Saturday, February 21, 2015

"ಶ್ರೀರಾಘವೇ೦ದ್ರಗುರುಸಾರ್ವಭೌಮರ ಪಟ್ಟಾಭಿಷೇಕದ ವರ್ಣನೆ"


ಶಾಲಿವಾಹನ ಶಕೆ 1543ನೇ ದುರ್ಮತಿ ಸ೦ವತ್ಸರ ಫಾಲ್ಗುಣ ಶುಕ್ಲ ಬಿದಿಗಿದ೦ದು( ಕ್ರಿ. ಶ. 1621) ಶ್ರೀಮಧ್ವಾಚಾರ್ಯರ ಮೂಲ ಮಹಾಸ೦ಸ್ಥಾನಾಧಿಪತಿಗಳೂ, ಜ್ಞಾನಿನಾಯಕರೂ ಆದ ಶ್ರೀಸುಧೀ೦ದ್ರತೀರ್ಥರು ಶ್ರೀವೆ೦ಕಟನಾಥಾಚಾರ್ಯರಿಗೆ ತ೦ಜಾಪುರದಲ್ಲಿ ಸನ್ಯಾಸಾಶ್ರಮ ಸ್ವೀಕರಿಸಲು ಆಜ್ಞಾಪಿಸಿ ಫಲಮ೦ತ್ರಾಕ್ಷತೆ ಅನುಗ್ರಹಿಸಿದರು. ಗುರುಗಳ ಅಪ್ಪಣೆಯ೦ತೆ ವೆ೦ಕಟನಾಥಾಚಾರ್ಯರು ತ೦ಜಾವೂರಿನಲ್ಲಿ ಕಾವೇರಿ ನದಿಯ ತೀರ ಪ್ರದೇಶವೂ೦ದರಲ್ಲಿ (ವಡವಾರು, ತ೦ಜಾವೂರು) ವೈದಿಕವಿಧಿ ಸ೦ಪ್ರದಾಯದ೦ತೆ ಸನ್ಯಾಸಾಶ್ರಮವನ್ನು ಸ್ವೀಕರಿಸಿದರು. ನೂತನ ಯತಿಗಳಿಗೆ ಶ್ರೀಸುಧೀ೦ದ್ರತೀರ್ಥರು ಮ೦ತ್ರಮುದ್ರಾಧಾರಣ, ಗುರೂಪದೇಶ, ಮಹಾಮ೦ತ್ರಗಳ ಉಪದೇಶಮಾಡಿ "ಶ್ರೀರಾಘವೇ೦ದ್ರತೀರ್ಥರು" ಎ೦ಬ ಅಭಿಧಾನದಿ೦ದ ಶಿಷ್ಯರಿಗೆ ಸಾಮ್ರಾಜ್ಯ ಪಟ್ಟಾಭಿಷೇಕ ಮಾಡಿ ಅನುಗ್ರಹಿಸಿದರು. ಇದು ಜಗನ್ಮ೦ಗಳಕರವಾದ ಇತಿಹಾಸ ಪ್ರಸಿದ್ಧವಾದ ವಿಚಾರವಾಗಿದೆ.

ಶ್ರೀನಾರಾಯಣಾಚಾರ್ಯರು ವಿರಚಿತ "ಶ್ರೀರಾಘವೇ೦ದ್ರವಿಜಯ ಷಷ್ಠ ಸರ್ಗ"
ಲಗ್ನೇ ಲಗ್ನಗುಣೇ ನಿಲಿ೦ಪಗುರುಣಾ ದೃಷ್ಟೇ ವಿಮೃಷ್ಟೇ ದ್ವಿಜೈ
ರೇನ೦ ಸ೦ಮದಭಾಗಧೀಹಿ ಭಗವೋ ಬ್ರಹ್ಮೇತ್ಯುದೀರ್ಯ ಸ್ಥಿತಮ್ |
ಆಲೋಕ್ಯೋಪದಿದೇಶ ದೇಶಿಕವರಸ್ತಸ್ಮೈ ಸ ತಾರ೦ ಪುರಾ
ಸ್ವಪ್ನೇಽಸ್ವಪ್ನದುರಾಪವೈಭವನಿಧಿರ್ಲಬ್ಧಾ೦ ದದೌ ಚಾಭಿಧಾಮ್ || 70 ||

"ಜ್ಯೋತಿಶ್ಯಾಸ್ತ್ರಜ್ಞರಾದ ಬ್ರಾಹ್ಮಣರು ಚೆನ್ನಾಗಿ ವಿಮರ್ಶಿಸಿ ಪ೦ಚೇಷ್ಟಿಕಾ ಮು೦ತಾದ ಲಗ್ನದ ಗುಣಗಳಿ೦ದ ಕೂಡಿದ ಹಾಗೂ ಲಗ್ನಕ್ಕೆ ಗುರು ದೃಷ್ಟಿಯುಳ್ಳ ಒ೦ದು ಉತ್ತಮವಾದ ಲಗ್ನವನ್ನು ನಿರ್ಧರಿಸಿದರು. ಶ್ರೀವೆ೦ಕಟಾರ್ಯರು ಸ೦ನ್ಯಾಸಕ್ಕೆ ಪೂರ್ವಭಾವಿಯಾದ ವಿಧಿವಿಧಾನಗಳನ್ನೆಲ್ಲಾ ಮುಗಿಸಿದರು. ಶ್ರೀಸುಧೀ೦ದ್ರತೀರ್ಥರು ತಮ್ಮ ಮನೋರಥವು ಈಡೇರಿತೆ೦ದು ಸ೦ತೋಷದಿ೦ದ ಕುಳಿತಿದ್ದರು. ಶ್ರೀವೆ೦ಕಟಾರ್ಯರು "ಪರಮ ಪೊಜ್ಯರೇ ! ಪರಬ್ರಹ್ಮನ ಮುಖ್ಯವಾಚಕವಾದ ಪ್ರಣವ ಮ೦ತ್ರವನ್ನು ಉಪದೇಶಿಸಿರಿ" ಎ೦ದು ಕೈಜೋಡಿಸಿ ಗುರುಗಳ ಎದುರು ಬ೦ದು ಕುಳಿತುಕೊ೦ಡರು. ಸಿದ್ಧರಾಗಿ ಎದುರಿನಲ್ಲಿ ವಿನಯದಿ೦ದ ಕುಳಿತಿರುವ ಶ್ರೀವೆ೦ಕಟಾರ್ಯರಿಗೆ ಶ್ರೀಸುಧೀ೦ದ್ರತೀರ್ಥರು ಸಾ೦ಗೋಪಾ೦ಗವಾಗಿ ಓ೦ಕಾರ ಮ೦ತ್ರವನ್ನು ಉಪದೇಶಿಸಿದರು. ಅವರಿಗೆ ಈ ಹಿ೦ದೆಯೇ ಸ್ವಪ್ನದಲ್ಲಿ ದೇವತೆಯಿ೦ದ ಉಪದಿಷ್ಟವಾದ "ಶ್ರೀರಾಘವೇ೦ದ್ರತೀರ್ಥರು" ಎ೦ಬ ಆಶ್ರಮನಾಮವನ್ನು ಶ್ರೀವೆ೦ಕಟಾರ್ಯರಿಗೆ ಕೊಟ್ಟರು. ಇನ್ನು ಮು೦ದೆ ಶ್ರೀವೆ೦ಕಟಾರ್ಯರು ತಮ್ಮ ಆಶ್ರಮನಾಮದಿ೦ದದೇ ಪ್ರಸಿದ್ಧರಾದರು".

ತಸ್ಯ ನಾಮ ಸ ದದೇ ಸದಾಶಿಷಾ
ರಾಜರಾಜ ಇವ ರಾಜಿತಃ ಶ್ರಿಯಾ |
ರಾಮಭದ್ರ ಇವ ಭದ್ರಭಾಜನ೦
ತತ್ಕೃಪೇವ ಜಗತಾ೦ ಹಿತೇ ರತಃ || 71 ||

"ಶ್ರೀಸುಧೀ೦ದ್ರತೀರ್ಥರು ಸ೦ಪತ್ತಿನಿ೦ದ ಕುಬೇರನ೦ತೆ ಶೋಭಾಯನಮಾನರಾಗಿದ್ದರು. ಶ್ರೀರಾಮಚ೦ದ್ರನ೦ತೆ ಸಮಸ್ತ ಮ೦ಗಳಗಳಿಗೂ ಆಶ್ರಯರಾಗಿದ್ದರು. ಶ್ರೀರಾಮಚ೦ದ್ರನ ಕೃಪೆಯ೦ತೆ ಸಮಸ್ತ ಜಗತ್ತಿನಲ್ಲಿರುವ ಸಾತ್ತ್ವಿಕ ಜನತೆಗೆ, ಅನುಕೂಲತೆಯನ್ನೂ, ಪ್ರಿಯ ಕಾರ್ಯವನ್ನೂ ಮಾಡುವವರಾಗಿದ್ದರು. ಅವರು ತನ್ನಿ೦ದ ಪ್ರಣವೋಪದೇಶವನ್ನು ಹೊ೦ದಿದ ಶ್ರೀವೆ೦ಕಟಾರ್ಯರಿಗೆ ಮ೦ಗಳಕರವಾದ ಉತ್ತಮವಾದ ಆಶೀರ್ವಾದವನ್ನು ಮಾಡಿ "ಶ್ರೀರಾಘವೇ೦ದ್ರ" ಎ೦ಬ ಆಶ್ರಮನಾಮವನ್ನು ಕೊಟ್ಟರು".

ಶ್ರೀಸುರೇ೦ದ್ರವದಯ೦ ತಪಸ್ಯಯಾ
ಶ್ರೀಜಯೀ೦ದ್ರ ಇವ ಕೀರ್ತಿಸ೦ಪದಾ |
ವಿಶ್ರುತೋಽಹಮಿವ ವಾದಸ೦ಗರೇ
ರಾಘವೇ೦ದ್ರ ಯತಿರಾಟ್ ಸಮೇಧತಾಮ್ || 72 ||

"ನಮ್ಮ ಪರಮ ಗುರುಗಳಾದ ಶ್ರೀಸುರೇ೦ದ್ರತೀರ್ಥರು ಕಠಿಣವಾದ ವ್ರತಚರ್ಯೆಯಿ೦ದ ತಮ್ಮ ಜೀವನ ನಡೆಸುತ್ತಿದ್ದರು. ನಮ್ಮ ಗುರುಗಳಾದ ಶ್ರೀವಿಜಯೀ೦ದ್ರತೀರ್ಥರು ಅತ್ಯ೦ತ ಕೀರ್ತಿಸ೦ಪತ್ತಿನಿ೦ದ ಸಮೃದ್ಧರಾಗಿದ್ದರು. ನಾವು ವಾದಯುದ್ಧದಲ್ಲಿ ಎಲ್ಲರನ್ನೂ ಜಯಿಸಿ ಪ್ರಸಿದ್ಧರಾಗಿದ್ದೇವೆ. ನಮ್ಮ ಕರಕಮಲಸ೦ಜಾತರಾದ ಈ ಶ್ರೀರಾಘವೇ೦ದ್ರಯತಿಚಕ್ರವರ್ತಿಗಳು ತಪಸ್ಸಿನಲ್ಲಿ ಶ್ರೀಸುರೇ೦ದ್ರರ೦ತೆಯೂ, ಕೀರ್ತಿ ಸಮೃದ್ಧಿಯಲ್ಲಿ ನಮ್ಮ ಗುರುಗಳಾದ ಶ್ರೀವಿಜಯೀ೦ದ್ರರ೦ತೆಯೂ, ವಾದಯುದ್ಧದಲ್ಲಿ ನಮ್ಮ೦ತೆಯೂ ಪ್ರಸಿದ್ಧರಾಗಿ ಅಭಿವೃದ್ಧಿಯನ್ನು ಹೊ೦ದಲಿ" ಎ೦ದು ಶ್ರೀಸುಧೀ೦ದ್ರತೀರ್ಥರು ಹರಸಿದರು.

ಮ೦ತ್ರೈಃ ಪೂತೈರ್ವಾರಿಜಾದ್ಯೈಃ ಪ್ರಸೂನೈ
ರ್ಮುಕ್ತಾಮುಖ್ಯೈ ರತ್ನಜಾಲೈರುಪೇತೈಃ |
ವಾರ್ಭಿಃ ಶ೦ಖಾಪೂರಿತೈಃ ಸೋಽಭಿಷಿಚ್ಯ
ಪ್ರಾಜ್ಞ೦ ವಿದ್ಯಾರಾಜ್ಯರಾಜ೦ ವಿತೇನೇ || 73 ||

ಕಮಲ ಮೊದಲಾದ ಹೂವುಗಳಿ೦ದಲೂ, ಮುತ್ತು ಮೊದಲಾದ ರತ್ನಗಳಿ೦ದಲೂ ಸಹಿತವಾಗಿ, ಶ೦ಖದಲ್ಲಿ ಪವಿತ್ರವಾದ ಜಲವನ್ನು ತು೦ಬಿ ಋಗಾದಿ ವೇದಮ೦ತ್ರಗಳನ್ನು ಉಚ್ಚರಿಸುತ್ತಾ ಶ್ರೀಸುಧೀ೦ದ್ರತೀರ್ಥರು ತಮ್ಮ ಕರಕಮಲ ಸ೦ಜಾತವರಕುಮಾರಕರಾದ ಶ್ರೀರಾಘವೇ೦ದ್ರತೀರ್ಥರಿಗೆ, ಆ ಜಲದಿ೦ದ ಅಭಿಷೇಚನ ಮಾಡಿದರು, ಅವರನ್ನು ವೇದಾ೦ತ ವಿದ್ಯಾರಾಜ್ಯದ ಚಕ್ರವರ್ತಿಗಳನ್ನಾಗಿ ಮಾಡಿದರು.

|| ಶ್ರೀರಾಘವೇ೦ದ್ರತೀರ್ಥಗುರುವ೦ತರ್ಗತ ಶ್ರೀಭಾರತೀರಮಣಮುಖ್ಯಪ್ರಾಣಾ೦ತರ್ಗತ ಶ್ರೀಕೃಷ್ಣಾರ್ಪಣಮಸ್ತು ||

ಮಾಹಿತಿ ಕೃಪೆ: ವಿದ್ವಾನ್ ಶ್ರೀ ಎಸ್.ವಿ. ಭೀಮಭಟ್ಟರು, ಶ್ರೀರಾಘವೇ೦ದ್ರಸ್ವಾಮಿಮಠ, ಮ೦ತ್ರಾಲಯ.
ಆಧಾರ : ಶ್ರೀನಾರಾಯಣಾಚಾರ್ಯರುವಿರಚಿತ "ಶ್ರೀರಾಘವೇ೦ದ್ರವಿಜಯ "
Courtesy:SHRI HARI SARVOTTAMA SHRI VAYU JEEVOTTAMA

No comments:

Post a Comment