Sunday, December 30, 2012

ಶ್ರೀ ಹರಿಕಥಾಮೃತಸಾರ - 4

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಭೋಜನ ಸಂಧಿ//

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ವನಜಾಂಡದೊಳು ಉಳ್ಳ ಅಖಿಳ ಚೇತನರು ಭುಂಜಿಪ

ಚತುರವಿಧ ಭೋಜನಪದಾರ್ಥದಿ ಚತುರವಿಧ ರಸರೂಪ ತಾನಾಗಿ

ಮನಕೆ ಬಂದಂತೆ ಉಂಡು ಉಣಿಸಿ ಸಂಹನನಕೆ ಉಪಚಯ

ಕರುಣಕೆ ಆನಂದ ಅನಿಮಿಷರಿಗೆ ಆತ್ಮ ಪ್ರದರ್ಶನ ಸುಖವನೀವ ಹರಿ//1//


ನೀಡದಂದದಲೆ ಇಪ್ಪ ಲಿಂಗಕೆ ಷೋಡಶ ಆತ್ಮಕ ರಸ ವಿಭಾಗವ ಮಾಡಿ

ಷೋಡಶ ಕಲೆಗಳಿಗೆ ಉಪಚಯಗಳನೆ ಕೊಡುತ

ಕ್ರೋಡ ಎಪ್ಪತ್ತೆರಡು ಸಾವಿರ ನಾಡಿಗತ ದೇವತೆಗಳೊಳಗೆ ಇದ್ದಾಡುತ ಆನಂದಾತ್ಮ

ಚರಿಸುವ ಲೋಕದೊಳು ತಾನು//2//


ವಾರಿವಾಚ್ಯನು ವಾರಿಯೊಳಗಿದ್ದು ಆರು ರಸವೆಂದೆನಿಸಿ

ಮೂವತ್ತಾರು ಸಾವಿರ ಸ್ತ್ರೀ ಪುರುಷನಾಡಿಯಲಿ ತದ್ರೂಪ ಧಾರಕನು ತಾನಾಗಿ

ಸರ್ವ ಶರೀರಗಳಲಿ ಅಹಶ್ಚರಾತ್ರಿ ವಿಹಾರ ಮಾಳ್ಪನು

ಬೃಹತಿಯೆಂಬ ಸುನಾಮದಿಂ ಕರೆಸಿ//3//


ಆರುರಸ ಸತ್ವಾದಿ ಭೇದದಿ ಆರು ಮೂರಾಗಿ ಇಹವು

ಸಾರಾಸಾರನೀತ ಪ್ರಚುರ ಖಂಡಾಖಂಡ ಚಿತ್ಪ್ರಚುರ

ಈರು ಅಧಿಕ ಎಪ್ಪತ್ತು ಸಾವಿರ ಮಾರಮಣನ ರಸಾಖ್ಯರೂಪ

ಶರೀರದೊಳು ಭೋಜ್ಯ ಸುಪದಾರ್ಥದಿ ತಿಳಿದು ಭುಂಜಿಪುದು//4//


ಕ್ಷೀರಗತ ರಸ ರೂಪಗಳು ಮುನ್ನೂರು ಮೇಲೆ ಐವತ್ತು ನಾಲ್ಕು

ಚಾರು ಘೃತಗತ ರೂಪಗಳು ಇಪ್ಪತ್ತರ ಒಂಭತ್ತು

ಸಾರ ಗುಡದೊಳಗೆ ಐದು ಸಾವಿರ ನೂರಾವೊಂದು

ಸುರೂಪ ದ್ವಿಸಹಸ್ರ ಆರೆರಡು ಶತ ಪಂಚ ವಿಂಶತಿ ರೂಪ ಫಲಗಳಲಿ//5//


ವಿಶದ ಸ್ಥಿರತೀಕ್ಷಣವು ನಿರ್ಹರ ರಸಗಳೊಳು

ಮೂರೈದುಸಾವಿರ ತ್ರಿಶತ ನವರೂಪಗಳ ಚಿಂತಿಸಿ ಭುಂಜಿಪುದು ವಿಷಯ

ಶ್ವಸನ ತತ್ತ್ವೇಶರೊಳಗಿದ್ದು ಈ ಪೆಸರಿನಿಂದಲಿ ಕರೆಸುವನು

ಧೇನಿಸಿದರೀ ಪರಿ ಮನಕೆ ಪೊಳೆವನು ಬಲ್ಲ ವಿಬುಧರಿಗೆ//6//


ಕಪಿಲ ನರಹರಿ ಭಾರ್ಗವತ್ರಯ ವಪುಷ ನೇತ್ರದಿ ನಾಸಿಕಾಸ್ಯದಿ

ಶಫರನಾಮಕ ಜಿಹ್ವೆಯಲಿ ದಂತದಲಿ ಹಂಸಾಖ್ಯ

ತ್ರಿಪದಿಪಾದ್ಯ ಹಯಾಸ್ಯ ವಾಚ್ಯದೊಳು ಅಪರಿಮಿತ ಸುಖಪೂರ್ಣ ಸಂತತ ಕೃಪಣರೊಳಗಿದ್ದು

ಅವರವರ ರಸ ಸ್ವೀಕರಿಸಿ ಕೊಡುವ//7//


ನಿರುಪಮಾನಂದಾತ್ಮ ಹರಿ ಸಂಕರುಷಣ ಪ್ರದ್ಯುಮ್ನರೂಪದಿ ಇರುತಿಹನು ಭೋಕ್ತ್ರುಗಳೊಳಗೆ

ತತ್ಶಕ್ತಿದನುಯೆನಿಸಿ ಕರೆಸುವನು

ನಾರಾಯಣ ಅನಿರುದ್ಧ ಎರಡುನಾಮದಿ ಭೋಜ್ಯವಸ್ತುಗನಿರುತ

ತರ್ಪಕನಾಗಿ ತೃಪ್ತಿಯನೀವ ಚೇತನಕೆ//8//


ವಾಸುದೇವನು ಒಳ ಹೊರಗೆ ಅವಕಾಶ ಕೊಡುವ ನಭಸ್ಥನಾಗಿ

ರಮಾಸಮೇತ ವಿಹಾರ ಮಾಳ್ಪನು ಪಂಚರೂಪದಲಿ

ಆ ಸರೋರುಹ ಸಂಭವಭವವಾಸವಾದಿ ಅಮರಾದಿ ಚೇತನ ರಾಶಿಯೊಳಗೆ

ಇಹನು ಎಂದರಿತವನು ಅವನೇ ಕೋವಿದನು//9//


ವಾಸುದೇವನು ಅನ್ನದೊಳು ನಾನಾ ಸುಭಕ್ಷ್ಯದಿ ಸಂಕರುಷಣ

ಕೃತೀಶ ಪರಮಾನ್ನದೊಳು ಘೃತದೊಳಗೆ ಇಪ್ಪ ಅನಿರುದ್ಧ

ಆ ಸುಪರ್ಣ ಅಂಸಗನು ಸೂಪದಿ ವಾಸವ ಅನುಜ ಶಾಕದೊಳು

ಮೂಲೇಶ ನಾರಾಯಣನು ಸರ್ವತ್ರದಲಿ ನೆಲೆಸಿಹನು//10//


ಅಗಣಿತ ಆತ್ಮ ಸುಭೋಜನ ಪದಾರ್ಥಗಳ ಒಳಗೆ

ಅಖಂಡ ವಾದ ಒಂದು ಅಗಳಿನೊಳು ಅನಂತ ಅಂಶದಲಿ ಖಂಡನೆಂದೆನಿಸಿ

ಜಗದಿ ಜೀವರ ತೃಪ್ತಿ ಪಡಿಸುವ ಸ್ವಗತ ಭೇದ ವಿವರ್ಜಿತನ

ಈರ್ಬಗೆಯ ರೂಪವನರಿತು ಭುಂಜಿಸಿ ಅರ್ಪಿಸು ಅವನಡಿಗೆ//11//


 
ಈ ಪರಿಯಲಿ ಅರಿತು ಉಂಬ ನರ ನಿತ್ಯ ಉಪವಾಸಿ ನಿರಾಮಯನು ನಿಷ್ಪಾಪಿ

ನಿತ್ಯ ಮಹಾ ಸುಯಜ್ಞಗಳು ಆಚರಿಸಿದವನು

ಪೋಪದು ಇಪ್ಪದು ಬಪ್ಪುದು ಎಲ್ಲ ರಮಾಪತಿಗೆ ಅಧಿಷ್ಠಾನವೆನ್ನು

ಕೃಪಾಪಯೋನಿಧಿ ಮಾತಲಾಲಿಸುವನು ಜನನಿಯಂತೆ//12//


 
ಆರೆರೆಡು ಸಾವಿರದ ಮೇಲೆ ಇನ್ನೂರ ಐವತ್ತೊಂದು ರೂಪದಿ

ಸಾರಭೋಕ್ತ ಅನಿರುದ್ಧ ದೇವನು ಅನ್ನಮಯನೆನಿಪ

ಮೂರೆರೆಡುವರೆ ಸಾವಿರದ ಮೇಲೆ ಮೂರಧಿಕ ನಾಲ್ವತ್ತು ರೂಪದಿ

ತೋರುತಿಹ ಪ್ರದ್ಯುಮ್ನ ಜಗದೊಳು ಪ್ರಾಣಮಯನಾಗಿ//13//


 
ಎರಡು ಕೋಶಗಳ ಒಳ ಹೊರಗೆ ಸಂಕರುಷಣ ಇದು ಸುಲಕ್ಷದ ಅರವತ್ತೆರೆಡು ಸಾವಿರದ

ಏಳಧಿಕ ಶತ ರೂಪಗಳ ಧರಿಸಿ ಕರೆಸಿಕೊಂಬ ಮನೋಮಯ ಎಂದು

ಅರವಿದೂರನು ಈರೆರೆಡು ಸಾವಿರದ ಮುನ್ನೂರು

ಅದ ಮೇಲೆ ನಾಲ್ಕಧಿಕ ಎಪ್ಪತ್ತು//14//


 ಹದಿನಾಲ್ಕು ಮತ್ತು ಹದಿನೈದನೆ ಪದ್ಯವನ್ನು ಒಟ್ಟಿಗೆ ಓದುವುದು.


ರೂಪದಿಂ ವಿಜ್ಞಾನಮಯನು ಎಂಬೀ ಪೆಸರಿನಿಂ ವಾಸುದೇವನು

ವ್ಯಾಪಿಸಿಹ ಮಹದಾದಿ ತತ್ತ್ವದಿ ತತ್ಪತಿಗಳೊಳಗೆ

ಈ ಪುರುಷ ನಾಮಕನ ಶುಭ ಸ್ವೇದಾಪಳು ಎನಿಸಿದ ರಮಾಂಬ

ತಾ ಬ್ರಹ್ಮಾಪರೋಕ್ಷಿಗಳು ಆದವರ ಲಿಂಗಾಂಗ ಕೆಡಿಸುವಳು//15//


ಐದು ಸಾವಿರ ನೂರಿಪ್ಪತ್ತೈದು ನಾರಾಯಣ ರೂಪವ ತಾ ಧರಿಸಿಕೊಂಡು

ಅನುದಿನದಿ ಆನಂದಮಯನೆನಿಪ

ಐದು ಲಕ್ಷದ ಮೇಲೆ ಎಂಭತ್ತೈದುಸಾವಿರ ನಾಲ್ಕು ಶತಗಳ

ಐದು ಕೋಶಾತ್ಮಕ ವಿರಿಂಚಾಡದೊಳು ತುಂಬಿಹನು//16//


 
ನೂರಾವೊಂದು ಸುರೂಪದಿಂ ಶಾಂತೀರಮಣ ತಾನು ಅನ್ನನೆನಿಪ

ಐನೂರ ಮೇಲೆ ಮೂರಧಿಕ ದಶ ಪ್ರಾಣಾಖ್ಯ ಪ್ರದ್ಯುಮ್ನ

ತೋರುತಿಹನು ಐವತ್ತೈದುಸಾವಿರ ವಿಕಾರ ಮನದೊಳು ಸಂಕರುಷಣ

ಐನೂರ ಚತುರಾಶೀತಿ ವಿಜ್ಞಾನಾತ್ಮ ವಿಶ್ವಾಖ್ಯ//17//


 
ಮೂರು ಸಾವಿರದ ಅರ್ಧಶತ ಮೇಲೆ ಈರು ಅಧಿಕ ರೂಪಗಳ ಧರಿಸಿ

ಶರೀರದೊಳಗೆ ಆನಂದಮಯ ನಾಯಾಯಣಾಹ್ವಯನು

ಈರೆರೆಡು ಸಾವಿರದ ಮೇಲೆ ಮುನ್ನೂರ ಐದು ಸುರೂಪದಿಂದಲಿ

ಭಾರತೀಶನೊಳು ಇಪ್ಪ ನವನೀತಸ್ಥ ಘೃತದಂತೆ//18//


 
ಮೂರಧಿಕ ಐವತ್ತು ಪ್ರಾಣ ಶರೀರದೊಳಗೆ ಅನಿರುದ್ಧನು ಇಪ್ಪ

ಐನೂರು ಹನ್ನೊಂದು ಅಧಿಕ ಅಪಾನನೊಳು ಇಪ್ಪ ಪ್ರದ್ಯುಮ್ನ

ಮೂರನೇ ವ್ಯಾನನೊಳಗೆ ಐದರೆ ನೂರು ರೂಪದಿ ಸಂಕರುಷಣ

ಐನೂರ ಮೂವತ್ತೈದು ಉದಾನನೊಳು ಇಪ್ಪ ಮಾಯೇಶ//19//

ಮೂಲ ನಾರಾಯಣನು ಐವತ್ತೇಳಧಿಕ ಐನೂರು ರೂಪವ ತಾಳಿ

ಸರ್ವತ್ರದಿ ಸಮಾನನೊಳಿಪ್ಪ ಸರ್ವಜ್ಞ

ಲೀಲೆಗೈವನು ಸಾವಿರದ ಮೇಲೆ ಏಳು ನೂರು ಹನ್ನೊಂದು ರೂಪವ ತಾಳಿ

ಪಂಚಪ್ರಾಣರೊಳು ಲೋಕಗಳ ಸಲಹುವನು//20//


 
ತ್ರಿನವತಿ ಸುರೂಪಾತ್ಮಕ ಅನಿರುದ್ಧನು ಸದಾ ಯಜಮಾನನಾಗಿದ್ದು

ಅನಲ ಯಮ ಸೋಮಾದಿ ಪಿತೃದೇವತೆಗಳಿಗೆ ಅನ್ನನು ಎನಿಪನು

ಆ ಪ್ರದ್ಯುಮ್ನ ಸಂಕರುಷಣ ವಿಭಾಗವ ಮಾಡಿಕೊಟ್ಟು ಉಂಡುಣಿಪ

ನಿತ್ಯಾನಂದ ಭೋಜನದಾಯಿ ತುರ್ಯಾಹ್ವ//21//


 
ಷಣ್ಣವತಿ ನಾಮಕನು ವಸು ಮೂಗಣ್ಣ ಭಾಸ್ಕರರ ಒಳಗೆ ನಿಂತು

ಪ್ರಾಪನ್ನರು ಅನುದಿನ ನಿಷ್ಕಪಟ ಸದ್ಭಕ್ತಿಯಲಿ ಮಾಳ್ಪ ಪುಣ್ಯ ಕರ್ಮವ ಸ್ವೀಕರಿಸಿ

ಕಾರುಣ್ಯ ಸಾಗರನು ಆ ಪಿತೃಗಳಿಗೆ

ಅಗಣ್ಯ ಸುಖವಿತ್ತು ಅವರ ಪೊರೆವನು ಎಲ್ಲ ಕಾಲದಲಿ//22//


 
ಸುತಪ ಏಕ ಉತ್ತರ ಸುಪಂಚಾಶತ ವರಣ ಕರಣದಿ ಚತುರ ವಿಂಶತಿ ಸುತತ್ವದಿ

ಧಾತುಗಳೊಳು ಇದ್ದು ಅವಿರತ ಅನಿರುದ್ಧ

ಜತನ ಮಾಳ್ಪನು ಜಗದಿ ಜೀವ ಪ್ರತತಿಗಳ

ಷಣ್ಣವತಿ ನಾಮಕ ಚತುರ ಮೂರ್ತಿಗಳ ಅರ್ಚಿಸುವರು ಅದರಿಂದ ಬಲ್ಲವರು//23//


ಅಬುಜಾಂಡ ಉದರನು ವಿಪಿನದಿ ಶಬರಿ ಯಂಜಲನುಂಡ ಗೋಕುಲದ ಅಬಲೆಯರನು

ಓಲಿಸಿದನು ಋಷಿಪತ್ನಿಯರು ಕೊಟ್ಟನ್ನ ಸುಭುಜ ತಾ ಭುಂಜಿಸಿದ

ಸ್ವರಮಣ ಕುಬುಜಗಂಧಕೊಲಿದ ಮುನಿಗಣ ವಿಬುಧ ಸೇವಿತ

ಬಿಡುವನೆ ನಾವು ಇತ್ತ ಕರ್ಮಫಲ//24//


 
ಗಣನೆಯಿಲ್ಲದ ಪರಮಸುಖ ಸುದ್ಗುಣ ಗಣಂಗಳ ಲೇಶ ಲೇಶಕೆ ಎಣೆಯೆನಿಸದು

ರಮಾಬ್ಜಭವ ಶಕ್ರಾದಿಗಳ ಸುಖವು

ಉಣುತ ಉಣುತ ಮೈಮರೆದು ಕೃಷ್ಣಾರ್ಪಣವೆನಲು

ಕೈಕೊಂಬನು ಅರ್ಭಕ ಜನನಿ ಭೋಜನ ಸಮಯದಲಿ ಕೈವಡ್ದು ವಂದದಲಿ//25//


 
ಜೀವಕೃತ ಕರ್ಮಗಳ ಬಿಡದೆ ರಮಾವರನು ಸ್ವೀಕರಿಸಿ

ಫಲಗಳನು ಈವನು ಅಧಿಕಾರಾನುಸಾರದಲಿ ಅವರಿಗೆ ಅನವರತ

ಪಾವಕನು ಸರ್ವಸ್ವ ಭುಂಜಿಸಿ ತಾ ವಿಕಾರವನು ಐದನು ಒಮ್ಮೆಗೆ

ಪಾವನಕೆ ಪಾವನನೆನಿಪ ಹರಿಯುಂಬುದು ಎನರಿದು//26//


ಕಳುಷಜಿಹ್ವೆಗೆ ಸುಷ್ಟುಭೋಜನ ಜಲ ಮೊದಲು ವಿಷತೋರುವುದು

ನಿಷ್ಕಲುಷ ಜಿಹ್ವೆಗೆ ಸುರಸ ತೋರುವುದು ಎಲ್ಲ ಕಾಲದಲಿ

ಸುಲಲಿತಾಂಗಗೆ ಸಕಲ ರಸ ಮಂಗಳವೆನಿಸುತಿಹುದು

ಅನ್ನಮಯ ಕೈಕೊಳದೆ ಬಿಡುವನೆ ಪೂತನಿಯ ವಿಷ ಮೊಲೆಯನು ಉಂಡವನು//27//


ಪೇಳಲಿ ಏನು ಸಮೀರ ದೇವನು ಕಾಳಕೂಟವನು ಉಂಡು ಲೋಕವ ಪಾಲಿಸಿದ

ತದ್ದಾಸನು ಓರ್ವನು ಅಮೃತನೆನಿಸಿದನು

ಶ್ರೀ ಲಕುಮಿವಲ್ಲಭ ಶುಭಾಶುಭ ಜಾಲ ಕರ್ಮಗಳ ಉಂಬನು

ಉಪಚಯದ ಏಳಿಗೆಗಳು ಇವಗಿಲ್ಲವೆಂದಿಗು ಸ್ವರಸಗಳ ಬಿಟ್ಟು//28//


ಈ ಪರಿಯಲಿ ಅಚ್ಯುತನ ತತ್ತದ್ರೂಪ ತನ್ನಾಮಗಳ ಸಲೆ

ನಾನಾ ಪದಾರ್ಥದಿ ನೆನೆನೆನೆದು ಭುಂಜಿಸುತಲಿ ಇರು ವಿಷಯ

ಪ್ರಾಪಕ ಸ್ಥಾಪಕ ನಿಯಾಮಕ ವ್ಯಾಪಕನು ಎಂದರಿದು

ನೀ ನಿರ್ಲೇಪನು ಆಗಿರು ಪುಣ್ಯ ಪಾಪಗಳ ಅರ್ಪಿಸು ಅವನ ಅಡಿಗೆ//29//


ಐದು ಲಕ್ಷ ಎಂಭತ್ತರ ಒಂಭತ್ತು ಆದ ಸಾವಿರದ ಏಳುನೂರರ ಐದು ರೂಪವ ಧರಿಸಿ

ಭೋಕ್ತ್ರುಗ ಭೋಜ್ಯನೆಂದೆನಿಸಿ

ಶ್ರೀಧರಾದುರ್ಗಾರಮಣ ಪಾದಾದಿ ಶಿರ ಪರ್ಯಂತ ವ್ಯಾಪಿಸಿ ಕಾದು ಕೊಂಡಿಹ

ಸಂತತ ಜಗನ್ನಾಥ ವಿಠಲನು//30//


//ಇತಿ ಶ್ರೀ ಭೋಜನ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು

Wednesday, December 26, 2012

ಶ್ರೀ ಹರಿಕಥಾಮೃತಸಾರ - 3

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ವ್ಯಾಪ್ತಿ ಸಂಧಿ//

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಪುರುಷರೂಪತ್ರಯ ಪುರಾಣ ಪುರುಷ ಪುರುಷೋತ್ತಮ

ಕ್ಷರಾಕ್ಷರ ಪುರುಷ ಪೂಜಿತ ಪಾದ ಪೂರ್ಣಾನಂದ ಜ್ಞಾನಮಯ

ಪುರುಷಸೂಕ್ತ ಸುಮೇಯ ತತ್ತತ್ ಪುರುಷ ಹೃತ್ಪುಷ್ಕರ ನಿಲಯ

ಮಹಾಪುರುಷ ಅಜಾಂಡ ಅಂತರದಿ ಬಹಿರದಿ ವ್ಯಾಪ್ತ ನಿರ್ಲಿಪ್ತ//1//


ಸ್ತ್ರೀ ನಪುಂಸಕ ಪುರುಷ ಭೂ ಸಲಿಲ ಅನಲ ಗಗನ ಮನ ಶಶಿ

ಭಾನು ಕಾಲ ಗುಣ ಪ್ರಕೃತಿಯೊಳಗೆ ಒಂದು ತಾನಲ್ಲ

ಏನು ಇವನ ಮಹಾಮಹಿಮೆ ಕಡೆಗಾಣರು ಅಜಭವ ಶಕ್ರ ಮುಖರು

ನಿಧಾನಿಸಲು ಮಾನವರಿಗೆ ಅಳವಡುವುದೇ ವಿಚಾರಿಸಲು//2//


ಗಂಧ ರಸರೂಪ ಸ್ಪರ್ಶ ಶಬ್ದ ಒಂದು ತಾನಲ್ಲ

ಅದರದರ ಪೆಸರಿಂದ ಕರೆಸುತ ಜೀವರಿಗೆ ತರ್ಪಕನು ತಾನಾಗಿ

ಪೊಂದಿಕೊಂಡಿಹ ಪರಮ ಕರುಣಾಸಿಂಧು ಶಾಶ್ವತ

ಮನವೆ ಮೊದಲಾದ ಇಂದ್ರಿಯಗಳೊಳಗೆ ಇದ್ದು ಭೋಗಿಸುತಿಹನು ವಿಷಯಗಳ//3//


ಶ್ರವಣ ನಯನ ಘ್ರಾಣ ತ್ವಗ್ರಸನ ಇವುಗಳೊಳು

ವಾಕ್ಪಾಣಿ ಪಾದಾದಿ ಅವಯವಗಳೊಳು ತದ್ಗುಣಗಳೊಳು ತತ್ಪತಿಗಳೊಳಗೆ

ಪ್ರವಿತತನು ತಾನಾಗಿ ಕೃತಿಪತಿ ವಿವಿಧ ಕರ್ಮವ ಮಾಡಿ ಮಾಡಿಸಿ

ಭವಕೆ ಕಾರಣನಾಗಿ ತಿರುಗಿಸುತಿಹನು ತಿಳಿಸದಲೆ//4//


ಗುಣಿಗುಣಗಳೊಳಗೆ ಇದ್ದು ಗುಣಿಗುಣನು ಎನಿಸುವನು ಗುಣಬದ್ಧನಾಗದೆ

ಗುಣಜ ಪುಣ್ಯಾಪುಣ್ಯ ಫಲ ಬ್ರಹ್ಮಾದಿಚೇತನಕೆ ಉಣಿಸುತ ಅವರೊಳಗಿದ್ದು

ವೃಜಿನ ಅರ್ದನ ಚಿದಾನಂದೈಕ ದೇಹವನು

ಕೊನೆಗೆ ಸಚರಾಚಾರ ಜಗದ್ಭುಕುವೆನಿಪನು ಅವ್ಯಯನು//5//


ವಿದ್ಯೆ ತಾನೆನೆಸಿಕೊಂಬ ಅನಿರುದ್ಧದೇವನು

ಸರ್ವಜೀವರ ಬುದ್ಧಿಯಲಿ ತಾನಿದ್ದು ಕೃತಿಪತಿ ಬುದ್ಧಿಯೆನಿಸುವನು

ಸಿದ್ಧಿಯೆನಿಸುವ ಸಂಕರುಷನ ಪ್ರಸಿದ್ಧನಾಮಕ ವಾಸುದೇವ

ಅನವದ್ಯ ರೂಪ ಚತುಷ್ಟಯಗಳ ಅರಿತವನೆ ಪಂಡಿತನು//6//


ತನುಚತುಷ್ಟಯಗಳೊಳು ನಾರಾಯಣನು ಹೃತ್ಕಮಲಾಖ್ಯ ಸಿಂಹಾಸನದೊಳು

ಅನಿರುದ್ಧಾದಿ ರೂಪಗಳಿಂದ ಶೋಭಿಸುತ

ತನಗೆ ತಾನೇ ಸೇವ್ಯ ಸೇವಕನೆನೆಸಿ ಸೇವಾಸಕ್ತ ಸುರರೊಳಗೆ

ಅನವರತ ನೆಲೆಸಿದ್ದು ಸೇವೆಯ ಕೊಂಬನವರಂತೆ//7//


ಜಾಗರ ಸ್ವಪ್ನಂಗಳೊಳು ವರಭೋಗೀಶಯನನು ಬಹು ಪ್ರಕಾರ ವಿಭಾಗಗೈಸಿ

ನಿರಂಶಜೀವರ ಚಿತ್ಶರೀರವನು ಭೋಗವಿತ್ತು

ಸುಷುಪ್ತಿಕಾಲದಿ ಸಾಗರವ ನದಿ ಕೂಡುವಂತೆ

ವಿಯೋಗರಹಿತನು ಅಂಶಗಳನು ಏಕತ್ರವೈದಿಸುವ//8//


ಭಾರ್ಯರಿಂದೊಡಗೂಡಿ ಕಾರಣಕಾರ್ಯ ವಸ್ತುಗಳಲ್ಲಿ

ಪ್ರೆರಕಪ್ರೇರ್ಯ ರೂಪಗಳಿಂದ ಪಟತಂತುಗಳವೊಳಿದ್ದು

ಸೂರ್ಯ ಕಿರಣಗಳಂತೆ ತನ್ನಯ ವೀರ್ಯದಿಂದಲಿ ಕೊಡುತ ಕೊಳುತಿಹ

ಅನಾರ್ಯರಿಗೆ ಈತನ ವಿಹಾರವು ಗೋಚರಿಪುದೇನೋ//9//


ಜನಕ ತನ್ನ ಆತ್ಮಜಗೆ ವರ ಭೂಷಣದುಕೂಲವ ತೊಡಿಸಿ

ತಾ ವಂದನೆಯ ಕೈಕೊಳುತ ಹರಸುತ ಹರುಷಬಡುವಂತೆ

ವನರುಹೇಕ್ಷಣ ಪೂಜ್ಯ ಪೂಜಕನು ಎನಿಸಿ ಪೂಜಾಸಾಧನ

ಪದಾರ್ಥವನು ತನಗೆ ತಾನಾಗಿ ಫಲಗಳನೀವ ಭಜಕರಿಗೆ//10//


ತಂದೆ ಬಹು ಸಂಭ್ರಮದಿ ತನ್ನಯ ಬಂಧು ಬಳಗವ ನೆರಹಿ

ಮದುವೆಯ ನಂದನಗೆ ತಾ ಮಾಡಿ ಮನೆಯೊಳಗಿಡುವ ತೆರದಂತೆ

ಇಂದಿರಾಧವ ತನ್ನ ಇಚ್ಚಯಲಿಂದ ಗುಣಗಳ ಚೇತನಕೆ ಸಂಬಂಧಗೈಸಿ

ಸುಖಾಸುಖಾತ್ಮಕ ಸಂಸೃತಿಯೊಳು ಇಡುವ//11//


ತೃಣ ಕೃತ ಆಲಯದೊಳಗೆ ಪೋಗೆ ಸಂದಣಿಸಿ ಪ್ರತಿ ಛಿದ್ರದಲಿ ಪೊರಮಟ್ಟು

ಅನಳ ನಿರವನು ತೋರಿ ತೋರದಲಿಪ್ಪ ತೆರದಂತೆ

ವನಜಾಂಡದೊಳು ಅಖಿಳ ಜೀವರ ತನುವಿನ ಒಳ ಹೊರಗೆ ಇದ್ದು

ಕಾಣಿಸದೆ ಅನಿಮಿಶೇಷನು ಸಕಲ ಕರ್ಮವ ಮಾಳ್ಪನು ಅವರಂತೆ//12//


ಪಾದಪಗಳ ಅಡಿಗೆ ಎರೆಯೆ ಸಲಿಲವು ತೋದು ಕಂಬಿಗಳು ಉಬ್ಬಿ

ಪುಷ್ಪ ಸ್ವಾದು ಫಲವ ಈವಂದದಲಿ ಸರ್ವೇಶ್ವರನು

ಜನರ ಆರಾಧನೆಯ ಕೈಕೊಂಡು ಬ್ರಹ್ಮ ಭವಾದಿಗಳ ನಾಮದಲಿ ಫಲವಿತ್ತು

ಆದರಿಸುವನು ತನ್ನ ಮಹಿಮೆಯ ತೋರಗೊಡ ಜನಕೆ//13//


ಶೃತಿತತಿಗಳಿಗೆ ಗೋಚರಿಸದ ಅಪ್ರತಿಮ ಅಜಾನಂದಾತ್ಮನು ಅಚ್ಯುತ ವಿತತ

ವಿಶ್ವಾಧಾರ ವಿದ್ಯಾಧೀಶ ವಿಧಿ ಜನಕ

ಪ್ರತಿದಿವಸ ಚೇತನರೊಳಗೆ ಪ್ರಾಕೃತ ಪುರುಷನಂದದಲಿ ಸಂಚರಿಸುತ

ನಿಯಮ್ಯ ನಿಯಾಮಕನು ತಾನಾಗಿ ಸಂತೈಪ//14//


ಮನ ವಿಷಯದೊಳಗೆ ಇರಿಸಿ ವಿಷಯವ ಮನದೊಳಗೆ ನೆಲೆಗೊಳಿಸಿ

ಬಲು ನೂತನವು ಸುಸಮೀಚೀನವಿದು ಉಪಾದೇಯವೆಂದೆನಿಸಿ

ಕನಸಿಲಾದರು ತನ್ನ ಪಾದದ ನೆನೆವನು ಈಯದೆ

ಸರ್ವರೊಳಗಿದ್ದು ಅನುಭವಿಸುವನು ಸ್ಥೂಲ ವಿಷಯವ ವಿಶ್ವನೆಂದೆನಿಸಿ//15//


ತೋದಕನು ತಾನಾಗಿ ಮನ ಮೊದಲಾದ ಕರಣದೊಳು ಇದ್ದು ವಿಷಯವ ನೈದುವನು

ನಿಜಪೂರ್ಣ ಸುಖಮಯ ಗ್ರಾಹ್ಯ ಗ್ರಾಹಕನು

ವೇದ ವೇದ್ಯನು ತಿಳಿಯದವನೋಪಾದಿ ಭುಂಜಿಸುತ

ಎಲ್ಲರೊಳಗೆ ಆಹ್ಲಾದ ಪಡುವನು ಭಕ್ತವತ್ಸಲ ಭಾಗ್ಯಸಂಪನ್ನ//16//


ನಿತ್ಯನಿಗಮಾತೀತ ನಿರ್ಗುಣ ಭೃತ್ಯವತ್ಸಲ ಭಯವಿನಾಶನ

ಸತ್ಯಕಾಮ ಶರಣ್ಯ ಶ್ಯಾಮಲ ಕೋಮಲಾಂಗ ಸುಖಿ

ಮತ್ತನಂದದಿ ಮರ್ತ್ಯರ ಒಳ ಹೊರಗೆ ಎತ್ತ ನೋಡಲು ಸುತ್ತುತ ಇಪ್ಪನು

ಅತ್ಯಧಿಕ ಸಂತೃಪ್ತ ತ್ರಿಜಗದ್ವ್ಯಾಪ್ತ ಪರಮಾಪ್ತ//17//


ಪವಿ ಹರಿನ್ಮಣಿ ವಿದ್ರುಮದ ಸಚ್ಛವಿಗಳ ಅಂದದಿ

ರಾಜಿಸುತ ಮಾಧವ ನಿರಂತರ ಮಾನವ ದಾನವರೊಳು ಇದ್ದು

ತ್ರಿವಿಧ ಗುಣ ಕರ್ಮ ಸ್ವಭಾವವ ಪವನಮುಖ ದೇವಾಂತರಾತ್ಮಕ

ದಿವಸ ದಿವಸದಿ ವ್ಯಕ್ತಮಾಡುತಲಿ ಅವರೊಳಿದ್ದು ಉಣಿಪ//18//


ಅಣು ಮಹತ್ತಿನೊಳು ಇಪ್ಪ ಘನ ಪರಮಣುವಿನೊಳು ಅಡಗಿಸುವ

ಸೂಕ್ಷ್ಮವ ಮುಣುಗಿಸುವ ತೇಲಿಸುವ ಸ್ಥೂಲಗಳ ಅವನ ಮಾಯವಿದು

ದನುಜ ರಾಕ್ಷಸರು ಎಲ್ಲರು ಇವನೊಳು ಮುನಿದು ಮಾಡುವುದೇನು

ಉಲೂಖಲ ಒನಕೆಗಳು ಧಾನ್ಯಗಳ ಹಣಿವಂದದಲಿ ಸಂಹರಿಪ//19//


ದೇವ ಮಾನವ ದಾನವರು ಎಂದು ಈ ವಿಧದಲಿ ಆವಾಗಲಿ ಇಪ್ಪರು

ಮೂವರೊಳಗೆ ಇವಗೆ ಇಲ್ಲ ಸ್ನೇಹ ಉದಾಸೀನ ದ್ವೇಷ

ಜೀವರ ಅಧಿಕಾರ ಅನುಸಾರದಲಿ ಈವ ಸುಖ ಸಂಸಾರ ದುಃಖವ

ತಾ ಉಣದಲೆ ಅವರವರಿಗೆ ಉಣಿಸುವ ನಿರ್ಗತಾಶನನು//20//


ಎಲ್ಲಿ ಕೇಳಿದರೆ ಎಲ್ಲಿ ನೋಡಿದರೆ ಎಲ್ಲಿ ಬೇಡಿದರೆ ಎಲ್ಲಿ ನೀಡಿದರೆ

ಎಲ್ಲಿ ಓಡಿದರೆ ಎಲ್ಲಿ ಆಡಿದರೆ ಅಲ್ಲೇ ಇರುತಿಹನು

ಬಲ್ಲಿದರಿಗೆ ಅತಿ ಬಲ್ಲಿದನು ಸರಿಯಿಲ್ಲ ಇವಗೆ ಅಲ್ಲಿ ನೋಡಲು

ಖುಲ್ಲಮಾನವರೊಲ್ಲನು ಅಪ್ರತಿಮಲ್ಲ ಜಗಕೆಲ್ಲ//21//


ತಪ್ತ ಲೋಹವು ನೋಳ್ಪ ಜನರಿಗೆ ಸಪ್ತ ಜಿಹ್ವವ ತೆರದಿ ತೋರ್ಪದು

ಲುಪ್ತ ಪಾವಕ ಲೋಹ ಕಾಂಬುದು ಪೂರ್ವದೋಪಾದಿ

ಸಪ್ತವಾಹನ ನಿಖಿಳ ಜನರೊಳು ವ್ಯಾಪ್ತನು ಆದುದರಿಂದ

ಸರ್ವರೂ ಆಪ್ತರು ಆಗಿಹರು ಎಲ್ಲ ಕಾಲದಿ ಕೈಕೊಂಡು//22//


ವಾರಿದನು ಮಳೆಗರೆಯೆ ಬೆಳೆದಿಹ ಭೂರುಹಂಗಳು ಚಿತ್ರ ಫಲರಸ

ಬೇರೆ ಬೇರೆ ಇಪ್ಪಂತೆ ಬಹುವಿಧ ಜೀವರೊಳಗೆ ಇದ್ದು ಮಾರಮಣನು

ಅವರವರ ಯೋಗ್ಯತೆ ಮೀರದಲೆ ಗುಣಕರ್ಮಗಳ ಅನುಸಾರ ನಡೆಸುವ

ದೇವನಿಗೆ ವೈಷಮ್ಯವೆಲ್ಲಿಹುದೋ//23//


ವಾರಿಜಾಪ್ತನ ಕಿರಣ ಮಣಿಗಳ ಸೇರಿ ತತ್ತತ್ ವರ್ಣಗಳನು

ವಿಕಾರಗೈಸದೆ ನೋಳ್ಪರಿಗೆ ಕಂಗೊಳಿಸುವಂದದಲಿ

ಮಾರಮಣ ಲೋಕತ್ರಯದೊಳು ಇಹ ಮೂರುವಿಧ ಜೀವರೊಳಗೆ

ಇದ್ದು ವಿಹಾರಮಾಡುವನು ಅವರ ಯೋಗ್ಯತೆ ಕರ್ಮವ ಅನುಸರಿಸಿ//24//


ಜಲವನು ಅಪಹರಿಸುವ ಘಳಿಗೆ ಬಟ್ಟಲನು ಉಳಿದು

ಜಯಘಂಟೆ ಕೈಪಿಡಿದು ಎಳೆದು ಹೊಡೆವಂದದಲಿ

ಸಂತತ ಕರ್ತೃ ತಾನಾಗಿ ಹಲಧರಾನುಜ ಪುಣ್ಯ ಪಾಪದ ಫಲಗಳನು

ದೇವಾಸುರರ ಗಣದೊಳು ವಿಭಾಗವ ಮಾಡಿ ಉಣಿಸುತ ಸಾಕ್ಷಿಯಾಗಿಪ್ಪ//25//


ಪೊಂದಿಕೊಂಡಿಹ ಸರ್ವರೊಳು ಸಂಬಂಧವಾಗದೆ

ಸಕಲಕರ್ಮವ ಅರಂದದಲಿ ತಾ ಮಾಡಿಮಾಡಿಪ ತತ್ಫಲಗಳುಣದೆ

ಕುಂದದೆ ಅಣುಮಾಹತ್ತು ಎನಿಪ ಘಟಮಂದಿರದಿ ಸರ್ವತ್ರ ತುಂಬಿಹ

ಬಾಂದಳದ ತೆರೆದಂತೆ ಇರುತಿಪ್ಪನು ರಮಾರಮಣ//26//


ಕಾದ ಕಬ್ಬಿಣ ಹಿಡಿದು ಬಡಿಯಲು ವೇದನೆಯು ಲೋಹಗಳಿಗೆ ಅಲ್ಲವೆ

ಆದುದೇನೈ ಅನಳಗಾ ವ್ಯಥೆ ಏನು ಮಾಡಿದರು

ಆದಿದೇವನು ಸರ್ವ ಜೀವರ ಕಾದುಕೊಂಡಿಹನು ಒಳಹೊರಗೆ

ದುಃಖಾದಿಗಳು ಸಂಬಂಧವಾಗುವವೇನೋ ಚಿನ್ಮಯಗೆ//27//


ಮಳಲ ಮನೆಗಳ ಮಾಡಿ ಮಕ್ಕಳು ಕಾಲದಲಾಡಿ ಮೋದದಿ ತುಳಿದು ಕೆಡಿಸುವ ತೆರದಿ

ಲಕ್ಷ್ಮೀರಮಣ ಲೋಕಗಳ ಹಲವು ಬಗೆಯಲಿ ನಿರ್ಮಿಸುವ

ನಿಶ್ಚಲನು ತಾನಾಗಿದ್ದು ಸಲಹುವ

ಎಲರುಣಿಯವೋಳ್ ನುಂಗುವಗೆ ಎಲ್ಲಿಹುದೋ ಸುಖ ದುಃಖ//28//


ವೇಷಭಾಷೆಗಳಿಂದ ಜನರ ಪ್ರಮೋಷಗೈಸುವ ನಟಪುರುಷನೋಳ್

ದೋಷದೂರನು ಲೋಕದೊಳು ಬಹುರೂಪ ಮಾತಿನಲಿ ತೋಷಿಸುವನು

ಅವರವರ ಮನದ ಅಭಿಲಾಷೆಗಳ ಪೂರೈಸುತ ಅನುದಿನ ಪೋಷಿಸುವ

ಪೂತಾತ್ಮ ಪೂರ್ಣ ಆನಂದ ಜ್ಞಾನಮಯ//29//


ಅಧಮ ಮಾನವನು ಓರ್ವ ಮಂತ್ರೌಷಧಗಳನು ತಾನರಿತು

ಪಾವಕೋದಕಗಳ ಸಂಬಂಧವಿಲ್ಲದಲಿಪ್ಪನು ಅದರೊಳಗೆ

ಪದುಮಜ ಅಂಡ ಉದರನು ಸರ್ವರ ಹೃದಯದೊಳಗೆ ಇರೆ

ಕಾಲಗುಣಕರ್ಮದ ಕಲುಷ ಸಂಬಂಧವಾಗುವುದೇ ನಿರಂಜನಗೆ//30//


ಒಂದು ಗುಣದೊಳು ಅನಂತ ಗುಣಗಳು ಒಂದು ರೂಪದೊಳು ಇಹವು

ಲೋಕಗಳ ಒಂದೇ ರೂಪದಿ ಧರಿಸಿ ತದ್ಗತ ಪದಾರ್ಥದ ಒಳ ಹೊರಗೆ

ಬಾಂದಳದೊಳಿದ್ದು ಬಹು ಪೆಸರಿಂದ ಕರೆಸುತ

ಪೂರ್ಣ ಜ್ನಾನಾನಂದಮಯ ಪರಿಪರಿ ವಿಹಾರವ ಮಾಡಿ ಮಾಡಿಸುವ//31//


ಎಲ್ಲರೊಳು ತಾನಿಪ್ಪ ತನ್ನೊಳಗೆ ಎಲ್ಲರನು ಧರಿಸಿಹನು

ಅಪ್ರತಿಮಲ್ಲ ಮನ್ಮಥಜನಕ ಜಗದ ಆದಿ ಅಂತ ಮಧ್ಯಗಳ ಬಲ್ಲ

ಬಹುಗುಣ ಭರಿತ ದಾನವ ದಲ್ಲಣ ಜಗನ್ನಾಥ ವಿಠಲ

ಸೊಲ್ಲು ಲಾಲಿಸಿ ಸ್ತಂಭದಿಂದಲಿ ಬಂದ ಭಕುತನಿಗೆ//32//


 
//ಇತಿ ಶ್ರೀ ವ್ಯಾಪ್ತಿ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು

Wednesday, December 19, 2012

ಶ್ರೀ ಹರಿಕಥಾಮೃತಸಾರ - 2

//ಶ್ರೀ ಗುರುಭ್ಯೋ ನಮಃ//


//ಪರಮ ಗುರುಭ್ಯೋ ನಮಃ//


//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//


ಶ್ರೀ ಜಗನ್ನಾಥದಾಸ ವಿರಚಿತ


ಶ್ರೀ ಹರಿಕಥಾಮೃತಸಾರ


//ಕರುಣಾ ಸಂಧಿ//


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಶ್ರವಣ ಮನಕಾನಂದವೀವುದು ಭವಜನಿತ ದುಃಖಗಳ ಕಳೆವುದು

ವಿವಿಧ ಭೋಗಗಳು ಇಹಪರಂಗಳಲಿ ಇತ್ತು ಸಲಹುವುದು

ಭುವನ ಪಾವನವೆನಿಪ ಲಕ್ಷ್ಮೀ ಧವನ ಮಂಗಳ ಕಥೆಯ

ಪರಮ ಉತ್ಸವದಿ ಕಿವಿಗೊಟ್ಟು ಆಲಿಪುದು ಭೂಸುರರು ದಿನದಿನದಿ//1//


ಮಳೆಯ ನೀರು ಓಣಿಯೊಳು ಪರಿಯಲು, ಬಳಸರು ಊರೊಳಗೆ ಇದ್ದ ಜನರು

ಆ ಜಲವು ಹೆದ್ದೊರೆಗೂಡೆ ಮಜ್ಜನಪಾನ ಗೈದಪರು

ಕಲುಷ ವಚನಗಳ ಆದಡೆಯು, ಬಾಂಬೊಳೆಯ ಪೆತ್ತನ ಪಾದ ಮಹಿಮ

ಆ ಜಲದಿ ಪೊಕ್ಕದರಿಂದ ಮಾಣ್ದಪರೆ ಮಹೀಸುರರು//2//


ಶೃತಿತತಿಗಳ ಅಭಿಮಾನಿ ಲಕ್ಷ್ಮೀಸ್ತುತಿಗಳಿಗೆ ಗೋಚರಿಸದ

ಅಪ್ರತಿಹತ ಮಹೈಶ್ವರ್ಯಾದಿ ಅಖಿಲ ಸದ್ಗುಣ ಗಣಾಂಭೋಧಿ

ಪ್ರತಿದಿವಸ ತನ್ನಂಘ್ರಿ ಸೇವಾರತ ಮಹಾತ್ಮರು ಮಾಡುತಿಹ

ಸಂಸ್ತುತಿಗೆವಶನಾಗುವೆನು ಇವನ ಕಾರುಣ್ಯಕೆ ಏನೆಂಬೆ//3//


ಮನವಚನಕೆ ಅತಿದೂರ ನೆನೆವರನು ಅನುಸರಿಸಿ ತಿರುಗುವನು ಜಾಹ್ನವಿ ಜನಕ

ಜನರೊಳಗಿದ್ದು ಜನಿಸುವ ಜಗದುದರ ತಾನು

ಘನಮಹಿಮ ಗಾಂಗೇಯನುತ ಗಾಯನವ ಕೇಳುತ

ಗಗನಚರ ವಾಹನ ದಿವೌಕಸರೊಡನೆ ಚರಿಸುವ ಮನೆಮನೆಗಳಲ್ಲಿ//4//


ಮಲಗಿ ಪರಮಾದರದಿ ಪಾಡಲು ಕುಳಿತು ಕೇಳುವ

ಕುಳಿತು ಪಾಡಲು ನಿಲುವ ನಿಂತರೆ ನಲಿವ ನಲಿದರೆ ಒಲಿವ ನಿಮಗೆಂಬ

ಸುಲಭನೋ ಹರಿ ತನ್ನವರನು ಅರಘಳಿಗೆ ಬಿಟ್ಟಗಲನು

ರಮಾಧವನ ಒಲಿಸಲರಿಯದೆ ಪಾಮರರು ಬಳಲುವರು ಭವದೊಳಗೆ//5//


 
ಮನದೊಳಗೆ ತಾನಿದ್ದು ಮನವೆಂದು ಎನಿಸಿಕೊಂಬನು

ಮನದ ವೃತ್ತಿಗಳ ಅನುಸರಿಸಿ ಭೋಗಂಗಳೀವನು ತ್ರಿವಿಧ ಚೇತನಕೆ

ಮನವಿತ್ತರೆ ತನ್ನನೀವನು ತನುವ ದಂಡಿಸಿ ದಿನದಿನದಿ ಸಾಧನವ ಮಾಳ್ಪರಿಗೆ

ಇತ್ತಪನು ಸ್ವರ್ಗಾದಿ ಭೋಗಗಳ//6//


ಪರಮ ಸತ್ಪುರುಷಾರ್ಥರೂಪವನು ಹರಿಯು ಲೋಕಕೆ ಎಂದು

ಪರಮಾದರದಿ ಸದುಪಾಸನೆಯ ಗೈವರಿಗೆ ಇತ್ತಪನು ತನ್ನ

ಮರೆದು ಧರ್ಮಾರ್ಥಗಳ ಕಾಮಿಸುವರಿಗೆ ನಗುತ ಅತಿಶೀಘ್ರದಿಂದಲಿ

ಸುರಪತನಯ ಸುಯೋಧನರಿಗೆ ಇತ್ತಂತೆ ಕೊಡುತಿಪ್ಪ //7//


ಜಗವನೆಲ್ಲವ ನಿರ್ಮಿಸುವ ನಾಲ್ಮೊಗನೊಳಗೆ ತಾನಿದ್ದು ಸಲಹುವ

ಗಗನಕೇಶನೊಳಿದ್ದು ಸಂಹರಿಸುವನು ಲೋಕಗಳ

ಸ್ವಗತಭೇದ ವಿವರ್ಜಿತನು ಸರ್ವಗ ಸದಾನಂದೈಕ ದೇಹನು

ಬಗೆಬಗೆಯ ನಾಮದಲಿ ಕರೆಸುವ ಭಕುತರನು ಪೊರೆವ//8//


ಒಬ್ಬನಲಿ ನಿಂದಾಡುವನು ಮತ್ತೊಬ್ಬನಲಿ ನೋಡುವನು

ಬೇಡುವನು ಒಬ್ಬನಲಿ ನೀಡುವನು ಮಾತಾಡುವನು ಬೆರಗಾಗಿ

ಅಬ್ಬರದ ಹೆದ್ದೈವನು ಇವ ಮತ್ತೊಬ್ಬರನ ಲೆಕ್ಕಿಸನು

ಲೋಕದೊಳು ಒಬ್ಬನೇ ತಾ ಬಾಧ್ಯ ಬಾಧಕನಾಹ ನಿರ್ಭೀತ//9//


ಶರಣಜನ ಮಂದಾರ ಶಾಶ್ವತ ಕರುಣಿ ಕಮಲಾಕಾಂತ ಕಾಮದ

ಪರಮ ಪಾವನತರ ಸುಮಂಗಳ ಚರಿತ ಪಾರ್ಥಸಖ

ನಿರುಪಮಾನಂದಾತ್ಮ ನಿರ್ಗತ ದುರಿತ ದೇವವರೇಣ್ಯನೆಂದು

ಆದರದಿ ಕರೆಯಲು ಬಂದೊದಗುವನು ತನ್ನವರ ಬಳಿಗೆ//10//


ಜನನಿಯನು ಕಾಣದಿಹ ಬಾಲಕ ನೆನೆನೆನದು ಹಲುಬುತಿರೆ

ಕತ್ತಲೆ ಮನೆಯೊಳು ಅಡಗಿದ್ದು ಅವನ ನೋಡುತ ನಗುತ ಹರುಷದಲಿ

ತನಯನಂ ಬಿಗಿದಪ್ಪಿ ರಂಬಿಸಿ ಕನಲಿಕೆಯ ಕಳೆವಂತೆ

ಮಧುಸೂದನನು ತನ್ನವರು ಇದ್ದೆಡೆಗೆ ಬಂದೊದಗಿ ಸಲಹುವನು//11//


ಇಟ್ಟಿಕಲ್ಲನು ಭಕುತಿಯಿಂದಲಿ ಕೊಟ್ಟ ಭಕುತಗೆ ಮೆಚ್ಚಿ ತಣ್ಣನೆ ಕೊಟ್ಟ

ಬಡಬ್ರಾಹ್ಮಣನ ಒಪ್ಪಿಡಿಯವಲಿಗೆ ಅಖಿಳಾರ್ಥ

ಕೆಟ್ಟ ಮಾತುಗಳೆಂದ ಚೈದ್ಯನ ಪೊಟ್ಟೆಯೊಳಗಿಂಬಿಟ್ಟ

ಬಾಣದಲಿಟ್ಟ ಭೀಷ್ಮನ ಅವಗುಣಗಳೆಣಿಸಿದನೆ ಕರುಣಾಳು//12//


ಧನವ ಸಂರಕ್ಷಿಸುವ ಫಣಿ ತಾನುಣದೆ ಮತ್ತೊಬ್ಬರಿಗೆ ಕೊಡದೆ

ಅನುದಿನದಿ ನೋಡುತ ಸುಖಿಸುವಂದದಿ

ಲಕುಮಿವಲ್ಲಭನು ಪ್ರಣತರನು ಕಾಯ್ದಿಹನು ನಿಷ್ಕಾಮನದಿ

ನಿತ್ಯಾನಂದಮಯ ದುರ್ಜನರ ಸೇವೆಯನು ಒಲ್ಲನು ಅಪ್ರತಿಮಲ್ಲ ಜಗಕೆಲ್ಲ//13//


ಬಾಲಕನ ಕಲಭಾಷೆ ಜನನಿ ಕೇಳಿ ಸುಖಪಡುವಂತೆ

ಲಕ್ಷ್ಮೀಲೋಲ ಭಕ್ತರು ಮಾಡುತಿಹ ಸಂಸ್ತುತಿಗೆ ಹಿಗ್ಗುವನು

ತಾಳ ತನ್ನವರಲ್ಲಿ ಮಾಡ್ವ ಅವಹೇಳನವ

ಹೆದ್ದೈವ ವಿದುರನ ಆಲಯದಿ ಪಾಲುಂಡು ಕುರುಪನ ಮಾನವನೆ ಕೊಂಡ//14//


ಸ್ಮರಿಸುವವರ ಅಪರಾಧಗಳ ತಾಸ್ಮರಿಸ ಸಕಲ ಇಷ್ಟ ಪ್ರದಾಯಕ

ಮರಳಿ ತನಗೆ ಅರ್ಪಿಸಲು ಕೊಟ್ಟುದ ಅನಂತಮಡಿ ಮಾಡಿ ಪರಿಪರಿಯಲಿಂದ ಉಣಿಸಿ

ಸುಖ ಸಾಗರದಿ ಲೋಲಾಡಿಸುವ ಮಂಗಳಚರಿತ

ಚಿನ್ಮಯಗಾತ್ರ ಲೋಕಪವಿತ್ರ ಸುಚರಿತ್ರ//15//


ಏನು ಕರುಣನಿಧಿಯೋ ಹರಿ ಮತ್ತೇನು ಭಕ್ತಾಧೀನನೋ

ಇನ್ನೇನು ಈತನ ಲೀಲೆ ಇಚ್ಚಾಮಾತ್ರದಲಿ ಜಗವ ತಾನೇ ಸೃಜಿಸುವ ಪಾಲಿಸುವ

ನಿರ್ವಾಣ ಮೊದಲಾದ ಅಖಿಲ ಲೋಕಸ್ಥಾನದಲಿ

ಮತ್ತೆ ಅವರನು ಇಟ್ಟು ಆನಂದ ಬಡಿಸುವನು//16//


ಜನಪ ಮೆಚ್ಚಿದರೆ ಈವ ಧನವಾಹನ ವಿಭೂಷಣ ವಸನಭೂಮಿ

ತನುಮನಗಳ ಇತ್ತು ಆದರಿಪರು ಉಂಟೇನೋ ಲೋಕದೊಳು

ಅನವರತ ನೆನೆವವರ ಅನಂತಾಸನವೆ ಮೊದಲಾದ ಆಲಯದೊಳಿಟ್ಟು

ಅಣುಗನಂದದಲಿ ಅವರ ವಶನಾಗುವ ಮಹಾಮಹಿಮ//17//


ಭುವನ ಪಾವನ ಚರಿತ ಪುಣ್ಯಶ್ರವಣಕೀರ್ತನ ಪಾಪನಾಶನ

ಕವಿಭಿರೀಡಿತ ಕೈರವದಳಶ್ಯಾಮ ನಿಸ್ಸೀಮ

ಯುವತಿವೇಷದಿ ಹಿಂದೆ ಗೌರೀಧವನ ಮೋಹಿನಿ ಕೆಡಿಸಿ ಉಳಿಸಿದ

ಇವನ ಮಾಯವ ಗೆಲುವನಾವನು ಈ ಜಗತ್ರಯದಿ//18//


ಪಾಪಕರ್ಮವ ಸಹಿಸುವಡೆ ಲಕ್ಷ್ಮೀಪತಿಗೆ ಸಮರಾದ ದಿವಿಜರನು

ಈ ಪಯೋಜಭವಾಂಡದೊಳಗೆ ಆವಲ್ಲಿ ನಾ ಕಾಣೆ

ಗೊಪಗುರುವಿನ ಮಡದಿಭೃಗುನಗಚಾಪ ಮೊದಲಾದವರು ಮಾಡ್ದ

ಮಹಾಪರಾಧಗಳ ಎಣಿಸಿದನೆ ಕರುಣಾ ಸಮುದ್ರ ಹರಿ//19//


ಅಂಗುಟಾಗ್ರದಿ ಜನಿಸಿದ ಅಮರತರಂಗಿಣಿಯು ಲೋಕತ್ರಯಗಳ ಅಘಹಿಂಗಿಸುವಳು

ಅವ್ಯಾಕೃತಾಶಾಂತ ವ್ಯಾಪಿಸಿದ ಇಂಗಡಲ ಮಗಳ ಒಡೆಯನ

ಅಂಗೋಪಾಂಗಗಳಲಿ ಇಪ್ಪ

ಅಮಲಾನಂತ ಸುಮಂಗಳಪ್ರದ ನಾಮ ಪಾವನಮಾಳ್ಪದೇನರಿದು//20//


ಕಾಮಧೇನು ಸುಕಲ್ಪತರು ಚಿಂತಾಮಣಿಗಳು

ಅಮರೇಂದ್ರ ಲೋಕದಿ ಕಾಮಿತಾರ್ಥಗಳು ಈವವಲ್ಲದೆ ಸೇವೆ ಮಾಳ್ಪರಿಗೆ

ಶ್ರೀಮುಕುಂದನ ಪರಮ ಮಂಗಳನಾಮ ನರಕಸ್ಥರನು ಸಲಹಿತು

ಪಾಮರರ ಪಂಡಿತರೆನಿಸಿ ಪುರುಷಾರ್ಥ ಕೊಡುತಿಹುದು//21//


ಮನದೊಳಗೆ ಸುಂದರ ಪದಾರ್ಥವ ನೆನೆದು ಕೊಡೆ ಕೈಕೊಂಡು

ಬಲು ನೂತನ ಸುಶೋಭಿತ ಗಂಧ ಸುರಸೋಪೇತ ಫಲರಾಶಿ

ದ್ಯುನದಿ ನಿವಹಗಳಂತೆ ಕೊಟ್ಟು ಅವರನು ಸದಾ ಸಂತೈಸುವನು

ಸದ್ಗುಣವ ಕದ್ದವರ ಅಘವ ಕದಿವನು ಅನಘನೆಂದೆನಿಸಿ//22//


ಚೇತನಾ ಚೇತನ ವಿಲಕ್ಷಣ ನೂತನ ಪದಾರ್ಥಗಳೊಳಗೆ ಬಲುನೂತನ

ಅತಿಸುಂದರಕೆ ಸುಂದರ ರಸಕೆ ರಸರೂಪ

ಜಾತರೂಪೋದರ ಭವ ಆದ್ಯರೊಳು ಆತತ ಪ್ರತಿಮ ಪ್ರಭಾವ

ಧರಾತಳದೊಳು ಎಮ್ಮೊಡನೆ ಆಡುತಲಿಪ್ಪ ನಮ್ಮಪ್ಪ//23//


ತಂದೆ ತಾಯ್ಗಳು ತಮ್ಮ ಶಿಶುವಿಗೆ ಬಂದ ಭಯಗಳ ಪರಿಹರಿಸಿ

ನಿಜ ಮಂದಿರದಿ ಬೇಡಿದುದನು ಇತ್ತು ಆದರಿಸುವಂದದಲಿ

ಹಿಂದೆ ಮುಂದೆ ಎಡಬಲದಿ ಒಳಹೊರಗೆ ಇಂದಿರೇಶನು ತನ್ನವರನು

ಎಂದೆಂದು ಸಲಹುವನು ಆಗಸದೊಳ್ ಎತ್ತ ನೋಡಿದರು//24//


ಒಡಲ ನೆಳಲಂದದಲಿ ಹರಿ ನಮ್ಮೊಡನೆ ತಿರುಗುವನು

ಒಂದರೆಕ್ಷಣ ಬಿಡದೆ ಬೆಂಬಲವಾಗಿ ಭಕ್ತಾದೀನನೆಂದೆನಿಸಿ

ತಡೆವ ದುರಿತೌಘಗಳ ಕಾಮದ ಕೊಡುವ ಸಕಲೇಷ್ಟಗಳ

ಸಂತತ ನಡೆವ ನಮ್ಮಂದದಲಿ ನವಿಸು ವಿಶೇಷ ಸನ್ಮಹಿಮ//25//


ಬಿಟ್ಟವರ ಭವಪಾಶದಿಂದಲಿ ಕಟ್ಟುವನು ಬಹುಕಠಿಣನಿವ

ಶಿಷ್ಟೇಷ್ಟನೆಂದರಿದು ಅನವರತ ಸದ್ಭಕ್ತಿ ಪಾಶದಲಿ ಕಟ್ಟುವರ

ಭವಕಟ್ಟು ಬಿಡಿಸುವ ಸಿಟ್ಟಿನವನು ಇವನಲ್ಲ

ಕಾಮದ ಕೊಟ್ಟುಕಾವನು ಸಕಲ ಸೌಖ್ಯವನು ಇಹಪರಂಗಗಳಲಿ //26//


ಕಣ್ಣಿಗೆ ಎವೆಯಂದದಲಿ ಕೈ ಮೈ ತಿಣ್ಣಿಗೊದಗುವ ತೆರದಿ

ಪಲ್ಗಳು ಪಣ್ಣು ಫಲಗಳನಗಿದು ಜಿಹ್ವೆಗೆ ರಸವನೀವಂತೆ

ಪುಣ್ಯ ಫಲವ ಈವಂದದಲಿ ನುಡಿವೆಣ್ಣಿ ನಾಣ್ಮಾoಡದೊಳು

ಲಕ್ಷ್ಮಣನ ಅಣ್ಣನು ಒದಗುವ ಭಕ್ತರ ಅವಸರಕೆ ಅಮರಗಣ ಸಹಿತ//27//


ಕೊಟ್ಟದನು ಕೈಕೊಂಬ ಅರೆಕ್ಷಣಬಿಟ್ಟಗಲ ತನ್ನವರ

ದುರಿತಗಳ ಅಟ್ಟುವನು ದೂರದಲಿ ದುರಿತಾರಣ್ಯ ಪಾವಕನು

ಬೆಟ್ಟ ಬೆನ್ನಿಲಿ ಹೊರಿಸಿದವರೊಳು ಸಿಟ್ಟು ಮಾಡಿದನೇನೋ ಹರಿ

ಕಂಗೆಟ್ಟ ಸುರರಿಗೆ ಸುಧೆಯನು ಉಣಿಸಿದ ಮುರಿದನಹಿತರನಾ//28//


ಖೇದ ಮೋದ ಜಯಾಪಾಜಯ ಮೊದಲಾದ ದೋಷಗಳಿಲ್ಲ ಚಿನ್ಮಯ ಸಾದರದಿ

ತನ್ನಂಘ್ರಿಕಮಲವ ನಂಬಿ ಸ್ತುತಿಸುವರ ಕಾದುಕೊಂಡಿಹ

ಪರಮಕರುಣ ಮಹೋದಧಿಯು ತನ್ನವರು ಮಾಡ್ದ

ಮಹಾಪರಾಧಗಳ ನೋಡದಲೆ ಸಲಹುವ ಸರ್ವಕಾಮದನು//29//


ಮೀನಕೂರ್ಮ ವರಾಹ ನರಪಂಚಾನನ ಅತುಳ ಶೌರ್ಯ

ವಾಮನ ರೇಣುಕಾತ್ಮಜ ರಾವಣಾದಿನಿಶಾಚರಧ್ವಂಸಿ

ಧೇನುಕಾಸುರಮಥನ ತ್ರಿಪುರವ ಹಾನಿಗೈನಿಸಿದ ನಿಪುಣ

ಕಲಿಮುಖ ದಾನವರ ಸಂಹರಿಸಿ ಧರ್ಮದಿ ಕಾಯ್ದ ಸುಜನರನಾ//30//


ಶ್ರೀ ಮನೋರಮ ಶಮಲ ವರ್ಜಿತ ಕಾಮಿತಪ್ರದ

ಕೈರವದಳ ಶ್ಯಾಮ ಶಬಲ ಶರಣ್ಯ ಶಾಶ್ವತ ಶರ್ಕರಾಕ್ಷ ಸಖ

ಸಾಮಸನ್ನುತ ಸಕಲ ಗುಣಗಣಧಾಮ

ಶ್ರೀ ಜಗನ್ನಾಥ ವಿಠಲನು ಈ ಮಹಿಯೊಳು ಅವತರಿಸಿ ಸಲಹಿದ ಸಕಲ ಸುಜನರನಾ//31//


//ಇತಿ ಶ್ರೀ ಕರುಣಾ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು


Monday, December 17, 2012

ಶ್ರೀ ಹರಿಕಥಾಮೃತಸಾರ - 1

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಮಂಗಳಾಚರಣ ಸಂಧಿ//


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಶ್ರೀರಮಣಿ ಕರಕಮಲ ಪೂಜಿತ ಚಾರುಚರಣ ಸರೋಜ

ಬ್ರಹ್ಮ ಸಮೀರವಾಣಿ ಫಣೀಂದ್ರವೀಂದ್ರ ಭವ ಇಂದ್ರ ಮುಖ ವಿನುತ

ನೀರಜಭವಾಂಡ ಉದಯ ಸ್ಥಿತಿ ಕಾರಣನೆ ಕೈವಲ್ಯದಾಯಕ

ನಾರಸಿಂಹನೆ ನಮಿಪೆ ಕರುಣಿಪುದು ಎಮಗೆ ಮಂಗಳವ//1//


ಜಗದುದರನ ಅತಿ ವಿಮಲ ಗುಣರೂಪಗಳನು ಆಲೋಚನದಿ

ಭಾರತ ನಿಗಮತತಿಗಳ ಅತಿಕ್ರಮಿಸಿ ಕ್ರಿಯಾ ವಿಶೇಷಗಳ

ಬಗೆಬಗೆಯ ನೂತನವ ಕಾಣುತ ಮಿಗೆ ಹರುಷದಿಂ ಪೊಗಳಿ ಹಿಗ್ಗುವ

ತ್ರಿಗುಣಮಾನಿ ಮಹಾಲಕುಮಿ ಸಂತೈಸಲಿ ಅನುದಿನವು//2//


ನಿರುಪಮಾನಂದಾತ್ಮ ಭವ ನಿರ್ಜರ ಸಭಾಸಂಸೇವ್ಯ

ಋಜುಗಣದ ಅರಸೆ ಸತ್ವಪ್ರಚುರ ವಾಣೀಮುಖಸರೋಜೇನ

ಗರುಡ ಶೇಷ ಶಶಾಂಕದಳ ಶೇಖರರ ಜನಕ ಜಗದ್ಗುರುವೇ

ತ್ವಚ್ಚರಣಗಳಿಗೆ ಅಭಿವಂದಿಸುವೆ ಪಾಲಿಪುದು ಸನ್ಮತಿಯ//3//


ಆರುಮೂರೆರೆಡೊoದು ಸಾವಿರ ಮೂರೆರೆಡು ಶತಶ್ವಾಸ ಜಪಗಳ

ಮೂರು ವಿಧ ಜೀವರೊಳಗೆ ಅಬ್ಜಜಕಲ್ಪ ಪರಿಯಂತ ತಾ ರಚಿಸಿ

ಸತ್ವರಿಗೆ ಸುಖ ಸಂಸಾರ ಮಿಶ್ರರಿಗೆ ಅಧಮಜನರಿಗೆ

ಅಪಾರ ದುಃಖಗಳ ಈವ ಗುರು ಪವಮಾನ ಸಲಹೆಮ್ಮ//4//


ಚತುರವದನನ ರಾಣಿ ಅತಿರೋಹಿತ ವಿಮಲಾ ವಿಜ್ಞಾನಿ

ನಿಗಮ ಪ್ರತತಿಗಳಿಗಭಿಮಾನಿ ವೀಣಾಪಾಣಿ ಬ್ರಹ್ಮಾಣಿ

ನತಿಸಿ ಬೇಡುವೆ ಜನನಿ ಲಕ್ಷ್ಮೀಪತಿಯ ಗುಣಗಳ ತುತಿಪುದಕೆ

ಸನ್ಮತಿಯ ಪಾಲಿಸಿ ನೆಲೆಸು ನೀ ಮದ್ವದನ ಸದನದಲಿ//5//


ಕೃತಿರಮಣ ಪ್ರದ್ಯುಮ್ನನಂದನೆ ಚತುರವಿಂಶತಿ

ದೇವತೆಗಳಿಗೆ ಗುರುವೆನಿಸುತಿಹ ಮಾರುತನ ನಿಜಪತ್ನಿ

ಸತತ ಹರಿಯಲಿ ಗುರುಗಳಲಿ ಸದ್ಗತಿಯ ಪಾಲಿಸಿ

ಭಾಗವತ ಭಾರತ ಪುರಾಣ ರಹಸ್ಯ ತತ್ವಗಳು ಅರುಪು ಕರುಣದಲಿ //6//


ವೇದಪೀಠ ವಿರಿಂಚಿ ಭವ ಶುಕ್ರ ಆದಿಸುರ ವಿಜ್ಞಾನದಾಯಕ

ಮೋದ ಚಿನ್ಮಯ ಗಾತ್ರ ಲೋಕಪವಿತ್ರ ಸುಚರಿತ್ರ

ಛೇದ ಭೇದ ವಿಷಾದ ಕುಟಿಲಾಂತಾದಿ ಮಧ್ಯ ವಿದೂರ

ಆದಾನಾದಿ ಕಾರಣ ಬಾದರಾಯಣ ಪಾಹಿ ಸತ್ರಾಣ//7//


ಕ್ಷಿತಿಯೊಳಗೆ ಮಣಿಮಂತ ಮೊದಲಾದ ಅತಿ ದುರಾತ್ಮರು

ಒಂದಧಿಕ ವಿಂಶತಿ ಕುಭಾಷ್ಯವ ರಚಿಸೆ

ನಡುಮನೆಯೆಂಬ ಬ್ರಾಹ್ಮಣನ ಸತಿಯ ಜಠರದೊಳು ಅವತರಿಸಿ ಭಾರತೀರಮಣ

ಮಧ್ವಭಿದಾನದಿ ಚತುರದಶ ಲೋಕದಲಿ ಮೆರೆದ ಅಪ್ರತಿಮಗೆ ವಂದಿಸುವೆ//8//


ಪಂಚಭೇದಾತ್ಮಕ ಪ್ರಪಂಚಕೆ ಪಂಚರೂಪಾತ್ಮಕನೆ ದೈವಕ

ಪಂಚಮುಖ ಶಕ್ರಾದಿಗಳು ಕಿಂಕರರು ಶ್ರೀಹರಿಗೆ

ಪಂಚವಿಂಶತಿ ತತ್ವ ತರತಮ ಪಂಚಿಕೆಗಳನು ಪೇಳ್ದ

ಭಾವೀ ವಿರಿಂಚಿಯೆನಿಪ ಆನಂದತೀರ್ಥರ ನೆನೆವೆನನುದಿನವು//9//


ವಾಮದೇವ ವಿರಿಂಚಿತನಯ ಉಮಾಮನೋಹರ ಉಗ್ರ ಧೂರ್ಜಟಿ

ಸಾಮಜಾಜಿನ ವಸನಭೂಷಣ ಸುಮನಸೋತ್ತಂಸ ಕಾಮಹರ ಕೈಲಾಸ ಮಂದಿರ

ಸೋಮಸೂರ್ಯಾನಲ ವಿಲೋಚನ

ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಲವ//10//


ಕೃತ್ತಿವಾಸನೆ ಹಿಂದೆ ನೀ ನಾಲ್ವತ್ತು ಕಲ್ಪಸಮೀರನಲಿ ಶಿಷ್ಯತ್ವವಹಿಸಿ

ಅಖಿಳ ಆಗಮಾರ್ಥಗಳೋದಿ ಜಲಧಿಯೊಳು ಹತ್ತು ಕಲ್ಪದಿ ತಪವಗೈದು

ಆದಿತ್ಯರೊಳಗೆ ಉತ್ತಮನೆನಿಸಿ

ಪುರುಷೋತ್ತಮನ ಪರಿಯಂಕ ಪದವೈದಿದೆಯೋ ಮಹದೇವ//11//


ಪಾಕಶಾಸನ ಮುಖ್ಯ ಸಕಲ ದಿವೌಕಸರಿಗೆ ಅಭಿನಮಿಪೆ

ಋಷಿಗಳಿಗೆ ಏಕಚಿತ್ತದಿ ಪಿತೃಗಳಿಗೆ ಗಂಧರ್ವ ಕ್ಷಿತಿಪರಿಗೆ

ಆ ಕಮಲನಾಭದಿ ಯತಿಗಳಾನೀಕಕಾನಮಿಸುವೆನು ಬಿಡದೆ

ರಮಾಕಳತ್ರನ ದಾಸವರ್ಗಕೆ ನಮಿಪೆನು ಅನವರತ//12//


ಪರಿಮಳವು ಸುಮನದೊಳಗೆ ಅನಲನು ಅರಣಿಯೊಳಗೆ ಇಪ್ಪಂತೆ

ದಾಮೋದರನು ಬ್ರಹ್ಮಾದಿಗಳ ಮನದಲಿ ತೋರಿತೋರದಲೆ ಇರುತಿಹ

ಜಗನ್ನಾಥ ವಿಠಲನ ಕರುಣ ಪಡೆವ ಮುಮುಕ್ಷುಜೀವರು

ಪರಮ ಭಾಗವತರನು ಕೊಂಡಾಡುವುದು ಪ್ರತಿದಿನವು//13//


//ಇತಿ ಶ್ರೀ ಮಂಗಳಾಚರಣ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು





Thursday, December 13, 2012

ತೂಗಿರೆ ರಂಗನ ತೂಗಿರೆ ಕೃಷ್ಣನ ತೂಗಿರೆ ಅಚ್ಯುತಾನಂತನ

ತೂಗಿರೆ ರಂಗನ ತೂಗಿರೆ ಕೃಷ್ಣನ ತೂಗಿರೆ ಅಚ್ಯುತಾನಂತನ


ತೂಗಿರೆ ವರಗಿರಿಯಪ್ಪ ತಿಮ್ಮಪ್ಪನ ತೂಗಿರೆ ಕಾವೇರಿರಂಗಯ್ಯನ//



ನಾಗಲೋಕದಲ್ಲಿ ನಾರಾಯಣ ಮಲಗ್ಯಾನೆ ನಾಗಕನ್ನಿಕೆಯರು ತೂಗಿರೆ

ನಾಗವೇಣಿಯರು ನೇಣು ಪಿಡಿದುಕೊಂಡು ಬೇಗನೆ ತೊಟ್ಟಿಲ ತೂಗಿರೆ//



ಇಂದ್ರಲೋಕದಲ್ಲುಪೇಂದ್ರ ಮಲಗ್ಯಾನೆ ಇಂದುಮತಿಯರೆಲ್ಲ ತೂಗಿರೆ

ಇಂದ್ರಕನ್ನಿಕೆಯರು ಚಂದದಿ ಬಂದು ಮುಕುಂದನ ತೊಟ್ಟಿಲ ತೂಗಿರೆ//



ಆಲದೆಲೆಯಮೇಲೆ ಶ್ರೀಲೋಲ ಮಲಗ್ಯಾನೆ ನೀಲಕುಂತಳೆಯರು ತೂಗಿರೆ

ವ್ಯಾಳಶಯನ ಹರಿ ಮಲಗು ಮಲಗು ಎಂದು ಬಾಲಕೃಷ್ಣಯ್ಯನ ತೂಗಿರೆ//



ಸಾಸಿರನಾಮನೆ ಸರ್ವೋತ್ತಮನೆಂದು ಸೂಸುತ್ತ ತೊಟ್ಟಿಲ ತೂಗಿರೆ

ಲೇಸಾಗಿ ಮಡುವಿನೊಳ್ ಶೇಷನ ತುಳುದುಟ್ಟ ದೋಷವಿದೂರನ ತೂಗಿರೆ//



ಅರಳೆಲೆ ಮಾಗಾಯಿ ಕೊರಳ ಮುತ್ತಿನ ಹಾರ ತರಳನ ತೊಟ್ಟಿಲ ತೂಗಿರೆ

ಸಿರಿದೇವಿರಮಣನೆ ಪುರಂದರವಿಠಲನೆ ಕರುಣದಿ ಮಲಗೆಂದು ತೂಗಿರೆ//

Tuesday, December 4, 2012

ತುಂಗಾತೀರದಿ ನಿಂತ ಸುಯತಿವರನ್ಯಾರೆ ಪೇಳಮ್ಮ

ತುಂಗಾತೀರದಿ ನಿಂತ ಸುಯತಿವರನ್ಯಾರೆ ಪೇಳಮ್ಮ


ಸಂಗೀತಪ್ರಿಯ ಮಂಗಳ ಸುಗಣತರಂಗ ಮುನಿಕುಲೋತ್ತುಂಗ ಕಣಮ್ಮ//



ಚೆಲುವ ಸುಮುಖ ಫಣೆಯಲ್ಲಿ ತಿಲಕ ನಾಮಗಳು ನೋಡಮ್ಮ

ಜಲಜಮಣಿಯ ಕೊರಳಲ್ಲಿ ತುಳಸಿಮಾಲೆಗಳು ಪೇಳಮ್ಮ

ಸುಲಲಿತ ಕಮಂಡಲು ದಂಡವನೆ ಧರಿಸಿಹನೆ ನೋಡಮ್ಮ

ಕ್ಷುಲ್ಲ ಹಿರಣ್ಯಕನಲ್ಲಿ ಜನಿಸಿದ ಪ್ರಹ್ಲಾದನು ತಾನಿಲ್ಲಿಹನಮ್ಮ//



ಸುಂದರ ಚರಣಾರವಿಂದಕೆ ಭಕುತಿಯಲಿಂದ ನೋಡಮ್ಮ

ವಂದಿಸಿ ಸ್ತುತಿಸುವ ಭೂಸುರವೃಂದ ನೋಡಮ್ಮ

ಚಂದದಲ೦ಕೃತಿಯಿಂದ ಶೋಭಿಸುವಾನಂದ ನೋಡಮ್ಮ

ಹಿಂದೆ ವ್ಯಾಸಮುನಿಯೆಂದೆನಿಸಿದ ಕರ್ಮಂದಿಗಳರಸಘದಿಂದ ರಹಿತನೆ//



ಅಭಿನವ ಜನಾರ್ಧನ ವಿಠಲನ ಧ್ಯಾನಿಸುವ ನೋಡಮ್ಮ

ಅಭಿವಂದಿಸಿದವರಿಗೆ ಅಖಿಲಾರ್ಥವ ಸಲ್ಲಿಸುವ ನೋಡಮ್ಮ

ನಭಮಣಿಯಂದದಿ ವಿವಿಧದಿ ಶೋಭಿಸುವ ನೋಡಮ್ಮ

ಶುಭಗುಣಗಣನಿಧಿ ರಾಘವೇಂದ್ರ ಗುರು ಅಬುಜಭವಾಂಡದಿ ಪ್ರಬಲಕಾಣಮ್ಮ//

Monday, December 3, 2012

ಉಡುಪಿಯ ಶ್ರೀ ಕೃಷ್ಣನ ಅಲಂಕಾರಗಳು-2






Source : sodevadirajamutt.in

ತುಂಗಾತೀರ ವಿರಾಜಂ ಭಜಮನ

ತುಂಗಾತೀರ ವಿರಾಜಂ ಭಜಮನ


ರಾಘವೇಂದ್ರ ಗುರು ರಾಜಂ ಭಜಮನ//



ಮಂಗಳಕರ ಮಂತ್ರಾಲಯವಾಸಂ

ಶೃಂಗಾರನನ ರಜಿತಹಾಸಂ

ರಾಘವೇಂದ್ರ ಗುರು ರಾಜಂ ಭಜಮನ//



ಕರದೃತ ದಂಡ ಕಮಂಡಲುಮಲಂ

ಸುರುಚಿರ ಚೇಲಂ ಧೃತ ಮಣಿ ಮಾಲಂ

ರಾಘವೇಂದ್ರ ಗುರು ರಾಜಂ ಭಜಮನ//



ನಿರುಪಮ ಸುಂದರ ಕಾಯ ಸುಶೀಲಂ

ವರಕಮಲೇಶ ಪಿತ ನಿಜ ಸಕಲಂ

ರಾಘವೇಂದ್ರ ಗುರು ರಾಜಂ ಭಜಮನ//

Tuesday, November 27, 2012

ವಂದಿಪೆ ನಿನಗೆ ಗಣನಾಥ

ವಂದಿಪೆ ನಿನಗೆ ಗಣನಾಥ


ಮೊದಲ್ವೊಂದಿಪೆ ನಿನಗೆ ಗಣನಾಥ//



ಬಂದ ವಿಘ್ನ ಕಳಿಯೋ ಗಣನಾಥ

ಮೊದಲ್ವೊಂದಿಪೆ ನಿನಗೆ ಗಣನಾಥ//



ಹಿಂದೆ ರಾವಣನು ಮದದಿಂದ ನಿನ್ನ ಪೂಜಿಸದೇ

ಸಂದ ರಣದಲ್ಲಿ ಗಣನಾಥ//



ಮಾಧವನ ಆಜ್ಞೆಯಿಂದ ಧರ್ಮರಾಯ ಪೂಜಿಸಲು

ಸಾಧಿಸಿದ ರಾಜ್ಯ ಗಣನಾಥ//



ಮಂಗಳಮೂರುತಿ ಗುರು ರಂಗ ವಿಠಲನ ಪಾದ

ಹಿಂಗದೆ ಪಾಲಿಸೋ ಗಣನಾಥ//

Thursday, November 22, 2012

ವೀರ ಹನುಮ ಬಹು ಪರಾಕ್ರಮಾ

ವೀರ ಹನುಮ ಬಹು ಪರಾಕ್ರಮಾ


ಸುಜ್ಞಾನವಿತ್ತು ಪಾಲಿಸೆನ್ನ ಜೀವರೋತ್ತಮ//



ರಾಮ ದೂತನೆನೆಸಿಕೊಂಡೆ ನೀ

ರಾಕ್ಷಸರ ವನವನೆಲ್ಲ ಕಿತ್ತು ಬಂದೆ ನೀ

ಜಾನಕಿಗೆ ಮುದ್ರೆ ಇತ್ತು ಜಗತಿಗೆಲ್ಲ ಹರುಷವಿತ್ತು

ಚೂಡಾಮಣಿಯ ರಾಮಗಿತ್ತು ಲೋಕಕೆ ಮುತ್ತೆನಿಸಿಬರುವ//



ಗೋಪಿಸುತನ ಪಾದಪೂಜಿಸಿ

ಗದೆಯ ಧರಿಸಿ ಬಕಾಸುರನ ಸಂಹರಿಸಿದೆ

ದ್ರೌಪದಿಯ ಮೊರೆಯ ಕೇಳಿ ಮತ್ತೆ ಕೀಚಕನ್ನ ಕೊಂದು

ಭೀಮನೆಂಬ ನಾಮ ಧರಿಸಿ ಸಂಗ್ರಾಮ ಧೀರನಾಗಿ ಜಗದಿ//



ಮಧ್ಯಗೆಹನಲ್ಲಿ ಜನಿಸಿ ನೀ

ಬಾಲ್ಯದಲ್ಲಿ ಮತ್ಸರಿಯ ರೂಪಗೊಂಡೆ ನೀ

ಸತ್ಯವತಿಯ ಸುತನ ಭಜಿಸಿ ಸಮ್ಮುಖದಿ ಭಾಷ್ಯ ಮಾಡಿ

ಸಜ್ಜನರ ಪೊರೆವ ಮುದ್ದು ಪುರಂದರ ವಿಠಲನ ದಾಸ//

Monday, November 19, 2012

ವೆಂಕಟರಮಣನೆ ಬಾರೋ ಶೇಷಾಚಲ ವಾಸನೆ ಬಾರೋ

ವೆಂಕಟರಮಣನೆ ಬಾರೋ ಶೇಷಾಚಲ ವಾಸನೆ ಬಾರೋ


ಪಂಕಜನಾಭ ಪರಮಪವಿತ್ರ ಶಂಕರ ಮಿತ್ರನೇ ಬಾರೋ//



ಮುದ್ದು ಮುಖದ ಮಗುವೆ ನಿನಗೆ ಮುದ್ದು ಕೊಡುವೆನು ಬಾರೋ

ನಿರ್ದಯವೆಕೋ ನಿನ್ನೊಳಗೆ ನಾನು ಒಂದಿದ್ದೇನೋ ಬಾರೋ//



ಮಂದರಗಿರಿಯನೆತ್ತಿದಾ ನಂದಮೂರ್ತಿಯೇ ಬಾರೋ

ನಂದಕನಂದ ಗೋವಿಂದ ಮುಕುಂದ ಇಂದಿರಶಯನನೆ ಬಾರೋ//



ಕಾಮನಯ್ಯ ಕರುಣಾಳೊ ಶ್ಯಾಮಲ ವರ್ಣನೆ ಬಾರೋ

ಕೊಮಲಾಂಗ ಶ್ರೀ ಪುರಂದರ ವಿಠಲನೆ ಬಾರೋ||

Thursday, November 15, 2012

ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ

ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ


ಪಂಕಜ ನೇತ್ರಂ ಪರಮ ಪವಿತ್ರಂ

ಶಂಖ ಚಕ್ರಧರ ಚಿನ್ಮಯ ರೂಪಂ

ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ//



ಅಂಬುಜೋದ್ಭವ ವಿನುತಂ ಅಗಣಿತ ಗುಣ ನಾಮಂ

ತುಂಬುರು ನಾರದ ಗಾನ ವಿಲೋಲಂ

ಅಂಬುದಿಶಯನಂ ಆತ್ಮಾಭಿರಾಮಂ

ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ//



ಪಾಹಿ ಪಾಂಡವ ಪಕ್ಷಂ ಕೌರವ ಮದಹರಣಂ

ಬಹು ಪರಾಕ್ರಮ ಪೂರ್ಣಂ

ಅಹಲ್ಯ ಶಾಪ ಭಯ ನಿವಾರಣಂ

ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ//



ಸಕಲ ವೇದ ವಿಚಾರಂ ಸರ್ವಜೀವನ ಕರಂ

ಮಕರ ಕುಂಡಲಧರ ಮದನ ಗೋಪಾಲಂ

ಭಕ್ತಪೋಷಕ ಶ್ರೀ ಪುರಂದರ ವಿಠಲ೦

ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ//

Monday, November 12, 2012

ವಿಜಯ ಕವಚ

ಸ್ಮರಿಸಿ ಬದುಕಿರೋ ದಿವ್ಯ ಚರಣಕೆರಗಿರೋ


ದುರಿತ ತರಿದು ಪೊರೆವ ವಿಜಯ ಗುರುಗಳೆ೦ಬರ//



ದಾಸರಾಯನ ದಯವ ಸೂಸಿ ಪಡೆದನ/

ದೋಷರಹಿತನ ಸಂತೋಷಭರಿತನ//



ಜ್ಞಾನವಂತನ ಬಲು ನಿಧಾನಿ ಶಾಂತನ/

ಮಾನ್ಯವಂತನ ಬಹುವದಾನ್ಯದಾತನ //



ಹರಿಯ ಭಜಿಸುವ ನರಹರಿಯ ಯಜಿಸುವ/

ದುರಿತ ತ್ಯಜಿಸುವ ಜನಕೆ ಹರುಷ ಸುರಿಸುವ//



ಮೋದಭರಿತನ ಪಂಚಭೇದವರಿತನ/

ಸಾಧುಚರಿತನ ಮನೋವಿಷಾದ ಮರೆತನ//



ಇವರ ನಂಬಿದ ಜನಕೆ ಭಾವವಿದೆಂಬುದು/

ಹವನವಾಗದೋ ನಮ್ಮವರ ಮತವಿದು//



ಪಾಪಕೋಟಿಯ ರಾಶಿ ಲೇಪವಾಗದು/

ತಾಪ ಕಳೆವನು ಬಲು ದಯಾಪಯೋನಿಧಿ//



ಪವನ ರೂಪದಿ ಹರಿಯ ಸ್ತವನ ಮಾಡಿದ/

ಭುವನ ಬೇಡಿದ ಮಾಧವನ ನೋಡಿದ//



ರಂಗನೆಂದನ ಭಾವವು ಹಿಂಗಿತೆಂದನ/

ಮಂಗಳಾ೦ಗನ ಅಂತರಂಗವರಿತನ//



ಕಾಶಿನಗರದಲ್ಲಿದ್ದ ವ್ಯಾಸದೇವನ ದಯವ/

ಸೂಸಿ ಪಡೆದನ ಉಲ್ಲಾಸತನದಲಿ//



ಚಿಂತೆ ಬ್ಯಾಡಿರೋ ನಿಶ್ಚಿಂತರಾಗಿರೋ/

ಶಾಂತಗುರುಗಳ ಪಾದವನ್ನು ನಂಬಿರೋ//



ಖೇದವಾಗದೋ ನಿಮಗೆ ಮೋದವಾಹುದೋ/

ಆದಿದೇವನ ಸುಪ್ರಸಾದವಾಹುದೋ//



ತಾಪ ತಡೆವನು ಬಂದ ಪಾಪ ಕಡಿವನು/

ಶ್ರೀಪತಿಯ ಪಾದ ಸಮೀಪವಿಡುವನು//



ವೇದ ಓದಲು ಬರಿದೆ ವಾದ ಮಾಡಲು/

ಹಾದಿ ದೊರೆಯದು ಬುಧರ ಪಾದ ನಂಬದೆ//



ಗಂಗೆ ಮಿಂದರೆ ಮಲವು ಹಿಂಗಿತಲ್ಲದೆ/

ರಂಗನೊಲಿಯನು ಭಕ್ತರ ಸಂಗ ದೊರಕದೆ//



ಲೆಕ್ಕವಿಲ್ಲದ ದೇಶ ತುಕ್ಕಿ ಬಂದರು/

ದುಃಖವಲ್ಲದೆ ಲೇಶ ಭಕ್ತಿ ದೊರಕದು//



ದಾನಮಾಡಲು ದಿವ್ಯ ಗಾನ ಪಾಡಲು/

ಜ್ಞಾನ ದೊರೆಯದೋ ಇವರಧೀನವಾಗದೆ//



ನಿಷ್ಠೆ ಯಾತಕೆ ಕಂಡ ಕಷ್ಟವ್ಯಾತಕೆ/

ದಿಟ್ಟ ಗುರುಗಳ ಪಾದ ಮುಟ್ಟಿ ಭಜಿಸಿರೋ//



ಪೂಜೆ ಮಾಡಲು ಕಂಡ ಗೋಜು ಬೀಳಲು/

ಬೀಜ ಮಾತಿನ ಫಲ ಸಹಜ ದೊರಕದು//



ಸುರರು ಎಲ್ಲರೂ ಇವರ ಕರವ ಪಿಡಿವರೋ/

ತರಳರಂದದಿ ಹಿಂದೆ ತಿರುಗುತಿಪ್ಪರೋ//



ಗ್ರಹಗಳೆಲ್ಲವೂ ಇವರ್ಗೆ ಸಹಾಯ ಮಾಡುತ/

ಅಹೋರಾತ್ರಿಲಿ ಸುಖವ ಕೊಡುವುದು//



ವ್ಯಾಧಿ ಬಾರದೋ ದೇಹ ಭಾದೆ ತಟ್ಟದೋ/

ಆದಿದೇವನ ಸುಪ್ರಸಾದವಾಹುದೋ//



ಪತಿತಪಾಮರ ಮಂದಮತಿಯ ನಾ ಬಲು/

ಸ್ತುತಿಸಲಾಪನೆ ಇವರ ಅತಿಶಯಂಗಳ//



ಕರುಣದಿಂದಲಿ ಎಮ್ಮ ಪೊರೆವನಲ್ಲದೆ/

ದುರಿತಕೋಟಿಯ ಬೇಗ ತರಿವ ದಯದಲಿ//



ಮಂದಮತಿಗಳು ಇವರ ಚಂದವರಿಯದೆ/

ನಿಂದಿಸುವರೋ ಭವದ ಬಂಧ ತಪ್ಪದೋ//



ಇಂದಿರಾಪತಿ ಇವರ ಮುಂದೆ ಕುಣಿವನೋ/

ಅಂದವಚನವ ನಿಜಕೆ ತಂದು ತೋರ್ಪನು//



ಉದಯಕಾಲದಿ ಈ ಪದವ ಪಠಿಸಲು/

ಮದದನಾದರು ಜ್ಞಾನ ಉದಯವಾಹುದೋ//



ಸಟೆಯಿದಲ್ಲವೋ ವ್ಯಾಸ ವಿಠಲ ಬಲ್ಲನೋ/

ಪಠಿಸಬಹುದಿದು ಕೇಳಿ ಕುಟಿಲರಹಿತರು//

Wednesday, November 7, 2012

ಎದ್ದು ಬರುತಾರೆ ನೋಡೇ

ಎದ್ದು ಬರುತಾರೆ ನೋಡೇ


ತಾವೆದ್ದು ಬರುತಾರೆ ನೋಡೇ//



ಮುದ್ದು ವೃಂದಾವನ ಮಧ್ಯದೊಳಗಿಂದ

ತಿದ್ದಿ ಹಚ್ಚಿದ ನಾಮ ಮುದ್ರೆಗಳೊಪ್ಪುತಿವೆ//



ಗಳದೊಳು ಶ್ರೀ ತುಳಸಿ ನಳಿನಾಕ್ಷಿ ಮಾಲೆಗಳು

ಚೆಲುವ ಮುಖದೊಳು ಪೊಳೆವ ದಂತಗಳಿಂದ//



ಹೃದಯಸದನದಲಿ ಪದುಮನಾಭನ ಭಜಿಸಿ

ಮುದಮನದಿಂದ ನಿತ್ಯ ಸದಮಲರೂಪ ತಾಳಿ//



ದಾತ ಗುರು ಜಗನಾಥವಿಠಲನ

ಪ್ರೀತಿಯ ಪಡಿಸುತ ದೂತರ ಪೊರೆಯುತ//

Monday, November 5, 2012

ಎನಗೂ ಆಣೆ ರಂಗ ನಿನಗೂ ಆಣೆ

ಎನಗೂ ಆಣೆ ರಂಗ ನಿನಗೂ ಆಣೆ


ಎನಗೂ ನಿನಗೂ ಇಬ್ಬರಿಗೂ ಭಕ್ತರಾಣೆ//



ನಿನ್ನ ಬಿಟ್ಟು ಅನ್ಯರ ಭಜಿಸಿದರೆನಗೆ ಆಣೆ, ರಂಗ

ಎನ್ನ ನೀ ಕೈ ಬಿಟ್ಟು ಪೋದರೆ ನಿನಗೆ ಆಣೆ//



ತನುಮನಧನದಲಿ ವಂಚಕನಾದರೆ ನಿನಗೆ ಆಣೆ, ರಂಗ

ಮನಸು ನಿನ್ನಲಿ ನಿಲಿಸದಿದ್ದರೆ ನಿನಗೆ ಆಣೆ//



ಕಾಕು ಮನುಜರ ಸಂಗವ ಮಾಡದಿದ್ದರೆ ಎನಗೆ ಆಣೆ, ರಂಗ

ಲೌಕಿಕವ ಬಿಡಿಸದಿದ್ದರೆ ನಿನಗೆ ಆಣೆ//



ಶಿಷ್ಟರ ಸಂಗ ಮಾಡದಿದ್ದರೆ ಎನಗೆ ಆಣೆ, ರಂಗ

ದುಷ್ಟರ ಸಂಗವ ಬಿಡಿಸದಿದ್ದರೆ ನಿನಗೆ ಆಣೆ//



ಹರಿ ನಿನ್ನಾಶ್ರಾಯ ಮಾಡದಿದ್ದರೆ ಎನಗೆ ಆಣೆ, ರಂಗ

ಪುರಂದರವಿಠಲ ನೀನೊಲಿಯದಿದ್ದರೆ ನಿನಗೆ ಆಣೆ//

Friday, November 2, 2012

ಶ್ರೀ ಗಂಧದ ಅಲಂಕಾರ





ವಿಜಯದಶಮಿ ಪ್ರಯುಕ್ತ ಮಾರಂಡಹಳ್ಳಿಯ ಮುಖ್ಯಪ್ರಾಣದೇವರು ಮತ್ತು ವರದರಾಜಸ್ವಾಮಿಗೆ ಮೊಟ್ಟ ಮೊದಲ ಬಾರಿಗೆ ನಡೆದ ಶ್ರೀ ಗಂಧದ ಅಲಂಕಾರ

ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೋ


ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೋ


ಸಾನುರಾಗದಿಂದ ಹರಿಯ ತಾನೇ ಸೇವೆ ಮಾಡುತಿಹಳು//



ಕೋಟಿ ಕೋಟಿ ಭೃತ್ಯರಿರಲು ಹಾಟಕಾಂಬರನ ಸೇವೆ

ಸಾಟಿಯಿಲ್ಲದೆ ಪೂರ್ಣಗುಣಳು ಶ್ರೇಷ್ಟವಾಗಿ ಮಾಡುತಿಹಳು//



ಛತ್ರ ಚಾಮರ ವ್ಯಜನ ಪರ್ಯಂಕ ಪಾತ್ರರೂಪದಲ್ಲಿ ನಿಂತು

ಚಿತ್ರಚರಿತನಾದ ಹರಿಯ ನಿತ್ಯ ಸೇವೆ ಮಾಡುತಿಹಳು//



ಸರ್ವಸ್ಥಳದಿ ವ್ಯಾಪ್ತನಾದ ಸರ್ವದೋಷರಹಿತನಾದ

ಗರುಡಗಮನನಾದ ಪುರಂದರವಿಠಲನ ಸೇವಿಸುತಿಹಳು//

Tuesday, October 30, 2012

ಹನುಮ ನಮ್ಮ ತಾಯಿ ತಂದೆ


ಹನುಮ ನಮ್ಮ ತಾಯಿ ತಂದೆ,

ಭೀಮ ನಮ್ಮ ಬಂಧು ಬಳಗ

ಆನಂದ ತೀರ್ಥರೆ ನಮ್ಮ ಗತಿ ಗೋತ್ರವಯ್ಯ//



ತಾಯಿತಂದೆ ಹಸುಳೆಗಾಗಿ ಸಹಾಯ ಮಾಡಿ ಸಾಕುವಂತೆ

ಆಯಾಸವಿಲ್ಲದೆ ಸಂಜೀವನವ ತಂದೆ,

ಗಾಯಗೊಂಡ ಕಪಿಗಳನು ಸಾಯದಂತೆ ಪೊರೆದ

ರಘು ರಾಯನಂಘ್ರಿಗಳೇ ಸಾಕ್ಷಿ ತ್ರೇತಾಯುಗದಿ//



ಬಂಧುಬಳಗದಂತೆ ಆಪದ್ಭಾಂಧವನಾಗಿ ಪಾರ್ಥನಿಗೆ

ಬಂದ ಬಂದ ದುರಿತಗಳ ಪರಿಹರಿಸಿ

ಅಂಧಕಜಾತಕರ ಕೊಂದು ನಂದ ಕಂದಾರ್ಪನೆಂದು

ಗೋವಿಂದನಂಘ್ರಿಗಳೇ ಸಾಕ್ಷಿ ದ್ವಾಪರ ಯುಗದಿ//



ಗತಿಗೋತ್ರರಂತೆ ಸಾಧುತತಿಗಳಿಗೆ ಮತಿಯ ತೋರಿ

ಮತಿಗೆಟ್ಟ ಇಪ್ಪತ್ತೊಂದು ಮತವ ಖಂಡಿಸಿ

ಗತಿಗೆಟ್ಟ ಸದ್ವೈಷ್ಣವರಿಗೆ ಸದ್ಗತಿಯ ತೋರಿದ ಪರಮಾತ್ಮ

ಗತಿ ಪುರಂದರವಿಠಲನೆ ಸಾಕ್ಷಿ ಕಲಿಯುಗದಲಿ//

Friday, October 19, 2012

ಆಯುಧ ಪೂಜೆ ಹಾಗೂ ವಿಜಯದಶಮಿ

ಆಶ್ವಯುಜ ಮಾಸ ಶುಕ್ಲ ಪಕ್ಷ ಪಾಡ್ಯದಿ0ದ ಶುರುವಾಗುವ ಹಬ್ಬವೇ ನವರಾತ್ರಿ/ದಸರಾ. ಪಾಡ್ಯದಿಂದ ದಶಮಿಯವರೆಗೆ ಹತ್ತು ದಿನಗಳೂ ವಿಶೇಷ ಸ್ಥಾನ ಪಡೆದುಕೊಂಡಿದೆ. ಈ ಹತ್ತು ದಿನಗಳಲ್ಲಿ ಸ್ನಾನ-ಜಪ-ದಾನಗಳು ಪ್ರಧಾನ ಪಾತ್ರ ವಹಿಸುತ್ತದೆ

"ಆಯುಧ ಪೂಜೆ" ದಸರಾದಲ್ಲಿ ಆಚರಿಸಲ್ಪಡುವ ಒಂದು ಮುಖ್ಯ ಹಬ್ಬ. ಒಂಭತ್ತನೇ ದಿವಸ ಅoದರೆ ನವಮಿಯಂದು ಈ ಹಬ್ಬವನ್ನು ಆಚರಿಸಲ್ಪಡುತ್ತದೆ. ಇದಕ್ಕೆ ಇರುವ ಮತ್ತೊ೦ದು ಹೆಸರು "ಮಹಾನವಮಿ".

ಪಾಂಡವರು ಅಜ್ಞಾತವಾಸವನ್ನು ಮುಗಿಸಿ ಮರಳಿ ಬರುವಾಗ "ಶಮೀ ವೃಕ್ಷ"ದಲ್ಲಿ ಇಟ್ಟಿದ್ದ ತಮ್ಮ ಆಯುಧಗಳನ್ನು ಮರಳಿ ಪಡೆದ ದಿವಸವಾದ್ದರಿಂದ ಇದಕ್ಕೆ "ಆಯುಧ ಪೂಜೆ" ಎಂಬ ಹೆಸರು ಬಂದಿತು.

ಇದೆ ಪ್ರತೀಕದಂತೆ ರಾಜ ಮಹಾರಾಜರುಗಳು ತಮ್ಮನ್ನು ಸಂರಕ್ಷಿಸುತ್ತಿದ್ದ ಶಸ್ತ್ರಗಳನ್ನು, ಆಯುಧಗಳನ್ನು ಪೂಜೆ ಸಲ್ಲಿಸುತ್ತಿದ್ದರು.

ಪ್ರಸ್ತುತ ಕಾಲದಲ್ಲಿ ಜನಸಾಮಾನ್ಯರು ತಾವು ದಿನಬಳಕೆಯಲ್ಲಿ ಬಳಸುವ ವಸ್ತುಗಳು, ಯಂತ್ರಗಳು, ಆಯುಧಗಳಿಗೆ ಪೂಜೆ ಸಲ್ಲಿಸುತ್ತಾರೆ.

ಇದೆ ಸಂದರ್ಭದಲ್ಲಿ "ಶಮೀ ವೃಕ್ಷ"ಕ್ಕೂ ವಿಶೇಷ ಪೂಜೆ ಸಲ್ಲಿಸುವುದು ವಾಡಿಕೆಯಲ್ಲಿದೆ.

ಆಯುಧ ಪ್ರಾರ್ಥನ -
ಸರ್ವಾಯುಧಾನಾಂ ಪ್ರಥಮಂ ನಿರ್ಮಿತಾಸಿ ಪಿನಾಕಿನಾ |
ಶೂಲಾಯುಧಾನ್ ವಿನಿಷ್ಕೃತ್ಯ ಕೃತ್ವಾ ಮುಷ್ಠಿಗ್ರಹಂ ಶುಭಂ |
ಛುರಿಕೆ ರಕ್ಷಮಾಂ ನಿತ್ಯಂ ಶಾಂತಿಂ ಯಚ್ಚ ನಮೋಸ್ತು ತೇ |


ವಿಜಯ ದಶಮಿ
ಆಶ್ವಯುಜ ಮಾಸ ಶುಕ್ಲ ಪಕ್ಷ ದಶಮಿಯಂದು ಆಚರಿಸುವ ಹಬ್ಬಕ್ಕೆ "ವಿಜಯ ದಶಮಿ" ಎಂದು ಕರೆಯುತ್ತಾರೆ.

ಇದೇ ದಿವಸ ಶ್ರೀಹರಿಯ ಆಜ್ಞೆಯಂತೆ "ವಾಯುದೇವರು" "ಮಧ್ವಾಚಾರ್ಯ"ರಾಗಿ ಅವತರಿಸಿದ ದಿವವಾದ್ದರಿಂದ ಈ ದಿನವನ್ನು "ಮಧ್ವ ಜಯಂತಿ" ಎಂದೂ ಕರೆಯುತ್ತಾರೆ.

ಹಿಂದೂ ಪುರಾಣಗಳ ಪ್ರಕಾರ ವಿಜಯ ದಶಮಿಯ ಮಹತ್ವಗಳು ಈ ಕೆಳಕಂಡಂತೆ ಇವೆ

೧) ತ್ರೇತಾಯುಗದಲ್ಲಿ ಶ್ರೀರಾಮಚಂದ್ರನು ಹನುಮಂತ ಮತ್ತು ಸುಗ್ರೀವರ ನೇತೃತ್ವದ ವಾನರ ಸೈನ್ಯದೊಂದಿಗೆ  ಲಂಕೆಗೆ ಹೋಗಿ ಸೀತಾಮಾತೆಯ ರೂಪದಲ್ಲಿದ್ದ ವೇದವತಿಯನ್ನು ಅಪಹರಿಸಿದ್ದ ರಾವಣನನ್ನು ಸಂಹರಿಸಿದ ದಿವಸ. ಇದರ ಪ್ರತೀಕವಾಗಿ ಇಂದೂ ಸಹ ವಿಜಯ ದಶಮಿಯಂದು ಹಲವೆಡೆ ರಾವಣ, ಕುಂಭಕರ್ಣ ಹಾಗು ಮೇಘನಾಥನ ಪ್ರತಿಕೃತಿಗಳನ್ನು ದಹಿಸಿ ಸಂಭ್ರಮಿಸುತ್ತಾರೆ.


೨) ದುರ್ಗಾದೇವಿ/ಚಾಮುಂಡೇಶ್ವರಿ ಇದೇ ದಿವಸ ಮಹಿಷಾಸುರನನ್ನು ಸಂಹರಿಸಿದ ದಿವಸ. ಮಹಿಷನ ರೂಪದಲ್ಲಿದ್ದ ಅಸುರನು ಒಮ್ಮೆ ದೇವಲೋಕಕ್ಕೆ ನುಗ್ಗಿ ಸ್ವರ್ಗಾಧಿಪತಿಯನ್ನು ಮತ್ತು  ಇತರೆ ದೇವತೆಗಳಿಗೆ ತೊಂದರೆ ನೀಡುತ್ತಿದ್ದಾಗ ಲಕ್ಷ್ಮಿ ದೇವಿಯು ದುರ್ಗಾದೇವಿ/ ಚಾಮುಂಡೇಶ್ವರಿಯ ಅವತಾರವೆತ್ತಿ ಒಂಭತ್ತು ದಿವಸಗಳ ಕಾಲ ಅವನ ಜೊತೆ ಸೆಣಸಿ ಹತ್ತನೇ ದಿವಸ  ಆ ಮಹಿಷನನ್ನು ಮತ್ತು ಅವನ ಜೊತೆ ಇತರ ಅಸುರನನ್ನು ಸಂಹರಿಸಿದ ದಿವಸ. ಆದ್ದರಿಂದ ಈ ದಿವಸವನ್ನು "ವಿಜಯ ದಶಮಿ" ಎಂದು ಆಚರಿಸುತ್ತಾರೆ.

೩) ಅಜ್ಞಾತವಾಸದ ಬಳಿಕ ಪಾಂಡವರು ತಾವು "ಶಮೀ ವೃಕ್ಷ" ದಲ್ಲಿ ಅಡಗಿಸಿಟ್ಟಿದ್ದ ಆಯುಧಗಳನ್ನು ಮರಳಿ ಪಡೆದು, ವಿರಾಟನಗರದ  ಮೇಲೆ ದಂಡೆತ್ತಿ ಬಂದ ಕೌರವರ ವಿರುದ್ಧ ಜಯಗಳಿಸಿದ ದಿವಸ.

ಇದೇ ಸಂದರ್ಭದಲ್ಲಿ ಶಮೀ ವೃಕ್ಷ/ ಬನ್ನಿ ವೃಕ್ಷವನ್ನು ವಿಶೇಷವಾಗಿ ಪೂಜಿಸಲ್ಪಡುತ್ತದೆ. ಶಮೀ ವೃಕ್ಷದ ಎಲೆಗಳನ್ನು ಸಂಪತ್ತಿನ ಪ್ರತೀಕವಾಗಿ ಹಂಚಿಕೊಳ್ಳುತ್ತಾರೆ. ಇದರ ಹಿನ್ನಲೆ ನಮ್ಮನ್ನು ತ್ರೇತಾಯುಗಕ್ಕೆ ಕರೆದೊಯ್ಯುತ್ತದೆ.

ಹಿಂದೆ ತ್ರೇತಾಯುಗದಲ್ಲಿ ಅಯೋಧ್ಯನಗರದಲ್ಲಿ "ಕೌಸ್ತ "ಎಂಬ ಬ್ರಾಹ್ಮಣ ವಿದ್ಯಾರ್ಥಿಯು "ವರಂತನು" ಎಂಬ ಗುರುವಿನ ಬಳಿ ವಿದ್ಯಾಭ್ಯಾಸ ಮಾಡುತ್ತಿದ್ದನು. ವಿದ್ಯಾಭ್ಯಾಸ ಮುಗಿದ ಬಳಿಕ ಕೌಸ್ತನು ಗುರುವಿನ ಬಳಿ ಬಂದು ಗುರುಗಳೇ ನಾನು ಗುರುದಕ್ಷಿಣೆ ನೀಡಬೇಕು ಎಂದಿದ್ದೇನೆ. ತಾವು ತಮಗೆ ಏನು ಬೇಕು ಎಂದು ತಿಳಿಸಿದರೆ ಅದನ್ನು ತಂದು ಅರ್ಪಿಸುವೆ ಎಂದನು.

ಮೊದಲಿಗೆ ಗುರುಗಳು ನಾನು ಯಾವುದೇ ದಕ್ಷಿಣೆಯನ್ನು ಅಪೇಕ್ಷಿಸದೆ ನಿನಗೆ ವಿದ್ಯಾಭ್ಯಾಸ ನೀಡಿದ್ದೇನೆ. ನನಗೆ ಏನೂ ಬೇಡ ಎಂದರು. ಆದರೆ ಕೌಸ್ತನು ಇಲ್ಲ ತಾವು ಸ್ವೀಕರಿಸಲೇ ಬೇಕು ಎಂದು ಪಟ್ಟು ಹಿಡಿದಾಗ ಅವನಿಗೆ ಬುದ್ಧಿ ಕಲಿಸಲು ಗುರುಗಳು ತನಗೆ ೧೪೦ ಬಂಗಾರದ ನಾಣ್ಯಗಳನ್ನು ನೀಡಬೇಕು ಎಂದು ಕೇಳಿದರು. ತಾವು ಕಲಿಸಿದ ೧೪೦ ವಿಷಯಗಳಿಗೆ ಒಂದೊಂದು ಬಂಗಾರದ ನಾಣ್ಯ ಎಂದು ತಿಳಿಸಿದರು.

ಇದನ್ನು ನಿರೀಕ್ಷಿಸಿರದ ಕೌಸ್ತನು ಕಂಗಾಲಾಗಿ ಶ್ರೀರಾಮಚಂದ್ರನ ಬಳಿ ಬಂದು ನಡೆದ ಸಂಗತಿಯನ್ನು ವಿವರಿಸಿ ತನಗೆ ೧೪೦ ನಾಣ್ಯಗಳು ಬೇಕೆಂದು ಕೇಳಿದನು. ಆಗ ಶ್ರೀರಾಮಚಂದ್ರನು ತನಗೆ ಪ್ರಿಯವಾದ ಶಮೀ ವೃಕ್ಷದ  ಬಳಿ ಕೌಸ್ತನಿಗೆ ನಿಂತಿರಲು ಹೇಳಿದನು. ಕೌಸ್ತನು ಮೂರು ದಿವಸಗಳ ಕಾಲ ಅಲ್ಲೇ ನಿಂತಿದ್ದನು. ನಂತರ ಶ್ರೀರಾಮಚಂದ್ರನು ಸಂಪತ್ತಿನ ಅಧಿಪತಿ ಕುಬೇರನಿಗೆ ತಿಳಿಸಿ ಆ ಶಮೀ ವೃಕ್ಷದ ಎಲೆಗಳನ್ನು ಬಂಗಾರದ ನಾಣ್ಯಗಳಾಗಿ ಪರಿವರ್ತಿಸಿದನು.

ಇದರಿಂದ ಸಂತಸಗೊಂಡ ಕೌಸ್ತನು ಗುರುಗಳು ಕೇಳಿದಷ್ಟು ನಾಣ್ಯಗಳನ್ನು ಅವರಿಗೆ ಕೊಟ್ಟು ಮಿಕ್ಕ ನಾಣ್ಯಗಳನ್ನು ದಾನ ಮಾಡಿದನು.

ಅಂದಿನಿಂದ ಶಮೀ/ಬನ್ನಿ ಎಲೆಗಳನ್ನು ಸಂಪತ್ತಿನ ಪ್ರತೀಕವಾಗಿ ಪೂಜಿಸುತ್ತಾರೆ.

"ಶಮೀ ಶಮಯತೇ ಪಾಪಂ ಶಮೀ ಶತ್ರುವಿನಾಶಿನೀ/
ಅರ್ಜುನಸ್ಯ ಧನುರ್ಧಾರಿ ರಾಮಸ್ಯ ಪ್ರಿಯವಾದಿನೀ"

ಸರ್ವರಿಗೂ ನವರಾತ್ರಿ, ದುರ್ಗಾಷ್ಟಮಿ, ಆಯುಧಪೂಜೆ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು

ಚಿತ್ರ ಕೃಪೆ - ಅಂತರ್ಜಾಲ