Tuesday, January 15, 2013

ಶ್ರೀ ಹರಿಕಥಾಮೃತಸಾರ - 11

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಶ್ರೀ ಸ್ಥಾವರಜಂಗಮ ಸಂಧಿ//


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಪಾದುಕೆಯ ಕಂಟಕಸಿಕ್ತ ಮೊದಲಾದವು ಅನುದಿನ ಬಾಧಿಸುವನೆ

ಏಕಾದಶ ಇಂದ್ರಿಯಗಳಲಿ ಬಿಡದೆ ಹೃಷೀಕಪನ ಮೂರ್ತಿ ಸಾದರದಿ ನೆನೆವವನು

ಏನಪರಾಧಗಳ ಮಾಡಿದರು ಸರಿಯೇ

ನಿರೋಧಗೈಸವು ಮೋಕ್ಷಮಾರ್ಗಕೆ ದುರಿತ ರಾಶಿಗಳು//1//


ಹಗಲು ನಂದಾದೀಪದಂದದಿ ನಿಗಮ ವೇದ್ಯನ ಪೂಜಿಸುತ

ಕೈ ಮುಗಿದು ನಾಲ್ಕರೊಳು ಒಂದು ಪುರುಷಾರ್ಥವನು ಬೇಡದಲೇ

ಜಗದುದರ ಕೊಟ್ಟುದನು ಭುಂಜಿಸು ಮಗ ಮಡದಿ ಪ್ರಾಣ ಇಂದ್ರಿಯ ಆತ್ಮಾದಿಗಳು

ಭಗವಧೀನವೆಂದು ಅಡಿಗಡಿಗೆ ನೆನೆವುತಿರು//2//


ಅಸ್ವತಂತ್ರನು ಜೀವ ಹರಿ ಸರ್ವ ಸ್ವತಂತ್ರನು ನಿತ್ಯ ಸುಖಮಯ

ನಿ:ಸ್ವ ಬದ್ಧ ಅಲ್ಪಜ್ಞ ಶಕ್ತ ಸದುಃಖ ನಿರ್ವಿಣ್ಣ

ಹ್ರಸ್ವ ದೇಹಿ ಸನಾಥಜೀವನು ವಿಶ್ವ ವ್ಯಾಪಕ ಕರ್ತೃ

ಬ್ರಹ್ಮ ಸರಸ್ವತಿ ಈಶಾದಿ ಅಮರನುತ ಹರಿಯೆಂದು ಕೊಂಡಾಡು//3//


ಮತ್ತೆ ವಿಶ್ವಾದಿ ಎಂಟು ರೂಪ ಒಂಭತ್ತರಿಂದಲಿ ಪೆಚ್ಚಿಸಲು

ಎಪ್ಪತ್ತೆರಡು ರೂಪಗಳು ಅಹವು ಒಂದೊಂದೆ ಸಾಹಸ್ರ

ಪೃಥ್ ಪೃಥಕು ನಾಡಿಗಳೊಳಗೆ ಸರ್ವೋತ್ತಮನ ತಿಳಿಯೆಂದು

ಭೀಷ್ಮನು ಬಿತ್ತರಿಸಿದನು ಧರ್ಮ ತನಯಗೆ ಶಾಂತಿ ಪರ್ವದಲಿ//4//


ಎಂಟು ಪ್ರಕೃತಿಗಳೊಳಗೆ ವಿಶ್ವಾದಿ ಎಂಟು ರೂಪದಲಿದ್ದು

ಭಕ್ತರ ಕಂಟಕವ ಪರಿಹರಿಸುತಲಿ ಪಾಲಿಸುವ ಪ್ರತಿದಿನದಿ

ನೆಂಟನಂದದಿ ಎಡಬಿಡದೆ ವೈಕುಂಠರಮಣನು

ತನ್ನವರ ನಿಷ್ಕಂಟಕ ಸುಮಾರ್ಗದಲಿ ನಡೆಸುವ ದುರ್ಜನರ ಬಡಿವ//5//


ಸ್ವರಮಣನು ಶಕ್ತಿ ಆದಿ ರೂಪದಿ ಮಾನಿಗಳೊಳಗೆ ನೆಲೆಸಿದ್ದು

ಅರವಿದೂರನು ಸ್ಥೂಲ ವಿಷಯಗಳ ಉಂಡುಣಿಪ ನಿತ್ಯ

ಅರಿಯದಲೆ ನಾನುಂಬೆನು ಎಂಬುವ ನಿರಯಗಳ ಉಂಬುವನು

ನಿಶ್ಚಯ ಮರಳಿ ಮರಳಿ ಭವಾಟವಿಯ ಸಂಚರಿಸಿ ಬಳಲುವನು//6//


ಸುರುಚಿರುಚಿರ ಸುಗಂಧ ಸುಚಿಯೆಂದು ಇರುತಿಹನು ಷಡ್ರಸಗಳೊಳು

ಹನ್ನೆರಡು ರೂಪದಲಿ ಇಪ್ಪ ಶ್ರೀ ಭೂ ದುರ್ಗೆಯರ ಸಹಿತ

ಸ್ವರಮಣನು ಎಪ್ಪತ್ತೆರಡು ಸಾವಿರ ಸಮೀರನ ರೂಪದೊಳಗಿದ್ದು

ಉರುಪರಾಕ್ರಮ ಕರ್ತೃ ಎನಿಸುವ ನಾಡಿಯೊಳಗಿದ್ದು//7//


ಸರ್ವತ್ರದಲಿ ನೆನೆವರನು ಅನ್ಯ ಕರ್ಮವ ಮಾಡಿದರು ಸರಿ

ಪುಣ್ಯ ಕರ್ಮಗಳು ಎನಿಸುವವು ಸಂದೇಹವಿನಿತಿಲ್ಲ

ನಿನ್ನ ಸ್ಮರಿಸದೆ ಸ್ನಾನ ಜಪ ಹೋಮ ಅನ್ನ ವಸ್ತ್ರ ಗಜ ಅಶ್ವ ಭೂ ಧನ ಧಾನ್ಯ

ಮೊದಲಾದ ಅಖಿಳ ಧರ್ಮವ ಮಾಡಿ ಫಲವೇನು//8//


ಇಷ್ಟ ಭೋಗ್ಯ ಪದಾರ್ಥದೊಳು ಶಿಪಿವಿಷ್ಟ ನಾಮದಿ ಸರ್ವ ಜೀವರ ತುಷ್ಟಿ ಬಡಿಸುವ

ದಿನದಿನದಿ ಸಂತುಷ್ಟ ತಾನಾಗಿ

ಕೋಷ್ಟದೊಳು ನೆಲೆಸಿದ್ದು ರಸಯಮಯ ಪುಷ್ಟಿಯೈದಿಸುತ ಇಂದ್ರಿಯಗಳೊಳು

ಪ್ರೇಷ್ಟನಾಗಿದ್ದು ಎಲ್ಲ ವಿಷಯಗಳ ಉಂಬ ತಿಳಿಸದಲೆ//9//


ಕಾರಣಾಹ್ವಯ ಜ್ಞಾನ ಕರ್ಮ ಪ್ರೇರಕನು ತಾನಾಗಿ ಕ್ರಿಯೆಗಳ ತೋರುವನು

ಕರ್ಮ ಇಂದ್ರಿಯ ಅಧಿಪರೊಳಗೆ ನೆಲೆಸಿದ್ದು

ಮೂರು ಗುಣಮಯ ದ್ರವ್ಯಗ ತದಾಕಾರ ತನ್ನಾಮದಲಿ ಕರೆಸುವ

ತೋರಿಕೊಳ್ಳದೆ ಜನರ ಮೋಹಿಪ ಮೋಹಕಲ್ಪಕನು//10//


ದ್ರವ್ಯನು ಎನಿಸುವ ಭೂತ ಮಾತ್ರದೊಳು ಅವ್ಯಯನು

ಕರ್ಮ ಇಂದ್ರಿಯಗಳೊಳು ಭವ್ಯ ಸತ್ಕ್ರಿಯನೆನಿಪ ಜ್ಞಾನ ಇಂದ್ರಿಯಗಳೊಳಗಿದ್ದು

ಸ್ತವ್ಯಕಾರಕನು ಎನಿಸಿ ಸುಖಮಯ ಸೇವ್ಯ ಸೇವಕನು ಎನಿಸಿ ಜಗದೊಳು

ಹವ್ಯವಾಹನನು ಅರಣಿಯೊಳಗೆ ಇಪ್ಪಂತೆ ಇರುತಿಪ್ಪ//11//


ಮನವೇ ಮೊದಲಾದ ಇಂದ್ರಿಯಗಳೊಳಗೆ ಅನಿಲದೇವನು ಶುಚಿಯೆನಿಸಿಕೊಂಡು

ಅನವರತ ನೆಲೆಸಿಪ್ಪ ಶುಚಿಷತ್ ಹೋತನೆಂದೆನಿಸಿ ತನುವಿನೊಳಗಿಪ್ಪನು

ಸದಾ ವಾಮನ ಹೃಷೀಕೇಶಾಖ್ಯ ರೂಪದಲಿ

ಅನುಭವಕೆ ತಂದೀವ ವಿಷಯಜ ಸುಖವ ಜೀವರಿಗೆ//12//


ಪ್ರೇರಕ ಪ್ರೇರ್ಯರೊಳು ಪ್ರೇರ್ಯ ಪ್ರೇರಕನು ತಾನಾಗಿ

ಹರಿ ನಿರ್ವೈರದಿಂದ ಪ್ರವರ್ತಿಸುವ ತನ್ನಾಮ ರೂಪದಲಿ

ತೋರಿಕೊಳ್ಳದೆ ಸರ್ವರೊಳು ಭಾಗೀರಥೀ ಜನಕನು

ಸಕಲ ವ್ಯಾಪಾರಗಳ ತಾ ಮಾಡಿ ಮಾಡಿಸಿ ನೋಡಿ ನಗುತಿಪ್ಪ//13//


ಹರಿಯೆ ಮುಖ್ಯ ನಿಯಾಮಕನು ಎಂದರಿದು ಪುಣ್ಯಾಪುಣ್ಯ ಹರುಷಾಹರುಷ

ಲಾಭಾಲಾಭ ಸುಖದುಃಖಾದಿ ದ್ವಂದ್ವಗಳ

ನಿರುತ ಅವರಂಘ್ರಿಗೆ ಸಮರ್ಪಿಸಿ ನರಕ ಭೂ ಸ್ವರ್ಗಾಪ ವರ್ಗದಿ

ಕರಣ ನಿಯಾಮಕನ ಸರ್ವತ್ರದಲಿ ನೆನೆವುತಿರು//14//


ಮಾಣವಕ ತತ್ಫಲಗಳ ಅನುಸಂಧಾನವಿಲ್ಲದೆ

ಕರ್ಮಗಳ ಸ್ವ ಇಚ್ಚಾನುಸಾರದಿ ಮಾಡಿ ಮೋದಿಸುವಂತೆ

ಪ್ರತಿದಿನದಿ ಜ್ಞಾನ ಪೂರ್ವಕ ವಿಧಿ ನಿಷೇಧಗಳು ಏನು ನೋಡದೆ ಮಾಡು

ಕರ್ಮ ಪ್ರಧಾನ ಪುರುಷೇಶನಲಿ ಭಕುತಿಯ ಮಾಡು ಕೊಂಡಾಡು//15//


ಹಾನಿ ವೃದ್ಧಿ ಜಯಾಪಜಯಗಳು ಏನು ಕೊಟ್ಟುದ ಭುಂಜಿಸುತ

ಲಕ್ಷ್ಮೀ ನಿವಾಸನ ಕರುಣವನೆ ಸಂಪಾದಿಸು ಅನುದಿನದಿ

ಜ್ಞಾನ ಸುಖಮಯ ತನ್ನವರ ಪರಮ ಅನುರಾಗದಿ ಸಂತೈಪ

ದೇಹಾನುಬಂಧಿಗಳಂತೆ ಒಳಹೊರಗಿದ್ದು ಕರುಣಾಳು//16//


ಆ ಪರಮ ಸಕಲ ಇಂದ್ರಿಯಗಳೊಳು ವ್ಯಾಪಕನು ತಾನಾಗಿ

ವಿಷಯವ ತಾ ಪರಿಗ್ರಹಿಸುವನು ತಿಳಿಸದೆ ಸರ್ವಜೀವರೊಳು

ಪಾಪ ರಹಿತ ಪುರಾಣ ಪುರುಷ ಸಮೀಪದಲಿ ನೆಲೆಸಿದ್ದು

ನಾನಾ ರೂಪಕ ಧಾರಕ ತೋರಿಕೊಳ್ಳದೆ ಕರ್ಮಗಳ ಮಾಳ್ಪ//17//


ಖೇಚರರು ಭೂಚರರು ವಾರಿ ನಿಶಾಚರರೊಳಿದ್ದು ಅವರ ಕರ್ಮಗಳ

ಆಚರಿಸುವನು ಘನ ಮಹಿಮ ಪರಮ ಅಲ್ಪನೋಪಾದಿ

ಗೋಚರಿಸು ಬಹು ಪ್ರಕಾರ ಆಲೋಚನೆಯ ಮಾಡಿದರು ಮನಸಿಗೆ

ಕೀಚಕಾರಿ ಪ್ರೀಯ ಕವಿಜನಗೇಯ ಮಹರಾಯ//18//


ಒಂದೇ ಗೋತ್ರ ಪ್ರವರ ಸಂಧ್ಯಾವಂದನೆಗಳು ಮಾಡಿ

ಪ್ರಾಂತಕೆ ತಂದೆ ತನಯರು ಬೇರೆ ತಮ್ಮಯ ಪೆಸರುಗೊಂಬoತೆ

ಒಂದೇ ದೇಹದೊಳಿದ್ದು ನಿಂದ್ಯಾನಿಂದ್ಯ ಕರ್ಮವ ಮಾಡಿ ಮಾಡಿಸಿ

ಇಂದಿರೇಶನು ಸರ್ವಜೀವರೊಳು ಈಶನೆನಿಸುವನು//19//


ಕಿಟ್ಟಗಟ್ಟಿದ ಲೋಹ ಪಾವಕ ಸುತ್ತು ವಿಂಗಡ ಮಾಡುವಂತೆ

ಘರಟ್ಟ ವ್ರೀಹಿಗಳು ಇಪ್ಪ ತಂಡುಲ ಕಡೆಗೆ ತೆಗೆವಂತೆ

ವಿಠಲಾ ಎಂದೊಮ್ಮೆ ಮೈಮರೆದು ಅಟ್ಟಹಾಸದಿ ಕರೆಯೆ

ದುರಿತಗಳು ಅಟ್ಟುಳಿಯ ಬಿಡಿಸೆವನ ತನ್ನೊಳಗಿಟ್ಟು ಸಲಹುವನು//20//


ಜಲಧಿಯೊಳಗೆ ಸ್ವೇಚ್ಚಾನುಸಾರದಿ ಜಲಚರ ಪ್ರಾಣಿಗಳು

ತತ್ತತ್ ಸ್ಥಳಗಳಲಿ ಸಂತೋಷಪಡುತಲಿ ಸಂಚರಿಸುವಂತೆ

ನಲ್ಲಿನ ನಾಭನೊಳು ಅಬ್ಜ ಭವ ಮುಪ್ಪೊಳಲ ಉರಿಗಮೈಗಣ್ಣ ಮೊದಲಾದ

ಹಲವು ಜೀವರಗಣವು ವರಿಸುತಿಹುದು ನಿತ್ಯದಲಿ//21//


ವಾಸುದೇವನು ಒಳಹೊರಗೆ ಅವಕಾಶದನು ತಾನಾಗಿ

ಬಿಂಬ ಪ್ರಕಾಶಿಸುವ ತದ್ರೂಪ ತನ್ನಾಮದಲಿ ಸರ್ವತ್ರ

ಈ ಸಮನ್ವಯವೆಂದೆನಿಪ ಸದುಪಾಸನವಗೈವವನು

ಮೋಕ್ಷ ಅನ್ವೇಷಿಗಳೊಳುತ್ತಮನು ಜೀವನ್ಮುಕ್ತನ ಅವನಿಯೊಳು//22//


ಭೋಗ್ಯ ವಸ್ತುಗಳೊಳಗೆ ಯೋಗ್ಯಾಯೋಗ್ಯ ರಸಗಳನರಿತು

ಯೋಗ್ಯಾಯೋಗ್ಯರಲಿ ನೆಲೆಸಿಪ್ಪ ಹರಿಗೆ ಸಮರ್ಪಿಸು ಅನುದಿನದಿ

ಭಾಗ್ಯ ಬಡತನ ಬರಲು ಹಿಗ್ಗದೆ ಕುಗ್ಗಿ ಸೊರಗದೆ

ಸದ್ಭಕ್ತಿ ವೈರಾಗ್ಯಗಳನೆ ಮಾಡು ನೀ ನಿರ್ಭಾಗ್ಯನೆನಿಸದಲೆ//23//


ಸ್ಥಳ ಜಲಾದ್ರಿಗಳಲ್ಲಿ ಜನಿಸುವ ಫಲ ಸುಪುಷ್ಪಜ ಗಂಧರಸ

ಶ್ರೀ ತುಳಸಿ ಮೊದಲಾದ ಅಖಿಳ ಪೂಜಾ ಸಾಧನ ಪದಾರ್ಥ

ಹಲವು ಬಗೆಯಿಂದ ಅರ್ಪಿಸುತ ಬಾಂಬೊಳೆಯ ಜನಕಗೆ

ನಿತ್ಯಾನಿತ್ಯದಿ ತಿಳಿವುದಿದು ವ್ಯತಿರೇಕ ಪೂಜೆಗಳೆಂದು ಕೋವಿದರು//24//


ಶ್ರೀಕರನ ಸರ್ವತ್ರದಲಿ ಅವಲೋಕಿಸುತ ಗುಣ ರೂಪ ಕ್ರಿಯ

ವ್ಯತಿರೇಕ ತಿಳಿಯದಲೆ ಅನ್ವಯಿಸು ಬಿಂಬನಲಿ ಮರೆಯದಲೆ

ಸ್ವೀಕರಿಸುವನು ಕರುಣದಿಂದ ನಿರಾಕರಿಸದೆ ಕೃಪಾಳು

ಭಕ್ತರ ಶೋಕಗಳ ಪರಿಹರಿಸಿ ಸುಖವಿತ್ತು ಅನವರತ ಪೊರೆವ//25//


ಇನಿತು ವ್ಯತಿರೇಕ ಅನ್ವಯಗಳು ಎಂದೆನಿಪ ಪೂಜಾ ವಿಧಿಗಳನೆ ತಿಳಿದು

ಅನಿಮಿಷ ಈಶನ ತೃಪ್ತಿ ಪಡಿಸುತಲಿರು ನಿರಂತರದಿ

ಘನ ಮಹಿಮ ಕೈಕೊಂಡು ಸ್ಥಿತಿ ಮೃತಿ ಜನುಮಗಳ ಪರಿಹರಿಸಿ

ಸೇವಕ ಜನರೊಳಿಟ್ಟು ಆನಂದ ಪಡಿಸುವ ಭಕ್ತವತ್ಸಲನು//26//


ಜಲಜನಾಭನಿಗೆ ಎರಡು ಪ್ರತಿಮೆಗಳು ಇಳೆಯೊಳಗೆ ಜಡ ಚೇತನಾತ್ಮಕ

ಚಲದೊಳು ಇರ್ಬಗೆ ಸ್ತ್ರೀ ಪುರುಷ ಭೇದದಲಿ ಜಡದೊಳಗೆ ತಿಳಿವುದು ಆಹಿತ ಪ್ರತಿಮೆ

ಸಹಜ ಆಚಲಗಳು ಎಂದು ಇರ್ಬಗೆ ಪ್ರತೀಕದಿ

ಲಲಿತ ಪಂಚತ್ರಯ ಸುಗೋಳಕವ ಅರಿತು ಭಜಿಸುತಿರು//27//


ವಾರಿಜಾಸನ ವಾಯುವೀಂದ್ರ ಉಮಾರಮಣ ನಾಕೇಶ ಸಮರ ಅಹಂಕಾರಿಕ

ಪ್ರಾಣಾದಿಗಳು ಪುರುಷರ ಕಳೇವರದಿ

ತೋರಿಕೊಳದೆ ಅನಿರುದ್ಧ ದೋಷ ವಿದೂರ ನಾರಾಯಣನ ರೂಪ

ಶರೀರಮಾನಿಗಳು ಆಗಿ ಭಜಿಸುತ ಸುಖವ ಕೊಡುತಿಹರು//28//


ಸಿರಿ ಸರಸ್ವತಿ ಭಾರತೀ ಸೌಪರಣೀ ವಾರುಣಿ ಪಾರ್ವತೀ ಮುಖರು ಇರುತಿಹರು

ಸ್ತ್ರೀಯರೊಳಗೆ ಅಬಿಮಾನಿಗಳು ತಾವೆನಿಸಿ

ಅರುಣ ವರ್ಣ ನಿಭಾಂಗ ಶ್ರೀ ಸಂಕರುಷಣ ಪ್ರದ್ಯುಮ್ನ ರೂಪಗಳ

ಇರುಳು ಹಗಲು ಉಪಾಸನವ ಗೈವುತಲೆ ಮೋದಿಪರು//29//


ಕೃತ ಪ್ರತೀಕದಿ ಟಂಕಿ ಭಾರ್ಗವ ಹುತವಹ ಅನಿಲ ಮುಖ್ಯ ದಿವಿಜರು

ತುತಿಸಿಕೊಳುತ ಅಭಿಮಾನಿಗಳು ತಾವಾಗಿ ನೆಲೆಸಿದ್ದು

ಪ್ರತಿ ದಿವಸ ಶ್ರೀ ತುಳಸಿ ಗಂಧಾಕ್ಷತೆ ಕುಸುಮ ಫಲ ದೀಪ ಪಂಚಾಮೃತದಿ

ಪೂಜಿಪ ಭಕುತರಿಗೆ ಕೊದುತಿಹನು ಪುರುಷಾರ್ಥ//30//


ನಗಗಳ ಅಭಿಮಾನಿಗಳು ಎನಿಪ ಸುರರುಗಳು

ಸಹಜ ಅಚಲಗಳಿಗೆ ಮಾಣಿಗಳು ಎನಿಸಿ ಶ್ರೀ ವಾಸುದೇವನ ಪೂಜಿಸುತಲಿ ಇಹರು

ಸ್ವಾಗತ ಭೇದ ವಿವರ್ಜಿತನ ನಾಲ್ಬಗೆ ಪ್ರತೀಕದಿ ತಿಳಿದು ಪೂಜಿಸೆ

ವಿಗತ ಸಂಸಾರಾಬ್ಧಿ ದಾಟಿಸಿ ಮುಕ್ತರನು ಮಾಳ್ಪ//31//


ಆವ ಕ್ಷೇತ್ರಕೆ ಪೋದರೇನು? ಇನ್ನಾವ ತೀರ್ಥದಿ ಮುಳುಗಲೇನು?

ಇನ್ನಾವ ಜಪ ತಪ ಹೋಮ ದಾನವ ಮಾಡಿ ಫಲವೇನು?

ಶ್ರೀವರ ಜಗನ್ನಾಥ ವಿಠಲ ಈ ವಿಧದಿ ಜಂಗಮ ಸ್ಥಾವರ ಜೀವರೊಳು

ಪರಿಪೂರ್ಣನೆಂದು ಅರಿಯದಿಹ ಮಾನವನು//32//


//ಇತಿ ಶ್ರೀ ಸ್ಥಾವರಜಂಗಮ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು

No comments:

Post a Comment