಿನದಿ ನಮಿಸುವೆ ಕೊಡು ಎಮಗೆ ಸನ್ಮಂಗಳವನೊಲಿದು//21//


ನರನ ನಾರಾಯಣನ ಹರಿಕೃಷ್ಣರ ಪಡೆದೆ ಪುರುಷಾರ್ಥ ತೆರದಲಿ

ತರಣಿ ಶಶಿ ಶತರೂಪರಿಗೆ ಸಮನೆನಿಸಿ

ಪಾಪಿಗಳ ನಿರಯದೊಳು ನೆಲೆಗೊಳಿಸಿ ಸಜ್ಜನ ನೆರವಿಯನು ಪಾಲಿಸುವ

ಔದುಂಬರ ಸಲಹು ಸಲಹೆಮ್ಮ ಬಿಡದಲೆ ಪರಮ ಕರುಣದಲಿ//22//


ಮಧು ವಿರೋಧಿ ಮನುಜ ಕ್ಷೀರೋದಧಿ ಮಥನ ಸಮಯದಲಿ ಉದಯಿಸಿ

ನೆರೆ ಕುಧರಜಾ ವಲ್ಲಭನ ಮಸ್ತಕ ಮಂದಿರದಿ ಮೆರೆವ ವಿಧು

ತವಾಂಘ್ರಿ ಸರೋಜಾ ಯುಗಳಕೆ ಮಧುಪನಂದದಲಿ ಎರಗಲು ಎನ್ಮನದ ಅಧಿಪ

ವಂದಿಪೆನು ಅನುದಿನ ಅಂತಸ್ತಾಪ ಪರಿಹರಿಸು//23//


ಶ್ರೀ ವನರುಹಾಂಬಕನ ನೇತ್ರಗಳೇ ಮನೆಯೆನಿಸಿ

ಸಜ್ಜನರಿಗೆ ಕರಾವಲಂಬನವೀವ ತೆರದಿ ಮಯೂಖ ವಿಸ್ತರಿಪ

ಆ ವಿವಸ್ವಾನ್ ನೆನಿಸಿ ಕೊಂಬ ವಿಭಾವಸು

ಅಹರ್ನಿಶಿಗಳಲಿ ಕೊಡಲೀ ವಸುಂಧರೆಯೊಳು ವಿಪಶ್ಚಿತರೊಡನೆ ಸುಜ್ಞಾನ//24//


ಲೋಕ ಮಾತೆಯ ಪಡೆದು ನೀ ಜಗದೇಕಪಾತ್ರನಿಗಿತ್ತ ಕಾರಣ

ಶ್ರೀ ಕುಮಾರಿ ಸಮೇತ ನೆಲಸಿದ ನಿನ್ನ ಮಂದಿರದಿ

ಆ ಕಮಲಭವ ಮುಖರು ಬಿಡದೆ ಪರಾಕೆನುತ ನಿಂದಿಹರೋ

ಗುಣ ರತ್ನಾಕರನೆ ಬಣ್ಣಿಸಲಳವೆ ಕೊಡು ಎಮಗೆ ಸನ್ಮನವ//25//


ಪಣೆಯೊಳೊಪ್ಪುವ ತಿಲಕ ತುಳಸೀ ಮಣಿಗಣಾನ್ವಿತ ಕಂಠ

ಕರದಲಿ ಕ್ವಣಿತ ವೀಣಾ ಸುಸ್ವರದಿ ಬಹು ತಾಳ ಗತಿಗಳಲಿ

ಪ್ರಣವ ಪ್ರತಿಪಾದ್ಯನ ಗುಣಂಗಳ ಕುಣಿದು ಪಾಡುತ

ಪರಮ ಸುಖ ಸಂದಣಿಯೊಳು ಆಡುವ ದೇವರ್ಷಿ ನಾರದರಿಗೆ ಅಭಿನಮಿಪೆ//26//


ಆ ಸರಸ್ವತಿ ತೀರದಲಿ ಬಿನ್ನೈಸಲು ಆ ಮುನಿಗಳ ನುಡಿಗೆ

ಜಡಜಾಸನ ಮಹೇಶ ಅಚ್ಯುತರ ಲೋಕಂಗಳಿಗೆ ಪೋಗಿ

ತಾ ಸಕಲ ಗುಣಗಳ ವಿಚಾರಿಸಿ ಕೇಶವನೆ ಪರದೈವವು ಎಂದು ಉಪದೇಶಿಸುವ

ಭೃಗು ಮುನಿಪ ಕೊಡಲಿ ಎಮಗೆ ಅಖಿಳ ಪುರುಷಾರ್ಥ//27//


ಬಿಸರುಹಾಂಬಕನ ಆಜ್ಞೆಯಲಿ ಸುಮನಸ ಮುಖನು ತಾನೆನಿಸಿ

ನಾನಾ ರಸಗಳುಳ್ಳ ಹರಿಸ್ಸುಗಳನು ಅವರವರಿಗೊಯ್ದು ಈವ

ವಸುಕುಲಾಧಿಪ ಯಜ್ಞಪುರುಷನ ಅಸಮ ಬಲ ರೂಪಂಗಳಿಗೆ ವಂದಿಸುವೆ

ಜ್ಞಾನ ಯಶಸ್ಸು ವಿದ್ಯ ಸುಬುದ್ಧಿ ಕೊಡಲೆಮಗೆ//28//


ತಾತನ ಅಪ್ಪಣೆಯಿಂದ ನೀ ಪ್ರಖ್ಯಾತಿಯುಳ್ಳ ಅರವತ್ತು ಮಕ್ಕಳ

ಪ್ರೀತಿಯಿಂದಲಿ ಪಡೆದು ಅವರವರಿಗಿತ್ತು ಮನ್ನಿಸಿದೆ

ವೀತಿ ಹೋತ್ರನ ಸಮಳೆನಿಸುವ ಪ್ರಸೂತಿ ಜನನಿ

ತ್ವದಂಘ್ರಿ ಕಮಲಕೆ ನಾ ತುತಿಸಿ ತಲೆಬಾಗುವೆ ಎಮ್ಮ ಕುಟುಂಬ ಸಲಹುವುದು//29//


ಶತ ಧೃತಿಯ ಸುತರೀರ್ವರ ಉಳಿದ ಅಪ್ರತಿಮ ಸುತಪೋ ನಿಧಿಗಳ

ಪರಾಜಿತನ ಸುಸಮಾಧಿಯೊಳು ಇರಿಸಿ ಮೂರ್ಲೋಕದೊಳು ಮೆರೆವ

ವ್ರತಿವರ ಮರೀಚಿ ಅತ್ರಿ ಪುಲಹಾ ಕ್ರತು ವಸಿಷ್ಠ ಪುಲಸ್ತ್ಯ

ವೈವಸ್ವತನು ವಿಶ್ವಾಮಿತ್ರ ಅಂಗಿರರ ಅಂಘ್ರಿಗೆರಗುವೆನು//30//


ದ್ವಾದಶ ಆದಿತ್ಯರೊಳು ಮೊದಲಿಗನಾದ ಮಿತ್ರ

ಪ್ರವಹ ಮಾನಿನಿಯಾದ ಪ್ರಾವಹಿ ನಿರ್ಋತಿ ನಿರ್ಜರ ಗುರು ಮಹಿಳೆ ತಾರಾ

ಈ ದಿವೌಕಸರು ಅನುದಿನ ಆಧಿವ್ಯಾಧಿ ಉಪಟಳವ ಅಳಿದು

ವಿಬುಧರಿಗೆ ಆದರದಿ ಕೊಡಲಿ ಅಖಿಳ ಮಂಗಳವ ಆವ ಕಾಲದಲಿ//31//


ಮಾನನಿಧಿಗಳು ಎನಿಸುವ ವಿಷ್ವಕ್ಸೇನ ಧನಪ ಗಜಾನನರಿಗೆ

ಸಮಾನರು ಎಂಭತ್ತೈದು ಶೇಷ ಶತಸ್ಥ ದೇವಗಣಕೆ ಆ ನಮಿಸುವೆನು

ಬಿಡದೆ ಮಿಥ್ಯಾ ಜ್ಞಾನ ಕಳೆದು ಸುಬುದ್ಧಿನಿತ್ತು

ಸದಾನುರಾಗದಲಿ ಎಮ್ಮ ಪರಿಪಾಲಿಸಲೆಂದೆನುತ//32//


ಭೂತ ಮರುತನು ಅವಾಂತರ ಅಭಿಮಾನಿ ತಪಸ್ವಿ ಮರೀಚಿ ಮುನಿ

ಪುರುಹೂತ ನಂದನ ಪಾದಮಾನಿ ಜಯಂತರು ಎಮಗೊಲಿದು

ಕಾತರವ ಪುಟ್ಟಿಸದೆ ವಿಷಯದಿ ವೀತಭಯನ ಪದಾಬ್ಜದಲಿ

ವಿಪರೀತ ಬುದ್ಧಿಯನು ಈಯದೆ ಸದಾ ಪಾಲಿಸಲೆಮ್ಮ//33//


ಓದಿಸುವ ಗುರುಗಳನು ಜರಿದು ಸಹ ಓದುಗರಿಗೆ ಉಪದೇಶಿಸಿದ

ಮಹದಾದಿ ಕಾರಣ ಸರ್ವಗುಣ ಸಂಪೂರ್ಣ ಹರಿಯೆಂದು ವಾದಿಸುವ

ತತ್ಪತಿಯ ತೋರೆಂದು ಆ ದನುಜ ಬೆಸಗೊಳಲು

ಸ್ತಂಭದಿ ಶ್ರೀದನ ಆಕ್ಷಣ ತೋರಿಸಿದ ಪ್ರಹ್ಲಾದ ಸಲಹೆಮ್ಮ//34//


ಬಲಿ ಮೊದಲು ಸಪ್ತ ಇಂದ್ರರು ಇವರಿಗೆ ಕಲಿತ ಕರ್ಮಜ ದಿವಿಜರು ಎಂಬರು

ಉಳಿದ ಏಕಾದಶ ಮನುಗಳು ಉಚಿಥ್ಥ್ಯ ಚವನ ಮುಖ

ಕುಲರ್ಷಿಗಳು ಎಂಭತ್ತು ಹೈಹಯ ಇಳಿಯ ಕಂಪನಗೈದ ಪೃಥು

ಮಂಗಳ ಪರೀಕ್ಷಿತ ನಹುಷ ನಾಭಿ ಯಯಾತಿ ಶಶಿಬಿಂದು//35//


ಶತಕ ಸಂಕೇತ ಉಳ್ಳ ಪ್ರಿಯವ್ರತ ಭರತ ಮಾಂಧಾತ ಪುಣ್ಯಾಶ್ರಿತರು

ಜಯವಿಜಯಾದಿಗಳು ಗಂಧರ್ವರೆಂಟು ಜನ

ಹುತವಹಜ ಪಾವಕ ಸನಾತನ ಪಿತೃಗಳು ಎಳ್ವರು ಚಿತ್ರಗುಪ್ತರು

ಪ್ರತಿದಿನದಿ ಪಾಲಿಸಲಿ ತಮ್ಮವನೆಂದು ಎಮಗೊಲಿದು//36//


ವಾಸವಾಲಯ ಶಿಲ್ಪ ವಿಮಲ ಜಲಾಶಯಗಳೊಳು ರಮಿಪ ಊರ್ವಶಿ

ಭೇಶ ರವಿಗಳ ರಿಪುಗಳೆನಿಸುವ ರಾಹುಕೇತುಗಳು

ಶ್ರೀಶ ಪದ ಪಂಥಾನ ಧೂಮಾರ್ಚೀರ ದಿವಿಜರು

ಕರ್ಮಜರಿಗೆ ಸದಾ ಸಮಾನ ದಿವೌಕಸರು ಕೊಡಲಿ ಎಮಗೆ ಮಂಗಳವ//37//


ದ್ಯುನದಿ ಶ್ಯಾಮಲ ಸಂಜ್ಞ ರೋಹಿಣಿ ಘನಪ ಪರ್ಜನ್ಯ ಅನಿರುದ್ಧನ ವನಿತೆ

ಬ್ರಹ್ಮಾಂಡಾಭಿಮಾನಿ ವಿರಾಟ ದೇವಿಯರ ನೆನೆವೆನು

ಆ ನಲವಿಂದೆ ದೇವಾನನ ಮಹಿಳೆ ಸ್ವಾಹಾಖ್ಯರು

ಆಲೋಚನೆ ಕೊಡಲಿ ನಿರ್ವಿಘ್ನದಿಂ ಭಗವದ್ಗುಣoಗಳಲಿ//38//


ವಿಧಿಪಿತನ ಪಾದಾಂಬುಜಗಳಿಗೆ ಮಧುಪನಾಂತೆ ವಿರಾಜಿಪಾಮಲ

ಉದಕಗಳಿಗೆ ಸದಾಭಿಮಾನಿಯು ಎಂದೆನಿಸಿಕೊಂಬ ಬುಧಗೆ ನಾ ವಂದಿಸುವೆ ಸಮ್ಮೋದದಿ

ನಿರಂತರವು ಒಲಿದೆಮಗೆ

ಅಭ್ಯುದಯ ಪಾಲಿಸಲೆಂದು ಪರಮೋತ್ಸವದೊಳು ಅನುದಿನದಿ//39//


ಶ್ರೀ ವಿರಿಂಚಾದ್ಯರ ಮನಕೆ ನಿಲುಕಾವ ಕಾಲಕೆ

ಜನನ ರಹಿತನ ತಾವೊಲಿಸಿ ಮಗನೆಂದು ಮುದ್ದಿಸಿ ಲೀಲೆಗಳ ನೋಳ್ಪ

ದೇವಕಿಗೆ ವಂದಿಪೆ ಯಶೋದಾ ದೇವಿಗೆ ಆನಮಿಸುವೆನು

ಪರಮ ಕೃಪಾವಲೋಕನದಿಂದ ಸಲಹುವುದು ಎಮ್ಮ ಸಂತತಿಯ//40//


ಪಾಮರರನ ಪವಿತ್ರಗೈಸುವ ಶ್ರೀ ಮುಕುಂದನ ವಿಮಲ ಮಂಗಳ

ನಾಮಗಳಿಗೆ ಅಭಿಮಾನಿಯಾದ ಉಷಾಖ್ಯ ದೇವಿಯರು

ಭೂಮಿಯೊಳಗುಳ್ಳ ಅಖಿಳ ಸಜ್ಜನರ ಆಮಯಾದಿಗಳ ಅಳಿದು ಸಲಹಲಿ

ಆ ಮರುತ್ವಾನ್ ಮನೆಯ ವೈದ್ಯರ ರಮಣಿ ಪ್ರತಿದಿನದಿ//41//


ಪುರುಟ ಲೋಚನ ನಿನ್ನ ಕದ್ದೊಯ್ದಿರಲು ಪ್ರಾರ್ಥಿಸೆ

ದೇವತೆಗಳ ಉತ್ತರವ ಲಾಲಿಸಿ ತಂದ ವರಾಹ ರೂಪ ತಾನಾಗಿ

ಧರಣಿ ಜನನಿ ನಿನ್ನ ಪಾದಕ್ಕೆರಗಿ ಬಿನ್ನೈಸುವನು

ಪಾದಸ್ಪರ್ಶ ಮೊದಲಾದ ಅಖಿಳ ದೋಷಗಳು ಎಣಿಸದಿರೆಂದು//42//


ವನಧಿವಸನೆ ವರಾದ್ರಿ ನಿಚಯ ಸ್ತನವಿರಾಜಿತೆ

ಚೇತನಾಚೇತನ ವಿಧಾರಕೆ ಗಂಧ ರಸ ರೂಪಾದಿ ಗುಣ ವಪುಷೆ

ಮುನಿಕುಲೋತ್ತಮ ಕಶ್ಯಪನ ನಿಜತನುಜೆ ನಿನಗೆ ಅನಮಿಪೆ

ಎನ್ನವಗುಣಗಳು ಎಣಿಸದೆ ಪಾಲಿಪುದು ಪರಮಾತ್ಮನರ್ಧಾಂಗಿ//43//


ಹರಿ ಗುರುಗಳ ಅರ್ಚಿಸದ ಪಾಪಾತ್ಮರನ ಶಿಕ್ಷಿಸಲೋಸುಗ

ಶನೈಶ್ಚರನೆನಿಸಿ ದುಷ್ಫಲಗಳೀವೆ ನಿರಂತರದಿ ಬಿಡದೆ

ತರಣಿ ನಂದನ ನಿನ್ನ ಪಾದಾಂಬುರುಹಗಳಿಗೆ ಆ ನಮಿಪೆ

ಬಹು ದುಸ್ತರ ಭವಾರ್ಣದಿ ಮಗ್ನನಾದೆನ್ನ ಉದ್ಧರಿಸಬೇಕು//44//


ನಿರತಿಶಯ ಸುಜ್ಞಾನ ಪೂರ್ವಕ ವಿರಚಿಸುವ ನಿಷ್ಕಾಮ ಕರ್ಮಗಳರಿತು

ತತ್ತತ್ಕಾಲದಲಿ ತಜ್ಜನ್ಯ ಫಲರಸವ ಹರಿಯ ನೇಮದಲಿ ಉಣಿಸಿ

ಬಹುಜೀವರಿಗೆ ಕರ್ಮಪನೆನಿಪ

ಗುರುಪುಷ್ಕರನು ಸತ್ಕ್ರಿಯಂಗಳಲಿ ನಿರ್ವಿಘ್ನತೆಯ ಕೊಡಲಿ//45//


ಶ್ರೀನಿವಾಸನ ಪರಮ ಕಾರುಣ್ಯಾನಿ ವಾಸಸ್ಥಾನರು ಎನಿಪ ಕೃಶಾನುಜರು

ಸಹಸ್ರ ಷೋಡಶ ಶತರು ಶ್ರೀ ಕೃಷ್ಣ ಮಾನಿನಿಯರು ಎಪ್ಪತ್ತು

ಯಕ್ಷರು ದಾನವರು ಮೂವತ್ತು

ಚಾರಣ ಅಜಾನಜ ಅಮರರು ಅಪ್ಸರರು ಗಂಧರ್ವರಿಗೆ ನಮಿಪೆ//46//


ಕಿನ್ನರರು ಗುಹ್ಯಕರು ರಾಕ್ಷಸ ಪನ್ನಗರು ಪಿತೃಗಳು ಸಿದ್ಧರು

ಸನ್ನುತ ಅಜಾನಜರು ಸಮರು ಇವರು ಅಮರ ಯೋನಿಜರು

ಇನ್ನಿವರ ಗಣವೆಂತು ಬಣ್ಣಿಸಲು ಎನ್ನೊಳವೆ

ಕರುಣದಲಿ ಪರಮಾಪನ್ನ ಜನರಿಗೆ ಕೊಡಲಿ ಸನ್ಮುದ ಪರಮ ಸ್ನೇಹದಲಿ//47//


ಆ ಯಮುನೆಯೊಳು ಸಾದರದಿ ಕಾತ್ಯಾಯನೀ ವ್ರತಧರಿಸಿ

ಕೆಲರು ದಯಾಯುಧನೆ ಪತಿಯೆಂದು ಕೆಲವರು ಜಾರತನದಲ್ಲಿ

ವಾಯುಪಿತನೊಲಿಸಿದರು ಈರ್ವಗೆ ತೋಯ ಸರಸರ

ಪಾದಕಮಲಕೆ ನಾ ಎರಗುವೆ ಮನೋರಥಂಗಳ ಸಲಿಸಲಿ ಅನುದಿನದಿ//48//


ನೂರುಮುನಿಗಳ ಉಳಿದು ಮೇಲಣ ನೂರು ಕೋಟಿ ತಪೋಧರನ

ಪಾದಾರವಿಂದಕೆ ಮುಗಿವೆ ಕರಗಳನು ಉದ್ಧರಿಸಲೆಂದು

ಮೂರು ಸಪ್ತ ಶತಾಹ್ವಯರ ತೊರೆದು ಈ ಋಷಿಗಳ ಅನಂತರಲಿಹ

ಭೂರಿ ಪಿತೃಗಳು ಕೊಡಲಿ ಎಮಗೆ ಸಂತತ ಸುಮಂಗಳವ//49//


ಪಾವನಕೆ ಪಾವನನು ಎನಿಸುವ ರಮಾ ವಿನೋದಿಯ ಗುಣಗಣoಗಳ

ಸಾವಧಾನದಲಿ ಏಕ ಮಾನಸರಾಗಿ ಸುಸ್ವರದಿ

ಆ ವಿಬುಧಪತಿ ಸಭೆಯೊಳಗೆ ನಾನಾ ವಿಲಾಸದಿ ಪಾಡಿ ಸುಖಿಸುವ

ದೇವ ಗಂಧರ್ವರು ಕೊಡಲಿ ಎಮಗೆ ಅಖಿಳ ಪುರುಷಾರ್ಥ//50//


ಭುವನ ಪಾವನ ಮಾಳ್ಪ ಲಕ್ಷ್ಮೀ ಧವನ

ಮಂಗಳ ದಿವ್ಯ ನಾಮ ಸ್ತವನಗೈವ ಮನುಷ್ಯ ಗಂಧರ್ವರಿಗೆ ವಂದಿಸುವೆ

ಪ್ರವರ ಭೂಭುಜರ ಉಳಿದು ಮಧ್ಯಮ ಕುವಲಯಪರು ಎಂದು ಎನಿಸಿಕೊಂಬರ

ದಿವಸ ದಿವಸಂಗಳಲಿ ನೆನೆವನು ಕರಣ ಶುದ್ಧಿಯಲಿ//51//


ಶ್ರೀ ಮುಕುಂದನ ಮೂರ್ತಿಸಲೆ ಸೌದಾಮಿನಿಯೋಳ್ ಹೃದಯ ವಾರಿಜ

ವ್ಯೋಮ ಮಂಡಲ ಮಧ್ಯದಲಿ ಕಾಣುತಲಿ ಮೋದಿಸುವ

ಆ ಮನುಷ್ಯೋತ್ತಮರ ಪದಯುಗ ತಾಮರಸಗಳಿಗೆ ಎರಗುವೆ

ಸದಾ ಕಾಮಿತಾರ್ಥಗಳಿತ್ತು ಸಲಹಲಿ ಪ್ರಣತ ಜನತತಿಯ//52//


ಈ ಮಹೀ ಮಂಡಲದೊಳಿಹ ಗುರು ಶ್ರೀಮದಾಚಾರ್ಯರ ಮತಾನುಗರು

ಆ ಮಹಾವೈಷ್ಣವರ ವಿಷ್ಣು ಪದಾಬ್ಜ ಮಧುಕರರ ಸ್ತೋಮಕೆ ಅನಮಿಸುವೆನು

ಅವರವರ ನಾಮಗಳನು ಏಂ ಪೇಳ್ವೆ ಬಹುವಿಧ

ಯಾಮ ಯಾಮಂಗಳಲಿ ಬೋಧಿಸಲಿ ಎಮಗೆ ಸನ್ಮತಿಯ//53//


ಮಾರನಯ್ಯನ ಕರುಣ ಪಾರಾವಾರ ಮುಖ್ಯ ಸುಪಾತ್ರರು ಎನಿಪ

ಸರೋರುಹಾಸನ ವಾಣಿ ರುದ್ರ ಇಂದ್ರಾದಿ ಸುರನಿಕರ

ತಾರತಮ್ಯಾತ್ಮಕ ಸುಪದ್ಯಗಳ ಆರು ಪಠಿಸುವರು ಆ ಜನರಿಗೆ

ರಮಾರಮಣ ಪೂರೈಸಲಿ ಈಪ್ಸಿತ ಸರ್ವಕಾಲದಲಿ//54//


ಮೂರು ಕಾಲಗಳಲ್ಲಿ ತುತಿಸೆ ಶರೀರ ವಾನ್ಗ್ಮನಃ ಶುದ್ಧಿ ಮಾಳ್ಪುದು

ದೂರಗೈಸುವದು ಅಖಿಳ ಪಾಪ ಸಮೂಹ ಪ್ರತಿದಿನದಿ

ಚೋರಭಯ ರಾಜಭಯ ನಕ್ರ ಚಮೂರ ಶಸ್ತ್ರ ಜಲಾಗ್ನಿ ಭೂತ

ಮಹೋರಗ ಜ್ವರ ನರಕ ಭಯ ಸಂಭವಿಸದು ಎಂದೆಂದು//55//


ಜಯಜಯತು ತ್ರಿಜಗದ್ವಿಲಕ್ಷಣ ಜಯಜಯತು ಜಗದೇಕ ಕಾರಣ

ಜಯಜಯತು ಜಾನಕೀ ರಮಣ ನಿರ್ಗತ ಜರಾಮರಣ

ಜಯಜಯತು ಜಾಹ್ನವೀ ಜನಕ ಜಯಜಯತು ದೈತ್ಯ ಕುಲಾಂತಕ

ಭವಾಮಯ ಹರ ಜಗನ್ನಾಥ್ ವಿಠಲ ಪಾಹಿಮಾಂ ಸತತ//56//


//ಇತಿ ಶ್ರೀ ಕಕ್ಷಾತಾರತಮ್ಯ ಸಂಧಿ ಸಂಪೂರ್ಣಂ//

//ಶ್ರೀ ಕೃಷ್ಣಾರ್ಪಣಮಸ್ತು//

ಶ್ರೀ ಹರಿಕಥಾಮೃತಸಾರ - 30

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಶ್ರೀ ನೈವೇದ್ಯಪ್ರಕರಣ ಸಂಧಿ//


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಲೆಕ್ಕಿಸದೆ ಲಕುಮಿಯನು ಬೊಮ್ಮನ ಪೊಕ್ಕಳಿಂದಲಿ ಪಡೆದ

ಪೊಸ ಪೊಂಬಕ್ಕಿದೇರನು ಪಡೆದ ಅವಯವಗಳಿಂದ ದಿವಿಜರನಾ

ಮಕ್ಕಳಂದದಿ ಪೊರೆವ ಸರ್ವದ ರಕ್ಕಸಾಂತಕ

ರಣದೊಳಗೆ ನಿರ್ದುಃಖ ಸುಖಮಯ ಕಾಯ್ದ ಪಾರ್ಥನ ಸೂತನೆಂದೆನಿಸಿ//1//


ದೋಷ ಗಂಧ ವಿದೂರ ನಾನಾ ವೇಷಧಾರಿ ವಿಚಿತ್ರ ಕರ್ಮ

ಮನೀಷಿ ಮಾಯಾ ರಮಣ ಮಧ್ವಾಂತಃಕರಣ ರೂಢ

ಶೇಷಸಾಯಿ ಶರಣ್ಯ ಕೌಸ್ತುಭ ಭೂಷಣ ಸುಕಂಧರ

ಸದಾ ಸಂತೋಷ ಬಲ ಸೌಂದರ್ಯ ಸಾರನ ಮಹಿಮೆಗೆ ಏನೆಂಬೆ//2//


ಸಾಶನಾನ ಶನೇ ಅಭೀಯೆಂಬ ಈ ಶ್ರುತಿ ಪ್ರತಿಪಾದ್ಯನೆನಿಸುವ

ಕೇಶವನ ರೂಪದ್ವಯವ ಚಿದ್ದೇಹದ ಒಳಹೊರಗೆ

ಬೇಸರದೆ ಸದ್ಭಕ್ತಿಯಿಂದ ಉಪಾಸನೆಯಗೈಯುತಲಿ ಬುಧರು

ಹುತಾಶನನಯೊಳಿಪ್ಪನೆಂದು ಅನವರತ ತುತಿಸುವರು//3//


ಸಕಲ ಸದ್ಗುಣ ಪೂರ್ಣ ಜನ್ಮಾದಿ ಅಖಿಳ ದೋಷ ವಿದೂರ

ಪ್ರಕಟಾಪ್ರಕಟ ಸದ್ವ್ಯಾಪಾರಿ ಗತ ಸಂಸಾರಿ ಕಂಸಾರಿ

ನಕುಲ ನಾನಾ ರೂಪ ನಿಯಾಮಕ ನಿಯಮ್ಯ ನಿರಾಮಯ

ರವಿ ಪ್ರಕರ ಸನ್ನಿಭ ಪ್ರಭು ಸದಾ ಮಾಂ ಪಾಹಿ ಪರಮಾತ್ಮ//4//


ಚೇತನಾಚೇತನ ಜಗತ್ತಿನೊಳು ಆತನನು ತಾನಾಗಿ

ಲಕ್ಷ್ಮೀನಾಥ ಸರ್ವರೊಳಿಪ್ಪ ತತ್ತದ್ರೂಪಗಳ ಧರಿಸಿ

ಜಾತಿಕಾರನ ತೆರದಿ ಎಲ್ಲರ ಮಾತಿನೊಳಗಿದ್ದು

ಅಖಿಳ ಕರ್ಮವ ತಾ ತಿಳಿಸಿ ಕೊಳ್ಳದಲೇ ಮಾಡಿಸಿ ನೋಡಿ ನಗುತಿಪ್ಪ//5//


ವೀತಭಯ ವಿಜ್ಞಾನ ದಾಯಕ ಭೂತ ಭವ್ಯ ಭವತ್ಪ್ರಭು

ಖಳಾರಾತಿ ಖಗ ವರ ವಹನ ಕಮಲಾಕಾಂತ ನಿಶ್ಚಿಂತ

ಮಾತರಿಶ್ವ ಪ್ರಿಯ ಪುರಾತನ ಪೂತನಾ ಪ್ರಾಣಾಪಹಾರಿ

ವಿಧಾತೃ ಜನಕ ವಿಪಶ್ಚಿತ ಜನಪ್ರಿಯ ಕವಿಗೇಯಾ//6//


ದುಷ್ಟ ಜನ ಸಂಹಾರಿ ಸರ್ವೋತ್ಕೃಷ್ಟ ಮಹಿಮ ಸಮೀರನುತ

ಸಕಲ ಇಷ್ಟದಾಯಕ ಸ್ವರತ ಸುಖಮಯ ಮಮ ಕುಲಸ್ವಾಮಿ

ಹೃಷ್ಟ ಪುಷ್ಟ ಕನಿಷ್ಠ ಸೃಷ್ಟಿ ಆದಿ ಅಷ್ಟಕರ್ತ ಕರೀಂದ್ರ ವರದ

ಯಥೇಷ್ಟ ತನು ಉನ್ನತ ಸುಕರ್ಮಾ ನಮಿಪೆನು ಅನವರತ//7//


ಪಾಕಶಾಸನ ಪೂಜ್ಯ ಚರಣ ಪಿನಾಕಿ ಸನ್ನುತ ಮಹಿಮ

ಸೀತಾ ಶೋಕ ನಾಶನ ಸುಲಭ ಸುಮುಖ ಸುವರ್ಣವರ್ಣ ಸುಖಿ

ಮಾಕಳತ್ರ ಮನೀಷಿ ಮಧುರಿಪು ಏಕಮೇವಾದ್ವಿತೀಯ ರೂಪ

ಪ್ರತೀಕ ದೇವಗಣಾಂತರಾತ್ಮಕ ಪಾಲಿಸುವುದೆಮ್ಮ//8//


ಅಪ್ರಮೇಯ ಅನಂತರೂಪ ಸದಾ ಪ್ರಸನ್ನ ಮುಖಾಬ್ಜ

ಮುಕ್ತಿ ಸುಖಪ್ರದಾಯಕ ಸುಮನಸ ಆರಾಧಿತ ಪದಾಂಭೋಜ

ಸ್ವಪ್ರಕಾಶ ಸ್ವತಂತ್ರ ಸರ್ವಗ ಕ್ಷಿಪ್ರ ಫಲದಾಯಕ ಕ್ಷಿತೀಶ

ಯದು ಪ್ರವೀರ ವಿತರ್ಕ್ಯ ವಿಶ್ವಸು ತೈಜಸ ಪ್ರಾಜ್ಞ//9//


ಗಾಳಿ ನಡೆವಂದದಲಿ ನೀಲ ಘನಾಳಿ ವರ್ತಿಸುವಂತೆ

ಬ್ರಹ್ಮ ತ್ರಿಶೂಲಧರ ಶಕ್ರಾರ್ಕ ಮೊದಲಾದ ಅಖಿಳ ದೇವಗಣ

ಕಾಲಕರ್ಮ ಗುಣಾಭಿಮಾನಿ ಮಹಾ ಲಕುಮಿ ಅನುಸರಿಸಿ ನಡೆವರು

ಮೂಲ ಕಾರಣ ಮುಕ್ತಿ ದಾಯಕನು ಶ್ರೀಹರಿಯೆನಿಸಿಕೊಂಬ//10//


ಮೋಡ ಕೈಬೀಸಣಿಕೆಯಿಂದಲಿ ಓಡಿಸುವೆನೆಂಬನ ಪ್ರಯತ್ನವು

ಕೂಡುವುದೆ ಕಲ್ಪಾಂತಕೆ ಆದರು ಲಕುಮಿವಲ್ಲಭನು ಜೋಡು ಕರ್ಮವ ಜೀವರೊಳು

ತಾ ಮಾಡಿ ಮಾಡಿಸಿ ಫಲಗಳುಣಿಸುವ

ಪ್ರೌಢರಾದವರು ಇವನ ಭಜಿಸಿ ಭವಾಬ್ಧಿ ದಾಟುವರು//11//


ಕ್ಷೇಶ ಮೋಹ ಅಜ್ಞಾನ ದೋಷ ವಿನಾಶಕ ವಿರಿಂಚಿ ಅಂಡದೊಳಗೆ

ಆಕಾಶದ ಉಪಾದಿಯಲಿ ತುಂಬಿಹ ಎಲ್ಲ ಕಾಲದಲಿ

ಘಾಸಿಗೊಳಿಸದೆ ತನ್ನವರ ಅನಾಯಾಸ ಸಂರಕ್ಷಿಸುವ

ಮಹಾ ಕರುಣಾ ಸಮುದ್ರ ಪ್ರಸನ್ನ ವದನಾಂಭೋಜ ಸುರರಾಜ ವಿರಾಜ//12//


ಕನ್ನಡಿಯ ಕೈವಿಡಿದು ನೋಳ್ಪನ ಕಣ್ಣುಗಳು ಕಂಡಲ್ಲಿಗೆರಗದೆ

ತನ್ನ ಪ್ರತಿಬಿಂಬವನೆ ಕಾಂಬುವ ದರ್ಪಣವ ಬಿಟ್ಟು

ಧನ್ಯರು ಇಳೆಯೊಳಗೆ ಎಲ್ಲ ಕಡೆಯಲಿ ನಿನ್ನ ರೂಪವ ನೋಡಿ ಸುಖಿಸುತ

ಸನ್ನುತಿಸುತ ಆನಂದ ವಾರಿಧಿಯೊಳಗೆ ಮುಳುಗಿಹರು//13//


ಅನ್ನ ಮಾನಿ ಶಶಾಂಕನೊಳು ಕಾರುಣ್ಯ ಸಾಗರ ಕೇಶವನು

ಪರಮಾನ್ನದೊಳು ಭಾರತಿಯು ನಾರಾಯಣನು

ಭಕ್ಷ್ಯದೊಳು ಸೊನ್ನಗದಿರನು ಮಾಧವನು

ಶ್ರುತಿ ಸನ್ನುತ ಶ್ರೀಲಕ್ಷ್ಮೀ ಘೃತದೊಳು ಮಾನ್ಯ ಗೋವಿಂದ ಅಭಿಧನು ಇರುತಿಪ್ಪ ಎಂದೆಂದು//14//


ಕ್ಷೀರಮಾನಿ ಸರಸ್ವತೀ ಜಗತ್ಸಾರ ವಿಷ್ಣುವ ಚಿಂತಿಸುವುದು

ಸರೋರುಹಾಸನ ಮಂಡಿಗೆಯೊಳು ಇರುತಿಪ್ಪ ಮಧು ವೈರಿ

ಮಾರುತನು ನವನೀತದೊಳು ಸಂಪ್ರೇರಕ ತ್ರಿವಿಕ್ರಮನು

ದಧಿಯೊಳು ವಾರಿನಿಧಿ ಚಂದ್ರಮರೊಳಗೆ ಇರುತಿಪ್ಪ ವಾಮನನು//15//


ಗರುಡ ಸೂಪಕೆ ಮಾನಿ ಶ್ರೀ ಶ್ರೀಧರನ ಮೂರುತಿ

ಪತ್ರಶಾಖಕೆ ವರನೆನಿಪ ಮಿತ್ರಾಖ್ಯ ಸೂರ್ಯನು ಹೃಶೀಕಪನ ಮೂರ್ತಿ

ಉರಗ ರಾಜನು ಫಲ ಸುಶಾಖಕೆ ವರನೆನಿಸುವನು

ಪದ್ಮನಾಭನ ಸ್ಮರಿಸಿ ಭುಂಜಿಸುತಿಹರು ಬಲ್ಲವರು ಎಲ್ಲ ಕಾಲದಲಿ//16//


ಗೌರಿ ಸರ್ವ ಆಮ್ಲಸ್ಥಳು ಎನಿಪಳು ಶೌರಿ ದಾಮೋದರನ ತಿಳಿವುದು

ಗೌರಿಪ ಅನಾಮ್ಲಸ್ಥ ಸಂಕರುಷಣನ ಚಿಂತಿಪುದು

ಸಾರಶರ್ಕರ ಗುಡದೊಳಗೆ ವೃತ್ರಾರಿ ಇರುತಿಹ

ವಾಸುದೇವನ ಸೂರಿಗಳು ಧೇನಿಪರು ಪರಮಾದರದಿ ಸರ್ವತ್ರ//17//


ಸ್ಮರಿಸು ವಾಚಸ್ಪತಿಯ ಸೂಪಸ್ಕರದೊಳಗೆ ಪ್ರದ್ಯುಮ್ನನು ಇಪ್ಪನು

ನಿರಯಪತಿ ಯಮಧರ್ಮ ಕಾಟು ದ್ರವ್ಯದೊಳಗೆ ಅನಿರುದ್ಧ

ಸರಷಪ ಶ್ರೀ ರಾಮಠ ಏಳದಿ ಸ್ಮರಣ ಶ್ರೀ ಪುರುಷೋತ್ತಮನ

ಕರ್ಪೂರದಿ ಚಿಂತಿಸಿ ಪೂಜಿಸುತಲಿರು ಪರಮ ಭಕುತಿಯಲಿ//18//


ನಾಲಿಗಿಂದಲಿ ಸ್ವೀಕರಿಪ ರಸಪಾಲು ಮೊದಲಾದ ಅದರೊಳಗೆ

ಘೃತ ತೈಲ ಪಕ್ವ ಪದಾರ್ಥದೊಳಗಿಹ ಚಂದ್ರನಂದನನ

ಪಾಲಿಸುವ ಅಧೋಕ್ಷಜನ ಚಿಂತಿಸು

ಸ್ಥೂಲ ಕೂಷ್ಮಾಂಡ ತಿಲ ಮಾಷಜ ಈ ಲಲಿತ ಭಕ್ಷ್ಯದೊಳು ದಕ್ಷನು ಲಕ್ಷ್ಮೀ ನರಸಿಂಹ//19//


ಮನವು ಮಾಷ ಸುಭಕ್ಷ್ಯದೊಳು ಚಿಂತನೆಯ ಮಾಡು ಅಚ್ಯುತನ

ನಿರ್ಋತಿ ಮನೆಯೆನಿಪ ಲವಣದೊಳು ಮರೆಯದೆ ಶ್ರೀ ಜನಾರ್ಧನನ

ನೆನೆವುತಿರು ಫಲ ರಸಗಳೊಳು ಪ್ರಾಣನ ಉಪೇಂದ್ರನ

ವೀಳ್ಯದೆಲೆಯೊಳು ದ್ಯುನದಿ ಹರಿ ರೂಪವನೇ ಕೊಂಡಾಡುತಲೆ ಸುಖಿಸುತಿರು//20//


ವೇದ ವಿನುತಗೆ ಬುಧನು ಸುಸ್ವಾದ ಉದಕ ಅಧಿಪನು ಎನಿಸಿಕೊಂಬನು

ಶ್ರೀದ ಕೃಷ್ಣನ ತಿಳಿದು ಪೂಜಿಸುತಿರು ನಿರಂತರದಿ

ಸಾಧು ಕರ್ಮವ ಪುಷ್ಕರನು ಸುನಿವೇದಿತ ಪದಾರ್ಥಗಳ

ಶುದ್ಧಿಯಗೈದ ಗೋಸುಗ ಹಂಸನಾಮಕಗೆ ಅರ್ಪಿಸುತಲಿಪ್ಪ//21//


ರತಿ ಸಕಲ ಸುಸ್ವಾದು ರಸಗಳ ಪತಿಯೆನಿಸುವಳು ಅಲ್ಲಿ ವಿಶ್ವನು

ಹುತವಹನ ಚೂಲಿಗಳೊಳಗೆ ಭಾರ್ಗವನ ಚಿಂತಿಪುದು

ಕ್ಷಿತಿಜ ಗೋಮಯಜ ಆದಿಯೊಳು ಸಂಸ್ಥಿತ ವಸಂತನ ಋಷಭ ದೇವನ

ತುತಿಸುತಿರು ಸಂತತ ಸದ್ಭಕ್ತಿ ಪೂರ್ವಕದಿ//22//


ಪಾಕ ಕರ್ತೃಗಳೊಳು ಚತುರ್ದಶ ಲೋಕಮಾತೆ ಮಹಾಲಕುಮಿ

ಗತಶೋಕ ವಿಶ್ವಂಭರನ ಚಿಂತಿಪುದು ಎಲ್ಲ ಕಾಲದಲಿ

ಚೌಕ ಶುದ್ಧ ಸುಮಂಡಲದಿ ಭೂ ಸೂಕರಾಹ್ವಯ

ಉಪರಿ ಚೈಲಪ ಏಕದಂತ ಸನತ್ಕುಮಾರನ ಧ್ಯಾನಿಪುದು ಬುಧರು//23//


ಶ್ರೀನಿವಾಸನ ಭೋಗ್ಯ ವಸ್ತುವ ಕಾಣಗೊಡದಂದದಲಿ

ವಿಶ್ವಕ್ಸೇನ ಪರಿಖಾ ರೂಪನಾಗಿಹನು ಅಲ್ಲಿ ಪುರುಷಾಖ್ಯ

ತಾನೇ ಪೂಜಕ ಪೂಜ್ಯನೆನಿಸಿ ನಿಜಾನುಗರ ಸಂತೈಪ

ಗುರು ಪವಮಾನ ವಂದಿತ ಸರ್ವ ಕಾಲಗಳಲ್ಲಿ ಸರ್ವತ್ರ//24//


ನೂತನ ಸಮೀಚೀನ ಸುರಸೋಪೇತ ಹೃದ್ಯ ಪದಾರ್ಥದೊಳು

ವಿಧಿಮಾತೆ ತತ್ತದ್ರಸಗಳೊಳು ರಸ ರೂಪ ತಾನಾಗಿ

ಪ್ರೀತಿ ಪಡಿಸುತ ನಿತ್ಯದಿ ಜಗನ್ನಾಥ ವಿಠಲನ ಕೂಡಿ

ತಾ ನಿರ್ಭೀತಳಾಗಿಹಳು ಎಂದರಿದು ನೀ ಭಜಿಸಿ ಸುಖಿಸುತಿರು//25//


//ಇತಿ ಶ್ರೀ ನೈವೇದ್ಯಪ್ರಕರಣ ಸಂಧಿ ಸಂಪೂರ್ಣಂ//

//ಶ್ರೀ ಕೃಷ್ಣಾರ್ಪಣಮಸ್ತು//

Friday, January 25, 2013

ಶ್ರೀ ಹರಿಕಥಾಮೃತಸಾರ - 29

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಶ್ರೀ ಅಣುತಾರತಮ್ಯ ಸಂಧಿ//


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ವಿಷ್ಣು ಸರ್ವೋತ್ತಮನು ಪ್ರಕೃತಿ ಕನಿಷ್ಠಳು ಎನಿಪಳು ಅನಂತ ಗುಣ

ಪರಮೇಷ್ಠಿ ಪವನರು ಕಡಿಮೆ ವಾಣೀ ಭಾರತಿಗಳು ಅಧಮ

ವಿಷ್ಣು ವಹನ ಫಣೀಂದ್ರ ಮೃಡರಿಗೆ ಕೃಷ್ಣ ಮಹಿಷಿಯರು ಅಧಮರು

ಇವರೊಳು ಶ್ರೇಷ್ಠಳು ಎನಿಪಳು ಜಾಂಬವತಿ ಆವೇಶ ಬಲದಿಂದ//1//


ಪ್ಲವಗ ಪನ್ನಗಪ ಅಹಿ ಭೂಷಣ ಯುವತಿಯರು ಸಮ ತಮ್ಮೊಳಗೆ

ಜಾಂಬವತಿಗಿಂದಲಿ ಕಡಿಮೆ ಇವರು ಇಂದ್ರ ಕಾಮರಿಗೆ ಅವರ ಪ್ರಾಣನು

ಕಡಿಮೆ ಕಾಮನ ಕುವರ ಶಚಿ ರತಿ ದಕ್ಷ ಗುರು ಮನು

ಪ್ರವಹ ಮಾರುತ ಕೊರತೆಯೆನಿಸುವ ಆರು ಜನರಿಂದ//2//


ಯಮ ದಿವಾಕರ ಚಂದ್ರ ಮಾನವಿ ಸುಮರು ಕೋಣಪ ಪ್ರವಹಗೆ ಅಧಮರು

ದ್ಯುಮಣಿಗಿಂದಲಿ ವರುಣ ನೀಚನು ನಾದದ ಅಧಮನು

ಸುಮನಸಾಸ್ಯ ಪ್ರಸೂತಿ ಭೃಗು ಮುನಿ ಸಮರು ನಾರದಗೆ ಅಧಮರು

ಅತ್ರಿ ಪ್ರಮುಖ ವಿಶ್ವಾಮಿತ್ರ ವೈವಸ್ವತರು ಅನಳಗೆ ಅಧಮ//3//


ಮಿತ್ರ ತಾರಾ ನಿರ್ಋತಿ ಪ್ರವಹಾ ಪತ್ನಿ ಪ್ರಾವಹಿ ಸಮರು

ವಿಶ್ವಾಮಿತ್ರಗಿಂದಲಿ ಕೊರತೆ

ವಿಷ್ವಕ್ಸೇನ ಗಣನಾಥ ವಿತ್ತಪತಿ ಅಶ್ವಿನಿಗಳು ಅಧಮರು

ಮಿತ್ರ ಮೊದಲಾದ ಅವರಿಗಿಂದಲಿ ಬಿತ್ತರಿಪೆನು ಶತಸ್ಥ ಮನುಜರ ವ್ಯೂಹ ನಾಮಗಳ//4//


ಮರುತರು ಒಂಭತ್ತು ಅಧಿಕ ನಾಲ್ವತ್ತು ಎರಡು ಅಶ್ವಿನಿ

ವಿಶ್ವೇದೇವರು ಎರಡೈದು ಹನ್ನೊಂದು ರುದ್ರರು ದ್ವಾದಶಾದಿತ್ಯ

ಗುರು ಪಿತೃ ತ್ರಯ ಅಷ್ಟವಸುಗಳು ಭರತ ಭಾರತಿ ಪೃಥ್ವಿ ಋಭುವು

ಎಂದರಿದು ಇವರನು ಸೋಮರಸ ಪಾನಾರ್ಹರು ಅಹುದೆಂದು//5//


ಈ ದಿವೌಕಸರೊಳಗೆ ಉಕ್ತರು ಐದಧಿಕ ದಶ

ಉಳಿದ ಎಂಭತ್ತೈದು ಶೇಷರಿಗೆ ಎಣೆಯೆನಿಸುವರು ಧನಪ ವಿಘ್ನೇಶಾ

ಸಾಧು ವೈವಸ್ವತ ಸ್ವಯಂಭುವ ಶ್ರೀದ ತಾಪಸರುಳಿದು

ಮನು ಎಕಾದಶರು ವಿಘ್ನೇಶಗಿಂತಲಿ ಕೊರತೆಯೆನಿಸುವರು//6//


ಚವನ ನಂದನ ಕವಿ ಬೃಹಸ್ಪತಿ ಅವರಜ ಉಚಿಥ್ಯಮುನಿ ಪಾವಕ

ಧೃವ ನಹುಷ ಶಶಿಬಿಂದು ಪ್ರಿಯವ್ರತನು ಪ್ರಹ್ಲಾದ

ಕುವಲಯಪರು ಉಕ್ತೇತರಿಂದಲಿ ಅವರ ರೋಹಿಣಿ ಶಾಮಲಾ ಜಾಹ್ನವಿ

ವಿರಾಟ್ ಪರ್ಜನ್ಯ ಸಂಜ್ಞಾ ದೇವಿಯರು ಅಧಮ//7//


ದ್ಯುನದಿಗಿಂತಲಿ ನೀಚರೆನಿಪರು ಅನಭಿಮಾನಿ ದಿವೌಕಸರು

ಕೇಚನ ಮುನಿಗಳಿಗೆ ಕಡಿಮೆ ಸ್ವಾಹಾ ದೇವಿಗೆ ಅಧಮ ಬುಧ

ಎನಿಸುವಳು ಉಷಾದೇವಿ ನೀಚಳು ಶನಿ ಕಡಿಮೆ ಕರ್ಮಾಧಿಪತಿ

ಸದ್ವಿನುತ ಪುಷ್ಕರ ನೀಚನು ಎನಿಸುವ ಸೂರ್ಯನಂದನಗೆ//8//


ಕೊರತೆಯೆನಿಪರು ಅಶೀತಿ ಋಷಿ ಪುಷ್ಕರಗೆ

ಊರ್ವಶಿ ಮುಖ್ಯ ಶತ ಅಪ್ಸರರು ತುಂಬುರ ಮುಖರು ಅಜಾನಜರು ಎನಿಸುತಿಹರು

ಕರೆಸುವುದು ಅನಳಗಣ ನಾಲ್ವತ್ತು ಅರೆ ಚತುರ್ದಶ ದ್ವಿ ಅಷ್ಟ ಸಾವಿರ

ಹರಿ ಮಡದಿಯರು ಸಮರೆನಿಸುವರು ಪಿಂತೆ ಪೇಳ್ವರಿಗೆ//9//


ತದವರರು ಅನಾಖ್ಯಾತ ಅಪ್ಸರ ಸುದತಿಯರು ಕೃಷ್ಣಾoಗ ಸಂಗಿಗಳು

ಅದರ ತರುವಾಯದಲಿ ಚಿರಪಿತರುಗಳು

ಇವರಿಂದ ತ್ರಿದಶ ಗಂಧರ್ವ ಗಣ ಇವರಿಂದ ಅಧಮ ನರ ಗಂಧರ್ವರು

ಇವರಿಂದ ಉದಧಿ ಮೇಲೆ ಅಖಿಳ ಪತಿಗಳು ಅಧಮರು ನೂರು ಗುಣದಿಂದ//10//


ಪೃಥ್ವಿ ಪತಿಗಳಿಗಿಂದ ಶತ ಮನುಜೋತ್ತಮರು ಕಡಿಮೆ ಎನಿಪರು

ಇವರಿಂದ ಉತ್ತರೋತ್ತರ ನೂರು ಗುಣದಿಂದ ಅಧಿಕರಾದವರ

ನಿತ್ಯದಲಿ ಚಿಂತಿಸುತ ನಮಿಸುತ ಭೃತ್ಯನು ಆನುಹದೆಂಬ

ಭಕ್ತರ ಚಿತ್ತದಲಿ ನೆಲೆಗೊಂಡು ಕರುಣಿಪರು ಅಖಿಳ ಸೌಖ್ಯಗಳ//11//


ದ್ರುಮಲತಾ ತೃಣ ಗುಲ್ಮ ಜೀವರು ಕ್ರಮದಿ ನೀಚರು

ಇವರಿಗಿಂತಧಮರು ನಿತ್ಯ ಬದ್ಧರಿಗಿಂತಲು ಅಜ್ಞಾನಿ

ತಮಸಿಗೆ ಯೋಗ್ಯರ ಭೃತ್ಯರು ಅಧಮರು ಅಮರುಷಾದಿ ಅಭಿಮಾನಿ ದೈತ್ಯರು

ನಮುಚಿ ಮೊದಲಾದ ಅವರಿಗಿಂತಲಿ ವಿಪ್ರಚಿತ ನೀಚ//12//


ಅಲಕುಮಿಯು ತಾ ನೀಚಳೆನಿಪಲು ಕಲಿ ಪರಮ ನೀಚತಮ

ಅವನಿಂದುಳಿದ ಪಾಪಿಗಳಿಲ್ಲ ನೋಡಲು ಈ ಜಗತ್ರಯದಿ

ಮಲವಿಸರ್ಜನ ಕಾಲದಲಿ ಕತ್ತಲೆಯೊಳಗೆ ಕಲ್ಮಶ ಕುಮಾರ್ಗ

ಸ್ಥಳಗಳಲಿ ಚಿಂತನೆಯ ಮಾಳ್ಪುದು ಬಲ್ಲವರು ನಿತ್ಯ//13//


ಸತ್ವ ಜೀವರ ಮಾನಿ ಬ್ರಹ್ಮನು ನಿತ್ಯ ಬದ್ಧರೊಳಗೆ ಪುರಂಜನ

ದೈತ್ಯ ಸಮುದಾಯಧಿಪತಿ ಕಲಿಯೆನಿಪ

ಪವಮಾನ ನಿತ್ಯದಲಿ ಅವರೊಳಗೆ ಕರ್ಮ ಪ್ರವರ್ತಕನು ತಾನಾಗಿ

ಶ್ರೀ ಪುರುಷೋತ್ತಮನ ಸಂಪ್ರೀತಿಗೋಸುಗ ಮಾಡಿ ಮಾಡಿಸುವ//14//


ಪ್ರಾಣದೇವನು ತ್ರಿವಿಧರೊಳಗೆ ಪ್ರವೀಣ ತಾನೆಂದೆನಿಸಿ

ಅಧಿಕಾರ ಅನುಸಾರದಿ ಕರ್ಮಗಳ ತಾ ಮಾಡಿ ಮಾಡಿಸುವ

ಜ್ಞಾನ ಭಕ್ತಿ ಸುರರ್ಗೆ ಮಿಶ್ರ ಜ್ಞಾನ ಮಧ್ಯಮ ಜೀವರಿಗೆ

ಅಜ್ಞಾನ ಮೋಹ ದ್ವೇಷಗಳ ದೈತ್ಯರಿಗೆ ಕೊಡುತಿಪ್ಪ//15//


ದೇವ ದೈತ್ಯರ ತಾರತಮ್ಯವ ಈ ವಿಧದಿ ತಿಲಿದೆಲ್ಲರೊಳು

ಲಕ್ಷ್ಮೀವರನು ಸರ್ವೋತ್ತಮನೆಂದರಿದು ನಿತ್ಯದಲಿ

ಸೇವಿಸುವ ಭಕ್ತರಿಗೊಲಿದು ಸುಖವೀವ ಸರ್ವತ್ರದಲಿ ಸುಖಮಯ

ಶ್ರೀ ವಿರಿಂಚಾದಿ ಅಮರ ವಂದಿತ ಜಗನ್ನಾಥ ವಿಠಲನು//16//


//ಇತಿ ಶ್ರೀ ಅಣುತಾರತಮ್ಯ ಸಂಧಿ ಸಂಪೂರ್ಣಂ//

//ಶ್ರೀ ಕೃಷ್ಣಾರ್ಪಣಮಸ್ತು//

Thursday, January 24, 2013

ಶ್ರೀ ಹರಿಕಥಾಮೃತಸಾರ - 28

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಶ್ರೀ ವಿಘ್ನೇಶ್ವರ ಸ್ತೋತ್ರ ಸಂಧಿ//

//ಶ್ರೀ ಗಣಪತಿ ಸ್ತೋತ್ರ ಸಂಧಿ//


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಶ್ರೀಶನಂಘ್ರಿ ಸರೋಜ ಭೃಂಗ ಮಹೇಶ ಸಂಭವ ಮನ್ಮನದೊಳು ಪ್ರಕಾಶಿಸು ಅನುದಿನ

ಪ್ರಾರ್ಥಿಸುವೆ ಪ್ರೇಮಾತಿಶಯದಿಂದ

ನೀ ಸಲಹು ಸತ್ಜನರ ವೇದವ್ಯಾಸ ಕರುಣಾಪಾತ್ರ

ಮಹದಾಕಾಶಪತಿ ಕರುಣಾಳು ಕೈಪಿಡಿದು ಎಮ್ಮನುದ್ಧರಿಸು//1//


ಏಕದಂತ ಇಭೇಂದ್ರಮುಖ ಚಾಮೀಕರ ಕೃತ ಭೂಷಣಾoಗ

ಕೃಪಾಕಟಾಕ್ಷದಿ ನೋಡು ವಿಜ್ಞಾಪಿಸುವೆ ಇನಿತೆಂದು

ನೋಕನೀಯನ ತುತಿಸುತಿಪ್ಪ ವಿವೇಕಿಗಳ ಸಹವಾಸ ಸುಖಗಳ

ನೀ ಕರುಣಿಸುವುದೆಮಗೆ ಸಂತತ ಪರಮ ಕರುಣಾಳು//2//


ವಿಘ್ನರಾಜನೆ ದುರ್ವಿಷಯದೊಳು ಮಗ್ನವಾಗಿಹ ಮನವ

ಮಹ ದೋಷಘ್ನನಂಘ್ರಿ ಸರೋಜಯುಗಳದಿ ಭಕ್ತಿ ಪೂರ್ವಕದಿ ಲಗ್ನವಾಗಲಿ ನಿತ್ಯ

ನರಕಭಯಾಗ್ನಿಗಳಿಗೆ ಆನಂಜೆ

ಗುರುವರ ಭಗ್ನಗೈಸೆನ್ನ ಅವಗುಣಗಳನ್ನು ಪ್ರತಿ ದಿವಸದಲ್ಲಿ//3//


ಧನಪ ವಿಷ್ವಕ್ಸೇನ ವೈದ್ಯ ಅಶ್ವಿನಿಗಳಿಗೆ ಸರಿಯೆನಿಪ

ಷನ್ಮುಖನನುಜ ಶೇಷ ಶತಸ್ಥ ದೇವೋತ್ತಮ ವಿಯತ್ಗಂಗಾ ವಿನುತ

ವಿಶ್ವ ಉಪಾಸಕನೆ ಸನ್ಮನದಿ ವಿಜ್ಞಾಪಿಸುವೆ

ಲಕ್ಷ್ಮೀ ವನಿತೆ ಅರಸನ ಭಕ್ತಿ ಜ್ಞಾನ ಕೊಟ್ಟು ಸಲಹುವದು//4//


ಚಾರುದೇಷ್ಣ ಆಹ್ವಯನೆನಿಸಿ ಅವತಾರ ಮಾಡಿದೆ ರುಗ್ಮಿಣೀಯಲಿ

ಗೌರಿ ಅರಸನ ವರದಿ ಉದ್ಧಟರಾದ ರಾಕ್ಷಸರ ಶೌರಿ ಆಜ್ಞದಿ ಸಂಹರಿಸಿ

ಭೂಭಾರ ವಿಳುಹಿದ ಕರುಣಿ

ತ್ವತ್ಪಾದಾರವಿಂದಕೆ ನಮಿಪೆ ಕರುಣಿಪುದು ಎಮಗೆ ಸನ್ಮತಿಯ//5//


ಶೂರ್ಪ ಕರ್ಣ ದ್ವಯ ವಿಜಿತ ಕಂದರ್ಪ ಶರ ಉದಿತ ಅರ್ಕ ಸನ್ನಿಭ

ಸರ್ಪ ವರ ಕಟಿ ಸೂತ್ರ ವೈಕೃತ ಗಾತ್ರ ಸುಚರಿತ್ರ

ಸ್ವರ್ಪಿಶಾಂಕುಶ ರದನ ಕರ ಖಳ ದರ್ಪ ಭಂಜನ

ಕರ್ಮ ಸಾಕ್ಷಿಗ ತರ್ಪಕನು ನೀನಾಗಿ ತೃಪ್ತಿಯ ಬಡಿಸು ಸಜ್ಜನರ//6//


ಖೇಶ ಪರಮ ಸುಭಕ್ತಿ ಪೂರ್ವಕ ವ್ಯಾಸ ಕೃತ ಗ್ರಂಥಗಳನರಿತು

ಪ್ರಯಾಸವಿಲ್ಲದೆ ಬರೆದು ವಿಸ್ತರಿಸಿದೆಯೋ ಲೋಕದೊಳು

ಪಾಶ ಪಾಣಿಯೇ ಪ್ರಾರ್ಥಿಸುವೆ ಉಪದೇಶಿಸೆನಗೆ ಅದರರ್ಥಗಳ

ಕರುಣಾ ಸಮುದ್ರ ಕೃಪಾ ಕಟಾಕ್ಷದಿ ನೋಡಿ ಪ್ರತಿದಿನದಿ//7//


ಶ್ರೀಶನ ಅತಿ ನಿರ್ಮಲ ಸುನಾಭೀ ದೇಶ ಸ್ಥಿತ ರಕ್ತ ಶ್ರೀಗಂಧಾ ಸುಶೋಭಿತ ಗಾತ್ರ

ಲೋಕಪವಿತ್ರ ಸುರಸ್ತೋತ್ರ

ಮೂಷಕ ಸುವರವಹನ್ ಪ್ರಾಣಾವೇಶಯುತ ಪ್ರಖ್ಯಾತ ಪ್ರಭು

ಪೂರೈಸು ಭಕ್ತರು ಬೇಡಿದ ಇಷ್ಟಾರ್ಥಗಳ ಪ್ರತಿದಿನದಿ//8//


ಶಂಕರಾತ್ಮಜ ದೈತ್ಯರಿಗೆ ಅತಿ ಭಯಂಕರ ಗತಿಗಳ ಈಯಲೋಸುಗ

ಸಂಕಟ ಚತುರ್ಥಿಗನೆನಿಸಿ ಅಹಿತಾರ್ಥಗಳ ಕೊಟ್ಟು

ಮಂಕುಗಳ ಮೋಹಿಸುವೆ ಚಕ್ರಧರಾಂಕಿತನ ದಿನದಿನದಿ

ತ್ವತ್ಪದ ಪಂಕಜಂಗಳಿಗೆ ಎರಗಿ ಬಿನ್ನೈಸುವೆನು ಪಾಲಿಪುದು//9//


ಸಿದ್ಧ ವಿದ್ಯಾಧರ ಗಣ ಸಮಾರಾಧ್ಯ ಚರಣ ಸರೋಜ ಸರ್ವ ಸುಸಿದ್ಧಿದಾಯಕ

ಶೀಘ್ರದಿಂ ಪಾಲಿಪುದು ಬಿನ್ನೈಪೆ

ಬುದ್ಧಿ ವಿದ್ಯಾ ಜ್ಞಾನ ಬಲ ಪರಿಶುದ್ಧ ಭಕ್ತಿ ವಿರಕ್ತಿ

ನಿರುತಾನವದ್ಯನ ಸ್ಮೃತಿ ಲೀಲೆಗಳ ಸುಸ್ತವನ ವದನದಲಿ//10//


ರಕ್ತವಾಸದ್ವಯ ವಿಭೂಷಣ ಉಕ್ತಿ ಲಾಲಿಸು ಪರಮ ಭಗವದ್ಭಕ್ತರ

ಭವ್ಯಾತ್ಮ ಭಾಗವತಾದಿ ಶಾಸ್ತ್ರದಲಿ ಸಕ್ತವಾಗಲಿ ಮನವು

ವಿಷಯ ವಿರಕ್ತಿ ಪಾಲಿಸು ವಿದ್ವದಾದ್ಯ

ವಿಮುಕ್ತನೆಂದೆನಿಸು ಎನ್ನ ಭವ ಭಯದಿಂದಲಿ ಅನುದಿನದಿ//11//


ಶುಕ್ರ ಶಿಷ್ಯರ ಸಂಹರಿಪುದಕೆ ಶಕ್ರ ನಿನ್ನನು ಪೂಜಿಸಿದನು

ಉರುಕ್ರಮ ಶ್ರೀರಾಮಚಂದ್ರನು ಸೇತು ಮುಖದಲ್ಲಿ

ಚಕ್ರವರ್ತಿಪ ಧರ್ಮರಾಜನು ಚಕ್ರಪಾಣಿಯ ನುಡಿಗೆ ಭಜಿಸಿದ

ವಕ್ರತುಂಡನೆ ನಿನ್ನೊಳೆoತುದೋ ಈಶಾನುಗ್ರಹವು//12//


ಕೌರವೇಂದ್ರನು ನಿನ್ನ ಭಜಿಸದ ಕಾರಣದಿ ನಿಜಕುಲ ಸಹಿತ ಸಂಹಾರವೈದಿದ

ಗುರು ವೃಕೋದರನ ಗದೆಯಿಂದ

ತಾರಕಾಂತಕನನುಜ ಎನ್ನ ಶರೀರದೊಳು ನೀ ನಿಂತು

ಧರ್ಮ ಪ್ರೇರಕನು ನೀನಾಗಿ ಸಂತೈಸೆನ್ನ ಕರುಣದಲಿ//13//


ಏಕವಿಂಶತಿ ಮೋದಕಪ್ರಿಯ ಮೂಕರನು ವಾಗ್ಮಿಗಳ ಮಾಳ್ಪೆ

ಕೃಪಾಕರ ಈಶ ಕೃತಜ್ಞ ಕಾಮದ ಕಾಯೋ ಕೈಪಿಡಿದು

ಲೇಖಕಾಗ್ರಣಿ ಮನ್ಮನದ ದುರ್ವ್ಯಾಕುಲವ ಪರಿಹರಿಸು ದಯದಿ

ಪಿನಾಕಿ ಭಾರ್ಯಾ ತನುಜ ಮೃದ್ಭವ ಪ್ರಾರ್ಥಿಸುವೆನೀಗ//14//


ನಿತ್ಯ ಮಂಗಳ ಚರಿತ ಜಗದ ಉತ್ಪತ್ತಿ ಸ್ಥಿತಿ ಲಯ ನಿಯಮನ ಜ್ಞಾನ ತ್ರಯಪ್ರದ

ಬಂಧಮೋಚಕ ಸುಮನಸ ಅಸುರರ ಚಿತ್ತ ವೃತ್ತಿಗಳಂತೆ ನಡೆವ

ಪ್ರಮತ್ತನಲ್ಲ ಸುಹೃತ್ ಜನಾಪ್ತನ

ನಿತ್ಯದಲಿ ನೆನೆನೆನೆದು ಸುಖಿಸುವ ಭಾಗ್ಯ ಕರುಣಿಪುದು//15//


ಪಂಚಭೇದ ಜ್ಞಾನವರಪು ವಿರಿಂಚಿ ಜನಕನ ತೋರು ಮನದಲಿ

ವಾಂಚಿತಪ್ರದ ಒಲುಮೆಯಿಂದಲಿ ದಾಸನೆಂದರಿದು

ಪಂಚವಕ್ತ್ರನ ತನಯ ಭವದೊಳು ವಂಚಿಸದೆ ಸಂತೈಸು

ವಿಷಯದಿ ಸಂಚರಿಸದಂದದಲಿ ಮಾಡು ಮನಾದಿ ಕರಣಗಳ//16//


ಏನು ಬೇಡುವುದಿಲ್ಲ ನಿನ್ನ ಕುಯೋನಿಗಳು ಬರಲಂಜೆ

ಲಕ್ಷ್ಮೀ ಪ್ರಾಣಪತಿ ತತ್ವೇಶರಿಂದ ಒಡಗೂಡಿ ಗುಣಕಾರ್ಯ

ತಾನೇ ಮಾಡುವನೆಂಬ ಈ ಸುಜ್ಞಾನವೆ ಕರುಣಿಪುದೆಮಗೆ

ಮಹಾನುಭಾವ ಮುಹುರ್ಮುಹು: ಪ್ರಾರ್ಥಿಸುವೆ ಇನಿತೆಂದು//17//


ನಮೋ ನಮೋ ಗುರುವರ್ಯ ವಿಬುಧೋತ್ತಮ ವಿವರ್ಜಿತ ನಿದ್ರ

ಕಲ್ಪದ್ರುಮನೆನಿಪ ಭಜಕರಿಗೆ ಬಹುಗುಣ ಭರಿತ ಶುಭ ಚರಿತ

ಉಮೆಯ ನಂದನ ಪರಿಹರಿಸು ಅಹಂ ಮಮತೆ ಬುದ್ಧಿ ಆದಿ ಇಂದ್ರಿಯಗಳ

ಆಕ್ರಮಿಸಿ ದಣಿಸುತಲಿಹವು ಭವದೊಳಗೆ ಆವ ಕಾಲದಲಿ//18//


ಜಯಜಯತು ವಿಘ್ನೇಶ ತಾಪತ್ರಯ ವಿನಾಶನ ವಿಶ್ವ ಮಂಗಳ

ಜಯಜಯತು ವಿದ್ಯಪ್ರದಾಯಕ ವೀತ ಭಯ ಶೋಕ

ಜಯಜಯತು ಚಾರ್ವಾಂಗ ಕರುಣಾ ನಯನದಿಂದಲಿ ನೋಡಿ

ಜನ್ಮಾಮಯ ಮೃತಿಗಳನು ಪರಿಹರಿಸು ಭಕ್ತರಿಗೆ ಭವದೊಳಗೆ//19//


ಕಡು ಕರುಣಿ ನೀನೆಂದರಿದು ಹೇರೊಡಲ ನಮಿಸುವೆನು ನಿನ್ನಡಿಗೆ

ಬೆಂಬಿಡದೆ ಪಾಲಿಸು ಪರಮ ಕರುಣಾಸಿಂಧು ಎಂದೆಂದೂ

ನಡು ನಡುವೆ ಬರುತಿಪ್ಪ ವಿಘ್ನವ ತಡೆದು ಭಗವನ್ನಾಮ ಕೀರ್ತನ ನುಡಿದು ನುಡಿಸು ಎನ್ನಿಂದ

ಪ್ರತಿದಿವಸದಲಿ ಮರೆಯದಲೆ//20//


ಏಕ ವಿಂಶತಿ ಪದಗಳೆನಿಸುವ ಕೋಕನದ ನವಮಾಲಿಕೆಯ

ಮೈನಾಕಿ ತನಯ ಅಂತರ್ಗತ ಶ್ರೀ ಪ್ರಾಣ ಪತಿಯೆನಿಪ

ಶ್ರೀಕರ ಜಗನ್ನಾಥ ವಿಠಲ ಸ್ವೀಕರಿಸಿ

ಸ್ವರ್ಗಾಪವರ್ಗದಿ ತಾ ಕೊಡಲಿ ಸೌಖ್ಯಗಳ ಭಕ್ತರಿಗೆ ಆವ ಕಾಲದಲಿ//21//


//ಇತಿ ಶ್ರೀ ವಿಘ್ನೇಶ್ವರ ಸ್ತೋತ್ರ ಸಂಧಿ ಸಂಪೂರ್ಣಂ//

//ಇತಿ ಶ್ರೀ ಗಣಪತಿ ಸ್ತೋತ್ರ ಸಂಧಿ ಸಂಪೂರ್ಣಂ//

//ಶ್ರೀ ಕೃಷ್ಣಾರ್ಪಣಮಸ್ತು//