Wednesday, March 27, 2013

ದಾಸದಾಸರ ಮನೆಯ ದಾಸಾನುದಾಸ ನಾನು

ದಾಸದಾಸರ ಮನೆಯ ದಾಸಾನುದಾಸ ನಾನು

ಶ್ರೀಶ ಶ್ರೀರಂಗ ನಿಮ್ಮ ಮನೆಯ ದಾಸ//ಪ//


ಕಾಳುದಾಸರ ಮನೆಯ ಆಳು ದಾಸ ನಾನಯ್ಯ

ಕೀಳುದಾಸನು ನಾನು ಕಿರಿಯ ದಾಸ

ಭಾಳಾಕ್ಷ ಮುಂತಾಗಿ ಭಜಿಪ ದೇವರ ಮನೆಯ

ಆಳಿನ ಆಳಿನ ಆಳಿನಡಿದಾಸ ನಾನು//

ಪಂಕಜನಾಭನ ಮನೆಯ ಮುಂಕುದಾಸನಯ್ಯ

ಕೊಂಕುದಾಸನು ನಾನು ಕುರುಡು ದಾಸ

ಸಂಕೀರ್ತನೆಯ ಮಾಡಿ ನೆನೆವ ಭಕ್ತರ ಮನೆಯ

ಬಂಕದ ಬಾಗಿಲ ಕಾಯ್ವ ಬಡದಾಸ ನಾನು //


ಹಲವು ದಾಸರ ಮನೆಯ ಹೊಲೆದಾಸ ನಾನಯ್ಯ

ಕುಲವಿಲ್ಲದ ದಾಸ ಕುನ್ನಿದಾಸ

ಮಲಹರ ರಂಗ ನಿನ್ನ ಮನೆಯ ಮಾದಿಗ ದಾಸ

ಸಲೆಮುಕ್ತಿ ಪಾಲಿಸೊ ಆದಿಕೇಶವರಾಯ//

ತಲ್ಲಣಿಸದಿರು ಕಂಡ್ಯ ತಾಳು ಮನವೇ

ತಲ್ಲಣಿಸದಿರು ಕಂಡ್ಯ ತಾಳು ಮನವೇ

ಎಲ್ಲರನು ಸಲಹುವನು ಇದಕೆ ಸಂಶಯ ಬೇಡ//

ಬೆಟ್ಟದ ತುದಿಯಲ್ಲಿ ಬೆಳದ ವೃಕ್ಷಗಳಿಗೆ

ಕಟ್ಟೆಯನು ಕಟ್ಟಿ ನೀರೆರೆದವರು ಯಾರು

ಹುಟ್ಟಿಸಿದ ದೇವನು ತಾ ಹೊಣೆಗಾರನಾಗಿರಲು

ಗಟ್ಯಾಗಿ ಸಲಹುವನು ಸಂಶಯವಿಲ್ಲ//


ಕಲ್ಲಿನೊಳ ಹುಟ್ಟಿರುವ ಕ್ರಿಮಿ ಕೀಟಗಳಿಗೆ

ಅಲ್ಲೇ ಆಹಾರವನ್ನು ತಂದಿತ್ತವರು ಯಾರು

ಪುಲ್ಲಲೋಕಾನ ನಮ್ಮ ನೆಲಯಾದಿ ಕೇಶವನು

ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ//

Monday, March 25, 2013

ಯಾದವರಾಯ ಬೃಂದಾವನದೊಳು

ಯಾದವರಾಯ ಬೃಂದಾವನದೊಳು

ವೇಣು ನಾದವ ಮಾಡುತಿರೆ//ಪ//

ರಾಧಾ ಮುಂತಾದ ಗೋಪಿಯರೆಲ್ಲ

ಮಧುಸೂದನ ನಿನ್ನನು ಸೇವಿಸುತಿರೆ

ಸುರರು ಅಂಬರದಿ ಸಂದಣಿಸಿರೆ

ಅಪ್ಸರ ಸ್ತ್ರೀಯರು ಮೈ ಮರೆತಿರೇ//ಅಪ//


ಕರದಲಿ ಕೊಳಲನು ಊದುತ ಪಾಡುತ

ಸ ರಿ ಗ ಮ ಪ ದ ನಿ ಸ್ವರಗಳ ನುಡಿಸುತ

ಹರಿ ಹರ ಬ್ರಹ್ಮರು ನಲಿದಾಡುತಿರೆ

ತುಂಬುರು ನಾರದರು ಪಾಡುತಿರೆಚರಣ

ಕರುಗಳ ಸಹಿತಲೇ ಗೋಕುಲವೆಲ್ಲಸಿರಿ ಕಾಗಿನೆಲೆಯಾದಿ ಕೇಶವ ರಾಯ

ತರುಗಳ ಸಹಿತಲೇ ವರಗೋಪಾಲಚರಣ



ಈತನೀಗ ವಾಸುದೇವನು ಲೋಕದೊಡೆಯ

ಈತನೀಗ ವಾಸುದೇವನು ಲೋಕದೊಡೆಯ


ಈತನೀಗ ವಾಸುದೇವ ಈ ಸಮಸ್ತ ಲೋಕದೊಡೆಯ

ದಾಸಗೊಲಿದು ತೇರಾ ನೇರಿ ತೇಜಿ ಪಿಡಿದು ನಡೆಸಿದಾತ

ಧನುಜೆಯಾಳ್ದನಣ್ಣನಯ್ಯನ ಪಿತನ ಮುoದೆ ಕೌರವೇಂದ್ರನ

ಅನುಜೆಯಾಳಿದವನ ಶಿರವ ಕತ್ತರಿಸುತಾ

ಅನುಜೆಯಾಳಿದವನ ಬೆಂಕಿ ಮುಟ್ಟದoತೆ ಕಾಯ್ದ ರುಕ್ಮನ

ಅನುಜೆಯಾಳಿದವನ ಮೂರ್ತಿಯನ್ನು ನೋಡಿರೋ


ಕ್ರೂರನಾದ ಫಣಿಪ ಬಾಣ ತರಣಿಜನು ನಿರೀಕ್ಷಿಸಿ ಆಗ

ವೀರನೆಚ್ಚೆಯಸುಗೆ ಒಪ್ಪುತನ್ನು ವೀಕ್ಷಿಸಿ

ಧಾರಿಣಿಯ ಪದದೊಳoಗಿ ಚರಣ ಭಜಕ ನರನ ಕಾಯ್ದ

ಭಾವಕಲ್ಪನಾದದೇವ ಈತ ನೋಡಿರೋ


ವ್ಯೋಮಕೇಶಯಿಪ್ಪದೆಸೆಯ ಆ ಮಹಾಮಹಿಮೆಯುಳ್ಳ

ಸಾಮಜವನು ಏರಿ ಬರುವ ಶಕ್ತಿಯನೀಕ್ಷಿಸಿ

ಪ್ರೇಮದಿಂದ ಉರವನೊಡ್ಡಿ ಡಿoಗರಿಗನ ಕಾಯ್ದಾ

ಸಾರ್ವಭೌಮ ಬಡದಾದಿಕೇಶವನ್ನ ನೋಡಿರೋ



Friday, March 22, 2013

ವರವ ಕೊಡು ಎನಗೆ ವಾಗ್ದೇವಿ

ವರವ ಕೊಡು ಎನಗೆ ವಾಗ್ದೇವಿ ನಿನ್ನ


ಚರಣ ಕಮಲಂಗಳ ದಯಮಾಡು ದೇವಿ//ಪ//


ಶಶಿ ಮುಖದ ನಸು ನಗೆಯ ಬಾಲೆ

ಎಸೆವ ಕರ್ಣದ ಮುತ್ತಿನ ಓಲೆ

ನಸುವ ಸುಪಲ್ಲ ಗುಣಶೀಲೇ ದೇವಿ

ಬಿಸಜಾಕ್ಷಿ ಎನ್ನ ಹೃದಯದೊಳು ನಿಂದು //


ಇಂಪು ಸೊಂಪಿನ ಚಂದ್ರ ಬಿಂಬೆ

ಕೆಂಪು ತುಟಿ ನಾಸಿಕದ ರಂಭೆ

ಜೋಂಪು ಮದನನ ಪೂರ್ಣ ಶಕ್ತಿ ಗೊಂಬೆ

ಸಂಪಿಗೆಯ ಮುಡಿದಿಟ್ಟ ವಿದ್ಯಾ //


ರವಿ ಕೋಟಿ ತೇಜ ಪ್ರಕಾಶೇ ಮಹಾ

ಕವಿಜನ ಹೃತ್ಕಮಲ ವಾಸೇ

ಅವಿರಳ ಪುರಿ ಕಾಗಿನೆಲೆಯಾದಿ

ಕೇಶವನ ಸುತನಿಗೆ ಸನ್ನುತ ರಾಣಿವಾಸೆ//



Wednesday, March 20, 2013

"ಶ್ರೀ ಹನುಮದ್ವನ"

ಶ್ರೀ ಆಂಜನೇಯ ಸೇವಾ ಸಮಿತಿಯ ವತಿಯಿಂದ ಕೈಗೊಂಡಿರುವ ಹಸಿರು ಉಳಿಸಿ ಮಹ್ತ್ಕಾರ್ಯದ ಅಭಿಯಾನದಲ್ಲಿ ಶುರುವಾಗಿರುವ "ಶ್ರೀ ಹನುಮದ್ವನ" ದ ಮಾಹಿತಿ ಈ ಕೆಳಕಂಡಂತೆ ಇದೆ. ಭಗವದ್ಭಕ್ತರು ಈ ಸತ್ಕಾರ್ಯದಲ್ಲಿ ಸಮಿತಿಯ ಜೊತೆ ಕೈಜೋಡಿಸಬೇಕೆಂದು ಕಳಕಳಿಯಿಂದ ಪ್ರಾರ್ಥಿಸುತ್ತಿದ್ದೇವೆ.

ಬಾರೋ ಕೃಷ್ಣಯ್ಯ

ಬಾರೋ ಕೃಷ್ಣಯ್ಯ ಕೃಷ್ಣಯ್ಯ ಬಾರೋ ಕೃಷ್ಣಯ್ಯ ನಿನ್ನ ಭಕ್ತರ ಮನೆಗೀಗ //ಪ//

ಬಾರೋ ನಿನ್ನ ಮುಖ ತೋರೋ ನಿನ್ನ ಸರಿ ಯಾರೋ ಜಗಧಾರ ಶೀಲನೇ//ಅಪ//


ಅಂದುಗೆ ಪಾದವು ಕಾಲಂದುಗೆ ಕಿರು ಗೆಜ್ಜೆ ಧಿಂ ಧಿಮಿ ಧಿಮಿ ಧಿಮಿ ಧಿಮಿ ಎನುತ

ಪೊಂಗೊಳನುದುತ್ತ ಬರಿಯ ಬಾರಯ್ಯ


ಕಂಕಣ ಕರದಲ್ಲಿ ಪೊನ್ನುಂಗುರ ಹೊಳೆಯುತ ಕಿಂಕಿಣಿ ಕಿಣಿ ಕಿಣಿ ಕಿಣಿ ಎನುತ

ಪೊಂಗೊಳಲನೂದುತ್ತ ಬಾರಯ್ಯ ಬಾರೋ ಕೃಷ್ಣಯ್ಯ


ವಾಸ ಉಡುಪೀಲಿ ನೆಲೆಯಾದಿ ಕೇಶವನೇ ದಾಸ ನಿನ್ನ ಪದ ದಾಸ ನಿನ್ನ ಪದ

ದಾಸ ನಿನ್ನ ಪದ ದಾಸ ಕರೆವೆನು ಬಾರಯ್ಯ

Monday, March 18, 2013

ರಾಘವೇಂದ್ರ ವಿಜಯ - ನವಮ ಸಂಧಿ


ನವಮ ಸಂಧಿ


ರಾಘವೇಂದ್ರರ ವಿಜಯ ಪೇಳುವೆ

ರಾಘವೇಂದ್ರರ ಕರುಣ ಬಲದಲಿ

ರಾಘವೇಂದ್ರರ ಭಕುತರಾದವರಿದನು ಕೇಳುವುದು//


ಜಯತು ಜಯ ಗುರುರಾಜ ಶುಭತಮ

ಜಯತು ಕವಿಜನಗೇಯ ಸುಂದರ

ಜಯತು ನಿಜಜನಪಾಲಕ ಜಯತು ಕರುಣಾಳೊ

ಜಯತು ಸಜ್ಜನ ವಿಜಯದಾಯಕ

ಜಯತು ಕುಜನಾರಣ್ಯ ಪಾವಕ

ಜಯತು ಜಯ ಜಯ ದ್ವಿಜವರಾರ್ಚಿತ ಪಾದಪಂಕಜ//೧//


ಹಿಂದೆ ನೀ ಪ್ರಹ್ಲಾದನೆನಿಸಿ

ತಂದೆಸಂಗಡ ವಾದ ಮಾಡೀ

ಇಂದಿರೇಶನ ತಂದು ಕಂಬದಿ ಅಂದು ತೋರಿಸಿದೆ

ಮುಂದೆ ನಿನ್ನಯ ಪಿತಗೆ ಸದ್ಗತಿ

ಛಂದದಿಂದಲಿ ಕೊಡಿಸಿ ಮೆರೆದೆಯೊ

ಎಂದು ನಿನ್ನಯ ಮಹಿಮೆ ಪೊಗಳಲು ಎನಗೆ ವಶವಲ್ಲ//೨//


ತೊಳಪುನಾಶಿಕ ಕದಪುಗಳು ಬಲು

ಪೊಳೆವ ಕಂಗಳು ನೀಳ ಪೂರ್ಭುಗಳೆಸೆವ

ತಾಪೆರೆನೊಸಲು ಥಳಥಳ ನಾಮವಕ್ಷತಿಯು

ಲಲಿತ ಅರುಣಾಧರದಿ ಮಿನುಗುವ

ಸುಲಿದ ದಂತಸುಪಂಕ್ತಿ ಸೂಸುವ

ಎಳೆನಗೆಯ ಮೊಗದಲ್ಲಿ ಶೋಭಿಪ ಚುಬುಕ ತಾನೊಪ್ಪ//೩//


ಕಂಬುಕಂಠವು ಸಿಂಹಸ್ಕಂದವು

ಕುಂಭಿಕರಸಮ ಬಾಹುಯುಗ್ಮವು

ಅಂಬುಜೋಪಮ ಹಸ್ತಯುಗಳವು ನೀಳಬೆರಳುಗಳು

ಅಂಬುಜಾಂಬಕ ಸದನಹೃದಯದಿ

ಅಂಬುಜಾಕ್ಷೀ ತುಳಸಿ ಮಾಲಾ

ಲಂಬಿತಾಮಲ ಕುಕ್ಷಿವಳಿತ್ರಯ ಗುಂಭಸುಳಿನಾಭೀ//೪//


ತೊಳಪುನಾಮ ಸಮುದ್ರಿಕಾವಳಿ

ಪೊಳೆವೋ ಪೆಣೆಯೊಳಗೂರ್ಧ್ವಪುಂಡ್ರವು

ತಿಲಕದೋಪರಿ ಮಿನುಗೊದಕ್ಷತಿ ರತ್ನ ಮಣಿಯೊಪ್ಪೆ

ಲಲಿತ ಮೇಖಲ ಕೈಪ ಕಟಿತಟ

ಚಲುವ ಊರೂಯುಗಳ ಜಾನೂ

ಜಲಜ ಜಂಘೆಯು ಗುಲ್ಫ ಪದಯುಗ ಬೆರಳು ನಖವಜ್ರ//೫//


ಅರುಣ ಶಾಠಿಯು ಶಿರದಲಿಂದಲಿ

ಚರಣ ಪರಿಯಂತರದಲೊಪ್ಪಿರೆ

ಚರಣಪಾದುಕಯುಗಳ ಪುರದಲಿ ನಿರುತ ಶೋಭಿಪದು

ಕರುಣಪೂರ್ಣ ಕಟಾಕ್ಷದಿಂದಲಿ

ಶರಣಜನರನ ಪೊರೆವೊ ಕಾರಣ

ಕರೆದರಾಕ್ಷಣ ಬರುವನೆಂಬೊ ಬಿರುದು ಪೊತ್ತಿಹನು//೬//


ರಾಯನಮ್ಮೀಜಗಕೆ ಯತಿಕುಲ

ರಾಯನಂ ಕಲ್ಯಾಣಗುಣಗಣ

ಕಾಯನಂ ನಿಸ್ಸೀಮ ಸುಖತತಿದಾಯನೆನಿಸಿರ್ಪ

ರಾಯ ವಾರಿಧಿ ವೃದ್ಧ ಗುಣಗಣ

ರಾಯ ನಿರ್ಮಲಕೀರ್ತಿಜೋತ್ಸ್ನನು

ರಾಯರಾಯನು ಎನಿಸಿ ಶೋಭಿಪನೆಂದು ಕಾಂಬುವೆನು//೭//


ಗಂಗಿಗಾದುದು ಯಮುನೆಸಂಗದಿ

ತುಂಗತರ ಪಾಲ್ಗಡಲಿಗಾದುದು

ರಂಗನಂಗದಿ ನೈಲ್ಯತೋರ್ಪುದು ಸರ್ವಕಾಲದಲಿ

ಸಿಂಗರಾದ ಸುವಾಣಿದೇವಿಗೆ

ಉಂಗರೋರುಸು ಗುರುಳು ಸರ್ವದ

ಮಂಗಳಾಂಗಿಯು ಗೌರಿ ಹರನಿಂ ಕಪ್ಪು ಎನಿಸಿಹಳೋ//೮//


ಮದವು ಏರೋದು ದೇವಗಜಕೆ

ರದನದಲಿ ನಂಜುಂಟು ಫಣಿಗೆ

ಮದವು ಮಹವಿಷ ಕಪ್ಪು ದೋಷವು ಎನಗೆ ಇಲ್ಲೆಂಬ

ಮುದದಿ ಲೋಕತ್ರಯದಿ ತಾನೇ

ಒದಗಿ ದಿನದಿನ ಪೇಳ್ವ ತೆರದಲಿ

ಸದಮಲಾತ್ಮಕರಾದ ರಾಯರ ಕೀರ್ತಿ ಶೋಭಿಪುದು//೯//


ಸರ್ವಸಂಪದ ನೀಡಲೋಸುಗ

ಸರ್ವಧರ್ಮವ ಮಾಡೊಗೋಸುಗ

ಸರ್ವವಿಘ್ನವ ಕಳಿಯೊಗೋಸುಗ ಕಾರ್ಯನೇರ್ವಿಕೆಗೆ

ಸರ್ವಜನರಿಗೆ ಕಾಮಿತಾರ್ಥವ

ಸರ್ವರೀತಿಲಿ ಸಲಿಸೊಗೋಸುಗ

ಊರ್ವಿತಳದೊಳು ತಾನೆ ಬೆಳಗೋದು ಅಮಲ ಗುರುಕೀರ್ತಿ//೧೦//


ಇಂದುಮಂಡಲರೋಚಿಯೋ

ಪಾಲ್ಸಿಂಧುರಾಜನ ವೀಚಿಯೋ ಸುರರಿಂದ್ರ

ನೊಜ್ರ ಮರೀಚಿಯೋ ಸುರತುರಗ ಸದ್ರುಚಿಯೋ

ಕಂದುಗೊರಳನ ಗಿರಿಯೋ ರಾಘವೇಂದ್ರ

ಗುರುಗಳ ಕೀರ್ತಿಪೇಳ್ವಡೆ

ಮಂದಬುದ್ಧಿಗೆ ತೋರದಂದದಿ ಕೀರ್ತಿ ರಾಜಿಪದು//೧೧//


ನಿಟಿಲ ನೇತ್ರನ ತೆರದಿ ಸಿತ

ಸುರತಟಿನಿಯಂದದಿ ಗೌರಗಾತರ

ಸ್ಫಟಿಕಮಣಿಮಯ ಪೀಠದಂದದಿ ಧವಳ ರಾಜಿಪದು

ಮಠದೊಳುತ್ತಮ ಮಧ್ಯಮಂಟಪ

ಸ್ಫುಟಿತಹಾಟಕರತ್ನ ಮುಕುರದ

ಕಟಕಮಯವರ ಪೀಠದಲಿ ಗುರುರಾಯ ಶೋಭಿಸಿದೆ//೧೨//


ಹರಿಯ ತೆರದಲಿ ಲಕ್ಷ್ಮೀನಿಲಯನು

ಹರಣ ತೆರದಲಿ ಜಿತಮನೋಜನು

ಸರಸಿಜೋದರ ತೆರದಿ ಸರ್ವದ ಸೃಷ್ಟಿಕಾರನು

ಮರುತನಂತಾಮೋದಕಾರಿಯು

ಸುರಪನಂತೆ ಸುಧಾಕರನು ತಾ

ಸುರರ ತರುವರದಂತೆ ಕಾಮದ ನೆನಿಪ ಗುರುರಾಯ//೧೩//


ಚಿತ್ತಗತ ಅಭಿಲಾಷದಂದದಿ

ಮತ್ತೆ ಮತ್ತೆ ನವೀನ ತಾ ಘನ

ಉತ್ತಮೋತ್ತಮ ಲಕುಮಿಯಂದದಿ ವಿಭವಕಾಸ್ಪದನೂ

ಮತ್ತೆ ಚಂದ್ರನ ತೆರದಿ ಗುರುವರ

ನಿತ್ಯದಲಿ ಸುಕಳಾದಿನಾಥನು

ಮೃತ್ಯುಯಿಲ್ಲದ ಸ್ವರ್ಗ ತೆರದಲಿ ಸುರಭಿ ಸಂಭ್ರುತನು//೧೪//


ಗಗನದಂದದಿ ಕುಜ ಸುಶೋಭಿತ

ನಿಗಮದಂದದಿ ನಿಶ್ಚಿತಾರ್ಥನು

ರಘುಕುಲೇಶನ ತೆರದಿ ಸರ್ವದ ಸತ್ಯಭಾಷಣನು

ನಗವರೋತ್ತಮನಂತೆ ನಿಶ್ಚಲ

ಗಗನ ನದಿತೆರ ಪಾಪಮೋಚಕ

ಮುಗಿಲಿನಂದದಿ ಚಿತ್ರಚರ್ಯನು ಎನಿಸಿ ತಾ ಮೆರೆವ//೧೫//


ಸರಸಿಜೋದ್ಭವನಂತೆ ಸರ್ವದ

ಸರಸವಿಬುಧರ ಸ್ತೋಮವಂದಿತ

ಸುರವರೇಂದ್ರನ ತೆರದಿ ಸಾಸಿರನಯನಕಾಶ್ರಯನು

ತರುಗಳಾರಿಯ ತೆರದಿ ಸಂತತ

ಸುರಗಣಾನನನೆನಿಪ ಕಾಲನ

ತೆರದಿ ಸಂತತ ಕುಜನರಿಗೆ ತಾಪವನೆ ಕೊಡುತಿಪ್ಪ//೧೬//


ನಿರುತ ನಿರ್ಋತಿಯಂತೆ ಮದ್ಗುರುವರ

ಸದಾ ನವವಿಭವನೆನಿಪನು

ವರುಣನಂದದಿ ಸಿಂಧುರಾಜಿತನಮಿಪ ಬಲಿಯುತನೂ

ಮರುತನಂತೆ ಸ್ವಸತ್ತ್ವಧಾರಿತ

ಪರಮ ಶ್ರೀ ಭೂ ರಮಣಸೇವಕ

ಹರಣ ಮಿತ್ರನ ತೆರದಿ ಮಹಧನಕೋಶ ಸಂಯುತನೂ//೧೭//


ಈಶನಂತೆ ವಿಭೂತಿಧಾರಕ

ಭೇಶನಂತೆ ಕಳಾಸುಪೂರಣ

ಕೀಶನಂತೆ ಜಿತಾಕ್ಷ ನಿರ್ಜಿತಕಾಮ ಸುಪ್ರೇಮಾ

ವ್ಯಾಸನಂತೆ ಪ್ರವೀಣಶಾಸ್ತ್ರ

ದಿನೇಶನಂದದಿ ವಿಗತದೋಷ

ನರೇಶನಂದದಿ ಕಪ್ಪಕಾಣಿಕೆ ನಿರುತ ಕೊಳುತಿಪ್ಪಾ//೧೮//


ವನದತೆರ ಸುರಲೋಕ ತೆರದಲಿ

ಅನವರತ ಸುಮನೋಭಿವಾಸನು

ಇವನ ತೆರದಲಿ ಇಂದು ತೆರದಲಿ ಕಮಲಕಾಶ್ರಯನು

ವನಜನೇತ್ರನ ತೆರದಿ ನಭತೆರ

ಮಿನುಗೊ ಸದ್ವಿಜರಾಜರಂಜಿತ

ಕನಕ ಕವಿತೆಯ ತೆರದಲಂಬುಧಿ ತೆರದಿ ತಾ ಸರಸ//೧೯//


ಇನತೆ ಗುಣಗಳು ನಿನ್ನೊಳಿಪ್ಪವೊ

ಘನಮಹಿಮ ನೀನೊಬ್ಬ ಲೋಕಕೆ

ಕನಸಿಲಾದರು ಕಾಣೆ ಕಾವರ ನಿನ್ನ ಹೊರತಿನ್ನು

ಮನವಚನ ಕಾರ್ಯಗಳ ಪೂರ್ವಕ

ತನುವು ಮನಿ ಮೊದಲಾದುದೆಲ್ಲನು

ನಿನಗೆ ನೀಡಿದೆ ಇದಕೆ ಎನಗನುಮಾನವಿನಿತಿಲ್ಲ//೨೦//


ಹರಿಯು ಭಕುತರ ಪೊರೆದ ತೆರದಲಿ

ಗುರುವೇ ನಿನ್ನಯ ಭಕುತ ಜನರನು

ಧರೆಯ ತಳದಲಿ ಪೊರೆಯೊಗೋಸುಗ ನಿನ್ನವತಾರ

ಕೊರತೆ ಇದಕೇನಿಲ್ಲ ನಿಶ್ಚಯ

ಪರಮಕರುಣಿಯು ನೀನೆ ಎನ್ನನು

ಶಿರದಿ ಕರಗಳನಿಟ್ಟು ಪಾಲಿಸೊ ಭಕುತಪರಿಪಾಲಾ//೨೧//


ಎನ್ನ ಪಾಲಕ ನೀನೆ ಸರ್ವದ

ನಿನ್ನ ಬಾಲಕ ನಾನೇ ಗುರುವರ

ಎನ್ನ ನಿನ್ನೊಳು ನ್ಯಾಯವ್ಯಾತಕೆ ಘನ್ನಗುಣನಿಧಿಯೇ

ಬನ್ನ ಬಡಿಸುವ ಭವದಿ ತೊಳಲುವದನ್ನು

ನೋಡೀ ನೋಡದಂದದಿ

ಇನ್ನು ಕಾಯದಲಿರುವರೇನಾಪನ್ನಪರಿಪಾಲಾ//೨೨//


ನಂಬಿಭಜಿಸುವ ಜನಕೆ ಗುರುವರ

ಇಂಬುಗೊಟ್ಟವರನ್ನು ಕಾಯುವಿ

ಎಂಬೋ ವಾಕ್ಯವು ಎಲ್ಲಿ ಪೋಯಿತೋ ತೋರೋ ನೀನದನು

ಬಿಂಬಮೂರುತಿ ನೀನೆ ವಿಶ್ವ

ಕುಟುಂಬಿ ಎನ್ನನು ಸಲಹೊ ಸಂತತ

ಅಂಬುಜೋಪಮ ನಿನ್ನ ಪದಯುಗ ನಮಿಪೆನನವರತ//೨೩//


ಮಾತೆ ತನ್ನಯ ಬಾಲನಾಡಿದ

ಮಾತಿನಿಂದಲಿ ತಾನು ಸಂತತ

ಪ್ರೀತಳಾಗುವ ತೆರದಿ ಎನ್ನಯ ನುಡಿದ ನುಡಿಯಿಂದ

ತಾತ ನೀನೆ ಎನಗೆ ಸರ್ವದ

ಪ್ರೀತನಾಗುವುದಯ್ಯ ಕಾಮಿತದಾತ

ಗುರುಜಗನ್ನಾಥವಿಠಲ ಲೋಲ ಪರಿಪಾಲ//೨೪//


//ಇತಿ ಶ್ರೀ ರಾಘವೇಂದ್ರ ವಿಜಯ ನವಮ ಸಂಧಿ ಸಮಾಪ್ತಂ//

ರಾಘವೇಂದ್ರ ವಿಜಯ - ಅಷ್ಟಮ ಸಂಧಿ

ಅಷ್ಟಮ ಸಂಧಿ


ರಾಘವೇಂದ್ರರ ವಿಜಯ ಪೇಳುವೆ

ರಾಘವೇಂದ್ರರ ಕರುಣ ಬಲದಲಿ

ರಾಘವೇಂದ್ರರ ಭಕುತರಾದವರಿದನು ಕೇಳುವುದು//


ಶರಣು ಶ್ರೀಗುರುರಾಜ ನಿನ್ನಯ

ಚರಣಕಮಲಕೆ ಮೊರೆಯ ಪೊಕ್ಕೆನೊ

ಕರುಣ ಎನ್ನೊಳಗಿರಿಸಿ ಪಾಲಿಸು ಕರುಣಸಾಗರನೆ

ಕರಣಮಾನಿಗಳಾದ ದಿವಿಜರು

ಶರಣು ಪೊಕ್ಕರು ಪೊರೆಯರೆನ್ನನು

ಕರುಣನಿಧಿ ನೀನೆಂದು ಬೇಡಿದೆ ಶರಣ ವತ್ಸಲನೆ//೧//


ಪಾಹಿ ಪಂಕಜನಯನ ಪಾವನ

ಪಾಹಿ ಗುಣಗಣನಿಲಯ ಶುಭಕರ

ಪಾಹಿ ಪರಮೋದಾರ ಸಜ್ಜನಪಾಲ ಗಂಭೀರ

ಪಾಹಿ ಚಾರುವಿಚಿತ್ರಚರ್ಯನೆ

ಪಾಹಿ ಕರ್ಮಂಧೀಶ ಸರ್ವದ

ಪಾಹಿ ಜ್ಞಾನ ಸುಭಕ್ತಿದಾಯಕ ಪಾಹಿ ಪರಮಾಪ್ತ//೨//


ಏನು ಬೇಡಲು ನಿನ್ನ ಬೇಡುವೆ

ಹೀನಮನುಜರ ಕೇಳಲಾರೆನೋ

ದೀನಜನರುದ್ಧಾರಿ ಈಪ್ಸಿತದಾನಿ ನೀನೆಂದು

ಸಾನುರಾಗದಿ ನಿನ್ನ ನಂಬಿದೆ

ನೀನೆ ಎನ್ನಭಿಮಾನರಕ್ಷಕ

ನಾನಾ ವಿಧವಿಧದಿಂದ ಕ್ಲೇಶಗಳಿನ್ನು ಬರಲೇನು//೩//


ಮುಗಿಲು ಪರಿಮಿತ ಕಲ್ಲುಮುರಿದೂ

ಹೆಗಲ ಶಿರದಲಿ ಬೀಳಲೇನೂ

ಹಗಲಿರುಳು ಏಕಾಗಿ ಬೆಂಕಿಯ ಮಳೆಯು ಬರಲೇನು

ಜಗವನಾಳುವ ಧ್ವರಿಯು ಮುನಿದೂ

ನಿಗಡ ಕಾಲಿಗೆ ಹಾಕಲೇನೂ

ಮಿಗಿಲು ದುಃಖ ತರಂಗ ಥರಥರ ಮೀರಿ ಬರಲೇನು//೪//


ರಾಘವೇಂದ್ರನೆ ನಿನ್ನ ಕರುಣದ

ಮೋಘ ವೀಕ್ಷಣಲೇಶ ಎನ್ನಲಿ

ಯೋಗವಾದುದರಿಂದ ಚಿಂತೆಯು ಯಾತಕೆನಗಿನ್ನು

ಯೋಗಿಕುಲ ಶಿರೋರತ್ನ ನೀನಿರೆ

ಜೋಗಿ ಮಾನವಗಣಗಳಿಂದೆನಗಾಗ್ವ

ಕಾರ್ಯಗಳೇನು ಇಲ್ಲವೋ ನೀನೆ ಸರ್ವಜ್ಞ//೫//


ಅಮರಶಕ್ವರಿ ಮನೆಯೊಳಿರುತಿರೆ

ಶ್ರಮದಿ ಗೋಮಯ ಪುಡುಕಿ ತರುವರೆ

ಅಮಲತರ ಸುರವೃಕ್ಷ ನೀನಿರೆ ತಿಂತ್ರೀಣಿ ಬಯಕೆ?

ಅಮಿತಮಹಿಮೋಪೇತ ನೀನಿರೆ

ಭ್ರಮಿತರಾಗಿಹ ನರರ ಬೇಡೋದಪ್ರಮಿತ

ವಂದಿತ ಪಾದಯುಗಳನೆ ನಿನಗೆ ಸಮ್ಮತವೆ//೬//


ಭೂಪನಂದನೆನಿಸಿ ತಾ

ಕರದೀಪದೆಣ್ಣಿಗೆ ತಿರುಪೆಬೇಡ್ವರೆ

ಆ ಪಯೋನಿಧಿ ತಟದಿ ಸಂತತ ವಾಸವಾಗಿರ್ದು

ಕೂಪಜಲ ತಾ ಬಯಸುವಂದದಿ

ತಾಪ ಮೂರರ ಹಾರಿ ನೀನಿರೆ

ಈಪರೀಪರಿಯಿಂದ ಪರರಿಗೆ ಬೇಡಿಕೊಂಬುವದೆ//೭//


ಬಲ್ಲಿದರಿಗತಿ ಬಲ್ಲಿದನು ನೀನೆಲ್ಲ

ತಿಳಿದವರೊಳಗೆ ತಿಳಿದವನೆಲ್ಲಿ

ಕಾಣೆನೋ ನನಗೆ ಸಮ ಸುರಸಂಘದೊಳಗಿನ್ನು

ಎಲ್ಲಕಾಲದಿ ಪ್ರಾಣಲಕುಮೀನಲ್ಲ

ನಿನ್ನೊಳು ನಿಂತು ಕಾರ್ಯಗಲೆಲ್ಲ

ತಾನೇ ಮಾಡಿ ಕೀರ್ತಿಯ ನಿನಗೆ ಕೊಡುತಿಪ್ಪ//೮//


ಏನು ಪುಣ್ಯವೋ ನಿನ್ನ ವಶದಲಿ

ಶ್ರೀನಿವಾಸನು ಸತತಯಿಪ್ಪನು

ನೀನೆ ಲೋಕತ್ರಯದಿ ಧನ್ಯನು ಮಾನ್ಯ ಸುರರಿಂದ

ದೀನರಾಗಿಹ ಭಕುತ ಜನರಿಗೆ

ನಾನಕಾಮಿತ ನೀಡೊಗೋಸುಗ

ತಾನೇ ಸರ್ವಸ್ಥಳದಿ ನಿಂತು ಕೊಡುವನಖಿಳಾರ್ಥ//೯//


ಕ್ಷಾಂತಿ ಗುಣದಲಿ ಶಿವನತೆರ ಶ್ರೀಕಾಂತ

ಸೇವೆಗೆ ಬೊಮ್ಮ ಪೋಲುವ-

ನಂತರಂಗಗಭೀರತನದಲಿ ಸಿಂಧುಸಮನೆನಿಪದಾಂತ

ಜನರಘಕುಲಕೆ ವರುಣನ

ಕಾಂತೆ ತೆರ ತಾನಿಪ್ಪ ಶಬ್ದದ್ಯ

ನಂತಪೋಲುವನರ್ಥದಲಿ ಗುರು ರಾಜ್ಯದಲಿ ರಾಮ//೧೦//


ಆರುಮೊಗನಮರೇ೦ದ್ರಾಮರು

ಮೂರುಜನ ಸರಿಯಿಲ್ಲ ನಿನಗೇ

ಸಾರಿ ಪೇಳುವೆ ದೋಷಿಗಳು ನಿರ್ದೋಷಿ ನೀನೆಂದು

ಆರುವದನ ವಿಶಾಖನಿಂದ್ರನಿಗೆ

ನೂರು ಕೋಪವು ರಾಮದೇವನು

ಸಾರಧರ್ಮದ ಭಂಗಮಾಡಿದ ದೋಷ ನಿನಗಿಲ್ಲ//೧೧//


ಸಕಲ ಶಾಖಗಳುಂಟು ನಿನಗೇ

ವಿಕಲ ಕೋಪಗಳಿಲ್ಲವೆಂದಿಗು

ನಿಖಿಳ ಧರ್ಮಾಚಾರ್ಯ ಶುಭತಮಚರ್ಯ ಗುರುವರ್ಯ

ಬಕವಿರೋಧಿಯ ಸಖಗೆ ಮುದ್ದಿನ

ಭಕುತವರ ನೀನಾದ ಕಾರಣ

ಲಕುಮಿರಮಣನ ಕರುಣ ನಿನ್ನೊಳು ಪೂರ್ಣವಾಗಿಹದೊ//೧೨//


ಹರಿಯ ತೆರದಲಿ ಬಲವಿಶಿಷ್ಟನು

ಹರನ ತೆರದಲಿ ರಾಜಶೇಖರ

ಸರಸಿಜೋದ್ಭವನಂತೆ ಸಂತತ ಚತುರ ಸದ್ವದನ

ಶರಧಿತೆರದಲನಂತರತ್ನನು

ಸರಸಿರುಹ ಸನ್ಮಿತ್ರನಂದದಿ

ನಿರುತ ನಿರ್ಜಿತದೋಷ ಭಾಸುರಕಾಯ ಗುರುರಾಯ//೧೩//


ಇಂದ್ರ ತೆರದಲಿ ಸುರಭಿರಮ್ಯನು

ಚಂದ್ರ ತೆರದಲಿ ಶ್ರಿತ ಕುವಲಯೋಪೇಂದ್ರ

ತೆರದಲಿ ನಂದಕದಿ ರಾಜಿತನು ಗುರುರಾಜ

ಮಂದ್ರಗಿರಿ ತೆರ ಕೂರ್ಮಪೀಠನು

ವೀಂದ್ರನಂದದಲರುಣಗಾತ್ರನು

ಇಂದಿರೇಶನ ತೆರದಿ ಸಂತತ ಚಕ್ರಧರ ಶೋಭಿಪುದು//೧೪//


ಜಿತತಮನು ತಾನೆನಿಪ ಸರ್ವದ

ರತುನವರ ತಾ ಭುವನ ಮಧ್ಯದಿ

ವಿತತ ಧರಿಗಾಧರ ಸಂತತಪಂಚಮುಖ ಮೂರ್ತಿ

ನತಸುಪಾಲಕ ಕಷ್ಯಪಾತ್ಮಜ

ಪ್ರಥಿತರಾಜಸುತೇಜಹಾರಕ

ಸತತ ದೂಷಣವೈರಿ ಗೋಕುಲಪೋಷ ತಾನೆನಿಪ//೧೫//


ವಿತತಕಾಂತಿಲಿ ಲಸದಿಗಂಬರ

ಪತಿತ ಕಲಿಕೃತ ಪಾಪಹಾರಕ

ಸತತ ಹರಿಯವತಾರ ದಶಕವ ತಾಳಿ ತಾನೆಸೆವ

ಕೃತಿಯ ರಮಣನ ಕರುಣ ಬಲದಲಿ

ನತಿಪಜನಕಖಿಳಾರ್ಥ ನೀಡುವ

ಮತಿಮತಾಂವರನೆನಿಸಿ ಲೋಕದಿ ಖ್ಯಾತನಾಗಿಪ್ಪ//೧೬//


ವರ ವಿಭೂತಿಯ ಧರಿಸಿ ಮೆರೆವನು

ಹರನು ತಾನೇನಲ್ಲ ಸರ್ವದ

ಹರಿನಿವಾಸನು ಎನಿಸಲಾ ಪಾಲ್ಗಡಲು ತಾನಲ್ಲ

ಸುರಭಿ ಸಂಯುತನಾಗಿ ಇರಲೂ

ಮಿರುಪುಗೋಕುಲವಲ್ಲ ತಾನೂ

ಸುರರ ಸಂತತಿ ಸಂತತಿರಲೂ ಸ್ವರ್ಗತಾನಲ್ಲ//೧೭//


ತುರಗ ಕರಿ ರಥನಾರಾ ಸಮೇತನು

ನರವರೇಶನ ದಳವುಯೆನಿಸನು

ನಿರುತ ಪರಿಮಳ ಸೇವಿಯಾದರು ಭ್ರಮರ ತಾನಲ್ಲ

ಕರದಿ ದಂಡವ ಪಿಡಿದುಯಿರುವನು

ನಿರಯಪತಿ ತಾನಲ್ಲವೆಂದಿಗು

ಸುರರಿಗಸದಳವೆನಿಪೋದಿತನ ಚರ್ಯವಾಶ್ಚರ್ಯ//೧೮//


ಕರದಿ ಪಿಡಿದಿಹ ಗುರುವರೇಣ್ಯನು

ಶರಣ ಜನರಭೀಷ್ಠಫಲಗಳ

ತ್ವರದಿ ಸಲಿಸುತಲವರ ಭಾರವ ತಾನೇ ಪೊತ್ತಿಹನು

ಮರೆಯಬೇಡವೋ ಕರುಣನಿಧಿಯನು

ಸ್ಮರಣೆ ಮಾಡಲು ಬಂದು ನಿಲ್ಲುವ

ಪರಮ ಪಾವನರೂಪ ತೋರಿಸಿ ತಾನೆ ಕಾಯ್ದಿಹನೂ//೧೯//


ಅತಸಿ ಪೂ ನಿಭಗಾತ್ರ ಸರ್ವದ

ಸ್ಮಿತಸುನೀರಜನೇತ್ರ ಮಂಗಳ

ಸ್ಮಿತಯುತಾಂಬುಜವದನ ಶುಭತಮರದನ ಜಿತಮದನ

ಅತುಲ ತುಳಸಿಯ ಮಾಲಕಂಧರ

ನತಿಪ ಜನತತಿಲೋಲ ಕಾಮದ

ಪತಿತ ಪಾವನ ಚರಣ ಶರಣಾಂಭರಣ ಗುರುಕರುಣಾ//೨೦//


ಚಂದ್ರಮಂಡಲವದನ ನಗೆ

ನವಚಂದ್ರಿಕೆಯತೆರ ಮೆರೆಯೋ ಮೇಣ್ಘನ

ಚಂದ್ರತಿಲಕದ ರಾಗ ಮನದನುರಾಗ ಸೂಚಿಪದೂ

ಇಂದ್ರನೀಲದ ಮಣಿಯ ಮೀರುವ

ಸಾಂದ್ರದೇಹದ ಕಾಂತಿ ಜನನಯನೇಂದ್ರಿಯದ್ವಯ

ಘಟಿತ ಪಾತಕ ತರಿದು ರಕ್ಷಿಪುದು//೨೧//


ಶರಣಜನ ಪಾಪೌಘನಾಶನ

ಶರಣ ನೀರಜ ಸೂರ್ಯಸನ್ನಿಭ

ಶರಣ ಕುವಲಯಚಂದ್ರ ಸದ್ಗುಣಸಾಂದ್ರ ರಾಜೇಂದ್ರ

ಶರಣಸಂಘಚಕೋರ ಚಂದ್ರಿಕ

ಶರಣಜನ ಮಂದಾರ ಶಾಶ್ವತ

ಶರಣಪಾಲಕ ಚರಣಯುಗವಾಶ್ರಯಿಸಿ ಬಾಳುವೆನೊ//೨೨//


ಪಾತಕಾದ್ರಿಗೆ ಕುಲಿಶನೆನಿಸುವ

ಪಾತಕಾಂಬುಧಿ ಕುಂಭಸಂಭವ

ಪಾತಕಾವಳಿ ವ್ಯಾಳವೀಂದ್ರನು ದುರಿತಗಜಸಿಂಹ

ಪಾತಕಾಭಿಧತಿಮಿರಸೂರ್ಯನು

ಪಾತಕಾಂಬುದವಾತ ಗುರು

ಜಗನ್ನಾಥವಿಠಲಗೆ ಪ್ರೀತಿಪುತ್ರನು ನೀನೆ ಮಹಾರಾಯ//


//ಇತಿ ಶ್ರೀ ರಾಘವೇಂದ್ರ ವಿಜಯ ಅಷ್ಟಮ ಸಂಧಿ ಸಮಾಪ್ತಂ//

Friday, March 15, 2013

ರಾಘವೇಂದ್ರ ವಿಜಯ - ಸಪ್ತಮ ಸಂಧಿ

ಸಪ್ತಮ ಸಂಧಿ


ರಾಘವೇಂದ್ರರ ವಿಜಯ ಪೇಳುವೆ

ರಾಘವೇಂದ್ರರ ಕರುಣ ಬಲದಲಿ

ರಾಘವೇಂದ್ರರ ಭಕುತರಾದವರಿದನು ಕೇಳುವುದು//


ಜಯಜಯತು ಗುರುರಾಯ ಶುಭಕರ

ಜಯಜಯತು ಕವಿಗೇಯ ಸುಂದರ

ಜಯಜಯತು ಘನ ಬೋಧ ಗುಣಗಣಪೂರ್ಣ ಗಂಭೀರ

ಜಯಜಯತು ಭಕ್ತಾಲಿಪಾಲಕ

ಜಯಜಯತು ಭಕ್ತೇಷ್ಟದಾಯಕ

ಜಯಜಯತು ಗುರುರಾಘವೇಂದ್ರನೆ ಪಾಹಿ ಮಾಂ ಸತತ//೧//


ಆದಿಯಲಿ ಪ್ರಹ್ಲಾದ ನಾಮಕನಾದ

ತ್ರೇತಾಯುಗದಿ ಲಕ್ಷ್ಮಣನಾದ

ದ್ವಾಪರಯುಗದಿ ಬಲ ಬಾಹ್ಲೀಕ ನಾಮದಲಿ

ಯಾದವೇಶನ ಭಜಿಸಿ ಕಲಿಯುಗ

ಪಾದದೊಳು ತಾ ಎರಡು ಜನ್ಮವ

ಸಾದರದಿ ತಾ ಧರಿಸಿ ಮೆರೆದನು ದೇವಗುರುರಾಯ//೨//


ಸಾರ ಸುಂದರಕಾಯ ಸುಗಣೋದಾರ

ಶುಭತಮ ಸ್ವೀಯ ಮಹಿಮಾಪಾರ

ಕವಿನುತ ಖ್ಯಾತ ನಿರ್ಜಿತದೋಷ ಹರಿತೋಷ

ಧಾರುಣೀಸುರ ಕುಮುದಚಂದಿರ

ಘೋರಪಾತಕತಿಮಿರ ದಿನಕರ

ಧೀರ ಮಧ್ವಮತಾಬ್ಜಭಾಸ್ಕರನೆನಿಸಿ ರಾಜಿಪನು//೩//


ಸೂರಿಜನಹೃದಯಾಬ್ಜಮಂದಿರ

ಹೀರಹಾರ ವಿಭೂಷಿತಾ೦ಗನು

ಚಾರು ರತ್ನ ಕಿರೀಟಕುಂಡಲ ರತ್ನಮಾಲೆಗಳ

ವಾರಿಜಾಕ್ಷೀ ಮಣಿಯು ತುಳಸೀ

ಸರಮಾಲೆಯ ಧರಿಸಿ ಯತಿವರ

ತೋರುತಿಪ್ಪನು ಬಾಲಸೂರ್ಯನ ತೆರದಿ ಲೋಕದಲಿ//೪//


ಚಾರುತರ ಕೌಪೀನ ಪಾದುಕಧಾರಿ

ದಂಡ ಕಮಂಡುಲಾಂಚಿತ

ಸಾರ ದ್ವಾದಶ ಪುಂಡ್ರ ಮುದ್ರೆಗಳಿಂದ ಚಿಹ್ನಿತನು

ಸಾರಿದವರಘ ತರಿದು ಸುಖಫಲ

ಸೂರಿ ಕೊಡುತಲಿ ಸರ್ವಕಾಲದಿ

ಧಾರುಣೀ ತಳದಲ್ಲಿ ಈಪರಿ ಮೆರೆದ ಗುರುರಾಯ//೫//


ಮತಿಮತಾಂವರ ರಾಘವೇಂದ್ರನು

ಮಿತಿಯು ಇಲ್ಲದೆ ಮಹಿಮೆ ಜನರಿಗೆ

ಸತತ ತೋರುತ ಪೊರೆಯುತಿರುವನು ಸಕಲ ಸಜ್ಜನರ

ಸತಿ ಸುತಾದಿ ಸುಭಾಗ್ಯ ಸಂಪದ

ಮತಿಯು ಜ್ಞಾನ ಸುಭಕ್ತಿ ದಿನದಿನ

ವಿತತವಾಗಿತ್ತಖಿಲ ಜನರನು ಪ್ರೀತಿಗೊಳಿಸುತಲಿ//೬//


ಸುರರ ನದಿಯಂದದಲಿ ಪಾಪವ

ತರಿವ ನರ್ಕನ ತೆರದಿ ಕತ್ತಲೆ

ಶರಧಿತನಯನ ತೆರದಿ ಶಾಪವ ಕಳೆದು ಸುಖವೀವ

ಸರಿಯುಗಾಣೆನು ಇವರ ಚರ್ಯಕೆ

ಹರಿಯು ತಾನೇ ಸಿರಿಯ ಸಹಿತದಿ

ಇರುವ ತಾನಾನಂದಮುನಿವರ ಸಕಲ ಸುರಸಹಿತ//೭//


ಇನಿತೆ ಮೊದಲಾದಮಿತ ಗುಣಗಣವನಧಿ

ಎನಿಸುತಲವನಿತಳದಲಿ

ಅನುಪಮೋಪವ ತಾನೇ ತನ್ನನು ನಂಬಿ ಭಜಿಪರಿಗೆ

ಕನಸಿಲಾದರು ಶ್ರಮವ ತೋರದೆ

ಮನದ ಬಯಕೆಯ ಸಲಿಸಿ ಕಾಯುವ

ತನುಸುಛಾಯದ ತೆರದಿ ತಿರುಗುವ ತನ್ನ ಜನರೊಡನೆ//೮//


ಏನು ಕರುಣಿಯೋ ಏನು ದಾತನೊ

ಏನು ಮಹಿಮೆಯೋ ಏನು ಶಕುತಿಯೋ

ಏನು ಇವರಲಿ ಹರಿಯ ಕರುಣವೋ ಏನು ತಪಬಲವೋ

ಏನು ಕೀರ್ತಿಯೋ ಜಗದಿ ಮೆರೆವದು

ಏನು ಪುಣ್ಯದ ಫಲವೋ ಇವರನ

ಏನು ವರ್ಣಿಪೆ ಇವರ ಚರಿಯವನಾದ ಬಲ್ಲವನು//೯//


ಧರಣಿ ತಳದಲಿ ಮೆರೆವ ಗುರುವರ

ಚರಿಯ ತಿಳಿಯಲು ಸುರರೆ ಯೋಗ್ಯರು

ಅರಿಯರೆಂದಿಗು ನರರು ದುರುಳರು ಪರಮ ಮೋಹಿತರು

ಮರುಳುಮಯ ಭವದಾಶಪಾಶದ

ಉರುಳುಗಣ್ಣಿಗೆ ಶಿಲ್ಕಿ ಹಗಲೂ

ಇರುಳುಯನದಲೆ ಏಕಾವಾಗೀ ತೊಳಲಿ ಬಳಲುವರು//೧೦//


ಕರುಣವಾರಿಧಿ ಶರಣಪಾಲಕ

ತರುಣದಿನಕರನೆನಿಪ ಗುರುವರ

ಚರಣ ಸೇವಕಜನರ ಪಾಲಿಪ ಜನನಿ ತೆರದಂತೆ

ಸುರರ ತರುವರದಂತೆ ಸಂತತ

ಪೊರೆದು ತನ್ನಯ ಭಕುತ ಜನರನು

ಧರಣಿಮಂಡಲದೊಳಗೆ ರಾಜಿಪ ನತಿಪ ಜನಭೂಪಾ//೧೧//


ಏನು ಚೋದ್ಯವೋ ಕಲಿಯ ಯುಗದಲಿ

ಏನು ಈತನ ಪುಣ್ಯ ಬಲವೋ

ಏನು ಈತನ ವಶದಿ ಶ್ರೀಹರಿ ತಾನೇ ನಿಂತಿಹನೋ

ಏನು ಕರುಣಾನಿಧಿಯೋ ಈತನು

ಏನು ಭಕುತರಿಗಭಯದಾಯಕ

ಏನು ಈತನ ಮಹಿಮೆ ಲೋಕಗಮ್ಯವೆನಿಸಿಹದೋ//೧೨//


ವಿಧಿಯು ಬರದಿಹ ಲಿಪಿಯ ಕಾರ್ಯವ

ಬದಲು ಮಾಡುವ ಶಕುತಿ ನಿನಗೆ

ಪದುಮನಾಭನು ದಯದಿ ತಾನೇಯಿತ್ತ ಕಾರಣದಿ

ಸದಯ ನಿನ್ನಯ ಪಾದಪದುಮವ

ಹೃದಯ ಮಧ್ಯದಿ ಭಜಿಪ ಶಕುತಿಯ

ಒದಗಿಸೂವದುಯೆಂದು ನಿನ್ನನು ನಮಿಸಿ ಬೇಡುವೆನು//೧೩//


ಘಟನವಾಗದ ಕಾರ್ಯಗಳ ನೀ

ಘಟನಮಾಡುವ ವಿಷಯದಲಿ ನೀ

ಧಿಟನುಯೆನುತಲಿ ಬೇಡಿಕೊಂಬೆನೊ ಕರುಣವಾರಿಧಿಯೇ

ಶಠದಿ ನಿನ್ನನು ಭಜಿಸದಿಪ್ಪರ

ಶಠವ ಕಳೆದತಿಹಿತದಿ ನಿನ್ನಯ

ಭಠರ ಕೋಟಿಗೆ ಘಟನ ಮಾಡುವುದೇನು ಅಚ್ಚರವೋ//೧೪//


ನಿನ್ನ ಕರುಣಕೆ ಎಣಿಯಗಾಣೆನೋ

ನಿನ್ನ ಶಕುತಿಗೆ ನಮನ ಮಾಡುವೆ

ನಿನ್ನ ಕರುಣಕಟಾಕ್ಷದಿಂದಲಿ ನೋಡೋ ಗುರುರಾಯ

ನಿನ್ನ ಪದಯುಗದಲ್ಲಿ ಸರ್ವದ

ನಿನ್ನ ಮನವನು ನಿಲಿಸಿ ಪಾಲಿಸೊ

ನಿನ್ನ ಜನ್ಮನು ನಾನು ಎನ್ನಯ ಜನಕ ನೀನಲ್ಲೆ//೧೫//


ಹಿಂದೆ ಮಾಡಿದ ನಿನ್ನ ಮಹಿಮೆಗಳೊ೦ದು

ತಿಳಿಯದು ಪೇಳೋ ಶಕುತಿಯು

ಎಂದಿಗಾದರೂ ಪುಟ್ಟಲಾರದು ಮನುಜರಾಧಮಗೇ

ಇಂದು ಮಹಿಮವ ತೋರಿ ಭಕುತರ

ವೃಂದ ಮೋದದಿ ಪಾಡಿ ಕುಣಿವದು

ನಂದಸಾಗರಮಗ್ನವಾದುದ ನೋಡಿ ಸುಖಿಸುವೆನು//೧೬//


ವ್ಯಾಸಮುನಿ ಗುರುವರ್ಯ ಎನ್ನಯ

ಕ್ಲೇಶ ನಾಶನ ಮಾಡಿ ಕರುಣದಿ

ವಾಸುದೇವನ ಹೃದಯಸದನದಿ ತೋರಿ ಪೊರೆಯಂದೇ

ವಾಸವಾಸರದಲ್ಲಿ ತವಪದ

ಆಶೆಯಿಂದಲಿ ಸೇವಾ ಮಾಳ್ಪೆನು

ದಾಸನೆನಿಸೀ ಭವದ ಶ್ರಮ ಪರಿಹರಿಸೋ ಗುರುರಾಯ//೧೭//


ತತ್ತ್ವಸಾರವ ತಿಳಿಸು ಭವದಿ

ವಿರಕ್ತಮತಿಯನಿತ್ತು ತ್ವತ್ಪದ

ಸಕ್ತಚಿತ್ತನ ಮಾಡಿ ಭಗವದ್ಭಕ್ತನೆಂದೆನಿಸು

ಕೆತ್ತವೋಲ್ ಮನ್ಮನದಿ ಇರುತಿಹ

ಕತ್ತಲೆಯ ಪರಿಹರಿಸಿ ದಿನದಿನ

ಉತ್ತಮೋತ್ತಮ ಜ್ಞಾನಭಕುತಿಯನಿತ್ತು ಪೊರೆಯೆನ್ನ//೧೮//


ಪ್ರಣತಜನಮಂದಾರ ಕಾಮದ

ಕ್ಷಣ ಕ್ಷಣಕ್ಕೆ ನಿನ್ನ ಗುಣಗಳ

ಗಣನಪೂರ್ವಕ ಮನದಿ ಸಂತತ ಭಜನೆಗೈವಂತೆ

ಮಣಿಸು ಮನವನು ನಿನ್ನ ಪದದಲಿ

ಗುಣಿಸಿ ನಿನ್ನಯ ರೂಪ ನೋಡೀ

ದಣಿಸು ನಿನ್ನವರೊಳಗೆ ಸಂತತ ಎಣಿಸೋ ಕರುಣಾಳೋ//೧೯//


ನಿನ್ನ ಕಥೆಗಳ ಶ್ರವಣಮಾಡಿಸೋ

ನಿನ್ನ ಗುಣಕೀರ್ತನೆಯ ಮಾಡಿಸೋ

ನಿನ್ನ ಸ್ಮರಣೆಯ ನೀಡು ಸಂತತ ನಿನ್ನ ಪದಸೇವಾ

ನಿನ್ನ ಅರ್ಚನೆಗೈಸೊ ಗುರುವರ

ನಿನ್ನ ವಂದನೆಗೈಸೋ ದಾಸ್ಯವ

ನಿನ್ನ ಗೆಳೆತನ ನೀಡೋ ಯತಿವರ ಎನ್ನನರ್ಪಿಸುವೇ//೨೦//


ಅಮಿತ ಮಹಿಮನೆ ನಿನ್ನ ಪಾದಕೆ

ನಮಿಪೆ ಮತ್ಕೃತದೋಷವೆಣಿಸದೆ

ಕ್ಷಮಿಸಿ ಸೌಖ್ಯವನಿತ್ತು ಪಾಲಿಸೊ ಸುಮನಸೋತ್ತಮನೆ

ಅಮರರಿಯರಗಮ್ಯಮಹಿಮವ

ವಿಮಲಗುಣಮಯ ಪ್ರಬಲತಮ

ನೀನಮರತರು ಚಿಂತಾಮಣಿಯು ಸುರಧೇನು ನೀನಯ್ಯಾ//೨೧//


ಶಿರದಿ ನಮನವ ಮಾಡಿ ನಿನ್ನನು

ಕರದ ಸಂಪುಟವಮಾಡಿ ವಿನಯದಿ

ಮರೆಯದಲೇ ನಾ ಬೇಡಿಕೊಂಬೆನೊ ಶರಣಪರಿಪಾಲ

ಪರಮಕರುಣಿಯೇ ದ್ವಿಜಗೆ ಬಂದಿಹ

ಮರಣ ಬಿಡಿಸೀ ಸುಖವ ನೀಡಿದೆ

ಅರಿಯಲೆಂದಿಗು ಸಾಧ್ಯವಲ್ಲವೋ ನಿನ್ನ ಮಹಮಹಿಮೆ//೨೨//


ಸಕಲಗುಣಗಣಪೂರ್ಣ ಭಕುತಗೆ

ಅಖಿಳಕಾಮಿತದಾತ ಸುಖಮಯ

ವಿಖನಸಾಂಡದಿ ಪ್ರಬಲತಮ ನೀನೆನಿಸಿ ನೆಲಿಸಿರ್ಪೆ

ಲಕುಮಿರಮಣನ ಪ್ರೀತಿಪಾತ್ರನೆ

ಭಕುತಕೈರವಸ್ತೋಮ ಚಂದಿರ

ಮುಕುತಿದಾಯಕ ಮೌನಿಕುಲಮಣಿ ನಮಿಪೆ ಸಲಹೆನ್ನಾ//೨೩//


ಸ್ವಸ್ತಿಶ್ರೀ ಗುರುರಾಘವೇಂದ್ರಗೆ

ಸ್ವಸ್ತಿಶ್ರೀ ಗುಣಗಣಸಾಂದ್ರಮೂರ್ತಿಗೆ

ಸ್ವಸ್ತಿಶ್ರೀ ಯತಿನಾಥ ಲೋಕದಿ ಖ್ಯಾತ ಮಮನಾಥ

ಸ್ವಸ್ತಿಶ್ರೀ ಗುರುಸಾರ್ವಭೌಮಗೆ

ಸ್ವಸ್ತಿಶ್ರೀ ಸರ್ವಜ್ಞತಮಗೇ

ಸ್ವಸ್ತಿಶ್ರೀ ಸುರಧೇನು ಸುರತರು ನಮಿಪ ಭಕುತರಿಗೆ//೨೪//


ಖ್ಯಾತನಾದವನು ಸಕಲಲೋಕಕ-

ನಾಥಪಾಲಕನೆಂಬೊ ಬಿರುದನು

ಈತ ಸಂತತ ಪೊತ್ತು ಮೆರೆವನು ಹರಿಯ ಕರುಣದಲಿ

ಈತನೇ ಮಹದಾತ ಜಗದೊಳು

ಖ್ಯಾತ ಮಹಿಮನು ಶರಣವತ್ಸಲದಾತ

ಗುರುಜಗನ್ನಾಥವಿಠಲನ ಸೇವಕಾಗ್ರಣಿಯೂ//೨೫//


//ಇತಿ ಶ್ರೀ ರಾಘವೇಂದ್ರ ವಿಜಯ ಸಪ್ತಮ ಸಂಧಿ ಸಮಾಪ್ತಂ//


Thursday, March 14, 2013

ರಾಘವೇಂದ್ರ ವಿಜಯ - ಷಷ್ಟಮ ಸಂಧಿ

ಷಷ್ಟಮ ಸಂಧಿ



ರಾಘವೇಂದ್ರರ ವಿಜಯ ಪೇಳುವೆ

ರಾಘವೇಂದ್ರರ ಕರುಣ ಬಲದಲಿ

ರಾಘವೇಂದ್ರರ ಭಕುತರಾದವರಿದನು ಕೇಳುವುದು//



ನತಿಪಜನತತಿಗಮರಪಾದಪ

ನುತಿಪಜನರಸುರಧೇನು ಕಾಮಿತ

ಸತತ ನೀಡುತ ಧರಣಿಸುರವರನಿಕರ ಪರಿಪಾಲ

ಪ್ರತಿಯುಕಾಣೆನೋ ವ್ರತಿಗಳರಸನೆ

ನತಿಪೆ ತವಪದಕಮಲಯುಗ್ಮಕೆ

ತುತಿಪೆ ಎನ್ನನು ಪೊರೆಯೋ ಗುರುವರ ಪತಿತಪಾವನನೆ//೧//



ಆವ ಪಂಪಾಕ್ಷೇತ್ರದಲಿ ಹರಿ

ಶೇವಕಾಗ್ರಣಿ ವ್ಯಾಸಮುನಿಯೂ

ಕಾವನಯ್ಯನ ಸತತ ಭಜಿಸುತ ವಾಸಮಾಡಿರಲು

ದೇವವರ್ಯರೆ ಒಂದುರೂಪದಿ

ತಾವೇ ಭೂತಳದಲ್ಲಿ ಜನಿಸುತ

ಕೋವಿದಾಗ್ರೇಸರರು ಎನಿಸೀ ಮೆರೆದರಾ ಸ್ಥಳದಿ//೨//



ನಾರದರೆ ತಾ ಶ್ರೀಪುರಂದರ

ಸೂರಿತನಯನೆ ಕನಕ ತಾ

ಜಂಭಾರಿಯೇ ವೈಕುಂಠದಾಸರು ವ್ಯಾಸ ಪ್ರಹ್ಲಾದ

ಈರು ಎರಡೀ ಜನರು ಸರ್ವದ

ಮಾರನಯ್ಯನ ಪ್ರೇಮಪಾತ್ರರು

ಸೇರಿ ಇರುವುದರಿಂದೆ ಪಂಪಾ ನಾಕಕಿನ್ನಧಿಕ//೩//



ವ್ಯಾಸರಾಯರ ಮಠದ ಮಧ್ಯದಿ

ವಾಸಮಾಡಲು ಸಕಲ ದ್ವಿಜರೂ

ದಾಸರಾಗಿಹ ಸರ್ವರಿಂದಲಿ ಸಭೆಯು ಶೋಭಿಸಿತು

ವಾಸವನ ಶುಭಸಭೆಯೋ ಮೇಣ್ಕಮಲಾಸನನ

ಸಿರಿವೈಜಯಂತಿಯೋ

ಭಾಷಿಸುವರಿಗೆ ತೋರದಂದದಿ ಸಭೆಯು ತಾನೊಪ್ಪೆ//೪//



ಪಂಪಕ್ಷೇತ್ರವು ದಾಸವರ್ಯರ

ಗುಂಪಿನಿಂದ ಸಮೇತವಾಗಿ

ಶಂಫಲಾಪುರದಂತೆ ತೋರ್ಪದು ಸುಜನಮಂಡಲಕೆ

ತಂಪುತುಂಗಾನದಿಯವನ ತಾ

ಸೊಂಪಿನಿಂದಲಿ ಸರ್ವಜನಮನ

ಕಿಂಪುಗಾಣಿಸಿ ಸರ್ವಸಂಪದದಿಂದ ಶೋಭಿಪುದು//೫//



ಒಂದುದಿನದಲಿ ವ್ಯಾಸಮುನಿಯು

ಪುರಂದರಾರ್ಯರು ಒಂದುಗೂಡಿ

ಬಂದುಸೇರ್ದರು ಸುಖವನುಣಲೂ ವಿಜಯವಿಠಲನ್ನ

ಮಂದಿರಕೆ ಬಲಸಾರೆಯಿರುತಿಹದೊಂದು

ಸುಂದರಪುಲಿನಮಧ್ಯದಿ

ಅಂದು ಹರಿಯಪರೋಕ್ಷವಾರಿಧಿಯೊಳಗೆ ಮುಳುಗಿದರು//೬//



ಬಂದನಲ್ಲಿಗೆ ಕುರುಬನೊಬ್ಬನು

ತಂದ ಕುರಿಗಳ ಬಿಟ್ಟುದೂರದಿ

ನಿಂದು ನೋಡಿದ ಇವರ ಚರ್ಯವ ಕನಕನಿಲ್ಲದಲೆ

ಮಂದಹಾಸವು ಕೆಲವುಕಾಲದಿ

ಮಂದರಾಗೊರು ಕೆಲವುಕಾಲದಿ

ಪೊಂದಿಯಿಬ್ಬರು ಅಪ್ಪಿಕೊಂಡೋ ಮುದದಿ ರೋದಿಪರೋ//೭//



ಬಿದ್ದು ಪುಲಿನದಿ ಪೊರಳಿ ಹೊರಳೊರು

ಎದ್ದು ಕುಣಿಕುಣಿದಾಡಿ ಚೀರೊರು

ಮುದ್ದು ಕೃಷ್ಣನ ತೋರಿತೋರುತ ತಾವು ಪಾಡುವರೋ

ಶಿದ್ಧಸಾಧನ ಕನಕ ಸಮಯಕೆ

ಇದ್ದರಿಲ್ಲೀ ಲಾಭವಾಗೊದು

ಇದ್ದಸ್ಥಾನಕ್ಕೆ ಪೋಗಿ ಆತನ ಕರಿವೊರಾರಿಲ್ಲಾ//೮//



ಸುದ್ದಿ ಕೇಳುತ ನಿಂತ ಕುರುಬನು

ಎದ್ದು ಕನಕನ ಕರೆದು ತೋರುವೆ

ಇದ್ದ ಸ್ಥಳವನು ಪೇಳಿರೆಂದಾ ಮುನಿಗೆ ಬೆಸಗೊಂಡಾ

ಎದ್ದು ನಡದಾನದಿಯ ತೀರದಲಿದ್ದ

ಕನಕನ ಬೇಗ ಕರೆದೂ

ತಂದು ತೋರುತ ವ್ಯಾಸಮುನಿಗೆ ಬಿದ್ದು ಬೇಡಿದನು//೯//



ದಾರಿ ಮಧ್ಯದಿ ತನಗೆ ಕನಕನು

ತೋರಿ ಪೇಳಿದ ತೆರದಿ ಕುರುಬನು

ಸಾರೆಗರೆದೂ ಬೇಡಿಕೊಂಡನು ಲಾಭ ಕೂಡಿರೆಂದು

ಧೀರಮುನಿವರ ದಾಸವರರೆ

ವಿಚಾರಮಾಡಿರಿ ಏನು ನೀಡಲಿ

ತೋರವಲ್ಲದು ಪರಿಯ ನೀವೇ ಪೇಳಿರೆಮಗೆಂದ//೧೦//



ಕನಕ ಪೇಳಿದ ಕೊಟ್ಟವಚನವು

ಮನದಿ ಯೋಚಿಸಿ ಕೊಡುವದವಗೆ

ಅನುಜನಾತನು ನಿಮಗೆ ತಿಳಿವದು ಚಿಂತೆಯಾಕದಕೆ

ಎನಲು ಮುನಿವರ ಮನದಿ ತಿಳಿದೂ

ಜನಿತವಾದಾನಂದಲಾಭವ

ಮನಸುಪೂರ್ವಕಯಿತ್ತು ಕರುಣವ ಮಾಡಿ ತಾ ಪೊರೆದ//೧೧//



ಜ್ಞಾನಿಗಳು ತಾವಂಗಿಕರಿಸಲು

ಹೀನಕೆಲಸಗಳಾದ ಕಾಲಕು

ಏನು ಶ್ರಮವದರಿಂದ ಬಂದರು ಬಿಡದೆ ಪಾಲಿಪರು

ಸಾನುರಾಗದಿ ಸಕಲಜನರಭಿ-

ಮಾನಪೂರ್ವಕ ಪೊರೆದು ಭಕ್ತಿ-

ಜ್ಞಾನವಿತ್ತೂ ಹರಿಯ ಲೋಕದಿ ಸುಖವ ಬಡಿಸುವರು//೧೨//



ತೀರ್ಥಸ್ನಾನವ ಮಾಡಿ ತಾವಾ

ತೀರ್ಥಶುದ್ಧಿಯ ಮಾಡೊರಲ್ಲದೆ

ತೀರ್ಥಸ್ನಾನಗಳಿಂದಲವರಿಗೆ ಏನು ಫಲವಿಲ್ಲಾ

ಪಾರ್ಥಸಾರಥಿಪಾದ ಮನದಲಿ

ಸ್ವಾರ್ಥವಿಲ್ಲದೆ ಭಜನೆಗೈದು

ಕ್ರುತಾರ್ಥರಾಗೀ ಜಗದಿ ಚರಿಪರು ಸತತ ನಿರ್ಭಯದಿ//೧೩//



ಬುಧರ ದರುಶನದಿಂದ ಪಾತಕ

ಸದದು ಭಾಷಣದಿಂದ ಮುಕುತಿಯ

ಪದದ ದಾರಿಯ ತೋರಿ ಕೊಡುವರು ಸದನದೊಳಗಿರಲು

ಒದಗಿಸುವರು ಭಾಗ್ಯ ಜನರಿಗೆ

ಮದವು ಏರಿದ ಗಜದ ತೆರದಲಿ

ಪದುಮನಾಭನ ದಾಸರವರಿಗಸಾಧ್ಯವೇನಿಹುದೋ//೧೪//



ಯತಿಕುಲೋತ್ತಮ ವ್ಯಾಸರಾಯರ

ಮಿತಿಯುಯಿಲ್ಲದ ಮಹಿಮೆಯಿಂದಲಿ

ಪತಿತಪಾಮರರೆಲ್ಲ ಉಧೃತರಾದುದೇನರಿದು

ಸತತ ಬಿಂಬೋಪಾಸನೋಚ್ಚ್ರಿತ

ವಿತತಜ್ಞಾನದ ವಿಭವದಿಂದಲಿ

ಪ್ರತಿಯುಯಿಲ್ಲದೆ ತಾನು ರಾಜಿಪ ಸೂರ್ಯನಂದದಲಿ//೧೫//



ಮೋದತೀರ್ಥರ ಶಾಸ್ತ್ರಜಲಧಿಗೆ

ಮೋದದಾಯಕ ಸೋಮನೋ

ಪರವಾದಿವಾರಿಜಹಂಸ ಚಂದಿರ ಸ್ವಮತ ಸತ್ಕುಮುದಕಾದ

ತಾ ನಿಜ ಸುಜನ ಕೈರವ

ಬೋಧಕರ ತಾ ಚಂದ್ರಮಂಡಲ

ಪಾದಸೇವಕರೆನಿಪ ಸುಜನ ಚಕೋರ ಚಂದ್ರಮನೋ//೧೬//



ಹರಿಯರೂಪ ಸಮಾದಿಯೋಗದಿ

ನಿರುತಕಾಣುತಲಿಪ್ಪ ಗುರುವರ

ಹೊರಗೆ ಕಾಣುವನೆಂಬ ಕಾರಣ ಕನಕಗಿನಿತೆಂದಾ

ಚರನ ತೆರದಲಿ ನಿನ್ನ ಸಂಗಡ

ತಿರುಗುತಿಪ್ಪನು ಸರ್ವಕಾಳದಿ

ಸಿರಿಯರಮಣನ ಎನಗೆ ತೋರಿಸು ಮರಿಯ ಬೇಡೆ೦ಡಾ//೧೭//



ಅಂದ ಮುನಿವರ ವಚನ ಮನಸಿಗೆ

ತಂದು ಕನಕನು ಹರಿಗೆ ಪೇಳಿದ

ಒಂದು ಕಾಲದಿ ಮುನಿಗೆ ದರುಶನ ನೀಡು ಜಗದೀಶಾ

ಇಂದಿರಾಪತಿ ಕೇಳಿ ವಚನವ

ಮಂದಹಾಸವ ಮಾಡಿ ನುಡಿದನು

ಬಂದು ಶ್ವಾನಸ್ವರೂಪದಿಂದಲಿ ಮುನಿಗೆ ತೋರುವೆನು//೧೮//



ದೇವತಾರ್ಚನೆ ಮಾಡಿ ಗುರುವರ

ಸಾವಧಾನದಿ ಭಕ್ಷ ಭೋಜ್ಯವ

ಕಾವನಯ್ಯಗೆ ನೀಡೋಕಾಲದಿ ಶ್ವಾನ ಬರಲಾಗ

ಕೋವಿದಾಗ್ರಣಿ ವ್ಯಾಸಮುನಿಯು

ಭಾವಿಶ್ಯಾಗಲೆ ಹರಿಯ ಮಹಿಮೆಯ

ದೇವದೇವನೆ ಈ ವಿಧಾನದಿ ತೋರ್ದ ತನಗೆಂದು//೧೯//



ದೃಷ್ಟಿಯಿಂದಲಿ ಕಂಡು ಮುನಿವರ

ಥಟ್ಟನೆದುಕುಲತಿಲಕಕೃಷ್ಣನ

ಬಿಟ್ಟು ತಾ ಜದಮೂರ್ತಿ ಪೂಜೆಯ ಶುನಕದರ್ಚನೆಯಾ

ಮುಟ್ಟಿ ಭಜಿಸಿದ ಭಕುತಿಯಿಂದಲಿ

ಕೊಟ್ಟ ತಾ ನೈವೇದ್ಯ ತ್ವರದಲಿ

ತಟ್ಟಿಮಂಗಳದಾರ್ತಿಮಾಡಿ ಶಿರದಿ ನಮಿಸಿದನು//೨೦//



ಅಲ್ಲಿ ದ್ವಿಜವರರಿದನು ನೋಡೀ

ಎಲ್ಲಿಯಿಲ್ಲದೆ ಚರಿಯ ಯತಿವರರಲ್ಲಿ

ನಡೆಯಿತುಯಿನ್ನುಮುಂದೆ ಮಡಿಯು ಮೈಲಿಗೆಯು

ಇಲ್ಲದಾಯಿತು ನಾಯಿಪೂಜೆಯು

ಎಲ್ಲ ಜನರಿಗೆ ಮತವು ಎನಿಪದು

ಖುಲ್ಲ ಕನಕನ ಮಾತಿಗೀಯತಿ ಮರಳುಗೊಂಡಿಹನು//೨೧//



ಈ ತೆರದಿ ತಾವೆಲ್ಲ ವಿಬುಧರು

ಮಾತನಾಡಿದರೆಂಬೋ ವಾರ್ತೆಯ

ದೂತಪರಿಮುಖದಿಂದ ಕೇಳಿ ವ್ಯಾಸಮುನಿರಾಯ

ನೀತವಾದಪರೋಕ್ಷದಿಂದಲಿ

ಜಾತಜ್ಞಾನದಿ ಹರಿಯ ರೂಪವ

ಸೋತ್ತುಮಾದ್ವಿಜರೊಳಗೆ ಓರ್ವಗೆ ತೋರಿ ಮೋದಿಸಿದ//೨೨//



ಸರ್ವಜನರಿಗೆ ಸಮ್ಮತಾಯಿತು

ಗುರುವರೇಣ್ಯನ ಮಹಿಮೆ ಪೊಗಳುತ

ಊರ್ವಿತಳದಲಿ ಖ್ಯಾತಿ ಮಾಡ್ದರು ಸರ್ವಸಜ್ಜನರು

ಶರ್ವನಾಲಯದಲ್ಲಿ ಸೂರ್ಯನ

ಪರ್ವಕಾಲದಿ ವಿಪ್ರಪುತ್ರನ

ದರ್ವಿಸರ್ಪವು ಕಚ್ಚಲಾಕ್ಷಣ ಮೃತಿಯನೈದಿದನು//೨೩//



ಮೃತಿಯನೈದಿದ ವಿಪ್ರಪುತ್ರನ

ಮೃತಿಯ ತಾ ಪರಿಹರಿಸಿ ಶೀಘ್ರದಿ

ಪಿತಗೆ ನೀಡಿದ ಸರ್ವಜನರೂ ನೋಡುತಿರಲಾಗಾ

ವ್ರತಿವರೋತ್ತಮಮಹಿಮೆ ಜಗದೊಳ-

ಗತುಳವೆನುತಲಿ ಮುನಿಯ ಗುಣಗಳ

ತುತಿಸಿ ಪೊಗಳುತ ಪಾದಕಮಲಕೆ ನಮನ ಮಾಡಿದರು//೨೪//



ವಿದ್ಯಾರಣ್ಯನ ವಾದದಲಿ ತಾ

ಗೆದ್ದ ಶ್ರೀ ಜೈತೀರ್ಥವಿರಚಿತ

ಶುದ್ಧ ಶ್ರೀಮನ್ಯಾಯಸತ್ಸುಧನಾಮಸತ್ಕೃತಿಗೆ

ಎದ್ದುತೋರುವ ಚಂದ್ರಿಕಾಭಿಧ

ಮುದ್ದು ಟಿಪ್ಪಣಿಸಹಿತ ಪಾಠವ

ಮಧ್ವರಾಯರ ಬಳಿಯೆ ಪೇಳುತಲಿದ್ದನಾಸ್ಥಳದಿ//೨೫//



ಮತ್ತೆ ಪಂಪಾಕ್ಷೇತ್ರದಲಿ ತಾ

ನಿತ್ಯನಿತ್ಯದಿ ಹರಿಯ ಭಜಿಸುತ

ಸತ್ಯಸಂಕಲ್ಪಾನುಸಾರದಿ ಕೃತ್ಯ ತಾ ಮಾಡಿ

ಉತ್ತಮೋತ್ತಮವೆನಿಪ ಸ್ಥಾನವು

ಹತ್ತಲಿಹ ಗಜಗಹ್ವರಾಭಿಧ

ಎತ್ತನೋಡಲು ತುಂಗನದಿಯುಂಟದರ ಮಧ್ಯದಲಿ//೨೬//



ಛಂದಯಿಪ್ಪದು ನೋಡಿ ಮುನಿವರ

ಬಂದು ತುಂಗಾನದಿಯ ಜಲದಲಿ

ಮಿಂದು ಪುಂಡ್ರವ ಧರಿಸಿ ಜಪತಪನೇಮಕರ್ಮಗಳ

ಒಂದು ಬಿದದಲೇ ಮಾಡಿ ಹೃದಯದಿ

ಇಂದಿರೇಶನ ಪೂಜೆಗೈದೂ

ಪೊಂದಿಶ್ಯಾತನ ಪದದಿ ಮನವನು ಸಾರ್ದವೈಕುಂಠ//೨೭//



ಇಂದಿಗಿರುತಿಹವಲ್ಲಿ ಶುಭನವ

ಛಂದಬೃಂದಾವನಗಳೊಳಗೆ

ಸುಂದರಾತ್ಮಕವಾದ ವೃಂದಾವನದಿ ಮುನಿರಾಯಾ

ಪೊಂದಿಯಿಪ್ಪನು ಸತತ ತನ್ನನು

ವಂದಿಸೀಪರಿ ಭಜಿಪ ಜನರಿಗೆ

ಕುಂದದಲೆ ಸರ್ವಾರ್ಥ ಕೊಡುತಲಿಪ್ಪ ನಮ್ಮಪ್ಪ//೨೮//



ವ್ಯಾಸರಾಯರ ಮಹಿಮೆ ದಿನದಿನ

ಬ್ಯಾಸರಿಲ್ಲದೆ ಪಠಿಪ ಜನರಿಗೆ

ಕ್ಲೇಶ ದೇಹಾಯಾಸ ಘನತರ ದೋಷ ಸಮನಿಸವು

ವಾಸುದೇವನ ಕರುಣವವನಲಿ

ಸೂಸಿತುಳಕೊದು ಸಂಶಯಾತಕೆ

ಕೀಶಗುರುಜಗನ್ನಾಥ ವಿಠಲನು ಪ್ರೀತನಾಗುವನು//೨೯//



//ಇತಿ ಶ್ರೀ ರಾಘವೇಂದ್ರ ವಿಜಯ ಷಷ್ಟಮ ಸಂಧಿ ಸಮಾಪ್ತಂ//



Monday, March 11, 2013

ರಾಘವೇಂದ್ರ ವಿಜಯ - ಪಂಚಮ ಸಂಧಿ

ಪಂಚಮ ಸಂಧಿ


ರಾಘವೇಂದ್ರರ ವಿಜಯ ಪೇಳುವೆ

ರಾಘವೇಂದ್ರರ ಕರುಣ ಬಲದಲಿ

ರಾಘವೇಂದ್ರರ ಭಕುತರಾದವರಿದನು ಕೇಳುವುದು//


ಬೇಧ ಪಂಚಕ ತಾರತಮ್ಯವ-

ನಾದಿಕಾಲದಿ ಸಿದ್ಧವೆನ್ನುವ

ಮೋದತೀರ್ಥರ ಶಾಸ್ತ್ರಮರ್ಮವ ಪೇಳ್ದ ಬುಧಜನಕೆ

ಬೇಧಜೀವನಿಯೆಂಬ ಗ್ರಂಥವ

ಸಾದರದಿ ತಾ ರಚಿಸಿ ಲೋಕದಿ

ವಾದದಲಿ ಪ್ರತಿವಾದಿ ಸಂಘವ ಜೈಸಿ ರಾಜಿಸಿದ//೧//


ತರ್ಕತಾಂಡವ ರಚನೆಮಾಡಿ

ವಿತರ್ಕವಾದಿಯ ಮುರಿದು ಪರಗತಿ

ಕರ್ಕಶಾಗಿಹ ನ್ಯಾಯವೆನಿಪಾಮೃತವ ನಿರ್ಮಿಸಿದ

ಶರ್ಕರಾಕ್ಷಗೆ ಗಹನ ಚಂದ್ರಿಕೆ-

ಯರ್ಕನಂದದಿ ತಿಮಿರಹರ

ದೇವರ್ಕರಲ್ಲದೆ ಕೃತಿಗೆ ಯೋಗ್ಯರು ನರರು ಆಗುವರೆ//೨//


ದಶಮತೀಕೃತಶಾಸ್ತ್ರಭಾವವ

ವಿಶದ ಮಾಡುವ ಟಿಪ್ಪಣೀಗಳ

ಮಸೆದ ಅಸಿತೆರಮಾಡಿ ಪರಮತ ನಾಶಗೈಯುತಲಿ

ಅಸಮ ಮಹಿಮೆಯ ತೋರಿ ತಾ ಈ

ವಸುಧಿ ಮಂಡಲ ಮಧ್ಯ ಪೂರ್ಣಿಮ

ಶಶಿಯ ತೆರದಲಿ ಪೂರ್ಣಕಳೆಯುತನಾಗಿ ಶೋಭಿಸಿದ//೩//


ತಂತ್ರಸಾರದಿ ಪೇಳ್ದ ಸುಮಹಾ

ಮಂತ್ರ ಸಂಘವ ಶಿಷ್ಯ ಜನಕೆ

ಮಂತ್ರಮರ್ಮವ ತಿಳಿಸಿ ಸಿದ್ಧಿಯಮಾಡಿ ತೋರಿಸುತ

ಅಂತವಿಲ್ಲದ ವಿಶ್ವಕೋಶದ

ತಂತ್ರಮಾಡುವ ಸರ್ವಲೋಕ

ಸ್ವತಂತ್ರ ಶ್ರೀಹರಿಪಾದಪಂಕಜ ಭಜನೆ ಪರನಾದ//೪//


ಪದಸುಳಾದಿಗಳಿಂದ ಹರಿಗುಣ

ಮುದದಿ ಪೇಳುತ ಮುದ್ರಿಕಿಲ್ಲದೆ

ಹೃದಯದಲಿ ತಾ ಚಿಂತಿಗೈತಿರಲಾಗ ಮುನಿರಾಯಾ

ಒದಗಿ ಪೇಳಿದ ಕೃಷ್ಣ ಸ್ವಪ್ನದಿ

ಬದಲುಯಾವದು ನಿನಗೆಯಿಲ್ಲವೊ

ಯದುವರ ಶ್ರೀಕೃಷ್ಣನಾಮವೆ ನಿನಗೆ ಮುದ್ರಿಕೆಯೋ//೫//


ಒಂದು ದಿನದಲಿ ವಿಪ್ರನೋರ್ವನು

ಬಂದು ವ್ಯಾಸರ ಪದಕಮಲಕೆ

ವಂದಿಸೀ ಕೈಮುಗಿದು ಬೇಡಿದ ಎನಗೆ ಉಪದೇಶ

ಇಂದು ಮಾಡಿರಿ ಎನಗೆ ಪರಗತಿ

ಪೊಂದೋ ಮಾರ್ಗವ ತೋರಿ ಸಲಹಿರಿ

ಮಂದಮತಿ ನಾನಯ್ಯ ಗುರುವರ ಕರುಣಾಸಾಗರನೆ//೬//


ಕ್ಷೋಣಿತಳದಲಿ ತನ್ನ ಮಹಿಮೆಯ

ಕಾಣಗೊಳಿಸುವೆನೆಂದು ಚಾರಗೆ

ಕೋಣನೆಂಬುವ ನಾಮಮಂತ್ರವ ಪೇಳಿ ಕಳುಹಿದನು

ಮಾಣದಲೇ ತಾನಿತ್ಯ ಜಲಧರ

ಕೋಣ ಕೋಣವು ಎಂದು ಜಪಿಸಿದ

ವಾಣಿ ಸಿದ್ಧಿಯಯೆಯ್ದು ಕಾಲನ ಕೋಣ ಕಂಗೊಳಿಸೆ//೭//


ಕೆತ್ತಕತ್ತಲುಮೊತ್ತವೋ ಬಲ-

ವತ್ತರಾಂಜನರಾಶಿಯೋ ನಗ-

ಕುತ್ತುಮೋತ್ತಮ ನೀಲಪರ್ವತವೇನೋ ಪೇಳ್ವರ್ಗೆ

ಚಿತ್ತತೋಚದ ತೆರದಿ ಕಾಲನ

ಮತ್ತವಾಗಿಹ ಕೋಣ ಶೀಘ್ರದಿ

ಅತ್ತಲಿಂದಲಿ ಬಂದು ದೂತನ ಮುಂದೆ ಕಣ್ಗೆಸೆಯೆ//೮//


ದಂಡಧರನಾ ಕೋಣ ಕಣ್ಣಿಲಿ

ಕಂಡು ಪಾರ್ವನು ಮನದಿ ಭೀತಿಯ

ಗೊಂಡು ಗಡಗಡ ನಡುಗುತೀಪರಿ ಶ್ರಮವನೈದಿದನು

ಚಂಡಕೋಪವ ತಾಳಿ ಮಹಿಷವು

ಪುಂಡ ಎನ್ನನು ಕರೆದ ಕಾರಣ

ಖಂಡಿತೀಗಲೆ ಪೇಳೋ ನಿನಮನೋಬಯಕೆ ಪೂರ್ತಿಸುವೆ//೯//


ದ್ವಿಜ ಲುಲಾಯದ ವಚನಲಾಲಿಸಿ

ತ್ಯಜಿಸಿ ತಪವನು ತ್ವರದಿ ಬಂದೂ

ನಿಜಗುರೂತ್ತಮರಾದ ವ್ಯಾಸರ ನಮಿಸಿ ತಾ ನುಡಿದ

ದ್ವಿಜನೆ ಪೇಳೆಲೋ ಮಹಿಷಪತಿಗೆ

ದ್ವಿಜವರೂಢನ ಪಾದಪಂಕಜ

ಭಜನೆಗನುಕೂಲವಾದ ಕಾರ್ಯವ ಮಾಡು ನೀಯೆಂದೂ//೧೦//


ಕೆರೆಯ ಒಳಗಿಹದೊಂದು ಉರುಶಿಲೆ

ನರರಿಗಸದಳವೆನಿಸುತಿರ್ಪುದು

ಕರೆದು ಕೋಣಕೆ ಪೇಳಿ ಶಿಲೆಯನು ತೆಗಿಸು ತ್ವರದಿಂದ

ಗುರುಗಳಾಡಿದ ವಚನ ಶಿರದಲಿ

ಧರಿಸಿ ದ್ವಿಜ ತಾ ಬಂದು ಕೋಣಕೆ

ಅರಿಕೆ ಮಾಡಿದ ಗುರುಗಳೋಕ್ತಿಯ ನೀನೆ ಮಾಡೆಂದಾ//೧೧//


ಪೇಳಿದಾ ದ್ವಿಜವರನ ವಚನವ

ಕೇಳಿದಾಕ್ಷಣ ಶಿಲೆಯ ತಾನೂ

ಸೀಳಿ ಬಿಸುಟಿತು ಸುಲಭದಿಂದಲಿ ಏನು ಅಚ್ಚರವೋ

ಕೇಳು ದ್ವಿಜವರ ಮತ್ತೆ ಕಾರ್ಯವ

ಪೇಳು ಮಾಡುವೆ ನೀನೆ ಕರೆಯಲು

ವ್ಯಾಳ್ಯದಲಿ ನಾ ಬಂದು ಮಾಡುವೆನೆಂದು ತಾ ನುಡಿದು//೧೨//


ನಡಿಯಲಾ ಯಮರಾಯ ಕೋಣವು

ಬಡವ ದ್ವಿಜನಿಗೆ ಮುನಿಯ ಒಲಿದೂ

ಮಡದಿ ಮಕ್ಕಳು ವೃತ್ತಿ ಕ್ಷೇತ್ರವು ಕನಕ ಮನಿಧನವು

ದೃಢ ಸುಭಕುತಿ ಜ್ಞಾನವಿತ್ತೂ

ಪೊಡವಿತಳದಲಿ ಪೊರೆದು ಹರಿಪದ-

ಜಡಜಯುಗದಲಿ ಮನವನಿತ್ತೂ ಗತಿಯ ಪಾಲಿಸಿದಾ//೧೩//


ಏನು ಮಹಿಮೆಯೋ ವ್ಯಾಸರಾಯರ

ಏನು ಪುಣ್ಯದ ಪ್ರಭವೊ ಲೋಕದಿ

ಏನು ಪೂಜ್ಯನೋ ಆವದೇವ ಸ್ವಭಾವಸಂಭವನೋ

ಏನು ಪೂರ್ವದ ತಾಪದ ಫಲವೋ

ಏನು ಹರಿಪದ ಪೂಜ ಫಲವೋ

ಏನು ದೈವವೋ ಇವರ ಕರುಣದಿ ಜಗಕೆ ಅಖಿಳಾರ್ಥ//೧೪//


ಇಂದ್ರ ತಾನೈಶ್ಚರ್ಯದಿಂದಲಿ

ಚಂದ್ರ ತಾ ಕಳೆಪೂರ್ತಿಯಿಂದ

ದಿನೇಂದ್ರ ತಾ ನಿರ್ದೊಷತನದಲಿ ಮೆರೆವ ನೀ ತೆರದಿ

ಮಂದ್ರಗಿರಿಧರ ಹರಿಯ ಕರಣವು

ಸಾಂದ್ರವಾದುದರಿಂದ ತಾನೇ ಯತೀಂದ್ರ

ಮಹಿಮೆಯಗಾಧವಾಗಿಹುದೆಂದು ಜನಹೊಗಳೆ//೧೫//


ವ್ಯಾಸಸಾಗರವೆಂಬ ವಿಮಲ

ಜಲಾಶಯವ ತಾ ಮಾಡಿ ದಿನದಿನ

ಕೀಶನಾಥನ ಸೇವೆ ಮಾಡುತ ದೇಶದಲಿ ಮೆರೆವಾ

ಶೇಷಗಿರಿಯನು ಸಾರ್ದು ವೇಂಕಟ

ಈಶ ಮೂರ್ತಿಯ ಪೂಜಿ ಸಂತತ

ಆಶೆಯಿಲ್ಲದೆ ಗೈದು ದ್ವಾದಶವರುಷ ಬಿಡದಂತೆ//೧೬//


ಇಳಿದು ಗಿರಿಯನು ಧರಣಿತಳದಲಿ

ಮಲವು ಮೂತ್ರವು ಮಾಡಿ ಮತ್ತೂ

ಜಲದಿ ಸ್ನಾನವಗೈದು ಪಾಠವ ಪೇಳಿ ಹರಿಪೂಜಾ

ಇಳೆಯ ಸುರವರಸಂಘ ಮಧ್ಯದಿ

ಬೆಳಗುತಿಪ್ಪನು ವ್ಯಾಸಮುನಿಯೂ

ಕಳೆಗಳಿಂದಲಿ ಪೂರ್ಣಚಂದಿರ ನಭದಿ ತೋರ್ಪಂತೆ//೧೭//


ತಿರುಪತೀಶನ ಕರುಣಪಡದೀ

ಧರೆಯಮಂಡಲ ಸುತ್ತುತಾಗಲೆ

ಧುರದಿ ಮೆರೆವಾ ಕೃಷ್ಣರಾಯನ ಸಲಹಿ ಮುದವಿತ್ತ

ಧರೆಗೆ ದಕ್ಷಿಣಕಾಶಿಯೆನಿಸುವ

ಪರಮಪಾವನ ಪಂಪಕ್ಷೇತ್ರಕೆ

ಸುರವರೇಶನ ದಿಗ್ವಿಭಾಗದಲಿರುವ ಗಿರತಟದಿ//೧೮//


ಮೆರೆವ ಚಕ್ರಸುತೀರ್ಥ ತೀರದಿ

ಇರುವ ರಘುಕುಲರಾಮದೇವನು

ಪರಮಸುಂದರ ಸೂರ್ಯಮಂಡಲವರ್ತಿ ಎನಿಸಿಪ್ಪ

ತರುಣನಾರಾಯಣನ ಮೂರುತಿ

ಗಿರಿಯೊಳಿಪ್ಪನು ರಘುನಾಥನು

ವರಹದೇವನು ಪೂರ್ವಭಾಗದಿ ಇರುವನಾಸ್ಥಳದಿ//೧೯//


ಹರಿಯುಯಿಲ್ಲದ ಸ್ಥಳದಲಿರುತಿಹ

ಹರಿಯು ಪೂಜೆಗೆ ಅರ್ಹನಲ್ಲವೊ

ಹರಿಯ ಸ್ಥಾಪನ ಮುಖ್ಯಮಾಳ್ಪುದು ಎನುತ ಯತಿನಾಥ

ಗಿರಿಯ ಮಧ್ಯದಿ ಮರುತರೂಪವನಿರಿಸಿ

ಪೂಜೆಯಮಾಡಿ ಪರಿಪರಿ

ಸುರಸ ಪಕ್ವ ಸುಭಕ್ಷ್ಯಭೋಜನ ಕನಕ ದಕ್ಷಿಣವಾ//೨೦//


ಧರಣಿಸುರಗಣಕಿತ್ತು ಗುರುವರ

ಸ್ಮರಣೆ ಮಾಡುತ ನಿದ್ರೆ ಮಾಡಲು

ಬರುತ ಮರುದಿನ ನೋಡೆ ಕಪಿವರಮೂರ್ತಿ ಕಾಣದಲೆ

ಭರದಿ ಅಚ್ಚರಿಗೊಂಡು ಸಂಯಮಿವರನು

ಮನದಲಿ ಯೋಚಿಸೀಪರಿ

ಮರಳಿ ಪ್ರಾಣನ ಸ್ಥಾಪಿಸೀತರ ಯಂತ್ರಬಂಧಿಸಿದ//೨೧//


ಕೋಣಷಟ್ಕದ ಮಧ್ಯ ಮುಖ್ಯ-

ಪ್ರಾಣದೇವನ ನಿಲಿಸಿ ವಲಯದಿ

ಮಾಣದಲೇ ಕಪಿಕಟಕ ಬಂಧಿಸಿ ಬೀಜವರಣಗಳ

ಜಾಣತನದಲಿ ಬರೆದು ತ್ರಿಜಗ-

ತ್ರಾಣದಲ್ಲೇ ನಿಲಿಸಿ ಪೂಜಿಸಿ

ಕ್ಷೋಣಿತಳದಲಿ ಕರೆದ ಯಂತ್ರೋದ್ಧಾರ ನಾಮದಲಿ//೨೨/


ದಿನದಿ ಚಕ್ರಸುತೀರ್ಥ ಸ್ನಾನವ

ಇವನ ಉದಯದಿ ಮಾಡಿ ಆಹ್ನಿಕ

ಮನದಿ ಬಿಂಬನ ಪೂಜೆಗೋಸುಗ ಪಿರಿಯ ಗುಂಡೇರಿ

ಪ್ರಣವಪೂರ್ವಕ ಆಸನೋಪರಿ

ಮನಸುಪೂರ್ವಕ ಕುಳಿತು ಹರಿಪದವನಜ

ಭಜಿಸುತ ದಿನದಿ ಸಾಧನ ಘನವು ಮಾಡಿದನು//೨೩//


ಈ ತೆರದಿ ಶ್ರೀವ್ಯಾಸಮುನಿಯೂ

ವಾತದೇವನ ಭಜಿಸುತಿರಲಾ

ಭೂತಕಾಲದಲಿಂದ ಚಕ್ರಸುತೀರ್ಥದೊಳಗಿಪ್ಪ

ನೀತ ಸಿರಿ ಗುರುಮಧ್ವರಾಯನ

ಈತ ಮೇಲಕೆ ತಂದು ಪೂಜಿಸಿದಾತ

ಗುರುಜಗನ್ನಾಥವಿಠಲನ ಪ್ರೀತಿಗೊಳಗಾದ//೨೪//


//ಇತಿ ಶ್ರೀ ರಾಘವೇಂದ್ರ ವಿಜಯ ಪಂಚಮ ಸಂಧಿ ಸಮಾಪ್ತಂ//