Monday, August 17, 2015

ನಾಗರ ಪಂಚಮೀ ವ್ರತ


ಇಂದು ನಾಗರ ಚೌತಿ, ನಾಳೆ ನಾಗರ ಪಂಚಮೀ. ಮಕ್ಕಳಾಗದವರು ವಿಶೇಷವಾಗಿ ಮತ್ತು ಮಕ್ಕಳಿಗೆ ಯಾವ ವಿಧವಾದ ಆಪತ್ತು ಬರಬಾರದು ಎನ್ನುವವರು ಮಾಡಬೇಕಾದ ವ್ರತಗಳು.
ಪರಮಾತ್ಮ ಶೇಷದೇವರನ್ನು ಪಂಚಮೀತಿಥಿಗೆ ನಿಯಾಮಕರನ್ನಾಗಿ ಮಾಡಿದ್ದಾನೆ —
ಪ್ರಾದಾಂ ತೃತೀಯಾಂ ಪಾರ್ವತ್ಯೈ ಗಣೇಶಾಯ ಚತುರ್ಥಿಕಾಮ್ ।
ಪಂಚಮೀ ಸರ್ವನಾಗಾನಾಂ ಶೇಷಾಣಾಂ ಪತಯೇ ತತಃ ।।
ಎಂದು ವರಾಹಪುರಾಣದಲ್ಲಿದೆ. ತೃತೀಯಾತಿಥಗೆ ಪಾರ್ವತಿಯನ್ನು ನಿಯಾಮಕಳನ್ನಾಗಿಯೂ, ಚತುರ್ಥೀತಿಥಿಗೆ ಗಣಪತಿಯನ್ನು ನಿಯಾಮಕನನ್ನಾಗಿಯೂ ಹಾಗೂ ಪಂಚಮೀತಿಥಿಗೆ ಶೇಷದೇವರನ್ನು ನಿಯಾಮಕರನ್ನಾಗಿಯೂ ಪರಮಾತ್ಮ ಮಾಡುತ್ತಾನೆ.
ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮೀ ನಾಗರ ಪಂಚಮೀ. ಈ ದಿವಸ ವಿಶೇಷವಾಗಿ ಹಾವುಗಳನ್ನು ಹಾವುಗಳ ಅಧಿಪತಿಯಾದ ಶೇಷದೇವರನ್ನು ಆರಾಧಿಸಬೇಕು.
ಇದು ಎರಡು ದಿವಸಗಳ ವ್ರತ. ಅದಕ್ಕಾಗಿಯೇ ಎರಡೂ ದಿವಸಗಳನ್ನು ಶೇಷದೇವರ ಹೆಸರಿನಿಂದಲೇ ಗುರುತಿಸಲಾಗುತ್ತದೆ. ನಾಗರ ಚೌತಿ ಮತ್ತು ನಾಗರ ಪಂಚಮಿ ಎಂದು.
ಯುಗಂ ಮಧ್ಯಂದಿನೇ ಯತ್ರ ತತ್ರೋಪೋಷ್ಯ ಫಣೀಶ್ವರಾನ್ ।
ಕ್ಷೀರೇಣಾಪ್ಯಾಯ್ಯ ಪಂಚಮ್ಯಾಂ ಪಾರಯೇತ್ ಪ್ರಯತೋ ನರಃ ।
ವಿಷಾಣಿ ತಸ್ಯ ನಶ್ಯಂತಿ ನ ತಂ ಹಿಂಸಂತಿ ಪನ್ನಗಾಃ ।।
ನಾಗರ ಚೌತಿಯಂದು ಪೂರ್ಣ ಉಪವಾಸವನ್ನು ಮಾಡಬೇಕು. ಆ ದಿವಸ ಮಧ್ಯಾಹ್ನ ದೇವರ ಪೂಜೆಯಾದ ಬಳಿಕ ಶೇಷದೇವರ ಪ್ರತಿಮೆಗೆ ಹಾಲಿನ ಅಭಿಷೇಕದೊಂದಿಗೆ ಷೋಡಶೋಪಚಾರ ಪೂಜೆಯನ್ನು ಸಮರ್ಪಿಸಬೇಕು. ಮಾರನೆಯ ದಿವಸ ಪ್ರಾತಃಕಾಲದಲ್ಲಿ ಮತ್ತೆ ಹಾಲಿನ ಅಭಿಷೇಕವನ್ನು ಮಾಡಿ, ಹದಿನಾರು ಉಪಚಾರಗಳನ್ನು ಶೇಷದೇವರಿಗೆ ಸಮರ್ಪಿಸಿ ಜ್ಞಾನಿಗಳನ್ನು ಕರೆದು ಅವರಿಗೆ ಭೋಜನವನ್ನು ನೀಡಿ ತಾನು ಪಾರಣೆಯನ್ನು ಮಾಡಬೇಕು.
ಮನೆಯ ಬಾಗಿಲಿನ ಎರಡೂ ಭಾಗಗಳಲ್ಲಿ ಶೇಷದೇವರ ಚಿತ್ರವನ್ನು ಬರೆದು ಪೂಜಿಸಬೇಕು ಎಂದು ಭವಿಷ್ಯಪುರಾಣದಲ್ಲಿ ತಿಳಿಸಿದ್ದಾರೆ —
ಶ್ರಾವಣೇ ಮಾಸಿ ಪಂಚಮ್ಯಾಂ ಶುಕ್ಲಪಕ್ಷೇ ನರಾಧಿಪ
ದ್ವಾರಸ್ಯೋಭಯತೋ ಲೇಖ್ಯಾ ಗೋಮಯೇನ ವಿಷೋಲ್ಬಣಾಃ
ಪೂಜಯೇದ್ ವಿಧಿವದ್ ವೀರ ದಧಿದೂರ್ವಾಂಕುರೈಃ ಕುಶೈಃ
ಗಂಧಪುಷ್ಪೋಪಹಾರೈಶ್ಚ ಬ್ರಾಹ್ಮಣಾನಾಂ ಚ ತರ್ಪಣೈಃ
ಯೇ ತಸ್ಯಾಂ ಪೂಜಯಂತೀಹ ನಾಗಾನ್ ಭಕ್ತಿಪುರಃಸರಾಃ
ನ ತೇಷಾಂ ಸರ್ಪತೋ ವೀರ ಭಯಂ ಭವತಿ ಕುತ್ರಚಿತ್
ಬಾಗಿಲಿನ ಎರಡೂ ಕಡೆಯಲ್ಲಿ ಹಾವುಗಳ ಚಿತ್ರವನ್ನು ಬರೆದು, ಅಲ್ಲಿ ಶೇಷದೇವರ, ವಾಸುಕಿಯ ಸನ್ನಿಧಾನವನ್ನು ಚಿಂತಿಸಿ, ಅರಿಶಿನ ಕುಂಕುಮಗಳಿಂದ ಪೂಜಿಸಿ ಅದಕ್ಕೆ ಗೆಜ್ಜೆವಸ್ತ್ರವನ್ನು ಸಮರ್ಪಿಸಬೇಕು.
ಆ ಬಳಿಕ ಮನೆಯ ಒಳಗೆ ಶೇಷದೇವರ ಪ್ರತಿಮೆ, ಹಾಲು, ಮೊಸರು ಮುಂತಾದವುಗಳಿಂದ ಅಭಿಷೇಕ ಮಾಡಿ, ಆ ನಂತರ ಗರಿಕೆ, ದರ್ಭೆಗಳಿಂದ ಷೋಡಶೋಪಚಾರ ಪೂಜೆಯನ್ನು ಮಾಡಿ, ಪರಮಾತ್ಮನಲ್ಲಿ ಭಕ್ತಿ ಇರುವ ಬ್ರಾಹ್ಮಣರನ್ನು ಆದರಿಸಿ, ಅವರ ಭೋಜನವಾದ ನಂತರ ಭೋಜನ ಮಾಡಬೇಕು.
ಪೂಜೆ ಮಾಡುವ ಸಂದರ್ಭದಲ್ಲಿ, ಹಾಲೆರೆಯುವ ಸಂದರ್ಭದಲ್ಲಿ ಕೆಳಗಿನ ಶ್ಲೋಕವನ್ನು ಭಕ್ತಿಯಿಂದ ಪಠಿಸಿ ಪ್ರಾರ್ಥನೆ ಮಾಡಿಕೊಳ್ಳಬೇಕು.
ಅನಂತಶಯನಂ ದೇವಂ ಸರ್ವಶೋಕವಿನಾಶನಮ್ ।
ಲೋಕಾಧಾರಂ ವಾರುಣೀಶಂ ನಾಗೇಂದ್ರಂ ಸನ್ನಮಾಮ್ಯಹಮ್ ।।
ಅನಂತಶಯನಂ — ದೇಶ ಕಾಲಗಳನ್ನು ಮೀರಿದ ಪರಮಾತ್ಮನಿಗೆ ಶಯನನಾದ
ಸರ್ವಶೋಕವಿನಾಶನಂ — ಸಕಲ ದುಃಖಗಳನ್ನೂ ಪರಿಹರಿಸುವ
ಲೋಕಾಧಾರಂ — ಇಡಿಯ ಜಗತ್ತನ್ನು ತಲೆಯ ಮೇಲೆ ಹೊತ್ತು ರಕ್ಷಣೆ ಮಾಡುತ್ತಿರುವ
ವಾರುಣೀಶಂ — ವಾರುಣೀಪತಿಯಾದ
ದೇವಂ — ದೇವೋತ್ತಮನಾದ
ನಾಗೇಂದ್ರಂ — ಶೇಷದೇವರನ್ನು
ಅಹಂ — ನಾನು
ಸನ್ನಮಾಮಿ — ಭಕ್ತಿ ಶ್ರದ್ಧೆಗಳಿಂದ ನಮಸ್ಕರಿಸುತ್ತೇನೆ.
ಹಾಗೆಯೇ ಶೇಷದೇವರ ಮಾಹಾತ್ಮ್ಯ, ಅವರು, ನರನಾಗಿ, ಲಕ್ಷ್ಮಣನಾಗಿ, ಬಲರಾಮನಾಗಿ ಅವತಾರ ಮಾಡಿ ಪರಮಾತ್ಮನನ್ನು ಸೇವಿಸಿದ ರೀತಿ ಮುಂತಾದವನ್ನು ಭಕ್ತಿಯಿಂದ ಸ್ಮರಣೆ ಮಾಡಬೇಕು.
ಹಾಗೆಯೇ ಮತ್ತೊಂದು ತತ್ವ. ಹಾವಿನ ರೂಪದಲ್ಲಿ ಪೂಜೆಯಾಗುವ ಮೂರು ದೇವತೆಗಳಿದ್ದಾರೆ. ಮೊದಲನೆಯದು ಶೇಷದೇವರು. ಇವರು ಇಂದ್ರನಿಗಿಂತಲೂ ಉತ್ತಮರಾದ, ರುದ್ರದೇವರಿಗೆ ಸಮಾನರಾದ ದೇವತೆ. ಇವರೇ ಪರಮಾತ್ಮ ಹಾಸಿಗೆ.
ಎರಡನೆಯದು ಸುಬ್ರಹ್ಮಣ್ಯದೇವರು. ಇವರು ಇಂದ್ರನಿಗೆ ಸಮಾನನಾದ ದೇವತೆ. ದೇವತೆಗಳ ಸೇನಾನಿ ಸ್ಕಂದನಿಗೇ ಸುಬ್ರಹ್ಮಣ್ಯ ಎನ್ನುವ ಹೆಸರು. ಇವರಿಗೆ ಸುಬ್ರಹ್ಮಣ್ಯರೂಪದಲ್ಲಿ ಮಾತ್ರ ಹಾವಿನರೂಪ.
ಮೂರನೆಯದು ವಾಸುಕಿ. ಮೇಲಿನ ಇಬ್ಬರಿಗಿಂತಲೂ ಸಣ್ಣವರಾದ ದೇವತೆ. ಪಾತಾಳದಲ್ಲಿ ಎಲ್ಲ ನಾಗರಿಗೂ ಅಧಿಪತಿಯಾದ ನಾಗರಾಜ ಈ ವಾಸುಕಿಯೇ. ಶೇಷದೇವರ ತಮ್ಮ.
ನಾಗರ ಚೌತಿ-ಪಂಚಮಿಗಳಂದು ಈ ಮೂರೂ ದೇವತೆಗಳನ್ನು ಪೂಜಿಸುವ ಸಂಪ್ರದಾಯವಿದೆ. ವಿಶೇಷವಾಗಿ ಶೇಷದೇವರನ್ನು.
ಈ ದಿವಸಗಳಲ್ಲಿ ಈ ವ್ರತವನ್ನು ಕೇವಲ ಹೆಣ್ಣುಮಕ್ಕಳು ಮಾತ್ರ ಮಾಡುತ್ತಾರೆ. (ಈ ವ್ರತವೇನು, ನಮ್ಮಲ್ಲಿ ಅನೇಕ ಧರ್ಮಗಳು ಉಳಿದಿರುವದೇ ಕೇವಲ ನಿಷ್ಠಾವಂತ ಹೆಣ್ಣುಮಕ್ಕಳಿಂದ.) ಆದರೆ, ಈ ವ್ರತವನ್ನು ಬಾಲಕ ಬಾಲಕಿಯರೂ ಮಾಡಬೇಕು. ಗಂಡ ಹೆಂಡತಿಯರೂ ಕೂಡಿ ಮಾಡಬೇಕು.
ಗಂಡಹೆಂಡಿರ ಮಧ್ಯದಲ್ಲಿ ನಿಶ್ಚಲವಾದ ಪ್ರೇಮವನ್ನುಂಟುಮಾಡುವ ವ್ರತ ಈ ನಾಗರವ್ರತ.
ಮಕ್ಕಳಾದವರಿಗೆ ಮಕ್ಕಳನ್ನು ದಯಪಾಲಿಸುವ ವ್ರತ ಈ ನಾಗರವ್ರತ.
ಮಕ್ಕಳನ್ನು ಎಲ್ಲ ಆಪತ್ತುಗಳಿಂದ ದೂರ ಮಾಡುವ ವ್ರತ ಈ ನಾಗರವ್ರತ.
ಮಕ್ಕಳಿಗೆ, ನಮಗೆ ವಿಷದ ಭಯವನ್ನು ನೀಗಿಸುವ ವ್ರತ ಈ ನಾಗರವ್ರತ.
ಅಣ್ಣತಮ್ಮಂದಿರಿಗೆ ಸೌಭಾಗ್ಯವನ್ನುಂಟು ಮಾಡುವ ವ್ರತ ಈ ನಾಗರವ್ರತ
ಕೃಪೆ : ವಿಷ್ಣುದಾಸ ನಾಗೇಂದ್ರಾಚಾರ್ಯ - ಫೇಸ್ಬುಕ್ 

Friday, August 14, 2015

ಭೀಮನ ಅಮಾವಾಸ್ಯೆ



ಶ್ರಾವಣ ಮಾಸದ ಮೊದಲ ಹಬ್ಬವಾಗಿ ಭೀಮನ ಅಮಾವಾಸ್ಯೆಯನ್ನು ಆಚರಿಸಲಾಗುವುದು. ನವವಿವಾಹಿತ ಮಹಿಳೆಯರು ೯ ವರ್ಷ ಈ ಪೂಜೆಯನ್ನು ಮಾಡುತ್ತಾರೆ. ಈ ವ್ರತವನ್ನು ತಮ್ಮ ಪತಿಯ, ಅಣ್ಣ ತಮ್ಮಂದಿರ ಒಳಿತಿಗಾಗಿ ಮಹಿಳೆಯರು ಆಚರಿಸುತ್ತಾರೆ. ಈ ವ್ರತವನ್ನು ಮನೋನಿಯಾಮಕ ರುದ್ರದೇವರು ಮತ್ತು ಪಾರ್ವತಿದೇವಿಯರಿಗೆ ಸಮರ್ಪಿಸಲಾಗುತ್ತದೆ.

ಈ ವ್ರತದಂದು ಕೆಮ್ಮಣ್ಣಿನಿಂದ ಮಾಡಿದ ರುದ್ರದೇವರು ಮತ್ತು ಪಾರ್ವತಿದೇವಿಯರನ್ನು ಪೂಜಿಸಲಾಗುವುದು ಮತ್ತು ತಂಬಿಟ್ಟಿನ ದೀಪವನ್ನು ಹಚ್ಚಲಾಗುವುದು. ಇದರ ಸಂಕೇತ ದೀಪವನ್ನು ಬೆಳಗುವುದರಿಂದ ಮನೆಯಲ್ಲಿನ ಕರ್ಮಗಳು ಕಳೆದು ಮನೆ ಶುಭ್ರವಾಗುವುದೆಂದು. ಈ ದಿನದಂದು ಕಡುಬು, ಗೋಧಿ ಉಂಡೆ ಮಾಡುವುದು ವಿಶೇಷ. ಕಡುಬು ಮತ್ತು ಉಂಡೆಯಲ್ಲಿ ನಾಣ್ಯವನ್ನು ಇಟ್ಟು ಅದನ್ನು ಅಣ್ಣ ತಮ್ಮಂದಿರ ಕೈಯಲ್ಲಿ ಹೊಡೆಸುವುದು ವಾಡಿಕೆ. ಅಣ್ಣ ತಮ್ಮಂದಿರು ಮನೆಯ ಹೊಸ್ತಿಲಿನ ಬಳಿ ಎರಡು ಬದಿ ಒಂದೊಂದು ಕಾಲನ್ನು ಇಟ್ಟು ಹೊಸಿಲಿನ ಮೇಲಿಟ್ಟಿರುವ ಕಡುಬು/ಉಂಡೆಯನ್ನು ಬಾಗಿ ತಮ್ಮ ಮೊಣಕೈನಿಂದ ಹೊಡೆಯಬೇಕು. ಆ ಸಂದರ್ಭದಲ್ಲಿ ಅಕ್ಕ ತಂಗಿಯರು ತಮ್ಮ ಮೊಣಕೈನಿಂದ ಬಾಗಿದ ಅಣ್ಣ/ತಮ್ಮನ ಮೇಲೆ ಹೊಡೆಯುವುದು. ಈ ವಾಡಿಕೆಗೆ "ಭಂಡಾರ ಹೊಡೆಯುವುದು"  ಕರೆಯುತ್ತಾರೆ.

ಹಿನ್ನಲೆ:
ಸ್ಕಂದ ಪುರಾಣದಲ್ಲಿ ಈ ವ್ರತದ ಹಿನ್ನಲೆ ಉಂಟು. ಹಿಂದೊಮ್ಮೆ ರಾಜನು ತನ್ನ ಮಗನಿಗೆ ಅದ್ದೂರಿಯಾಗಿ ಮದುವೆ ಮಾಡಬೇಕೆಂದು ನಿರ್ಧರಿಸಿದ್ದನು. ಆದರೆ ರಾಜನ ಮಗ ಅಕಾಲಿಕ ಸಾವಿಗೆ ಈಡಾದನು. ಆದರೂ ರಾಜ ತನ್ನ ಸತ್ತ ಮಗನಿಗೇ ಮದುವೆ ಮಾಡಲು ನಿರ್ಧರಿಸಿ ಘೋಷಣೆ ಹೊರಡಿಸಿದನು. ಯಾರು ತನ್ನ ಮಗನನ್ನು ಮದುವೆ ಮಾಡಿಕೊಳ್ಳುತ್ತಾರೋ ಅವರಿಗೆ ಅಪಾರ ಧನ ಸಂಪತ್ತನ್ನು ಕೊಡುವುದಾಗಿ ಘೋಷಿಸಿದನು.

ಒಬ್ಬ ಬಡ ಬ್ರಾಹ್ಮಣನು ತನ್ನ ಮಗಳನ್ನು ಕೊಟ್ಟು ಮದುವೆ ಮಾಡುವುದಾಗಿ ಮುಂದೆ ಬಂದು, ಮದುವೆ ವಿಜೃಂಭಣೆಯಿಂದ ನೆರವೇರಿತು. ಆ ದಿನ ಅಮಾವಾಸ್ಯೆ. ಮದುವೆಯ ಸಮಾರಂಭ ಮುಗಿದ ಮೇಲೆ ರಾಜನ ಮಗನ ದೇಹವನ್ನು ಸುಡಲು ಭಾಗೀರಥಿ ನದಿ ತೀರಕ್ಕೆ ತೆಗೆದುಕೊಂಡು ಬಂದು ಅಂತಿಮ ಸಿದ್ಧತೆಯಲ್ಲಿ ತೊಡಗಿದ್ದಾಗ ಗುಡುಗು ಸಿಡಿಲಿನ ಸಹಿತ ಕುಂಭದ್ರೋಣ ಮಳೆ ಶುರುವಾಯಿತು. ನೆರೆದಿದ್ದ ಜನರು ಹೆದರಿಕೊಂಡು ಆ ದೇಹವನ್ನು ಮತ್ತು ಆ ಅಮಾಯಕ ಹುಡುಗಿಯನ್ನು ಬಿಟ್ಟು ಓಡಿ ಹೋದರು.

ಆಗ ಆ ಹುಡುಗಿಗೆ ಅಂದು ಜ್ಯೋತಿರ್ಭೀಮೇಶ್ವರಿ ವ್ರತದ ದಿನ ಎಂದು, ತನ್ನ ತಾಯಿಯು ವರ್ಷ ವರ್ಷ ಆ ವ್ರತವನ್ನು ಆಚರಿಸುವುದು ನೆನಪಾಗಿ ಕೂಡಲೇ ನದಿಯಲ್ಲಿ ಸ್ನಾನ ಮಾಡಿ ಎರಡು ಮಣ್ಣಿನ ಹಣತೆಯನ್ನು ಮಾಡಿ ಅಲ್ಲೇ ಇದ್ದ ಮರದ ಬೇರಿನಿಂದ ಬತ್ತಿಯನ್ನು ಮಾಡಿ ಅದಕ್ಕೆ ನೀರನ್ನು ಹಾಕಿ, ಮಣ್ಣಿನಿಂದ ಭಂಡಾರವನ್ನು ಮಾಡಿ ಅದರಿಂದಲೇ ಪೂಜೆಯನ್ನು ಮಾಡಿದಳು. ಅವಳ ಭಕ್ತಿಗೆ ಮೆಚ್ಚಿ ಪ್ರತ್ಯಕ್ಷರಾದ ಪಾರ್ವತಿ ಸಮೇತ ರುದ್ರದೇವರು ಭಂಡಾರವನ್ನು ಹೊಡೆದು ನಿನಗೆ ಏನು ವರ ಬೇಕು ಎಂದಾಗ ಸತ್ತ ತನ್ನ ಪತಿಯನ್ನು ಬದುಕಿಸಿಕೊಡು ಎಂದು ಬೇಡಿದಳು. ಕೂಡಲೇ ಅದಕ್ಕೆ ಸಮ್ಮತಿಸಿ ಅವಳ ಪತಿಯನ್ನು ಬದುಕಿಸಿದರು.

ಈ ಘಟನೆಯ ನಂತರ ಈ ವ್ರತ ಪ್ರಸಿದ್ಧಿಯಾಯಿತು. ಮನೋನಿಯಾಮಕ ರುದ್ರದೇವರ  ಮತ್ತೊಂದು ಹೆಸರು ಭೀಮ ಎಂಬುದರಿಂದ ಈ ವ್ರತವನ್ನು ಭೀಮನ ಅಮಾವಾಸ್ಯೆಯಂದು ಕರೆಯುತ್ತಾರೆ. 

Thursday, August 13, 2015

ಶ್ರೀ ವರಮಹಾಲಕ್ಷ್ಮೀ ವ್ರತ

ಶ್ರೀ ಮಂಗಳಗೌರಿ ವ್ರತವನ್ನು ಶ್ರಾವಣ ಮಾಸದಲ್ಲಿ ಮದುವೆಯಾದ ಮಹಿಳೆಯರು ೪/೫ ಮಂಗಳವಾರ ಪೂಜೆ ಮಾಡುತ್ತಾರೆ. ಮದುವೆಯ ನಂತರ ೫ ವರ್ಷ ಈ ವ್ರತ ಮಾಡುವ ಪದ್ಧತಿ ಇದೆ. ಈ ಸಂದರ್ಭದಲ್ಲಿ ಮಂಗಳ ಸ್ನಾನ ಮಾಡಿ ಪೂಜಾಗೃಹವನ್ನು ಸ್ವಚ್ಛಮಾಡಿ ರಂಗೋಲಿಯಿಂದ ಅಲಂಕರಿಸಬೇಕು. ಒಂದು ಮಣೆ ಇಟ್ಟು ಅದರ ಮೇಲೆ ರವಿಕೆ ಬಟ್ಟೆ ಹಾಸಿ ಅದರ ಮೇಲೊಂದು ತಟ್ಟೆಯಲ್ಲಿ ದೇವರನ್ನು ಇಡಬೇಕು. ಗಣಪತಿ , ಗೌರಿ ವಿಗ್ರಹ, ಅರಿಶಿನಕ್ಕೆ ಸ್ವಲ್ಪ ಹಾಲು ಸೇರಿಸಿ ಕಲಿಸಿ ಗೋಪುರದ ಆಕಾರ ಮಾಡಬೇಕು. ಕನ್ನಡಿ, ಕಲಶ, ಇವುಗಳನ್ನು ಜೊತೆಯಲ್ಲಿ ಇಟ್ಟುಕೊಳ್ಳಬೇಕು. ೩ ರವಿಕೆ ಬಟ್ಟೆಯನ್ನು ತ್ರಿಕೋನಾಕಾರದಲ್ಲಿ ಮಡಿಸಿ ಹಿಂದೆ ಇಡಬೇಕು.

ಒಂದು ಸಣ್ಣ ತಂಬಿಗೆಯ ಒಳಗೆ ಸ್ವಲ್ಪ ಅಕ್ಕಿ, ಮಂತ್ರಾಕ್ಷತೆ ಹಾಕಿ ಅದರ ಮೇಲೆ ರವಿಕೆ ಬಟ್ಟೆ ಇತ್ತು ಒಂದು ಕೊಬ್ಬರಿ ಗಿಟುಕನ್ನು ಇಡಬೇಕು. ಅದಕ್ಕೆ ಕಪ್ಪಿನಿಂದ ಕಣ್ಣು, ಮೂಗು, ಬರೆದು ಅಲಂಕರಿಸಬೇಕು. ಇದನ್ನೇ ಮಂಗಳಗೌರಿಯಂದು ಪೂಜೆ ಮಾಡಬೇಕು. ಇದರ ಜೊತೆ ನಿಮ್ಮ ಇಷ್ಟದಂತೆ ಅಲಂಕಾರಗಳನ್ನು ಮಾಡಬಹುದು.
ಸಾಮಾನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಜೊತೆಗೆ ಮರದ ಜೊತೆ ಬಾಗಿನ, ಹತ್ತಿ ಎಳೆ, ಬಳೆ, ಬಿಚ್ಚೋಲೆ, ತಂಬಿಟ್ಟಿನ ಆರತಿ ಸಹ ಸಿದ್ಧವಿಟ್ಟುಕೊಳ್ಳಬೇಕು. ಮೊದಲು ಗಣಪತಿ ಪೂಜೆ ಮಾಡಿ ನಂತರ ಗೌರಿಗೆ ೧೬ ಹಿಡಿ ೧೬ ಎಳೆಗಳ ಹತ್ತಿ ಹಾರ ಹಾಕಬೇಕು. ನೈವೇದ್ಯಕ್ಕೆ ಸಾಮಾನ್ಯವಾಗಿ ಹೆಸರುಬೇಳೆ ಪಾಯಸ ಅಥವಾ ಹುಗ್ಗಿ ಮಾಡುತ್ತಾರೆ. ಕೊನೆಯಲ್ಲಿ ತಂಬಿಟ್ಟಿನಲ್ಲಿ ೧೬ ದೀಪದ ಆರತಿ ಮಾಡಬೇಕು. ಈ ದೀಪದಲ್ಲಿ ವೀಳ್ಯದ ಎಲೆಯನ್ನು ಹಿಡಿದು ಕಾಡಿಗೆಯನ್ನು ತೆಗೆಯಬೇಕು. ಇದನ್ನು ಮಂಗಳಗೌರಿಗೆ ಹಚ್ಚಿ ನಂತರ ಕಣ್ಣಿಗೆ ಹಚ್ಚಿಕೊಳ್ಳಬೇಕು. ಪೂಜೆಯ ನಂತರ ಕಥಾ ಶ್ರವಣ ಮಾಡಬೇಕು. ಪೂಜೆಯ ನಂತರ ಕೊಬ್ಬರಿಯಲ್ಲಿ ಮಾಡಿದ ದೇವಿಯನ್ನು ಹಾಗೆ ಇಟ್ಟುಕೊಂಡು ಅದೇ ಕೊಬ್ಬರಿಗೆ ನಾಲ್ಕು ವಾರವೂ ಪೂಜೆ ಮಾಡಿ ಕೊನೆಯ ವಾರದಲ್ಲಿ ಬಾಗಿನದ ಜೊತೆ ಇಟ್ಟು  ಕೊಡಬೇಕು.

ಪ್ರತಿ ವರ್ಷ ಕೊನೆಯ ವಾರದ ಪೂಜೆಗೆ ಮರದ ಜೊತೆ ಬಾಗಿನ ಇಟ್ಟುಕೊಳ್ಳಬೇಕು. ಮರದ ಒಳಗೆ ೪ ವಿಧವಾದ ಬೇಳೆಗಳು, ಅಕ್ಕಿ, ಉಪ್ಪು, ರವೆ, ಬೆಲ್ಲ,ತೆಂಗಿನಕಾಯಿ ಜೊತೆ ಪೂಜೆ ಮಾಡಿದ ಕೊಬ್ಬರಿ ಗಿಟುಕು, ೧೬ ಎಳೆ ಹತ್ತಿ ಹಾರವನ್ನು ಇಡಬೇಕು. ಇದನ್ನು ತಾಯಿಗೆ ಬಾಗಿನ ಕೊಡಬೇಕು. ಹೀಗೆ ೫ ವರ್ಷ ವ್ರತಿ ಮಾಡಿ ಐದನೇ ವರ್ಷ ಉದ್ಯಾಪನೆ ಮಾಡಿ ಪೂಜೆಗೆ ಉಪಯೋಗಿಸಿದ ಕಳಶದ ಪಾತ್ರೆಯನ್ನು ಮರದ ಬಾಗಿನದ ಜೊತೆ ತಾಯಿಗೆ ಕೊಡಬೇಕು.

ಮರದ ಬಾಗಿನದ ಸಾಮಾನುಗಳು:
೧ ಜೊತೆ ಮೊರ
ಮೊರಕ್ಕೆ ಅರಿಶಿನ ಕುಂಕುಮ ಹಚ್ಚಿರಬೇಕು
ಅಕ್ಕಿ, ಕಡಲೇಬೇಳೆ, ತೊಗರಿಬೇಳೆ, ಹೆಸರುಬೇಳೆ,ಉದ್ದಿನಬೇಳೆ
ರವೆ, ಬೆಲ್ಲದಚ್ಚು, ಉಪ್ಪು ತೆಂಗಿನಕಾಯಿ, ಹಣ್ಣು,
ಬಳೆ, ಬಿಚ್ಚೋಲೆ, ಕನ್ನಡಿ, ಕಾಡಿಗೆ, ಬಾಚಣಿಗೆ,
ವೀಳ್ಯದೆಲೆ, ಅಡಿಕೆ, ದಕ್ಷಿಣೆ, ಅರಿಶಿನ, ಕುಂಕುಮ ಮತ್ತು ರವಿಕೆ ಬಟ್ಟೆ.

ಮಾಹಿತಿ: ಸಂಗ್ರಹ