Wednesday, January 9, 2013

ಶ್ರೀ ಹರಿಕಥಾಮೃತಸಾರ - 9

//ಶ್ರೀ ಗುರುಭ್ಯೋ ನಮಃ//
 
//ಪರಮ ಗುರುಭ್ಯೋ ನಮಃ//
 
//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//
 
ಶ್ರೀ ಜಗನ್ನಾಥದಾಸ ವಿರಚಿತ
 
ಶ್ರೀ ಹರಿಕಥಾಮೃತಸಾರ
 
//ಶ್ರೀ ವರ್ಣಪ್ರಕ್ರಿಯ ಸಂಧಿ//
 
ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/
ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//
 
ಹರಿಯೆ ಪಂಚಾಶದ್ವರ್ಣ ಸುಸ್ವರವು ಉದಾತ್ತಾನುದಾತ್ತ ಪ್ರಚಯ
ಸ್ವರಿತ ಸಂಧಿ ವಿಸರ್ಗ ಬಿಂದುಗಳೊಳಗೆ ತದ್ವಾಚ್ಯ ಇರುವ
ತನ್ನಾಮ ರೂಪಗಳರಿತು ಉಪಾಸನೆಗೈವರು ಇಳೆಯೊಳು
ಸುರರೆ ಸರಿ ನರರಲ್ಲ ಅವರು ಆಡುವುದೇ ವೇದಾರ್ಥ//1//
 
ಈಶನಲಿ ವಿಜ್ಞಾನ ಭಗವದ್ದಾಸರಲಿ ಸದ್ಭಕ್ತಿ ವಿಷಯ ನಿರಾಶೆ
ಮಿಥ್ಯಾ ವಾದದಲಿ ಪ್ರದ್ವೇಷ ನಿತ್ಯದಲಿ ಈ ಸಮಸ್ತ ಪ್ರಾಣಿಗಳಲಿ
ರಮೇಶನು ಇಹನೆಂದು ಅರಿದು ಅವರ ಅಭಿಲಾಷೆಗಳ ಪೂರೈಸುವುದೆ
ಮಹಾಯಜ್ಞೆ ಹರಿಪೂಜೆ//2//
 
ತ್ರಿದಶ ಏಕಾತ್ಮಕನು ಎನಿಸಿ ಭೂ ಉದಕ ಶಿಖಿಯೊಳು ಹತ್ತು ಕರಣದಿ
ಅಧಿಪರು ಎನಿಸುವ ಮುಖ್ಯ ಪ್ರಾಣ ಆದಿತ್ಯರೊಳು ನೆಲೆಸಿ
ವಿದಿತನಾಗಿದ್ದು ಅನವರತ ನಿರವಧಿಕ ಮಹಿಮನು
ಸಕಲ ವಿಷಯವ ನಿಧನ ನಾಮಕ ಸಂಕರುಷಣ ಅಹ್ವಯನು ಸ್ವೀಕರಿಪ//3//
 
ದೈಹಿಕ ದೈಶಿಕ ಕಾಲಿಕತ್ರಯ ಗಹನ ಕರ್ಮಗಳುಂಟು
ಇದರೊಳು ವಿಹಿತ ಕರ್ಮಗಳರಿತು ನಿಷ್ಕಾಮಕನು ನೀನಾಗಿ
ಬೃಹತಿ ನಾಮಕ ಭಾರತೀಶನ ಮಹಿತರೂಪವ ನೆನೆದು ಮನದಲಿ
ಅಹರ್ ಅಹರ್ ಭಗವಂತಗರ್ಪಿಸು ಪರಮ ಭಕುತಿಯಲಿ//4//
 
ಮೂರುವಿಧ ಕರ್ಮಗಳ ಒಳಗೆ ಕಂಸಾರಿ ಭಾರ್ಗವ ಹಯವದನ
ಸಂಪ್ರೇರಕನು ತಾನಾಗಿ ನವರೂಪಂಗಳನು ಧರಿಸಿ
ಸೂರಿ ಮಾನವ ದಾನವರೊಳು ವಿಕಾರ ಶೂನ್ಯನು ಮಾಡಿ ಮಾಡಿಸಿ
ಸಾರಭೋಕ್ತನು ಸ್ವೀಕರಿಸಿ ಕೊಡುತ ಇಪ್ಪ ಜೀವರಿಗೆ//5//
 
ಅನಳ ಪಕ್ವವ ಗೈಸಿದ ಅನ್ನವ ಅನಳನೊಳು ಹೋಮಿಸುವ ತೆರದಂತೆ
ಅನಿಮಿಶೇಷನು ಮಾಡಿ ಮಾಡಿಸಿದಖಿಳ ಕರ್ಮಗಳ ಮನವಚನ ಕಾಯದಲಿ ತಿಳಿದು
ಅನುದಿನದಿ ಕೊಡು ಶಂಕಿಸದೆ ವೃಜಿನ ಅರ್ದನ
ಸದಾ ಕೈಕೊಂಡು ಸಂತೈಸುವನು ತನ್ನವರ//6//
 
ಕುದುರೆ ಬಾಲದ ಕೊನೆಯ ಕೂದಲು ತುದಿ ವಿಭಾಗವ ಮಾಡಿ ಶತವಿಧವು
ಅದರೊಳೊಂದನು ನೂರು ಭಾಗವ ಮಾಡಲು ಎಂತಿಹುದೋ
ವಿಧಿ ಭವಾದಿ ಸಮಸ್ತ ದಿವಿಜರ ಮೊದಲು ಮಾಡಿ
ತೃಣಾಂತ ಜೀವರೊಳಧಿಕ ನ್ಯೂನತೆಯಿಲ್ಲವು ಎಂದಿಗೂ ಜೀವ ಪರಮಾಣು//7//
 
ಜೀವನ ಅಂಗುಷ್ಠ ಆಗ್ರಾ ಮೂರುತಿ ಜೀವನ ಅಂಗುಟ ಮಾತ್ರ ಮೂರುತಿ
ಜೀವನ ಪ್ರಾದೇಶ ಜೀವಾಕಾರ ಮೂರ್ತಿಗಳು
ಎವಮಾದಿ ಅನಂತ ರೂಪದಿ ಯಾವತ್ ಅವಯವಗಳೊಳು ವ್ಯಾಪಿಸಿ ಕಾವ
ಕರುಣಾಳುಗಳ ದೇವನು ಈ ಜಗತ್ರಯವ//8//
 
ಬಿಂಬ ಜೀವ ಅಂಗುಷ್ಠ ಮಾತ್ರದಿ ಇಂಬುಗೊಂಡಿಹ ಸರ್ವರೊಳು ಸೂಕ್ಷ್ಮ ಅಂಬರದಿ
ಹೃತ್ಕಮಲ ಮಧ್ಯ ನಿವಾಸಿಯೆಂದೆನಿಸಿ
ಎಂಬರು ಈತಗೆ ಕೋವಿದರು ವಿಶ್ವಂಭರಾತ್ಮಕ ಪ್ರಾಜ್ಞ
ಭಟಕ ಕುಟುಂಬಿ ಸಂತೈಸುವನು ಈ ಪರಿ ಬಲ್ಲ ಭಜಕರನು//9//
 
ಪುರುಷನಾಮಕ ಸರ್ವ ಜೀವರೊಳಿರುವ ದೇಹ ಆಕಾರ ರೂಪದಿ
ಕರುಣ ನಿಯಾಮಕ ಹೃಷೀಕಪನು ಇಂದ್ರಿಯಂಗಳಲಿ
ತುರಿಯ ನಾಮಕ ವಿಶ್ವ ತಾ ಹನ್ನೆರಡು ಬೆರಳುಳಿದು ಉತ್ತಮಾಂಗದಿ
ಎರಡಧಿಕ ಎಪ್ಪತ್ತು ಸಾವರಿಯಾ ನಾಡಿಯೊಳಗಿಪ್ಪ//10//
 
ವ್ಯಾಪಕನು ತಾನಾಗಿ ಜೀವ ಸ್ವರೂಪ ದೇಹದ ಒಳಹೊರಗೆ ನಿರ್ಲೇಪನು ಆಗಿಹ
ಜೀವಕೃತ ಕರ್ಮಗಳನು ಆಚರಿಸಿ
ಶ್ರೀ ಪಯೋಜಭವ ಈರರಿಂದ ಪ್ರದೀಪವರ್ಣ ಸ್ವಮೂರ್ತಿ ಮಧ್ಯಗ ತಾ ಪೊಳೆವ
ವಿಶ್ವಾದಿ ರೂಪದಿ ಸೇವೆ ಕೈಕೊಳುತ//11//
 
ಗರುಡ ಶೇಷ ಭವಾದಿ ನಾಮವ ಧರಿಸಿ ಪವನ
ಸ್ವರೂಪ ದೇಹದಿ ಕರಣ ನಿಯಾಮಕನು ತಾನಾಗಿಪ್ಪ ಹರಿಯಂತೆ
ಸರಸಿಜಾಸನ ವಾಣಿ ಭಾರತಿ ಭರತನಿಂದ ಒಡಗೂಡಿ
ಲಿಂಗದಿ ಇರುತಿಹನು ಮಿಕ್ಕ ಆದಿತೇಯರಿಗೆ ಇಲ್ಲವು ಆಸ್ಥಾನ//12//
 
ಜೀವನಕೆ ತುಷದಂತೆ ಲಿಂಗವು ಸಾವಕಾಶದಿ ಪೊಂದಿ ಸುತ್ತಲು
ಪ್ರಾವರಣ ರೂಪದಲಿ ಇಪ್ಪುದು ಭಗವದಿಚ್ಚೆಯಲಿ
ಕೇವಲ ಜಡ ಪ್ರಕೃತಿಯಿದಕೆ ಅಧಿದೇವತೆಯು ಮಹಾಲಕುಮಿಯೆನಿಪಳು
ಆ ವಿರಜೆಯ ಸ್ನಾನ ಪರಿಯಂತರದಿ ಹತ್ತಿಹುದು//13//
 
ಆರಧಿಕ ದಶಕಳೆಗಳು ಉಳ್ಳ ಶರೀರವು ಅನಿರುದ್ಧಗಳ ಮಧ್ಯದಿ ಸೇರಿ ಇಪ್ಪದು
ಜೀವ ಪರಮಾಚ್ಚಾದಿಕ ದ್ವಯವು
ಬಾರದಂದದಿ ದಾನವರನು ಅತಿ ದೂರಗೈಸುತ ಶ್ರೀಜನಾರ್ಧನ
ಮೂರು ಗುಣದೊಳಗಿಪ್ಪನು ಎಂದಿಗು ತ್ರಿವೃತುಯೆಂದೆನಿಸಿ//14//
 
ರುದ್ರ ಮೊದಲಾದ ಅಮರರಿಗೆ ಅನಿರುದ್ಧ ದೇಹವೆ ಮನೆಯೆನಿಸುವುದು
ಇದ್ದು ಕೆಲಸವ ಮಾಡರು ಅಲ್ಲಿಂದ ಇತ್ತ ಸ್ಥೂಲದಲಿ ಕ್ರುದ್ಧ ಅಖಿಲ ದಿವಿಜರು
ಪರಸ್ಪರ ಸ್ಪರ್ಧೆಯಿಂದಲಿ ದ್ವಂದ್ವ ಕರ್ಮ ಸಮೃದ್ಧಿಗಳನು
ಆಚರಿಸುವರು ಪ್ರಾಣೇಶನ ಆಜ್ಞೆಯಲಿ//15//
 
ಮಹಿಯೊಳಗೆ ಸುಕ್ಷೇತ್ರ ತೀರ್ಥವು ತುಹಿನ ವರುಷ ವಸಂತಕಾಲದಿ
ದಹಿಕ ದೈಶಿಕ ಕಾಲಿಕ ತ್ರಯ ಧರ್ಮಕರ್ಮಗಳ
ದ್ರುಹಿಣ ಮೊದಲಾದ ಅಮರರು ಎಲ್ಲರ ವಹಿಸಿಸ್ ಗುಣಗಳನು ಅನುಸರಿಸಿ
ಸನ್ನಿಹಿತರು ಆಗಿದ್ದು ಎಲ್ಲರೊಳು ಮಾಡುವರು ವ್ಯಾಪಾರ//16//
 
ಕೇಶ ಸಾಸಿರ ವಿಧ ವಿಭಾಗವಗೈಸಲು ಎನತು ಅನಿತಿಹ ಸುಷುಮ್ನವು
ಆ ಶಿರಾಂತದಿ ವ್ಯಾಪಿಸಿಹುದು ಈ ದೇಹಮಧ್ಯದಲಿ
ಆ ಸುಷುಮ್ನಕೆ ವಜ್ರಕಾರ್ಯ ಪ್ರಕಾಶಿನೀ ವೈದ್ಯುತಿಗಳಿಹವು
ಪ್ರದೇಶದಲಿ ಪಶ್ಚಿಮಕೆ ಉತ್ತರ ಪೂರ್ವ ದಕ್ಷಿಣಕೆ//17//
 
ಆ ನಳಿನ ಭವ ನಾಡಿಯೊಳಗೆ ತ್ರಿಕೋಣ ಚಕ್ರವು ಇಪ್ಪುದು
ಅಲ್ಲಿ ಕೃಶಾನು ಮಂಡಲ ಮಧ್ಯಗನು ಸಂಕರುಷಣ ಆಹ್ವಯನು
ಹೀನ ಪಾಪಾತ್ಮಕ ಪುರುಷನ ದಹಾನ ಗೈಸುತ ದಿನದಿನದಿ
ವಿಜ್ಞಾನಮಯ ಶ್ರೀವಾಸುದೇವನ ಐದಿಸುವ ಕರುಣಿ//18//
 
ಮಧ್ಯ ನಾಡಿಯ ಮಧ್ಯದಲಿ ಹೃತ್ಪದ್ಮ ಮೂಲದಿ ಮೂಲಪತಿ ಪದಪದ್ಮ
ಮೂಲದಲಿ ಇಪ್ಪ ಪವನನ ಪಾದಮೂಲದಲಿ ಹೊಂದಿಕೊಂಡಿಹ ಜೀವ
ಲಿಂಗಾನಿರುದ್ಧ ದೇಹ ವಿಶಿಷ್ಟನಾಗಿ
ಕಪರ್ದಿ ಮೊದಲಾದ ಅಮರರು ಎಲ್ಲರು ಕಾದುಕೊಂಡಿಹರು//19//
 
ನಾಳ ಮಧ್ಯದಲಿ ಇಪ್ಪ ಹೃತ್ಕೀಲಾಲಜದೊಳಿಪ್ಪ ಅಷ್ಟದಳದಿ
ಕುಲಾಲ ಚಕ್ರದ ತೆರದಿ ಚರಿಸುತ ಹಂಸನಾಮಕನು
ಕಾಲ ಕಾಲಗಳಲ್ಲಿ ಯೆಣ್ದೆಸೆ ಪಾಲಕರ ಕೈಸೇವೆಗೊಳುತ ಕೃಪಾಳು
ಅವರಭಿಲಾಷೆಗಳ ಪೂರೈಸಿ ಕೊಡುತಿಪ್ಪ//20//
 
ವಾಸವಾನುಜ ರೇಣುಕಾತ್ಮಜ ದಾಶರಥಿ ವೃಜಿನ ಅರ್ದನ ಅಮಲ ಜಲಾಶಯ ಆಲಯ
ಹಯವದನ ಶ್ರೀಕಪಿಲ ನರಸಿಂಹ
ಈ ಸುರೂಪದಿ ಅವರವರ ಸಂತೋಷ ಬಡಿಸುತ ನಿತ್ಯ ಸುಖಮಯ
ವಾಸವಾಗಿಹ ಹೃತ್ಕಮಲದೊಳು ಬಿಂಬನು ಎಂದೆನಿಸಿ//21//
 
ಸುರಪನ ಆಲಯಕೆ ಐದಿದರೆ ಮನವು ಎರಗುವುದು ಸತ್ಪುಣ್ಯ ಮಾರ್ಗದಿ
ಬರಲು ವಹ್ನಿಯ ಮನೆಗೆ ನಿದ್ರೆ ಆಲಸ್ಯ ಹಸಿ ತೃಷೆಯು
ತರಣಿ ತನಯ ನಿಕೇತನದಿ ಸಂಭರಿತ ಕೋಪಾಟೋಪ ತೋರುವುದು
ಅರವಿದೂರನು ನಿರ್ಋತಿಯಲಿರೆ ಪಾಪಗಳ ಮಾಳ್ಪ//22//
 
ವರುಣನಲ್ಲಿ ವಿನೋದ ಹಾಸ್ಯವು ಮರುತನೊಳು ಗಮನಾಗಮನ
ಹಿಮಕರ ಧನಾಧಿಪರಲ್ಲಿ ಧರ್ಮದ ಜನಿಸುವುದು
ಹರನ ಮಂದಿರದಲ್ಲಿ ಗೋ ಧನ ಧರಣಿ ಕನ್ಯಾದಾನಗಳು
ಒಂದರಘಳಿಗೆ ತಡೆಯದಲೇ ಕೊಡುತಿಹ ಚಿತ್ತ ಪುಟ್ಟುವುದು//23//
 
ಹೃದಯದೊಳಗೆ ವಿರಕ್ತಿ ಕೇಸರಕೆ ಒದಗೆ ಸ್ವಪ್ನ ಸುಷುಪ್ತಿ ಲಿಂಗದಿ
ಮಧುಹ ಕರ್ಣಿಕೆಯಲ್ಲಿ ಬಾರೆ ಜಾಗ್ರತೆಯು ಪುಟ್ಟುವುದು
ಸುದರುಶನ ಮೊದಲಾದ ಅಷ್ಟ ಆಯುಧವ ಪಿಡಿದು
ದಿಶಾಧಿಪತಿಗಳ ಸದನದಲಿ ಸಂಚರಿಸುತ ಈಪರಿ ಬುದ್ಧಿಗಳ ಕೊಡುವ//24//
 
ಸೂತ್ರನಾಮಕ ಪ್ರಾಣಪತಿ ಗಾಯತ್ರಿ ಸಂಪ್ರತಿಪಾದ್ಯನು ಆಗಿ ಈ ಗಾತ್ರದೊಳು ನೆಲೆಸಿರಲು
ತಿಳಿಯದೆ ಕಂಡ ಕಂಡಲ್ಲಿ ಧಾತ್ರಿಯೊಳು ಸಂಚರಿಸಿ
ಪುತ್ರ ಕಳತ್ರ ಸಹಿತ ಅನುದಿನದಿ
ತೀರ್ಥಕ್ಷೇತ್ರ ಯಾತ್ರೆಯ ಮಾಡಿದೆವು ಎಂದೆನುತ ಹಿಗ್ಗುವರು//25//
 
ನಾರಸಿಂಹ ಸ್ವರೂಪದೊಳಗೆ ಶರೀರ ನಾಮದಿ ಕರೆಸುವನು
ಹದಿನಾರು ಕಳೆಗಳು ಉಳ್ಳ ಲಿಂಗದಿ ಪುರುಷ ನಾಮಕನು
ತೋರುವನು ಅನಿರುದ್ಧದೊಳು ಶಾಂತೀರಮಣ ಅನಿರುದ್ಧ ರೂಪದಿ
ಪ್ರೇರಿಸುವ ಪ್ರದ್ಯುಮ್ನ ಸ್ಥೂಲ ಕಳೇವರದೊಳಿದ್ದು//26//
 
ಮೊದಲು ತ್ವಕ್ಚರ್ಮಗಳು ಮಾಂಸವು ರುಧಿರ ಮೇದೋ ಮಜ್ಜನವು ಅಸ್ಥಿಗಳು
ಇದರೊಳಗೆ ಏಕ ಊನ ಪಂಚಾಶತ್ ಮರುದ್ಗಣವು
ನಿಧನ ಹಿಂಕಾರಾದಿ ಸಾಮಗ ಅದರ ನಾಮದಿ ಕರೆಸುತ
ಒಂಭತ್ತಧಿಕ ನಾಲ್ವತ್ತು ಎನಿಪ ರೂಪದಿ ಧಾತುಗಳೊಳಿಪ್ಪ//27//
 
ಸಪ್ತಧಾತುಗಳ ಒಳ ಹೊರಗೆ ಸಂತಪ್ತ ಲೋಹಗತ ಅಗ್ನಿಯಂದದಿ
ಸಪ್ತ ಸಾಮಗನು ಇಪ್ಪ ಅನ್ನಮಯಾದಿ ಕೋಶದೊಳು
ಲಿಪ್ತನಾಗದೆ ತತ್ತತ್ತಾಹ್ವಯ ಕ್ಲುಪ್ತಭೋಗವ ಕೊಡುತ
ಸ್ವಪ್ನ ಸುಷುಪ್ತಿ ಜಾಗ್ರತೆಯೀವ ತೈಜಸ ಪ್ರಾಜ್ಞ ವಿಶ್ವಾಖ್ಯ//28//
 
ತೀವಿಕೊಂಡಿಹವು ಅಲ್ಲಿ ಮಜ್ಜ ಕಳೇವರದಿ ಅಂಗುಳಿಯ ಪರ್ವದ ಟಾವಿನಲಿ
ಮುನ್ನೂರು ಅರವತ್ತು ಎನಿಪ ತ್ರಿಸ್ಥಳದಿ
ಸಾವಿರದ ಎಂಭತ್ತು ರೂಪವ ಕೋವಿದರು ಪೇಳುವರು ದೇಹದಿ
ದೇವತೆಗಳ ಒಡಗೂಡಿ ಕ್ರೀಡಿಸುವನು ರಮಾರಮಣ//29//
 
ಕೀಟ ಪೇಶಸ್ಕಾರ ನೆನವಿಲಿ ಕೀಟ ಭಾವವ ತೊರೆದು ತದ್ವತ್
ಖೇಟ ರೂಪವನು ಐದಿಯಾಡುವ ತೆರದಿ
ಭಕುತಿಯಲಿ ಕೈಟಭಾರಿಯ ಧ್ಯಾನದಿಂದ ಭವಾಟವಿಯನು ಅತಿ ಶೀಘ್ರದಿಂದಲಿ ದಾಟಿ
ಸಾರೂಪ್ಯವನು ಐದುವರು ಅಲ್ಪ ಜೀವಿಗಳು//30//
 
ಈ ಪರೀ ದೇಹದೊಳು ಭಗವದ್ರೂಪಗಳ ಮರೆಯದಲೆ ಮನದಿ
ಪದೊಪದೇ ಭಕುತಿಯಲಿ ಸ್ಮರಿಸುತಲಿಪ್ಪ ಭಕುತರನಾ
ಗೋಪತಿ ಜಗನ್ನಾಥ ವಿಠಲ ಸಮೀಪಗನು ತಾನಾಗಿ
ಸಂತತ ಸಾಪರೋಕ್ಷಿಯ ಮಾಡಿ ಪೊರೆವನು ಎಲ್ಲ ಕಾಲದಲಿ//31//
 
//ಇತಿ ವರ್ಣಪ್ರಕ್ರಿಯ ಸಂಧಿ ಸಂಪೂರ್ಣಂ//
ಶ್ರೀ ಕೃಷ್ಣಾರ್ಪಣಮಸ್ತು

No comments:

Post a Comment