Monday, November 12, 2012

ವಿಜಯ ಕವಚ

ಸ್ಮರಿಸಿ ಬದುಕಿರೋ ದಿವ್ಯ ಚರಣಕೆರಗಿರೋ


ದುರಿತ ತರಿದು ಪೊರೆವ ವಿಜಯ ಗುರುಗಳೆ೦ಬರ//



ದಾಸರಾಯನ ದಯವ ಸೂಸಿ ಪಡೆದನ/

ದೋಷರಹಿತನ ಸಂತೋಷಭರಿತನ//



ಜ್ಞಾನವಂತನ ಬಲು ನಿಧಾನಿ ಶಾಂತನ/

ಮಾನ್ಯವಂತನ ಬಹುವದಾನ್ಯದಾತನ //



ಹರಿಯ ಭಜಿಸುವ ನರಹರಿಯ ಯಜಿಸುವ/

ದುರಿತ ತ್ಯಜಿಸುವ ಜನಕೆ ಹರುಷ ಸುರಿಸುವ//



ಮೋದಭರಿತನ ಪಂಚಭೇದವರಿತನ/

ಸಾಧುಚರಿತನ ಮನೋವಿಷಾದ ಮರೆತನ//



ಇವರ ನಂಬಿದ ಜನಕೆ ಭಾವವಿದೆಂಬುದು/

ಹವನವಾಗದೋ ನಮ್ಮವರ ಮತವಿದು//



ಪಾಪಕೋಟಿಯ ರಾಶಿ ಲೇಪವಾಗದು/

ತಾಪ ಕಳೆವನು ಬಲು ದಯಾಪಯೋನಿಧಿ//



ಪವನ ರೂಪದಿ ಹರಿಯ ಸ್ತವನ ಮಾಡಿದ/

ಭುವನ ಬೇಡಿದ ಮಾಧವನ ನೋಡಿದ//



ರಂಗನೆಂದನ ಭಾವವು ಹಿಂಗಿತೆಂದನ/

ಮಂಗಳಾ೦ಗನ ಅಂತರಂಗವರಿತನ//



ಕಾಶಿನಗರದಲ್ಲಿದ್ದ ವ್ಯಾಸದೇವನ ದಯವ/

ಸೂಸಿ ಪಡೆದನ ಉಲ್ಲಾಸತನದಲಿ//



ಚಿಂತೆ ಬ್ಯಾಡಿರೋ ನಿಶ್ಚಿಂತರಾಗಿರೋ/

ಶಾಂತಗುರುಗಳ ಪಾದವನ್ನು ನಂಬಿರೋ//



ಖೇದವಾಗದೋ ನಿಮಗೆ ಮೋದವಾಹುದೋ/

ಆದಿದೇವನ ಸುಪ್ರಸಾದವಾಹುದೋ//



ತಾಪ ತಡೆವನು ಬಂದ ಪಾಪ ಕಡಿವನು/

ಶ್ರೀಪತಿಯ ಪಾದ ಸಮೀಪವಿಡುವನು//



ವೇದ ಓದಲು ಬರಿದೆ ವಾದ ಮಾಡಲು/

ಹಾದಿ ದೊರೆಯದು ಬುಧರ ಪಾದ ನಂಬದೆ//



ಗಂಗೆ ಮಿಂದರೆ ಮಲವು ಹಿಂಗಿತಲ್ಲದೆ/

ರಂಗನೊಲಿಯನು ಭಕ್ತರ ಸಂಗ ದೊರಕದೆ//



ಲೆಕ್ಕವಿಲ್ಲದ ದೇಶ ತುಕ್ಕಿ ಬಂದರು/

ದುಃಖವಲ್ಲದೆ ಲೇಶ ಭಕ್ತಿ ದೊರಕದು//



ದಾನಮಾಡಲು ದಿವ್ಯ ಗಾನ ಪಾಡಲು/

ಜ್ಞಾನ ದೊರೆಯದೋ ಇವರಧೀನವಾಗದೆ//



ನಿಷ್ಠೆ ಯಾತಕೆ ಕಂಡ ಕಷ್ಟವ್ಯಾತಕೆ/

ದಿಟ್ಟ ಗುರುಗಳ ಪಾದ ಮುಟ್ಟಿ ಭಜಿಸಿರೋ//



ಪೂಜೆ ಮಾಡಲು ಕಂಡ ಗೋಜು ಬೀಳಲು/

ಬೀಜ ಮಾತಿನ ಫಲ ಸಹಜ ದೊರಕದು//



ಸುರರು ಎಲ್ಲರೂ ಇವರ ಕರವ ಪಿಡಿವರೋ/

ತರಳರಂದದಿ ಹಿಂದೆ ತಿರುಗುತಿಪ್ಪರೋ//



ಗ್ರಹಗಳೆಲ್ಲವೂ ಇವರ್ಗೆ ಸಹಾಯ ಮಾಡುತ/

ಅಹೋರಾತ್ರಿಲಿ ಸುಖವ ಕೊಡುವುದು//



ವ್ಯಾಧಿ ಬಾರದೋ ದೇಹ ಭಾದೆ ತಟ್ಟದೋ/

ಆದಿದೇವನ ಸುಪ್ರಸಾದವಾಹುದೋ//



ಪತಿತಪಾಮರ ಮಂದಮತಿಯ ನಾ ಬಲು/

ಸ್ತುತಿಸಲಾಪನೆ ಇವರ ಅತಿಶಯಂಗಳ//



ಕರುಣದಿಂದಲಿ ಎಮ್ಮ ಪೊರೆವನಲ್ಲದೆ/

ದುರಿತಕೋಟಿಯ ಬೇಗ ತರಿವ ದಯದಲಿ//



ಮಂದಮತಿಗಳು ಇವರ ಚಂದವರಿಯದೆ/

ನಿಂದಿಸುವರೋ ಭವದ ಬಂಧ ತಪ್ಪದೋ//



ಇಂದಿರಾಪತಿ ಇವರ ಮುಂದೆ ಕುಣಿವನೋ/

ಅಂದವಚನವ ನಿಜಕೆ ತಂದು ತೋರ್ಪನು//



ಉದಯಕಾಲದಿ ಈ ಪದವ ಪಠಿಸಲು/

ಮದದನಾದರು ಜ್ಞಾನ ಉದಯವಾಹುದೋ//



ಸಟೆಯಿದಲ್ಲವೋ ವ್ಯಾಸ ವಿಠಲ ಬಲ್ಲನೋ/

ಪಠಿಸಬಹುದಿದು ಕೇಳಿ ಕುಟಿಲರಹಿತರು//

No comments:

Post a Comment