Sunday, May 5, 2013

ರಾಮ ನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ

ರಾಮ ನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ
ವಿಠಲ ನಾಮ ತುಪ್ಪವ ಕಲಸಿ ಬಾಯ ಚಪ್ಪರಿಸಿರೋ||

ಒಮ್ಮಾನ ಗೋಧಿಯ ತಂದು ವೈರಾಗ್ಯ ಕಲ್ಲಲಿ ಬೀಸಿ
ಸುಮ್ಮಾನೆ ಸಜ್ಜಿಗೆಯ ತೆಗೆದು ಸಣ್ಣ ಶಾವಿಗೆಯ ಹೊಸೆದು||

ಹೃದಯವೆಂಬೊ ಮಡಕೆಯಲಿ ಭಾವವೆಂಬೊ ಎಸರನಿಟ್ಟು
ಬುದ್ಧಿಯಿಂದ ಪಾಕ ಮಾಡಿ ಹರಿವಾಣಕೆ ಬಡಿಸಿಕೊಂಡು||

ಆನಂದ ಆನಂದವೆಂಬೊ ತೇಗು ಬಂದಿತು ಕಾಣಿರೊ
ಆನಂದ ಮೂರುತಿ ನಮ್ಮ ಪುರಂದರ ವಿಠಲನ ನೆನೆಯಿರೊ||

No comments:

Post a Comment