Thursday, January 3, 2013

ಶ್ರೀ ಹರಿಕಥಾಮೃತಸಾರ - 5

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ವಿಭೂತಿ ಸಂಧಿ//

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಶ್ರೀ ತರುಣಿ ವಲ್ಲಭನ ಪರಮ ವಿಭೂತಿ ರೂಪ ಕಂಡ ಕಂಡಲ್ಲಿ

ಈ ತೆರದಿ ಚಿಂತಿಸುತ ನೋಡು ಸಂಭ್ರಮದಿ

ನೀತ ಸಾಧಾರಣ ವಿಶೇಷ ಸಜಾತಿ ನೈಜ ಅಹಿತವು ವಿಜಾತಿ ಖಂಡಾಖಂಡ

ಬಗೆಗಳನು ಅರಿತು ಬುಧರಿಂದ//1//


ಜಲಧರಾಗಸದೊಳಗೆ ಚರಿಸುವ ಹಲವು ಜೀವರ ನಿರ್ಮಿಸಿಹನು

ಅದರೊಳು ಸಜಾತಿ ವಿಜಾತಿ ಸಧಾರಣ ವಿಶೇಷಗಳ ತಿಳಿದು

ತತ್ತತ್ ಸ್ಥಾನದಲಿ ವೆಗ್ಗಳಿಸಿ

ಹಬ್ಬಿದ ಮನದಿ ಪೂಜಿಸುತಲಿ ಅವನ ವ್ಯಾಪ್ತ ರೂಪಗಳ ನೋಡುತಲಿ ಹಿಗ್ಗುವುದು//2//


ಪ್ರತಿಮೆ ಶಾಲಗ್ರಾಮ ಗೋ ಅಭ್ಯಾಗತನು ಅತಿಥಿ ಶ್ರೀತುಳಸಿ ಪಿಪ್ಪಲ ಯತಿವನಸ್ಥ

ಗೃಹಸ್ಥ ವಟು ಯಜಮಾನ ಸ್ವಪರ ಜನ

ಪೃಥಿವಿ ಜಲ ಶಿಖಿ ಪವನ ತಾರಾಪಥ ನವಗ್ರಹ ಓಗ ಕರಣ ಭತಿಥಿ

ಸಿತ ಅಸಿತ ಪಕ್ಷ ಸಂಕ್ರಮಣ ಅವನ ಅಧಿಷ್ಠಾನ//3//


ಕಾದ ಕಾಂಚನದೊಳಗೆ ಶೋಭಿಪ ಆದಿತೇಯಾಸ್ಯನ ತೆರದಿ

ಲಕ್ಷ್ಮೀ ಧವನು ಪ್ರತಿದಿನದಿ ಶಾಲಗ್ರಾಮದೊಳಗೆ ಇಪ್ಪ

ಐದು ಸಾವಿರ ಮೇಲೆ ಮೂವತ್ತು ಐದಧಿಕ ಐನೂರು ರೂಪದಿ

ಭೂಧರಗಳಾಭಿಮಾನಿ ದಿವಿಜರೊಳು ಇಪ್ಪನು ಅನವರತ//4//


ಶ್ರೀರಮಣ ಪ್ರತಿಮೆಗಳೊಳಗೆ ಹದಿಮೂರಧಿಕವಾಗಿಪ್ಪ ಮೇಲೆ

ಐನೂರು ರೂಪವ ಧರಿಸಿ ಇಪ್ಪನು ಆಹಿತ ಅಚಲದಿ

ದಾರುಮಥನವ ಗೈಯೈ ಪಾವಕ ತೋರುವಂತೆ

ಪ್ರತೀಕ ಸುರರೊಳು ತೋರುತಿಪ್ಪನು ತತ್ತದಾ ಕಾಲದಲಿ ನೋಳ್ಪರಿಗೆ//5//


ಕರಣ ನಿಯಾಮಕನು ತಾನು ಉಪಕರಣದೊಳಗೆ ಐವತ್ತೆರಡು ಸಾವಿರದ

ಹದಿನಾಲ್ಕು ಅಧಿಕ ಶತ ರೂಪಗಳನು ಧರಿಸಿ

ಇರುತಿಹನು ತದ್ರೂಪ ನಾಮಗಳ ಅರಿತು ಪೂಜಿಸುತಿಹರ ಪೂಜೆಯ ನಿರುತ ಕೈಕೊಂಬ

ತೃಷಾರ್ತನು ಜಲವ ಕೊಂಬಂತೆ//6//


ಬಿಂಬರೂಪನು ಈ ತೆರದಿ ಜಡಪೊಂಬಸಿರ ಮೊದಲಾದ ಸುರರೊಳಗೆ ಇಂಬುಗೊಂಡಿಹನೆಂದು

ಅರಿದು ಧರ್ಮಾರ್ಥ ಕಾಮಗಳ ಹಂಬಲಿಸದೆ ಅನುದಿನದಿ

ವಿಶ್ವಕುಟುಂಬಿ ಕೊಟ್ಟ ಕಣ ಅನ್ನಕುತ್ಸಿತ ಕಂಬಳಿಯೇ

ಸೌಭಾಗ್ಯವೆಂದು ಅವನ ಅಂಘ್ರಿಗಳ ಭಜಿಸು//7//


ವಾರಿಯೊಳಗಿಪ್ಪತ್ತು ನಾಲ್ಕು ಮೂರೆರೆಡು ಸಾವಿರದ ಮೇಲೆ ಮುನ್ನೂರು ಹದಿನೇಳು ಎನಿಪ

ರೂಪವು ಶ್ರೀತುಳಸಿದಳದಿ

ನೂರು ಅರವತ್ತೊಂದು ಪುಷ್ಪದಿ ಮೂರಧಿಕ ದಶ ದೀಪದೊಳು

ನಾನೂರು ಮೂರು ಸುಮೂರ್ತಿಗಳು ಗಂಧದೊಳಗೆ ಇರುತಿಹವು//8//


ಅಷ್ಟದಳ ಸದ್ಹೃದಯ ಕಮಲ ಅಧಿಷ್ಠಿತನು ತಾನಾಗಿ ಸರ್ವ ಉತ್ಕ್ರುಷ್ಟಮಹಿಮನು

ದಳಗಳಲಿ ಸಂಚರಿಸುತ ಒಳಗಿದ್ದು

ದುಷ್ಟರಿಗೆ ದುರ್ಬುದ್ಧಿ ಕರ್ಮ ವಿಶಿಷ್ಟರಿಗೆ ಸುಜ್ಞಾನ ಧರ್ಮ

ಸುಪುಷ್ಟಿಗೈಸುತ ಸಂತೈಪ ನಿರ್ದುಷ್ಟ ಸುಖಪೂರ್ಣ//9//


ವಿತ್ತದೇಹಾಗಾರ ದಾರಾಪತ್ಯ ಮಿತ್ರಾದಿಗಳೊಳಗೆ

ಗುಣಚಿತ್ತಬುದ್ಧಿ ಆದಿ ಇಂದ್ರಿಯಗಳೊಳು ಜ್ಞಾನ ಕರ್ಮದೊಳು

ತತ್ತದಾಹ್ವಯನಾಗಿ ಕರೆಸುತ ಸಂಕಲ್ಪ ಅನುಸಾರದಿ

ನಿತ್ಯದಲಿ ತಾ ಮಾಡಿ ಮಾಡಿಪನು ಎಂದು ಸ್ಮರಿಸುತಿರು//10//


ಭಾವದ್ರವ್ಯಕ್ರಿಯೆಗಳು ಎನಿಸುವ ಈ ವಿಧ ಅದ್ವೈತ ತ್ರಯಂಗಳ

ಭಾವಿಸುತ ಸದ್ಭಕ್ತಿಯಲಿ ಸರ್ವತ್ರ ಮರೆಯದಲೆ

ತಾವಕನು ತಾನೆಂದು ಪ್ರತಿದಿನ ಸೇವಿಸುವ ಭಕ್ತರಿಗೆ

ತನ್ನನೀವ ಕಾವ ಕೃಪಾಳು ಕರಿವರಗೊಲಿದ ತೆರದಂತೆ//11//


ಬಾಂದಳವೆ ಮೊದಲಾದುದರೊಳು ಒಂದೊಂದರಲಿ ಪೂಜಾ ಸುಸಾಧನವೆಂದೆನಿಸುವ

ಪದಾರ್ಥಗಳು ಬಗೆಬಗೆಯ ನೂತನದಿ ಸಂದಣಿಸಿ ಕೊಂಡಿಹವು

ಧ್ಯಾನಕೆ ತಂದಿನಿತು ಚಿಂತಿಸಿ ಸದಾ ಗೋವಿಂದನ ಅರ್ಚಿಸಿ

ನೋಡು ನಲಿನಲಿದಾಡು ಕೊಂಡಾಡು//12//


ಜಲಜನಾಭನ ಮೂರ್ತಿ ಮನದಲಿ ನೆಲೆಗೊಳಿಸಿ ನಿಶ್ಚಲ ಭಕುತಿಯಲಿ

ಚಳಿ ಬಿಸಿಲು ಮಳೆ ಗಾಳಿಗಳ ನಿಂದಿಸದೆ ನಿತ್ಯದಲಿ

ನೆಲೆದೊಳಿಹ ಗಂಧವೇ ಸುಗಂಧವು ಜಲವೆ ರಸ ರೂಪವೆ ಸುದೀಪವು

ಎಲರು ಚಾಮರ ಶಭ್ಧ ವಾದ್ಯಗಳು ಅರ್ಪಿಸಲು ಒಲಿವ//13//


ಗೋಳಕಗಳು ರಮಾ ರಮಣನ ನಿಜ ಆಲಯಗಳು

ಅನುದಿನದಿ ಸಂಪ್ರಕ್ಷಾಲನೆಯೆ ಸಮ್ಮಾರ್ಜನವು ಕರುಣಗಳೆ ದೀಪಗಳು

ಸಾಲು ತತ್ತತ್ ವಿಷಯಗಳ ಸಮ್ಮೇಳನವೇ ಪರಿಯಂಕ

ತತ್ಸುಖದ ಏಳಿಗೆಯೆ ಸುಪ್ಪತ್ತಿಗೆ ಆತ್ಮನಿವೇದನೆ ವಸನ//14//


ಪಾಪಕರ್ಮವು ಪಾದುಕೆಗಳ ಅನುಲೇಪನವು ಸತ್ಪುಣ್ಯ ಶಾಸ್ತ್ರ ಆಲಾಪನವೆ ಶ್ರೀತುಳಸಿ

ಸುಮನೋವೃತ್ತಿಗಳೆ ಸುಮನ

ಕೋಪಧೂಪವು ಭಕ್ತಿ ಭೂಷಣ

ವ್ಯಾಪಿಸಿದ ಸದ್ಬುದ್ಧಿ ಛತ್ರವು ದೀಪವೇ ಸುಜ್ಞಾನ ಆರಾರ್ತಿಗಳೆ ಗುಣಕಥನ//15//


ಮನ ವಚನ ಕಾಯಿಕ ಪ್ರದಕ್ಷಿಣೆ ಅನುದಿನದಿ ಸರ್ವತ್ರ ವ್ಯಾಪಕ ವನರುಹೇಕ್ಷಣಗೆ

ಅರ್ಪಿಸುತ ಮೋದಿಸುತಲಿರು ಸತತ

ಅನುಭವಕೆ ತಂದುಕೋ ಸಕಲ ಸಾಧನಗಳೊಳಗೆ ಇದೆ ಮುಖ್ಯ

ಪಾಮರ ಮನುಜರಿಗೆ ಪೇಳಿದರೆ ತಿಳಿಯದು ಬುಧರಿಗೆ ಅಲ್ಲದಲೆ//16//


ಚತುರ ವಿಧ ಪುರುಷಾರ್ಥ ಪಡೆವರೆ ಚತುರದಶಲೋಕಗಳ ಮಧ್ಯದೊಳು

ಇತರ ಉಪಾಯಗಳು ನೋಡಲು ಸಕಲ ಶಾಸ್ತ್ರದಲಿ

ಸತತ ವಿಷಯ ಇಂದ್ರಿಯಗಳಲಿ ಪ್ರವಿತತನೆನಿಸಿ ರಾಜಿಸುವ ಲಕ್ಷ್ಮೀಪತಿಗೆ

ಸರ್ವ ಸಮರ್ಪಣೆಯೇ ಮಹಾಪೂಜೆ ಸದುಪಾಯ//17//


ಗೋಳಕವೇ ಕುಂಡ ಅಗ್ನಿ ಕರಣವು ಮೇಲೊದಗಿ ಬಹುವಿಷಯ ಸಮಿಧೆಯು

ಗಾಳಿ ಯತ್ನವು ಕಾಮ ಧೂಪವು ಸನ್ನಿಧಾನ ಅರ್ಚಿ

ಮೇಳನವೇ ಪ್ರಜ್ವಾಲೆ ಕಿಡಿಗಳು ತೂಳಿದ ಆನಂದಗಳು

ತತ್ತತ್ಕಾಲ ಮಾತುಗಳು ಎಲ್ಲ ಮಂತ್ರ ಅಧ್ಯಾತ್ಮ ಯಜ್ಞವಿದು//18//


ಮಧು ವಿರೋಧಿಯ ಪಟ್ಟಣಕೆ ಪೂರ್ವದ ಕವಾಟಗಳು ಅಕ್ಷಿನಾಸಿಕವದನ

ಶ್ರೋತೃಗಳು ಎರಡು ದಕ್ಷಿಣ ಉತ್ತರದ್ವಾರ

ಗುದೋಪಸ್ಥಗಳು ಎರಡು ಪಶ್ಚಿಮ ಕದಗಳು ಎನಿಪವು

ಷಟ್ ಸರೋಜವೆ ಸದನ ಹೃದಯವೇ ಮಂಟಪ ತ್ರಿಗುಣoಗಳೆ ಕಲಶ//19//


ಧಾತುಗಳೇ ಸಪ್ತ ಆವರಣ ಉಪವೀಧಿಗಳೇ ನಾಡಿಗಳು ಮದಗಳು ಯೂಥಪಗಳು

ಸುಷುಮ್ನನಾಡಿಯೇ ರಾಜಪಂಥಾನ

ಈ ತನೂರುಹಗಳೇ ವನಂಗಳು ಮಾತರಿಶ್ವನು ಪಂಚರೂಪದಿ

ಪಾತಕಿಗಳೆಂಬ ಅರಿಗಳನು ಸಂಹರಿಪ ತಳವಾರ//20//


ಇನ ಶಶಾಂಕಾದಿಗಳು ಲಕ್ಷ್ಮೀವನಿತೆ ಅರಸನ ದ್ವಾರ ಪಾಲಕರೆನಿಸುತ ಇಪ್ಪರು

ಮನದ ವೃತ್ತಿಗಳೇ ಪದಾತಿಗಳು

ಅನುಭವಿಪ ವಿಷಯoಗಳೇ ಪಟ್ಟಣಕೆ ಬಪ್ಪ ಪಸಾರಗಳು

ಜೀವನೇ ಸುವರ್ತಕ ಕಷ್ಟಗಳ ಕೈಕೊಂಬ ಹರಿ ತಾನು//21//


ಉರುಪರಾಕ್ರಮನ ಅರಮನಿಗೆ ದಶಕರಣಗಳೆ ಕನ್ನಡಿಯ ಸಾಲುಗಳು

ಅರವಿದೂರನ ಸದ್ವಿಹಾರಕೆ ಚಿತ್ತ ಮಂಟಪವು

ಮರಳಿ ಬೀಸುವ ಶ್ವಾಸಗಳು ಚಾಮರ ವಿಲಾಸಿನಿ ಬುದ್ಧಿ

ದಾಮೋದರಗೆ ಸಾಷ್ಟಾಂಗ ಪ್ರಣಾಮಗಳೇ ಸುಶಯನಗಳು//22//


ಮಾರಮಣನ ಅರಮನೆಗೆ ಸುಮಹಾ ದ್ವಾರವೆನಿಸುವ ವದನಕೆ

ಒಪ್ಪುವ ತೋರಣ ಸ್ಮಶ್ರುಗಳು ಕೇಶಗಳೇ ಪತಾಕೆಗಳು

ಊರಿ ನಡೆವ ಅಂಘ್ರಿಗಳು ಜಂಘೆಗಳು ಊರು ಮಧ್ಯ ಉದರ ಶಿರಗಳು

ಆಗಾರದ ಉಪ್ಪರಿಗೆಗಳು ಕೋಶಗಳು ಐದು ಕೋಣೆಗಳು//23//


ಈ ಶರೀರವೇ ರಥ ಪಟಾಕ ಸುವಾಸಗಳು ಪುಂಡ್ರಗಳು ಧ್ವಜ

ಸಿಂಹಾಸನವು ಚಿತ್ತವು ಸುಬುದ್ಧಿಯು ಕಲಶ ಸನ್ಮನವು ಪಾಶ

ಗುಣ ದಂಡತ್ರಯಗಳು ಶುಭಾಶುಭದ್ವಯ ಕರ್ಮ ಚಕ್ರ

ಮಹಾಸಮರ್ಥ ಅಶ್ವಗಳು ದಶಕರಣoಗಳು ಎನಿಸುವುವು//24//


ಮಾತರಿಶ್ವನು ದೇಹರಥದೊಳು ಸೂತನಾಗಿಹ ಸರ್ವಕಾಲದಿ

ಶ್ರೀತರುಣಿ ವಲ್ಲಭ ರಥಿಕನು ಎಂದರಿದು ನಿತ್ಯದಲಿ

ಪ್ರೀತಿಯಿಂದಲಿ ಪೋಷಿಸುತ ವಾತಾತಪ ಆದಿಗಳಿಂದ ಅವಿರತ

ಈ ತನುವಿನೊಳು ಮಮತೆ ಬಿಟ್ಟವನೇ ಮಹಾಯೋಗಿ//25//


ಭವವೆನಿಪ ವನಧಿಯೊಳು ಕರ್ಮ ಪ್ರವಹದೊಳು ಸಂಚರಿಸುತಿಹ

ದೇಹವೆ ಸುನಾವೆಯ ಮಾಡಿ ತನ್ನವರಿಂದ ಒಡಗೂಡಿ

ದಿವಸ ದಿವಸಗಳಲ್ಲಿ ಲಕ್ಷ್ಮೀಧವನು ಕ್ರೀಡಿಪನು ಎಂದು ಚಿಂತಿಸೆ

ಪವನನಯ್ಯ ಭವಾಬ್ಧಿ ದಾಟಿಸಿ ಪರಮಸುಖವ ಈವ//26//


ಆಪಣಾಲಯಗಳ ಪದಾರ್ಥವು ಸ್ತ್ರೀಪುರುಷರ ಇಂದ್ರಿಯಗಳಲಿ

ದೀಪ ಪಾವಕರೊಳಗೆ ಇದುವ ತೈಲಾದಿ ದ್ರವ್ಯಗಳ

ಆ ಪರಮಗೆ ಅವದಾನವು ಎಂದು ಪದೇಪದೇ ಮರೆಯದಲೆ ಸ್ಮರಿಸುತ

ಭೂಪನಂದದಿ ಸಂಚರಿಸು ನಿರ್ಭಯದಿ ಸರ್ವತ್ರ//27//


ವಾರಿಜ ಭವಾಂಡವೆ ಸುಮಂಟಪ ಮೇರುಗಿರಿ ಸಿಂಹಾಸನವು ಭಾಗೀರಥಿಯೇ ಮಜ್ಜನವು

ದಿಕ್ವಸ್ತ್ರಗಳು ನುಡಿ ಮಂತ್ರ

ಭೂರುಹಜ ಫಲಪುಷ್ಪ ಗಂಧ ಸಮೀರ ಶಶಿ ರವಿ ದೀಪ

ಭೂಷಣ ತಾರಕಗಳು ಎಂದು ಅರ್ಪಿಸಲು ಕೈಕೊಂಡು ಮನ್ನಿಸುವ//28//


ಭೂಸುರರೊಳು ಇಪ್ಪ ಅಬ್ಜಭವನನೊಳು ವಾಸುದೇವನು

ವಾಯುಖಗಪ ಸದಾಶಿವ ಅಹಿಪ ಇಂದ್ರನು ವಿವಸ್ವಾನ್ ನಾಮಕ ಸೂರ್ಯ

ಭೇಶಕಾಮ ಅಮರಾಸ್ಯ ವರುಣಾದಿ ಸುರರು ಕ್ಷತ್ರಿಯರೊಳು ಇಪ್ಪರು

ವಾಸವಾಗಿಹ ಸಂಕರುಷಣನ ನೋಡಿ ಮೋದಿಪರು//29//


ಮೀನ ಕೇತನ ತನಯ ಪ್ರಾಣಾಪಾನ ವ್ಯಾನೋದಾನ ಮುಖ್ಯ ಏಕ ಊನ ಪಂಚಾಶತ್

ಮರುದ್ಗಣ ರುದ್ರ ವಸುಗಣರು

ಮೇನಕಾತ್ಮಜ ಕುವರ ವಿಶ್ವಕ್ಸೇನ ಧನಪಾದಿ ಅನಿಮಿಷರನು

ಸದಾನುರಾಗದಿ ಧೇನಿಪುದು ವೈಶ್ಯರೊಳು ಪ್ರದ್ಯುಮ್ನ//30//


ಇರುತಿಹರು ನಾಸತ್ಯ ದಸ್ರರು ನಿರಋತಿಯು ಯಮಧರ್ಮ ಕಿಂಕರರು ಮೇದಿನಿ

ಕಾಲಮೃತ್ಯು ಶನೈಶ್ಚರಾದಿಗಳು

ಕರೆಸಿಕೊಂಬರು ಶೂದ್ರರೆಂದು ಅನವರತ

ಶೂದ್ರರೊಳಿಪ್ಪರು ಇವರೊಳಗೆ ಅರವಿದೂರ ಅನಿರುದ್ಧನು ಇಹನೆಂದರಿದು ಮನ್ನಿಪುದು//31//


ವೀತಭಯ ನಾರಾಯಣ ಚತುಷ್ಪಾತು ತಾನು ಎಂದೆನಿಸಿ

ತತ್ತತ್ ಜಾತಿ ಧರ್ಮ ಸುಕರ್ಮಗಳ ತಾ ಮಾಡಿ ಮಾಡಿಸುತ

ಚೇತನರ ಒಳಹೊರಗೆ ಓತಪ್ರೋತನಾಗಿದ್ದು ಎಲ್ಲರಿಗೆ

ಸಂಪ್ರೀತಿಯಲಿ ಧರ್ಮಾರ್ಥ ಕಾಮಾದಿಗಳ ಕೊಡುತಿಹನು//32//


ನಿಧನ ಧನದ ವಿಧಾತ ವಿಗತಾಭ್ಯಧಿಕ ಸಮಸಮವರ್ತಿ ಸಾಮಗ

ತ್ರಿದಶ ಗಣಸಂಪೂಜ್ಯ ತ್ರಿಕಕುತ್ ಧಾಮ ಶುಭನಾಮ

ಮಧುಮಥನ ಭೃಗುರಾಮ ಘೋಟಕ ವದನ

ಸರ್ವ ಪದಾರ್ಥದೊಳು ತುದಿ ಮೊದಲು ತುಂಬಿಹನು ಎಂದು ಚಿಂತಿಸು ಬಿಂಬರೂಪದಲಿ//33//


ಕನ್ನಡಿಯ ಕೈವಿಡಿದು ನೋಡಲು ತನ್ನ ಇರವು ಸವ್ಯಾಪಸವ್ಯದಿ ಕಣ್ಣಿಗೆ ಒಪ್ಪುವ ತೆರದಿ

ಅನಿರುದ್ಧನಿಗೆ ಈ ಜಗವು ಭಿನ್ನ ಭಿನ್ನವೆ ತೋರುತಿಪ್ಪುದು

ಜನ್ಯವಾದುದರಿಂದ ಪ್ರತಿಬಿಂಬನ್ನ

ಮಯಗಾನು ಎಂದರಿದು ಪೂಜಿಸಲು ಕೈಕೊಂಬ//34//


ಬಿಂಬರೆನಿಪರು ಸ್ವೋತ್ತಮರು ಪ್ರತಿಬಿಂಬರೆನಿಪರು ಸ್ವ ಅವರರು

ಪ್ರತಿಬಿಂಬ ಬಿಂಬಗಳೊಳಗೆ ಕೇವಲ ಬಿಂಬ ಹರಿಯೆಂದು

ಸಂಭ್ರಮದಿ ಪಾಡುತಲಿ ನೋಡುತ ಉಂಬುದು ಉಡುವುದು ಇಡುವುದು ಕೊಡುವುದು ಎಲ್ಲ

ಅಂಬುಜಾoಬುಕನ ಅಂಘ್ರಿ ಪೂಜೆಗಳು ಎಂದು ನಲಿದಾಡು//35//


ನದಿಯ ಜಲ ನದಿಗೆ ಎರೆವ ತೆರೆದಂದದಲಿ

ಭಗವತ್ ದತ್ತ ಧರ್ಮಗಳು ಉದಧಿಶಯನನಿಗೆ ಅರ್ಪಿಸುತ ವ್ಯಾವೃತ್ತ ನೀನಾಗಿ

ವಿಧಿ ನಿಷೇಧಾದಿಗಳಿಗೆ ಒಳಗಾಗದಲೆ ನೋಡುತ

ದರ್ವಿಯಂದದಿ ಪದುಮನಾಭನ ಸಕಲ ಕರ್ಮಗಳಲಿ ನೆನೆವುತಿರು//36//


ಅರಿಯದಿರ್ದರು ಎಮ್ಮೊಳಿದ್ದು ಅನವರತ ವಿಷಯಗಳ ಉಂಬ

ಜ್ಞಾನ ಉತ್ತರದಿ ತನಗರ್ಪಿಸಲು ಚಿತ್ಸುಖವಿತ್ತು ಸಂತೈಪ

ಸರಿತು ಕಾಲಪ್ರವಹಗಳು ಕಂಡರೆಯು ಸರಿ ಕಾಣದಿರೆ ಪರಿವವು

ಮರಳಿ ಮಜ್ಜನ ಪಾನ ಕರ್ಮಗಳಿಂದ ಸುಖವಿಹವು//37//


ಏನು ಮಾಡುವ ಕರ್ಮಗಳು ಲಕ್ಷ್ಮೀ ನಿವಾಸನಿಗೆ ಅರ್ಪಿಸು

ಅನುಸಂಧಾನ ಪೂರ್ವಕದಿಂದ ಸಂದೇಹಿಸದೆ ದಿನದಿನದಿ

ಮಾನನಿಧಿ ಕೈಕೊಂಡು ಸುಖವಿತ್ತು ಅನತರ ಸಂತೈಪ

ತೃಣ ಜಲ ಧೇನು ತಾನುಂಡು ಅನವರತ ಪಾಲ್ಗರೆವ ತೆರದಂತೆ//38//


ಪೂರ್ವ ದಕ್ಷಿಣ ಪಶ್ಚಿಮ ಉತ್ತರ ಪಾರ್ವತೀಪತಿ ಅಗ್ನಿವಾಯು ಸುಶಾರ್ವರೀಚರ

ದಿಗ್ವಲಯದೊಳು ಹಂಸನಾಮಕನು

ಸರ್ವಕಾಲದಿ ಸರ್ವರೊಳು ಸುರ ಸಾರ್ವಭೌಮನು ಸ್ವೇಚ್ಛೆಯಲಿ

ಮತ್ತೋರ್ವರಿಗೆ ಗೋಚರಿಸದ ಅವ್ಯಕ್ತ ಆತ್ಮನು ಎಂದೆನಿಪ//39//


ಪರಿ ಇಡಾವತ್ಸರನು ಸಂವತ್ಸರದೊಳು ಅನಿರುದ್ಧಾದಿ ರೂಪವ ಧರಿಸಿ

ಬಾರ್ಹಸ್ಪತ್ಯ ಸೌರಭ ಚಾಂದ್ರಮನು ಎನಿಸಿ

ಇರುತಿಹ ಜಗನ್ನಾಥ ವಿಠಲ ಸ್ಮರಿಸುವವರನು ಸಂತೈಪನು ಎಂದು

ಉರುಪರಾಕ್ರಮ ಉಚಿತಸಾಧನ ಯೋಗ್ಯತೆಯನರಿತು//40//


//ಇತಿ ಶ್ರೀ ವಿಭೂತಿ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು

No comments:

Post a Comment