//ಶ್ರೀ ಗುರುಭ್ಯೋ ನಮಃ//
//ಪರಮ ಗುರುಭ್ಯೋ ನಮಃ//
//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//
ಶ್ರೀ ಜಗನ್ನಾಥದಾಸ ವಿರಚಿತ 
ಶ್ರೀ ಹರಿಕಥಾಮೃತಸಾರ
//ಶ್ರೀ ಕಕ್ಷಾತಾರತಮ್ಯ ಸಂಧಿ//
ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/
ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//
ಶ್ರೀರಮಣ ಸರ್ವೇಶ ಸರ್ವಗ ಸಾರಭೋಕ್ತ ಸ್ವತಂತ್ರ 
ದೋಷ ವಿದೂರ ಜ್ಞಾನಾನಂದ ಬಲೈಶ್ವರ್ಯ ಸುಖ ಪೂರ್ಣ 
ಮೂರುಗುಣ ವರ್ಜಿತ ಸಗುಣ ಸಾಕಾರ ವಿಶ್ವ ಸ್ಥಿತಿ ಲಯೋದಯ ಕಾರಣ 
ಕೃಪಾಸಾಂದ್ರ ನರಹರೆ ಸಲಹೊ ಸಜ್ಜನರ//1//
ನಿತ್ಯ ಮುಕ್ತಳೆ ನಿರ್ವಿಕಾರಳೆ ನಿತ್ಯ ಸುಖ ಸಂಪೂರ್ಣೆ 
ನಿತ್ಯಾನಿತ್ಯ ಜಗದಾಧಾರೆ ಮುಕ್ತಾಮುಕ್ತ ಗಣ ವಿನುತೆ 
ಚಿತ್ತೈಸು ಬಿನ್ನಪವ ಶ್ರೀ ಪುರುಷೋತ್ತಮನ ವಕ್ಷೋ ನಿವಾಸಿನಿ 
ಭೃತ್ಯ ವರ್ಗವ ಕಾಯೆ ತ್ರಿಜಗನ್ಮಾತೆ ವಿಖ್ಯಾತೆ//2//
ರೋಮ ಕೂಪಗಳಲ್ಲಿ ಪೃಥ್ ಪೃಥಕು ಆ ಮಹಾ ಪುರುಷನ 
ಸ್ವಮೂರ್ತಿ ತಾಮರಸಜಾಂಡಗಳ ತದ್ಗತ ವಿಶ್ವ ರೂಪಗಳ 
ಶ್ರೀ ಮಹಿಳೆ ರೂಪಗಳ ಗುಣಗಳ ಸೀಮೆಗಾಣದೆ ಯೋಚಿಸುತ 
ಮಮ ಸ್ವಾಮಿ ಮಹಿಮೆಯದು ಎಂತೋ ಎಂದು ಅಡಿಗಡಿಗೆ ಬೆರಗಾದೆ//3//
ಒಂದು ಅಜಾಂಡದೊಳು ಒಂದು ರೂಪದೊಳು ಒಂದು ಅವಯವದೊಳು ಒಂದು ನಖದೊಳಗೆ 
ಒಂದು ಗುಣಗಳ ಪಾರುಗಾಣದೆ ಕೃತ ಪುಟಾಂಜಲಿಯಿಂ 
ಮಂದಜಾಸನ ಪುಳಕ ಪುಳಕಾನಂದ ಬಾಷ್ಪ ತೊದಲು ನುಡಿಗಳಿಂದ 
ಇಂದಿರಾವಲ್ಲಭನ ಮಹಿಮೆ ಗಂಭೀರ ತೆರವೆಂದ//4//
ಏನು ಧನ್ಯರೋ ಬ್ರಹ್ಮ ಗುರು ಪವಮಾನ ರಾಯರು 
ಈ ಪರಿಯಲಿ ರಮಾ ನಿವಾಸನ ವಿಮಲ ಲಾವಣ್ಯ ಅತಿಶಯಗಳನು 
ಸಾನುರಾಗದಿ ನೋಡಿ ಸುಖಿಪ ಮಹಾನುಭಾವರ ಭಾಗ್ಯವೆಂತೋ 
ಭವಾನಿಧವನಿಗೆ ಅಸಾಧ್ಯವೆನಿಸಲು ನರರ ಪಾಡೇನು//5//
ಆ ಪಿತಾಮಹ ನೂರು ಕಲ್ಪ ರಮಾಪತಿಯ ಗುಣ ಜಪಿಸಿ ಒಲಿಸಿ 
ಮಹಾ ಪರಾಕ್ರಮ ಹನುಮ ಭೀಮ ಆನಂದ ಮುನಿಯೆನಿಸಿ 
ಆ ಪರಬ್ರಹ್ಮನ ಸುನಾಭೀ ಕೂಪಸಂಭವ ನಾಮದಲಿ ಮೆರೆವ 
ಆ ಪಯೋಜಾಸನ ಸಮೀರರಿಗೆ ಅಭಿನಮಿಪೆ ಸತತ//6//
ವಾಸುದೇವನ ಮೂರ್ತಿ ಹೃದಯ ಆಕಾಶ ಮಂಡಲ ಮಧ್ಯದಲಿ 
ತಾರೇಶನಂದದಿ ಕಾಣುತ ಅತಿ ಸಂತೋಷದಲಿ ತುತಿಪ 
ಆ ಸರಸ್ವತಿ ಭಾರತೀಯರಿಗೆ ನಾ ಸತತ ವಂದಿಸುವೆ 
ಪರಮೋಲ್ಲಾಸದಲಿ ಸುಜ್ಞಾನ ಭಕುತಿಯ ಸಲಿಸಲಿ ಎಮಗೆಂದು//7//
ಜಗದುದರನ ಸುರೋತ್ತಮನ ನಿಜಪೆಗಳೊಂತಾತು ಕರಾಬ್ಜದೊಳು ಪದಯುಗ ಧರಿಸಿ 
ನಖ ಪಂಕ್ತಿಯೊಳು ರಮಣೀಯ ತರವಾದ ನಗಧರನ ಪ್ರತಿಬಿಂಬ ಕಾಣುತ 
ಮಿಗೆ ಹರುಷದಿಂ ಪೊಗಳಿ ಹಿಗ್ಗುವ ಖಗ ಕುಲಾಧಿಪ 
ಕೊಡಲಿ ಮಂಗಳ ಸರ್ವ ಸುಜನರಿಗೆ//8//
ಯೋಗಿಗಳ ಹೃದಯಕೆ ನಿಲುಕ ನಿಗಮಾಗಮೈಕ ವಿನುತನ 
ಪರಮಾನುರಾಗದಲಿ ದ್ವಿಸಹಸ್ರ ಜಿಹ್ವೆಗಳಿಂದ ವರ್ಣಿಸುವ 
ಭೂಗಗನ ಪಾತಾಳ ವ್ಯಾಪ್ತನ ಯೋಗ ನಿದ್ರಾಸ್ಪದನು ಎನಿಪ 
ಗುರು ನಾಗರಾಜನ ಪದಕೆ ನಮಿಸುವೆ ಮನದೊಳು ಅನವರತ//9//
ದಕ್ಷ ಯಜ್ಞ ವಿಭಂಜನನೆ ವಿರುಪಾಕ್ಷ ವೈರಾಗ್ಯಾಧಿಪತಿ 
ಸಂರಕ್ಷಿಸೆಮ್ಮನು ಸರ್ವಕಾಲದಿ ಸನ್ಮುದವನಿತ್ತು 
ಯಕ್ಷಪತಿ ಸಖ ಯಜಪರಿಗೆ ಸುರವೃಕ್ಷ ವೃಕ್ಷದಾನುಜಾರಿ 
ಲೋಕಾಧ್ಯಕ್ಷ ಶುಕ ದೂರ್ವಾಸ ಜೈಗೀಷವ್ಯ ಸಂತೈಸು//10//
ನಂದಿವಾಹನ ನಳಿನಿಧರ ಮೌಳಿ ಇಂದು ಶೇಖರ ಶಿವ ತ್ರಿಯಂಬಕ 
ಅಂಧಕಾಸುರ ಮಥನ ಗಜ ಶಾರ್ದೂಲ ಚರ್ಮಧರ 
ಮಂದಜಾಸನ ತನಯ ತ್ರಿಜಗದ್ವಂದ್ಯ ಶುದ್ಧ ಸ್ಫಟಿಕ ಸನ್ನಿಭ 
ವಂದಿಸುವೆನು ಅನವರತ ಕರುಣಿಸಿ ಕಾಯೋ ಮಹದೇವ//11//
ಹತ್ತು ಕಲ್ಪದಿ ಲವ ಜಲಧಿಯೊಳು ಉತ್ತಮ ಶ್ಲೋಕನ ಒಲಿಸಿ 
ಕೃತಕ್ರುತ್ಯನಾಗಿ ಜಗತ್ಪತಿಯ ನೇಮದಿ ಕುಶಾಸ್ತ್ರಗಳ ಬಿತ್ತರಿಸಿ ಮೋಹಿಸಿ 
ದುರಾತ್ಮರ ನಿತ್ಯ ನಿರಯ ನಿವಾಸರೆನಿಸಿದ 
ಕೃತ್ತಿ ವಾಸನೆ ನಮಿಪೆ ಪಾಲಿಸೊ ಪಾರ್ವತೀ ರಮಣ//12//
ಫಣಿ ಫಣಾoಚಿತ ಮಕುಟ ರಂಜಿತ ಕ್ವಣಿತ ಡಮರು ತ್ರಿಶೂಲ 
ಶಿಖಿ ದಿನ ಮಣಿ ನಿಶಾಕರ ನೇತ್ರ ಪರಮ ಪವಿತ್ರ ಸುಚರಿತ್ರ 
ಪ್ರಣತ ಕಾಮದ ಪ್ರಮಥ ಸುರಮುನಿ ಗಣ ಸುಪೂಜಿತ ಚರಣಯುಗ 
ರಾವಣ ಮದ ವಿಭಂಜನ ಶೇಷ ಪದ ಅರ್ಹನು ಅಹುದೆಂದು//13//
ಕಂಬುಪಾಣಿಯ ಪರಮ ಪ್ರೇಮ ನಿತಂಬಿನಿಯರು ಎಂದೆನಿಪ 
ಲಕ್ಷಣೆ ಜಾಂಬವತಿ ಕಾಳಿಂದಿ ನೀಲಾ ಭದ್ರ ಸಖ ವಿಂದಾರೆಂಬ 
ಷಣ್ಮಹಿಷಿಯರ ದಿವ್ಯ ಪದಾಂಬುಜಗಳಿಗೆ ನಮಿಪೆ 
ಮಮ ಹೃದಯಾಂಬರದಿ ನೆಲೆಸಲಿ ಬಿಡದೆ ತಮ್ಮರಸನ ಒಡಗೂಡಿ//14//
ಆ ಪರಂತಪನ ಒಲುಮೆಯಿಂದ ಸದಾ ಅಪರೋಕ್ಷಿಗಳೆನಿಸಿ 
ಭಗವದ್ರೂಪ ಗುಣಗಳ ಮಹಿಮೆ ಸ್ವಪತಿಗಳ ಆನನದಿ ತಿಳಿವ
ಸೌಪರ್ಣಿ ವಾರುಣಿ ನಗಾತ್ಮಜರ ಆಪನಿತು ಬಣ್ಣಿಸುವೆ 
ಎನ್ನ ಮಹಾಪರಾಧಗಳ ಎಣಿಸದೆ ಈಯಲಿ ಪರಮ ಮಂಗಳವ//15//
ತ್ರಿದಿವತರು ಮಣಿ ಧೇನುಗಳಿಗೆ ಆಸ್ಪದನೆನಿಪ ತ್ರಿದಶಾಲಯಾಬ್ಧಿಗೆ 
ಬದರನಂದದಲಿ ಒಪ್ಪುತಿಪ್ಪ ಉಪೇಂದ್ರ ಚಂದ್ರಮನ 
ಮೃಧು ಮಧುರ ಸುಸ್ತವನದಿಂದಲಿ ಮಧು ಸಮಯ ಪಿಕನಂತೆ ಪಾಡುವ 
ಮುದಿರ ವಾಹನನಂಘ್ರಿ ಯುಗ್ಮಂಗಳಿಗೆ ನಮಿಸುವೆನು//16//
ಕೃತಿ ರಮಣ ಪ್ರದ್ಯುಮ್ನ ದೇವನ ಅತುಳ ಬಲ ಲಾವಣ್ಯ ಗುಣ ಸಂತತ ಉಪಾಸನ 
ಕೇತು ಮಾಲಾ ಖಂಡದೊಳು ರಚಿಪ 
ರತಿ ಮನೋಹರನಂಘ್ರಿ ಕಮಲಕೆ ನತಿಸುವೆನು ಭಕುತಿಯಲಿ 
ಮಮ ದುರ್ಮತಿ ಕಳೆದು ಸನ್ಮತಿಯನು ಈಯಲಿ ನಿರುತ ಎಮಗೊಲಿದು//17//
ಚಾರುತರ ನವವಿಧ ಭಕುತಿ ಗಂಭೀರ ವಾರಾಶಿಯೊಳು 
ಪರಮೋದಾರ ಮಹಿಮನ ಹೃದಯ ಫಣಿಪತಿ ಪೀಠದಲಿ ಭಜಿಪ 
ಭೂರಿ ಕರ್ಮಾಕರನು ಎನಿಸುವ ಶರೀರಮಾನಿ ಪ್ರಾಣಪತಿ ಪದ ವಾರಿರುಹಕೆ ಅನಮಿಪೆ 
ಮದ್ಗುರುರಾಯನು ಅಹುದೆಂದು//18//
ವಿತತ ಮಹಿಮನ ವಿಶ್ವತೋ ಮುಖನ ಅತುಳ ಭುಜ ಬಲ ಕಲ್ಪತರುವು 
ಆಶ್ರಿತರೆನಿಸಿ ಸಕಲ ಇಷ್ಟ ಪಡೆದು ಅನುದಿನದಿ ಮೋದಿಸುವ 
ರತಿ ಸ್ವಯಂಭುವ ದಕ್ಷ ವಾಚಸ್ಪತಿ ಬಿಡೌಜನ ಮಡದಿ ಶಚಿ 
ಮನ್ಮಥ ಕುಮಾರ ಅನಿರುದ್ಧರು ಎಮಗೀಯಲಿ ಸುಮಂಗಲವ//19//
ಭವ ವನದಿ ನವ ಪೋತ ಪುಣ್ಯ ಶ್ರವಣ ಕೀರ್ತನ ಪಾದವನರುಹ 
ಭವನ ನಾವಿಕನಾಗಿ ಭಕುತರ ತಾರಿಸುವ ಬಿಡದೆ 
ಪ್ರವಹ ಮಾರುತದೇವ ಪರಮೋತ್ಸವ ವಿಶೇಷ ನಿರಂತರ 
ಮಹಾ ಪ್ರವಹದಂದದಿ ಕೊಡಲಿ ಭಗವದ್ಭಕ್ತ ಸಂತತಿಗೆ//20//
ಜನರನು ಉದ್ಧರಿಸುವೆನೆನುತ ನಿಜ ಜನಕನ ಅನುಮತದಲಿ 
ಸ್ವಯಂಭುವ ಮನುವಿನಿಂದಲಿ ಪಡೆದೆ ಸುಕುಮಾರಕರನು ಒಲುಮೆಯಲಿ 
ಜನನಿ ಶತ ರೂಪಾ ನಿತಂಬಿನಿ ಮನವಚನಕಾಯದಲಿ ತಿಳಿದು 
ಅನುದಿನದಿ ನಮಿಸುವೆ ಕೊಡು ಎಮಗೆ ಸನ್ಮಂಗಳವನೊಲಿದು//21//
ನರನ ನಾರಾಯಣನ ಹರಿಕೃಷ್ಣರ ಪಡೆದೆ ಪುರುಷಾರ್ಥ ತೆರದಲಿ 
ತರಣಿ ಶಶಿ ಶತರೂಪರಿಗೆ ಸಮನೆನಿಸಿ 
ಪಾಪಿಗಳ ನಿರಯದೊಳು ನೆಲೆಗೊಳಿಸಿ ಸಜ್ಜನ ನೆರವಿಯನು ಪಾಲಿಸುವ 
ಔದುಂಬರ ಸಲಹು ಸಲಹೆಮ್ಮ ಬಿಡದಲೆ ಪರಮ ಕರುಣದಲಿ//22//
ಮಧು ವಿರೋಧಿ ಮನುಜ ಕ್ಷೀರೋದಧಿ ಮಥನ ಸಮಯದಲಿ ಉದಯಿಸಿ 
ನೆರೆ ಕುಧರಜಾ ವಲ್ಲಭನ ಮಸ್ತಕ ಮಂದಿರದಿ ಮೆರೆವ ವಿಧು 
ತವಾಂಘ್ರಿ ಸರೋಜಾ ಯುಗಳಕೆ ಮಧುಪನಂದದಲಿ ಎರಗಲು ಎನ್ಮನದ ಅಧಿಪ 
ವಂದಿಪೆನು ಅನುದಿನ ಅಂತಸ್ತಾಪ ಪರಿಹರಿಸು//23//
ಶ್ರೀ ವನರುಹಾಂಬಕನ ನೇತ್ರಗಳೇ ಮನೆಯೆನಿಸಿ 
ಸಜ್ಜನರಿಗೆ ಕರಾವಲಂಬನವೀವ ತೆರದಿ ಮಯೂಖ ವಿಸ್ತರಿಪ 
ಆ ವಿವಸ್ವಾನ್ ನೆನಿಸಿ ಕೊಂಬ ವಿಭಾವಸು 
ಅಹರ್ನಿಶಿಗಳಲಿ ಕೊಡಲೀ ವಸುಂಧರೆಯೊಳು ವಿಪಶ್ಚಿತರೊಡನೆ ಸುಜ್ಞಾನ//24//
ಲೋಕ ಮಾತೆಯ ಪಡೆದು ನೀ ಜಗದೇಕಪಾತ್ರನಿಗಿತ್ತ ಕಾರಣ 
ಶ್ರೀ ಕುಮಾರಿ ಸಮೇತ ನೆಲಸಿದ ನಿನ್ನ ಮಂದಿರದಿ 
ಆ ಕಮಲಭವ ಮುಖರು ಬಿಡದೆ ಪರಾಕೆನುತ ನಿಂದಿಹರೋ 
ಗುಣ ರತ್ನಾಕರನೆ ಬಣ್ಣಿಸಲಳವೆ ಕೊಡು ಎಮಗೆ ಸನ್ಮನವ//25//
ಪಣೆಯೊಳೊಪ್ಪುವ ತಿಲಕ ತುಳಸೀ ಮಣಿಗಣಾನ್ವಿತ ಕಂಠ 
ಕರದಲಿ ಕ್ವಣಿತ ವೀಣಾ ಸುಸ್ವರದಿ ಬಹು ತಾಳ ಗತಿಗಳಲಿ 
ಪ್ರಣವ ಪ್ರತಿಪಾದ್ಯನ ಗುಣಂಗಳ ಕುಣಿದು ಪಾಡುತ 
ಪರಮ ಸುಖ ಸಂದಣಿಯೊಳು ಆಡುವ ದೇವರ್ಷಿ ನಾರದರಿಗೆ ಅಭಿನಮಿಪೆ//26//
ಆ ಸರಸ್ವತಿ ತೀರದಲಿ ಬಿನ್ನೈಸಲು ಆ ಮುನಿಗಳ ನುಡಿಗೆ 
ಜಡಜಾಸನ ಮಹೇಶ ಅಚ್ಯುತರ ಲೋಕಂಗಳಿಗೆ ಪೋಗಿ 
ತಾ ಸಕಲ ಗುಣಗಳ ವಿಚಾರಿಸಿ ಕೇಶವನೆ ಪರದೈವವು ಎಂದು ಉಪದೇಶಿಸುವ 
ಭೃಗು ಮುನಿಪ ಕೊಡಲಿ ಎಮಗೆ ಅಖಿಳ ಪುರುಷಾರ್ಥ//27//
ಬಿಸರುಹಾಂಬಕನ ಆಜ್ಞೆಯಲಿ ಸುಮನಸ ಮುಖನು ತಾನೆನಿಸಿ 
ನಾನಾ ರಸಗಳುಳ್ಳ ಹರಿಸ್ಸುಗಳನು ಅವರವರಿಗೊಯ್ದು ಈವ 
ವಸುಕುಲಾಧಿಪ ಯಜ್ಞಪುರುಷನ ಅಸಮ ಬಲ ರೂಪಂಗಳಿಗೆ ವಂದಿಸುವೆ 
ಜ್ಞಾನ ಯಶಸ್ಸು ವಿದ್ಯ ಸುಬುದ್ಧಿ ಕೊಡಲೆಮಗೆ//28//
ತಾತನ ಅಪ್ಪಣೆಯಿಂದ ನೀ ಪ್ರಖ್ಯಾತಿಯುಳ್ಳ ಅರವತ್ತು ಮಕ್ಕಳ 
ಪ್ರೀತಿಯಿಂದಲಿ ಪಡೆದು ಅವರವರಿಗಿತ್ತು ಮನ್ನಿಸಿದೆ 
ವೀತಿ ಹೋತ್ರನ ಸಮಳೆನಿಸುವ ಪ್ರಸೂತಿ ಜನನಿ 
ತ್ವದಂಘ್ರಿ ಕಮಲಕೆ ನಾ ತುತಿಸಿ ತಲೆಬಾಗುವೆ ಎಮ್ಮ ಕುಟುಂಬ ಸಲಹುವುದು//29//
ಶತ ಧೃತಿಯ ಸುತರೀರ್ವರ ಉಳಿದ ಅಪ್ರತಿಮ ಸುತಪೋ ನಿಧಿಗಳ 
ಪರಾಜಿತನ ಸುಸಮಾಧಿಯೊಳು ಇರಿಸಿ ಮೂರ್ಲೋಕದೊಳು ಮೆರೆವ 
ವ್ರತಿವರ ಮರೀಚಿ ಅತ್ರಿ ಪುಲಹಾ ಕ್ರತು ವಸಿಷ್ಠ ಪುಲಸ್ತ್ಯ 
ವೈವಸ್ವತನು ವಿಶ್ವಾಮಿತ್ರ ಅಂಗಿರರ ಅಂಘ್ರಿಗೆರಗುವೆನು//30//
ದ್ವಾದಶ ಆದಿತ್ಯರೊಳು ಮೊದಲಿಗನಾದ ಮಿತ್ರ 
ಪ್ರವಹ ಮಾನಿನಿಯಾದ ಪ್ರಾವಹಿ ನಿರ್ಋತಿ ನಿರ್ಜರ ಗುರು ಮಹಿಳೆ ತಾರಾ 
ಈ ದಿವೌಕಸರು ಅನುದಿನ ಆಧಿವ್ಯಾಧಿ ಉಪಟಳವ ಅಳಿದು 
ವಿಬುಧರಿಗೆ ಆದರದಿ ಕೊಡಲಿ ಅಖಿಳ ಮಂಗಳವ ಆವ ಕಾಲದಲಿ//31//
ಮಾನನಿಧಿಗಳು ಎನಿಸುವ ವಿಷ್ವಕ್ಸೇನ ಧನಪ ಗಜಾನನರಿಗೆ 
ಸಮಾನರು ಎಂಭತ್ತೈದು ಶೇಷ ಶತಸ್ಥ ದೇವಗಣಕೆ ಆ ನಮಿಸುವೆನು 
ಬಿಡದೆ ಮಿಥ್ಯಾ ಜ್ಞಾನ ಕಳೆದು ಸುಬುದ್ಧಿನಿತ್ತು 
ಸದಾನುರಾಗದಲಿ ಎಮ್ಮ ಪರಿಪಾಲಿಸಲೆಂದೆನುತ//32//
ಭೂತ ಮರುತನು ಅವಾಂತರ ಅಭಿಮಾನಿ ತಪಸ್ವಿ ಮರೀಚಿ ಮುನಿ 
ಪುರುಹೂತ ನಂದನ ಪಾದಮಾನಿ ಜಯಂತರು ಎಮಗೊಲಿದು 
ಕಾತರವ ಪುಟ್ಟಿಸದೆ ವಿಷಯದಿ ವೀತಭಯನ ಪದಾಬ್ಜದಲಿ 
ವಿಪರೀತ ಬುದ್ಧಿಯನು ಈಯದೆ ಸದಾ ಪಾಲಿಸಲೆಮ್ಮ//33//
ಓದಿಸುವ ಗುರುಗಳನು ಜರಿದು ಸಹ ಓದುಗರಿಗೆ ಉಪದೇಶಿಸಿದ 
ಮಹದಾದಿ ಕಾರಣ ಸರ್ವಗುಣ ಸಂಪೂರ್ಣ ಹರಿಯೆಂದು ವಾದಿಸುವ 
ತತ್ಪತಿಯ ತೋರೆಂದು ಆ ದನುಜ ಬೆಸಗೊಳಲು 
ಸ್ತಂಭದಿ ಶ್ರೀದನ ಆಕ್ಷಣ ತೋರಿಸಿದ ಪ್ರಹ್ಲಾದ ಸಲಹೆಮ್ಮ//34//
ಬಲಿ ಮೊದಲು ಸಪ್ತ ಇಂದ್ರರು ಇವರಿಗೆ ಕಲಿತ ಕರ್ಮಜ ದಿವಿಜರು ಎಂಬರು 
ಉಳಿದ ಏಕಾದಶ ಮನುಗಳು ಉಚಿಥ್ಥ್ಯ ಚವನ ಮುಖ 
ಕುಲರ್ಷಿಗಳು ಎಂಭತ್ತು ಹೈಹಯ ಇಳಿಯ ಕಂಪನಗೈದ ಪೃಥು 
ಮಂಗಳ ಪರೀಕ್ಷಿತ ನಹುಷ ನಾಭಿ ಯಯಾತಿ ಶಶಿಬಿಂದು//35//
ಶತಕ ಸಂಕೇತ ಉಳ್ಳ ಪ್ರಿಯವ್ರತ ಭರತ ಮಾಂಧಾತ ಪುಣ್ಯಾಶ್ರಿತರು 
ಜಯವಿಜಯಾದಿಗಳು ಗಂಧರ್ವರೆಂಟು ಜನ 
ಹುತವಹಜ ಪಾವಕ ಸನಾತನ ಪಿತೃಗಳು ಎಳ್ವರು ಚಿತ್ರಗುಪ್ತರು 
ಪ್ರತಿದಿನದಿ ಪಾಲಿಸಲಿ ತಮ್ಮವನೆಂದು ಎಮಗೊಲಿದು//36//
ವಾಸವಾಲಯ ಶಿಲ್ಪ ವಿಮಲ ಜಲಾಶಯಗಳೊಳು ರಮಿಪ ಊರ್ವಶಿ 
ಭೇಶ ರವಿಗಳ ರಿಪುಗಳೆನಿಸುವ ರಾಹುಕೇತುಗಳು 
ಶ್ರೀಶ ಪದ ಪಂಥಾನ ಧೂಮಾರ್ಚೀರ ದಿವಿಜರು 
ಕರ್ಮಜರಿಗೆ ಸದಾ ಸಮಾನ ದಿವೌಕಸರು ಕೊಡಲಿ ಎಮಗೆ ಮಂಗಳವ//37//
ದ್ಯುನದಿ ಶ್ಯಾಮಲ ಸಂಜ್ಞ ರೋಹಿಣಿ ಘನಪ ಪರ್ಜನ್ಯ ಅನಿರುದ್ಧನ ವನಿತೆ 
ಬ್ರಹ್ಮಾಂಡಾಭಿಮಾನಿ ವಿರಾಟ ದೇವಿಯರ ನೆನೆವೆನು 
ಆ ನಲವಿಂದೆ ದೇವಾನನ ಮಹಿಳೆ ಸ್ವಾಹಾಖ್ಯರು 
ಆಲೋಚನೆ ಕೊಡಲಿ ನಿರ್ವಿಘ್ನದಿಂ ಭಗವದ್ಗುಣoಗಳಲಿ//38//
ವಿಧಿಪಿತನ ಪಾದಾಂಬುಜಗಳಿಗೆ ಮಧುಪನಾಂತೆ ವಿರಾಜಿಪಾಮಲ 
ಉದಕಗಳಿಗೆ ಸದಾಭಿಮಾನಿಯು ಎಂದೆನಿಸಿಕೊಂಬ ಬುಧಗೆ ನಾ ವಂದಿಸುವೆ ಸಮ್ಮೋದದಿ 
ನಿರಂತರವು ಒಲಿದೆಮಗೆ 
ಅಭ್ಯುದಯ ಪಾಲಿಸಲೆಂದು ಪರಮೋತ್ಸವದೊಳು ಅನುದಿನದಿ//39//
ಶ್ರೀ ವಿರಿಂಚಾದ್ಯರ ಮನಕೆ ನಿಲುಕಾವ ಕಾಲಕೆ 
ಜನನ ರಹಿತನ ತಾವೊಲಿಸಿ ಮಗನೆಂದು ಮುದ್ದಿಸಿ ಲೀಲೆಗಳ ನೋಳ್ಪ 
ದೇವಕಿಗೆ ವಂದಿಪೆ ಯಶೋದಾ ದೇವಿಗೆ ಆನಮಿಸುವೆನು 
ಪರಮ ಕೃಪಾವಲೋಕನದಿಂದ ಸಲಹುವುದು ಎಮ್ಮ ಸಂತತಿಯ//40//
ಪಾಮರರನ ಪವಿತ್ರಗೈಸುವ ಶ್ರೀ ಮುಕುಂದನ ವಿಮಲ ಮಂಗಳ 
ನಾಮಗಳಿಗೆ ಅಭಿಮಾನಿಯಾದ ಉಷಾಖ್ಯ ದೇವಿಯರು 
ಭೂಮಿಯೊಳಗುಳ್ಳ ಅಖಿಳ ಸಜ್ಜನರ ಆಮಯಾದಿಗಳ ಅಳಿದು ಸಲಹಲಿ 
ಆ ಮರುತ್ವಾನ್ ಮನೆಯ ವೈದ್ಯರ ರಮಣಿ ಪ್ರತಿದಿನದಿ//41//
ಪುರುಟ ಲೋಚನ ನಿನ್ನ ಕದ್ದೊಯ್ದಿರಲು ಪ್ರಾರ್ಥಿಸೆ 
ದೇವತೆಗಳ ಉತ್ತರವ ಲಾಲಿಸಿ ತಂದ ವರಾಹ ರೂಪ ತಾನಾಗಿ 
ಧರಣಿ ಜನನಿ ನಿನ್ನ ಪಾದಕ್ಕೆರಗಿ ಬಿನ್ನೈಸುವನು 
ಪಾದಸ್ಪರ್ಶ ಮೊದಲಾದ ಅಖಿಳ ದೋಷಗಳು ಎಣಿಸದಿರೆಂದು//42//
ವನಧಿವಸನೆ ವರಾದ್ರಿ ನಿಚಯ ಸ್ತನವಿರಾಜಿತೆ 
ಚೇತನಾಚೇತನ ವಿಧಾರಕೆ ಗಂಧ ರಸ ರೂಪಾದಿ ಗುಣ ವಪುಷೆ 
ಮುನಿಕುಲೋತ್ತಮ ಕಶ್ಯಪನ ನಿಜತನುಜೆ ನಿನಗೆ ಅನಮಿಪೆ 
ಎನ್ನವಗುಣಗಳು ಎಣಿಸದೆ ಪಾಲಿಪುದು ಪರಮಾತ್ಮನರ್ಧಾಂಗಿ//43//
ಹರಿ ಗುರುಗಳ ಅರ್ಚಿಸದ ಪಾಪಾತ್ಮರನ ಶಿಕ್ಷಿಸಲೋಸುಗ 
ಶನೈಶ್ಚರನೆನಿಸಿ ದುಷ್ಫಲಗಳೀವೆ ನಿರಂತರದಿ ಬಿಡದೆ 
ತರಣಿ ನಂದನ ನಿನ್ನ ಪಾದಾಂಬುರುಹಗಳಿಗೆ ಆ ನಮಿಪೆ 
ಬಹು ದುಸ್ತರ ಭವಾರ್ಣದಿ ಮಗ್ನನಾದೆನ್ನ ಉದ್ಧರಿಸಬೇಕು//44//
ನಿರತಿಶಯ ಸುಜ್ಞಾನ ಪೂರ್ವಕ ವಿರಚಿಸುವ ನಿಷ್ಕಾಮ ಕರ್ಮಗಳರಿತು 
ತತ್ತತ್ಕಾಲದಲಿ ತಜ್ಜನ್ಯ ಫಲರಸವ ಹರಿಯ ನೇಮದಲಿ ಉಣಿಸಿ 
ಬಹುಜೀವರಿಗೆ ಕರ್ಮಪನೆನಿಪ 
ಗುರುಪುಷ್ಕರನು ಸತ್ಕ್ರಿಯಂಗಳಲಿ ನಿರ್ವಿಘ್ನತೆಯ ಕೊಡಲಿ//45//
ಶ್ರೀನಿವಾಸನ ಪರಮ ಕಾರುಣ್ಯಾನಿ ವಾಸಸ್ಥಾನರು ಎನಿಪ ಕೃಶಾನುಜರು 
ಸಹಸ್ರ ಷೋಡಶ ಶತರು ಶ್ರೀ ಕೃಷ್ಣ ಮಾನಿನಿಯರು ಎಪ್ಪತ್ತು 
ಯಕ್ಷರು ದಾನವರು ಮೂವತ್ತು 
ಚಾರಣ ಅಜಾನಜ ಅಮರರು ಅಪ್ಸರರು ಗಂಧರ್ವರಿಗೆ ನಮಿಪೆ//46//
ಕಿನ್ನರರು ಗುಹ್ಯಕರು ರಾಕ್ಷಸ ಪನ್ನಗರು ಪಿತೃಗಳು ಸಿದ್ಧರು 
ಸನ್ನುತ ಅಜಾನಜರು ಸಮರು ಇವರು ಅಮರ ಯೋನಿಜರು 
ಇನ್ನಿವರ ಗಣವೆಂತು ಬಣ್ಣಿಸಲು ಎನ್ನೊಳವೆ 
ಕರುಣದಲಿ ಪರಮಾಪನ್ನ ಜನರಿಗೆ ಕೊಡಲಿ ಸನ್ಮುದ ಪರಮ ಸ್ನೇಹದಲಿ//47//
ಆ ಯಮುನೆಯೊಳು ಸಾದರದಿ ಕಾತ್ಯಾಯನೀ ವ್ರತಧರಿಸಿ 
ಕೆಲರು ದಯಾಯುಧನೆ ಪತಿಯೆಂದು ಕೆಲವರು ಜಾರತನದಲ್ಲಿ 
ವಾಯುಪಿತನೊಲಿಸಿದರು ಈರ್ವಗೆ ತೋಯ ಸರಸರ 
ಪಾದಕಮಲಕೆ ನಾ ಎರಗುವೆ ಮನೋರಥಂಗಳ ಸಲಿಸಲಿ ಅನುದಿನದಿ//48//
ನೂರುಮುನಿಗಳ ಉಳಿದು ಮೇಲಣ ನೂರು ಕೋಟಿ ತಪೋಧರನ 
ಪಾದಾರವಿಂದಕೆ ಮುಗಿವೆ ಕರಗಳನು ಉದ್ಧರಿಸಲೆಂದು 
ಮೂರು ಸಪ್ತ ಶತಾಹ್ವಯರ ತೊರೆದು ಈ ಋಷಿಗಳ ಅನಂತರಲಿಹ 
ಭೂರಿ ಪಿತೃಗಳು ಕೊಡಲಿ ಎಮಗೆ ಸಂತತ ಸುಮಂಗಳವ//49//
ಪಾವನಕೆ ಪಾವನನು ಎನಿಸುವ ರಮಾ ವಿನೋದಿಯ ಗುಣಗಣoಗಳ 
ಸಾವಧಾನದಲಿ ಏಕ ಮಾನಸರಾಗಿ ಸುಸ್ವರದಿ 
ಆ ವಿಬುಧಪತಿ ಸಭೆಯೊಳಗೆ ನಾನಾ ವಿಲಾಸದಿ ಪಾಡಿ ಸುಖಿಸುವ 
ದೇವ ಗಂಧರ್ವರು ಕೊಡಲಿ ಎಮಗೆ ಅಖಿಳ ಪುರುಷಾರ್ಥ//50//
ಭುವನ ಪಾವನ ಮಾಳ್ಪ ಲಕ್ಷ್ಮೀ ಧವನ 
ಮಂಗಳ ದಿವ್ಯ ನಾಮ ಸ್ತವನಗೈವ ಮನುಷ್ಯ ಗಂಧರ್ವರಿಗೆ ವಂದಿಸುವೆ 
ಪ್ರವರ ಭೂಭುಜರ ಉಳಿದು ಮಧ್ಯಮ ಕುವಲಯಪರು ಎಂದು ಎನಿಸಿಕೊಂಬರ 
ದಿವಸ ದಿವಸಂಗಳಲಿ ನೆನೆವನು ಕರಣ ಶುದ್ಧಿಯಲಿ//51//
ಶ್ರೀ ಮುಕುಂದನ ಮೂರ್ತಿಸಲೆ ಸೌದಾಮಿನಿಯೋಳ್ ಹೃದಯ ವಾರಿಜ 
ವ್ಯೋಮ ಮಂಡಲ ಮಧ್ಯದಲಿ ಕಾಣುತಲಿ ಮೋದಿಸುವ 
ಆ ಮನುಷ್ಯೋತ್ತಮರ ಪದಯುಗ ತಾಮರಸಗಳಿಗೆ ಎರಗುವೆ 
ಸದಾ ಕಾಮಿತಾರ್ಥಗಳಿತ್ತು ಸಲಹಲಿ ಪ್ರಣತ ಜನತತಿಯ//52//
ಈ ಮಹೀ ಮಂಡಲದೊಳಿಹ ಗುರು ಶ್ರೀಮದಾಚಾರ್ಯರ ಮತಾನುಗರು 
ಆ ಮಹಾವೈಷ್ಣವರ ವಿಷ್ಣು ಪದಾಬ್ಜ ಮಧುಕರರ ಸ್ತೋಮಕೆ ಅನಮಿಸುವೆನು 
ಅವರವರ ನಾಮಗಳನು ಏಂ ಪೇಳ್ವೆ ಬಹುವಿಧ 
ಯಾಮ ಯಾಮಂಗಳಲಿ ಬೋಧಿಸಲಿ ಎಮಗೆ ಸನ್ಮತಿಯ//53//
ಮಾರನಯ್ಯನ ಕರುಣ ಪಾರಾವಾರ ಮುಖ್ಯ ಸುಪಾತ್ರರು ಎನಿಪ 
ಸರೋರುಹಾಸನ ವಾಣಿ ರುದ್ರ ಇಂದ್ರಾದಿ ಸುರನಿಕರ 
ತಾರತಮ್ಯಾತ್ಮಕ ಸುಪದ್ಯಗಳ ಆರು ಪಠಿಸುವರು ಆ ಜನರಿಗೆ 
ರಮಾರಮಣ ಪೂರೈಸಲಿ ಈಪ್ಸಿತ ಸರ್ವಕಾಲದಲಿ//54//
ಮೂರು ಕಾಲಗಳಲ್ಲಿ ತುತಿಸೆ ಶರೀರ ವಾನ್ಗ್ಮನಃ ಶುದ್ಧಿ ಮಾಳ್ಪುದು 
ದೂರಗೈಸುವದು ಅಖಿಳ ಪಾಪ ಸಮೂಹ ಪ್ರತಿದಿನದಿ 
ಚೋರಭಯ ರಾಜಭಯ ನಕ್ರ ಚಮೂರ ಶಸ್ತ್ರ ಜಲಾಗ್ನಿ ಭೂತ 
ಮಹೋರಗ ಜ್ವರ ನರಕ ಭಯ ಸಂಭವಿಸದು ಎಂದೆಂದು//55//
ಜಯಜಯತು ತ್ರಿಜಗದ್ವಿಲಕ್ಷಣ ಜಯಜಯತು ಜಗದೇಕ ಕಾರಣ 
ಜಯಜಯತು ಜಾನಕೀ ರಮಣ ನಿರ್ಗತ ಜರಾಮರಣ 
ಜಯಜಯತು ಜಾಹ್ನವೀ ಜನಕ ಜಯಜಯತು ದೈತ್ಯ ಕುಲಾಂತಕ 
ಭವಾಮಯ ಹರ ಜಗನ್ನಾಥ್ ವಿಠಲ ಪಾಹಿಮಾಂ ಸತತ//56//
//ಇತಿ ಶ್ರೀ ಕಕ್ಷಾತಾರತಮ್ಯ ಸಂಧಿ ಸಂಪೂರ್ಣಂ//
//ಶ್ರೀ ಕೃಷ್ಣಾರ್ಪಣಮಸ್ತು//