Friday, January 4, 2013

ಶ್ರೀ ಹರಿಕಥಾಮೃತಸಾರ - 6

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಪಂಚಮಹಾಯಜ್ಞ ಸಂಧಿ//

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಜನನಿಪಿತಭೂವಾರಿದಾಂಬರವೆನಿಪ ಪಂಚಾಗ್ನಿಯಲಿ

ನಾರಾಯಣನ ತ್ರಿಂಶತಿ ಮೂರ್ತಿಗಳ ವ್ಯಾಪಾರ ವ್ಯಾಪ್ತಿಗಳ ನೆನೆದು

ದಿವಸಾಳು ಎಂಬ ಸಮಿಧೆಗಳು ನಿರಂತರ ಹೋಮಿಸುತ

ಪಾವನಕೆ ಪಾವನನು ಎನಿಪ ಪರಮನ ಬೇಡು ಪರಮಸುಖ//1//


ಗಗನ ಪಾವಕ ಸಮಿಧೆ ರವಿ ರಶ್ಮಿಗಳೇ ಧೂಮವು ಅರ್ಚಿಯೆನಿಪುದು ಹಗಲು

ನಕ್ಷತ್ರಗಳು ಕಿಡಿಗಳು ಚಂದ್ರಮ ಅಂಗಾರ

ಮೃಗವರ ಉದರನೊಳಗೆ ಐದು ರೂಪಗಳ ಚಿಂತಿಸಿ

ಭಕ್ತಿರಸ ಮಾತುಗಳೆ ಮಂತ್ರವ ಮಾಡಿ ಹೋಮಿಸುವರು ವಿಪಶ್ಚಿತರು//2//


ಪಾವಕನು ಪರ್ಜನ್ಯ ಸಮಿಧೆಯು ಪ್ರಾವಹೀಪತಿ ಧೂಮಗಳು ಮೇಘಾವಳಿಗಳು

ಅರ್ಚಿ ಕ್ಷಣಪ್ರಭೆ ಗರ್ಜನವೆ ಕಿಡಿಯು ಭಾವಿಸುವುದು ಅಂಗಾರ ಸಿಡಿಲೆಂದು

ಈ ವಿಧ ಅಗ್ನಿಯೊಳು ಅಬ್ಧಿ ಜಾತನ ಕೋವಿದರು ಹೋಮಿಸುವರು ಅನುದಿನ

ಪರಮ ಭಕುತಿಯಲಿ//3//


ಧರಣಿಯೆಂಬುದೇ ಅಗ್ನಿ ಸಂವತ್ಸರವೇ ಸಮಿಧೆ ವಿಹಾಯಸವೇ ಪೊಗೆ

ಇರಳು ಉರಿ ದಿಶ ಅಂಗಾರ ಅವಾಂತರ ದಿಗ್ವಲಯ ಕಿಡಿಯು

ವರುಷವೆಂಬ ಆಹುತಿಗಳಿಂದಲಿ ಹರಿಯ ಮೆಚ್ಚಿಸಿ

ಸಕಲರೊಳಗೆ ಅಧ್ವರಿಯನಾಗಿರು ಸರ್ವ ರೂಪಾತ್ಮಕನ ಚಿಂತಿಸುತ//4//


ಪುರುಷ ಶಿಖಿ ವಾಕ್ಸಮಿಧೆ ಧೂಮವು ಪರಣ ಅರ್ಚಿಯು ಜಿಹ್ವೆ ಶ್ರೋತ್ರಗಳು ಎರಡು ಕಿಡಿಗಳು

ಲೋಚನಗಳು ಅಂಗಾರವೆನಿಸುವುವು

ನಿರುತ ಭುಂಜಿಸುವನ್ನ ಯದುಕುಲವರನಿಗೆ ಅವದಾನಗಳೆಂದು

ಈ ಪರಿ ಸಮರ್ಪಣೆಗೈಯೆ ಕೈಗೊಂಡು ಅನುದಿನದಿ ಪೊರೆವ//5//


ಮತ್ತೆ ಯೋಷ ಅಗ್ನಿಯೊಳು ತಿಳಿವುದು ಉಪಸ್ಥ ತತ್ತ್ವವೆ ಸಮಿಧೆ

ಕಾಮೋತ್ಪತ್ತಿ ಪರಮಾತುಗಳು ಧೂಮವು ಯೋನಿ ಮಹದರ್ಚಿ

ತತ್ಪ್ರವೇಶ ಅಂಗಾರ ಕಿಡಿಗಳು ಉತ್ಸಹ ಉತ್ಸರ್ಜನವೆ

ಪುರುಷೋತ್ತಮನಿಗೆ ಅವದಾನವನೆ ಕೈಕೊಂಡು ಮನ್ನಿಸುವ//6//


ಐದಗ್ನಿಗಳಲ್ಲಿ ಮರೆಯದೆ ಐದು ರೂಪಾತ್ಮಕನ ಇಪ್ಪತ್ತೈದು ರೂಪಗಳ

ಅನುದಿನದಿ ನೆನೆವರಿಗೆ ಜನ್ಮಗಳ ಐದಿಸನು ನಳಿನಾಕ್ಷ

ರಣದೊಳು ಮೈದುನನ ಕಾಯ್ದಂತೆ ಸಲಹುವ

ಬೈದವಗೆ ಗತಿಯಿತ್ತ ಭಯಹರ ಭಕ್ತವತ್ಸಲನು//7//


ಪಂಚನಾರೀ ತುರಗದಂದದಿ ಪಂಚರೂಪಾತ್ಮಕನು ತಾ ಷಟ್ಪoಚ ರೂಪವ ಧರಿಸಿ

ತತ್ತನ್ನಾಮದಿಂ ಕರೆಸಿ

ಪಂಚ ಪಾವಕ ಮುಖದಿ ಗುಣಮಯ ಪಂಚಭೂತಾತ್ಮಕ ಶರೀರವ

ಪಂಚ ವಿಧ ಜೀವರಿಗೆ ಕೊಟ್ಟು ಅಲ್ಲಲ್ಲೆ ರಮಿಸುವನು//8//


ವಿಧಿ ಭವಾದಿ ಸಮಸ್ತ ಜೀವರ ಹೃದಯದೊಳಗೆ ಏಕಾತ್ಮನೆನಿಸುವ ಪದುಮನಾಭನು

ಅಚ್ಯುತಾನಂತಾದಿರೂಪದಲಿ

ಅಧಿಸುಭೂತಾಧ್ಯಾತ್ಮವ ಅಧಿದೈವದೊಳು ಕರೆಸುವ

ಪ್ರಾಣನಾಗಾಭಿದನು ದಶರೂಪದಲಿ ದಶವಿಧ ಪ್ರಾಣರೊಳಗಿದ್ದು//9//


ಈರೈದು ಸಾವಿರದ ಇಪ್ಪತ್ತು ಆರಧಿಕ ಮುನ್ನೂರು ರೂಪಗಳ

ಈರೆರೆಡು ಸ್ಥಾನದಲಿ ಚಿಂತಿಪುದು ಅನುದಿನದಿ ಬುಧರು

ನೂರಿಪ್ಪತ್ತೇಳು ಅಧಿಕ ಮೂರಾರುಸಾವಿರ ರೂಪದಿಂ

ದಶ ಮಾರುತರೊಳಿದ್ದು ಅವರವರ ಪೆಸರಿಂದ ಕರೆಸುವನು//10//


ಚಿತ್ತೈಸುವುದು ಎಂಟಧಿಕ ಇಪ್ಪತ್ತು ಸಾವಿರ ನಾಲ್ಕು ಶತದ ಇಪ್ಪತ್ತಮೂರು ಸುಮೂರ್ತಿಗಳು

ಅಹವಲ್ಲೇ ಪರಿಯಂತ

ಹತ್ತು ನಾಲ್ಕು ರೂಪಗಳ ನೆರೆಬಿತ್ತವರೀಪರಿ ತಿಳಿದು

ಪುರುಷೋತ್ತಮನ ಸರ್ವತ್ರ ಪೂಜೆಯ ಮಾಡು ಕೊಂಡಾಡು//11//


ಈರೆರೆಡು ಶತದ್ವಿಷ್ಟ ಅಧಿಕ ಹದಿನಾರು ಸಾವಿರ ರೂಪ ಸರ್ವ ಶರೀರದೊಳು

ಶಬ್ಧಾದಿಗಳ ಅಧಿಷ್ಠಾನದೊಳಗೆ ಇಪ್ಪ

ಮಾರುತನು ನಾಗಾದಿ ರೂಪದಿ

ಮೂರನೇ ಗುಣಮಾನಿ ಶ್ರೀ ದುರ್ಗಾರಮಣ ವಿದ್ಯಾಕುಮೋಹವ ಕೊಡುವ ಕರಣಕ್ಕೆ//12//


ಐದವಿದ್ಯೆಗಳೊಳಗೆ ಇಹ ನಾಗಾದಿಗಳ ಅಧಿಷ್ಠಾನದಲಿ ಲಕ್ಷ್ಮೀಧವನು

ಕೃದ್ಧೋಲ್ಕ ಮೊದಲಾದ ಐದು ರೂಪಗಳ ತಾ ಧರಿಸಿ

ಸಜ್ಜನರ ಅವಿದ್ಯವ ಛೇದಿಸುವ ತಾಮಸರಿಗೆ ಅಜ್ಞಾನಾದಿಗಳ ಕೊಟ್ಟು

ಅವರವರ ಸಾಧನವ ಮಾಡಿಸುವ//13//


ಗೋವುಗಳೊಳು ಉದ್ಗೀಥನಿಹ ಪ್ರಸ್ಥಾವ ಹಿಂಕಾರ ಎರಡೂ ರೂಪದಿ ಅವ್ಯಾಜಗಳೊಳಿಹನು

ಪ್ರತಿಹಾರಾಹ್ವ ಹಯಗಳೊಳು

ಜೀವನಪ್ರದ ನಿಧನ ಮನುಜರೊಳು ಈ ವಿಧದೊಳಿಹ ಪಂಚ ಸಾಮವ

ಝಾವ ಝಾವಕೆ ನೆನೆವರಿಗೆ ಐದಿಸನು ಜನ್ಮಗಳ//14//


ಯುಗ ಚತುಷ್ಟಯಗಳಲಿ ತಾನಿದ್ದು ಯುಗ ಪ್ರವರ್ತಕ ಧರ್ಮ ಕರ್ಮಗಳಿಗೆ ಪ್ರವರ್ತಕ

ವಾಸುದೇವಾದಿ ಈರೆರೆಡು ರೂಪ ತೆಗೆದುಕೊಂಡು

ಯುಗಾದಿ ಕೃತು ತಾ ಯುಗ ಪ್ರವರ್ತಕಯೆನಿಸಿ

ಧರ್ಮ ಪ್ರಘಟಕನು ತಾನಾಗಿ ಭಕುತರಿಗೀವ ಸಂಪದವ//15//


ತಲೆಯೊಳಿಹ ನಾರಾಯಣನು ಗಂಟಲಡಿ ಒಡಲೊಳು ವಾಸುದೇವನು

ಬಲದಲಿಹ ಪ್ರದ್ಯುಮ್ನ ಎಡ ಭಾಗದಲಿ ಅನಿರುದ್ಧ

ಕೆಳಗಿನ ಅಂಗದಿ ಸಂಕರುಷಣನ ತಿಳಿದು

ಈ ಪರಿ ಸಕಲ ದೇಹಗಳೊಳಗೆ ಪಂಚಾತ್ಮಕನ ರೂಪವ ನೋಡು ಕೊಂಡಾಡು//16//


ತನು ವಿಶಿಷ್ಟದಿ ಇಪ್ಪ ನಾರಾಯಣನು ಕಟಿ ಪಾದ ಅಂತ ಸಂಕರುಷಣನು

ಶಿರ ಜಘನ ಅಂತವಾಗಿಹ ವಾಸುದೇವಾಖ್ಯ

ಅನಿಮಿಷ ಈಷ ಅನಿರುದ್ಧ ಪ್ರದ್ಯುಮ್ನನ್ನು ಎಡದಿ ಬಲ ಭಾಗದಿ

ಚಿಂತನೆಯ ಮಾಳ್ಪರಿಗೆ ಉಂಟೆ ಮೈಲಿಗೆ ವಿಧಿ ನಿಷೇಧಗಳು//17//


ಪದುಮನಾಭನು ಪಾಣಿಯೊಳಗಿಹ ವದನದಲಿ ಹೃಷಿಕೇಶ

ನಾಸಿಕ ಸದನದಲಿ ಶ್ರೀಧರನು ಜಿಹ್ವೆಯೊಳು ಇಪ್ಪ ವಾಮನನು

ವಿದಿತ ನೇತ್ರದಿ ತ್ರಿವಿಕ್ರಮನು ತ್ವಕ್ದೇಶದೊಳಗಿಹ

ಕರ್ಣದಲಿ ಇಪ್ಪನು ವಿಷ್ಣುನಾಮಕ ಶ್ರವಣನೆಂದೆನಿಸಿ//18//


ಮನದೊಳಿಹ ಗೋವಿಂದ ಮಾಧವ ಧನಪ ಸಖ ತತ್ವದೊಳು

ನಾರಾಯಣ ಮಹತ್ತತ್ವದೊಳು ಅವ್ಯಕ್ತದೊಳು ಕೇಶವನು

ಇನಿತು ರೂಪವ ದೇಹದೊಳು ಚಿಂತನೆಯ ಗೈವ ಮಹಾತ್ಮರು

ಇಳೆಯೊಳು ಮನುಜರು ಅವರಲ್ಲ ಅಮರರೇ ಸರಿ ಹರಿಕೃಪಾಬಲದಿ//19//


ನೆಲದೊಳು ಇಪ್ಪನು ಕೃಷ್ಣ ರೂಪದಿ ಜಲದೊಳು ಇಪ್ಪನು ಹರಿಯೆನಿಸಿ

ಶಿಖಿಯೊಳಗೆ ಇಪ್ಪನು ಪರಶುರಾಮ ಉಪೆನ್ದ್ರನು ಎಂದೆನಿಸಿ ಎಲ್ಲರೊಳು ಇಪ್ಪನು ಜನಾರ್ಧನನು

ಬಾಂದಲದೊಳು ಅಚ್ಯುತ ಗಂಧ ನರಹರಿ

ಪೊಳೆವ ಅಧೋಕ್ಷಜ ರಸಗಳೊಳು ರಸರೂಪ ತಾನಾಗಿ//20//


ರೂಪ ಪುರುಷೋತ್ತಮನು ಸ್ಪರ್ಶ ಪ್ರಾಪಕನು ಅನಿರುದ್ಧ

ಶಬ್ಧದಿ ವ್ಯಾಪಿಸಿಹ ಪ್ರದ್ಯುಮ್ನ ಉಪಸ್ಥದಿ ವಾಸುದೇವನಿಹ

ತಾ ಪೊಳೆವ ಪಾಯುಸ್ಥನಾಗಿ ಜಯಾಪತಿಯು ಸಂಕರುಷಣನು

ಸುಸ್ಥಾಪಕನೆನಿಸಿ ಪಾದದೊಳು ದಾಮೋದರನು ಪೊಳೆವ//21//


ಚತುರ ವಿಂಶತಿ ತತ್ತ್ವದೊಳು ಶ್ರೀಪತಿಯೆ ಅನಿರುದ್ಧಾದಿ ರೂಪದಿ

ವಿದಿತನಾಗಿದ್ದು ಅಖಿಲ ಜೀವರ ಸಂಹನನದೊಳಗೆ

ಪ್ರತತಿಯಂದದಿ ಸುತ್ತು ಸುತ್ತುತ ಪಿತೃಗಳಿಗೆ ತರ್ಪಕನೆನಿಸಿಕೊಂಡು

ಅತುಳ ಮಹಿಮನು ಷಣ್ಣವತಿ ನಾಮದಲಿ ನೆಲೆಸಿಹನು//22//


ಚತುರ ವಿಂಶತಿ ತತ್ತ್ವದೊಳು ತತ್ಪತಿಗಳೆನಿಸುವ ಬ್ರಹ್ಮ ಮುಖ ದೇವತೆಗಳೊಳು

ಹನ್ನೊಂದು ನೂರೈವತ್ತೆರಡು ರೂಪ

ವಿತತನಾಗಿದ್ದೆಲ್ಲ ಜೀವರ ಜತನ ಮಾಡುವ ಗೋಸುಗ

ಜಗತ್ಪತಿಗೆ ಏನಾದರೂ ಪ್ರಯೋಜನವಿಲ್ಲವಿದರಿಂದ//23//


ಇಂದಿರಾಧವ ಶಕ್ತಿ ಮೊದಲಾದ ಒಂದಧಿಕದಶ ರೂಪದಿಂದಲಿ

ಪೊಂದಿಹನು ಸಕಲ ಇಂದ್ರಿಯಗಳಲ್ಲಿ ಪುರುಷನಾಮಕನು

ಸುಂದರಪ್ರದ ಪೂರ್ಣಜ್ಞಾನಾನಂದಮಯ

ಚಿತ್ದೇಹದೊಳು ತಾನೊಂದರೆಕ್ಷಣ ವಗಲದಲೆ ಪರಮಾಪ್ತನು ಆಗಿಪ್ಪ//24//


ಆರಧಿಕ ದಶ ರೂಪದಿಂದಲಿ ತೋರುತ ಇಪ್ಪನು ವಿಶ್ವ

ಲಿಂಗಶರೀರದೊಳು ತೈಜಸನು ಪ್ರಾಜ್ಞನು ತುರ್ಯನಾಮಕನು

ಮೂರೈದು ರೂಪಗಳ ಧರಿಸುತಲಿ ಈರೈದು ಕರಣದೊಳು ಮಾತ್ರದಿ

ಖೈರ ಶಿಖಿ ಜಲ ಭೂಮಿಯೊಳಗಿಹನು ಆತ್ಮನಾಮದಲಿ//25//


ಮನದೊಳು ಅಹಂಕಾರದೊಳು ಚಿಂತನೆಯ ಮಾಳ್ಪುದು ಅಂತರಾತ್ಮನ

ಘನ ಸುತತ್ತ್ವದಿ ಪರಮನ ಅವ್ಯಕ್ತದಲಿ ಜ್ಞಾನಾತ್ಮ

ಇನಿತು ಪಂಚಾಶಯ್ವರಣ ವೇದ್ಯನ ಅಜಾದ್ಯೈವತ್ತು ಮೂರ್ತಿಗಳನು

ಸದಾ ಸರ್ವತ್ರ ದೇಹಗಳಲ್ಲಿ ಪೂಜಿಪುದು//26//


ಚತುರ ವಿಂಶತಿ ತತ್ತ್ವದೊಳು ತತ್ಪತಿಗಳೆನಿಸುವ ಬ್ರಹ್ಮ ಮುಖ ದೇವತೆಗಳೊಳು

ಹದಿಮೂರು ಸಾವಿರದ ಎಂಟು ನೂರಧಿಕ ಚತುರ ವಿಂಶತಿ ರೂಪದಿಂದಲಿ

ವಿತತನಾಗಿದ್ದು ಎಲ್ಲರೊಳು

ಪ್ರಾಕೃತ ಪುರುಷನಂದದಲಿ ಪಂಚಾತ್ಮಕನು ರಮಿಸುವನು//27//


ಕೇಶವಾದಿ ಸುಮೂರ್ತಿ ದ್ವಾದಶ ಮಾಸ ಪುಂಡ್ರಗಳಲ್ಲಿ

ವೇದವ್ಯಾಸ ಅನಿರುದ್ಧಾದಿ ರೂಪಗಳು ಆರು ಋತುಗಳಲಿ

ವಾಸವಾಗಿಹನೆಂದು ತ್ರಿಂಶತಿ ವಾಸರದಿ ಸತ್ಕರ್ಮ ಧರ್ಮ ನಿರಾಶೆಯಿಂದಲಿ ಮಾಡು

ಕರುಣವ ಬೇಡು ಕೊಂಡಾಡು//28//


ಲೋಷ್ಠ ಕಾಂಚನ ಲೋಹ ಶೈಲಜ ಕಾಷ್ಠ ಮೊದಲಾದ ಅಖಿಳ ಜಡ

ಪರಮೇಷ್ಠಿ ಮೊದಲಾದ ಅಖಿಳ ಚೇತನರೊಳಗೆ ಅನುದಿನವು

ಚೇಷ್ಟೆಗಳ ಮಾಡಿಸುತ ತಿಳಿಸದೆ ಪ್ರೇಷ್ಟನಾಗಿದ್ದು ಎಲ್ಲರಿಗೆ

ಸರ್ವೇಷ್ಟ ಆದಾಯಕ ಸಂತೈಸುವನು ಸರ್ವ ಜೀವರನು//29//


ವಾಸುದೇವಾನಿರುದ್ಧ ರೂಪದಿ ಪುಂ ಶರೀರದೊಳಿಹನು ಸರ್ವದ

ಸ್ತ್ರೀ ಶರೀರದೊಳಿಹನು ಸಂಕರುಷಣನು ಪ್ರದ್ಯುಮ್ನ

ದ್ವಾಸುಪರ್ಣ ಶ್ರುತಿ ವಿನುತ ಸರ್ವಸುನಿಲ ನಾರಾಯಣನ

ಸದುಪಾಸನೆಯ ಗೈವರರು ಜೀವನ್ಮುಕ್ತರು ಎನಿಸುವರು//30//


ತನ್ನನಂತ ಅನಂತ ರೂಪ ಹಿರಣ್ಯ ಗರ್ಭಾದಿಗಳೊಳಗೆ

ಕಾರುಣ್ಯ ಸಾಗರ ಹರಹಿ ಅವರವರ ಅಖಿಳ ವ್ಯಾಪಾರ

ಬನ್ನಬಡದಲೆ ಮಾಡಿ ಮಾಡಿಸಿ ಧನ್ಯರೆನಿಸಿ

ಸಮಸ್ತ ದಿವಿಜರ ಪುಣ್ಯಕರ್ಮವ ಸ್ವೀಕರಿಸಿ ಸುಖವಿತ್ತು ಪಾಲಿಸುವ//31//


ಸಾಗರದೊಳಿಹ ನದಿಯ ಜಲ ಭೇದ ಆಗಸದೊಳು ಇಪ್ಪ ಅಬ್ದ ಬಲ್ಲವು

ಕಾಗೆ ಗುಬ್ಬಿಗಳು ಅರಿಯ ಬಲ್ಲವೇ ನದಿಯ ಜಲಸ್ಥಿತಿಯ

ಭೋಗಿವರ ಪರಿಯಂಕ ಶಯನನೊಳು ಈ ಗುಣತ್ರಯ ಬದ್ಧ ಜಗವಿಹುದು

ಆಗಮಜ್ಞರು ತಿಳಿವರು ಅಜ್ಞಾನಿಗಳಿಗೆ ಅಳವಡದು//32//


ಕರಣ ಗುಣ ಭೂತಗಳೊಳಗೆ ತದ್ವರನೆನಿಪ ಬ್ರಹ್ಮಾದಿ ದಿವಿಜರೊಳರಿತು

ರೂಪ ಚತುಷ್ಟಯಗಳ ಅನುದಿನದಿ ಸರ್ವತ್ರ ಸ್ಮರಿಸುತ ಅನುಮೋದಿಸುತ ಹಿಗ್ಗುತ

ಪರವಶದಿ ಪಾಡುವರಿಗೆ ತನ್ನಿರವ ತೋರಿಸಿ

ಭವವಿಮುಕ್ತರ ಮಾಡಿ ಪೋಷಿಸುವ//33//


ಮೂಲರೂಪನು ಮನದೊಳಿಹ ಶ್ರವಣ ಆಲಿಯೊಳಗಿಹ ಮತ್ಸ್ಯ

ಕೂರ್ಮನು ಕೋಲರೂಪನು ತ್ವಕ್ರಸನದೊಳಗೆ ಇಪ್ಪ ನರಸಿಂಹ

ಬಾಲವಟು ವಾಮನನು ನಾಸಿಕ ನಾಳದೊಳು ವದನದಲಿ ಭಾರ್ಗವ

ವಾಲಿಭಂಜನ ಹಸ್ತದೊಳು ಪಾದ ಶ್ರೀ ಕೃಷ್ಣ//34//


ಜಿನ ವಿಮೋಹಕ ಬುದ್ಧ ಪಾಯುಗ ದನುಜ ಭಂಜನ ಕಲ್ಕಿ ಮೇಡ್ರದಿ

ಇನಿತು ದಶ ರೂಪಗಳ ದಶ ಕರಣಂಗಳಲಿ ತಿಳಿದು

ಅನುಭವಿಪ ವಿಷಯಂಗಳು ಕೃಷ್ಣಾರ್ಪಣವೆನಲು ಕೈಕೊಂಬ

ವೃಜಿನ ಅರ್ದನ ವರ ಜಗನ್ನಾಥ ವಿಠಲ ವಿಶ್ವ ವ್ಯಾಪಕನು//35//


//ಇತಿ ಶ್ರೀ ಪಂಚಮಹಾಯಜ್ಞ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು

No comments:

Post a Comment