Wednesday, January 9, 2013

ಶ್ರೀ ಹರಿಕಥಾಮೃತಸಾರ - 8

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಮಾತೃಕಾ ಸಂಧಿ//

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಪಾದಮಾನಿ ಜಯಂತನ ಒಳಗೆ ಸುಮೇಧ ನಾಯಕನು ಇಪ್ಪ

ದಕ್ಷಿಣ ಪಾದದ ಅಂಗುಟದಲ್ಲಿ ಪವನನು ಭಾರಭೃದ್ರೂಪ

ಕಾದುಕೊಂಡಿಹ ಟಂಕಿತರ ಮೊದಲಾದ ನಾಮದಿ

ಸಂಧಿಗಳಲಿ ಈರೈದು ರೂಪದಲಿ ಇಪ್ಪ ಸಂತತ ನಡೆದು ನಡೆಸುತಲಿ//1//


ಕಪಿಲ ಚಾರ್ವಾಂಗ ಆದಿ ರೂಪದಿ ವಪುಗಳೊಳು ಹಸ್ತಗಳ ಸಂಧಿಯೊಳು

ಅಪರಿಮಿತ ಕರ್ಮಗಳ ಮಾಡುತಲಿಪ್ಪ ದಿನದಿನದಿ

ಕೃಪಣ ವತ್ಸಲ ಪಾರ್ಶ್ವದೊಳು ಪರ ಸುಫಲಿಯೆನಿಸುವ

ಗುದುಪಸ್ಥದಿ ವಿಪುಳ ಬಲಿಭಗ ಮನವೆನಿಸಿ ತುಂದಿಯೊಳಗೆ ಇರುತಿಹನು//2//


ಐದು ಮೇಲೊಂದಧಿಕದಳವುಳ್ಳ ಐದು ಪದ್ಮವು ನಾಭಿ ಮೂಲದಿ

ಐದು ಮೂರ್ತಿಗಳಿಹವು ಅನಿರುದ್ಧಾದಿ ನಾಮದಲಿ

ಐದಿಸುತ ಗರ್ಭವನು ಜೀವರ ಅನಾದಿ ಕರ್ಮ ಪ್ರಕೃತಿ ಗುಣಗಳ

ಹಾದಿ ತಪ್ಪಲುಗೊಡದೆ ವ್ಯಾಪಾರಗಳ ಮಾಡುತಿಹ//3//


ನಾಭಿಯಲಿ ಷಟ್ಕೋನ ಮಂಡಲದ ಈ ಭವಿಷ್ಯದ್ ಬ್ರಹ್ಮನೊಳು

ಮುಕ್ತಾಭ ಶ್ರೀ ಪ್ರದ್ಯುಮ್ನನು ಇಪ್ಪನು ವಿಬುಧ ಗಣಸೇವ್ಯ

ಶೋಭಿಸುವ ಕೌಸ್ತುಭವೆ ಮೊದಲಾದ ಆಭರಣ ಆಯುಧಗಳಿಂದ

ಮಹಾ ಭಯಂಕರ ಪಾಪ ಪುರುಷನ ಶೋಷಿಸುವ ನಿತ್ಯ//4//


ದ್ವಾದಶ ಅರ್ಕರ ಮಂಡಲವು ಮಧ್ಯ ಉದರದೊಳು ಸುಷುಮ್ನದೊಳಗಿಹದು

ಐದು ರೂಪಾತ್ಮಕನು ಅರವತ್ತಧಿಕ ಮುನ್ನೂರು

ಈ ದಿವಾರಾತ್ರಿಗಳ ಮಾನಿಗಳು ಆದ ದಿವಿಜರ ಸಂತಯಿಸುತ

ನಿಷಾದ ರೂಪಕ ದೈತ್ಯರನು ಸಂಹರಿಪ ನಿತ್ಯದಲಿ//5//


ಹೃದಯದೊಳಗಿಹದು ಅಷ್ಟದಳ ಕಮಲ ಅದರೊಳಗೆ

ಪ್ರಾದೇಶ ನಾಮಕನುದಿತ ಭಾಸ್ಕರನಂತೆ ತೋರ್ಪನು ಬಿಂಬನೆಂದೆನಿಸಿ

ಪದುಮಚಕ್ರ ಸುಶಂಖ ಸುಗದಾಂಗದ ಕಟಕ ಮುಕುಟ ಅಂಗುಳೀಯಕ

ಪದಕ ಕೌಸ್ತುಭ ಹಾರ ಗ್ರೈವೇಯ ಆದಿ ಭೂಷಿತನು//6//


ದ್ವಿದಳ ಪದ್ಮವು ಶೋಭಿಪುದು ಕಂಠದಲಿ ಮುಖ್ಯಪ್ರಾಣ

ತನ್ನಯ ಸುದತಿಯಿಂದ ಒಡಗೂಡಿ ಹಂಸ ಉಪಾಸನೆಯ ಮಾಳ್ಪ

ಉದಕವು ಅನ್ನಾದಿಗಳಿಗೆ ಅವಕಾಶದನು ತಾನಾಗಿದ್ದು

ಉದಾನ ಅಭಿಧನು ಶಬ್ಧವ ನುಡಿದು ನುಡಿಸುವ ಸರ್ವಜೀವರೊಳು//7//


ನಾಸಿಕದಿ ನಾಸತ್ಯ ದಸ್ರರು ಶ್ವಾಸಮಾನೀ ಪ್ರಾಣ ಭಾರತಿ

ಹಂಸ ಧನ್ವಂತ್ರಿಗಳು ಅಲ್ಲಲ್ಲಿ ಇಪ್ಪರು ಅವರೊಳಗೆ

ಭೇಶ ಭಾಸ್ಕರರು ಅಕ್ಷಿ ಯುಗಳಕೆ ಅಧೀಶರೆನಿಪರು

ಅವರೊಳಗೆ ಲಕ್ಷ್ಮೀಶದಧಿ ವಾಮನರು ನೀಯಾಮಿಸುತಲಿ ಇರುತಿಹರು//8//


ಸ್ತಂಭ ರೂಪದಲಿ ಇಪ್ಪ ದಕ್ಷಿಣ ಅಂಬಕದಿ ಪ್ರದ್ಯುಮ್ನ

ಗುಣ ರೂಪ ಅಂಭ್ರಣಿಯು ತಾನಾಗಿ ಇಪ್ಪಳು

ವತ್ಸರೂಪದಲಿ ಪೊಂಬಸಿರ ಪದಯೋಗ್ಯ ಪವನ

ತ್ರಿಯಂಬಕಾದಿ ಸಮಸ್ತ ದಿವಿಜ ಕದಂಬ ಸೇವಿತನಾಗಿ ಸರ್ವ ಪದಾರ್ಥಗಳ ತೋರ್ಪ//9//


ನೇತ್ರಗಳಲಿ ವಸಿಷ್ಠ ವಿಶ್ವಾಮಿತ್ರ ಭಾರದ್ವಾಜ ಗೌತಮ ಅತ್ರಿ

ಆ ಜಮದಗ್ನಿ ನಾಮಗಳಿಂದ ಕರೆಸುತಲಿ

ಪತ್ರತಾಪಕ ಶಕ್ರ ಸೂರ್ಯ ಧರಿತ್ರಿ ಪರ್ಜನ್ಯಾದಿ ಸುರರು

ಜಗತ್ರಯ ಈಶನ ಭಜಿಪರು ಅನುದಿನ ಪರಮ ಭಕುತಿಯಲಿ//10//


ಜ್ಯೋತಿಯೊಳಗೆ ಇಪ್ಪನು ಕಪಿಲ ಪುರುಹೂತ ಮುಖ ದಿಕ್ಪತಿಗಳಿಂದ ಸಮೇತನಾಗಿ

ದಕ್ಷಿಣ ಅಕ್ಷಿಯ ಮುಖದೊಳಿಹ ವಿಶ್ವ

ಶ್ವೇತವರ್ಣ ಚತುರ್ಭುಜನು ಸಂಪ್ರೀತಿಯಿಂದಲಿ

ಸ್ಥೂಲ ವಿಷಯವ ಚೇತನರಿಗೆ ಉಂಡು ಉಣಿಪ ಜಾಗ್ರತೆಯಿತ್ತು ನೃಗಜಾಸ್ಯ//11//


ನೆಲೆಸಿಹರು ದಿಕ್ದೇವತೆಗಳು ಇಕ್ಕರದ ಕರ್ಣಂಗಳಲಿ

ತೀರ್ಥಂಗಳಿಗೆ ಮಾನಿಗಳಾದ ಸುರನದಿ ಮುಖ್ಯ ನಿರ್ಜನರು

ಬಲದ ಕಿವಿಯಲಿ ಇರುತಿಹರು ಬಾಂಬೊಳೆಯ ಜನಕ ತ್ರಿವಿಕ್ರಮನು

ನಿರ್ಮಲಿನರನು ಮಾಡುವನು ಈಪರಿ ಚಿಂತಿಸುವ ಜನರ//12//


ಚಿತ್ತಜ ಇಂದ್ರರು ಮನದೊಳು ಇಪ್ಪರು ಕೃತ್ತಿವಾಸನು ಅಹಂಕಾರದಿ

ಚಿತ್ತ ಚೇತನಮಾನಿಗಳು ವಿಹಗ ಇಂದ್ರ ಫಣಿಪರೊಳು ನಿತ್ಯದಲಿ ನೆಲೆಗೊಂಡು

ಹತ್ತೊಂಭತ್ತು ಮೊಗ ತೈಜಸನು

ಸ್ವಪ್ನಾವಸ್ಥೆಯೈದಿಸಿ ಜೀವರನು ಪ್ರವಿಭಕ್ತ ಭುಕುವೆನಿಪ//13//


ಜ್ಞಾನಮಯ ತೈಜಸನು ಹೃದಯ ಸ್ಥಾನವ ಐದಿಸಿ

ಪ್ರಾಜ್ಞನೆಂಬ ಅಭಿಧಾನದಿಂ ಕರೆಸುತ್ತ ಚಿತ್ಸುಖ ವ್ಯಕ್ತಿಯನೆ ಕೊಡುತ

ಆನತೆಷ್ಟ ಪ್ರದನು ಅನುಸಂಧಾನವೀಯದೆ ಸುಪ್ತಿಯೈದಿಸಿ

ತಾನೆ ಪುನರಪಿ ಸ್ವಪ್ನ ಜಾಗ್ರತೆಯೀವ ಚೇತನಕೆ//14//


ನಾಲಿಗೆಯೊಳಿಹ ವರುಣ ಮತ್ಸ್ಯ ಅಣುನಾಲಿಗೆಯೊಳು ಉಪೇಂದ್ರ ಇಂದ್ರರು

ತಾಲು ಪರ್ಜನ್ಯಾಖ್ಯ ಸೂರ್ಯನು ಅರ್ಧಗರ್ಭನಿಹ

ಅಲೆಯೊಳು ವಾಮನ ಸುಭಾಮನ ಫಾಲದೊಳು ಶಿವ ಕೇಶವನು

ಸುಕಪೋಲದೊಳಗೆ ರತೀಶ ಕಾಮನು ಅಲ್ಲಿ ಪ್ರದ್ಯುಮ್ನ//15//


ರೋಮಗಳಲಿ ವಸಂತ ತ್ರಿಕಕುದ್ಧಾಮ ಮುಖದೊಳಗೆ ಅಗ್ನಿ ಭಾರ್ಗವ

ತಾಮರಸ ಭವ ವಾಸುದೇವರು ಮಸ್ತಕದೊಳಿಹರು

ಈ ಮನದೊಳಿಹ ವಿಷ್ಣು ಶಿಖದೊಳು ಉಮಾಮಹೇಶ್ವರ ನಾರಸಿಂಹಸ್ವಾಮಿ

ತನ್ನ ಅನುದಿನದಿ ನೆನೆವರ ಮೃತ್ಯು ಪರಿಹರಿಪ//16//


"ವಿಶೇಷ - ಈ ಮನದೊಳಿಹ ವಿಷ್ಣು (ಅಹಂಕಾರಿಕ ಪ್ರಾಣನ ದೇವತೆ)

ಮೌಳಿಯಲ್ಲಿಹ ವಾಸುದೇವನು ಏಳು ಅಧಿಕ ನವ ಜಾತಿ ರೂಪವ ತಾಳಿ

ಮುಖದೊಳು ಶ್ರವಣ ನಯನಾದಿ ಅವಯವಗಳಿಗೆ ಆಳರಸು ತಾನಾಗಿ

ಸತತ ಸುಲೀಲೆಗೈಯುತಲಿ ಇಪ್ಪ

ಸುಖಮಯ ಕೇಳಿ ಕೇಳಿಸಿ ನೋಡಿ ನೋಡಿಸಿ ನುಡಿದು ನುಡಿಸುವನು//17//


ಎರಡಧಿಕವು ಎಪ್ಪತ್ತು ಎನಿಪ ಸಾವಿರದ ನಾಡಿಗೆ

ಮುಖ್ಯವು ಏಕ ಉತ್ತರ ಶತಗಳು ಅಲ್ಲಿ ಇಹವು ನೂರಾ ಒಂದು ಮೂರ್ತಿಗಳು

ಅರಿದು ದೇಹದಿ ಕಲಶ ನಾಮಕ ಹರಿಗೆ ಕಳೆಗಳು ಇವು ಎಂದು

ನೈರಂತರದಿ ಪೂಜಿಸುತಿಹರು ಪರಮಾದರದಿ ಭೂಸುರರು//18//


ಇದಕೆ ಕಾರಣವೆನಿಸುವವು ಎರಡಧಿಕ ದಶ ನಾಡಿಗಳ ಒಳಗೆ

ಸುರಾ ನದಿಯೆ ಮೊದಲಾದ ಅಮಲ ತೀರ್ಥಗಳು ಇಹವು ಕರಣದಲಿ

ಪದುಮನಾಭನು ಕೇಶವಾದಿ ದ್ವಿದಶ ರೂಪದಲಿ ಇಪ್ಪನಲ್ಲಿ

ಅತಿ ಮೃದುಳವಾದ ಸುಷುಮ್ನದೊಳಗೆ ಏಕಾತ್ಮನೆನಿಸುವನು//19//


ಆಮ್ನಯ ಪ್ರತಿಪಾದ್ಯ ಶ್ರೀ ಪ್ರದ್ಯುಮ್ನ ದೇವಾನು ದೇಹದೊಳಗೆ

ಸುಷುಮ್ನದಿ ಈಡಾ ಪಿಂಗಳದಿ ವಿಶ್ವಾದಿ ರೂಪದಲಿ

ನಿರ್ಮಲಾತ್ಮನು ವಾಣಿ ವಾಯು ಚತುರ್ಮುಖರೊಳಿದ್ದು ಅಖಿಳ ಜೀವರ

ಕರ್ಮ ಗುಣವ ಅನುಸರಿಸಿ ನಡೆವನು ವಿಶ್ವ ವ್ಯಾಪಕನು//20//


ಅಬ್ದ ಅಯನ ಋತು ಮಾಸ ಪಕ್ಷ ಸುಶಬ್ಧದಿಂದಲಿ ಕರೆಸುತಲಿ

ನೀಲಾಬ್ಧ ವರ್ಣ ಅನಿರುದ್ಧನೆ ಮೊದಲಾದ ಐದು ರೂಪದಲಿ

ಹಬ್ಬಿಹನು ಸರ್ವತ್ರದಲಿ ಕರುಣಾಬ್ಧಿ ನಾಲ್ವತ್ತೈದು ರೂಪದಿ

ಲಭ್ಯನಾಗುವನೀ ಪರಿ ಧೇನಿಸುವ ಭಕುತರಿಗೆ//21//


ಐದು ರೂಪಾತ್ಮಕನು ಇಪ್ಪತ್ತೈದು ರೂಪದಲಿಪ್ಪ

ಮತ್ತೆ ಹದಿನೈದು ತಿಥಿ ಇಪ್ಪತ್ತನಾಲ್ಕರಿಂದ ಪೆಚ್ಚಿಸಲು

ಐದುವದು ಅರವತ್ತಧಿಕ ಆರೈದು ದಿವಸ ಆಹ್ವಯನೊಳಗೆ

ಮನ ತೋಯ್ದವಗೆ ತಾಪತ್ರಯದ ಮಹದೋಷವೆಲ್ಲಿಹುದೋ//22//


ದಿವಸ ಯಾಮ ಮಹೂರ್ತ ಘಟಿಕಾದಿ ಅವಯವಗಳೊಳಗಿದ್ದು

ಗಂಗಾ ಪ್ರವಾಹದಂದದಿ ಕಾಲನಾಮಕ ಪ್ರವಹಿಸುತಲಿಪ್ಪ

ಇವನ ಗುಣ ರೂಪ ಕ್ರಿಯಂಗಳ ನಿವಹದೊಳು ಮುಳುಗಿ ಆಡುತಲಿ

ಭಾರ್ಗವಿ ಸದಾನಂದಾತ್ಮಳು ಆಗಿಹಳು ಎಲ್ಲ ಕಾಲದಲಿ//23//


ವೇದತತಿಗಳ ಮಾನಿ ಲಕ್ಷ್ಮೀ ಧರಾಧರನ ಗುಣ ರೂಪ ಕ್ರಿಯೆಗಳ

ಆದಿ ಮಧ್ಯ ಅಂತವನು ಕಾಣದೆ ಮನದಿಯೋಚಿಸುತ

ಆದಪನೆ ಈತನಿಗೆ ಪತ್ನಿ? ಕೃಪೋದಧಿಯು ಸ್ವೀಕರಿಸುದನು

ಲೋಕಾಧಿಪನು ಭಿಕ್ಷುಕನ ಮನೆಯ ಔತಣವ ಕೊಂಬಂತೆ//24//


ಕೋವಿದರು ಚಿತ್ತೈಸುವದು ಶ್ರೀದೇವಿಯೊಳಗಿಹ ನಿಖಿಲ ಗುಣ

ತೃಣ ಜೀವರಲಿ ಕಲ್ಪಿಸಿ ಯುಕುತಿಯಲಿ ಮತ್ತು ಕ್ರಮದಿಂದ

ದೇವ ದೇವಕಿಯಿಪ್ಪಳು ಎಂದರಿದು ಆ ವಿರಿಂಚನ ಜನನಿ

ಈತನ ಆವಕಾಲಕು ಅರಿಯಳು ಅಂತವ ನರರ ಪಾಡೇನು//25//


ಕ್ಷೀರ ದಧಿ ನವನೀತ ಘೃತದೊಳು ಸೌರಭ ರಸಾಹ್ವಯನೆನಿಸಿ ಶಾಂತೀರಮಣ

ಜ್ಞಾನ ಇಚ್ಚಾ ಕ್ರಿಯಾ ಶಕ್ತಿಯೆಂದೆಂಬ ಈರೆರೆಡು ನಾಮದಲಿ ಕರೆಸುತ

ಭಾರತೀ ವಾಗ್ದೇವಿ ವಾಯು ಸರೋರುಹ ಆಸನರು

ಅಲ್ಲಿ ನೆಲೆಸಿಹರು ಎಲ್ಲ ಕಾಲದಲಿ//26//


ವಸುಗಳೆಂಟು ನವ ಪ್ರಜ ಈಶರು ಶ್ವಸನ ಗುಣ ಐವತ್ತು

ಏಕಾದಶ ದಿವಾಕರರು ಅನಿತೆ ರುದ್ರರು ಅಶ್ವಿನಿಗಳೆರಡು

ದಶ ವಿಹೀನ ಶತಾಖ್ಯ ಈ ಸುಮನಸರೊಳಗೆ

ಚತುರಾತ್ಮ ನೀಯಾಮಿಸುವ ಬ್ರಹ್ಮ ಸಮೀರ ಖಗ ಫಣೀಂದ್ರರ ಒಳಗಿದ್ದು//27//


ತೋರುತಿಪ್ಪನು ಚಕ್ರದಲಿ ಹಿಂಕಾರ ನಾಮಕ ಶಂಖದಲಿ ಪ್ರತಿಹಾರ

ಗದೆಯಲಿ ನಿಧನ ಪದ್ಮದಲಿ ಇಪ್ಪ ಪ್ರಸ್ಥಾನ

ಕಾರುಣಿಕನು ಉದ್ಗೀಥನಾಮದಿ ಮಾರಮಣನ ಐ ರೂಪಗಳ

ಶಂಖಾರಿ ಮೊದಲಾದ ಆಯುಧಗಳೊಳು ಸ್ಮರಿಸಿ ಧರಿಸುತಿರು//28//


ತನುವೆ ರಥ ವಾಕ್ ಅಭಿಮಾನಿಯೆ ಗುಣವೆನಿಸುವಳು

ಶ್ರೋತ್ರದೊಳು ರೋಹಿಣಿ ಶಶಾಂಕರು ಪಾಶ ಪಾಣಿಗಳು ಅಶ್ವವೆಂದೆನಿಸಿ

ಇನನು ಸಂಜ್ಞಾ ದೇವಿಯರು ಇಹರ ಅನಲ ಲೋಚನ

ಸೂತನೆನಿಸುವ ಪ್ರಣವ ಪಾದ್ಯ ಪ್ರಾಣ ನಾಮಕ ರಥಿಕನೆನಿಸುವನು//29//


ಅಮಿತ ಮಹಿಮನ ಅಪಾರ ಗುಣಗಳ ಸಮಿತ ವರ್ಣಾತ್ಮಕ ಶ್ರುತಿ ಸ್ಮೃತಿ ಗಮಿಸಲಾಪವೆ

ತದಭಿಮಾನಿಗಳು ಎಂದೆನಿಸಿಕೊಂಬ

ಕಮಲಾ ಸಂಭವ ಭವ ಸುರ ಇಂದ್ರಾದಿ ಅಮರರು ಅನುದಿನ ತಿಳಿಯಲು ಅರಿಯರು

ಸ್ವಮಹಿಮೆಗಳ ಆದಿ ಅಂತ ಮಧ್ಯಗಳು ಅರಿವ ಸರ್ವಜ್ಞ//30//


ವಿತ್ತ ದೇಹಾಗಾರ ದಾರಾ ಪತ್ಯ ಮಿತ್ರಾದಿಗಳೊಳಗೆ

ಹರಿ ಪ್ರತ್ಯಗಾತ್ಮನು ಎಂದೆನಿಸಿ ನೆಲೆಸಿಪ್ಪನೆಂದರಿದು

ನಿತ್ಯದಲಿ ಸಂತೃಪ್ತಿ ಬಡಿಸುತ ಉತ್ತಮ ಅಧಮ ಮಧ್ಯಮರ

ಕೃತ ಕೃತ್ಯನಾಗು ಉನ್ಮತ್ತನು ಆಗದೆ ಭೃತ್ಯ ನಾನೆಂದು//31//


ದೇವ ದೇವೇಶನ ಸುಮೂರ್ತಿ ಕಳೇವರಗಳೊಳಗೆ ಅನವರತ ಸಂಭಾವಿಸುತ

ಪೂಜಿಸುತ ನೋಡುತ ಸುಖಿಸುತಿರು ಬಿಡದೆ

ಶ್ರೀವರ ಜಗನ್ನಾಥ ವಿಠಲ ತಾ ಒಲಿದು ಕಾರುಣ್ಯದಲಿ

ಭವ ನೋವ ಪರಿಹರಿಸುವನು ಪ್ರವಿತತ ಪತಿತ ಪಾವನನು//32//


//ಇತಿ ಶ್ರೀ ಮಾತೃಕಾ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು

No comments:

Post a Comment