Thursday, March 14, 2013

ರಾಘವೇಂದ್ರ ವಿಜಯ - ಷಷ್ಟಮ ಸಂಧಿ

ಷಷ್ಟಮ ಸಂಧಿ



ರಾಘವೇಂದ್ರರ ವಿಜಯ ಪೇಳುವೆ

ರಾಘವೇಂದ್ರರ ಕರುಣ ಬಲದಲಿ

ರಾಘವೇಂದ್ರರ ಭಕುತರಾದವರಿದನು ಕೇಳುವುದು//



ನತಿಪಜನತತಿಗಮರಪಾದಪ

ನುತಿಪಜನರಸುರಧೇನು ಕಾಮಿತ

ಸತತ ನೀಡುತ ಧರಣಿಸುರವರನಿಕರ ಪರಿಪಾಲ

ಪ್ರತಿಯುಕಾಣೆನೋ ವ್ರತಿಗಳರಸನೆ

ನತಿಪೆ ತವಪದಕಮಲಯುಗ್ಮಕೆ

ತುತಿಪೆ ಎನ್ನನು ಪೊರೆಯೋ ಗುರುವರ ಪತಿತಪಾವನನೆ//೧//



ಆವ ಪಂಪಾಕ್ಷೇತ್ರದಲಿ ಹರಿ

ಶೇವಕಾಗ್ರಣಿ ವ್ಯಾಸಮುನಿಯೂ

ಕಾವನಯ್ಯನ ಸತತ ಭಜಿಸುತ ವಾಸಮಾಡಿರಲು

ದೇವವರ್ಯರೆ ಒಂದುರೂಪದಿ

ತಾವೇ ಭೂತಳದಲ್ಲಿ ಜನಿಸುತ

ಕೋವಿದಾಗ್ರೇಸರರು ಎನಿಸೀ ಮೆರೆದರಾ ಸ್ಥಳದಿ//೨//



ನಾರದರೆ ತಾ ಶ್ರೀಪುರಂದರ

ಸೂರಿತನಯನೆ ಕನಕ ತಾ

ಜಂಭಾರಿಯೇ ವೈಕುಂಠದಾಸರು ವ್ಯಾಸ ಪ್ರಹ್ಲಾದ

ಈರು ಎರಡೀ ಜನರು ಸರ್ವದ

ಮಾರನಯ್ಯನ ಪ್ರೇಮಪಾತ್ರರು

ಸೇರಿ ಇರುವುದರಿಂದೆ ಪಂಪಾ ನಾಕಕಿನ್ನಧಿಕ//೩//



ವ್ಯಾಸರಾಯರ ಮಠದ ಮಧ್ಯದಿ

ವಾಸಮಾಡಲು ಸಕಲ ದ್ವಿಜರೂ

ದಾಸರಾಗಿಹ ಸರ್ವರಿಂದಲಿ ಸಭೆಯು ಶೋಭಿಸಿತು

ವಾಸವನ ಶುಭಸಭೆಯೋ ಮೇಣ್ಕಮಲಾಸನನ

ಸಿರಿವೈಜಯಂತಿಯೋ

ಭಾಷಿಸುವರಿಗೆ ತೋರದಂದದಿ ಸಭೆಯು ತಾನೊಪ್ಪೆ//೪//



ಪಂಪಕ್ಷೇತ್ರವು ದಾಸವರ್ಯರ

ಗುಂಪಿನಿಂದ ಸಮೇತವಾಗಿ

ಶಂಫಲಾಪುರದಂತೆ ತೋರ್ಪದು ಸುಜನಮಂಡಲಕೆ

ತಂಪುತುಂಗಾನದಿಯವನ ತಾ

ಸೊಂಪಿನಿಂದಲಿ ಸರ್ವಜನಮನ

ಕಿಂಪುಗಾಣಿಸಿ ಸರ್ವಸಂಪದದಿಂದ ಶೋಭಿಪುದು//೫//



ಒಂದುದಿನದಲಿ ವ್ಯಾಸಮುನಿಯು

ಪುರಂದರಾರ್ಯರು ಒಂದುಗೂಡಿ

ಬಂದುಸೇರ್ದರು ಸುಖವನುಣಲೂ ವಿಜಯವಿಠಲನ್ನ

ಮಂದಿರಕೆ ಬಲಸಾರೆಯಿರುತಿಹದೊಂದು

ಸುಂದರಪುಲಿನಮಧ್ಯದಿ

ಅಂದು ಹರಿಯಪರೋಕ್ಷವಾರಿಧಿಯೊಳಗೆ ಮುಳುಗಿದರು//೬//



ಬಂದನಲ್ಲಿಗೆ ಕುರುಬನೊಬ್ಬನು

ತಂದ ಕುರಿಗಳ ಬಿಟ್ಟುದೂರದಿ

ನಿಂದು ನೋಡಿದ ಇವರ ಚರ್ಯವ ಕನಕನಿಲ್ಲದಲೆ

ಮಂದಹಾಸವು ಕೆಲವುಕಾಲದಿ

ಮಂದರಾಗೊರು ಕೆಲವುಕಾಲದಿ

ಪೊಂದಿಯಿಬ್ಬರು ಅಪ್ಪಿಕೊಂಡೋ ಮುದದಿ ರೋದಿಪರೋ//೭//



ಬಿದ್ದು ಪುಲಿನದಿ ಪೊರಳಿ ಹೊರಳೊರು

ಎದ್ದು ಕುಣಿಕುಣಿದಾಡಿ ಚೀರೊರು

ಮುದ್ದು ಕೃಷ್ಣನ ತೋರಿತೋರುತ ತಾವು ಪಾಡುವರೋ

ಶಿದ್ಧಸಾಧನ ಕನಕ ಸಮಯಕೆ

ಇದ್ದರಿಲ್ಲೀ ಲಾಭವಾಗೊದು

ಇದ್ದಸ್ಥಾನಕ್ಕೆ ಪೋಗಿ ಆತನ ಕರಿವೊರಾರಿಲ್ಲಾ//೮//



ಸುದ್ದಿ ಕೇಳುತ ನಿಂತ ಕುರುಬನು

ಎದ್ದು ಕನಕನ ಕರೆದು ತೋರುವೆ

ಇದ್ದ ಸ್ಥಳವನು ಪೇಳಿರೆಂದಾ ಮುನಿಗೆ ಬೆಸಗೊಂಡಾ

ಎದ್ದು ನಡದಾನದಿಯ ತೀರದಲಿದ್ದ

ಕನಕನ ಬೇಗ ಕರೆದೂ

ತಂದು ತೋರುತ ವ್ಯಾಸಮುನಿಗೆ ಬಿದ್ದು ಬೇಡಿದನು//೯//



ದಾರಿ ಮಧ್ಯದಿ ತನಗೆ ಕನಕನು

ತೋರಿ ಪೇಳಿದ ತೆರದಿ ಕುರುಬನು

ಸಾರೆಗರೆದೂ ಬೇಡಿಕೊಂಡನು ಲಾಭ ಕೂಡಿರೆಂದು

ಧೀರಮುನಿವರ ದಾಸವರರೆ

ವಿಚಾರಮಾಡಿರಿ ಏನು ನೀಡಲಿ

ತೋರವಲ್ಲದು ಪರಿಯ ನೀವೇ ಪೇಳಿರೆಮಗೆಂದ//೧೦//



ಕನಕ ಪೇಳಿದ ಕೊಟ್ಟವಚನವು

ಮನದಿ ಯೋಚಿಸಿ ಕೊಡುವದವಗೆ

ಅನುಜನಾತನು ನಿಮಗೆ ತಿಳಿವದು ಚಿಂತೆಯಾಕದಕೆ

ಎನಲು ಮುನಿವರ ಮನದಿ ತಿಳಿದೂ

ಜನಿತವಾದಾನಂದಲಾಭವ

ಮನಸುಪೂರ್ವಕಯಿತ್ತು ಕರುಣವ ಮಾಡಿ ತಾ ಪೊರೆದ//೧೧//



ಜ್ಞಾನಿಗಳು ತಾವಂಗಿಕರಿಸಲು

ಹೀನಕೆಲಸಗಳಾದ ಕಾಲಕು

ಏನು ಶ್ರಮವದರಿಂದ ಬಂದರು ಬಿಡದೆ ಪಾಲಿಪರು

ಸಾನುರಾಗದಿ ಸಕಲಜನರಭಿ-

ಮಾನಪೂರ್ವಕ ಪೊರೆದು ಭಕ್ತಿ-

ಜ್ಞಾನವಿತ್ತೂ ಹರಿಯ ಲೋಕದಿ ಸುಖವ ಬಡಿಸುವರು//೧೨//



ತೀರ್ಥಸ್ನಾನವ ಮಾಡಿ ತಾವಾ

ತೀರ್ಥಶುದ್ಧಿಯ ಮಾಡೊರಲ್ಲದೆ

ತೀರ್ಥಸ್ನಾನಗಳಿಂದಲವರಿಗೆ ಏನು ಫಲವಿಲ್ಲಾ

ಪಾರ್ಥಸಾರಥಿಪಾದ ಮನದಲಿ

ಸ್ವಾರ್ಥವಿಲ್ಲದೆ ಭಜನೆಗೈದು

ಕ್ರುತಾರ್ಥರಾಗೀ ಜಗದಿ ಚರಿಪರು ಸತತ ನಿರ್ಭಯದಿ//೧೩//



ಬುಧರ ದರುಶನದಿಂದ ಪಾತಕ

ಸದದು ಭಾಷಣದಿಂದ ಮುಕುತಿಯ

ಪದದ ದಾರಿಯ ತೋರಿ ಕೊಡುವರು ಸದನದೊಳಗಿರಲು

ಒದಗಿಸುವರು ಭಾಗ್ಯ ಜನರಿಗೆ

ಮದವು ಏರಿದ ಗಜದ ತೆರದಲಿ

ಪದುಮನಾಭನ ದಾಸರವರಿಗಸಾಧ್ಯವೇನಿಹುದೋ//೧೪//



ಯತಿಕುಲೋತ್ತಮ ವ್ಯಾಸರಾಯರ

ಮಿತಿಯುಯಿಲ್ಲದ ಮಹಿಮೆಯಿಂದಲಿ

ಪತಿತಪಾಮರರೆಲ್ಲ ಉಧೃತರಾದುದೇನರಿದು

ಸತತ ಬಿಂಬೋಪಾಸನೋಚ್ಚ್ರಿತ

ವಿತತಜ್ಞಾನದ ವಿಭವದಿಂದಲಿ

ಪ್ರತಿಯುಯಿಲ್ಲದೆ ತಾನು ರಾಜಿಪ ಸೂರ್ಯನಂದದಲಿ//೧೫//



ಮೋದತೀರ್ಥರ ಶಾಸ್ತ್ರಜಲಧಿಗೆ

ಮೋದದಾಯಕ ಸೋಮನೋ

ಪರವಾದಿವಾರಿಜಹಂಸ ಚಂದಿರ ಸ್ವಮತ ಸತ್ಕುಮುದಕಾದ

ತಾ ನಿಜ ಸುಜನ ಕೈರವ

ಬೋಧಕರ ತಾ ಚಂದ್ರಮಂಡಲ

ಪಾದಸೇವಕರೆನಿಪ ಸುಜನ ಚಕೋರ ಚಂದ್ರಮನೋ//೧೬//



ಹರಿಯರೂಪ ಸಮಾದಿಯೋಗದಿ

ನಿರುತಕಾಣುತಲಿಪ್ಪ ಗುರುವರ

ಹೊರಗೆ ಕಾಣುವನೆಂಬ ಕಾರಣ ಕನಕಗಿನಿತೆಂದಾ

ಚರನ ತೆರದಲಿ ನಿನ್ನ ಸಂಗಡ

ತಿರುಗುತಿಪ್ಪನು ಸರ್ವಕಾಳದಿ

ಸಿರಿಯರಮಣನ ಎನಗೆ ತೋರಿಸು ಮರಿಯ ಬೇಡೆ೦ಡಾ//೧೭//



ಅಂದ ಮುನಿವರ ವಚನ ಮನಸಿಗೆ

ತಂದು ಕನಕನು ಹರಿಗೆ ಪೇಳಿದ

ಒಂದು ಕಾಲದಿ ಮುನಿಗೆ ದರುಶನ ನೀಡು ಜಗದೀಶಾ

ಇಂದಿರಾಪತಿ ಕೇಳಿ ವಚನವ

ಮಂದಹಾಸವ ಮಾಡಿ ನುಡಿದನು

ಬಂದು ಶ್ವಾನಸ್ವರೂಪದಿಂದಲಿ ಮುನಿಗೆ ತೋರುವೆನು//೧೮//



ದೇವತಾರ್ಚನೆ ಮಾಡಿ ಗುರುವರ

ಸಾವಧಾನದಿ ಭಕ್ಷ ಭೋಜ್ಯವ

ಕಾವನಯ್ಯಗೆ ನೀಡೋಕಾಲದಿ ಶ್ವಾನ ಬರಲಾಗ

ಕೋವಿದಾಗ್ರಣಿ ವ್ಯಾಸಮುನಿಯು

ಭಾವಿಶ್ಯಾಗಲೆ ಹರಿಯ ಮಹಿಮೆಯ

ದೇವದೇವನೆ ಈ ವಿಧಾನದಿ ತೋರ್ದ ತನಗೆಂದು//೧೯//



ದೃಷ್ಟಿಯಿಂದಲಿ ಕಂಡು ಮುನಿವರ

ಥಟ್ಟನೆದುಕುಲತಿಲಕಕೃಷ್ಣನ

ಬಿಟ್ಟು ತಾ ಜದಮೂರ್ತಿ ಪೂಜೆಯ ಶುನಕದರ್ಚನೆಯಾ

ಮುಟ್ಟಿ ಭಜಿಸಿದ ಭಕುತಿಯಿಂದಲಿ

ಕೊಟ್ಟ ತಾ ನೈವೇದ್ಯ ತ್ವರದಲಿ

ತಟ್ಟಿಮಂಗಳದಾರ್ತಿಮಾಡಿ ಶಿರದಿ ನಮಿಸಿದನು//೨೦//



ಅಲ್ಲಿ ದ್ವಿಜವರರಿದನು ನೋಡೀ

ಎಲ್ಲಿಯಿಲ್ಲದೆ ಚರಿಯ ಯತಿವರರಲ್ಲಿ

ನಡೆಯಿತುಯಿನ್ನುಮುಂದೆ ಮಡಿಯು ಮೈಲಿಗೆಯು

ಇಲ್ಲದಾಯಿತು ನಾಯಿಪೂಜೆಯು

ಎಲ್ಲ ಜನರಿಗೆ ಮತವು ಎನಿಪದು

ಖುಲ್ಲ ಕನಕನ ಮಾತಿಗೀಯತಿ ಮರಳುಗೊಂಡಿಹನು//೨೧//



ಈ ತೆರದಿ ತಾವೆಲ್ಲ ವಿಬುಧರು

ಮಾತನಾಡಿದರೆಂಬೋ ವಾರ್ತೆಯ

ದೂತಪರಿಮುಖದಿಂದ ಕೇಳಿ ವ್ಯಾಸಮುನಿರಾಯ

ನೀತವಾದಪರೋಕ್ಷದಿಂದಲಿ

ಜಾತಜ್ಞಾನದಿ ಹರಿಯ ರೂಪವ

ಸೋತ್ತುಮಾದ್ವಿಜರೊಳಗೆ ಓರ್ವಗೆ ತೋರಿ ಮೋದಿಸಿದ//೨೨//



ಸರ್ವಜನರಿಗೆ ಸಮ್ಮತಾಯಿತು

ಗುರುವರೇಣ್ಯನ ಮಹಿಮೆ ಪೊಗಳುತ

ಊರ್ವಿತಳದಲಿ ಖ್ಯಾತಿ ಮಾಡ್ದರು ಸರ್ವಸಜ್ಜನರು

ಶರ್ವನಾಲಯದಲ್ಲಿ ಸೂರ್ಯನ

ಪರ್ವಕಾಲದಿ ವಿಪ್ರಪುತ್ರನ

ದರ್ವಿಸರ್ಪವು ಕಚ್ಚಲಾಕ್ಷಣ ಮೃತಿಯನೈದಿದನು//೨೩//



ಮೃತಿಯನೈದಿದ ವಿಪ್ರಪುತ್ರನ

ಮೃತಿಯ ತಾ ಪರಿಹರಿಸಿ ಶೀಘ್ರದಿ

ಪಿತಗೆ ನೀಡಿದ ಸರ್ವಜನರೂ ನೋಡುತಿರಲಾಗಾ

ವ್ರತಿವರೋತ್ತಮಮಹಿಮೆ ಜಗದೊಳ-

ಗತುಳವೆನುತಲಿ ಮುನಿಯ ಗುಣಗಳ

ತುತಿಸಿ ಪೊಗಳುತ ಪಾದಕಮಲಕೆ ನಮನ ಮಾಡಿದರು//೨೪//



ವಿದ್ಯಾರಣ್ಯನ ವಾದದಲಿ ತಾ

ಗೆದ್ದ ಶ್ರೀ ಜೈತೀರ್ಥವಿರಚಿತ

ಶುದ್ಧ ಶ್ರೀಮನ್ಯಾಯಸತ್ಸುಧನಾಮಸತ್ಕೃತಿಗೆ

ಎದ್ದುತೋರುವ ಚಂದ್ರಿಕಾಭಿಧ

ಮುದ್ದು ಟಿಪ್ಪಣಿಸಹಿತ ಪಾಠವ

ಮಧ್ವರಾಯರ ಬಳಿಯೆ ಪೇಳುತಲಿದ್ದನಾಸ್ಥಳದಿ//೨೫//



ಮತ್ತೆ ಪಂಪಾಕ್ಷೇತ್ರದಲಿ ತಾ

ನಿತ್ಯನಿತ್ಯದಿ ಹರಿಯ ಭಜಿಸುತ

ಸತ್ಯಸಂಕಲ್ಪಾನುಸಾರದಿ ಕೃತ್ಯ ತಾ ಮಾಡಿ

ಉತ್ತಮೋತ್ತಮವೆನಿಪ ಸ್ಥಾನವು

ಹತ್ತಲಿಹ ಗಜಗಹ್ವರಾಭಿಧ

ಎತ್ತನೋಡಲು ತುಂಗನದಿಯುಂಟದರ ಮಧ್ಯದಲಿ//೨೬//



ಛಂದಯಿಪ್ಪದು ನೋಡಿ ಮುನಿವರ

ಬಂದು ತುಂಗಾನದಿಯ ಜಲದಲಿ

ಮಿಂದು ಪುಂಡ್ರವ ಧರಿಸಿ ಜಪತಪನೇಮಕರ್ಮಗಳ

ಒಂದು ಬಿದದಲೇ ಮಾಡಿ ಹೃದಯದಿ

ಇಂದಿರೇಶನ ಪೂಜೆಗೈದೂ

ಪೊಂದಿಶ್ಯಾತನ ಪದದಿ ಮನವನು ಸಾರ್ದವೈಕುಂಠ//೨೭//



ಇಂದಿಗಿರುತಿಹವಲ್ಲಿ ಶುಭನವ

ಛಂದಬೃಂದಾವನಗಳೊಳಗೆ

ಸುಂದರಾತ್ಮಕವಾದ ವೃಂದಾವನದಿ ಮುನಿರಾಯಾ

ಪೊಂದಿಯಿಪ್ಪನು ಸತತ ತನ್ನನು

ವಂದಿಸೀಪರಿ ಭಜಿಪ ಜನರಿಗೆ

ಕುಂದದಲೆ ಸರ್ವಾರ್ಥ ಕೊಡುತಲಿಪ್ಪ ನಮ್ಮಪ್ಪ//೨೮//



ವ್ಯಾಸರಾಯರ ಮಹಿಮೆ ದಿನದಿನ

ಬ್ಯಾಸರಿಲ್ಲದೆ ಪಠಿಪ ಜನರಿಗೆ

ಕ್ಲೇಶ ದೇಹಾಯಾಸ ಘನತರ ದೋಷ ಸಮನಿಸವು

ವಾಸುದೇವನ ಕರುಣವವನಲಿ

ಸೂಸಿತುಳಕೊದು ಸಂಶಯಾತಕೆ

ಕೀಶಗುರುಜಗನ್ನಾಥ ವಿಠಲನು ಪ್ರೀತನಾಗುವನು//೨೯//



//ಇತಿ ಶ್ರೀ ರಾಘವೇಂದ್ರ ವಿಜಯ ಷಷ್ಟಮ ಸಂಧಿ ಸಮಾಪ್ತಂ//



No comments:

Post a Comment