Friday, November 1, 2013

ನರಕ ಚತುರ್ದಶಿ

ಭೂದೇವಿ ಮತ್ತು ವರಾಹದೇವರಲ್ಲಿ ಹುಟ್ಟಿದವನೇ ನರಕಾಸುರ. ನರಕಾಸುರ ಪ್ರಗ್ಜೋತಿಷ ನಗರದ ರಾಜನಾದ ಘಾತಕಾಸುರನನ್ನು ಸೋಲಿಸಿ ಆ ರಾಜ್ಯದ ಅಧಿಪತಿಯಾಗಿದ್ದ. ಮುರಾಸುರ ಎಂಬ ಅಸುರನ ಜೊತೆ ಸೇರಿ ನರಕಾಸುರ ಇಡೀ ಭೂಮಂಡಲವನ್ನು ತನ್ನ ಅಧೀನದಲ್ಲಿ ಇರಿಸಿಕೊಂಡಿದ್ದ. ತ್ರಿಲೋಕದಲ್ಲೂ ತನ್ನ ಆಧಿಪತ್ಯವನ್ನು ಸಾಧಿಸಲು ಸ್ವರ್ಗಲೋಕಕ್ಕೆ ದಾಳಿ ಮಾಡಿ ಇಂದ್ರನ ಮೇಲೆ ಹಲ್ಲೆ ಮಾಡಲು ಮುಂದಾದ. ಈ ದಾಳಿಯಿಂದ ಕಂಗೆಟ್ಟ ದೇವೇಂದ್ರ ಸ್ವರ್ಗಲೋಕವನ್ನು ಬಿಟ್ಟು ಬಂದ.

ನರಕಾಸುರ ೧೬,೧೦೦ ಗೋಪಿಕಾ ಸ್ತ್ರೀಯರನ್ನು (ಅಸಲಿಗೆ ಈ ೧೬,೧೦೦ ಜನ ಅಗ್ನಿಯ ಮಕ್ಕಳು, ಶ್ರೀ ಕೃಷ್ಣನನ್ನು ಮದುವೆ ಆಗಲು ಸ್ತ್ರೀ ಜನ್ಮ ಪಡೆದಿದ್ದರು) ಅಪಹರಿಸಿ ಬಂಧಿಸಿಟ್ಟಿದ್ದನು. ಇಂದ್ರನ ಮುಂದಾಳತ್ವದಲ್ಲಿ ಎಲ್ಲ ದೇವರುಗಳು ನರಕಾಸುರನ ಹಾವಳಿಯಿಂದ ಕಾಪಾಡಲು ಶ್ರೀಹರಿಯ ಮೊರೆ ಹೊಕ್ಕರು.

ನರಕಾಸುರ ತನ್ನ ತಾಯಿಯಿಂದ ಬಿಟ್ಟು ಬೇರೆ ಯಾರಿಂದಲೂ ತನಗೆ ಸಾವು ಬರಬಾರದೆಂದು ವರವನು ಪಡೆದಿದ್ದನಾದ್ದರಿಂದ, ಶ್ರೀಕೃಷ್ಣ ತನ್ನ ಪತ್ನಿಯಾದ ಭೂದೇವಿಯ ಅವತಾರವಾದ ಸತ್ಯಭಾಮೆಯನ್ನು ಯುದ್ಧದಲ್ಲಿ ತನ್ನ ಸಾರಥಿಯಾಗಿರಬೇಕೆಂದು ಹೇಳಿದನು.

ಶ್ರೀಕೃಷ್ಣ ಸತ್ಯಭಾಮೆ ಸಮೇತನಾಗಿ ತನ್ನ ರಥ ಗರುಡದಲ್ಲಿ ಕುಳಿತು ನರಕಾಸುರನ ಅಕ್ಷೋಹಿಣಿ ಸೈನ್ಯವಿದ್ದ ಕೋಟೆಗೆ ದಾಳಿ ಇಟ್ಟನು.  ನರಕಾಸುರನ ಕೋಟೆಯನ್ನು ಐದು ತಲೆಯ ಮುರಾಸುರ ರಕ್ಷಿಸುತ್ತಿದ್ದನು. ಶ್ರೀ ಕೃಷ್ಣ ಆಗಮಿಸಿದ್ದನ್ನು ಕಂಡ ಮುರಾಸುರ ಕೃಷ್ಣನ ಮೇಲೆ ದಾಳಿ ಮಾಡಲು ಶುರು ಮಾಡಿದನು. ಶ್ರೀ ಕೃಷ್ಣ ತನ್ನ ಸುದರ್ಶನ ಚಕ್ರದಿಂದ ಮುರಾಸುರನ ಐದು ತಲೆಗಳನ್ನು ಕತ್ತರಿಸಿ ಸಂಹರಿಸಿದನು. ಅಂದಿನಿಂದ ಶ್ರೀ ಕೃಷ್ಣನಿಗೆ "ಮುರಾರಿ" ಎಂಬ ಹೆಸರು ಬಂದಿತು.

ನಂತರದಲ್ಲಿ ಶ್ರೀ ಕೃಷ್ಣ ಸತ್ಯಭಾಮೆ ಸಮೇತವಾಗಿ ನರಕಾಸುರನನ್ನೂ ಸಂಹರಿಸಿದನು. ನರಕಾಸುರ ಬಂಧಿಸಿಟ್ಟಿದ್ದ ೧೬,೧೦೦ ಗೋಪಿಕಾ ಸ್ತ್ರೀಯರ ಜೊತೆ ಉಳಿದವರನ್ನೂ ಅಲ್ಲಿಂದ ಬಂಧಮುಕ್ತಗೊಳಿಸಿದನು. ಈ ಸಂದರ್ಭದಲ್ಲಿ ಆ ಗೋಪಿಕಾಸ್ತ್ರೀಯರೆಲ್ಲ ಸೇರಿ ದೀಪವನ್ನು ಬೆಳಗಿ ಸಂಭ್ರಮವನ್ನು ಆಚರಿಸಿದರೆ ಉಳಿದ ಪ್ರಜೆಗಳು ಬಾಣ ಬಿರುಸುಗಳನ್ನು ಸಿಡಿಸಿ ನರಕಾಸುರನ ವಧೆಯನ್ನು ಸಂಭ್ರಮಿಸಿದರು. ನರಕಾಸುರ ಸಾಯುವ ಮುನ್ನ ನಾನು ಸಾಯುತ್ತಿರುವ ಈ ದಿನವನ್ನು ಮುಂದೆ ಎಲ್ಲರೂ ಸಂಭ್ರಮದಿಂದ ಆಚರಿಸಬೇಕೆಂದು ವರಕೋರಿದನು. ಅದರಂತೆಯೇ ನರಕಾಸುರನ ಸಂಹಾರವನ್ನು ನರಕ ಚತುರ್ದಶಿ ಎಂದು ಸಂಭ್ರಮಿಸಲಾಗುತ್ತಿದೆ.

ಇನ್ನು ಶ್ರೀಕೃಷ್ಣ ನರಕಾಸುರನನ್ನು ಸಂಹರಿಸುವಾಗ ಆತನ ರಕ್ತ ತನ್ನ ಮೈಗೆ ಅಂಟಬಾರದೆಂದು ಮೈಗೆ ಎಣ್ಣೆಯನ್ನು ಹಚ್ಚಿಕೊಂಡು ಯುದ್ಧ ಮಾಡಿದ್ದರಿಂದ ನಾವೂ ಸಹ ಯಾವುದೇ ದೋಷಗಳೂ ಅಂಟಬಾರದೆಂದು ಈ ದಿನ ತೈಲಾಭ್ಯಂಜನವನ್ನು ಮಾಡುವುದು ಪ್ರತೀತಿ.

ಸರ್ವರಿಗೂ ನರಕ ಚತುರ್ದಶಿಯ ಶುಭಾಶಯಗಳು .

No comments:

Post a Comment