Sunday, December 30, 2012

ಶ್ರೀ ಹರಿಕಥಾಮೃತಸಾರ - 4

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಭೋಜನ ಸಂಧಿ//

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ವನಜಾಂಡದೊಳು ಉಳ್ಳ ಅಖಿಳ ಚೇತನರು ಭುಂಜಿಪ

ಚತುರವಿಧ ಭೋಜನಪದಾರ್ಥದಿ ಚತುರವಿಧ ರಸರೂಪ ತಾನಾಗಿ

ಮನಕೆ ಬಂದಂತೆ ಉಂಡು ಉಣಿಸಿ ಸಂಹನನಕೆ ಉಪಚಯ

ಕರುಣಕೆ ಆನಂದ ಅನಿಮಿಷರಿಗೆ ಆತ್ಮ ಪ್ರದರ್ಶನ ಸುಖವನೀವ ಹರಿ//1//


ನೀಡದಂದದಲೆ ಇಪ್ಪ ಲಿಂಗಕೆ ಷೋಡಶ ಆತ್ಮಕ ರಸ ವಿಭಾಗವ ಮಾಡಿ

ಷೋಡಶ ಕಲೆಗಳಿಗೆ ಉಪಚಯಗಳನೆ ಕೊಡುತ

ಕ್ರೋಡ ಎಪ್ಪತ್ತೆರಡು ಸಾವಿರ ನಾಡಿಗತ ದೇವತೆಗಳೊಳಗೆ ಇದ್ದಾಡುತ ಆನಂದಾತ್ಮ

ಚರಿಸುವ ಲೋಕದೊಳು ತಾನು//2//


ವಾರಿವಾಚ್ಯನು ವಾರಿಯೊಳಗಿದ್ದು ಆರು ರಸವೆಂದೆನಿಸಿ

ಮೂವತ್ತಾರು ಸಾವಿರ ಸ್ತ್ರೀ ಪುರುಷನಾಡಿಯಲಿ ತದ್ರೂಪ ಧಾರಕನು ತಾನಾಗಿ

ಸರ್ವ ಶರೀರಗಳಲಿ ಅಹಶ್ಚರಾತ್ರಿ ವಿಹಾರ ಮಾಳ್ಪನು

ಬೃಹತಿಯೆಂಬ ಸುನಾಮದಿಂ ಕರೆಸಿ//3//


ಆರುರಸ ಸತ್ವಾದಿ ಭೇದದಿ ಆರು ಮೂರಾಗಿ ಇಹವು

ಸಾರಾಸಾರನೀತ ಪ್ರಚುರ ಖಂಡಾಖಂಡ ಚಿತ್ಪ್ರಚುರ

ಈರು ಅಧಿಕ ಎಪ್ಪತ್ತು ಸಾವಿರ ಮಾರಮಣನ ರಸಾಖ್ಯರೂಪ

ಶರೀರದೊಳು ಭೋಜ್ಯ ಸುಪದಾರ್ಥದಿ ತಿಳಿದು ಭುಂಜಿಪುದು//4//


ಕ್ಷೀರಗತ ರಸ ರೂಪಗಳು ಮುನ್ನೂರು ಮೇಲೆ ಐವತ್ತು ನಾಲ್ಕು

ಚಾರು ಘೃತಗತ ರೂಪಗಳು ಇಪ್ಪತ್ತರ ಒಂಭತ್ತು

ಸಾರ ಗುಡದೊಳಗೆ ಐದು ಸಾವಿರ ನೂರಾವೊಂದು

ಸುರೂಪ ದ್ವಿಸಹಸ್ರ ಆರೆರಡು ಶತ ಪಂಚ ವಿಂಶತಿ ರೂಪ ಫಲಗಳಲಿ//5//


ವಿಶದ ಸ್ಥಿರತೀಕ್ಷಣವು ನಿರ್ಹರ ರಸಗಳೊಳು

ಮೂರೈದುಸಾವಿರ ತ್ರಿಶತ ನವರೂಪಗಳ ಚಿಂತಿಸಿ ಭುಂಜಿಪುದು ವಿಷಯ

ಶ್ವಸನ ತತ್ತ್ವೇಶರೊಳಗಿದ್ದು ಈ ಪೆಸರಿನಿಂದಲಿ ಕರೆಸುವನು

ಧೇನಿಸಿದರೀ ಪರಿ ಮನಕೆ ಪೊಳೆವನು ಬಲ್ಲ ವಿಬುಧರಿಗೆ//6//


ಕಪಿಲ ನರಹರಿ ಭಾರ್ಗವತ್ರಯ ವಪುಷ ನೇತ್ರದಿ ನಾಸಿಕಾಸ್ಯದಿ

ಶಫರನಾಮಕ ಜಿಹ್ವೆಯಲಿ ದಂತದಲಿ ಹಂಸಾಖ್ಯ

ತ್ರಿಪದಿಪಾದ್ಯ ಹಯಾಸ್ಯ ವಾಚ್ಯದೊಳು ಅಪರಿಮಿತ ಸುಖಪೂರ್ಣ ಸಂತತ ಕೃಪಣರೊಳಗಿದ್ದು

ಅವರವರ ರಸ ಸ್ವೀಕರಿಸಿ ಕೊಡುವ//7//


ನಿರುಪಮಾನಂದಾತ್ಮ ಹರಿ ಸಂಕರುಷಣ ಪ್ರದ್ಯುಮ್ನರೂಪದಿ ಇರುತಿಹನು ಭೋಕ್ತ್ರುಗಳೊಳಗೆ

ತತ್ಶಕ್ತಿದನುಯೆನಿಸಿ ಕರೆಸುವನು

ನಾರಾಯಣ ಅನಿರುದ್ಧ ಎರಡುನಾಮದಿ ಭೋಜ್ಯವಸ್ತುಗನಿರುತ

ತರ್ಪಕನಾಗಿ ತೃಪ್ತಿಯನೀವ ಚೇತನಕೆ//8//


ವಾಸುದೇವನು ಒಳ ಹೊರಗೆ ಅವಕಾಶ ಕೊಡುವ ನಭಸ್ಥನಾಗಿ

ರಮಾಸಮೇತ ವಿಹಾರ ಮಾಳ್ಪನು ಪಂಚರೂಪದಲಿ

ಆ ಸರೋರುಹ ಸಂಭವಭವವಾಸವಾದಿ ಅಮರಾದಿ ಚೇತನ ರಾಶಿಯೊಳಗೆ

ಇಹನು ಎಂದರಿತವನು ಅವನೇ ಕೋವಿದನು//9//


ವಾಸುದೇವನು ಅನ್ನದೊಳು ನಾನಾ ಸುಭಕ್ಷ್ಯದಿ ಸಂಕರುಷಣ

ಕೃತೀಶ ಪರಮಾನ್ನದೊಳು ಘೃತದೊಳಗೆ ಇಪ್ಪ ಅನಿರುದ್ಧ

ಆ ಸುಪರ್ಣ ಅಂಸಗನು ಸೂಪದಿ ವಾಸವ ಅನುಜ ಶಾಕದೊಳು

ಮೂಲೇಶ ನಾರಾಯಣನು ಸರ್ವತ್ರದಲಿ ನೆಲೆಸಿಹನು//10//


ಅಗಣಿತ ಆತ್ಮ ಸುಭೋಜನ ಪದಾರ್ಥಗಳ ಒಳಗೆ

ಅಖಂಡ ವಾದ ಒಂದು ಅಗಳಿನೊಳು ಅನಂತ ಅಂಶದಲಿ ಖಂಡನೆಂದೆನಿಸಿ

ಜಗದಿ ಜೀವರ ತೃಪ್ತಿ ಪಡಿಸುವ ಸ್ವಗತ ಭೇದ ವಿವರ್ಜಿತನ

ಈರ್ಬಗೆಯ ರೂಪವನರಿತು ಭುಂಜಿಸಿ ಅರ್ಪಿಸು ಅವನಡಿಗೆ//11//


 
ಈ ಪರಿಯಲಿ ಅರಿತು ಉಂಬ ನರ ನಿತ್ಯ ಉಪವಾಸಿ ನಿರಾಮಯನು ನಿಷ್ಪಾಪಿ

ನಿತ್ಯ ಮಹಾ ಸುಯಜ್ಞಗಳು ಆಚರಿಸಿದವನು

ಪೋಪದು ಇಪ್ಪದು ಬಪ್ಪುದು ಎಲ್ಲ ರಮಾಪತಿಗೆ ಅಧಿಷ್ಠಾನವೆನ್ನು

ಕೃಪಾಪಯೋನಿಧಿ ಮಾತಲಾಲಿಸುವನು ಜನನಿಯಂತೆ//12//


 
ಆರೆರೆಡು ಸಾವಿರದ ಮೇಲೆ ಇನ್ನೂರ ಐವತ್ತೊಂದು ರೂಪದಿ

ಸಾರಭೋಕ್ತ ಅನಿರುದ್ಧ ದೇವನು ಅನ್ನಮಯನೆನಿಪ

ಮೂರೆರೆಡುವರೆ ಸಾವಿರದ ಮೇಲೆ ಮೂರಧಿಕ ನಾಲ್ವತ್ತು ರೂಪದಿ

ತೋರುತಿಹ ಪ್ರದ್ಯುಮ್ನ ಜಗದೊಳು ಪ್ರಾಣಮಯನಾಗಿ//13//


 
ಎರಡು ಕೋಶಗಳ ಒಳ ಹೊರಗೆ ಸಂಕರುಷಣ ಇದು ಸುಲಕ್ಷದ ಅರವತ್ತೆರೆಡು ಸಾವಿರದ

ಏಳಧಿಕ ಶತ ರೂಪಗಳ ಧರಿಸಿ ಕರೆಸಿಕೊಂಬ ಮನೋಮಯ ಎಂದು

ಅರವಿದೂರನು ಈರೆರೆಡು ಸಾವಿರದ ಮುನ್ನೂರು

ಅದ ಮೇಲೆ ನಾಲ್ಕಧಿಕ ಎಪ್ಪತ್ತು//14//


 ಹದಿನಾಲ್ಕು ಮತ್ತು ಹದಿನೈದನೆ ಪದ್ಯವನ್ನು ಒಟ್ಟಿಗೆ ಓದುವುದು.


ರೂಪದಿಂ ವಿಜ್ಞಾನಮಯನು ಎಂಬೀ ಪೆಸರಿನಿಂ ವಾಸುದೇವನು

ವ್ಯಾಪಿಸಿಹ ಮಹದಾದಿ ತತ್ತ್ವದಿ ತತ್ಪತಿಗಳೊಳಗೆ

ಈ ಪುರುಷ ನಾಮಕನ ಶುಭ ಸ್ವೇದಾಪಳು ಎನಿಸಿದ ರಮಾಂಬ

ತಾ ಬ್ರಹ್ಮಾಪರೋಕ್ಷಿಗಳು ಆದವರ ಲಿಂಗಾಂಗ ಕೆಡಿಸುವಳು//15//


ಐದು ಸಾವಿರ ನೂರಿಪ್ಪತ್ತೈದು ನಾರಾಯಣ ರೂಪವ ತಾ ಧರಿಸಿಕೊಂಡು

ಅನುದಿನದಿ ಆನಂದಮಯನೆನಿಪ

ಐದು ಲಕ್ಷದ ಮೇಲೆ ಎಂಭತ್ತೈದುಸಾವಿರ ನಾಲ್ಕು ಶತಗಳ

ಐದು ಕೋಶಾತ್ಮಕ ವಿರಿಂಚಾಡದೊಳು ತುಂಬಿಹನು//16//


 
ನೂರಾವೊಂದು ಸುರೂಪದಿಂ ಶಾಂತೀರಮಣ ತಾನು ಅನ್ನನೆನಿಪ

ಐನೂರ ಮೇಲೆ ಮೂರಧಿಕ ದಶ ಪ್ರಾಣಾಖ್ಯ ಪ್ರದ್ಯುಮ್ನ

ತೋರುತಿಹನು ಐವತ್ತೈದುಸಾವಿರ ವಿಕಾರ ಮನದೊಳು ಸಂಕರುಷಣ

ಐನೂರ ಚತುರಾಶೀತಿ ವಿಜ್ಞಾನಾತ್ಮ ವಿಶ್ವಾಖ್ಯ//17//


 
ಮೂರು ಸಾವಿರದ ಅರ್ಧಶತ ಮೇಲೆ ಈರು ಅಧಿಕ ರೂಪಗಳ ಧರಿಸಿ

ಶರೀರದೊಳಗೆ ಆನಂದಮಯ ನಾಯಾಯಣಾಹ್ವಯನು

ಈರೆರೆಡು ಸಾವಿರದ ಮೇಲೆ ಮುನ್ನೂರ ಐದು ಸುರೂಪದಿಂದಲಿ

ಭಾರತೀಶನೊಳು ಇಪ್ಪ ನವನೀತಸ್ಥ ಘೃತದಂತೆ//18//


 
ಮೂರಧಿಕ ಐವತ್ತು ಪ್ರಾಣ ಶರೀರದೊಳಗೆ ಅನಿರುದ್ಧನು ಇಪ್ಪ

ಐನೂರು ಹನ್ನೊಂದು ಅಧಿಕ ಅಪಾನನೊಳು ಇಪ್ಪ ಪ್ರದ್ಯುಮ್ನ

ಮೂರನೇ ವ್ಯಾನನೊಳಗೆ ಐದರೆ ನೂರು ರೂಪದಿ ಸಂಕರುಷಣ

ಐನೂರ ಮೂವತ್ತೈದು ಉದಾನನೊಳು ಇಪ್ಪ ಮಾಯೇಶ//19//

ಮೂಲ ನಾರಾಯಣನು ಐವತ್ತೇಳಧಿಕ ಐನೂರು ರೂಪವ ತಾಳಿ

ಸರ್ವತ್ರದಿ ಸಮಾನನೊಳಿಪ್ಪ ಸರ್ವಜ್ಞ

ಲೀಲೆಗೈವನು ಸಾವಿರದ ಮೇಲೆ ಏಳು ನೂರು ಹನ್ನೊಂದು ರೂಪವ ತಾಳಿ

ಪಂಚಪ್ರಾಣರೊಳು ಲೋಕಗಳ ಸಲಹುವನು//20//


 
ತ್ರಿನವತಿ ಸುರೂಪಾತ್ಮಕ ಅನಿರುದ್ಧನು ಸದಾ ಯಜಮಾನನಾಗಿದ್ದು

ಅನಲ ಯಮ ಸೋಮಾದಿ ಪಿತೃದೇವತೆಗಳಿಗೆ ಅನ್ನನು ಎನಿಪನು

ಆ ಪ್ರದ್ಯುಮ್ನ ಸಂಕರುಷಣ ವಿಭಾಗವ ಮಾಡಿಕೊಟ್ಟು ಉಂಡುಣಿಪ

ನಿತ್ಯಾನಂದ ಭೋಜನದಾಯಿ ತುರ್ಯಾಹ್ವ//21//


 
ಷಣ್ಣವತಿ ನಾಮಕನು ವಸು ಮೂಗಣ್ಣ ಭಾಸ್ಕರರ ಒಳಗೆ ನಿಂತು

ಪ್ರಾಪನ್ನರು ಅನುದಿನ ನಿಷ್ಕಪಟ ಸದ್ಭಕ್ತಿಯಲಿ ಮಾಳ್ಪ ಪುಣ್ಯ ಕರ್ಮವ ಸ್ವೀಕರಿಸಿ

ಕಾರುಣ್ಯ ಸಾಗರನು ಆ ಪಿತೃಗಳಿಗೆ

ಅಗಣ್ಯ ಸುಖವಿತ್ತು ಅವರ ಪೊರೆವನು ಎಲ್ಲ ಕಾಲದಲಿ//22//


 
ಸುತಪ ಏಕ ಉತ್ತರ ಸುಪಂಚಾಶತ ವರಣ ಕರಣದಿ ಚತುರ ವಿಂಶತಿ ಸುತತ್ವದಿ

ಧಾತುಗಳೊಳು ಇದ್ದು ಅವಿರತ ಅನಿರುದ್ಧ

ಜತನ ಮಾಳ್ಪನು ಜಗದಿ ಜೀವ ಪ್ರತತಿಗಳ

ಷಣ್ಣವತಿ ನಾಮಕ ಚತುರ ಮೂರ್ತಿಗಳ ಅರ್ಚಿಸುವರು ಅದರಿಂದ ಬಲ್ಲವರು//23//


ಅಬುಜಾಂಡ ಉದರನು ವಿಪಿನದಿ ಶಬರಿ ಯಂಜಲನುಂಡ ಗೋಕುಲದ ಅಬಲೆಯರನು

ಓಲಿಸಿದನು ಋಷಿಪತ್ನಿಯರು ಕೊಟ್ಟನ್ನ ಸುಭುಜ ತಾ ಭುಂಜಿಸಿದ

ಸ್ವರಮಣ ಕುಬುಜಗಂಧಕೊಲಿದ ಮುನಿಗಣ ವಿಬುಧ ಸೇವಿತ

ಬಿಡುವನೆ ನಾವು ಇತ್ತ ಕರ್ಮಫಲ//24//


 
ಗಣನೆಯಿಲ್ಲದ ಪರಮಸುಖ ಸುದ್ಗುಣ ಗಣಂಗಳ ಲೇಶ ಲೇಶಕೆ ಎಣೆಯೆನಿಸದು

ರಮಾಬ್ಜಭವ ಶಕ್ರಾದಿಗಳ ಸುಖವು

ಉಣುತ ಉಣುತ ಮೈಮರೆದು ಕೃಷ್ಣಾರ್ಪಣವೆನಲು

ಕೈಕೊಂಬನು ಅರ್ಭಕ ಜನನಿ ಭೋಜನ ಸಮಯದಲಿ ಕೈವಡ್ದು ವಂದದಲಿ//25//


 
ಜೀವಕೃತ ಕರ್ಮಗಳ ಬಿಡದೆ ರಮಾವರನು ಸ್ವೀಕರಿಸಿ

ಫಲಗಳನು ಈವನು ಅಧಿಕಾರಾನುಸಾರದಲಿ ಅವರಿಗೆ ಅನವರತ

ಪಾವಕನು ಸರ್ವಸ್ವ ಭುಂಜಿಸಿ ತಾ ವಿಕಾರವನು ಐದನು ಒಮ್ಮೆಗೆ

ಪಾವನಕೆ ಪಾವನನೆನಿಪ ಹರಿಯುಂಬುದು ಎನರಿದು//26//


ಕಳುಷಜಿಹ್ವೆಗೆ ಸುಷ್ಟುಭೋಜನ ಜಲ ಮೊದಲು ವಿಷತೋರುವುದು

ನಿಷ್ಕಲುಷ ಜಿಹ್ವೆಗೆ ಸುರಸ ತೋರುವುದು ಎಲ್ಲ ಕಾಲದಲಿ

ಸುಲಲಿತಾಂಗಗೆ ಸಕಲ ರಸ ಮಂಗಳವೆನಿಸುತಿಹುದು

ಅನ್ನಮಯ ಕೈಕೊಳದೆ ಬಿಡುವನೆ ಪೂತನಿಯ ವಿಷ ಮೊಲೆಯನು ಉಂಡವನು//27//


ಪೇಳಲಿ ಏನು ಸಮೀರ ದೇವನು ಕಾಳಕೂಟವನು ಉಂಡು ಲೋಕವ ಪಾಲಿಸಿದ

ತದ್ದಾಸನು ಓರ್ವನು ಅಮೃತನೆನಿಸಿದನು

ಶ್ರೀ ಲಕುಮಿವಲ್ಲಭ ಶುಭಾಶುಭ ಜಾಲ ಕರ್ಮಗಳ ಉಂಬನು

ಉಪಚಯದ ಏಳಿಗೆಗಳು ಇವಗಿಲ್ಲವೆಂದಿಗು ಸ್ವರಸಗಳ ಬಿಟ್ಟು//28//


ಈ ಪರಿಯಲಿ ಅಚ್ಯುತನ ತತ್ತದ್ರೂಪ ತನ್ನಾಮಗಳ ಸಲೆ

ನಾನಾ ಪದಾರ್ಥದಿ ನೆನೆನೆನೆದು ಭುಂಜಿಸುತಲಿ ಇರು ವಿಷಯ

ಪ್ರಾಪಕ ಸ್ಥಾಪಕ ನಿಯಾಮಕ ವ್ಯಾಪಕನು ಎಂದರಿದು

ನೀ ನಿರ್ಲೇಪನು ಆಗಿರು ಪುಣ್ಯ ಪಾಪಗಳ ಅರ್ಪಿಸು ಅವನ ಅಡಿಗೆ//29//


ಐದು ಲಕ್ಷ ಎಂಭತ್ತರ ಒಂಭತ್ತು ಆದ ಸಾವಿರದ ಏಳುನೂರರ ಐದು ರೂಪವ ಧರಿಸಿ

ಭೋಕ್ತ್ರುಗ ಭೋಜ್ಯನೆಂದೆನಿಸಿ

ಶ್ರೀಧರಾದುರ್ಗಾರಮಣ ಪಾದಾದಿ ಶಿರ ಪರ್ಯಂತ ವ್ಯಾಪಿಸಿ ಕಾದು ಕೊಂಡಿಹ

ಸಂತತ ಜಗನ್ನಾಥ ವಿಠಲನು//30//


//ಇತಿ ಶ್ರೀ ಭೋಜನ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು

No comments:

Post a Comment