Wednesday, January 23, 2013

ಶ್ರೀ ಹರಿಕಥಾಮೃತಸಾರ - 27

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಶ್ರೀ ಅನುಕ್ರಮಣಿಕಾ ತಾರತಮ್ಯ ಸಂಧಿ//


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಮನುಜೋತ್ತಮವಿಡಿದು ಸಂಕರುಷಣನ ಪರ್ಯಂತರದಿ ಪೇಳಿದ

ಅನುಕ್ರಮಣಿಕೆಯ ಪದ್ಯವನು ಕೇಳುವುದು ಸಜ್ಜನರು//


ಶ್ರೀಮದಾಚಾರ್ಯರ ಮತಾನುಗ ಧೀಮತಾಂ ವರರಂಘ್ರಿ ಕಮಲಕೆ

ಸೋಮಪಾನಾರ್ಹರಿಗೆ ತಾತ್ವಿಕ ದೇವತಾ ಗಣಕೆ

ಹೈಮವತಿ ಷಣ್ಮಹಿಷಿಯರ ಪದ ವ್ಯೋಮಕೇಶಗೆ ವಾಣಿ ವಾಯೂ

ತಾಮರಸ ಭವ ಲಕ್ಷ್ಮಿ ನಾರಾಯಣರಿಗೆ ನಮಿಪೆ//1//


ಶ್ರೀಮತಾಂವರ ಶ್ರೀಪತೆ ಸತ್ಕಾಮಿತ ಪ್ರದ ಸೌಮ್ಯ

ತ್ರಿಕಕುದ್ಧಾಮ ತ್ರಿ ಚತುಪಾದ ಪಾವನ ಚರಿತ ಚಾರ್ವಾಂಗ

ಗೋಮತಿಪ್ರಿಯ ಗೌಣ ಗುರುತಮ ಸಾಮಗಾಯನಲೋಲ

ಸರ್ವ ಸ್ವಾಮಿ ಮಮಕುಲದೈವ ಸಂತೈಸುವುದು ಸಜ್ಜನರ//2//


ರಾಮ ರಾಕ್ಷಸ ಕುಲ ಭಯಂಕರ ಸಾಮಜ ಇಂದ್ರಪ್ರಿಯ

ಮನೋ ವಾಚಾಮ ಗೋಚರ ಚಿತ್ಸುಖಪ್ರದ ಚಾರುತರ ಸ್ವರತ

ಭೂಮ ಭೂಸ್ವರ್ಗಾಪ ವರ್ಗದ ಕಾಮಧೇನು ಸುಕಲ್ಪತರು

ಚಿಂತಾಮಣಿಯೆಂದೆನಿಪ ನಿಜ ಭಕ್ತರಿಗೆ ಸರ್ವತ್ರ//3//


ಸ್ವರ್ಣವರ್ಣ ಸ್ವತಂತ್ರ ಸರ್ವಗ ಕರ್ಣ ಹೀನ ಸುಶಯ್ಯ ಶಾಶ್ವತ

ವರ್ಣ ಚತುರ ಆಶ್ರಮ ವಿವರ್ಜಿತ ಚಾರುತರ ಸ್ವರತ

ಅರ್ಣ ಸಂಪ್ರತಿಪಾದ್ಯ ವಾಯು ಸುಪರ್ಣ ವರ ವಹನ ಪ್ರತಿಮ

ವಟ ಪರ್ಣ ಶಯನ ಆಶ್ರಯತಮ ಸತ್ಚರಿತ ಗುಣಭರಿತ//4//


ಅಗಣಿತ ಸುಗುಣ ಧಾಮ ನಿಶ್ಚಲ ಸ್ವಗತ ಭೇದ ವಿಶೂನ್ಯ ಶಾಶ್ವತ

ಜಗದ ಜೀವ ಅತ್ಯಂತ ಭಿನ್ನ ಆಪನ್ನ ಪರಿಪಾಲ

ತ್ರಿಗುಣ ವರ್ಜಿತ ತ್ರಿಭುವನ ಈಶ್ವರ ಹಗಲಿರುಳು ಸ್ಮರಿಸುತಲಿ ಇಹರ ಬಿಟ್ಟಗಲ

ಶ್ರೀ ಜಗನ್ನಾಥ ವಿಠಲ ವಿಶ್ವ ವ್ಯಾಪಕನು//5//


//ಇತಿ ಶ್ರೀ ಅನುಕ್ರಮಣಿಕಾ ತಾರತಮ್ಯ ಸಂಧಿ ಸಂಪೂರ್ಣಂ//

//ಶ್ರೀ ಕೃಷ್ಣಾರ್ಪಣಮಸ್ತು//

ಶ್ರೀ ಹರಿಕಥಾಮೃತಸಾರ - 26

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಶ್ರೀ ಅವರೋಹಣ ತಾರತಮ್ಯ ಸಂಧಿ//


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಶ್ರೀರಮಣ ನಿಜಭಕ್ತರೆನಿಸುವ ವಾರಿಜಾಸನ ಮುಖ್ಯ ನಿರ್ಜರ

ತಾರತಮ್ಯವ ಪೇಳ್ವೆ ಸಂಕ್ಷೇಪದಲಿ ಗುರುಬಲದಿ//


ಕೇಶವಗೆ ನಾರಾಯಣಗೆ ಕಮಲಾಸನ ಸಮೀರರಿಗೆ ವಾಣಿಗೆ

ವೀಶ ಫಣಿಪ ಮಹೇಶರಿಗೆ ಷಣ್ಮಹಿಷಿಯರ ಪದಕೆ

ಶೇಷ ರುದ್ರರ ಪತ್ನಿಯರಿಗೆ ಸುವಾಸದ ಪ್ರದ್ಯುಮ್ನರಿಗೆ

ಸಂತೋಷದಲಿ ವಂದಿಸುವೆ ಭಕ್ತಿ ಜ್ಞಾನ ಕೊಡಲೆಂದು//1//


ಪ್ರಾಣದೇವಗೆ ನಮಿಪೆ ಕಾಮನ ಸೂನು ಮನು ಗುರು ದಕ್ಷ ಶಚಿ ರತಿ ಮಾನಿನಿಯರಿಗೆ

ಪ್ರವಹ ದೇವಗೆ ಸೂರ್ಯ ಸೋಮ ಯಮ ಮಾನವಿಗೆ ವರುಣನಿಗೆ

ವೀಣಾ ಪಾಣಿ ನಾರದ ಮುನಿಗೆ ನಪಿಸುವೆ

ಜ್ಞಾನ ಭಕ್ತಿ ವಿರಕ್ತಿ ಮಾರ್ಗವ ತಿಳಿಸಲಿ ಎನಗೆಂದು//2//


ಅನಳ ಭೃಗು ದಾಕ್ಷಾಯಣಿಯರಿಗೆ ಕನಕ ಗರ್ಭಜ ಸಪ್ತರ್ಷಿಗಳಿಗೆ ಎಣೆಯೆನಿಪ

ವೈವಸ್ವತ ಮನು ಗಾಧಿ ಸಂಭವಗೆ

ದನುಜ ನಿರ್ಋತಿ ತಾರ ಪ್ರಾವಹಿ ವನಜ ಮಿತ್ರಗೆ ಅಶ್ವಿನೀ ಗಣಪಾ

ಧನಪ ವಿಶ್ವಕ್ಸೇನರಿಗೆ ವಂದಿಸುವೆನು ಅನವರತ//3//


ಉಕ್ತ ದೇವರ್ಕಳನು ಉಳಿದೆಂಭತ್ತೈದು ಜನರುಗಳು ಮನುಗಳು

ಚಿಥ್ಯ ಚಾವನ ಯಮಳರಿಗೆ ಕರ್ಮಜರು ಎನಿಸುತಿಪ್ಪ

ಕಾರ್ತವೀರ್ಯಾರ್ಜುನ ಪ್ರಮುಖ ಶತಸ್ಥರಿಗೆ ಪರ್ಜನ್ಯ ಗಂಗ

ಆದಿತ್ಯ ಯಮ ಸೋಮ ಅನಿರುದ್ಧರ ಪತ್ನಿಯರ ಪದಕೆ//4//


ಹುತವಹನ ಅರ್ಧಾಂಗಿನಿಗೆ ಚಂದ್ರಮ ಸುತ ಬುಧಗೆ ನಾಮಾತ್ಮಿಕ ಉಷಾ ಸತಿಗೆ

ಛಾಯಾತ್ಮಜ ಶನೈಶ್ಚರಗೆ ಅನಮಿಪೆ ಸತತ

ಪ್ರತಿ ದಿವಸದಲಿ ಬಿಡದೆ ಜೀವ ಪ್ರತತಿ ಮಾಡುವ ಕರ್ಮಗಳಿಗೆ

ಅಧಿಪತಿಯು ಎನಿಪ ಪುಷ್ಕರನ ಪಾದಾಂಬುಜಗಳಿಗೆ ನಮಿಪೆ//5//


ಆ ನಮಿಪೆ ಅಜಾನಜರಿಗೆ ಸುಕೃಶಾನು ಸುತರಿಗೆ ಗೋವ್ರಜದೊಳಿಹ

ಮಾನಿನಿಯರಿಗೆ ಚಿರಪಿತರು ಶತನೂನ ಶತಕೋಟಿ ಮೌನಿ ಜನರಿಗೆ

ದೇವಮಾನವ ಗಾನ ಪ್ರೌಢರಿಗೆ ಅವನಿಪರಿಗೆ

ರಮಾ ನಿವಾಸನ ದಾಸವರ್ಗಕೆ ನಮಿಪೆನು ಅನವರತ//6//


ಅನುಕ್ರಮಣಿಕ ತಾರತಮ್ಯವ ಅನುದಿನದಿ ಸದ್ಭಕ್ತಿ ಪೂರ್ವಕ ನೆನೆವರಿಗೆ

ಧರ್ಮಾರ್ಥ ಕಾಮಾದಿಗಳು ಫಲಿಸುವವು

ವನಜ ಸಂಭವ ಮುಖ್ಯರು ಅವಯವರು ಎನಿಸುವ ಜಗನ್ನಾಥ ವಿಠಲನ

ವಿನಯದಿಂದಲಿ ನಮಿಸಿ ಕೊಂಡಾಡುತಿರು ಮರೆಯದಲೆ//7//


//ಇತಿ ಶ್ರೀ ಅವರೋಹಣ ತಾರತಮ್ಯ ಸಂಧಿ ಸಂಪೂರ್ಣಂ//

//ಶ್ರೀ ಕೃಷ್ಣಾರ್ಪಣಮಸ್ತು//

ಶ್ರೀ ಹರಿಕಥಾಮೃತಸಾರ - 25

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಶ್ರೀ ಕ್ರೀಡಾವಿಲಾಸ ಸಂಧಿ//


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಶ್ರೀನಿವಾಸನ ಚರಿತೆಗಳ ಪರಮಾನುರಾಗದಿ ಬೆಸೆಗೊಳಲು

ಮುನಿ ಶೌನಕಾದ್ಯರಿಗೆ ಅರುಪಿದನು ಸೂತಾರ್ಯ ದಯದಿಂದ//


ಪಚನ ಭಕ್ಷಣ ಗಮನ ಭೋಜನ ವಚನ ಮೈಥುನ ಶಯನ ವೀಕ್ಷಣ

ಅಚಲನಾ ಚಲನ ಪ್ರಯತ್ನದಿ ಸಾಧ್ಯವೇ ಜನಕೆ

ಶುಚಿ ಸದನ ದಯದಿಂದ ಜೀವರ ನಿಚಯದೊಳು ತಾ ನಿಂತು ಮಾಡುವ

ಉಚಿತಾನುಚಿತ ಕರ್ಮಗಳನೆಂದರಿದು ಕೊಂಡಾಡು//1//


ವಿಷ್ಟರ ಶ್ರವ ದೇಹದೊಳಗೆ ಪ್ರವಿಷ್ಟನಾಗಿ ನಿರಂತರದಿ

ಬಹು ಚೇಷ್ಟೆಗಳ ಮಾಡುತಿರೆ ಕಂಡು ಸಜೀವಿಯೆನುತಿಹರು

ಹೃಷ್ಟರಾಗುವರು ನೋಡಿ ಕನಿಷ್ಟರು ಎಲ್ಲರು ಸೇವೆ ಮಾಳ್ಪರು

ಬಿಟ್ಟ ಕ್ಷಣದಲಿ ಕುಣಪ ಸಮವೆಂದರಿದು ಅನುಪೇಕ್ಷಿಪರು//2//


ಕ್ರೀಡೆಗೋಸುಗ ಅವರವರ ಗತಿ ನೀಡಲೋಸುಗ ದೇಹಗಳ ಕೊಟ್ಟು ಆಡುವನು ಸ್ವೇಚ್ಚೆಯಲಿ

ಬ್ರಹ್ಮ ಈಶಾದ್ಯರೊಳು ಪೊಕ್ಕು

ಮಾಡುವನು ವ್ಯಾಪಾರ ಬಹು ವಿಧ ಮೂಢ ದೈತ್ಯರೊಳಿದ್ದು ಪ್ರತಿದಿನ

ಕೇಡು ಲಾಭಗಳಿಲ್ಲವು ಇದರಿಂದ ಆವ ಕಾಲದಲಿ//3//


ಅಕ್ಷರ ಈಡ್ಯನು ಬ್ರಹ್ಮ ವಾಯು ತ್ರ್ಯಕ್ಷ ಸುರಪಾಸುರ ಅಸುರರೊಳು

ಅಧ್ಯಕ್ಷನಾಗಿದ್ದು ಎಲ್ಲರೊಳು ವ್ಯಾಪಾರ ಮಾಡುತಿಹ

ಅಕ್ಷಯನು ಸತ್ಯಾತ್ಮಕ ಪರಾಪೇಕ್ಷೆಯಿಲ್ಲದೆ

ಸರ್ವರೊಳಗೆ ವಿಲಕ್ಷಣನು ತಾನಾಗಿ ಲೋಕವ ರಕ್ಷಿಸುತಲಿಪ್ಪ//4//


ಶ್ರೀ ಸರಸ್ವತಿ ಭಾರತೀ ಗಿರಿಜಾ ಶಚೀ ರತಿ ರೋಹಿಣೀ ಸಂಜ್ಞಾ ಶತ ಸುರೂಪಾದಿ

ಅಖಿಳ ಸ್ತ್ರೀಯರೊಳು ಸ್ತ್ರೀ ರೂಪ ವಾಸವಾಗಿದ್ದೆಲ್ಲರಿಗೆ

ವಿಶ್ವಾಸ ತನ್ನಲಿ ಕೊಡುವ

ಅವರಭಿಲಾಷೆಗಳ ಪೂರೈಸುತಿಪ್ಪನು ಯೋಗ್ಯತೆಗಳರಿತು//5//


ಕೋಲು ಕುದುರೆಯ ಮಾಡಿ ಆಡುವ ಬಾಲಕರ ತೆರದಂತೆ

ಲಕ್ಷ್ಮೀ ಲೋಲ ಸ್ವಾತಂತ್ರ್ಯ ಗುಣವ ಬ್ರಹ್ಮಾದ್ಯರೊಳಗಿಟ್ಟು

ಲೀಲೆಗೈವನು ತನ್ನವರಿಗೆ ಅನುಕೂಲನಾಗಿದ್ದು ಎಲ್ಲ ಕಾಲದಿ

ಖುಲ್ಲರಿಗೆ ಪ್ರತಿಕೂಲನಾಗಿಹ ಪ್ರಕಟನಾಗದಲೆ//6//


ಸೌಪರ್ಣಿ ವರವಹನ ನಾನಾ ರೂಪ ನಾಮದಿ ಕರೆಸುತ ಅವರ ಸಮೀಪದಲ್ಲಿದ್ದು

ಅಖಿಳ ವ್ಯಾಪಾರಗಳ ಮಾಡುವನು

ಪಾಪ ಪುಣ್ಯಗಳೆರೆಡು ಅವರ ಸ್ವರೂಪಗಳ ಅನುಸರಿಸಿ ಉಣಿಪ

ಪರೋಪಕಾರಿ ಪರೇಶ ಪೂರ್ಣಾನಂದ ಜ್ಞಾನ ಘನ//7//


ಆಹಾರ ನಿದ್ರಾ ಮೈಥುನಗಳ ಅಹರಾಹರ ಬಯಸಿ ಬಳಲುವ

ಲಕ್ಷ್ಮೀ ಮಹಿತನ ಮಹಾ ಮಹಿಮೆಗಳನು ಎಂತರಿವ ನಿತ್ಯದಲಿ

ಅಹಿಕ ಸೌಖ್ಯವ ಮರೆದು ಮನದಲಿ ಗ್ರಹಿಸಿ ಶಾಸ್ತ್ರಾರ್ಥಗಳ

ಪರಮೋತ್ಸಾಹದಿ ಕೊಂಡಾಡುತಲೆ ಮೈಮರೆದವರಿಗಲ್ಲದಲೆ//8//


ಬಂಧಮೋಕ್ಷ ಪ್ರದನ ಜ್ಞಾನವು ಮಂದಮತಿಗಳಿಗೆಂತು ದೊರೆವುದು

ಬಿಂದು ಮಾತ್ರ ಸುಖಾನುಭವ ಪರ್ವತಕೆ ಸಮ ದುಃಖವೆಂದು ತಿಳಿಯದೆ

ಅನ್ಯ ದೈವಗಳಿಂದ ಸುಖವ ಅಪೇಕ್ಷಿಸುವರು

ಮುಕುಂದನ ಆರಾಧನೆಯ ಬಿಟ್ಟವಗೆ ಉಂಟೆ ಮುಕ್ತಿ ಸುಖ//9//


ರಾಜ ತನ್ನ ಅಮಾತ್ಯ ಕರುಣದಿ ನೈಜ ಜನರಿಗೆ ಕೊಟ್ಟು ಕಾರ್ಯ ನಿಯೋಜಿಸುತ

ಮಾನಾಪಮಾನವ ಮಾಳ್ಪ ತೆರದಂತೆ

ಶ್ರೀ ಜನಾರ್ಧನ ಸರ್ವರೊಳಗೆ ಅಪರಾಜಿತನು ತಾನಾಗಿ

ಸರ್ವ ಪ್ರಯೋಜನವ ಮಾಡಿಸುತ ಮಾಡುವ ಫಲಕೆ ಗುರಿಮಾಡಿ//10//


ವಾಸುದೇವ ಸ್ವತಂತ್ರವ ಸರೊಜಾಸನಾದಿ ಅಮರಾಸುರರಿಗೆ ಈಯಲೋಸುಗ ಅರ್ಧವ ತೆಗೆದು

ಅದರೊಳರ್ಧವ ಚತುರ್ಭಾಗಗೈಸಿ

ವಂದನು ಶತವಿಧ ದ್ವಿ ಪಂಚಾಶತಾಬ್ಜಜಗೆ

ಅಷ್ಟ ಚತ್ವಾರಿಂಶದ್ ಅನಿಲಗಿತ್ತ ವಾಣೀ ಭಾರತೀಗರ್ಧ//11//


ದ್ವಿತೀಯ ಪಾದವ ತೆಗೆದುಕೊಂಡು ಅದ ಶತ ವಿಭಾಗವ ಮಾಡಿ

ತಾ ವಿಂಶತಿ ಉಮೇಶನೊಳಿಟ್ಟ ಇಂದ್ರನೊಳು ಐದಧಿಕ ಹತ್ತು

ರತಿಪನೊಳಗೆ ಇನಿತಿಟ್ಟ ಅಖಿಳ ದೇವತೆಗಳೊಳಗೆ ಈರೈದು

ಜೀವ ಪ್ರತತಿಯೊಳು ದಶ ಐದಧಿಕ ನಾಲ್ವತ್ತು ದೈತ್ಯರೊಳು//12//


ಕಾರುಣಿಕ ಸ್ವಾತಂತ್ರ್ಯತ್ವವ ಮೂರು ವಿಧಗೈಸಿ ಎರಡು ತನ್ನೊಳು

ನಾರಿಗೊಂದನು ಕೊಟ್ಟ ಸ್ವಾತಂತ್ರ್ಯವ ಸರ್ವರಿಗೆ ಧಾರುಣಿಪ ತನ್ನ ಅನುಗರಿಗೆ

ವ್ಯಾಪಾರ ಕೊಟ್ಟು ಗುಣಾಗುಣಗಳ ವಿಚಾರ ಮಾಡುವ ತೆರದಿ

ತ್ರಿಗುಣ ವ್ಯಕ್ತಿಯನೆ ಮಾಳ್ಪ//13//


ಪುಣ್ಯ ಕರ್ಮಕೆ ಸಹಾಯವಾಗುವ ಧನ್ಯರಿಗೆ ಕಲ್ಯಾದಿ ದೈತ್ಯರ

ಪುಣ್ಯ ಫಲಗಳನೀವ ದಿವಿಜರ ಪಾಪ ಕರ್ಮ ಫಲಾನ್ಯ ಕರ್ಮವ ಮಾಳ್ಪರಿಗೆ

ಅನುಗುಣ್ಯ ಜನರಿಗೆ ಕೊಡುವ

ಬಹು ಕಾರುಣ್ಯ ಸಾಗರನು ಈ ತೆರದಿ ಭಕ್ತರನು ಸಂತೈಪ//14//


ನಿರುಪಮಗೆ ಸರಿಯುಂಟೆಂದು ಉಚ್ಚರಿಸುವವ ತದ್ಭಕ್ತರೊಳು ಮತ್ಸರಿಸುವವ

ಗುಣಗುಣಿಗಳಿಗೆ ಭೇದಗಳ ಪೇಳುವವ

ದರ ಸುದರ್ಶನ ಊರ್ಧ್ವ ಪುಂಡ್ರವ ಧರಿಸುವರೊಳು ದ್ವೇಷಿಸುವ

ಹರಿ ಚರಿತೆಗಳ ಕೇಳದಲೆ ಲೋಗರ ವಾರ್ತೆ ಕೇಳುವವ//15//


ಏವಮಾದೀ ದ್ವೇಷವುಳ್ಳ ಕುಜೀವರೆಲ್ಲರು ದೈತ್ಯರೆಂಬರು

ಕೋವಿದರ ವಿಜ್ಞಾನ ಕರ್ಮವ ನೋಡಿ ನಿಂದಿಪರು

ದೇವ ದೇವನ ಬಿಟ್ಟು ಯಾವತ್ಜೀವ ಪರ್ಯಂತರದಿ ತುಚ್ಚರ ಸೇವೆಯಿಂದ

ಉಪಜೀವಿಸುವರು ಅಜ್ಞಾನಕೆ ಒಳಗಾಗಿ//16//


ಕಾಮ ಲೋಭ ಕ್ರೋಧ ಮದ ಹಿಂಸಾಮಯ ಅನೃತ ಕಪಟ

ತ್ರಿಧಾಮನ ಅವತಾರಗಳ ಭೇದಾಪೂರ್ಣ ಸುಖಬದ್ಧ

ಆಮಿಷ ಅನಿವೇದಿತ ಅಭೋಜ್ಯದಿ ತಾಮಸ ಅನ್ನವನು ಉಂಬ ತಾಮಸ

ಶ್ರೀ ಮದಾಂಧರ ಸಂಗದಿಂದಲಿ ತಮವೆ ವರ್ಧಿಪುದು//17//


ಜ್ಞಾನ ಭಕ್ತಿ ವಿರಕ್ತಿ ವಿನಯ ಪುರಾಣ ಶ್ರವಣ ಶಾಸ್ತ್ರ ಚಿಂತನ

ದಾನ ಶಮ ದಮ ಯಜ್ಞ ಸತ್ಯ ಅಹಿಂಸ ಭೂತದಯ

ಧ್ಯಾನ ಭಗವನ್ನಾಮ ಕೀರ್ತನ ಮೌನ ಜಪ ತಪ ವ್ರತ

ಸುತೀರ್ಥ ಸ್ನಾನ ಮಂತ್ರ ಸ್ತೋತ್ರ ವಂದನ ಸಜ್ಜನರ ಗುಣವು//18//


ಲೇಶ ಸ್ವಾತಂತ್ರ್ಯ ಗುಣವನು ಪ್ರವೇಶಗೈಸಿದ ಕಾರಣದಿ

ಗುಣ ದೋಷಗಳು ತೋರುವವು ಸತ್ಯಾಸತ್ಯ ಜೀವರೊಳು

ಶ್ವಾಸ ಭೋಜನ ಪಾನ ಶಯನ ವಿಲಾಸ ಮೈಥುನ ಗಮನ ಹರುಷ

ಕ್ಲೇಷ ಸ್ವಪ್ನ ಸುಷುಪ್ತಿ ಜಾಗ್ರತಿಯು ಅಹವು ಚೇತನಕೆ//19//


ಅರ್ಧ ತನ್ನೊಳಗಿರಿಸಿ ಉಳಿದೊಂದರ್ಧವ ವಿಭಾಗಗೈಸಿ

ವೃಜಿನ ಅರ್ದನನು ಪೂರ್ವದಲಿ ಸ್ವಾತಂತ್ರ್ಯವ ಕೊಟ್ಟಂತೆ

ಸ್ವರ್ಧುನೀಪಿತ ಕೊಡುವ ಅವರ ಸುಖ ವೃದ್ಧಿ ಗೋಸುಗ

ಬ್ರಹ್ಮ ವಾಯು ಕಪರ್ದಿ ಮೊದಲಾದ ಅವರೊಳಿದ್ದು ಅವರ ಯೋಗ್ಯತೆಯನರಿತು//20//


ಹಲಧರಾನುಜ ಮಾಳ್ಪ ಕೃತ್ಯವ ತಿಳಿಯದೆ ಅಹಂಕಾರದಿಂದ

ಎನ್ನುಳಿದು ವಿಧಿ ನಿಷೇಧ ಪಾತ್ರರಿಲ್ಲವೆಂಬುವಗೆ

ಫಲಗಳ ದ್ವಯಕೊಡುವ ದೈತ್ಯರ ಕಲುಷ ಕರ್ಮವ ಬಿಟ್ಟು ಪುಣ್ಯವ ಸೆಳೆದು

ತನೂಳಗಿಟ್ಟು ಕ್ರಮದಿಂ ಕೊಡುವ ಭಕ್ತರಿಗೆ//21//


ತೋಯಜಾಪ್ತನ ಕಿರಣ ವೃಕ್ಷ ಛಾಯ ವ್ಯಕ್ತಿಸುವಂತೆ

ಕಮಲದಳಾಯತಾಕ್ಷನು ಸರ್ವರೊಳು ವ್ಯಾಪಿಸಿದ ಕಾರಣದಿ

ಹೇಯ ಸದ್ಗುಣ ಕರ್ಮ ತೋರ್ಪವು ನ್ಯಾಯ ಕೋವಿದರಿಗೆ

ನಿರಂತರ ಶ್ರೀಯರಸ ಸರ್ವೋತ್ತಮೋತ್ತಮನು ಎಂದು ಪೇಳುವರು//22//


ಮೂಲ ಕಾರಣ ಪ್ರಕೃತಿಯೆನಿಪ ಮಹಾಲಕುಮಿ ಎಲ್ಲರೊಳಗಿದ್ದು ಸುಲೀಲೆಗೈವುತ

ಪುಣ್ಯ ಪಾಪಗಳರ್ಪಿಸಲು ಪತಿಗೆ

ಪಾಲಗಡಲೊಳು ಬಿದ್ದ ಜಲ ಕೀಲಾಲವು ಎನಿಪುದೆ

ಜೀವಕೃತ ಕರ್ಮಾಳಿ ತದ್ವತು ಶುಭವೆನಿಪವು ಎಲ್ಲ ಕಾಲದಲಿ//23//


ಜ್ಞಾನ ಸುಖ ಬಲ ಪೂರ್ಣ ವಿಷ್ಣುವಿಗೆ ಏನು ಮಾಳ್ಪವು ತ್ರಿಗುಣ ಕಾರ್ಯ

ಕೃಶಾನುವಿನ ಕೃಮಿಕವಿದು ಭಕ್ಷಿಪದುಂಟೆ ಲೋಕದೊಳು

ಈ ನಳಿನಜಾಂಡವನು ಬ್ರಹ್ಮ ಈಶಾನ ಮುಖ್ಯ ಸುರಾಸುರರ

ಕಾಲಾನಳನವೊಳ್ ನುಂಗುವಗೆ ಈ ಪಾಪಗಳ ಭಯವೆ//24//


ಮೋದ ಶಿರ ದಕ್ಷಿಣ ಸುಪಕ್ಷ ಪ್ರಮೋದ ಉತ್ತರ ಪಕ್ಷವೆಂದು

ಋಗಾದಿ ಶ್ರುತಿಗಳು ಪೇಳುವವು ಆನಂದಮಯ ಹರಿಗೆ

ಮೋದ ವೈಷಿಕ ಸುಖ ವಿಶಿಷ್ಟ ಪ್ರಮೋದ ಪಾರತ್ರಿಕ ಸುಖಪ್ರದನು

ಆದ ಕಾರಣದಿಂದ ಮೋದ ಪ್ರಮೋದನು ಎನಿಸಿದನು//25//


ಎಂದಿಗಾದರು ವೃಷ್ಟಿಯಿಂದ ವಸುಂಧರೆಯೊಳಗಿಪ್ಪ

ಅಖಿಳ ಜಲದಿಂ ಸಿಂಧು ವೃದ್ಧಿಯನು ಐದುವದೆ ಬಾರದಿರೆ ಬರಿದಹುದೆ

ಕುಂದು ಕೊರತೆಗಳಿಲ್ಲದಿಹ ಸ್ವಾನಂದ ಸಂಪೂರ್ಣ ಸ್ವಭಾವಗೆ

ಬಂದು ಮಾಡುವದೇನು ಕರ್ಮಾಕರ್ಮ ಜನ್ಯ ಫಲ//26//


ದೇಹ ವೃಕ್ಷದೊಳು ಎರಡು ಪಕ್ಷಿಗಳಿಹವು ಎಂದಿಗು ಬಿಡದೆ ಪರಮ ಸ್ನೇಹದಿಂದಲಿ

ಕರ್ಮಜ ಫಲಗಳುಂಬ ಜೀವ ಖಗ

ಶ್ರೀ ಹರಿಯು ತಾ ಸಾರಭೋಕ್ತನು ದ್ರೋಹಿಸುವ ಕಲ್ಯಾದಿ ದೈತ್ಯ ಸಮೂಹಕೆ

ಈವ ವಿಶಿಷ್ಟ ಪಾಪವ ಲೇಶವೆಲ್ಲರಿಗೆ//27//


ದ್ಯುಮಣಿ ಕಿರಣವ ಕಂಡ ಮಾತ್ರದಿ ತಿಮಿರವು ಓಡುವ ತೆರದಿ

ಲಕ್ಷ್ಮೀ ರಮಣ ನೋಡಿದ ಮಾತ್ರದಿಂದ ಅಘ ನಾಶವು ಐದುವದು

ಕಮಲ ಸಂಭವ ಮುಖ್ಯ ಎಲ್ಲಾ ಸುಮನಸರೊಳು ಇಹ ಪಾಪ ರಾಶಿಯ

ಅಮರಮುಖನಂದದಲಿ ಭಸ್ಮವ ಮಾಳ್ಪ ಹರಿ ತಾನು//28//


ಚತುರ ಶತ ಭಾಗದಿ ದಶಾಂಶದೊಳು ಇತರ ಜೀವರಿಗೀವ

ಲೇಶವ ದಿತಿಜ ದೇವಕ್ಕಳಿಗೆ ಕೊಡುವ ವಿಶಿಷ್ಟ ದುಃಖ ಸುಖ

ಮತಿವಿಹೀನ ಪ್ರಾಣಿಗಳಿಗೆ ಆಹುತಿಯ ಸುಖ ಮೃತಿ ದುಃಖ

ಅವರ ಯೋಗ್ಯತೆಯನರಿತು ಪಿಪೀಲಮಶಕಾದಿಗಳಿಗೀವ ಹರಿ//29//


ನಿತ್ಯ ನನಿರಯಾಂಧಾಖ್ಯ ಕೂಪದಿ ಭೃತ್ಯರಿಂದೊಡಗೂಡಿ

ಪುನರಾವೃತ್ತಿ ವರ್ಜಿತ ಲೋಕವೈದುವ ಕಲಿಯು ದ್ವೇಷದಲಿ

ಸತ್ಯ ಲೋಕಾಧಿಪ ಚತುರ್ಮುಖ ತತ್ವ ದೇವಕ್ಕಳ ಸಹಿತ

ನಿಜಮುಕ್ತಿಯ ಐದುವ ಹರಿ ಪದಾಬ್ಜವ ಭಜಿಸಿ ಭಕುತಿಯಲಿ//30//


ವಿಧಿ ನಿಷೇಧಗಳು ಎರಡು ಮರೆಯದೆ ಮಧು ವಿರೋಧಿಯ ಪಾದಕರ್ಪಿಸು

ಅದಿತಿ ಮಕ್ಕಳಿಗೀವ ಪುಣ್ಯವ ಪಾಪ ದೈತ್ಯರಿಗೆ

ಸುದರ್ಶನ ಧರೆಗೆ ಈಯದಿರೆ ಬಂದೊದಗಿ ಒಯ್ವರು ಪುಣ್ಯ ದೈತ್ಯರು

ಅಧಿಪರಿಲ್ಲದ ವೃಕ್ಷಗಳ ಫಲದಂತೆ ನಿತ್ಯದಲಿ//31//


ತಿಲಜ ಕಲ್ಮಶ ತ್ಯಜಿಸಿ ದೀಪವು ತಿಳಿಯ ತೈಲವ ಗ್ರಹಿಸಿ

ಮಂದಿರದೊಳಗೆ ವ್ಯಾಪಿಸಿಪ್ಪ ಕತ್ತಲೆ ಭಂಗಿಸುವ ತೆರದಿ

ಕಲಿ ಮೊದಲುಗೊಂಡ ಅಖಿಳ ದಾನವ ಕುಲಜರು ಅನುದಿನ ಮಾಳ್ಪ ಪುಣ್ಯಜ ಫಲವ

ಬ್ರಹ್ಮಾದ್ಯರಿಗೆ ಕೊಟ್ಟು ಅಲ್ಲಲ್ಲೇ ರಮಿಸುವನು//32//


ಇದ್ದಲೆಯು ನಿತ್ಯದಲಿ ಮೇಧ್ಯಾಮೇಧ್ಯ ವಸ್ತುಗಳುಂಡು

ಲೋಕದಿ ಶುದ್ಧ ಶುಚಿಯೆಂದೆನಿಸಿ ಕೊಂಬನು ವೇದ ಸ್ಮೃತಿಗಳೊಳು

ಬುದ್ಧಿಪೂರ್ವಕವಾಗಿ ವಿಬುಧರು ಶ್ರದ್ಧೆಯಿಂದ ಅರ್ಪಿಸಿದ ಕರ್ಮ

ನಿಷಿದ್ಧವಾದರು ಸರಿಯೇ ಕೈಕೊಂಡು ಉದ್ಧರಿಸುತಿಪ್ಪ//33//


ಒಡೆಯರಿದ್ದ ವನಸ್ಥ ಫಲಗಳ ಬಡಿದು ತಿಂಬುವರುಂಟೆ

ಕಂಡರೆ ಹೊಡೆದು ಬಿಸುಟುವರೆಂಬ ಭಯದಿಂ ನೋಡಲಂಜುವರು

ಬಿಡದೆ ಮಾಡುವ ಕರ್ಮಗಳ ಮನೆ ಮಡದಿ ಮಕ್ಕಳು ಬಂಧುಗಳು

ಕಾರೊಡಲನ ಆಳ್ಗಳೆಂದ ಮಾತ್ರದಲಿ ಓಡುವವು ದುರಿತ//34//


ಜ್ಞಾನ ಕರ್ಮ ಇಂದ್ರಿಯಗಳಿಂದ ಏನೇನು ಮಾಡುವ ಕರ್ಮಗಳ

ಲಕ್ಷ್ಮೀ ನಿವಾಸನಿಗೆ ಅರ್ಪಿಸುತಲಿರು ಕಾಲಕಾಲದಲಿ

ಪ್ರಾಣ ಪತಿ ಕೈಕೊಂಡು ನಾನಾ ಯೋನಿಯೈದಿಸನು

ಒಮ್ಮೆ ಕೊಡದಿರೆ ದಾನವರು ಸೆಳೆದೊಯ್ವರು ಎಲ್ಲಾ ಪುಣ್ಯ ರಾಶಿಗಳ//35//


ಶ್ರುತಿ ಸ್ಮೃತಿ ಅರ್ಥವ ತಿಳಿದು ಅಹಂಮತಿ ವಿಶಿಷ್ಟನು ಕರ್ಮ ಮಾಡಲು

ಪ್ರತಿಗ್ರಹಿಸನು ಪಾಪಗಳನು ಕೊಡುತಿಪ್ಪ ನಿತ್ಯ ಹರಿ

ಚತುರ ದಶ ಭುವನ ಅಧಿಪತಿ ಕೃತ ಕೃತ ಕೃತಜ್ಞ ನಿಯಾಮಕನುಯೆನೆ

ಮತಿಭ್ರಂಶ ಪ್ರಮಾದ ಸಂಕಟ ದೋಷವಾಗಿಲ್ಲ//36//


ವಾರಿಜಾಸನ ಮುಖ್ಯರು ಆಜ್ಞಾಧಾರಕರು ಸರ್ವ ಸ್ವತಂತ್ರ ರಮಾರಮಣನು

ಎಂದರಿದು ಇಷ್ಟಾನಿಷ್ಟ ಕರ್ಮಫಲ

ಸಾರಭೋಕ್ತನಿಗೆ ಅರ್ಪಿಸಲು ಸ್ವೀಕಾರ ಮಾಡುವ

ಪಾಪಫಲವ ಕುಬೇರ ನಾಮಕ ದೈತ್ಯರಿಗೆ ಕೊಟ್ಟು ಅವರ ನೋಯಿಸುವ//37//


ಕ್ರೂರ ದೈತ್ಯರೊಳಿದ್ದು ತಾನೇ ಪ್ರೇರಿಸುವ ಕಾರಣದಿ ಹರಿಗೆ ಕುಬೇರನೆಂಬರು

ಎಲ್ಲರೊಳು ನಿರ್ಗತ ರತಿಗೆ ನಿರತಿ

ಸೂರಿ ಗಮ್ಯಗೆ ಸೂರ್ಯನೆಂಬರು ದೂರ ಶೋಕಗೆ ಶುಕ್ಲ ಲಿಂಗ ಶರೀರ

ಇಲ್ಲದ ಕಾರಣದಿ ಅಕಾಯನೆನಿಸುವನು//38//


ಪೇಳಲು ವಶವಲ್ಲದ ಮಹಾ ಪಾಪಾಳಿಗಳನು ಒಂದೇ ಕ್ಷಣದಿ ನಿರ್ಮೂಲಗೈಸಲು ಬೇಕು

ಎಂಬುವಗೆ ಒಂದೇ ಹರಿನಾಮ

ನಾಲಿಗೆಯೊಳುಳ್ಳವಗೆ ಪರಮ ಕೃಪಾಳು ಕೃಷ್ಣನು ಕೈವಿಡಿದು

ತನ್ನ ಆಲಯದೊಳಿಟ್ಟು ಅನುದಿನದಿ ಆನಂದ ಪಡಿಸುವನು//39//


ರೋಗಿ ಔಷಧ ಪಥ್ಯದಿಂದ ನಿರೋಗಿಯೆನಿಸುವ ತೆರದಿ

ಶ್ರೀಮದ್ಭಾಗವತ ಸುಶ್ರವಣಗೈದು ಭವಾಖ್ಯ ರೋಗವನು ನೀಗಿ

ಶಬ್ಧಾದಿ ಅಖಿಳ ವಿಷಯ ನಿಯೋಗಿಸು ದಶ ಇಂದ್ರಿಯ ಅನಿಲನೊಳು

ಶ್ರೀ ಗುರು ಜಗನ್ನಾಥ ವಿಠಲ ಪ್ರೀತನಾಗುವನು//40//


//ಶ್ರೀ ಕ್ರೀಡಾವಿಲಾಸ ಸಂಧಿ ಸಂಪೂರ್ಣಂ//

//ಶ್ರೀ ಕೃಷ್ಣಾರ್ಪಣಮಸ್ತು//

ಶ್ರೀ ಹರಿಕಥಾಮೃತಸಾರ - 24

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಶ್ರೀ ಕಲ್ಪಸಾಧನ ಸಂಧಿ//

//ಶ್ರೀ ಅಪರೋಕ್ಷ ತಾರತಮ್ಯ ಸಂಧಿ//


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಏಕವಿಂಶತಿ ಮತ ಪ್ರವರ್ತಕ ಕಾಕು ಮಾಯ್ಗಳ ಕುಹಕ ಯುಕ್ತಿ ನಿರಾಕರಿಸಿ

ಸರ್ವೋತ್ತಮನು ಹರಿಯೆಂದು ಸ್ಥಾಪಿಸಿದ

ಶ್ರೀ ಕಳತ್ರನ ಸದನ ದ್ವಿಜಪ ಪಿನಾಕಿ ಸನ್ನುತ ಮಹಿಮ

ಪರಮ ಕೃಪಾಕಟಾಕ್ಷದಿ ನೋಡು ಮಧ್ವಾಚಾರ್ಯ ಗುರುವರ್ಯ//1//


ವೇದ ಮೊದಲಾಗಿಪ್ಪ ಅಮಲ ಮೋಕ್ಷ ಅಧಿಕಾರಿಗಳು ಆದ ಜೀವರ

ಸಾಧನಗಳ ಅಪರೋಕ್ಷ ನಂತರ ಲಿಂಗ ಭಂಗವನು

ಸಾಧುಗಳು ಚಿತ್ತೈಪದು ಎನ್ನಪರಾಧಗಳ ನೋಡದಲೆ

ಚಕ್ರ ಗದಾಧರನು ಪೇಳಿಸಿದ ತೆರದಂದದಲಿ ಪೇಳುವೆನು//2//


ತೃಣ ಕ್ರಿಮಿ ದ್ವಿಜ ಪಶು ನರೋತ್ತಮ ಜನಪ ನರಗಂಧರ್ವ ಗಣರು

ಇವರೆನಿಪರು ಅಂಶ ವಿಹೀನ ಕರ್ಮ ಸುಯೋಗಿಗಳೆಂದು

ತನು ಪ್ರತೀಕದಿ ಬಿಂಬನ ಉಪಾಸನವಗೈಯುತ ಇಂದ್ರಿಯಜ ಕರ್ಮ

ಅನವರತ ಹರಿಗೆ ಅರ್ಪಿಸುತ ನಿರ್ಮಮರುಯೆನಿಸುವರು//3//


ಏಳುವಿಧ ಜೀವ ಗಣ ಬಹಳ ಸುರಾಳಿ ಸಂಖ್ಯಾ ನೇಮವುಳ್ಳದು

ತಾಳಿ ನರದೇಹವನು ಬ್ರಾಹ್ಮಣರ ಕುಲದೊಳುದ್ಭವಿಸಿ

ಸ್ಥೂಲ ಕರ್ಮವ ತೊರೆದು ಗುರುಗಳು ಪೇಳಿದ ಅರ್ಥವ ತಿಳಿದು

ತತ್ತತ್ಕಾಲ ಧರ್ಮ ಸಮರ್ಪಿಸುವ ಅವರು ಕರ್ಮ ಯೋಗಿಗಳು//4//


ಹೀನ ಕರ್ಮಗಳಿಂದ ಬಹುವಿಧ ಯೋನಿಯಲಿ ಸಂಚರಿಸಿ ಪ್ರಾಂತಕೆ

ಮಾನುಷತ್ವವನೈದಿ ಸರ್ವೋತ್ತಮನು ಹರಿಯೆಂಬ

ಜ್ಞಾನ ಭಕ್ತಿಗಳಿಂದ ವೇದೋಕ್ತ ಅನುಸಾರ ಸಹಸ್ರಜನ್ಮ

ಅನ್ಯೂನ ಕರ್ಮವ ಮಾಡಿ ಹರಿಗರ್ಪಿಸಿದ ನಂತರದಿ//5//


ಹತ್ತು ಜನ್ಮಗಳಲಿ ಹರಿ ಸರ್ವೋತ್ತಮನು ಸುರಾಸುರ ಗಣಾರ್ಚಿತ

ಚಿತ್ರ ಕರ್ಮ ವಿಶೋಕ ಅನಂತಾನಂತ ರೂಪಾತ್ಮ

ಸತ್ಯ ಸತ್ಸಂಕಲ್ಪ ಜಗದೋತ್ಪತ್ತಿ ಸ್ಥಿತಿಲಯ ಕಾರಣ

ಜರಾಮೃತ್ಯು ವರ್ಜಿತನೆಂದು ಉಪಾಸನೆಗೈದ ತರುವಾಯ//6//


ಮೂರು ಜನ್ಮಗಳಲ್ಲಿ ದೇಹಾಗಾರ ಪಶು ಧನ ಪತ್ನಿ ಮಿತ್ರ

ಕುಮಾರ ಮಾತಾ ಪಿತೃಗಳಲ್ಲಿ ಇಹ ಸ್ನೇಹಗಿಂತ ಅಧಿಕ

ಮಾರಮಣನಲಿ ಬಿಡದೆ ಮಾಡುವ ಸೂರಿಗಳು ಈ ಉಕ್ತ ಜನ್ಮವ ಮೀರಿ

ಪರಮಾತ್ಮನ ಸ್ವದೇಹದಿ ನೋಡಿ ಸುಖಿಸುವರು//7//


ದೇವ ಗಾಯಕ ಅಜಾನ ಚಿರಪಿತೃ ದೇವರೆಲ್ಲರು

ಜ್ಞಾನ ಯೋಗಿಗಳು ಆವ ಕಾಲಕು ಪುಷ್ಕರ ಶನೈಶ್ಚರ ಉಷಾ ಸ್ವಾಹಾ ದೇವಿ

ಬುಧಸನಕಾದಿಗಳು ಮೇಘಾವಳಿ ಪರ್ಜನ್ಯ ಸಾಂಶರು

ಈ ಉಭಯ ಗಣದೊಳಗಿವರು ವಿಜ್ಞಾನ ಯೋಗಿಗಳು//8//


ಭರತ ಖಂಡದಿ ನೂರು ಜನ್ಮವ ಧರಿಸಿ ನಿಷ್ಕಾಮಕ ಸುಕರ್ಮ ಆಚರಿಸಿದ ಅನಂತರದಿ

ದಶ ಸಹಸ್ರ ಜನ್ಮದಲಿ ಉರುತರ ಜ್ಞಾನವನು

ಮೂರೈದು ಎರಡು ದಶ ದೇಹದಲಿ ಭಕ್ತಿಯ

ನಿರವಧಿಕನಲಿ ಮಾಡಿ ಕಾಂಬರು ಬಿಂಬ ರೂಪವನು//9//


ಸಾಧನಾತ್ಪೂರ್ವದಲಿ ಇವರಿಗೆ ಅನಾದಿ ಕಾಲ ಅಪರೋಕ್ಷವಿಲ್ಲ

ನಿಷೇಧ ಕರ್ಮಗಳಿಲ್ಲ ನರಕ ಪ್ರಾಪ್ತಿ ಮೊದಲಿಲ್ಲ

ವೇದ ಶಾಸ್ತ್ರಗಳಲ್ಲಿಪ್ಪ ವಿರೋಧ ವಾಕ್ಯವ ಪರಿಹರಿಸಿ

ಮಧುಸೂದನನೆ ಸರ್ವೋತ್ತಮೋತ್ತಮನು ಎಂದು ತುತಿಸುವರು//10//


ಸತ್ಯಲೋಕಾಧಿಪನ ವಿಡಿದು ಶತಸ್ಥ ದೇವಗಣ ಅಂತ ಎಲ್ಲರು

ಭಕ್ತಿ ಯೋಗಿಗಳೆಂದು ಕರೆಸುವರು ಆವ ಕಾಲದಲಿ

ಭಕ್ತಿ ಯೋಗ್ಯರ ಮಧ್ಯದಲಿ ಸದ್ಭಕ್ತಿ ವಿಜ್ಞಾನಾದಿ ಗುಣದಿಂದ ಉತ್ತಮ

ಉತ್ತಮ ಬ್ರಹ್ಮ ವಾಯೂ ವಾಣಿ ವಾಗ್ದೇವಿ//11//


ಋಜುಗಣಕೆ ಭಕ್ತಿ ಆದಿ ಗುಣ ಸಹಜವು ಎನಿಸುವವು

ಕ್ರಮದಿ ವೃದ್ಧಿ ಅಬ್ಜಜ ಪದವಿ ಪರ್ಯಂತ ಬಿಂಬ ಉಪಾಸನವು ಅಧಿಕ

ವೃಜಿನ ವರ್ಜಿತ ಎಲ್ಲರೊಳು ತ್ರಿಗುಣಜ ವಿಕಾರಗಳಿಲ್ಲವು ಎಂದಿಗು

ದ್ವಿಜಫಣಿಪ ಮೃಡ ಶಕ್ರ ಮೊದಲಾದ ಅವರೊಳು ಇರುತಿಹವು//12//


ಸಾಧನಾತ್ಪೂರ್ವದಲಿ ಈ ಋಜ್ವಾದಿ ಸಾತ್ವಿಕರು ಎನಿಪ ಸುರಗಣ

ಅನಾದಿ ಸಾಮಾನ್ಯ ಅಪರೋಕ್ಷಿಗಳೆಂದು ಕರೆಸುವರು

ಸಾಧನೋತ್ತರ ಸ್ವಸ್ವ ಬಿಂಬ ಉಪಾಧಿ ರಹಿತ ಆದಿತ್ಯನಂದದಿ

ಸಾದರದಿ ನೋಡುವರು ಅಧಿಕಾರ ಅನುಸಾರದಲಿ//13//


ಛಿನ್ನ ಭಕ್ತರು ಎನಿಸುತಿಹರು ಸುಪರ್ಣ ಶೇಷಾದಿ ಅಮರರರೆಲ್ಲ

ಅಚ್ಚಿನ್ನ ಭಕ್ತರು ನಾಲ್ವರೆನಿಪರು ಭಾರತೀ ಪ್ರಾಣ ಸೊನ್ನೊಡಲ ವಾಗ್ದೇವಿಯರು

ಪಣೆಗಣ್ಣ ಮೊದಲಾದ ಅವರೊಳಗೆ ತತ್ತನ್ನಿಯಾಮಕರಾಗಿ

ವ್ಯಾಪಾರವನು ಮಾಡುವರು//14//


ಹೀನ ಸತ್ಕರ್ಮಗಳು ಎರಡು ಪವಮಾನ ದೇವನು ಮಾಳ್ಪನು

ಇದಕೆ ಅನುಮಾನವಿಲ್ಲ ಎಂದು ಎನುತ ದೃಢ ಭಕ್ತಿಯಲಿ ಭಜಿಪರ್ಗೆ

ಪ್ರಾಣಪತಿ ಸಂಪ್ರೀತನಾಗಿ ಕುಯೋನಿಗಳ ಕೊಡ

ಎಲ್ಲ ಕರ್ಮಗಳು ಆನೆ ಮಾಡುವೆನೆಂಬ ಮನುಜರ ನರಕಕೆ ಐದಿಸುವ//15//


ದೇವರ್ಷಿ ಪಿತೃಪ ನರರೆನಿಸುವ ಐವರೊಳು ನೆಲೆಸಿದ್ದು

ಅವರ ಸ್ವಭಾವ ಕರ್ಮವ ಮಾಡಿ ಮಾಡಿಪ ಒಂದು ರೂಪದಲಿ

ಭಾವಿ ಬ್ರಹ್ಮನು ಕೂರ್ಮ ರೂಪದಿ ಈ ವಿರಿಂಚಿ ಅಂಡವನು ಬೆನ್ನಿಲಿ ತಾ ವಹಿಸಿ

ಲೋಕಗಳ ಪೊರೆವನು ದ್ವಿತೀಯ ರೂಪದಲಿ//16//


ಗುಪ್ತನಾಗಿದ್ದು ಅನಿಲ ದೇವ ದ್ವಿಸಪ್ತ ಲೋಕದ ಜೀವರೊಳಗೆ

ತ್ರಿಸಪ್ತ ಸಾವಿರದ ಆರುನೂರು ಶ್ವಾಸ ಜಪಗಳನು

ಸುಪ್ತಿಸ್ವಪ್ನದಿ ಜಾಗ್ರತಿಗಳಲಿ ಆಪ್ತನಂದದಿ ಮಾಡಿ ಮಾಡಿಸಿ

ಕ್ಲುಪ್ತ ಭೋಗಗಳೀವ ಪ್ರಾಂತಕೆ ತೃತೀಯ ರೂಪದಲಿ//17//


ಶುದ್ಧ ಸತ್ವಾತ್ಮಕ ಶರೀರದೊಳಿದ್ದ ಕಾಲಕು ಲಿಂಗದೇಹವು ಬದ್ಧವಾಗದು

ದಗ್ಧ ಪಟದೋಪಾದಿ ಇರುತಿಹುದು

ಸಿದ್ಧ ಸಾಧನ ಸರ್ವರೊಳಗೆ ಅನವದ್ಯನು ಎನಿಸುವ

ಗರುಡ ಶೇಷ ಕಪರ್ದಿ ಮೊದಲಾದ ಅಮರರೆಲ್ಲರು ದಾಸರೆನಿಸುವರು//18//


ಗಣದೊಳಗೆ ತಾನಿದ್ದು ಋಜುವೆಂದು ಎನಿಸಿಕೊಂಬನು

ಕಲ್ಪ ಶತ ಸಾಧನವಗೈದ ಅನಂತರದಿ ತಾ ಕಲ್ಕಿಯೆನಿಸುವನು

ದ್ವಿನವಾಶೀತಿಯ ಪ್ರಾಂತ ಭಾಗದಿ ಅನಿಲ ಹನುಮದ್ಭೀಮ ರೂಪದಿ

ದನುಜರೆಲ್ಲರ ಸದೆದು ಮಧ್ವಾಚಾರ್ಯರೆನಿಸಿದನು//19//


ವಿಶ್ವವ್ಯಾಪಕ ಹರಿಗೆ ತಾ ಸಾದೃಶ್ಯ ರೂಪವ ಧರಿಸಿ

ಬ್ರಹ್ಮ ಸರಸ್ವತೀ ಭಾರತಿಗಳಿಂದ ಒಡಗೂಡಿ ಪವಮಾನ

ಶಾಶ್ವತ ಸುಭಕ್ತಿಯಲಿ ಸುಜ್ಞಾನ ಸ್ವರೂಪನ ರೂಪಗುಣಗಳ

ಅನಶ್ವರವೆಂದೆನುತ ಪೊಗಳುವ ಶ್ರುತಿಗಳೊಳಗಿದ್ದು//20//


ಖೇಟ ಕುಕ್ಕುಟ ಜಲಟವೆಂಬ ತ್ರಿಕೋಟಿ ರೂಪವ ಧರಿಸಿ

ಸತತ ನಿಶಾಟರನು ಸಂಹರಿಸಿ ಸಲಹುವ ಸರ್ವ ಸತ್ಜನರ

ಕೈಟಭಾರಿಯ ಪುರದ ಪ್ರಥಮ ಕವಾಟವೆನಿಸುವ

ಗರುಡ ಶೇಷ ಲಲಾಟಲೋಚನ ಮುಖ್ಯ ಸುರರಿಗೆ ಆವಕಾಲದಲಿ//21//


ಈ ಋಜುಗಳೊಳಗೊಬ್ಬ ಸಾಧನ ನೂರು ಕಲ್ಪದಿ ಮಾಡಿ ಕರೆಸುವ

ಚಾರುತರ ಮಂಗಳ ಸುನಾಮದಿ ಕಲ್ಪ ಕಲ್ಪದಲಿ

ಸೂರಿಗಳು ಸಂಸ್ತುತಿಸಿ ವಂದಿಸೆ ಘೋರದುರಿತಗಳನು ಅಳಿದು ಪೋಪುವು

ಮಾರಮಣ ಸಂಪ್ರೀತನಾಗುವ ಸರ್ವ ಕಾಲದಲಿ//22//


ಪಾಹಿ ಕಲ್ಕಿಸುತೇಜದಾಸನೆ ಪಾಹಿ ಧರ್ಮಾಧರ್ಮ ಖಂಡನೆ

ಪಾಹಿ ವರ್ಚಸ್ವೀ ಖಷಣ ನಮೋ ಸಾಧು ಮಹೀಪತಿಯೆ

ಪಾಹಿ ಸದ್ಧರ್ಮಜ್ಞ ಧರ್ಮಜ ಪಾಹಿ ಸಂಪೂರ್ಣ ಶುಚಿ ವೈಕೃತ

ಪಾಹಿ ಅಂಜನ ಸರ್ಷಪನೆ ಖರ್ಪಟ: ಶ್ರದ್ಧಾಹ್ವ//23//


ಪಾಹಿ ಸಂಧ್ಯಾತ ವಿಜ್ಞಾನನೆ ಪಾಹಿ ಮಹ ವಿಜ್ಞಾನ ಕೀರ್ತನ

ಪಾಹಿ ಸಂಕೀರ್ಣಾಖ್ಯ ಕತ್ಥನ ಮಹಾಬುದ್ಧಿ ಜಯಾ

ಪಾಹಿ ಮಾಹತ್ತರ ಸುವೀರ್ಯನೆ ಪಾಹಿಮಾಂ ಮೇಧಾವಿ ಜಯಾಜಯ

ಪಾಹಿಮಾಂ ರಂತಿಮ್ನಮನು ಮಾಂ ಪಾಹಿ ಮಾಂ ಪಾಹಿ//24//


ಪಾಹಿ ಮೋದ ಪ್ರಮೋದ ಸಂತಸ ಪಾಹಿ ಆನಂದ ಸಂತುಷ್ಟನೆ

ಪಾಹಿಮಾಂ ಚಾರ್ವಾಂಗಚಾರು ಸುಬಾಹುಚಾರು ಪದ

ಪಾಹಿ ಪಾಹಿ ಸುಲೋಚನನೆ ಮಾಂ ಪಾಹಿ ಸಾರಸ್ವತ ಸುವೀರನೆ

ಪಾಹಿ ಪ್ರಾಜ್ಞ ಕಪಿ ಅಲಂಪಟ ಪಾಹಿ ಸರ್ವಜ್ಞ//25//


ಪಾಹಿಮಾಂ ಸರ್ವಜಿತ್ ಮಿತ್ರನೆ ಪಾಹಿ ಪಾಪ ವಿನಾಶಕನೆ

ಮಾಂ ಪಾಹಿ ಧರ್ಮವಿನೇತ ಶಾರದ ಓಜ ಸುತಪಸ್ವೀ

ಪಾಹಿಮಾಂ ತೇಜಸ್ವಿ ನಮೋ ಮಾಂ ಪಾಹಿ ದಾನ ಸುಶೀಲ

ನಮೋ ಮಾಂ ಪಾಹಿ ಯಜ್ಞ ಸುಕರ್ತ ಯಜ್ವೀ ಯಾಗ ವರ್ತಕನೆ//26//


ಪಾಹಿ ಪ್ರಾಣ ತ್ರಾಣ ಅಮರ್ಷಿ ಪಾಹಿಮಾಂ ಉಪದೇಷ್ಟ ತಾರಕ

ಪಾಹಿ ಕಾಲ ಕ್ರೀಡನ ಸುಕರ್ತಾ ಸುಕಾಲಜ್ಞ

ಪಾಹಿ ಕಾಲ ಸುಸೂಚಕನೆ ಮಾಂ ಪಾಹಿ ಕಲಿ ಸಂಹರ್ತಕಲಿ

ಮಾಂ ಪಾಹಿ ಕಾಲಿಶಾಮರೇತ ಸದಾರತ ಸುಬಲನೆ//27//


ಪಾಹಿ ಪಾಹಿ ಸಹೋ ಸದಾಕಪಿ ಪಾಹಿ ಗಮ್ಯ ಜ್ಞಾನ ದಶಕುಲ

ಪಾಹಿಮಾಂ ಶ್ರೋತವ್ಯ ನಮೋ ಸಂಕೀರ್ತಿತವ್ಯ ನಮೋ

ಪಾಹಿಮಾಂ ಮಂತವ್ಯಕವ್ಯನೆ ಪಾಹಿ ದ್ರಷ್ಟವ್ಯನೆ ಸರವ್ಯನೆ

ಪಾಹಿ ಗಂತವ್ಯ ನಮೋ ಕ್ರವ್ಯನೆ ಪಾಹಿ ಸ್ಮರ್ತವ್ಯ//28//


ಪಾಹಿ ಸೇವ್ಯ ಸುಭವ್ಯ ನಮೋ ಮಾಂ ಪಾಹಿ ಸ್ವರ್ಗವ್ಯ ನಮೋ ಭಾವ್ಯನೆ

ಪಾಹಿ ಮಾಂ ಜ್ಞಾತವ್ಯ ನಮೋ ವಕ್ತವ್ಯ ಗವ್ಯ ನಮೋ

ಪಾಹಿ ಮಂ ಲಾತವ್ಯವಾಯುವೆ ಪಾಹಿ ಬ್ರಹ್ಮ ಬ್ರಾಹ್ಮಣಪ್ರಿಯ

ಪಾಹಿ ಪಾಹಿ ಸರಸ್ವತೀಪತೇ ಜಗದ್ಗುರುವರ್ಯ//29//


ವಾಮನ ಪುರಾಣದಲಿ ಪೇಳಿದ ಈ ಮಹಾತ್ಮರ ಪರಮ ಮಂಗಳ ನಾಮಗಳ

ಸಂಪ್ರೀತಿ ಪೂರ್ವಕ ನಿತ್ಯ ಸ್ಮರಿಸುವವರಾ

ಶ್ರೀ ಮನೋರಮ ಅವರು ಬೇಡಿದ ಕಾಮಿತಾರ್ಥಗಳಿತ್ತು

ತನ್ನ ತ್ರಿಧಾಮದೊಳಗೆ ಅನುದಿನದಲಿಟ್ಟು ಆನಂದ ಪಡಿಸುವನು//30//


ಈ ಸಮೀರಗೆ ನೂರು ಜನ್ಮ ಮಹಾ ಸುಖ ಪ್ರಾರಬ್ಧ ಭೋಗ

ಪ್ರಯಾಸವಿಲ್ಲದೆ ಐದಿದನು ಲೋಕಾಧಿಪತ್ಯವನು

ಭೂಸುರನ ಒಪ್ಪಿಡಿ ಅವಲಿಗೆ ವಿಶೇಷ ಸೌಖ್ಯವನಿತ್ತ ದಾತನ

ದಾಸವರ್ಯನು ಲೋಕಪತಿಯೆನಿಸುವುದು ಅಚ್ಚರವೆ//31//


ದ್ವಿಶತ ಕಲ್ಪಗಳಲ್ಲಿ ಬಿಡದೆ ಈ ಪೆಸರಿನಿಂದಲಿ ಕರೆಸಿದನು

ತನ್ನೊಶಗ ಅಮರರೊಳಿದ್ದು ಮಾಡುವನು ಅವರ ಸಾಧನವ

ಅಸದುಪಾಸನೆಗೈವ ಕಲ್ಯಾದಿ ಅಸುರಪರ ಸಂಹರಿಸಿ

ತಾ ಪೊಂಬಸಿರ ಪದವೈದಿದನು ಗುರು ಪವಮಾನ ಸತಿಯೊಡನೆ//32//


ಅನಿಮಿಷರ ನಾಮದಲಿ ಕರೆಸುವ ಅನಿಲದೇವನು

ಒಂದು ಕಲ್ಪಕೆ ವನಜ ಸಂಭವನೆನಿಸಿ ಎಂಭತ್ತೇಳೂವರೆ ವರ್ಷ

ಗುಣತ್ರಯ ವರ್ಜಿತನ ಮಂಗಳ ಗುಣ ಕ್ರಿಯಾ ಸುರೂಪಂಗಳ

ಉಪಾಸನವು ಅವ್ಯಕ್ತಾದಿ ಪೃಥ್ವಿ ಅಂತರದಿರುತಿಹುದು//33//


ಮಹಿತ ಋಜುಗಣಕೆ ಒಂದೇ ಪರಮೋತ್ಸಾಹ ವಿವರ್ಜಿತವೆಂಬ ದೋಷವು

ವಿಹಿತವೆ ಸರಿ ಇದನು ಪೇಳ್ದಿರೆ ಮುಕ್ತ ಬ್ರಹ್ಮರಿಗೆ ಬಹುದು ಸಾಮ್ಯವು

ಜ್ಞಾನ ಭಕುತಿಯು ದ್ರುಹಿಣ ಪದ ಪರ್ಯಂತ ವೃದ್ಧಿಯು

ಬಹಿರುಪಾಸನೆ ಉಂಟು ಅನಂತರ ಬಿಂಬ ದರ್ಶನವು//34//


ಜ್ಞಾನರಹಿತ ಭಯತ್ವ ಪೇಳ್ವ ಪುರಾಣ ದೈತ್ಯರ ಮೋಹಕವು

ಚತುರಾನನಗೆ ಕೊಡುವದೆ ಮೋಹಾಜ್ಞಾನ ಭಯ ಶೋಕ

ಭಾನುಮಂಡಲ ಚಲಿಸಿದಂದದಿ ಕಾಣುವುದು ದೃಗ್ ದೋಷದಿಂದಲಿ

ಶ್ರೀನಿವಾಸನ ಪ್ರೀತಿಗೋಸುಗ ತೋರ್ದನಲ್ಲದಲೆ//35//


ಕಮಲಸಂಭವ ಸರ್ವರೊಳಗುತ್ತಮನೆನಿಸುವನು ಎಲ್ಲ ಕಾಲದಿ

ವಿಮಲ ಭಕ್ತಿ ಜ್ಞಾನ ವೈರಾಗ್ಯಾದಿ ಗುಣದಿಂದ

ಸಮಾಭ್ಯಧಿಕ ವಿವರ್ಜಿತನ ಗುಣ ರಮೆಯ ಮುಖದಿಂದರಿತು ನಿತ್ಯದಿ

ದ್ಯುಮಣಿ ಕೋಟಿಗಳಂತೆ ಕಾಂಬನು ಬಿಂಬ ರೂಪವನು//36//


ಜ್ಞಾನ ಭಕ್ತಾದಿ ಅಖಿಳ ಗುಣ ಚತುರಾನನೊಳಗಿಪ್ಪಂತೆ

ಮುಖ್ಯಾ ಪ್ರಾಣನಲಿ ಚಿಂತಿಪುದು ಯತ್ಕಿಂಚಿತ್ ಕೊರತೆಯಾಗಿ

ನ್ಯೂನ ಋಜು ಗಣ ಜೀವರಲ್ಲಿ ಕ್ರಮೇಣ ವೃದ್ಧಿ ಜ್ಞಾನ ಭಕ್ತಿ

ಸಮಾನ ಭಾರತಿ ವಾಣಿಗಳಲಿ ಪದ ಪ್ರಯುಕ್ತಾಧಿಕ//37//


ಸೌರಿ ಸೂರ್ಯನ ತೆರದಿ ಬ್ರಹ್ಮಸಮೀರ ಗಾಯತ್ರೀ ಗಿರಿಗಳೊಳು

ತೋರುವುದು ಅಸ್ಪಷ್ಟ ರೂಪದಿ ಮುಕ್ತಿ ಪರ್ಯಂತ

ವಾರಿಜಾಸನ ವಾಯು ವಾಣೀ ಭಾರತಿಗಳಿಗೆ ಮಹಾ ಪ್ರಳಯದಿ ಬಾರದು

ಅಜ್ಞಾನಾದಿ ದೋಷವು ಹರಿ ಕೃಪಾ ಬಲದಿ//38//


ನೂರು ವರುಷ ಅನಂತರದಲಿ ಸರೋರುಹಾಸನ ತನ್ನ ಕಲ್ಪದಲಿ

ಆರು ಮುಕ್ತಿಯನು ಐದುವರೊ ಅವರವರ ಕರೆದೊಯ್ದು

ಶೌರಿ ಪುರುದೊಳಗಿಪ್ಪ ನದಿಯಲಿ ಕಾರುಣಿಕ ಸುಸ್ನಾನ ನಿಜ ಪರಿವಾರ ಸಹಿತದಿ ಮಾಡಿ

ಹರಿ ಉದರ ಪ್ರವೇಶಿಸುವ//39//


ವಾಸುದೇವನ ಉದರದಲಿ ಪ್ರವೇಶಗೈದ ಅನಂತರದಿ

ನಿರ್ದೋಷ ಮುಕ್ತರು ಉದರದಿಂ ಪೊರಮಟ್ಟು ಹರುಷದಲಿ

ಮೇಶನಿಂದ ಆಜ್ಞವ ಪಡೆದು ಅನಂತಾಸನ ಸೀತದ್ವೀಪ ಮೋಕ್ಷದಿ ವಾಸವಾಗಿ

ವಿಮುಕ್ತ ದುಃಖರು ಸಂಚರಿಸುತಿಹರು//40//


ಸತ್ವ ಸತ್ವ ಮಹಾ ಸುಸೂಕ್ಷಮು ಸತ್ವ ಸತ್ವಾತ್ಮಕ ಕಳೇವರ

ಸತ್ಯಲೋಕಾಧಿಪನು ಎನಿಪಗೆ ಅತ್ಯಲ್ಪವು ಎರಡು ಗುಣ

ಮುಕ್ತ ಭೋಗ್ಯವಿದಲ್ಲ ಅಜಾಂಡ ಉತ್ಪತ್ತಿ ಕಾರಣವಲ್ಲ

ಹರಿ ಪ್ರೀತ್ಯರ್ಥವಾಗೀ ಜಗದ ವ್ಯಾಪಾರಗಳ ಮಾಡುವನು//41//


ಪಾದ ನ್ಯೂನ ಶತಾಬ್ದ ಪರ್ಯಂತ ಓದಿ ಉಗ್ರತಪ ಅಹ್ವಯದಿ ಲವಣ ಉದಧಿಯೊಳಗೆ

ಕಲ್ಪದಶ ತಪವಿದ್ದ ಅನಂತರದಿ

ಸಾಧಿಸಿದ ಮಹದೇವ ಪದವ ಆರೈದು ನವ ಕಲ್ಪ ಅವಸಾನಕೆ

ಐದುವನು ಶೇಷನ ಪದವ ಪಾರ್ವತಿ ಸಹಿತನಾಗಿ//42//


ಇಂದ್ರ ಮನು ದಶ ಕಲ್ಪಗಳಲಿ ಸುನಂದ ನಾಮದಿ ಶ್ರವಣಗೈದು

ಮುಕುಂದನ ಅಪರೋಕ್ಷಾರ್ಥ ನಾಲ್ಕು ಸುಕಲ್ಪ ತಪವಿದ್ದು

ನೊಂದು ಪೊಗೆಯೊಳು ಕೋಟಿ ವರುಷ ಪುರಂದರನದನುಂಡ ಅನಂತರ

ಪೊಂದಿದನು ನಿಜ ಲೋಕ ಸುರಪತಿ ಕಾಮನಿದರಂತೆ//43//


ಕರೆಸುವರು ಪೂರ್ವದಲಿ ಚಂದ್ರಾರ್ಕರು ಅತಿ ಶಾಂತ ಸುರೂಪ ನಾಮದಿ

ಎರಡೆರೆಡು ಮನು ಕಲ್ಪ ಶ್ರವಣಗೈದು

ಮನು ಕಲ್ಪ ವರ ತಪೋ ಬಲದಿಂದ ಅರ್ವಾಕ್ ಶಿರಗಳಾಗಿ ಈರೈದು ಸಾವಿರ ವರುಷ

ದುಃಖವನೀಗಿ ಕಾಂಬರು ಬಿಂಬ ರೂಪವನು//44//


ಸಾಧನಗಳ ಅಪರೋಕ್ಷ ಅನಂತರ ಐದುವರು ಮೋಕ್ಷವನು

ಶಿವ ಶಕ್ರಾದಿ ದಿವಿಜರು ಉಕ್ತ ಕ್ರಮದಿಂ ಕಲ್ಪ ಸಂಖ್ಯೆಯಲಿ

ಐದಲೆಗೆ ಐವತ್ತು ಉಪೇಂದ್ರ ಸಹೋದರನಿಗಿಪ್ಪತ್ತು

ದ್ವಿನವ ತ್ವಗಾಧಿಪತಿ ಪ್ರಾಣನಿಗೆ ಗುರು ಮನುಗಳಿಗೆ ಷೋಡಶವು//45//


ಪ್ರವಹ ಮರುತಗೆ ಹನ್ನೆರಡು ಸೈಂಧವ ದಿವಾಕರ ಧರ್ಮರಿಗೆ ದಶ

ನವ ಸುಕಲ್ಪವು ಮಿತ್ರರಿಗೆ ಶೇಷ ಶತ ಜನರಿಗೆಂಟು

ಕವಿ ಸನಕ ಸುಸನಂದನ ಸನತ್ಕುವರ ಮುನಿಗಳಿಗೆ ಏಳು

ವರುಅನನ ಯುವತಿ ಪರ್ಜನ್ಯಾದಿ ಪುಷ್ಕರಗೆ ಆರು ಕಲ್ಪದಲಿ//46//


ಐದು ಕರ್ಮಜ ಸುರರಿಗೆ ಆಜಾನಾದಿಗಳಿಗೆ ಎರಡೆರೆಡು ಕಲ್ಪ

ಅರ್ಧಾಧಿಕ ತ್ರಯ ಗೋಪಿಕಾ ಸ್ತ್ರೀಯರಿಗೆ ಪಿತೃ ತ್ರಯವು

ಈ ದಿವೌಕಸ ಮನುಜ ಗಾಯಕರು ಐದುವರು ಎರಡೊಂದು ಕಲ್ಪ

ನರಾಧಿಪರಿಗೆ ಅರೆ ಕಲ್ಪದೊಳಗೆ ಅಪರೋಕ್ಷವು ಇರುತಿಹುದು//47//


ದೀಪಗಳ ಅನುಸರಿಸಿ ದೀಪ್ತಿಯು ವ್ಯಾಪಿಸಿ ಮಹಾತಿಮಿರ ಕಳೆದು

ಪರೋಪಕಾರವ ಮಾಳ್ಪ ತೆರದಂದದಲಿ ಪರಮಾತ್ಮ

ಆ ಪಯೋಜಾಸನನೊಳಗಿದ್ದು ಸ್ವರೂಪ ಶಕ್ತಿಯ ವ್ಯಕ್ತಿಗೈಸುತ

ತಾ ಪೊಳೆವನು ಅವರಂತೆ ಚೇಷ್ಟೆಯ ಮಾಡಿ ಮಾಡಿಸುವ//48//


ಸ್ವೋದರಸ್ಥಿತ ಪ್ರಾಣ ರುದ್ರ ಇಂದ್ರಾದಿ ಸುರರಿಗೆ ದೇಹಗಳ ಕೊಟ್ಟು

ಆದರದಿ ಅವರವರ ಸೇವೆಯ ಕೊಂಬನು ಅನವರತ

ಮೋದ ಬೋಧ ದಯಾಬ್ಧಿ ತನ್ನವರಾಧಿ ರೋಗವ ಕಳೆದು

ಮಹಾದಪರಾಧಗಳ ನೋಡದಲೆ ಸಲಹುವ ಸತತ ಸ್ಮರಿಸುವರ//49//


ಪ್ರತಿ ಪ್ರತೀ ಕಲ್ಪದಲಿ ಸೃಷ್ಟಿ ಸ್ಥಿತಿ ಲಯವ ಮಾಡುತಲೆ ಮೋದಿಪ

ಚತುರಮುಖ ಪವಮಾನರ ಅನ್ನವ ಮಾಡಿ ಭುಂಜಿಸುವ

ಘೃತವೆ ಮೃತ್ಯುಂಜಯನೆನಿಪ ದೇವತೆಗಳೆಲ್ಲ ಉಪಸೇಚನರು

ಶ್ರೀಪತಿಗೆ ಮೂರ್ಜಗವೆಲ್ಲ ಓದನ ಅತಿಥಿಯೆನಿಸಿಕೊಂಬ//50//


ಗರ್ಭಿಣಿ ಸ್ತ್ರೀ ಉಂಡ ಭೋಜನ ಗರ್ಭಗತ ಶಿಶು ಉಂಬ ತೆರದಲಿ

ನಿರ್ಭಯನು ತಾನುಂಡು ಉಣಿಸುವನು ಸರ್ವ ಜೀವರಿಗೆ

ನಿರ್ಬಲಾತಿ ಪರಮಾಣು ಜೀವಗೆ ಅಬ್ಬುವದೆ ಸ್ಥೂಲಾನ್ನ ಭೋಜನ

ಅರ್ಭಕರು ಪೇಳುವರು ಕೋವಿದರು ಇದನ ಒಡಂಬಡರು//51//


ಅಪಚಯಗಳಿಲ್ಲ ಉಂಡುದುದರಿಂದ ಉಪಚಯಗಳಿಲ್ಲ

ಅಮರಗಣದೊಳಗೆ ಉಪಮರೆನಿಸುವರಿಲ್ಲ ಜನ್ಮಾದಿಗಳು ಮೊದಲಿಲ್ಲ

ಅಪರಿಮಿತ ಸನ್ಮಹಿಮ ಭಕ್ತರ ಅಪುನರಾವರ್ತರನು ಮಾಡುವ

ಕೃಪಣ ವತ್ಸಲ ಸ್ವಪದ ಸೌಖ್ಯವನಿತ್ತು ಶರಣರಿಗೆ//52//


ಬಿತ್ತಿ ಬೀಜವು ಭೂಮಿಯೊಳು ನೀರೆತ್ತಿ ಬೆಳೆಸಿದ ಬೆಳಸು ಪ್ರಾಂತಕೆ

ಕಿತ್ತಿ ಮೆಲುವಂದದಲಿ ಲಕ್ಷ್ಮೀ ರಮಣ ಲೋಕಗಳ ಮತ್ತೆ ಜೀವರ

ಕರ್ಮ ಕಾಲೋತ್ಪತ್ತಿ ಸ್ಥಿತಿ ಲಯ ಮಾಡುತಲಿ

ಸಮವರ್ತಿಯೆನಿಸುವ ಖೇದ ಮೋದಗಳು ಇಲ್ಲ ಅನವರತ//53//


ಶ್ವಸನ ರುದ್ರ ಇಂದ್ರ ಪ್ರಮುಖ ಸುಮನಸರೊಳಿದ್ದರು

ಕ್ಷುತ್ಪಿಪಾಸಗಳು ವಶದೊಳಿಪ್ಪವು ಸಕಲ ಭೋಗಕೆ ಸಾಧನಗಳಾಗಿ

ಅಸುರ ಪ್ರೇತ ಪಿಶಾಚಿಗಳ ಭಾದಿಸುತಲಿಪ್ಪವು

ದಿನದಿನದಿ ಮಾನಿಸರೊಳಗೆ ಮೃಗ ಪಕ್ಷಿ ಜೀವರೊಳಿದ್ದು ಪೋಗುವವು//54//


ವಾಸುದೇವಗೆ ಸ್ವಪ್ನಸುಪ್ತಿಪಿಪಾಸ ಕ್ಷುತ್ ಭಯ ಶೋಕ ಮೋಹ ಆಯಾಸ ಅಪಸ್ಮೃತಿ

ಮಾತ್ಸರ್ಯ ಮದ ಪುಣ್ಯ ಪಾಪಾದಿ ದೋಷ ವರ್ಜಿತನೆಂದು

ಬ್ರಹ್ಮ ಸದಾಶಿವಾದಿ ಸಮಸ್ತ ದಿವಿಜರು ಉಪಾಸನೆಯಗೈದು

ಎಲ್ಲ ಕಾಲದಿ ಮುಕ್ತರಾಗಿಹರು//55//


ಪರಮ ಸೂಕ್ಷ್ಮ ಕ್ಷಣವು ಐದು ತ್ರುಟಿ ಕರೆಸುವದು ಐವತ್ತು ತ್ರುಟಿ ಲವ

ಎರಡು ಲವವು ನಿಮಿಷ ನಿಮಿಷಗಳೆಂಟು ಮಾತ್ರ

ಯುಗ ಗುರು ದಶ ಪ್ರಾಣರು ಪಳ ಹನ್ನೆರಡು ಬಾಣವು

ಘಟಿಕ ತ್ರಿಂಶತಿ ಇರುಳು ಹಗಲು ಅರವತ್ತು ಘಟಿಕಗಳು ಅಹೊರಾತ್ರಿಗಳು//56//


ಈ ದಿವಾರಾತ್ರಿಗಳು ಎರಡು ಹದಿನೈದು ಪಕ್ಷಗಳು

ಎರಡು ಮಾಸಗಳು ಆದಪವು ಮಾಸ ದ್ವಯವೆ ಋತು ಋತುತ್ರಯಗಳು ಅಯನ

ಐದುವದು ಅಯನದ್ವಯಾಬ್ದ ಕೃತಾದಿ ಯುಗಗಳು

ದೇವ ಮಾನದಿ ದ್ವಾದಶ ಸಹಸ್ರ ವರುಷಗಳು ಅದನು ಪೇಳುವೆನು//57//


ಚತುರ ಸಾವಿರದ ಎಂಟು ನೂರಿವು ಕೃತ ಯುಗಕೆ

ಸಹಸ್ರ ಸಲೆ ಷಟ್ ಶತವು ತ್ರೇತಗೆ ದ್ವಾಪರಕೆ ದ್ವಿಸಹಸ್ರ ನಾನೂರು

ದಿತಿಜಪತಿ ಕಲಿಯುಗಕೆ ಸಾವಿರ ಶತ ದ್ವಯಗಳು ಕೂಡಿ

ಈ ದೇವತೆಗಳಿಗೆ ಹನ್ನೆರಡು ಸಾವಿರ ವಿಹವು ವರ್ಷಗಳು//58//


ಪ್ರಥಮ ಯುಗಕೆ ಏಳಧಿಕ ಅರೆ ವಿಂಶತಿ ಸುಲಕ್ಷಾಷ್ಟೋತ್ತರ

ಸುವಿಂಶತಿ ಸಹಸ್ರ ಮನುಷ್ಯ ಮಾನಾಬ್ದಗಳು

ಷಣ್ಣವತಿ ಮಿತ ಸಹಸ್ರದ ಲಕ್ಷ ದ್ವಾದಶ ದ್ವಿತೀಯ

ತೃತೀಯಕೆ ಎಂಟು ಲಕ್ಷದ ಚತುರ ಷಷ್ಠಿ ಸಹಸ್ರ ಕಾಲಿಗೆ ಇದರರ್ಧ ಚಿಂತಿಪುದು//59//


ಮೂರಧಿಕ ನಾಲ್ವತ್ತು ಲಕ್ಷದ ಆರು ಮೂರೆರೆಡಧಿಕ ಸಾವಿರ

ಈರೆರೆಡು ಯುಗ ವರುಷ ಸಂಖ್ಯೆಗೈಯಲು ಇನಿತಿಹುದೊ

ಸೂರಿ ಪೆಚ್ಚಿಸೆ ಸಾವಿರದ ನಾನೂರು ಮೂವತ್ತೆರೆಡು ಕೋಟಿ

ಸರೋರುಹಾಸನಗೆ ಇದು ದಿವಸವು ಎಂಬರು ವಿಪಶ್ಚಿತರು//60//


ಶತಧೃತಿಗೆ ಈ ದಿವಸಗಳು ತ್ರಿಂಶತಿಯು ಮಾಸ ದ್ವಾದಶಾಬ್ದವು

ಶತವು ಎರಡರೊಳು ಸರ್ವ ಜೀವೋತ್ಪತ್ತಿ ಸ್ಥಿತಿ ಲಯವು

ಶೃತಿ ಸ್ಮೃತಿಗಳು ಪೇಳುತಿಹವು ಅಚ್ಯುತಗೆ ನಿಮಿಷವಿದೆಂದು

ಸುಖ ಶಾಶ್ವತಗೆ ಪಾಸಟಿಯೆಂಬುವರೆ ಬ್ರಹ್ಮಾದಿ ದಿವಿಜರನು//61//


ಆದಿ ಮಧ್ಯಾಂತರಗಳಿಲ್ಲದ ಮಾಧವಗಿದು ಉಪಚಾರವೆಂದು

ಋಗಾದಿ ವೇದ ಪುರಾಣಗಳು ಪೇಳುವವು ನಿತ್ಯದಲಿ

ಮೋದಮಯನ ಅನುಗ್ರಹವ ಸಂಪಾದಿಸಿ ರಮಾ ಬ್ರಹ್ಮ ರುದ್ರ ಇಂದ್ರಾದಿಗಳು

ತಮ್ಮ ತಮ್ಮ ಪದವಿಯನು ಐದಿ ಸುಖಿಸುವರು//62//


ಈ ಕಥಾಮೃತ ಪಾನ ಸುಖ ಸುವಿವೇಕಿಗಳಿಗಲ್ಲದಲೆ

ವೈಷಿಕ ವ್ಯಾಕುಲ ಕುಚಿತ್ತರಿಗೆ ದೊರೆವುದಾವ ಕಾಲದಲಿ

ಲೋಕ ವಾರ್ತೆಯ ಬಿಟ್ಟು ಇದನವಲೋಕಿಸುತ ಮೋದಿಪರಿಗೊಲಿದು

ಕೃಪಾಕರ ಜಗನ್ನಾಥ ವಿಠಲ ಪೊರೆವನು ಅನುದಿನದಿ//63//


//ಇತಿ ಶ್ರೀ ಕಲ್ಪಸಾಧನ ಸಂಧಿ ಸಂಪೂರ್ಣಂ//

//ಇತಿ ಶ್ರೀ ಅಪರೋಕ್ಷ ತಾರತಮ್ಯ ಸಂಧಿ ಸಂಪೂರ್ಣಂ//

//ಶ್ರೀ ಕೃಷ್ಣಾರ್ಪಣಮಸ್ತು //

ಶ್ರೀ ಹರಿಕಥಾಮೃತಸಾರ - 23

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಶ್ರೀ ಬೃಹತ್ತಾರತಮ್ಯ ಸಂಧಿ//


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಹರಿ ಸಿರಿ ವಿರಂಚೀರ ಮುಖ ನಿರ್ಜನರ ಆವೇಶಾವತಾರಗಳ

ಸ್ಮರಿಸು ಗುಣಗಳ ಸರ್ವ ಕಾಲದಿ ಭಕ್ತಿ ಪೂರ್ವಕದಿ//


ಮೀನ ಕೂರ್ಮ ಕ್ರೋಡ ನರಹರಿ ಮಾಣವಕ ಭೃಗುರಾಮ ದಶರಥ ಸೂನು

ಯಾದವ ಬುದ್ಧ ಕಲ್ಕೀ ಕಪಿಲ ವೈಕುಂಠ

ಶ್ರೀನಿವಾಸ ವ್ಯಾಸ ಋಷಭ ಹಯಾನನಾ ನಾರಾಯಣೀ ಹಂಸ ಅನಿರುದ್ಧ

ತ್ರಿವಿಕ್ರಮ ಶ್ರೀಧರ ಹೃಷೀಕೇಶ//1//


ಹರಿಯು ನಾರಾಯಣನು ಕೃಷ್ಣ ಅಸುರ ಕುಲಾಂತಕ ಸೂರ್ಯ ಸಮಪ್ರಭ

ಕರೆಸುವನು ನಿರ್ದುಷ್ಟ ಸುಖ ಪರಿಪೂರ್ಣ ತಾನೆಂದು

ಸರ್ವದೇವೋತ್ತಮನು ಸರ್ವಗ ಪರಮ ಪುರುಷ ಪುರಾತನ

ಜರಾಮರಣ ವರ್ಜಿತ ವಾಸುದೇವಾದಿ ಅಮಿತ ರೂಪಾತ್ಮ//2//


ಈ ನಳಿನಭವ ಜನನಿ ಲಕ್ಷ್ಮೀ ಜ್ಞಾನ ಬಲ ಭಕ್ತಾದಿ ಗುಣ ಸಂಪೂರ್ಣಳು ಎನಿಪಳು

ಸರ್ವ ಕಾಲದಿ ಹರಿ ಕೃಪಾ ಬಲದಿ

ಹೀನಳು ಎನಿಪಳು ಅನಂತ ಗುಣದಿ ಪುರಾಣ ಪುರುಷಗೆ

ಪ್ರಕೃತಿಗಿನ್ನು ಸಮಾನರು ಎನಿಸುವರಿಲ್ಲ ಮುಕ್ತಾಮುಕ್ತ ಸುರರೊಳಗೆ//3//


ಗುಣಗಳ ತ್ರಯಮಾನಿ ಶ್ರೀ ಕುಂಭಿಣಿ ಮಹಾ ದುರ್ಗ ಅಂಭ್ರಣೀ ರುಗ್ಮಿಣಿಯು

ಸತ್ಯಾಶಾಂತಿಕೃತಿ ಜಯ ಮಾಯ ಮಹಲಕುಮಿ ಜನಕಜಾಕಮಲ ಆಲಯಾ

ದಕ್ಷಿಣೆ ಸುಪದ್ಮಾ ತ್ರಿಲೋಕ ಈಶ್ವರಿ

ಅಣು ಮಹತ್ತಿನೊಳಿದ್ದು ಉಪಮಾರಹಿತಳು ಎನಿಸುವಳು//4//


ಘೋಟಕಾಸ್ಯನ ಮಡದಿಗಿಂತಲಿ ಹಾಟಕ ಉದರಪವನರು ಈರ್ವರು

ಕೋಟಿ ಗುಣದಿಂದ ಅಧಮರು ಎನಿಪರು ಆವಕಾಲದಲಿ

ಖೇಟಪತಿ ಶೇಷ ಅಮರೇಂದ್ರರ ಪಾಟಿಮಾಡದೆ

ಶ್ರೀಶನ ಕೃಪಾ ನೋಟದಿಂದಲಿ ಸರ್ವರೊಳು ವ್ಯಾಪಾರ ಮಾಡುವರು//5//


ಪುರುಷ ಬ್ರಹ್ಮ ವಿರಿಂಚಿ ಮಹಾನ್ ಮರುತ ಮುಖ್ಯಪ್ರಾಣ ಧೃತಿ ಸ್ಮೃತಿ

ಗುರುವರ ಮಹಾಧ್ಯಾತ ಬಲ ವಿಜ್ಞಾತ ವಿಖ್ಯಾತ ಗರಳಭುಗ್

ಭವರೋಗ ಭೇಷಜ ಸ್ವರವರಣ ವೇದಸ್ಥ ಜೀವೇಶ್ವರ

ವಿಭೀಷಣ ವಿಶ್ವ ಚೇಷ್ಟಕ ವೀತಭಯ ಭೀಮ//6//


ಅನಿಲಸ್ಥಿತಿ ವೈರಾಗ್ಯ ನಿಧಿ ರೋಚನ ವಿಮುಕ್ತಿಗಾನಂದ ದಶಮತಿ

ಅನಿಮಿಶೇಷ ಅನಿದ್ರ ಶುಚಿ ಸತ್ವಾತ್ಮಕ ಶರೀರ

ಅಣು ಮಹದ್ರೂಪಾತ್ಮಕ ಅಮೃತ ಹನುಮದಾದಿ ಅವತಾರ

ಪದ್ಮಾಸನ ಪದವಿ ಸಂಪ್ರಾಪ್ತ ಪರಿಸರಾಖಣ ಆಶ್ಮಸಮ//7//


ಮಾತರಿಶ್ವ ಬ್ರಹ್ಮರು ಜಗನ್ಮಾತೆಗೆ ಅಧಮ ಅಧೀನರೆನಿಪರು

ಶ್ರೀ ತರುಣಿ ವಲ್ಲಭನು ಈರ್ವರೊಳು ಆವ ಕಾಲದಲಿ

ನೀತ ಭಕ್ತಿ ಜ್ಞಾನ ಬಲ ರೂಪ ಅತಿಶಯದಿಂದಿದ್ದು

ಚೇತನಾಚೇತನಗಳೊಳು ವ್ಯಾಪ್ತರೆನಿಪರು ತತ್ತದಾಹ್ವಯದಿ//8//


ಸರಸ್ವತೀ ವೇದ ಆತ್ಮಿಕಾ ಭುಜಿ ನರಹರೀ ಗುರುಭಕ್ತಿ ಬ್ರಾಹ್ಮೀ

ಪರಮ ಸುಖ ಬಲ ಪೂರ್ಣೆ ಶ್ರದ್ಧಾ ಪ್ರೀತಿ ಗಾಯತ್ರೀ

ಗರುಡ ಶೇಷರ ಜನನಿ ಶ್ರೀ ಸಂಕರುಷಣನ ಜಯ ತನುಜೆ

ವಾಣೀ ಕರಣ ನಿಯಾಮಕೆ ಚತುರ್ದಶ ಭುವನ ಸನ್ಮಾನ್ಯೇ//9//


ಕಾಳಿಕಾಶಿಜೆ ವಿಪ್ರಜೆ ಪಾಂಚಾಲಿ ಶಿವಕನ್ಯ ಇಂದ್ರಸೇನಾ

ಕಾಲಮಾನೀ ಚಂದ್ರದ್ಯುಸಭಾ ನಾಮ ಭಾರತಿಗೆ

ಘಾಳಿಬ್ರಹ್ಮರ ಯುವತಿಯರು ಏಳೇಳು ಐವತ್ತೊಂದು ಗುಣದಿಂ ಕೀಳರೆನಿಪರು

ತಮ್ಮ ಪತಿಗಳಿಂದಲಿ ಆವಾಗ//10//


ಹರಿ ಸಮೀರ ಆವೇಶ ನರ ಸಂಕರುಷಣ ಆವೇಶ ಯುತ ಲಕ್ಷ್ಮಣ

ಪರಮ ಪುರುಷನ ಶುಕ್ಲ ಕೇಶ ಆವೇಶ ಬಲರಾಮ

ಹರ ಸದಾಶಿವ ತಪಾಹಂಕೃತು ಮೃತ ಯುಕ್ತ ಶುಕ ಊರ್ಧ್ವಾಪಟು

ತತ್ಪುರುಷ ಜೈಗೀಶೌರ್ವ ದ್ರೌಣೀ ವ್ಯಾಧ ದೂರ್ವಾಸ//11//


ಗರುಡ ಶೇಷ ಶಶಿ ಅಂಕದಳ ಶೇಖರರು ತಮ್ಮೊಳು ಸಮರು

ಭಾರತಿ ಸರಸಿಜಾಸನ ಪತ್ನಿಗೆ ಅಧಮರು ನೂರು ಗುಣದಿಂದ

ಹರಿ ಮಡದಿ ಜಾಂಬವತಿಯೊಳು ಶ್ರೀ ತರುಣಿಯ ಆವೇಶವಿಹುದು ಎಂದಿಗೂ

ಕೊರತೆಯೆನಿಪರು ಗರುಡ ಶೇಷರಿಗೆ ಐವರು ಐದುಗುಣ//12//


ನೀಲಭದ್ರಾ ಮಿತ್ರವಿಂದಾ ಮೇಲೆನಿಪ ಕಾಳಿಂದಿ ಲಕ್ಷ್ಮಣ

ಬಾಲೆಯರಿಗಿಂದ ಅಧಮ ವಾರುಣಿ ಸೌಪರಣಿ ಗಿರಿಜಾ

ಶ್ರೀ ಲಕುಮಿಯುತ ರೇವತೀ ಶ್ರೀ ಮೂಲ ರೂಪದಿ ಪೇಯಳು ಎನಿಪಳು

ಶೈಲಜಾದ್ಯರು ದಶಗುಣ ಅಧಮ ತಮ್ಮ ಪತಿಗಳಿಗೆ//13//


ನರಹರಿ ಈರ ಆವೇಶ ಸಂಯುತ ನರಪುರಂದರಗಾಧಿ ಕುಶ

ಮಂದರದ್ಯುಮ್ನ ವಿಕುಕ್ಷಿ ವಾಲೀ ಇಂದ್ರನ ಅವತಾರ

ಭರತ ಬ್ರಹ್ಮಾವಿಷ್ಟ ಸಾಂಬ ಸುದರ್ಶನ ಪ್ರದ್ಯುಮ್ನ

ಸನಕಾದ್ಯರೊಳಗಿಪ್ಪ ಸನತ್ಕುಮಾರನು ಷನ್ಮುಕನು ಕಾಮ//14//


ಈರೈದು ಗುಣ ಕಡಿಮೆ ಪಾರ್ವತಿ ವಾರುಣೀಯರಿಗೆ ಇಂದ್ರ ಕಾಮ

ಶರೀರಮಾನಿ ಪ್ರಾಣ ದಶ ಗುಣ ಅವರ ಶಕ್ರನಿಗೆ

ಮಾರಜಾ ರತಿ ದಕ್ಷ ಗುರುವೃತ್ತ ಅರಿ ಜಾಯಾ ಶಚಿ ಸ್ವಯಂಭುವರು

ಆರು ಜನ ಸಮ ಪ್ರಾಣಗೆ ಅವರರು ಹತ್ತು ಗುಣದಿಂದ//15//


ಕಾಮ ಪುತ್ರ ಅನಿರುದ್ಧ ಸೀತಾರಾಮನ ಅನುಜ ಶತ್ರುಹನ ಬಲರಾಮನನುಜ

ಪೌತ್ರ ಅನಿರುದ್ಧನೊಳಗೆ ಅನಿರುದ್ಧ

ಕಾಮ ಭಾರ್ಯಾ ರುಗ್ಮವತಿ ಸನ್ನ್ನಾಮ ಲಕ್ಷ್ಮಣಳು ಎನಿಸುವಳು

ಪೌಲೋಮಿ ಚಿತ್ರಾಂಗದೆಯು ತಾರಾ ಎರಡು ಪೆಸರುಗಳು//16//


ತಾರ ನಾಮಕ ತ್ರೈತೆಯೊಳು ಸೀತಾ ರಮಣನ ಆರಾಧಿಸಿದನು

ಸಮೀರಯುಕ್ತ ಉದ್ಧವನು ಕೃಷ್ಣಗೆ ಪ್ರೀಯನೆನಿಸಿದನು

ವಾರಿಜಾಸನ ಯುಕ್ತ ದ್ರೋಣನು ಮೂರಿಳೆಯೊಳು ಬೃಹಸ್ಪತಿಗೆ ಅವತಾರವೆಂಬರು

ಮಹಾಭಾರತ ತಾತ್ಪರ್ಯದೊಳಗೆ//17//


ಮನು ಮುಖಾದ್ಯರಿಗಿಂತ ಪ್ರವಹಾ ಗುಣದಿ ಪಂಚಕ ನೀಚನೆನಿಸುವ

ಿನ ಶಶಾಂಕರು ಧರ್ಮ ಮಾನವಿ ಎರಡು ಗುಣದಿಂದ ಕನಿಯರೆನಿಪರು ಪ್ರವಹಗಿಂತಲಿ

ದಿನಪ ಶಶಿ ಯಮ ಧರ್ಮ ರೂಪಗಳು

ಅನುದಿನದಿ ಚಿಂತಿಪುದು ಸಂತರು ಸರ್ವ ಕಾಲದಲಿ//18//


ಮರುತನ ಆವೇಶಯುತ ಧರ್ಮಜ ಕರಡಿ ವಿದುರನು ಸತ್ಯಜಿತು

ಈರೆರೆಡು ಧರ್ಮನ ರೂಪ

ಬ್ರಹ್ಮಾವಿಷ್ಟ ಸುಗ್ರೀವ ಹರಿಯ ರೂಪಾವಿಷ್ಟ ಕರ್ಣನು ತರಣಿಗೆ ಎರಡು ಅವತಾರ

ಚಂದ್ರಮ ಸುರಪನ ಆವೇಶಯುತನು ಅಂಗದನು ಎನಿಸಿಕೊಳುತಿಪ್ಪ//19//


ತರಣಿಗಿಂತಲಿ ಪಾದ ಪಾದರೆ ವರುಣ ನೀಚನು

ಮಹಭಿಷಕು ದುರ್ದರ ಸುಶೇಷಣನು ಶಂತನೂ ನಾಲ್ವರು ವರುಣ ರೂಪ

ಸುರಮುನೀ ನಾರದನು ಕಿಂಚಿತ್ ಕೊರತೆ ವರುಣಗೆ

ಅಗ್ನಿ ಭೃಗು ಅಜ ಗೊರಳ ಪತ್ನಿ ಪ್ರಸೂತಿ ಮೂವರು ನಾರದನಿಗೆ ಅಧಮ//20//


ನೀಲ ದುಷ್ಟದ್ಯುಮ್ನ ಲವ ಈ ಲೇಲಿಹಾನನ ರೂಪಗಳು

ಭೃಗು ಕಾಲಿಲಿ ಒದ್ದದರಿಂದ ಹರಿಯ ವ್ಯಾಧನೆನಿಸಿದನು

ಏಳು ಋಷಿಗಳಿಗೆ ಉತ್ತಮರು ಮುನಿ ಮೌಳಿ ನಾರದಗೆ ಅಧಮ ಮೂವರು

ಘಾಳಿಯುತ ಪ್ರಹ್ಲಾದ ಬಾಹ್ಲಿಕರಾಯನು ಎನಿಸಿದನು//21//


ಜನಪ ಕರ್ಮಜರೊಳಗೆ ನಾರದ ಮುನಿ ಅನುಗ್ರಹ ಬಲದಿ

ಪ್ರಹ್ಲಾದನಳ ಭೃಗು ದಾಕ್ಷಾಯಣಿಯರಿಗೆ ಸಮನು ಎನಿಸಿಕೊಂಬ

ಮನು ವಿವಸ್ವಾನ್ ಗಾಧಿಜ ಈರ್ವರು ಅನಳಗಿಂತಲಿ ಕಿಂಚಿತು ಅಧಮ

ಎಣೆಯೆನಿಸುವರು ಸಪ್ತರ್ಷಿಗಳಿಗೆ ಎಲ್ಲ ಕಾಲದಲಿ//22//


ಕಮಲಸಂಭವ ಭವರೆನಿಪ ಸಂಯಮಿ ಮರೀಚೀ ಅತ್ರಿ ಅಂಗಿರಸುಮತಿ

ಪುಲಹಾಕ್ರುತು ವಸಿಷ್ಠ ಪುಲಸ್ತ್ಯ ಮುನಿ ಸ್ವಾಹಾ ರಮಣಗೆ ಅಧಮರು

ಮಿತ್ರನಾಮಕ ದ್ಯುಮಣಿ ರಾಹುಯುಕ್ತ ಭೀಷ್ಮಕ ಯಮಳರೂಪನು

ತಾರನಾಮಕನು ಎನಿಸಿ ತ್ರೈತೆಯೊಳು//23//


ನಿರ್ಋತಿಗೆ ಎರಡವತಾರ ದುರ್ಮುಖ ಹರಯುತ ಘಟೋತ್ಕಚನು

ಪ್ರಾವಹಿ ಗುರು ಮಡದಿ ತಾರಾ ಸಮರು ಪರ್ಜನ್ಯಗೆ ಉತ್ತಮರು

ಕರಿಗೊರಳ ಸಂಯುಕ್ತ ಭಗದತ್ತರಸು ಕತ್ಥನ ಧನಪ ರೂಪಗಳೆರೆಡು

ವಿಘ್ನಪ ಚಾರುದೇಷ್ಣನು ಅಶ್ವಿನಿಗಳು ಸಮ//24//


ಡೋನಾ ಧ್ರುವ ದೋಷಾರ್ಕ ಅಗ್ನಿ ಪ್ರಾಣ ದ್ಯುವಿಭಾವಸುಗಳು ಎಂಟು

ಕೃಶಾನು ಶ್ರೇಷ್ಠ ದ್ಯುನಾಮ ವಸು ಭೀಷ್ಮಾರ್ಯ ಬ್ರಹ್ಮ ಯುತ

ದ್ರೋಣ ನಾಮಕ ನಂದ ಗೋಪ ಪ್ರಧಾನ ಅಗ್ನಿಯನು ಉಳಿದು ಏಳು ಸಮಾನರೆನಿಪರು

ತಮ್ಮೊಳಗೆ ಜ್ಞಾನಾದಿ ಗುಣದಿಂದ//25//


ಭೀಮರೈವತ ಓಜ ಅಜೈಕಪದ ಆ ಮಹನ್ಬಹು ರೂಪಕನು ಭವ

ವಾಮ ಉಗ್ರ ವೃಶಾಕಪೀ ಅಹಿರ್ ಬುಧ್ನಿಯೆನಿಸುತಿಹ ಈ ಮಹಾತ್ಮರ ಮಧ್ಯದಲಿ

ಉಮಾ ಮನೋಹರೋತ್ತಮನು

ದಶನಾಮಕರು ಸಮರೆನಿಸಿಕೊಂಬರು ತಮ್ಮೊಳು ಎಂದೆಂದು//26//


ಭೂರಿ ಅಜೈಕಪ ಪದಾಹ್ವ ಅಹಿರ್ ಬುಧ್ನಿ ಈರೈದು ರುದ್ರಗಣ ಸಂಯುತ

ಭೂರಿಶ್ರವನು ಎಂದೆನಿಪ ಶಲ ವಿರುಪಾಕ್ಷ ನಾಮಕನು

ಸೂರಿ ಕೃಪ ವಿಷ್ಕಂಭ ಸಹದೇವಾ ರಣಾಗ್ರಣಿ

ಸೋಮದತ್ತನು ತಾ ರಚಿಸಿದ ದ್ವಿರೂಪ ಧರೆಯೊಳು ಪತ್ರತಾಪಕನು//27//


ದೇವ ಶಕ್ರ ಉರುಕ್ರಮನು ಮಿತ್ರಾ ವರುಣ ಪರ್ಜನ್ಯ ಭಗ

ಪೂಷಾ ವಿವಸ್ವಾನ್ ಸವಿತೃ ಧಾತಾ ಆರ್ಯಮ ತ್ವಷ್ಟ್ರು

ದೇವಕೀ ಸುತನಲ್ಲಿ ಸವಿತೃ ವಿಭಾವಸೂ ಸುತ ಭಾನುಯೆನಿಸುವ

ಜ್ಯಾವನಪಯುತ ವೀರಸೇನನು ತ್ವಷ್ಟ್ರು ನಾಮಕನು//28//


ಎರಡಧಿಕ ದಶ ಸೂರ್ಯರೊಳು ಮೂರೆರೆಡು ಜನರು ಉತ್ತಮ

ವಿವಸ್ವಾನ್ ವರುಣ ಶಕ್ರ ಉರುಕ್ರಮನು ಪರ್ಜನ್ಯ ಮಿತ್ರಾಖ್ಯ

ಮರುತನ ಆವೇಶಯುತ ಪಾಂಡೂವರ ಪರಾವಹನು ಎಂದೆನಿಪ

ಕೇಸರಿ ಮೃಗಪ ಸಂಪಾತಿ ಶ್ವೇತತ್ರಯರು ಮರುದಂಶ//29//


ಪ್ರತಿಭವಾತನು ಚೇಕಿತನು ವಿಪ್ರುಥುವು ಎನಿಸುವನು ಸೌಮ್ಯ ಮಾರುತ

ವಿತತ ಸರ್ವೋತ್ತುಂಗ ಗಜನಾಮಕರು ಪ್ರಾಣ ಅಂಶ

ದ್ವಿತೀಯ ಪಾನ ಗವಾಕ್ಷ ಗವಯ ತೃತೀಯ ವ್ಯಾನ

ಉದಾನ ವೃಷಪರ್ವ ಅತುಳ ಶರ್ವತ್ರಾತ ಗಂಧ ಸುಮಾದನರು ಸಮಾನ//30//


ಐವರೊಳಗೆ ಈ ಕುಂತಿಭೋಜನು ಆವಿ ನಾಮಕ ನಾಗಕೃಕಲನು

ದೇವದತ್ತ ಧನಂಜಯರು ಅವತಾರ ವರ್ಜಿತರು

ಆವಹೋದ್ವಹ ವಿವಹ ಸಂವಹ ಪ್ರಾವಹೀ ಪತಿ ಮರುತ ಪ್ರವಹನಿಗೆ

ಆವಕಾಲಕು ಕಿಂಚಿತು ಅಧಮರು ಮರುದ್ಗಣರೆಲ್ಲ//31//


ಪ್ರಾಣಾಪಾನ ವ್ಯಾನೋದಾನ ಸಮಾನರ ಐವರನು ಉಳಿದು ಮರುತರು ಊನರೆನಿಪರು

ಹತ್ತು ವಿಶ್ವೇದೇವರು ಇವರಿಂದ ಸೂನುಗಳುಯೆನಿಸುವನು

ಐವರ ಮಾನಿನೀ ದ್ರೌಪತಿಗೆ

ಕೆಲವರು ಕ್ಷೋಣಿಯೊಳು ಕೈಕೇಯರು ಎನಿಪರು ಎಲ್ಲ ಕಾಲದಲಿ//32//


ಪ್ರತಿವಿಂದ್ಯ ಶ್ರುತ ಸೋಮಶ್ರುತ ಕೀರ್ತಿ ಶತಾನಿಕ ಶ್ರುತಕರ್ಮ

ದ್ರೌಪತಿ ಕುವರರು ಇವರೊಳಗೆ ಅಭಿತಾಮ್ರ ಪ್ರಮುಖ ಚಿತ್ರರಥನು ಗೋಪ ಕಿಶೋರ

ಬಲರೆಂಬ ಅತುಲರು ಐ ಗಂಧರ್ವರಿಂದಲಿ ಯುತರು

ಧರ್ಮ ವೃಕೋದರ ಆದಿಜರು ಎಂದು ಕರೆಸುವರು//33//


ವಿವಿದಮೈಂದರು ನಕುಲ ಸಹದೇವ ವಿಭು ತ್ರಿಶಿಖ ಅಶ್ವಿನಿಗಳು ಇವರೊಳು

ದಿವಿಪನ ಆವೇಶವು ಇಹುದು ಎಂದಿಗು

ದ್ಯಾವಾ ಪೃಥ್ವಿ ಋಭು ಪವನ ಸುತ ವಿಶ್ವಕ್ಸೇನನು ಉಮಾ ಕುವರ ವಿಘ್ನಪ

ಧನಪ ಮೊದಲಾದವರು ಮಿತ್ರಗೆ ಕಿಂಚಿತು ಅಧಮರು ಎನಿಸಿಕೊಳುತಿಹರು//34//


ಪಾವಕಾಗ್ನಿ ಕುಮಾರನು ಎನಿಸುವ ಚಾವನೋಚಿಥ್ಯ ಮುನಿ

ಚಾಕ್ಶುಷ ರೈವತ ಸ್ವಾವರೋಚಿಷ ಉತ್ತಮ ಬ್ರಹ್ಮ ರುದ್ರ ಇಂದ್ರ

ದೇವಧರ್ಮನು ದಕ್ಷನಾಮಕ ಸಾವರ್ಣಿ ಶಶಿಬಿಂದು ಪ್ರುಥು

ಪ್ರೀಯವ್ರತನು ಮಾಂಧಾತ ಗಯನು ಕಕುಸ್ಥ ದೌಷ್ಯಂತಿ//35//


ಭರತ ಋಷಭಜ ಹರಿಣಿಜ ದ್ವಿಜ ಭರತ ಮೊದಲಾದ ಅಖಿಳರಾಯರೊಳಿರುತಿಹುದು

ಶ್ರೀ ವಿಷ್ಣು ಪ್ರಾಣಾವೇಶ ಪ್ರತಿದಿನದಿ

ವರ ದಿವಸ್ಪತಿ ಶಂಭು: ಅದ್ಭುತ ಕರೆಸುವನು ಬಲಿ ವಿಧೃತ ಧೃತ

ಶುಚಿ ನೆರೆಖಲೂ ಕೃತಧಾಮ ಮೊದಲಾದ ಅಷ್ಟ ಗಂಧರ್ವ//36//


ಅರಸುಗಳು ಕರ್ಮಜರು ವೈಶ್ವಾನರಗೆ ಅಧಮ ಶತಗುಣದಿ

ವಿಘ್ನೇಶ್ವರಗೆ ಕಿಂಚಿದ್ ಗುಣ ಕಡಿಮೆ ಬಲಿ ಮುಖ್ಯ ಪಾವಕರು

ಶರಭ ಪರ್ಜನ್ಯಾಖ್ಯ ಮೇಘಪ ತರಣಿ ಭಾರ್ಯಾ ಸಂಜ್ಞೆ

ಶಾರ್ವರೀಕರನ ಪತ್ನೀ ರೋಹಿಣೀ ಶಾಮಲಾ ದೇವಕಿಯು//37//


ಅರಸಿಯೆನಿಪಳು ಧರ್ಮರಾಜಗೆ ವರುಣ ಭಾರ್ಯ ಉಷಾದಿ ಷಟ್ಕರು

ಕೊರತೆಯೆನಿಪರು ಪಾವಕಾದ್ಯರಿಗೆ ಎರಡು ಗುಣದಿಂದ

ಎರಡು ಮೂರ್ಜನರಿಂದ ಅಧಮ ಸ್ವಹ ಕರೆಸುವಳು

ಉಷಾದೇವಿ ವೈಶ್ವಾನರನ ಮಡದಿಗೆ ದಶ ಗುಣ ಅವರಳು ಅಶ್ವಿನೀ ಭಾರ್ಯಾ//38//


ಸುದರ್ಶನ ಶಕ್ರಾದಿ ಸುರಯುತ ಬುಧನು ತಾನು ಅಭಿಮನ್ಯುವು ಎನಿಸುವ

ಬುಧನಿಗಿಂತ ಅಶ್ವಿನೀ ಭಾರ್ಯ ಶಲ್ಯ ಮಾಗಧರ ಉದರಜ

ಉಷಾ ದೇವಿಗಿಂತಲಿ ಅಧಮನೆನಿಪ ಶನೈಶ್ಚರನು

ಶನಿಗೆ ಅಧಮ ಪುಷ್ಕರ ಕರ್ಮಪನೆನಿಸುವನು ಬುಧರಿಂದ//39//


ಉದ್ವಹಾ ಮರುತಾನ್ವಿತ ವಿರಾಧ ದ್ವಿತೀಯ ಸಂಜಯನು ತುಂಬುರ

ವಿದ್ವದೋತ್ತಮ ಜನ್ಮೇಜಯ ತ್ವಷ್ಟ್ರುಯುತ ಚಿತ್ರರಥ

ಸದ್ವಿನುತ ದಮ ಘೋಷಕ ಕಬಂಧದ್ವಯರು ಗಂಧರ್ವದನು

ಮನುಪದ್ಮಸಂಭವಯುತ ಅಕ್ರೂರ ಕಿಶೋರನೆನಿಸುವನು//40//


ವಾಯುಯುತ ಧೃತರಾಷ್ಟ್ರ ದಿವಿಜರ ಗಾಯಕನು ಧೃತರಾಷ್ಟ್ರ

ನಕ್ರನುರಾಯ ದ್ರುಪದನು ವಹ ವಿಶಿಷ್ಟ ಹೂಹು ಗಂಧರ್ವ

ನಾಯಕ ವಿರಾಟ್ ವಿವಹ ಹಾಹಾಜ್ಞೆಯ

ವಿದ್ಯಾಧರನೆ ಅಜಗರ ತಾ ಯೆನಿಸುವನು ಉಗ್ರಸೇನನೆ ಉಗ್ರಸೇನಾಖ್ಯ//41//


ಬಿಸಜ ಸಂಭವ ಯುಕ್ತ ವಿಶ್ವಾವಸು ಯುಧಾಮನ್ಯು

ಉತ್ತ ಮೌಜಸ ಬಿಸಜ ಮಿತ್ರಾರ್ಯಮ ಯುತ ಪರಾವಸುಯೆನಿಸುತಿಪ್ಪ

ಅಸಮ ಮಿತ್ರಾನ್ವಿತನು ಸತ್ಯಜಿತು ವಸುಧಿಯೊಳು ಚಿತ್ರಸೇನ

ಅಮೃತಾಂಧಸರು ಗಾಯಕರೆಂದು ಕರೆಸುವರು ಆವ ಕಾಲದಲಿ//42//


ಉಳಿದ ಗಂಧರ್ವರುಗಳು ಎಲ್ಲರು ಬಲಿ ಮೊದಲು ಗೋಪಾಲರೆನಿಪರು

ಇಳೆಯೊಳಗೆ ಸೈರೆಂಧ್ರಿ ಪಿಂಗಳೆ ಅಪ್ಸರ ಸ್ತ್ರೀಯಳು

ತಿಲೋತ್ತಮೆಯು ಪೂರ್ವದಲಿ ನಕುಲನ ಲಲನೆ ಪಾರ್ವತಿಯೆನಿಸುವಳು

ಗೋಕುಲದ ಗೋಪಿಯರು ಎಲ್ಲ ಶಬರೀ ಮುಖ್ಯ ಅಪ್ಸರರು//43//


ಕೃಷ್ಣವರ್ತ್ಮನ ಸುತರೊಳಗೆ ಶತದ್ವಾಷ್ಟ ಸಾವಿರ ಸ್ತ್ರೀಯರಲ್ಲಿ

ಪ್ರವಿಷ್ಟಳು ಆಗಿ ರಮಾಂಬ ತತ್ತನ್ನಾಮ ರೂಪದಲಿ ಕೃಷ್ಣ ಮಹಿಷಿಯರೊಳಗಿಪ್ಪಳು

ತ್ವಷ್ಟ್ರು ಪುತ್ರಿ ಕಶೇರು ಇವರೊಳು ಶ್ರೇಷ್ಠಳು ಎನಿಪಳು

ಉಳಿದ ಋಷಿ ಗಣ ಗೋಪಿಕಾ ಸಮರು//44//


ಸೂನುಗಳೆನಿಸುವರು ದೇವ ಕೃಷಾನುವಿಗೆ ಕ್ರಥು ಸಿಂಧು ಶುಚಿ ಪವಮಾನ

ಕೌಶಿಕರೈದು ತುಂಬುರು ಊರ್ವಶೀ ಶತರು ಮೇನಕೀ ಋಷಿ ರಾಯರುಗಳು

ಆಜಾನು ಸುರರಿಗೆ ಸಮರೆನಿಪರು

ಸುರಾಣಕರು ಅನಾಖ್ಯಾತ ದಿವಿಜರ ಜನಕರು ಎನಿಸುವರು//45//


ಪಾವಕರಿಗಿಂತ ಅಧಮರು ಎನಿಸುವ ದೇವ ಕುಲಜ ಆನಾಖ್ಯ ಸುರಗಣ ಕೋವಿದರು

ನಾನಾ ಸುವಿದ್ಯದಿ ಸೋತ್ತಮರ ನಿತ್ಯ ಸೇವಿಪರು ಸದ್ಭಕ್ತಿ ಪೂರ್ವಕ

ಸ್ವವರರಿಗೆ ಉಪದೇಶಿಸುವರು

ನಿರಾವಲಂಬನ ವಿಮಲ ಗುಣಗಳ ಪ್ರತಿ ದಿವಸದಲ್ಲಿ//46//


ಸುರರೊಳಗೆ ವರ್ಣಾಶ್ರಮಗಳೆಂಬ ಎರಡು ಧರ್ಮಗಳಿಲ್ಲ

ತಮ್ಮೊಳು ನಿರುಪಮರೆಂದೆನಿಸಿ ಕೊಂಬರು ತಾರತಮ್ಯದಲಿ

ಗುರು ಸುಶಿಷ್ಯತ್ವವು ಈ ಋಷಿಗಳೊಳಗೆ ಇರುತಿಹುದು

ಆಜಾನ ಸುರರಿಗೆ ಚಿರ ಪಿತೃ ಶತಾಧಮರು ಎನಿಸುವರು ಏಳು ಜನರುಳಿದು//47//


ಚಿರ ಪಿತ್ರುಗಳಿಂದ ಅಧಮ ಗಂಧರ್ವರುಗಳು ಎನಿಪರು

ದೇವನಾಮಕ ಕೊರತೆಯೆನಿಸುವ ಚಕ್ರವರ್ತಿಗಳಿಂದ ಗಂಧರ್ವ

ನರರೊಳು ಉತ್ತಮರೆನಿಸುವರು ಹನ್ನೆರೆಡು ಎಂಭತ್ತೆಂಟು ಗುಣದಲಿ

ಹಿರಿಯರೆನಿಪರು ಕ್ರಮದಿ ದೇವಾವೇಶ ಬಲದಿಂದ//48//


ದೇವತೆಗಳಿಂ ಪ್ರೇಷ್ಯರೆನಿಪರು ದೇವ ಗಂಧರ್ವರುಗಳು

ಇವರಿಂದ ಆವ ಕಾಲಕು ಶಿಕ್ಷಿತರು ನರನಾಮ ಗಂಧರ್ವ

ಕೇವಲ ಅತಿ ಸದ್ಭಕ್ತಿಪೂರ್ವಕ ಯಾವದಿಂದ್ರಿಯಗಳ ನಿಯಾಮಕ

ಶ್ರೀವರನೆಂದರಿದು ಭಜಿಪರು ಮಾನುಷೋತ್ತಮರು//49//


ಬಾದರಾಯಣ ಭಾಗವತ ಮೊದಲಾದ ಶಾಸ್ತ್ರಗಳಲಿ ಬಹುವಿಧ

ದ್ವಾದಶ ದಶ ಸುಪಂಚ ವಿಂಶತಿ ಶತ ಸಹಸ್ರಯುತ ಭೇದಗಳ ಪೇಳಿದನು

ಸೋತ್ತಮ ಆದಿತೇಯ ಆವೇಶ ಬಲದಿ ವಿರೋಧ ಚಿಂತಿಸಬಾರದು

ಇದು ಸಾಧು ಜನ ಸಮ್ಮತವು//50//


ಇವರು ಮುಕ್ತಿ ಯೋಗ್ಯರೆಂಬರು ಶ್ರವಣ ಮನನಾದಿಗಳ

ಪರಮೋತ್ಸವದಿ ಮಾಡುತ ಕೇಳಿ ನಲಿಯುತ

ಧರ್ಮ ಕಾಮಾರ್ಥ ತ್ರಿವಿಧ ಫಲವ ಅಪೇಕ್ಷಿಸದೆ ಶ್ರೀಪವನ ಮುಖ ದೇವಾಂತರಾತ್ಮಕ

ಪ್ರವರತಮ ಶಿಷ್ಟೇಷ್ಟ ದಾಯಕನೆಂದು ಸ್ಮರಿಸುವರು//51//


ನಿತ್ಯ ಸಂಸಾರಿಗಳು ಗುಣ ದೋಷಾತ್ಮಕರು

ಬ್ರಹ್ಮಾದಿ ಜೀವರ ಭೃತ್ಯರೆಂಬರು ರಾಜನ ಉಪಾದಿಯಲಿ ಹರಿಯೆಂಬ

ಕೃತ್ತಿವಾಸನು ಬ್ರಹ್ಮ ಶ್ರೀ ವಿಷ್ಣುತ್ರಯರು ಸಮ

ದುಃಖ ಸುಖೋತ್ಪತ್ತಿ ಮೃತಿ ಭವ ಪೇಳುವರು ಅವತಾರಗಳಿಗೆ ಸದಾ//52//


ತಾರತಮ್ಯ ಜ್ಞಾನವಿಲ್ಲದೆ ಸೂರಿಗಳ ನಿಂದಿಸುತ ನಿತ್ಯದಿ

ತೋರುತಿಪ್ಪರು ಸುಜನರ ಉಪಾದಿಯಲಿ ನರರೊಳಗೆ

ಕ್ರೂರ ಕರ್ಮಾಸಕ್ತರಾಗಿ ಶರೀರ ಪೋಷಣೆ ಗೋಸುಗದಿ

ಸಂಚಾರ ಮಾಳ್ಪರು ಅನ್ಯ ದೇವತೆ ನೀಚರ ಆಲಯದಿ//53//


ದಶ ಪ್ರಮತಿ ಮತಾಬ್ಧಿಯೊಳು ಸುಮನಸರೆನಿಪ ರತ್ನಗಳನು

ಅವಲೋಕಿಸಿ ತೆಗೆದು ಪ್ರಾಕೃತ ಸುಭಾಷಾ ತಂತುಗಳ ರಚಿಸಿ

ಅಸುಪತಿ ಶ್ರೀ ರಮಣನಿಗೆ ಸಮರ್ಪಿಸಿದೆ ಸತ್ಜನರು ಇದನು ಸಂತೋಷಿಸಲಿ

ದೋಷಗಳ ಎಣಿಸದಲೆ ಕಾರುಣ್ಯದಲಿ ನಿತ್ಯ//54//


ನಿರುಪಮನು ಶ್ರೀವಿಷ್ಣು ಲಕ್ಷ್ಮೀ ಸರಸಿಜೋದ್ಭವ ವಾಯು ವಾಣೀ

ಗರುಡ ಷಣ್ಮಹಿಷಿಯರು ಪಾರ್ವತಿ ಶಕ್ರ ಸ್ಮರ ಪ್ರಾಣ ಗುರು

ಬೃಹಸ್ಪತಿ ಪ್ರವಹ ಸೂರ್ಯನು ವರುಣ ನಾರದ ವಹ್ನಿ ಸಪ್ತ ಅಂಗಿರರು

ಮಿತ್ರ ಗಣೇಶ ಪೃಥು ಗಂಗಾ ಸ್ವಾಹಾ ಬುಧನು//55//


ತರಣಿ ತನಯ ಶನೈಶ್ಚರನು ಪುಷ್ಕರನು ಆಜಾನಜ ಚಿರಪಿತರು

ಗಂಧರ್ವರೀರ್ವರು ದೇವ ಮಾನುಷ ಚಕ್ರವರ್ತಿಗಳು

ನರರೊಳುತ್ತಮ ಮಧ್ಯಮ ಅಧಮ ಕರೆಸುವರು ಮಧ್ಯ ಉತ್ತಮರು

ಈರೆರೆಡು ಜನ ಕೈವಲ್ಯ ಮಾರ್ಗಸ್ಥರಿಗೆ ಅನಮಿಪೆ//56//


ಸಾರ ಭಕ್ತಿ ಜ್ಞಾನದಿಂ ಬೃಹತ್ತಾರತಮ್ಯವನು ಅರಿತು ಪಠಿಸುವ

ಸೂರಿಗಳಿಗೆ ಅನುದಿನದಿ ಪುರುಷಾರ್ಥಗಳ ಪೂರೈಸಿ

ಕಾರುಣಿಕ ಮರುತಾಂತರಾತ್ಮಕ ಮಾರಮಣ ಜಗನ್ನಾಥ ವಿಠಲ

ತೋರಿಕೊಂಬನು ಹೃತ್ಕಮಲದೊಳು ಯೋಗ್ಯತೆಯನರಿತು//57//


//ಇತಿ ಶ್ರೀ ಬೃಹತ್ತಾರತಮ್ಯ ಸಂಧಿ ಸಂಪೂರ್ಣಂ//

//ಶ್ರೀ ಕೃಷ್ಣಾರ್ಪಣಮಸ್ತು//