Wednesday, January 16, 2013

ಶ್ರೀ ಹರಿಕಥಾಮೃತಸಾರ - 12

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಶ್ರೀ ಸ್ಥಾವರಜಂಗಮ ಸಂಧಿ//


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ವಾಸುದೇವನು ಪ್ರಾಣಮುಖ ತತ್ವ ಈಶರಿಂದಲಿ ಸೇವೆ ಕೈಕೊಳುತ

ಈ ಶರೀರದೊಳು ಇಪ್ಪ ಮೂವತ್ತಾರು ಸಾವಿರ ಈ ಸುನಾಡಿಗಳೊಳಗೆ

ಈ ಭೂಮೀ ಸಮೇತ ವಿಹಾರಗೈವ

ಪರ ಈಶನ ಅಮಲ ಸುಮೂರ್ತಿಗಳ ಚಿಂತಿಸುತ ಹಿಗ್ಗುತಿರು//1//


ಚರಣಗಳೊಳಿಹ ನಾಡಿಗಳು ಹನ್ನೆರೆಡು ಸಾವಿರ ಮಧ್ಯ ದೇಹದೊಳು ಇರುತಿಹವು ಹದಿನಾಲ್ಕು

ಬಾಹುಗಳೊಳಗೆ ಈರೆರೆಡು ಶಿರದೊಳು ಆರು ಸಹಸ್ರ ಚಿಂತಿಸಿ

ಇರುಳು ಹಗಲು ಅಭಿಮಾನಿ ದಿವಿಜರನರಿತು

ಉಪಾಸನೆಗೈವರು ಇಳೆಯೊಳು ಸ್ವರ್ಗ ವಾಸಿಗಳು//2//


ಬೃಹತಿನಾಮಕ ವಾಸುದೇವನು ವಹಿಸಿ ಸ್ತ್ರೀ ರೂಪ

ದೋಷ ವಿರಹಿತ ಎಪ್ಪತ್ತೆರೆಡು ಸಾವಿರ ನಾಡಿಗಳೊಳಗಿದ್ದು

ದ್ರುಹಿಣ ಮೊದಲಾದ ಅಮರಗಣ ಸನ್ಮಹಿಮ

ಸರ್ವ ಪ್ರಾಣಿಗಳ ಮಹಾಮಹಿಮ ಸಂತೈಸುವನು ಸಂತತ ಪರಮ ಕರುಣಾಳು//3//


ನೂರು ವರ್ಷಕೆ ದಿವಸ ಮೂವತ್ತಾರು ಸಾವಿರ ವಹವು

ನಾಡಿ ಶರೀರದೊಳಗೆ ಇನಿತಿಹವು ಎಂದರಿತು ಒಂದು ದಿವಸದಲಿ

ಸೂರಿಗಳ ಸತ್ಕರಿಸಿದವ ಪ್ರತಿ ವಾರದಲಿ ದಂಪತಿಗಳ ಅರ್ಚನೆ ತಾ ರಚಿಸಿದವ

ಸತ್ಯ ಸಂಶಯವು ಇಲ್ಲವೆಂದೆಂದು//4//


ಚತುರ ವಿಂಶತಿ ತತ್ತ್ವಗಳು ತತ್ಪತಿಗಳು ಎನಿಸುವ

ಬ್ರಹ್ಮ ಮುಖ ದೇವತೆಗಳು ಅನುದಿನ ಪ್ರತಿ ಪ್ರತಿ ನಾಡಿಗಳೊಳು ಇರುತಿದ್ದು

ಚತುರ ದಶ ಲೋಕದೊಳು ಜೀವ ಪ್ರತತಿಗಳ ಸಂರಕ್ಷಿಸುವ

ಶಾಶ್ವತನ ತತ್ತತ್ ಸ್ಥಾನದಲಿ ನೋಡುತಲೇ ಮೋದಿಪರು//5//


ಸತ್ಯ ಸಂಕಲ್ಪನು ಸದಾ ಎಪ್ಪತ್ತೆರೆಡು ಸಹಸ್ರದೊಳು

ಮೂವತ್ತು ನಾಲ್ಕು ಲಕ್ಷದ ಐವತ್ತಾರು ಸಹಸ್ರ

ಚಿತ್ಪ್ರಕ್ರುತಿಯ ಒಡಗೂಡಿ ಪರಮನು ನಿತ್ಯ ಮಂಗಳಮೂರ್ತಿ

ಭಕ್ತರ ತೆತ್ತಿಗನು ತಾನಾಗಿ ಸರ್ವತ್ರದಲಿ ಸಂತೈಪ//6//


ಮಣಿಗಳೊಳಗಿಹ ಸೂತ್ರದಂದದಿ ಪ್ರಣವ ಪಾದ್ಯನು

ಸರ್ವ ಚೇತನ ಗಣದೊಳಿದ್ದು ಅನವರತ ಸಂತೈಸುವನು ತನ್ನವರ

ಪ್ರಣತ ಕಾಮದ ಭಕ್ತ ಚಿಂತಾಮಣಿ ಚಿದಾನಂದೈಕ ದೇಹನು

ಅಣು ಮಹದ್ಗತನು ಅಲ್ಪರೋಪಾದಿಯಲಿ ನೆಲೆಸಿಪ್ಪ//7//


ಈ ಸುಷುಮ್ನ ಆದಿ ಅಖಿಳ ನಾಡೀ ಕೋಶ ನಾಭೀ ಮೂಲದಲಿ

ವೃಷಣಾ ಸದನ ಮಧ್ಯದಲಿಪ್ಪದು ತುಂದಿ ನಾಮದಲಿ

ಆ ಸರೋಜಾಸನ ಮುಖರು ಮೂಲೇಶನ ಅನಂದಾದಿ ಸುಗುಣ ಉಪಾಸನೆಯ ಗೈವುತಲಿ

ದೇಹದೊಳಗೆ ಇರುತಿಹರು//8//


ಸೂರಿಗಳು ಚಿತ್ತೈಸುವುದು ಭಾಗೀರಥಿಯೆ ಮೊದಲಾದ ತೀರ್ಥಗಳು

ಏರಧಿಕ ಎಪ್ಪತ್ತು ಸಾವಿರ ನಾಡಿಗಳೊಳಿಹವು

ಈ ರಹಸ್ಯವನು ಅಲ್ಪ ಜನರಿಗೆ ತೋರಿ ಪೇಳದೆ

ನಾಡಿ ನದಿಯೊಳು ಧೀರರು ಅನುದಿನ ಮಜ್ಜನವ ಮಾಡುತಲೇ ಸುಖಿಸುವರು//9//


ತಿಳಿವುದು ಈ ದೇಹದೊಳಗಿಹ ಎಡ ಬಲದ ನಾಡಿಗಳೊಳಗೆ ದಿವಿಜರು

ಜಲಜ ಸಂಭವ ವಾಯು ವಾಣಿ ಆದಿಗಳು ಬಲದಲ್ಲಿ

ಎಲರುಣಿಗ ವಿಹಗ ಇಂದ್ರ ಚಳಿವೆಟ್ಟಳಿಯ ಷಣ್ಮಹಿಶಿಯರು

ವಾರುಣಿ ಕುಲಿಶ ಧರ ಕಾಮಾದಿಗಳು ಎಡ ಭಾಗದೊಳಿಹರು//10//


ಇಕ್ಕಲದೊಳಿಹ ನಾಡಿಯೊಳು ದೇವರ್ಕಳಿಂದ ಒಡನಾಡುತಲಿ

ಪೊಂಬಕ್ಕಿ ದೇರನು ಜೀವರ ಅಧಿಕಾರಾನುಸಾರದಲಿ

ತಕ್ಕ ಸಾಧನವ ಮಾಡಿ ಮಾಡಿಸುತ ಅಕ್ಕರದಿ ಸಂತೈಪ ಭಕ್ತರ

ದಕ್ಕಗೊಡನು ಅಸುರರ್ಗೆ ಸತ್ಪುಣ್ಯಗಳನು ಅಪಹರಿಪ//11//


ತುಂದಿವಿಡಿದು ಆಶಿರದ ಪರಿಯಂತ ಒಂದು ವ್ಯಾಪಿಸಿಹುದು

ತಾವರ ಕಂದನಿಹನು ಅದರೊಳಗೆ ಅದಕೆ ಈರೈದು ಶಾಖೆಗಳು

ಒಂದಧಿಕ ದಶ ಕರಣದೊಳು ಸಂಬಂಧಗೈದಿಹವಲ್ಲಿ

ರವಿ ಶಶಿ ಸಿಂಧು ನಾಸತ್ಯಾದಿಗಳು ನೆಲೆಗೊಂಡಿಹರು ಸತತ//12//


ಪೊಕ್ಕಳದಿವಿಡಿದು ಒಂದೇ ನಾಡಿಯು ಸುಕ್ಕದಲೆ ಧಾರಾಳ ರೂಪದಿ

ಸಿಕ್ಕಿಹುದು ಈ ದೇಹದೊಳಗೆ ಸುಷುಮ್ನ ನಾಮದಲಿ

ರಕ್ಕಸರನು ಒಳ ಪೋಗಗೊಡದೆ ದಶ ದಿಕ್ಕಿನೊಳಗೆ ಸಮೀರ ದೇವನು

ಲೆಕ್ಕಿಸದೆ ಮತ್ತೊಬ್ಬರನು ಸಂಚರಿಪ ದೇಹದೊಳು//13//


ಇನಿತು ನಾಡೀ ಶಾಖೆಗಳು ತನುವಿನೊಳಗೆ ಇಹವೆಂದರಿದು ಏಕಾತ್ಮನು

ದ್ವಿ ಸಪ್ತತಿ ಸಾವಿರ ಆತ್ಮಕನು ಆಗಿ ನಾಡಿಯೊಳು

ವನಿತೆಯಿಂದ ಒಡಗೂಡಿ ನಾರಾಯಣ ದಿವಾ ರಾತ್ರಿಗಳಲಿ

ಈ ಪರಿ ವನಜಾಂಡದೊಳು ಅಖಿಳ ಜೀವರೊಳಿದ್ದು ಮೋಹಿಸುವ//14//


ದಿನದಿನದಿ ವರ್ಧಿಸುವ ಕುಮುದಾಪ್ತನ ಮಯೂಖದ ಸೊಬಗ

ಗತ ಲೋಚನ ವಿಲೋಕಿಸಿ ಮೋದ ಪಡಬಲ್ಲನೆ ನಿರಂತರದಿ

ಕುನರಗೆ ಈ ಸುಕಥ ಅಮೃತದ ಭೋಜನದ ಸುಖ ದೊರಕುವುದೇ

ಲಕ್ಷ್ಮೀ ಮನೋಹರನ ಸದ್ಗುಣವ ಕೀರ್ತಿಪ ಭಕುತಗೆ ಅಲ್ಲದಲೆ//15//


ಈ ತನುವಿನೊಳಗಿಹವು ಓತ ಪ್ರೋತ ರೂಪದಿ ನಾಡಿಗಳು

ಪುರುಹೂತ ಮುಖರು ಅಲ್ಲಿಹರು ತಮ್ಮಿಂದ ಅಧಿಕಾರ ಒಡಗೂಡಿ

ಭೀತಿಗೊಳಿಸುತ ದಾನವರ ಸಂಘಾತ ನಾಮಕ ಹರಿಯ ಗುಣ

ಸಂಪ್ರೀತಿಯಲಿ ಸದುಪಾಸನೆಯ ಗೈವುತಲೆ ಮೋದಿಪರು//16//


ಜಲಾಟ ಕುಕ್ಕಾಟ ಖಾಟ ಜೀವರ ಕಳೇವರಗಳೊಳು ಇದ್ದು ಕಾಣಿಸಿಕೊಳದೆ

ತತ್ತದ್ರೂಪ ನಾಮಗಳಿಂದ ಕರೆಸುತಲಿ

ಜಲರುಹೇಕ್ಷಣ ವಿವಿಧ ಕರ್ಮಗಳ ಅನುದಿನದಿ ಮಾಡಿ

ತತ್ತತ್ಫಲಗಳ ಉಣ್ಣದೆ ಸಂಚರಿಸುವನು ನಿತ್ಯ ಸುಖ ಪೂರ್ಣ//17//


ತಿಳಿದುಪಾಸನೆಗೈವುತ ಈಪರಿ ಮಲಿನನಂತಿರು ದುರ್ಜನರ ಕಂಗಳಿಗೆ ಗೋಚರಿಸದೆ

ವಿಪಶ್ಚಿತರ ಒಡವೆ ಗರ್ವಿಸದೆ

ಮಳೆ ಬಿಸಿಲು ಹಸಿ ತೃಷಿ ಜಯಾಜಯ ಖಳರ ನಿಂದ್ಯಾನಿಂದ್ಯ ಭಯಗಳಿಗೆ

ಅಳುಕದಲೆ ಮದ್ದಾನೆಯಂದದಿ ಚರಿಸು ಧರೆಯೊಳಗೆ//18//


ಕಾನನ ಗ್ರಾಮಸ್ಥ ಸರ್ವ ಪ್ರಾಣಿಗಳು ಪ್ರತಿ ದಿವಸದಲಿ

ಏನೇನು ಮಾಡುವ ಕರ್ಮಗಳು ಹರಿ ಪೂಜೆಯಂದರಿದು ದೇನಿಸುತ

ಸದ್ಭಕ್ತಿಯಲಿ ಪವಮಾನವಂದಿತ ದೇವಾಂತರಾತ್ಮಕ

ಶ್ರೀನಿವಾಸನಿಗೆ ಅರ್ಪಿಸುತ ಮೋದಿಸುತ ನಲಿವುತಿರು//19//


ನೋಕನೀಯನು ಲೋಕದೊಳು ಶುನಿಸೂಕರಾದಿಗಳೊಳಗೆ ನೆಲೆಸಿದ್ದು

ಏಕಮೇವಾದ್ವಿತೀಯ ಬಹುರೂಪಾಹ್ವಯಗಳಿಂದ

ತಾ ಕರೆಸುತ ಒಳಗಿದ್ದು ತಿಳಿಸದೆ ಶ್ರೀ ಕಮಲಭವ ಮುಖ್ಯ ಸಕಲ

ದಿವೌಕಸಗಣ ಆರಾಧ್ಯ ಕೈಕೊಂಡು ಅನವರತ ಪೊರೆವ//20//


ಇನಿತು ಉಪಾಸನೆಗೈವುತಿಹ ಸಜ್ಜನರು ಸಂಸಾರದಲಿ ಪ್ರತಿಪ್ರತಿ ದಿನಗಳಲಿ

ಏನೇನು ಮಾಡುವುದು ಎಲ್ಲ ಹರಿಪೂಜೆ ಎನಿಸಿಕೊಂಬುದು ಸತ್ಯವು

ಈ ಮಾತಿನಲಿ ಸಂಶಯಪಡುವ ನರನು ಅಲ್ಪನು ಸುನಿಶ್ಚಯ

ಬಾಹ್ಯ ಕರ್ಮವ ಮಾಡಿ ಫಲವೇನು//21//


ಭೋಗ್ಯ ಭೋಕ್ಟ್ರುಗ ಳೊಳಗೆ ಹರಿ ತಾ ಭೋಗ್ಯ ಭೋಕ್ತನು ಎನಿಸಿ

ಯೋಗ್ಯಾಯೋಗ್ಯ ರಸಗಳ ದೇವ ದಾನವ ಗಣಕೆ ಉಣಿಸುವನು

ಭಾಗ್ಯನಿಧಿ ಭಕ್ತರಿಗೆ ಸದ್ವೈರಾಗ್ಯ ಭಕ್ತಿ ಜ್ಞಾನವೀವ

ಅಯೋಗ್ಯರಿಗೆ ದ್ವೇಷಾದಿಗಳ ತನ್ನಲ್ಲಿ ಕೊಡುತಿಪ್ಪ//22//


ಈ ಚತುರ್ದಶ ಭುವನದೊಳಗೆ ಚರಾಚರಾತ್ಮಕ ಜೀವರಲ್ಲಿ

ವಿರೋಚನಾತ್ಮಜ ವಂಚಕನು ನೆಲೆಸಿದ್ದು ದಿನದಿನದಿ

ಯಾಚಕನುಯೆಂದೆನಿಸಿಕೊಂಬ ಮರೀಚಿರ್ದಮನ ಸುಹಂಸ ರೂಪ

ನಿಷೇಚಕ ಆಹ್ವಯನು ಆಗಿ ಜನರಭಿಲಾಷೆ ಪೂರೈಪ//23//


ಅನ್ನದನ್ನಾದನ್ನಮಯ ಸ್ವಯಂ ಅನ್ನ ಬ್ರಹ್ಮಾದಿ ಅಖಿಳ ಚೇತನಕೆ

ಅನ್ನ ಕಲ್ಪಕನಾಹನು ಅನಿರುದ್ಧಾದಿ ರೂಪದಲಿ

ಅನ್ಯರನು ಅಪೇಕ್ಷಿಸದೆ ಗುಣ ಕಾರುಣ್ಯ ಸಾಗರ ಸೃಷ್ಟಿಸುವನು

ಹಿರಣ್ಯ ಗರ್ಭನೊಳಿದ್ದು ಪಾಲಿಸುವನು ಜಗತ್ರಯವ//24//


ತ್ರಿಪದ ತ್ರಿದಶಾಧ್ಯಕ್ಷ ತ್ರಿಸ್ಥ ತ್ರಿಪಥಗಾಮಿನಿ ಪಿತ ತ್ರಿವಿಕ್ರಮ

ಕೃಪಣ ವತ್ಸಲ ಕುವಲಯ ದಳ ಶ್ಯಾಮ ನಿಸ್ಸೀಮ

ಅಪರಿಮಿತ ಚಿತ್ಸುಖ ಗುಣಾತ್ಮಕ ವಪುಷ ವೈಕುಂಠ ಆದಿ ಲೋಕಾಧಿಪ

ತ್ರಯೀಮಯ ತನ್ನವರ ನಿಷ್ಕಪಟದಿಂ ಪೊರೆವ//25//


ಲವಣ ಮಿಶ್ರಿತ ಜಲವು ತೋರ್ಪದು ಲವಣದೋಪಾದಿಯಲಿ ಜಿಹ್ವೆಗೆ

ವಿವರಗೈಸಲು ಶಕ್ಯವಾಗುವದೇನೋ ನೋಳ್ಪರಿಗೆ

ಸ್ವವಶ ವ್ಯಾಪಿಯೆನಿಸಿ ಲಕ್ಷ್ಮೀಧವ ಚರಾಚರದೊಳಗೆ ತುಂಬಿಹನು

ಅವಿದಿತನ ಸಾಕಲ್ಯ ಬಲ್ಲವರು ಆರು ಸುರರೊಳಗೆ//26//


ವ್ಯಾಪ್ಯನಂದದಿ ಸರ್ವಜೀವರೊಳಿಪ್ಪ ಚಿನ್ಮಯ ಘೋರ ಭವ

ಸಂತಪ್ಯ ಮಾನರು ಭಜಿಸೆ ಭಕುತಿಯಳಿಂದಲಿ ಇಹಪರದಿ ಪ್ರಾಪ್ಯನಾಗುವನು

ಅವರವಗುಣಗಳ ಒಪ್ಪುಗೊಂಬನು ಭಕ್ತವತ್ಸಲ ತಪ್ಪಿಸುವ

ಜನ್ಮಾದಿ ದೋಷಗಳ ಅವರಿಗೆ ಅನವರತ//27//


ಹಲವು ಬಗೆಯಲಿ ಹರಿಯ ಮನದಲಿ ಒಲಿಸಿ ನಿಲ್ಲಿಸಿ

ಏನು ಮಾಡುವ ಕೆಲಸಗಳು ಅವನಂಘ್ರಿ ಪೂಜೆಗಳು ಎಂದು ನೆನೆವುತಿರು

ಹಲಧರನುಜ ತಾನೇ ಸರ್ವ ಸ್ಥಳಗಳಲಿ ನೆಲೆಸಿದ್ದು

ನಿಶ್ಚಂಚಲ ಭಕುತಿ ಸುಜ್ಞಾನ ಭಾಗ್ಯವ ಕೊಟ್ಟು ಸಂತೈಪ//28//


ದೋಷ ಗಂಧ ವಿದೂರ ನಾನಾ ವೇಷ ಧಾರಕ ಈ ಜಗತ್ರಯ ಪೋಷಕ

ಪುರಾತನ ಪುರುಷ ಪುರುಹೂತ ಮುಖ ವಿನುತ

ಶೇಷವರ ಪರಿಯಂಕ ಶಯನ ವಿಭೀಷಣ ಪ್ರಿಯ ವಿಜಯ ಸಖ

ಸಂತೋಷಬಡಿಸುವ ಜನರಿಗೆ ಇಷ್ಟಾರ್ಥಗಳ ಪೂರೈಸಿ//29//


ಶ್ರೀ ಮಹೀ ಸೇವಿತ ಪದಾಂಬುಜ ಭೂಮ ಸದ್ಭಕ್ತಿ ಐಕ ಲಭ್ಯ

ಪಿತಾಮಹಾದಿ ಅಮರಾಸುರ ಪಾದ ಪಂಕಜ

ವಾಮ ವಾಮನ ರಾಮ ಸಂಸಾರಮಯ ಔಷಧ ಹೇ ಮಮ ಕುಲಸ್ವಾಮಿ

ಸಂತೈಸೆನಲು ಬಂದೊದಗುವನು ಕರುಣಾಳು//30//


ದುನುಜ ದಿವಿಜರೊಳಿದ್ದು ಅವರವರ ಅನುಸರಿಸಿ ಕರ್ಮಗಳ ಮಾಳ್ಪನು

ಜನನ ಮರಣಾದಿ ಅಖಿಳ ದೋಷ ವಿದೂರ

ಎಮ್ಮೊಡನೆ ಜನಿಸುವನು ಜೀವಿಸುವ ಸಂರಕ್ಷಣೆಯ ಮಾಡುವ ಎಲ್ಲ ಕಾಲದಿ

ಧನವ ಕಾಯ್ದಿಹ ಸರ್ಪನಂತೆ ಅನಿಮಿತ್ತ ಬಾಂಧವನು//31//


ಬಿಸರುಹ ಆಪ್ತ ಆಗಸದಿ ತಾನು ಉದಯಿಸಲು ವೃಕ್ಷಂಗಳ ನೆಳಲು ಪಸರಿಸುವವು

ಇಳೆಯೊಳು ಅಸ್ತಮಿಸಲಲ್ಲ ಅಲ್ಲೇ ಲೀನಹವು

ಶ್ವಸನ ಮುಖ್ಯ ಅಮರಾಂತರಾತ್ಮಕನ ಒಷದೊಳು ಇರುತಿಪ್ಪವು

ಈ ಜಗತ್ರಯ ಬಸಿರೊಳು ಇಂಬಿಟ್ಟು ಎಲ್ಲ ಕರ್ಮವ ತೋರ್ಪ ನೋಳ್ಪರಿಗೆ//32//


ತ್ರಿಭುವನ ಐಕ ಆರಾಧ್ಯ ಲಕ್ಷ್ಮೀ ಸುಭುಜ ಯುಗಳ ಆಲಂಗಿತಾಂಗ

ಸ್ವಭು ಸುಖಾತ್ಮ ಸುವರ್ಣವರ್ಣ ಸುಪರ್ಣ ವರವಾಹನ

ಅಭಯದ ಅನಂತಾರ್ಕ ಶಶಿ ಸನ್ನಿಭ ನಿರಂಜನ ನಿತ್ಯದಲಿ ತನಗೆ

ಅಭಿನಮಿಸುವರಿಗೆ ಏವ ಸರ್ವಾರ್ಥಗಳ ತಡೆಯದಲೆ//33//


ಕವಿಗಳಿಂದಲಿ ತಿಳಿದು ಪ್ರಾತಃ ಸವನ ಮಧ್ಯಂ ದಿನವು

ಸಾಯಮ ಸವನಗಳ ವಸು ರುದ್ರರು ಆದಿತ್ಯರೊಳು ರಾಜಿಸುವ

ಪವನನೊಳು ಕೃತಿ ಜಯ ಸುಮಾಯಾಧವನ ಮೂರ್ತಿತ್ರಯವ ಚಿಂತಿಸಿ

ದಿವಸವೆಂಬ ಆಹುತಿಗಳಿಂದ ಅರ್ಚಿಸುತ ಸುಖಿಸುತಿರು//34//


ಚತುರ ವಿಂಶತಿ ಅಬ್ಧ ವಸು ದೇವತೆಗಳೊಳು ಪ್ರದ್ಯುಮ್ನನು ಇಪ್ಪನು

ಚತುರ ಚತ್ವಾರಿಂಶತಿಗಳಲಿ ಸಂಕರುಷಣಾಖ್ಯ

ಹುತವಹ ಅಕ್ಷನೊಳಿಹನು ಮಾಯಪತಿಯು ಹದಿನಾರಧಿಕ

ದ್ವಾತ್ರಿಂಶತಿ ವರುಷಗಳಲಿಪ್ಪನು ಆದಿತ್ಯನೊಳು ಸಿತಕಾಯ//35//


ಷೋಡಶ ಉತ್ತರ ಶತ ವರುಷದಲಿ ಷೋಡಶ ಉತ್ತರ ಶತ ಸುರೂಪದಿ

ಕ್ರೀಡಿಸುವ ವಸು ರುದ್ರರು ಆದಿತ್ಯರೊಳು ಸತಿಸಹಿತ

ವ್ರೀಡವಿಲ್ಲದೆ ಭಜಿಪ ಭಕ್ತರ ಪೀಡಿಸುತ ದುರಿತ ಔಘಗಳ

ದೂರ ಓಡಿಸುತ ಬಳಿಯಲಿ ಬಿಡದೆ ನೆಲೆಸಿಪ್ಪ ಭಯಹಾರಿ//36//


ಮೂರಧಿಕ ಎಂಭತ್ತು ಸಹಸ್ರ ಐನೂರಿಪ್ಪತ್ತು ಎನಿಪ ರೂಪದಿ

ತೋರುತಿಪ್ಪ ದಿವಾ ನಿಶಾಧಿಪರೊಳಗೆ ನಿತ್ಯದಲಿ

ಭಾರತೀ ಪ್ರಾಣರೊಳಗಿದ್ದು ನಿವಾರಿಸುತ ಭಕ್ತರ ದುರಿತ

ಹಿಂಕಾರ ನಿಧನ ಪ್ರಥಮ ರೂಪದಿ ಪಿತೃಗಳನೆ ಪೊರೆವ//37//


ಬುದ್ಧಿ ಪೂರ್ವಕ ಉತ್ತಮೋತ್ತಮ ಶುದ್ಧ ಊರ್ಣ ಅಂಬರವ

ಪಂಕದೊಳು ಅಡ್ಡಿ ತೆಗೆಯಲು ಲೇಪವಾಗುವದೇ ಪರೀಕ್ಷಿಸಲು

ಪದ್ಮನಾಭನು ಸರ್ವಜೀವರೊಳಿದ್ದರೇನು

ಗುಣತ್ರಯಗಳಿಂ ಬದ್ಧನು ಆಗುವನೇನೋ? ನಿತ್ಯ ಸುಖಾತ್ಮ ಚಿನ್ಮಯನು//38//


ಸಕಲ ದೋಷ ವಿದೂರ ಶಶಿ ಪಾವಕ ಸಹಸ್ರ ಅನಂತ ಸೂರ್ಯ ಪ್ರಕಾರ ಸನ್ನಿಭ ಗಾತ್ರ

ಲಕುಮಿ ಕಳತ್ರ ಸುರಮಿತ್ರ

ವಿಖನ ಸಾಂಡದೊಳಿಪ್ಪ ಬ್ರಹ್ಮಾದಿ ಅಖಿಳ ಚೇತನ ಗಣಕೆ

ತಾನೇ ಸಖನು ಎನಿಸಿಕೊಂಡು ಅಕುಟಿಲ ಆತ್ಮಕನು ಇಪ್ಪನು ಅವರಂತೆ//39//


ದೇಶ ಭೇದಗಳಲ್ಲಿ ಇಪ್ಪ ಆಕಾಶದೋಪಾದಿಯಲಿ ಚೇತನ ರಾಶಿಯೊಳು ನೆಲೆಸಿಪ್ಪನು

ಅವ್ಯವಧಾನದಲಿ ನಿರುತ

ಶ್ರೀ ಸಹಿತ ಸರ್ವತ್ರದಿ ನಿರವಾಕಾಶ ಕೊಡುವಂದದಲಿ ಕೊಡುತ

ನಿರಾಶೆಯಲಿ ಸರ್ವಾಂತರಾತ್ಮಕ ಶೋಭಿಸುವ ಸುಖದ//40//


ಶ್ರೀ ವಿರಿಂಚಿ ಆದಿ ಅಮರಗಣ ಸಂಸೇವಿತ ಅಂಘ್ರಿ ಸರೋಜ

ಈ ಜಡ ಜೀವ ರಾಶಿಗಳ ಒಳ ಹೊರಗೆ ನೆಲೆಸಿದ್ದು ನಿತ್ಯದಲಿ

ಸಾವಕಾಶನು ಎನಿಸಿ ತನ್ನ ಕಳೇವರದೊಳು ಇಂಬಿಟ್ಟು ಸಲಹುವ

ದೇವ ದೇವಕೀ ರಮಣ ದಾನವ ಹರಣ ಜಿತಾಮರಣ//41//


ಮಾಸ ಒಂದಕೆ ಪ್ರತಿ ದಿವಸದಲಿ ಶ್ವಾಸಗಳು ಅಹವು

ಅಷ್ಟ ಚತ್ವಾರಿಂಶತಿ ಸಹಸ್ರಾಧಿಕ ಆರು ಸುಲಕ್ಷ ಸಂಖ್ಯೆಯಲಿ

ಹಂಸನಾಮಕ ಹರಿಯ ಷೋಡಶ ಈ ಶತಾಬ್ದದಿ ಭಜಿಸೆ ಒಲಿವ

ದಯಾಸಮುದ್ರ ಕುಚೇಲಗೆ ಒಲಿದಂದದಲಿ ದಿನದಿನದಿ//42//


ಸ್ಥೂಲ ದೇಹದೊಳಿದ್ದು ವರುಷಕೆ ಏಳಧಿಕ ಎಪ್ಪತ್ತು ಲಕ್ಷದ

ಮೇಲೆ ಎಪ್ಪತ್ತಾರು ಸಾವಿರ ಶ್ವಾಸ ಜಪಗಳನು

ಗಾಳಿ ದೇವನು ಕರುಣದಲಿ ಈರೇಳು ಲೋಕದೊಳುಳ್ಳ

ಚೇತನ ಜಾಲದೊಳು ಮಾಡುವನು ತ್ರಿಜಗದ್ವ್ಯಾಪ್ತ ಪರಮಾಪ್ತ//43//


ಈರೆರೆಡು ದೇಹಗಳೊಳಗಿದ್ದು ಸಮೀರ ದೇವನು ಶ್ವಾಸ ಜಪ

ನಾನೂರು ಅಧಿಕವು ಆಗಿಪ್ಪ ಎಂಭತ್ತಾರು ಸಹಸ್ರ ತಾ ರಚಿಸುವನು ದಿವಸ ಒಂದಕೆ

ಮೂರು ವಿಧ ಜೀವರೊಳಗಿದ್ದು

ಖರಾರಿ ಕರುಣಾಬಲವು ಅದೆಂತುಟೊ ಪವನ ರಾಯನೊಳು//44//


ಶ್ರೀಧವ ಜಗನ್ನಾಥ ವಿಠಲ ತಾ ದಯದಿ ವದನದೊಳು ನುಡಿದ ಉಪಾದಿಯಲಿ

ನಾ ನುಡಿದೆನು ಅಲ್ಲದೆ ಕೇಳಿ ಬುಧ ಜನರು

ಸಾಧು ಲಿಂಗ ಪ್ರದರ್ಶಕರು ನಿಷೇಧಗೈಸಿದರೆ ಏನಹುದು

ಎನ್ನಪರಾಧವು ಏನಿದರೊಳಗೆ ಪೇಳ್ವುದು ತಿಳಿದು ಕೋವಿದರು//45//


//ಇತಿ ಶ್ರೀ ನಾಡೀಪ್ರಕರಣ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು

No comments:

Post a Comment