Sunday, December 30, 2012

ಶ್ರೀ ಹರಿಕಥಾಮೃತಸಾರ - 4

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಭೋಜನ ಸಂಧಿ//

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ವನಜಾಂಡದೊಳು ಉಳ್ಳ ಅಖಿಳ ಚೇತನರು ಭುಂಜಿಪ

ಚತುರವಿಧ ಭೋಜನಪದಾರ್ಥದಿ ಚತುರವಿಧ ರಸರೂಪ ತಾನಾಗಿ

ಮನಕೆ ಬಂದಂತೆ ಉಂಡು ಉಣಿಸಿ ಸಂಹನನಕೆ ಉಪಚಯ

ಕರುಣಕೆ ಆನಂದ ಅನಿಮಿಷರಿಗೆ ಆತ್ಮ ಪ್ರದರ್ಶನ ಸುಖವನೀವ ಹರಿ//1//


ನೀಡದಂದದಲೆ ಇಪ್ಪ ಲಿಂಗಕೆ ಷೋಡಶ ಆತ್ಮಕ ರಸ ವಿಭಾಗವ ಮಾಡಿ

ಷೋಡಶ ಕಲೆಗಳಿಗೆ ಉಪಚಯಗಳನೆ ಕೊಡುತ

ಕ್ರೋಡ ಎಪ್ಪತ್ತೆರಡು ಸಾವಿರ ನಾಡಿಗತ ದೇವತೆಗಳೊಳಗೆ ಇದ್ದಾಡುತ ಆನಂದಾತ್ಮ

ಚರಿಸುವ ಲೋಕದೊಳು ತಾನು//2//


ವಾರಿವಾಚ್ಯನು ವಾರಿಯೊಳಗಿದ್ದು ಆರು ರಸವೆಂದೆನಿಸಿ

ಮೂವತ್ತಾರು ಸಾವಿರ ಸ್ತ್ರೀ ಪುರುಷನಾಡಿಯಲಿ ತದ್ರೂಪ ಧಾರಕನು ತಾನಾಗಿ

ಸರ್ವ ಶರೀರಗಳಲಿ ಅಹಶ್ಚರಾತ್ರಿ ವಿಹಾರ ಮಾಳ್ಪನು

ಬೃಹತಿಯೆಂಬ ಸುನಾಮದಿಂ ಕರೆಸಿ//3//


ಆರುರಸ ಸತ್ವಾದಿ ಭೇದದಿ ಆರು ಮೂರಾಗಿ ಇಹವು

ಸಾರಾಸಾರನೀತ ಪ್ರಚುರ ಖಂಡಾಖಂಡ ಚಿತ್ಪ್ರಚುರ

ಈರು ಅಧಿಕ ಎಪ್ಪತ್ತು ಸಾವಿರ ಮಾರಮಣನ ರಸಾಖ್ಯರೂಪ

ಶರೀರದೊಳು ಭೋಜ್ಯ ಸುಪದಾರ್ಥದಿ ತಿಳಿದು ಭುಂಜಿಪುದು//4//


ಕ್ಷೀರಗತ ರಸ ರೂಪಗಳು ಮುನ್ನೂರು ಮೇಲೆ ಐವತ್ತು ನಾಲ್ಕು

ಚಾರು ಘೃತಗತ ರೂಪಗಳು ಇಪ್ಪತ್ತರ ಒಂಭತ್ತು

ಸಾರ ಗುಡದೊಳಗೆ ಐದು ಸಾವಿರ ನೂರಾವೊಂದು

ಸುರೂಪ ದ್ವಿಸಹಸ್ರ ಆರೆರಡು ಶತ ಪಂಚ ವಿಂಶತಿ ರೂಪ ಫಲಗಳಲಿ//5//


ವಿಶದ ಸ್ಥಿರತೀಕ್ಷಣವು ನಿರ್ಹರ ರಸಗಳೊಳು

ಮೂರೈದುಸಾವಿರ ತ್ರಿಶತ ನವರೂಪಗಳ ಚಿಂತಿಸಿ ಭುಂಜಿಪುದು ವಿಷಯ

ಶ್ವಸನ ತತ್ತ್ವೇಶರೊಳಗಿದ್ದು ಈ ಪೆಸರಿನಿಂದಲಿ ಕರೆಸುವನು

ಧೇನಿಸಿದರೀ ಪರಿ ಮನಕೆ ಪೊಳೆವನು ಬಲ್ಲ ವಿಬುಧರಿಗೆ//6//


ಕಪಿಲ ನರಹರಿ ಭಾರ್ಗವತ್ರಯ ವಪುಷ ನೇತ್ರದಿ ನಾಸಿಕಾಸ್ಯದಿ

ಶಫರನಾಮಕ ಜಿಹ್ವೆಯಲಿ ದಂತದಲಿ ಹಂಸಾಖ್ಯ

ತ್ರಿಪದಿಪಾದ್ಯ ಹಯಾಸ್ಯ ವಾಚ್ಯದೊಳು ಅಪರಿಮಿತ ಸುಖಪೂರ್ಣ ಸಂತತ ಕೃಪಣರೊಳಗಿದ್ದು

ಅವರವರ ರಸ ಸ್ವೀಕರಿಸಿ ಕೊಡುವ//7//


ನಿರುಪಮಾನಂದಾತ್ಮ ಹರಿ ಸಂಕರುಷಣ ಪ್ರದ್ಯುಮ್ನರೂಪದಿ ಇರುತಿಹನು ಭೋಕ್ತ್ರುಗಳೊಳಗೆ

ತತ್ಶಕ್ತಿದನುಯೆನಿಸಿ ಕರೆಸುವನು

ನಾರಾಯಣ ಅನಿರುದ್ಧ ಎರಡುನಾಮದಿ ಭೋಜ್ಯವಸ್ತುಗನಿರುತ

ತರ್ಪಕನಾಗಿ ತೃಪ್ತಿಯನೀವ ಚೇತನಕೆ//8//


ವಾಸುದೇವನು ಒಳ ಹೊರಗೆ ಅವಕಾಶ ಕೊಡುವ ನಭಸ್ಥನಾಗಿ

ರಮಾಸಮೇತ ವಿಹಾರ ಮಾಳ್ಪನು ಪಂಚರೂಪದಲಿ

ಆ ಸರೋರುಹ ಸಂಭವಭವವಾಸವಾದಿ ಅಮರಾದಿ ಚೇತನ ರಾಶಿಯೊಳಗೆ

ಇಹನು ಎಂದರಿತವನು ಅವನೇ ಕೋವಿದನು//9//


ವಾಸುದೇವನು ಅನ್ನದೊಳು ನಾನಾ ಸುಭಕ್ಷ್ಯದಿ ಸಂಕರುಷಣ

ಕೃತೀಶ ಪರಮಾನ್ನದೊಳು ಘೃತದೊಳಗೆ ಇಪ್ಪ ಅನಿರುದ್ಧ

ಆ ಸುಪರ್ಣ ಅಂಸಗನು ಸೂಪದಿ ವಾಸವ ಅನುಜ ಶಾಕದೊಳು

ಮೂಲೇಶ ನಾರಾಯಣನು ಸರ್ವತ್ರದಲಿ ನೆಲೆಸಿಹನು//10//


ಅಗಣಿತ ಆತ್ಮ ಸುಭೋಜನ ಪದಾರ್ಥಗಳ ಒಳಗೆ

ಅಖಂಡ ವಾದ ಒಂದು ಅಗಳಿನೊಳು ಅನಂತ ಅಂಶದಲಿ ಖಂಡನೆಂದೆನಿಸಿ

ಜಗದಿ ಜೀವರ ತೃಪ್ತಿ ಪಡಿಸುವ ಸ್ವಗತ ಭೇದ ವಿವರ್ಜಿತನ

ಈರ್ಬಗೆಯ ರೂಪವನರಿತು ಭುಂಜಿಸಿ ಅರ್ಪಿಸು ಅವನಡಿಗೆ//11//


 
ಈ ಪರಿಯಲಿ ಅರಿತು ಉಂಬ ನರ ನಿತ್ಯ ಉಪವಾಸಿ ನಿರಾಮಯನು ನಿಷ್ಪಾಪಿ

ನಿತ್ಯ ಮಹಾ ಸುಯಜ್ಞಗಳು ಆಚರಿಸಿದವನು

ಪೋಪದು ಇಪ್ಪದು ಬಪ್ಪುದು ಎಲ್ಲ ರಮಾಪತಿಗೆ ಅಧಿಷ್ಠಾನವೆನ್ನು

ಕೃಪಾಪಯೋನಿಧಿ ಮಾತಲಾಲಿಸುವನು ಜನನಿಯಂತೆ//12//


 
ಆರೆರೆಡು ಸಾವಿರದ ಮೇಲೆ ಇನ್ನೂರ ಐವತ್ತೊಂದು ರೂಪದಿ

ಸಾರಭೋಕ್ತ ಅನಿರುದ್ಧ ದೇವನು ಅನ್ನಮಯನೆನಿಪ

ಮೂರೆರೆಡುವರೆ ಸಾವಿರದ ಮೇಲೆ ಮೂರಧಿಕ ನಾಲ್ವತ್ತು ರೂಪದಿ

ತೋರುತಿಹ ಪ್ರದ್ಯುಮ್ನ ಜಗದೊಳು ಪ್ರಾಣಮಯನಾಗಿ//13//


 
ಎರಡು ಕೋಶಗಳ ಒಳ ಹೊರಗೆ ಸಂಕರುಷಣ ಇದು ಸುಲಕ್ಷದ ಅರವತ್ತೆರೆಡು ಸಾವಿರದ

ಏಳಧಿಕ ಶತ ರೂಪಗಳ ಧರಿಸಿ ಕರೆಸಿಕೊಂಬ ಮನೋಮಯ ಎಂದು

ಅರವಿದೂರನು ಈರೆರೆಡು ಸಾವಿರದ ಮುನ್ನೂರು

ಅದ ಮೇಲೆ ನಾಲ್ಕಧಿಕ ಎಪ್ಪತ್ತು//14//


 ಹದಿನಾಲ್ಕು ಮತ್ತು ಹದಿನೈದನೆ ಪದ್ಯವನ್ನು ಒಟ್ಟಿಗೆ ಓದುವುದು.


ರೂಪದಿಂ ವಿಜ್ಞಾನಮಯನು ಎಂಬೀ ಪೆಸರಿನಿಂ ವಾಸುದೇವನು

ವ್ಯಾಪಿಸಿಹ ಮಹದಾದಿ ತತ್ತ್ವದಿ ತತ್ಪತಿಗಳೊಳಗೆ

ಈ ಪುರುಷ ನಾಮಕನ ಶುಭ ಸ್ವೇದಾಪಳು ಎನಿಸಿದ ರಮಾಂಬ

ತಾ ಬ್ರಹ್ಮಾಪರೋಕ್ಷಿಗಳು ಆದವರ ಲಿಂಗಾಂಗ ಕೆಡಿಸುವಳು//15//


ಐದು ಸಾವಿರ ನೂರಿಪ್ಪತ್ತೈದು ನಾರಾಯಣ ರೂಪವ ತಾ ಧರಿಸಿಕೊಂಡು

ಅನುದಿನದಿ ಆನಂದಮಯನೆನಿಪ

ಐದು ಲಕ್ಷದ ಮೇಲೆ ಎಂಭತ್ತೈದುಸಾವಿರ ನಾಲ್ಕು ಶತಗಳ

ಐದು ಕೋಶಾತ್ಮಕ ವಿರಿಂಚಾಡದೊಳು ತುಂಬಿಹನು//16//


 
ನೂರಾವೊಂದು ಸುರೂಪದಿಂ ಶಾಂತೀರಮಣ ತಾನು ಅನ್ನನೆನಿಪ

ಐನೂರ ಮೇಲೆ ಮೂರಧಿಕ ದಶ ಪ್ರಾಣಾಖ್ಯ ಪ್ರದ್ಯುಮ್ನ

ತೋರುತಿಹನು ಐವತ್ತೈದುಸಾವಿರ ವಿಕಾರ ಮನದೊಳು ಸಂಕರುಷಣ

ಐನೂರ ಚತುರಾಶೀತಿ ವಿಜ್ಞಾನಾತ್ಮ ವಿಶ್ವಾಖ್ಯ//17//


 
ಮೂರು ಸಾವಿರದ ಅರ್ಧಶತ ಮೇಲೆ ಈರು ಅಧಿಕ ರೂಪಗಳ ಧರಿಸಿ

ಶರೀರದೊಳಗೆ ಆನಂದಮಯ ನಾಯಾಯಣಾಹ್ವಯನು

ಈರೆರೆಡು ಸಾವಿರದ ಮೇಲೆ ಮುನ್ನೂರ ಐದು ಸುರೂಪದಿಂದಲಿ

ಭಾರತೀಶನೊಳು ಇಪ್ಪ ನವನೀತಸ್ಥ ಘೃತದಂತೆ//18//


 
ಮೂರಧಿಕ ಐವತ್ತು ಪ್ರಾಣ ಶರೀರದೊಳಗೆ ಅನಿರುದ್ಧನು ಇಪ್ಪ

ಐನೂರು ಹನ್ನೊಂದು ಅಧಿಕ ಅಪಾನನೊಳು ಇಪ್ಪ ಪ್ರದ್ಯುಮ್ನ

ಮೂರನೇ ವ್ಯಾನನೊಳಗೆ ಐದರೆ ನೂರು ರೂಪದಿ ಸಂಕರುಷಣ

ಐನೂರ ಮೂವತ್ತೈದು ಉದಾನನೊಳು ಇಪ್ಪ ಮಾಯೇಶ//19//

ಮೂಲ ನಾರಾಯಣನು ಐವತ್ತೇಳಧಿಕ ಐನೂರು ರೂಪವ ತಾಳಿ

ಸರ್ವತ್ರದಿ ಸಮಾನನೊಳಿಪ್ಪ ಸರ್ವಜ್ಞ

ಲೀಲೆಗೈವನು ಸಾವಿರದ ಮೇಲೆ ಏಳು ನೂರು ಹನ್ನೊಂದು ರೂಪವ ತಾಳಿ

ಪಂಚಪ್ರಾಣರೊಳು ಲೋಕಗಳ ಸಲಹುವನು//20//


 
ತ್ರಿನವತಿ ಸುರೂಪಾತ್ಮಕ ಅನಿರುದ್ಧನು ಸದಾ ಯಜಮಾನನಾಗಿದ್ದು

ಅನಲ ಯಮ ಸೋಮಾದಿ ಪಿತೃದೇವತೆಗಳಿಗೆ ಅನ್ನನು ಎನಿಪನು

ಆ ಪ್ರದ್ಯುಮ್ನ ಸಂಕರುಷಣ ವಿಭಾಗವ ಮಾಡಿಕೊಟ್ಟು ಉಂಡುಣಿಪ

ನಿತ್ಯಾನಂದ ಭೋಜನದಾಯಿ ತುರ್ಯಾಹ್ವ//21//


 
ಷಣ್ಣವತಿ ನಾಮಕನು ವಸು ಮೂಗಣ್ಣ ಭಾಸ್ಕರರ ಒಳಗೆ ನಿಂತು

ಪ್ರಾಪನ್ನರು ಅನುದಿನ ನಿಷ್ಕಪಟ ಸದ್ಭಕ್ತಿಯಲಿ ಮಾಳ್ಪ ಪುಣ್ಯ ಕರ್ಮವ ಸ್ವೀಕರಿಸಿ

ಕಾರುಣ್ಯ ಸಾಗರನು ಆ ಪಿತೃಗಳಿಗೆ

ಅಗಣ್ಯ ಸುಖವಿತ್ತು ಅವರ ಪೊರೆವನು ಎಲ್ಲ ಕಾಲದಲಿ//22//


 
ಸುತಪ ಏಕ ಉತ್ತರ ಸುಪಂಚಾಶತ ವರಣ ಕರಣದಿ ಚತುರ ವಿಂಶತಿ ಸುತತ್ವದಿ

ಧಾತುಗಳೊಳು ಇದ್ದು ಅವಿರತ ಅನಿರುದ್ಧ

ಜತನ ಮಾಳ್ಪನು ಜಗದಿ ಜೀವ ಪ್ರತತಿಗಳ

ಷಣ್ಣವತಿ ನಾಮಕ ಚತುರ ಮೂರ್ತಿಗಳ ಅರ್ಚಿಸುವರು ಅದರಿಂದ ಬಲ್ಲವರು//23//


ಅಬುಜಾಂಡ ಉದರನು ವಿಪಿನದಿ ಶಬರಿ ಯಂಜಲನುಂಡ ಗೋಕುಲದ ಅಬಲೆಯರನು

ಓಲಿಸಿದನು ಋಷಿಪತ್ನಿಯರು ಕೊಟ್ಟನ್ನ ಸುಭುಜ ತಾ ಭುಂಜಿಸಿದ

ಸ್ವರಮಣ ಕುಬುಜಗಂಧಕೊಲಿದ ಮುನಿಗಣ ವಿಬುಧ ಸೇವಿತ

ಬಿಡುವನೆ ನಾವು ಇತ್ತ ಕರ್ಮಫಲ//24//


 
ಗಣನೆಯಿಲ್ಲದ ಪರಮಸುಖ ಸುದ್ಗುಣ ಗಣಂಗಳ ಲೇಶ ಲೇಶಕೆ ಎಣೆಯೆನಿಸದು

ರಮಾಬ್ಜಭವ ಶಕ್ರಾದಿಗಳ ಸುಖವು

ಉಣುತ ಉಣುತ ಮೈಮರೆದು ಕೃಷ್ಣಾರ್ಪಣವೆನಲು

ಕೈಕೊಂಬನು ಅರ್ಭಕ ಜನನಿ ಭೋಜನ ಸಮಯದಲಿ ಕೈವಡ್ದು ವಂದದಲಿ//25//


 
ಜೀವಕೃತ ಕರ್ಮಗಳ ಬಿಡದೆ ರಮಾವರನು ಸ್ವೀಕರಿಸಿ

ಫಲಗಳನು ಈವನು ಅಧಿಕಾರಾನುಸಾರದಲಿ ಅವರಿಗೆ ಅನವರತ

ಪಾವಕನು ಸರ್ವಸ್ವ ಭುಂಜಿಸಿ ತಾ ವಿಕಾರವನು ಐದನು ಒಮ್ಮೆಗೆ

ಪಾವನಕೆ ಪಾವನನೆನಿಪ ಹರಿಯುಂಬುದು ಎನರಿದು//26//


ಕಳುಷಜಿಹ್ವೆಗೆ ಸುಷ್ಟುಭೋಜನ ಜಲ ಮೊದಲು ವಿಷತೋರುವುದು

ನಿಷ್ಕಲುಷ ಜಿಹ್ವೆಗೆ ಸುರಸ ತೋರುವುದು ಎಲ್ಲ ಕಾಲದಲಿ

ಸುಲಲಿತಾಂಗಗೆ ಸಕಲ ರಸ ಮಂಗಳವೆನಿಸುತಿಹುದು

ಅನ್ನಮಯ ಕೈಕೊಳದೆ ಬಿಡುವನೆ ಪೂತನಿಯ ವಿಷ ಮೊಲೆಯನು ಉಂಡವನು//27//


ಪೇಳಲಿ ಏನು ಸಮೀರ ದೇವನು ಕಾಳಕೂಟವನು ಉಂಡು ಲೋಕವ ಪಾಲಿಸಿದ

ತದ್ದಾಸನು ಓರ್ವನು ಅಮೃತನೆನಿಸಿದನು

ಶ್ರೀ ಲಕುಮಿವಲ್ಲಭ ಶುಭಾಶುಭ ಜಾಲ ಕರ್ಮಗಳ ಉಂಬನು

ಉಪಚಯದ ಏಳಿಗೆಗಳು ಇವಗಿಲ್ಲವೆಂದಿಗು ಸ್ವರಸಗಳ ಬಿಟ್ಟು//28//


ಈ ಪರಿಯಲಿ ಅಚ್ಯುತನ ತತ್ತದ್ರೂಪ ತನ್ನಾಮಗಳ ಸಲೆ

ನಾನಾ ಪದಾರ್ಥದಿ ನೆನೆನೆನೆದು ಭುಂಜಿಸುತಲಿ ಇರು ವಿಷಯ

ಪ್ರಾಪಕ ಸ್ಥಾಪಕ ನಿಯಾಮಕ ವ್ಯಾಪಕನು ಎಂದರಿದು

ನೀ ನಿರ್ಲೇಪನು ಆಗಿರು ಪುಣ್ಯ ಪಾಪಗಳ ಅರ್ಪಿಸು ಅವನ ಅಡಿಗೆ//29//


ಐದು ಲಕ್ಷ ಎಂಭತ್ತರ ಒಂಭತ್ತು ಆದ ಸಾವಿರದ ಏಳುನೂರರ ಐದು ರೂಪವ ಧರಿಸಿ

ಭೋಕ್ತ್ರುಗ ಭೋಜ್ಯನೆಂದೆನಿಸಿ

ಶ್ರೀಧರಾದುರ್ಗಾರಮಣ ಪಾದಾದಿ ಶಿರ ಪರ್ಯಂತ ವ್ಯಾಪಿಸಿ ಕಾದು ಕೊಂಡಿಹ

ಸಂತತ ಜಗನ್ನಾಥ ವಿಠಲನು//30//


//ಇತಿ ಶ್ರೀ ಭೋಜನ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು

Wednesday, December 26, 2012

ಶ್ರೀ ಹರಿಕಥಾಮೃತಸಾರ - 3

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ವ್ಯಾಪ್ತಿ ಸಂಧಿ//

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಪುರುಷರೂಪತ್ರಯ ಪುರಾಣ ಪುರುಷ ಪುರುಷೋತ್ತಮ

ಕ್ಷರಾಕ್ಷರ ಪುರುಷ ಪೂಜಿತ ಪಾದ ಪೂರ್ಣಾನಂದ ಜ್ಞಾನಮಯ

ಪುರುಷಸೂಕ್ತ ಸುಮೇಯ ತತ್ತತ್ ಪುರುಷ ಹೃತ್ಪುಷ್ಕರ ನಿಲಯ

ಮಹಾಪುರುಷ ಅಜಾಂಡ ಅಂತರದಿ ಬಹಿರದಿ ವ್ಯಾಪ್ತ ನಿರ್ಲಿಪ್ತ//1//


ಸ್ತ್ರೀ ನಪುಂಸಕ ಪುರುಷ ಭೂ ಸಲಿಲ ಅನಲ ಗಗನ ಮನ ಶಶಿ

ಭಾನು ಕಾಲ ಗುಣ ಪ್ರಕೃತಿಯೊಳಗೆ ಒಂದು ತಾನಲ್ಲ

ಏನು ಇವನ ಮಹಾಮಹಿಮೆ ಕಡೆಗಾಣರು ಅಜಭವ ಶಕ್ರ ಮುಖರು

ನಿಧಾನಿಸಲು ಮಾನವರಿಗೆ ಅಳವಡುವುದೇ ವಿಚಾರಿಸಲು//2//


ಗಂಧ ರಸರೂಪ ಸ್ಪರ್ಶ ಶಬ್ದ ಒಂದು ತಾನಲ್ಲ

ಅದರದರ ಪೆಸರಿಂದ ಕರೆಸುತ ಜೀವರಿಗೆ ತರ್ಪಕನು ತಾನಾಗಿ

ಪೊಂದಿಕೊಂಡಿಹ ಪರಮ ಕರುಣಾಸಿಂಧು ಶಾಶ್ವತ

ಮನವೆ ಮೊದಲಾದ ಇಂದ್ರಿಯಗಳೊಳಗೆ ಇದ್ದು ಭೋಗಿಸುತಿಹನು ವಿಷಯಗಳ//3//


ಶ್ರವಣ ನಯನ ಘ್ರಾಣ ತ್ವಗ್ರಸನ ಇವುಗಳೊಳು

ವಾಕ್ಪಾಣಿ ಪಾದಾದಿ ಅವಯವಗಳೊಳು ತದ್ಗುಣಗಳೊಳು ತತ್ಪತಿಗಳೊಳಗೆ

ಪ್ರವಿತತನು ತಾನಾಗಿ ಕೃತಿಪತಿ ವಿವಿಧ ಕರ್ಮವ ಮಾಡಿ ಮಾಡಿಸಿ

ಭವಕೆ ಕಾರಣನಾಗಿ ತಿರುಗಿಸುತಿಹನು ತಿಳಿಸದಲೆ//4//


ಗುಣಿಗುಣಗಳೊಳಗೆ ಇದ್ದು ಗುಣಿಗುಣನು ಎನಿಸುವನು ಗುಣಬದ್ಧನಾಗದೆ

ಗುಣಜ ಪುಣ್ಯಾಪುಣ್ಯ ಫಲ ಬ್ರಹ್ಮಾದಿಚೇತನಕೆ ಉಣಿಸುತ ಅವರೊಳಗಿದ್ದು

ವೃಜಿನ ಅರ್ದನ ಚಿದಾನಂದೈಕ ದೇಹವನು

ಕೊನೆಗೆ ಸಚರಾಚಾರ ಜಗದ್ಭುಕುವೆನಿಪನು ಅವ್ಯಯನು//5//


ವಿದ್ಯೆ ತಾನೆನೆಸಿಕೊಂಬ ಅನಿರುದ್ಧದೇವನು

ಸರ್ವಜೀವರ ಬುದ್ಧಿಯಲಿ ತಾನಿದ್ದು ಕೃತಿಪತಿ ಬುದ್ಧಿಯೆನಿಸುವನು

ಸಿದ್ಧಿಯೆನಿಸುವ ಸಂಕರುಷನ ಪ್ರಸಿದ್ಧನಾಮಕ ವಾಸುದೇವ

ಅನವದ್ಯ ರೂಪ ಚತುಷ್ಟಯಗಳ ಅರಿತವನೆ ಪಂಡಿತನು//6//


ತನುಚತುಷ್ಟಯಗಳೊಳು ನಾರಾಯಣನು ಹೃತ್ಕಮಲಾಖ್ಯ ಸಿಂಹಾಸನದೊಳು

ಅನಿರುದ್ಧಾದಿ ರೂಪಗಳಿಂದ ಶೋಭಿಸುತ

ತನಗೆ ತಾನೇ ಸೇವ್ಯ ಸೇವಕನೆನೆಸಿ ಸೇವಾಸಕ್ತ ಸುರರೊಳಗೆ

ಅನವರತ ನೆಲೆಸಿದ್ದು ಸೇವೆಯ ಕೊಂಬನವರಂತೆ//7//


ಜಾಗರ ಸ್ವಪ್ನಂಗಳೊಳು ವರಭೋಗೀಶಯನನು ಬಹು ಪ್ರಕಾರ ವಿಭಾಗಗೈಸಿ

ನಿರಂಶಜೀವರ ಚಿತ್ಶರೀರವನು ಭೋಗವಿತ್ತು

ಸುಷುಪ್ತಿಕಾಲದಿ ಸಾಗರವ ನದಿ ಕೂಡುವಂತೆ

ವಿಯೋಗರಹಿತನು ಅಂಶಗಳನು ಏಕತ್ರವೈದಿಸುವ//8//


ಭಾರ್ಯರಿಂದೊಡಗೂಡಿ ಕಾರಣಕಾರ್ಯ ವಸ್ತುಗಳಲ್ಲಿ

ಪ್ರೆರಕಪ್ರೇರ್ಯ ರೂಪಗಳಿಂದ ಪಟತಂತುಗಳವೊಳಿದ್ದು

ಸೂರ್ಯ ಕಿರಣಗಳಂತೆ ತನ್ನಯ ವೀರ್ಯದಿಂದಲಿ ಕೊಡುತ ಕೊಳುತಿಹ

ಅನಾರ್ಯರಿಗೆ ಈತನ ವಿಹಾರವು ಗೋಚರಿಪುದೇನೋ//9//


ಜನಕ ತನ್ನ ಆತ್ಮಜಗೆ ವರ ಭೂಷಣದುಕೂಲವ ತೊಡಿಸಿ

ತಾ ವಂದನೆಯ ಕೈಕೊಳುತ ಹರಸುತ ಹರುಷಬಡುವಂತೆ

ವನರುಹೇಕ್ಷಣ ಪೂಜ್ಯ ಪೂಜಕನು ಎನಿಸಿ ಪೂಜಾಸಾಧನ

ಪದಾರ್ಥವನು ತನಗೆ ತಾನಾಗಿ ಫಲಗಳನೀವ ಭಜಕರಿಗೆ//10//


ತಂದೆ ಬಹು ಸಂಭ್ರಮದಿ ತನ್ನಯ ಬಂಧು ಬಳಗವ ನೆರಹಿ

ಮದುವೆಯ ನಂದನಗೆ ತಾ ಮಾಡಿ ಮನೆಯೊಳಗಿಡುವ ತೆರದಂತೆ

ಇಂದಿರಾಧವ ತನ್ನ ಇಚ್ಚಯಲಿಂದ ಗುಣಗಳ ಚೇತನಕೆ ಸಂಬಂಧಗೈಸಿ

ಸುಖಾಸುಖಾತ್ಮಕ ಸಂಸೃತಿಯೊಳು ಇಡುವ//11//


ತೃಣ ಕೃತ ಆಲಯದೊಳಗೆ ಪೋಗೆ ಸಂದಣಿಸಿ ಪ್ರತಿ ಛಿದ್ರದಲಿ ಪೊರಮಟ್ಟು

ಅನಳ ನಿರವನು ತೋರಿ ತೋರದಲಿಪ್ಪ ತೆರದಂತೆ

ವನಜಾಂಡದೊಳು ಅಖಿಳ ಜೀವರ ತನುವಿನ ಒಳ ಹೊರಗೆ ಇದ್ದು

ಕಾಣಿಸದೆ ಅನಿಮಿಶೇಷನು ಸಕಲ ಕರ್ಮವ ಮಾಳ್ಪನು ಅವರಂತೆ//12//


ಪಾದಪಗಳ ಅಡಿಗೆ ಎರೆಯೆ ಸಲಿಲವು ತೋದು ಕಂಬಿಗಳು ಉಬ್ಬಿ

ಪುಷ್ಪ ಸ್ವಾದು ಫಲವ ಈವಂದದಲಿ ಸರ್ವೇಶ್ವರನು

ಜನರ ಆರಾಧನೆಯ ಕೈಕೊಂಡು ಬ್ರಹ್ಮ ಭವಾದಿಗಳ ನಾಮದಲಿ ಫಲವಿತ್ತು

ಆದರಿಸುವನು ತನ್ನ ಮಹಿಮೆಯ ತೋರಗೊಡ ಜನಕೆ//13//


ಶೃತಿತತಿಗಳಿಗೆ ಗೋಚರಿಸದ ಅಪ್ರತಿಮ ಅಜಾನಂದಾತ್ಮನು ಅಚ್ಯುತ ವಿತತ

ವಿಶ್ವಾಧಾರ ವಿದ್ಯಾಧೀಶ ವಿಧಿ ಜನಕ

ಪ್ರತಿದಿವಸ ಚೇತನರೊಳಗೆ ಪ್ರಾಕೃತ ಪುರುಷನಂದದಲಿ ಸಂಚರಿಸುತ

ನಿಯಮ್ಯ ನಿಯಾಮಕನು ತಾನಾಗಿ ಸಂತೈಪ//14//


ಮನ ವಿಷಯದೊಳಗೆ ಇರಿಸಿ ವಿಷಯವ ಮನದೊಳಗೆ ನೆಲೆಗೊಳಿಸಿ

ಬಲು ನೂತನವು ಸುಸಮೀಚೀನವಿದು ಉಪಾದೇಯವೆಂದೆನಿಸಿ

ಕನಸಿಲಾದರು ತನ್ನ ಪಾದದ ನೆನೆವನು ಈಯದೆ

ಸರ್ವರೊಳಗಿದ್ದು ಅನುಭವಿಸುವನು ಸ್ಥೂಲ ವಿಷಯವ ವಿಶ್ವನೆಂದೆನಿಸಿ//15//


ತೋದಕನು ತಾನಾಗಿ ಮನ ಮೊದಲಾದ ಕರಣದೊಳು ಇದ್ದು ವಿಷಯವ ನೈದುವನು

ನಿಜಪೂರ್ಣ ಸುಖಮಯ ಗ್ರಾಹ್ಯ ಗ್ರಾಹಕನು

ವೇದ ವೇದ್ಯನು ತಿಳಿಯದವನೋಪಾದಿ ಭುಂಜಿಸುತ

ಎಲ್ಲರೊಳಗೆ ಆಹ್ಲಾದ ಪಡುವನು ಭಕ್ತವತ್ಸಲ ಭಾಗ್ಯಸಂಪನ್ನ//16//


ನಿತ್ಯನಿಗಮಾತೀತ ನಿರ್ಗುಣ ಭೃತ್ಯವತ್ಸಲ ಭಯವಿನಾಶನ

ಸತ್ಯಕಾಮ ಶರಣ್ಯ ಶ್ಯಾಮಲ ಕೋಮಲಾಂಗ ಸುಖಿ

ಮತ್ತನಂದದಿ ಮರ್ತ್ಯರ ಒಳ ಹೊರಗೆ ಎತ್ತ ನೋಡಲು ಸುತ್ತುತ ಇಪ್ಪನು

ಅತ್ಯಧಿಕ ಸಂತೃಪ್ತ ತ್ರಿಜಗದ್ವ್ಯಾಪ್ತ ಪರಮಾಪ್ತ//17//


ಪವಿ ಹರಿನ್ಮಣಿ ವಿದ್ರುಮದ ಸಚ್ಛವಿಗಳ ಅಂದದಿ

ರಾಜಿಸುತ ಮಾಧವ ನಿರಂತರ ಮಾನವ ದಾನವರೊಳು ಇದ್ದು

ತ್ರಿವಿಧ ಗುಣ ಕರ್ಮ ಸ್ವಭಾವವ ಪವನಮುಖ ದೇವಾಂತರಾತ್ಮಕ

ದಿವಸ ದಿವಸದಿ ವ್ಯಕ್ತಮಾಡುತಲಿ ಅವರೊಳಿದ್ದು ಉಣಿಪ//18//


ಅಣು ಮಹತ್ತಿನೊಳು ಇಪ್ಪ ಘನ ಪರಮಣುವಿನೊಳು ಅಡಗಿಸುವ

ಸೂಕ್ಷ್ಮವ ಮುಣುಗಿಸುವ ತೇಲಿಸುವ ಸ್ಥೂಲಗಳ ಅವನ ಮಾಯವಿದು

ದನುಜ ರಾಕ್ಷಸರು ಎಲ್ಲರು ಇವನೊಳು ಮುನಿದು ಮಾಡುವುದೇನು

ಉಲೂಖಲ ಒನಕೆಗಳು ಧಾನ್ಯಗಳ ಹಣಿವಂದದಲಿ ಸಂಹರಿಪ//19//


ದೇವ ಮಾನವ ದಾನವರು ಎಂದು ಈ ವಿಧದಲಿ ಆವಾಗಲಿ ಇಪ್ಪರು

ಮೂವರೊಳಗೆ ಇವಗೆ ಇಲ್ಲ ಸ್ನೇಹ ಉದಾಸೀನ ದ್ವೇಷ

ಜೀವರ ಅಧಿಕಾರ ಅನುಸಾರದಲಿ ಈವ ಸುಖ ಸಂಸಾರ ದುಃಖವ

ತಾ ಉಣದಲೆ ಅವರವರಿಗೆ ಉಣಿಸುವ ನಿರ್ಗತಾಶನನು//20//


ಎಲ್ಲಿ ಕೇಳಿದರೆ ಎಲ್ಲಿ ನೋಡಿದರೆ ಎಲ್ಲಿ ಬೇಡಿದರೆ ಎಲ್ಲಿ ನೀಡಿದರೆ

ಎಲ್ಲಿ ಓಡಿದರೆ ಎಲ್ಲಿ ಆಡಿದರೆ ಅಲ್ಲೇ ಇರುತಿಹನು

ಬಲ್ಲಿದರಿಗೆ ಅತಿ ಬಲ್ಲಿದನು ಸರಿಯಿಲ್ಲ ಇವಗೆ ಅಲ್ಲಿ ನೋಡಲು

ಖುಲ್ಲಮಾನವರೊಲ್ಲನು ಅಪ್ರತಿಮಲ್ಲ ಜಗಕೆಲ್ಲ//21//


ತಪ್ತ ಲೋಹವು ನೋಳ್ಪ ಜನರಿಗೆ ಸಪ್ತ ಜಿಹ್ವವ ತೆರದಿ ತೋರ್ಪದು

ಲುಪ್ತ ಪಾವಕ ಲೋಹ ಕಾಂಬುದು ಪೂರ್ವದೋಪಾದಿ

ಸಪ್ತವಾಹನ ನಿಖಿಳ ಜನರೊಳು ವ್ಯಾಪ್ತನು ಆದುದರಿಂದ

ಸರ್ವರೂ ಆಪ್ತರು ಆಗಿಹರು ಎಲ್ಲ ಕಾಲದಿ ಕೈಕೊಂಡು//22//


ವಾರಿದನು ಮಳೆಗರೆಯೆ ಬೆಳೆದಿಹ ಭೂರುಹಂಗಳು ಚಿತ್ರ ಫಲರಸ

ಬೇರೆ ಬೇರೆ ಇಪ್ಪಂತೆ ಬಹುವಿಧ ಜೀವರೊಳಗೆ ಇದ್ದು ಮಾರಮಣನು

ಅವರವರ ಯೋಗ್ಯತೆ ಮೀರದಲೆ ಗುಣಕರ್ಮಗಳ ಅನುಸಾರ ನಡೆಸುವ

ದೇವನಿಗೆ ವೈಷಮ್ಯವೆಲ್ಲಿಹುದೋ//23//


ವಾರಿಜಾಪ್ತನ ಕಿರಣ ಮಣಿಗಳ ಸೇರಿ ತತ್ತತ್ ವರ್ಣಗಳನು

ವಿಕಾರಗೈಸದೆ ನೋಳ್ಪರಿಗೆ ಕಂಗೊಳಿಸುವಂದದಲಿ

ಮಾರಮಣ ಲೋಕತ್ರಯದೊಳು ಇಹ ಮೂರುವಿಧ ಜೀವರೊಳಗೆ

ಇದ್ದು ವಿಹಾರಮಾಡುವನು ಅವರ ಯೋಗ್ಯತೆ ಕರ್ಮವ ಅನುಸರಿಸಿ//24//


ಜಲವನು ಅಪಹರಿಸುವ ಘಳಿಗೆ ಬಟ್ಟಲನು ಉಳಿದು

ಜಯಘಂಟೆ ಕೈಪಿಡಿದು ಎಳೆದು ಹೊಡೆವಂದದಲಿ

ಸಂತತ ಕರ್ತೃ ತಾನಾಗಿ ಹಲಧರಾನುಜ ಪುಣ್ಯ ಪಾಪದ ಫಲಗಳನು

ದೇವಾಸುರರ ಗಣದೊಳು ವಿಭಾಗವ ಮಾಡಿ ಉಣಿಸುತ ಸಾಕ್ಷಿಯಾಗಿಪ್ಪ//25//


ಪೊಂದಿಕೊಂಡಿಹ ಸರ್ವರೊಳು ಸಂಬಂಧವಾಗದೆ

ಸಕಲಕರ್ಮವ ಅರಂದದಲಿ ತಾ ಮಾಡಿಮಾಡಿಪ ತತ್ಫಲಗಳುಣದೆ

ಕುಂದದೆ ಅಣುಮಾಹತ್ತು ಎನಿಪ ಘಟಮಂದಿರದಿ ಸರ್ವತ್ರ ತುಂಬಿಹ

ಬಾಂದಳದ ತೆರೆದಂತೆ ಇರುತಿಪ್ಪನು ರಮಾರಮಣ//26//


ಕಾದ ಕಬ್ಬಿಣ ಹಿಡಿದು ಬಡಿಯಲು ವೇದನೆಯು ಲೋಹಗಳಿಗೆ ಅಲ್ಲವೆ

ಆದುದೇನೈ ಅನಳಗಾ ವ್ಯಥೆ ಏನು ಮಾಡಿದರು

ಆದಿದೇವನು ಸರ್ವ ಜೀವರ ಕಾದುಕೊಂಡಿಹನು ಒಳಹೊರಗೆ

ದುಃಖಾದಿಗಳು ಸಂಬಂಧವಾಗುವವೇನೋ ಚಿನ್ಮಯಗೆ//27//


ಮಳಲ ಮನೆಗಳ ಮಾಡಿ ಮಕ್ಕಳು ಕಾಲದಲಾಡಿ ಮೋದದಿ ತುಳಿದು ಕೆಡಿಸುವ ತೆರದಿ

ಲಕ್ಷ್ಮೀರಮಣ ಲೋಕಗಳ ಹಲವು ಬಗೆಯಲಿ ನಿರ್ಮಿಸುವ

ನಿಶ್ಚಲನು ತಾನಾಗಿದ್ದು ಸಲಹುವ

ಎಲರುಣಿಯವೋಳ್ ನುಂಗುವಗೆ ಎಲ್ಲಿಹುದೋ ಸುಖ ದುಃಖ//28//


ವೇಷಭಾಷೆಗಳಿಂದ ಜನರ ಪ್ರಮೋಷಗೈಸುವ ನಟಪುರುಷನೋಳ್

ದೋಷದೂರನು ಲೋಕದೊಳು ಬಹುರೂಪ ಮಾತಿನಲಿ ತೋಷಿಸುವನು

ಅವರವರ ಮನದ ಅಭಿಲಾಷೆಗಳ ಪೂರೈಸುತ ಅನುದಿನ ಪೋಷಿಸುವ

ಪೂತಾತ್ಮ ಪೂರ್ಣ ಆನಂದ ಜ್ಞಾನಮಯ//29//


ಅಧಮ ಮಾನವನು ಓರ್ವ ಮಂತ್ರೌಷಧಗಳನು ತಾನರಿತು

ಪಾವಕೋದಕಗಳ ಸಂಬಂಧವಿಲ್ಲದಲಿಪ್ಪನು ಅದರೊಳಗೆ

ಪದುಮಜ ಅಂಡ ಉದರನು ಸರ್ವರ ಹೃದಯದೊಳಗೆ ಇರೆ

ಕಾಲಗುಣಕರ್ಮದ ಕಲುಷ ಸಂಬಂಧವಾಗುವುದೇ ನಿರಂಜನಗೆ//30//


ಒಂದು ಗುಣದೊಳು ಅನಂತ ಗುಣಗಳು ಒಂದು ರೂಪದೊಳು ಇಹವು

ಲೋಕಗಳ ಒಂದೇ ರೂಪದಿ ಧರಿಸಿ ತದ್ಗತ ಪದಾರ್ಥದ ಒಳ ಹೊರಗೆ

ಬಾಂದಳದೊಳಿದ್ದು ಬಹು ಪೆಸರಿಂದ ಕರೆಸುತ

ಪೂರ್ಣ ಜ್ನಾನಾನಂದಮಯ ಪರಿಪರಿ ವಿಹಾರವ ಮಾಡಿ ಮಾಡಿಸುವ//31//


ಎಲ್ಲರೊಳು ತಾನಿಪ್ಪ ತನ್ನೊಳಗೆ ಎಲ್ಲರನು ಧರಿಸಿಹನು

ಅಪ್ರತಿಮಲ್ಲ ಮನ್ಮಥಜನಕ ಜಗದ ಆದಿ ಅಂತ ಮಧ್ಯಗಳ ಬಲ್ಲ

ಬಹುಗುಣ ಭರಿತ ದಾನವ ದಲ್ಲಣ ಜಗನ್ನಾಥ ವಿಠಲ

ಸೊಲ್ಲು ಲಾಲಿಸಿ ಸ್ತಂಭದಿಂದಲಿ ಬಂದ ಭಕುತನಿಗೆ//32//


 
//ಇತಿ ಶ್ರೀ ವ್ಯಾಪ್ತಿ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು

Wednesday, December 19, 2012

ಶ್ರೀ ಹರಿಕಥಾಮೃತಸಾರ - 2

//ಶ್ರೀ ಗುರುಭ್ಯೋ ನಮಃ//


//ಪರಮ ಗುರುಭ್ಯೋ ನಮಃ//


//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//


ಶ್ರೀ ಜಗನ್ನಾಥದಾಸ ವಿರಚಿತ


ಶ್ರೀ ಹರಿಕಥಾಮೃತಸಾರ


//ಕರುಣಾ ಸಂಧಿ//


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಶ್ರವಣ ಮನಕಾನಂದವೀವುದು ಭವಜನಿತ ದುಃಖಗಳ ಕಳೆವುದು

ವಿವಿಧ ಭೋಗಗಳು ಇಹಪರಂಗಳಲಿ ಇತ್ತು ಸಲಹುವುದು

ಭುವನ ಪಾವನವೆನಿಪ ಲಕ್ಷ್ಮೀ ಧವನ ಮಂಗಳ ಕಥೆಯ

ಪರಮ ಉತ್ಸವದಿ ಕಿವಿಗೊಟ್ಟು ಆಲಿಪುದು ಭೂಸುರರು ದಿನದಿನದಿ//1//


ಮಳೆಯ ನೀರು ಓಣಿಯೊಳು ಪರಿಯಲು, ಬಳಸರು ಊರೊಳಗೆ ಇದ್ದ ಜನರು

ಆ ಜಲವು ಹೆದ್ದೊರೆಗೂಡೆ ಮಜ್ಜನಪಾನ ಗೈದಪರು

ಕಲುಷ ವಚನಗಳ ಆದಡೆಯು, ಬಾಂಬೊಳೆಯ ಪೆತ್ತನ ಪಾದ ಮಹಿಮ

ಆ ಜಲದಿ ಪೊಕ್ಕದರಿಂದ ಮಾಣ್ದಪರೆ ಮಹೀಸುರರು//2//


ಶೃತಿತತಿಗಳ ಅಭಿಮಾನಿ ಲಕ್ಷ್ಮೀಸ್ತುತಿಗಳಿಗೆ ಗೋಚರಿಸದ

ಅಪ್ರತಿಹತ ಮಹೈಶ್ವರ್ಯಾದಿ ಅಖಿಲ ಸದ್ಗುಣ ಗಣಾಂಭೋಧಿ

ಪ್ರತಿದಿವಸ ತನ್ನಂಘ್ರಿ ಸೇವಾರತ ಮಹಾತ್ಮರು ಮಾಡುತಿಹ

ಸಂಸ್ತುತಿಗೆವಶನಾಗುವೆನು ಇವನ ಕಾರುಣ್ಯಕೆ ಏನೆಂಬೆ//3//


ಮನವಚನಕೆ ಅತಿದೂರ ನೆನೆವರನು ಅನುಸರಿಸಿ ತಿರುಗುವನು ಜಾಹ್ನವಿ ಜನಕ

ಜನರೊಳಗಿದ್ದು ಜನಿಸುವ ಜಗದುದರ ತಾನು

ಘನಮಹಿಮ ಗಾಂಗೇಯನುತ ಗಾಯನವ ಕೇಳುತ

ಗಗನಚರ ವಾಹನ ದಿವೌಕಸರೊಡನೆ ಚರಿಸುವ ಮನೆಮನೆಗಳಲ್ಲಿ//4//


ಮಲಗಿ ಪರಮಾದರದಿ ಪಾಡಲು ಕುಳಿತು ಕೇಳುವ

ಕುಳಿತು ಪಾಡಲು ನಿಲುವ ನಿಂತರೆ ನಲಿವ ನಲಿದರೆ ಒಲಿವ ನಿಮಗೆಂಬ

ಸುಲಭನೋ ಹರಿ ತನ್ನವರನು ಅರಘಳಿಗೆ ಬಿಟ್ಟಗಲನು

ರಮಾಧವನ ಒಲಿಸಲರಿಯದೆ ಪಾಮರರು ಬಳಲುವರು ಭವದೊಳಗೆ//5//


 
ಮನದೊಳಗೆ ತಾನಿದ್ದು ಮನವೆಂದು ಎನಿಸಿಕೊಂಬನು

ಮನದ ವೃತ್ತಿಗಳ ಅನುಸರಿಸಿ ಭೋಗಂಗಳೀವನು ತ್ರಿವಿಧ ಚೇತನಕೆ

ಮನವಿತ್ತರೆ ತನ್ನನೀವನು ತನುವ ದಂಡಿಸಿ ದಿನದಿನದಿ ಸಾಧನವ ಮಾಳ್ಪರಿಗೆ

ಇತ್ತಪನು ಸ್ವರ್ಗಾದಿ ಭೋಗಗಳ//6//


ಪರಮ ಸತ್ಪುರುಷಾರ್ಥರೂಪವನು ಹರಿಯು ಲೋಕಕೆ ಎಂದು

ಪರಮಾದರದಿ ಸದುಪಾಸನೆಯ ಗೈವರಿಗೆ ಇತ್ತಪನು ತನ್ನ

ಮರೆದು ಧರ್ಮಾರ್ಥಗಳ ಕಾಮಿಸುವರಿಗೆ ನಗುತ ಅತಿಶೀಘ್ರದಿಂದಲಿ

ಸುರಪತನಯ ಸುಯೋಧನರಿಗೆ ಇತ್ತಂತೆ ಕೊಡುತಿಪ್ಪ //7//


ಜಗವನೆಲ್ಲವ ನಿರ್ಮಿಸುವ ನಾಲ್ಮೊಗನೊಳಗೆ ತಾನಿದ್ದು ಸಲಹುವ

ಗಗನಕೇಶನೊಳಿದ್ದು ಸಂಹರಿಸುವನು ಲೋಕಗಳ

ಸ್ವಗತಭೇದ ವಿವರ್ಜಿತನು ಸರ್ವಗ ಸದಾನಂದೈಕ ದೇಹನು

ಬಗೆಬಗೆಯ ನಾಮದಲಿ ಕರೆಸುವ ಭಕುತರನು ಪೊರೆವ//8//


ಒಬ್ಬನಲಿ ನಿಂದಾಡುವನು ಮತ್ತೊಬ್ಬನಲಿ ನೋಡುವನು

ಬೇಡುವನು ಒಬ್ಬನಲಿ ನೀಡುವನು ಮಾತಾಡುವನು ಬೆರಗಾಗಿ

ಅಬ್ಬರದ ಹೆದ್ದೈವನು ಇವ ಮತ್ತೊಬ್ಬರನ ಲೆಕ್ಕಿಸನು

ಲೋಕದೊಳು ಒಬ್ಬನೇ ತಾ ಬಾಧ್ಯ ಬಾಧಕನಾಹ ನಿರ್ಭೀತ//9//


ಶರಣಜನ ಮಂದಾರ ಶಾಶ್ವತ ಕರುಣಿ ಕಮಲಾಕಾಂತ ಕಾಮದ

ಪರಮ ಪಾವನತರ ಸುಮಂಗಳ ಚರಿತ ಪಾರ್ಥಸಖ

ನಿರುಪಮಾನಂದಾತ್ಮ ನಿರ್ಗತ ದುರಿತ ದೇವವರೇಣ್ಯನೆಂದು

ಆದರದಿ ಕರೆಯಲು ಬಂದೊದಗುವನು ತನ್ನವರ ಬಳಿಗೆ//10//


ಜನನಿಯನು ಕಾಣದಿಹ ಬಾಲಕ ನೆನೆನೆನದು ಹಲುಬುತಿರೆ

ಕತ್ತಲೆ ಮನೆಯೊಳು ಅಡಗಿದ್ದು ಅವನ ನೋಡುತ ನಗುತ ಹರುಷದಲಿ

ತನಯನಂ ಬಿಗಿದಪ್ಪಿ ರಂಬಿಸಿ ಕನಲಿಕೆಯ ಕಳೆವಂತೆ

ಮಧುಸೂದನನು ತನ್ನವರು ಇದ್ದೆಡೆಗೆ ಬಂದೊದಗಿ ಸಲಹುವನು//11//


ಇಟ್ಟಿಕಲ್ಲನು ಭಕುತಿಯಿಂದಲಿ ಕೊಟ್ಟ ಭಕುತಗೆ ಮೆಚ್ಚಿ ತಣ್ಣನೆ ಕೊಟ್ಟ

ಬಡಬ್ರಾಹ್ಮಣನ ಒಪ್ಪಿಡಿಯವಲಿಗೆ ಅಖಿಳಾರ್ಥ

ಕೆಟ್ಟ ಮಾತುಗಳೆಂದ ಚೈದ್ಯನ ಪೊಟ್ಟೆಯೊಳಗಿಂಬಿಟ್ಟ

ಬಾಣದಲಿಟ್ಟ ಭೀಷ್ಮನ ಅವಗುಣಗಳೆಣಿಸಿದನೆ ಕರುಣಾಳು//12//


ಧನವ ಸಂರಕ್ಷಿಸುವ ಫಣಿ ತಾನುಣದೆ ಮತ್ತೊಬ್ಬರಿಗೆ ಕೊಡದೆ

ಅನುದಿನದಿ ನೋಡುತ ಸುಖಿಸುವಂದದಿ

ಲಕುಮಿವಲ್ಲಭನು ಪ್ರಣತರನು ಕಾಯ್ದಿಹನು ನಿಷ್ಕಾಮನದಿ

ನಿತ್ಯಾನಂದಮಯ ದುರ್ಜನರ ಸೇವೆಯನು ಒಲ್ಲನು ಅಪ್ರತಿಮಲ್ಲ ಜಗಕೆಲ್ಲ//13//


ಬಾಲಕನ ಕಲಭಾಷೆ ಜನನಿ ಕೇಳಿ ಸುಖಪಡುವಂತೆ

ಲಕ್ಷ್ಮೀಲೋಲ ಭಕ್ತರು ಮಾಡುತಿಹ ಸಂಸ್ತುತಿಗೆ ಹಿಗ್ಗುವನು

ತಾಳ ತನ್ನವರಲ್ಲಿ ಮಾಡ್ವ ಅವಹೇಳನವ

ಹೆದ್ದೈವ ವಿದುರನ ಆಲಯದಿ ಪಾಲುಂಡು ಕುರುಪನ ಮಾನವನೆ ಕೊಂಡ//14//


ಸ್ಮರಿಸುವವರ ಅಪರಾಧಗಳ ತಾಸ್ಮರಿಸ ಸಕಲ ಇಷ್ಟ ಪ್ರದಾಯಕ

ಮರಳಿ ತನಗೆ ಅರ್ಪಿಸಲು ಕೊಟ್ಟುದ ಅನಂತಮಡಿ ಮಾಡಿ ಪರಿಪರಿಯಲಿಂದ ಉಣಿಸಿ

ಸುಖ ಸಾಗರದಿ ಲೋಲಾಡಿಸುವ ಮಂಗಳಚರಿತ

ಚಿನ್ಮಯಗಾತ್ರ ಲೋಕಪವಿತ್ರ ಸುಚರಿತ್ರ//15//


ಏನು ಕರುಣನಿಧಿಯೋ ಹರಿ ಮತ್ತೇನು ಭಕ್ತಾಧೀನನೋ

ಇನ್ನೇನು ಈತನ ಲೀಲೆ ಇಚ್ಚಾಮಾತ್ರದಲಿ ಜಗವ ತಾನೇ ಸೃಜಿಸುವ ಪಾಲಿಸುವ

ನಿರ್ವಾಣ ಮೊದಲಾದ ಅಖಿಲ ಲೋಕಸ್ಥಾನದಲಿ

ಮತ್ತೆ ಅವರನು ಇಟ್ಟು ಆನಂದ ಬಡಿಸುವನು//16//


ಜನಪ ಮೆಚ್ಚಿದರೆ ಈವ ಧನವಾಹನ ವಿಭೂಷಣ ವಸನಭೂಮಿ

ತನುಮನಗಳ ಇತ್ತು ಆದರಿಪರು ಉಂಟೇನೋ ಲೋಕದೊಳು

ಅನವರತ ನೆನೆವವರ ಅನಂತಾಸನವೆ ಮೊದಲಾದ ಆಲಯದೊಳಿಟ್ಟು

ಅಣುಗನಂದದಲಿ ಅವರ ವಶನಾಗುವ ಮಹಾಮಹಿಮ//17//


ಭುವನ ಪಾವನ ಚರಿತ ಪುಣ್ಯಶ್ರವಣಕೀರ್ತನ ಪಾಪನಾಶನ

ಕವಿಭಿರೀಡಿತ ಕೈರವದಳಶ್ಯಾಮ ನಿಸ್ಸೀಮ

ಯುವತಿವೇಷದಿ ಹಿಂದೆ ಗೌರೀಧವನ ಮೋಹಿನಿ ಕೆಡಿಸಿ ಉಳಿಸಿದ

ಇವನ ಮಾಯವ ಗೆಲುವನಾವನು ಈ ಜಗತ್ರಯದಿ//18//


ಪಾಪಕರ್ಮವ ಸಹಿಸುವಡೆ ಲಕ್ಷ್ಮೀಪತಿಗೆ ಸಮರಾದ ದಿವಿಜರನು

ಈ ಪಯೋಜಭವಾಂಡದೊಳಗೆ ಆವಲ್ಲಿ ನಾ ಕಾಣೆ

ಗೊಪಗುರುವಿನ ಮಡದಿಭೃಗುನಗಚಾಪ ಮೊದಲಾದವರು ಮಾಡ್ದ

ಮಹಾಪರಾಧಗಳ ಎಣಿಸಿದನೆ ಕರುಣಾ ಸಮುದ್ರ ಹರಿ//19//


ಅಂಗುಟಾಗ್ರದಿ ಜನಿಸಿದ ಅಮರತರಂಗಿಣಿಯು ಲೋಕತ್ರಯಗಳ ಅಘಹಿಂಗಿಸುವಳು

ಅವ್ಯಾಕೃತಾಶಾಂತ ವ್ಯಾಪಿಸಿದ ಇಂಗಡಲ ಮಗಳ ಒಡೆಯನ

ಅಂಗೋಪಾಂಗಗಳಲಿ ಇಪ್ಪ

ಅಮಲಾನಂತ ಸುಮಂಗಳಪ್ರದ ನಾಮ ಪಾವನಮಾಳ್ಪದೇನರಿದು//20//


ಕಾಮಧೇನು ಸುಕಲ್ಪತರು ಚಿಂತಾಮಣಿಗಳು

ಅಮರೇಂದ್ರ ಲೋಕದಿ ಕಾಮಿತಾರ್ಥಗಳು ಈವವಲ್ಲದೆ ಸೇವೆ ಮಾಳ್ಪರಿಗೆ

ಶ್ರೀಮುಕುಂದನ ಪರಮ ಮಂಗಳನಾಮ ನರಕಸ್ಥರನು ಸಲಹಿತು

ಪಾಮರರ ಪಂಡಿತರೆನಿಸಿ ಪುರುಷಾರ್ಥ ಕೊಡುತಿಹುದು//21//


ಮನದೊಳಗೆ ಸುಂದರ ಪದಾರ್ಥವ ನೆನೆದು ಕೊಡೆ ಕೈಕೊಂಡು

ಬಲು ನೂತನ ಸುಶೋಭಿತ ಗಂಧ ಸುರಸೋಪೇತ ಫಲರಾಶಿ

ದ್ಯುನದಿ ನಿವಹಗಳಂತೆ ಕೊಟ್ಟು ಅವರನು ಸದಾ ಸಂತೈಸುವನು

ಸದ್ಗುಣವ ಕದ್ದವರ ಅಘವ ಕದಿವನು ಅನಘನೆಂದೆನಿಸಿ//22//


ಚೇತನಾ ಚೇತನ ವಿಲಕ್ಷಣ ನೂತನ ಪದಾರ್ಥಗಳೊಳಗೆ ಬಲುನೂತನ

ಅತಿಸುಂದರಕೆ ಸುಂದರ ರಸಕೆ ರಸರೂಪ

ಜಾತರೂಪೋದರ ಭವ ಆದ್ಯರೊಳು ಆತತ ಪ್ರತಿಮ ಪ್ರಭಾವ

ಧರಾತಳದೊಳು ಎಮ್ಮೊಡನೆ ಆಡುತಲಿಪ್ಪ ನಮ್ಮಪ್ಪ//23//


ತಂದೆ ತಾಯ್ಗಳು ತಮ್ಮ ಶಿಶುವಿಗೆ ಬಂದ ಭಯಗಳ ಪರಿಹರಿಸಿ

ನಿಜ ಮಂದಿರದಿ ಬೇಡಿದುದನು ಇತ್ತು ಆದರಿಸುವಂದದಲಿ

ಹಿಂದೆ ಮುಂದೆ ಎಡಬಲದಿ ಒಳಹೊರಗೆ ಇಂದಿರೇಶನು ತನ್ನವರನು

ಎಂದೆಂದು ಸಲಹುವನು ಆಗಸದೊಳ್ ಎತ್ತ ನೋಡಿದರು//24//


ಒಡಲ ನೆಳಲಂದದಲಿ ಹರಿ ನಮ್ಮೊಡನೆ ತಿರುಗುವನು

ಒಂದರೆಕ್ಷಣ ಬಿಡದೆ ಬೆಂಬಲವಾಗಿ ಭಕ್ತಾದೀನನೆಂದೆನಿಸಿ

ತಡೆವ ದುರಿತೌಘಗಳ ಕಾಮದ ಕೊಡುವ ಸಕಲೇಷ್ಟಗಳ

ಸಂತತ ನಡೆವ ನಮ್ಮಂದದಲಿ ನವಿಸು ವಿಶೇಷ ಸನ್ಮಹಿಮ//25//


ಬಿಟ್ಟವರ ಭವಪಾಶದಿಂದಲಿ ಕಟ್ಟುವನು ಬಹುಕಠಿಣನಿವ

ಶಿಷ್ಟೇಷ್ಟನೆಂದರಿದು ಅನವರತ ಸದ್ಭಕ್ತಿ ಪಾಶದಲಿ ಕಟ್ಟುವರ

ಭವಕಟ್ಟು ಬಿಡಿಸುವ ಸಿಟ್ಟಿನವನು ಇವನಲ್ಲ

ಕಾಮದ ಕೊಟ್ಟುಕಾವನು ಸಕಲ ಸೌಖ್ಯವನು ಇಹಪರಂಗಗಳಲಿ //26//


ಕಣ್ಣಿಗೆ ಎವೆಯಂದದಲಿ ಕೈ ಮೈ ತಿಣ್ಣಿಗೊದಗುವ ತೆರದಿ

ಪಲ್ಗಳು ಪಣ್ಣು ಫಲಗಳನಗಿದು ಜಿಹ್ವೆಗೆ ರಸವನೀವಂತೆ

ಪುಣ್ಯ ಫಲವ ಈವಂದದಲಿ ನುಡಿವೆಣ್ಣಿ ನಾಣ್ಮಾoಡದೊಳು

ಲಕ್ಷ್ಮಣನ ಅಣ್ಣನು ಒದಗುವ ಭಕ್ತರ ಅವಸರಕೆ ಅಮರಗಣ ಸಹಿತ//27//


ಕೊಟ್ಟದನು ಕೈಕೊಂಬ ಅರೆಕ್ಷಣಬಿಟ್ಟಗಲ ತನ್ನವರ

ದುರಿತಗಳ ಅಟ್ಟುವನು ದೂರದಲಿ ದುರಿತಾರಣ್ಯ ಪಾವಕನು

ಬೆಟ್ಟ ಬೆನ್ನಿಲಿ ಹೊರಿಸಿದವರೊಳು ಸಿಟ್ಟು ಮಾಡಿದನೇನೋ ಹರಿ

ಕಂಗೆಟ್ಟ ಸುರರಿಗೆ ಸುಧೆಯನು ಉಣಿಸಿದ ಮುರಿದನಹಿತರನಾ//28//


ಖೇದ ಮೋದ ಜಯಾಪಾಜಯ ಮೊದಲಾದ ದೋಷಗಳಿಲ್ಲ ಚಿನ್ಮಯ ಸಾದರದಿ

ತನ್ನಂಘ್ರಿಕಮಲವ ನಂಬಿ ಸ್ತುತಿಸುವರ ಕಾದುಕೊಂಡಿಹ

ಪರಮಕರುಣ ಮಹೋದಧಿಯು ತನ್ನವರು ಮಾಡ್ದ

ಮಹಾಪರಾಧಗಳ ನೋಡದಲೆ ಸಲಹುವ ಸರ್ವಕಾಮದನು//29//


ಮೀನಕೂರ್ಮ ವರಾಹ ನರಪಂಚಾನನ ಅತುಳ ಶೌರ್ಯ

ವಾಮನ ರೇಣುಕಾತ್ಮಜ ರಾವಣಾದಿನಿಶಾಚರಧ್ವಂಸಿ

ಧೇನುಕಾಸುರಮಥನ ತ್ರಿಪುರವ ಹಾನಿಗೈನಿಸಿದ ನಿಪುಣ

ಕಲಿಮುಖ ದಾನವರ ಸಂಹರಿಸಿ ಧರ್ಮದಿ ಕಾಯ್ದ ಸುಜನರನಾ//30//


ಶ್ರೀ ಮನೋರಮ ಶಮಲ ವರ್ಜಿತ ಕಾಮಿತಪ್ರದ

ಕೈರವದಳ ಶ್ಯಾಮ ಶಬಲ ಶರಣ್ಯ ಶಾಶ್ವತ ಶರ್ಕರಾಕ್ಷ ಸಖ

ಸಾಮಸನ್ನುತ ಸಕಲ ಗುಣಗಣಧಾಮ

ಶ್ರೀ ಜಗನ್ನಾಥ ವಿಠಲನು ಈ ಮಹಿಯೊಳು ಅವತರಿಸಿ ಸಲಹಿದ ಸಕಲ ಸುಜನರನಾ//31//


//ಇತಿ ಶ್ರೀ ಕರುಣಾ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು


Monday, December 17, 2012

ಶ್ರೀ ಹರಿಕಥಾಮೃತಸಾರ - 1

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಮಂಗಳಾಚರಣ ಸಂಧಿ//


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಶ್ರೀರಮಣಿ ಕರಕಮಲ ಪೂಜಿತ ಚಾರುಚರಣ ಸರೋಜ

ಬ್ರಹ್ಮ ಸಮೀರವಾಣಿ ಫಣೀಂದ್ರವೀಂದ್ರ ಭವ ಇಂದ್ರ ಮುಖ ವಿನುತ

ನೀರಜಭವಾಂಡ ಉದಯ ಸ್ಥಿತಿ ಕಾರಣನೆ ಕೈವಲ್ಯದಾಯಕ

ನಾರಸಿಂಹನೆ ನಮಿಪೆ ಕರುಣಿಪುದು ಎಮಗೆ ಮಂಗಳವ//1//


ಜಗದುದರನ ಅತಿ ವಿಮಲ ಗುಣರೂಪಗಳನು ಆಲೋಚನದಿ

ಭಾರತ ನಿಗಮತತಿಗಳ ಅತಿಕ್ರಮಿಸಿ ಕ್ರಿಯಾ ವಿಶೇಷಗಳ

ಬಗೆಬಗೆಯ ನೂತನವ ಕಾಣುತ ಮಿಗೆ ಹರುಷದಿಂ ಪೊಗಳಿ ಹಿಗ್ಗುವ

ತ್ರಿಗುಣಮಾನಿ ಮಹಾಲಕುಮಿ ಸಂತೈಸಲಿ ಅನುದಿನವು//2//


ನಿರುಪಮಾನಂದಾತ್ಮ ಭವ ನಿರ್ಜರ ಸಭಾಸಂಸೇವ್ಯ

ಋಜುಗಣದ ಅರಸೆ ಸತ್ವಪ್ರಚುರ ವಾಣೀಮುಖಸರೋಜೇನ

ಗರುಡ ಶೇಷ ಶಶಾಂಕದಳ ಶೇಖರರ ಜನಕ ಜಗದ್ಗುರುವೇ

ತ್ವಚ್ಚರಣಗಳಿಗೆ ಅಭಿವಂದಿಸುವೆ ಪಾಲಿಪುದು ಸನ್ಮತಿಯ//3//


ಆರುಮೂರೆರೆಡೊoದು ಸಾವಿರ ಮೂರೆರೆಡು ಶತಶ್ವಾಸ ಜಪಗಳ

ಮೂರು ವಿಧ ಜೀವರೊಳಗೆ ಅಬ್ಜಜಕಲ್ಪ ಪರಿಯಂತ ತಾ ರಚಿಸಿ

ಸತ್ವರಿಗೆ ಸುಖ ಸಂಸಾರ ಮಿಶ್ರರಿಗೆ ಅಧಮಜನರಿಗೆ

ಅಪಾರ ದುಃಖಗಳ ಈವ ಗುರು ಪವಮಾನ ಸಲಹೆಮ್ಮ//4//


ಚತುರವದನನ ರಾಣಿ ಅತಿರೋಹಿತ ವಿಮಲಾ ವಿಜ್ಞಾನಿ

ನಿಗಮ ಪ್ರತತಿಗಳಿಗಭಿಮಾನಿ ವೀಣಾಪಾಣಿ ಬ್ರಹ್ಮಾಣಿ

ನತಿಸಿ ಬೇಡುವೆ ಜನನಿ ಲಕ್ಷ್ಮೀಪತಿಯ ಗುಣಗಳ ತುತಿಪುದಕೆ

ಸನ್ಮತಿಯ ಪಾಲಿಸಿ ನೆಲೆಸು ನೀ ಮದ್ವದನ ಸದನದಲಿ//5//


ಕೃತಿರಮಣ ಪ್ರದ್ಯುಮ್ನನಂದನೆ ಚತುರವಿಂಶತಿ

ದೇವತೆಗಳಿಗೆ ಗುರುವೆನಿಸುತಿಹ ಮಾರುತನ ನಿಜಪತ್ನಿ

ಸತತ ಹರಿಯಲಿ ಗುರುಗಳಲಿ ಸದ್ಗತಿಯ ಪಾಲಿಸಿ

ಭಾಗವತ ಭಾರತ ಪುರಾಣ ರಹಸ್ಯ ತತ್ವಗಳು ಅರುಪು ಕರುಣದಲಿ //6//


ವೇದಪೀಠ ವಿರಿಂಚಿ ಭವ ಶುಕ್ರ ಆದಿಸುರ ವಿಜ್ಞಾನದಾಯಕ

ಮೋದ ಚಿನ್ಮಯ ಗಾತ್ರ ಲೋಕಪವಿತ್ರ ಸುಚರಿತ್ರ

ಛೇದ ಭೇದ ವಿಷಾದ ಕುಟಿಲಾಂತಾದಿ ಮಧ್ಯ ವಿದೂರ

ಆದಾನಾದಿ ಕಾರಣ ಬಾದರಾಯಣ ಪಾಹಿ ಸತ್ರಾಣ//7//


ಕ್ಷಿತಿಯೊಳಗೆ ಮಣಿಮಂತ ಮೊದಲಾದ ಅತಿ ದುರಾತ್ಮರು

ಒಂದಧಿಕ ವಿಂಶತಿ ಕುಭಾಷ್ಯವ ರಚಿಸೆ

ನಡುಮನೆಯೆಂಬ ಬ್ರಾಹ್ಮಣನ ಸತಿಯ ಜಠರದೊಳು ಅವತರಿಸಿ ಭಾರತೀರಮಣ

ಮಧ್ವಭಿದಾನದಿ ಚತುರದಶ ಲೋಕದಲಿ ಮೆರೆದ ಅಪ್ರತಿಮಗೆ ವಂದಿಸುವೆ//8//


ಪಂಚಭೇದಾತ್ಮಕ ಪ್ರಪಂಚಕೆ ಪಂಚರೂಪಾತ್ಮಕನೆ ದೈವಕ

ಪಂಚಮುಖ ಶಕ್ರಾದಿಗಳು ಕಿಂಕರರು ಶ್ರೀಹರಿಗೆ

ಪಂಚವಿಂಶತಿ ತತ್ವ ತರತಮ ಪಂಚಿಕೆಗಳನು ಪೇಳ್ದ

ಭಾವೀ ವಿರಿಂಚಿಯೆನಿಪ ಆನಂದತೀರ್ಥರ ನೆನೆವೆನನುದಿನವು//9//


ವಾಮದೇವ ವಿರಿಂಚಿತನಯ ಉಮಾಮನೋಹರ ಉಗ್ರ ಧೂರ್ಜಟಿ

ಸಾಮಜಾಜಿನ ವಸನಭೂಷಣ ಸುಮನಸೋತ್ತಂಸ ಕಾಮಹರ ಕೈಲಾಸ ಮಂದಿರ

ಸೋಮಸೂರ್ಯಾನಲ ವಿಲೋಚನ

ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಲವ//10//


ಕೃತ್ತಿವಾಸನೆ ಹಿಂದೆ ನೀ ನಾಲ್ವತ್ತು ಕಲ್ಪಸಮೀರನಲಿ ಶಿಷ್ಯತ್ವವಹಿಸಿ

ಅಖಿಳ ಆಗಮಾರ್ಥಗಳೋದಿ ಜಲಧಿಯೊಳು ಹತ್ತು ಕಲ್ಪದಿ ತಪವಗೈದು

ಆದಿತ್ಯರೊಳಗೆ ಉತ್ತಮನೆನಿಸಿ

ಪುರುಷೋತ್ತಮನ ಪರಿಯಂಕ ಪದವೈದಿದೆಯೋ ಮಹದೇವ//11//


ಪಾಕಶಾಸನ ಮುಖ್ಯ ಸಕಲ ದಿವೌಕಸರಿಗೆ ಅಭಿನಮಿಪೆ

ಋಷಿಗಳಿಗೆ ಏಕಚಿತ್ತದಿ ಪಿತೃಗಳಿಗೆ ಗಂಧರ್ವ ಕ್ಷಿತಿಪರಿಗೆ

ಆ ಕಮಲನಾಭದಿ ಯತಿಗಳಾನೀಕಕಾನಮಿಸುವೆನು ಬಿಡದೆ

ರಮಾಕಳತ್ರನ ದಾಸವರ್ಗಕೆ ನಮಿಪೆನು ಅನವರತ//12//


ಪರಿಮಳವು ಸುಮನದೊಳಗೆ ಅನಲನು ಅರಣಿಯೊಳಗೆ ಇಪ್ಪಂತೆ

ದಾಮೋದರನು ಬ್ರಹ್ಮಾದಿಗಳ ಮನದಲಿ ತೋರಿತೋರದಲೆ ಇರುತಿಹ

ಜಗನ್ನಾಥ ವಿಠಲನ ಕರುಣ ಪಡೆವ ಮುಮುಕ್ಷುಜೀವರು

ಪರಮ ಭಾಗವತರನು ಕೊಂಡಾಡುವುದು ಪ್ರತಿದಿನವು//13//


//ಇತಿ ಶ್ರೀ ಮಂಗಳಾಚರಣ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು





Thursday, December 13, 2012

ತೂಗಿರೆ ರಂಗನ ತೂಗಿರೆ ಕೃಷ್ಣನ ತೂಗಿರೆ ಅಚ್ಯುತಾನಂತನ

ತೂಗಿರೆ ರಂಗನ ತೂಗಿರೆ ಕೃಷ್ಣನ ತೂಗಿರೆ ಅಚ್ಯುತಾನಂತನ


ತೂಗಿರೆ ವರಗಿರಿಯಪ್ಪ ತಿಮ್ಮಪ್ಪನ ತೂಗಿರೆ ಕಾವೇರಿರಂಗಯ್ಯನ//



ನಾಗಲೋಕದಲ್ಲಿ ನಾರಾಯಣ ಮಲಗ್ಯಾನೆ ನಾಗಕನ್ನಿಕೆಯರು ತೂಗಿರೆ

ನಾಗವೇಣಿಯರು ನೇಣು ಪಿಡಿದುಕೊಂಡು ಬೇಗನೆ ತೊಟ್ಟಿಲ ತೂಗಿರೆ//



ಇಂದ್ರಲೋಕದಲ್ಲುಪೇಂದ್ರ ಮಲಗ್ಯಾನೆ ಇಂದುಮತಿಯರೆಲ್ಲ ತೂಗಿರೆ

ಇಂದ್ರಕನ್ನಿಕೆಯರು ಚಂದದಿ ಬಂದು ಮುಕುಂದನ ತೊಟ್ಟಿಲ ತೂಗಿರೆ//



ಆಲದೆಲೆಯಮೇಲೆ ಶ್ರೀಲೋಲ ಮಲಗ್ಯಾನೆ ನೀಲಕುಂತಳೆಯರು ತೂಗಿರೆ

ವ್ಯಾಳಶಯನ ಹರಿ ಮಲಗು ಮಲಗು ಎಂದು ಬಾಲಕೃಷ್ಣಯ್ಯನ ತೂಗಿರೆ//



ಸಾಸಿರನಾಮನೆ ಸರ್ವೋತ್ತಮನೆಂದು ಸೂಸುತ್ತ ತೊಟ್ಟಿಲ ತೂಗಿರೆ

ಲೇಸಾಗಿ ಮಡುವಿನೊಳ್ ಶೇಷನ ತುಳುದುಟ್ಟ ದೋಷವಿದೂರನ ತೂಗಿರೆ//



ಅರಳೆಲೆ ಮಾಗಾಯಿ ಕೊರಳ ಮುತ್ತಿನ ಹಾರ ತರಳನ ತೊಟ್ಟಿಲ ತೂಗಿರೆ

ಸಿರಿದೇವಿರಮಣನೆ ಪುರಂದರವಿಠಲನೆ ಕರುಣದಿ ಮಲಗೆಂದು ತೂಗಿರೆ//

Tuesday, December 4, 2012

ತುಂಗಾತೀರದಿ ನಿಂತ ಸುಯತಿವರನ್ಯಾರೆ ಪೇಳಮ್ಮ

ತುಂಗಾತೀರದಿ ನಿಂತ ಸುಯತಿವರನ್ಯಾರೆ ಪೇಳಮ್ಮ


ಸಂಗೀತಪ್ರಿಯ ಮಂಗಳ ಸುಗಣತರಂಗ ಮುನಿಕುಲೋತ್ತುಂಗ ಕಣಮ್ಮ//



ಚೆಲುವ ಸುಮುಖ ಫಣೆಯಲ್ಲಿ ತಿಲಕ ನಾಮಗಳು ನೋಡಮ್ಮ

ಜಲಜಮಣಿಯ ಕೊರಳಲ್ಲಿ ತುಳಸಿಮಾಲೆಗಳು ಪೇಳಮ್ಮ

ಸುಲಲಿತ ಕಮಂಡಲು ದಂಡವನೆ ಧರಿಸಿಹನೆ ನೋಡಮ್ಮ

ಕ್ಷುಲ್ಲ ಹಿರಣ್ಯಕನಲ್ಲಿ ಜನಿಸಿದ ಪ್ರಹ್ಲಾದನು ತಾನಿಲ್ಲಿಹನಮ್ಮ//



ಸುಂದರ ಚರಣಾರವಿಂದಕೆ ಭಕುತಿಯಲಿಂದ ನೋಡಮ್ಮ

ವಂದಿಸಿ ಸ್ತುತಿಸುವ ಭೂಸುರವೃಂದ ನೋಡಮ್ಮ

ಚಂದದಲ೦ಕೃತಿಯಿಂದ ಶೋಭಿಸುವಾನಂದ ನೋಡಮ್ಮ

ಹಿಂದೆ ವ್ಯಾಸಮುನಿಯೆಂದೆನಿಸಿದ ಕರ್ಮಂದಿಗಳರಸಘದಿಂದ ರಹಿತನೆ//



ಅಭಿನವ ಜನಾರ್ಧನ ವಿಠಲನ ಧ್ಯಾನಿಸುವ ನೋಡಮ್ಮ

ಅಭಿವಂದಿಸಿದವರಿಗೆ ಅಖಿಲಾರ್ಥವ ಸಲ್ಲಿಸುವ ನೋಡಮ್ಮ

ನಭಮಣಿಯಂದದಿ ವಿವಿಧದಿ ಶೋಭಿಸುವ ನೋಡಮ್ಮ

ಶುಭಗುಣಗಣನಿಧಿ ರಾಘವೇಂದ್ರ ಗುರು ಅಬುಜಭವಾಂಡದಿ ಪ್ರಬಲಕಾಣಮ್ಮ//

Monday, December 3, 2012

ಉಡುಪಿಯ ಶ್ರೀ ಕೃಷ್ಣನ ಅಲಂಕಾರಗಳು-2






Source : sodevadirajamutt.in

ತುಂಗಾತೀರ ವಿರಾಜಂ ಭಜಮನ

ತುಂಗಾತೀರ ವಿರಾಜಂ ಭಜಮನ


ರಾಘವೇಂದ್ರ ಗುರು ರಾಜಂ ಭಜಮನ//



ಮಂಗಳಕರ ಮಂತ್ರಾಲಯವಾಸಂ

ಶೃಂಗಾರನನ ರಜಿತಹಾಸಂ

ರಾಘವೇಂದ್ರ ಗುರು ರಾಜಂ ಭಜಮನ//



ಕರದೃತ ದಂಡ ಕಮಂಡಲುಮಲಂ

ಸುರುಚಿರ ಚೇಲಂ ಧೃತ ಮಣಿ ಮಾಲಂ

ರಾಘವೇಂದ್ರ ಗುರು ರಾಜಂ ಭಜಮನ//



ನಿರುಪಮ ಸುಂದರ ಕಾಯ ಸುಶೀಲಂ

ವರಕಮಲೇಶ ಪಿತ ನಿಜ ಸಕಲಂ

ರಾಘವೇಂದ್ರ ಗುರು ರಾಜಂ ಭಜಮನ//