Thursday, September 25, 2014

ತಿರುಮಲ ತಿರುಪತಿ ಬ್ರಹ್ಮೋತ್ಸವ (ಅಂಕುರಾರ್ಪಣ ಮತ್ತು ಸೇನಾಧಿಪತಿ ಉತ್ಸವ)

ತಿರುಮಲ ತಿರುಪತಿ ಬ್ರಹ್ಮೋತ್ಸವ (ಅಂಕುರಾರ್ಪಣ ಮತ್ತು ಸೇನಾಧಿಪತಿ ಉತ್ಸವ)

ತಿರುಮಲದ ಆನಂದ ನಿಲಯದಲ್ಲಿ ನೆಲೆಸಿರುವ ಬ್ರಹ್ಮಾಂಡ ನಾಯಕನಾದ ಶ್ರೀ ಶ್ರೀನಿವಾಸನ ವಾರ್ಷಿಕ ಬ್ರಹ್ಮೋತ್ಸವ ಇದೇ ಆಶ್ವಯುಜ ಮಾಸದ ಪಾಡ್ಯ ಅಂದರೆ ೨೫ನೇ ತಾರೀಖಿನಿಂದ ಆರಂಭವಾಗಲಿದೆ. ಶ್ರೀನಿವಾಸನ ಬ್ರಹ್ಮೋತ್ಸವದ ಇತಿಹಾಸ ನೋಡಿದರೆ ಕಲಿಯುಗದ ಪ್ರಾರಂಭದಲ್ಲಿ ಶ್ರೀ ಮಹಾವಿಷ್ಣುವು ಸೌರಮಾನದ ಶ್ರವಣ ನಕ್ಷತ್ರದಂದು ತಿರುಮಲದಲ್ಲಿ ಅವತಾರ ತಾಳಿದನು. ಈ ಸುದಿನವನ್ನು ಸೃಷ್ಟಿಕರ್ತನಾದ ಬ್ರಹ್ಮದೇವನು ಚಿತ್ತ ನಕ್ಷತ್ರದಂದು ಧ್ವಜಾರೋಹಣ ಮಾಡುವ ಮೂಲಕ ಮಹೋತ್ಸವಕ್ಕೆ ಚಾಲನೆ ನೀಡಿದರು ನಂತರ ಒಂಭತ್ತು ದಿನಗಳ ಕಾಲ ನಿರಂತರ ಉತ್ಸವಗಳನ್ನು ಮಾಡಿ ಕಡೆಯದಾಗಿ ಆವರ್ಭೂತವನ್ನು ಮಾಡಿ ಮಹೋತ್ಸವಕ್ಕೆ ತೆರೆ ಎಳೆದರು. ಅಂದಿನಿಂದ ಇಂದಿನವರೆಗೂ ನಿರಂತರವಾಗಿ ಈ ಉತ್ಸವ ನಡೆದುಕೊಂಡು ಬಂದಿದೆ. ಬ್ರಹ್ಮದೇವರು ನಡೆಸಿದ ಉತ್ಸವ ಆದ್ದರಿಂದ ಈ ಉತ್ಸವಕ್ಕೆ ಬ್ರಹ್ಮೋತ್ಸವ ಎಂದೇ ಕರೆಯುತ್ತಾರೆ.

ಬ್ರಹ್ಮೋತ್ಸವದ ಕಾರ್ಯಕ್ರಮಗಳು ಶುರುವಾಗುವುದು ಆಲಯ ಶುದ್ಧಿ ಕಾರ್ಯಕ್ರಮದಿಂದ. ಮಂಗಳವಾರದಂದು ಗರ್ಭಗುಡಿ ಮತ್ತು ಇತರ ಆಲಯಗಳನ್ನು ಗಂಧ,ಕರ್ಪೂರ,ಕೇಸರಿ ಇನ್ನಿತರ ಪದಾರ್ಥಗಳಿಂದ ಸ್ವಚ್ಛಗೊಳಿಸುತ್ತಾರೆ.ಈ ವಿಧಿಗೆ ಕೋವಿಲ್ ಆಳ್ವಾರ್ ತಿರುಮಂಜನಂ ಎಂದು ಕರೆಯುತ್ತಾರೆ.  ಧ್ವಜಾರೋಹಣದ ಮುನ್ನಾದಿನ ಅಂಕುರಾರ್ಪಣ ವಿಧಿಯನ್ನು ನೆರವೇರಿಸುತ್ತಾರೆ.  ಈ ವಿಧಿಯಲ್ಲಿ ಮೊದಲು ವಿಶ್ವಕ್ಸೇನ (ವಿಷ್ಣುವಿನ ಸೈನ್ಯದ ಸೇನಾಧಿಪತಿ) ರ ಜೊತೆ, ಅನಂತ, ಗರುಡ ಮತ್ತು ಸುದರ್ಶನರನ್ನು ವಸಂತ ಮಂಟಪಕ್ಕೆ ಮೆರವಣಿಗೆಯಲ್ಲಿ ಭೂಸೂಕ್ತ, ಇನ್ನಿತರ ಮಂತ್ರಗಳನ್ನು ಪಠಿಸುತ್ತಾ ಕರೆದು ತರುತ್ತಾರೆ. ಈ ಸಂದರ್ಭದಲ್ಲಿ ವಿಶ್ವಕ್ಸೇನರು ಬ್ರಹ್ಮೋತ್ಸವದ ತಯಾರಿಗಳು ಸರಿಯಾಗಿ ನಡೆದಿವೆಯೇ ಎಂದು ಪರೀಕ್ಷಿಸುತ್ತಾರೆ.

ನಂತರದಲ್ಲಿ ಮಣ್ಣಿನ ಪಾತ್ರೆಗಳಲ್ಲಿ ನವಧಾನ್ಯಗಳನ್ನು ಬಿತ್ತಿ ಅಂಕುರಾರ್ಪಣೆ ವಿಧಿಯನ್ನು ಪೂರೈಸುತ್ತಾರೆ. ಆ ನಂತರದಲ್ಲಿ ವಿಶ್ವಕ್ಸೇನರಿಗೆ ತಿರುಮಲರಾಯ ಆಸ್ಥಾನ ಮಂಟಪದಲ್ಲಿ ಗೌರವವನ್ನು ಸಲ್ಲಿಸಿ,ತದನಂತರ ಅನಂತ,ಗರುಡ ಮತ್ತು ಸುದರ್ಶನರ ಜೊತೆ ಮೆರವಣಿಗೆಯಲ್ಲಿ ಅಂಕುರಾರ್ಪಣ ಮಂಟಪಕ್ಕೆ ತೆರಳಿ ಬ್ರಹ್ಮೋತ್ಸವ ಕಾರ್ಯಕ್ರಮಗಳು ಮುಗಿಯುವವರೆಗೂ ಅಲ್ಲೇ ನೆಲೆಸಿರುತ್ತಾರೆ.   

ಮಾಹಿತಿ : ಸಂಗ್ರಹ

No comments:

Post a Comment