Thursday, March 7, 2013

ರಾಘವೇಂದ್ರ ವಿಜಯ - ಚತುರ್ಥ ಸಂಧಿ

ಚತುರ್ಥ ಸಂಧಿ


ರಾಘವೇಂದ್ರರ ವಿಜಯ ಪೇಳುವೆ

ರಾಘವೇಂದ್ರರ ಕರುಣ ಬಲದಲಿ

ರಾಘವೇಂದ್ರರ ಭಕುತರಾದವರಿದನು ಕೇಳುವುದು//


ಪರಮಕರುಣಾಕರನು ಲೋಕಕೆ

ಚರಣಸೇವಕರಾದ ಜನರಿಗೆ

ಸುರತರುವರದಂತೆ ಕಾಮಿತ ನಿರುತ ಕೊಡುತಿಪ್ಪಿ

ಶರಣು ಪೊಕ್ಕೆನೊ ದುಃಖಮಯ ಭವ

ಅರಣದಾಟಿಸು ಶೀಘ್ರ ನಿನ್ನಯ

ಚರಣಯುಗದಲಿ ಎನ್ನನಿಟ್ಟು ಸಲಹೊ ಗುರುವರನೆ//೧//


ಇನಿತು ಬಾಲನ ವಾಕ್ಯಲಾಲಿಸಿ

ಮುನಿಕುಲೋತ್ತಮನಾದ ಯತಿವರ

ಮತಿಮತಾಂವರನಾದ ಬಾಲನ ನೋಡಿ ಸಂತಸದಿ

ಮನದಿ ಯೋಚಿಸಿ ಸಪ್ತವತ್ಸರ

ತನಯಗಾಗಲು ಮುಂಜಿ ಮಾಡಿಸಿ

ವಿನಯದಿಂದಾಶ್ರಮವ ಕೊಟ್ಟು ವ್ಯಾಸಮುನಿಯೆಂದ//೨//


ಮುಂದೆ ತಾ ಬ್ರಹ್ಮಣ್ಯಯತಿವರ

ಪೊಂದಿ ತಾ ಶ್ರೀಪಾದರಾಯ

ಮುಂದೆ ಬಾಲನು ನಿಮ್ಮ ಸನ್ನಿಧಿಯಲ್ಲಿ ಇರಲೆಂದ

ಮಧ್ವಮತವುದ್ಧರಿಸಲೋಸುಗ

ಬಂದ ಬಾಲನ ತತ್ತ್ವ ತಿಳಿದೂ

ಛಂದದಲಿ ತಾ ವಿದ್ಯೆ ಪೇಳಿದ ವೇದ್ಯಮತಿ ಯತಿಗೆ//೩//


ಮೂಲಮೂವತ್ತೇಳು ಗ್ರಂಥದ

ಜಾಲಟೀಕಾಟಿಪ್ಪಣೀ ಸಹ

ಪೇಳಿ ತಾ ಶ್ರೀಪಾದರಾಜರು ಧನ್ಯರೆನಿಸಿದರು

ಶೀಲಗುರುಬ್ರಹ್ಮಣ್ಯತೀರ್ಥರು

ಕಾಲದಲಿ ವೈಕುಂಠ ಲೋಕವ

ಶೀಲಮನದಲಿ ಹರಿಯ ಸ್ಮರಿಸುತ ತಾವೆ ಪೊಂದಿದರು//೪//


ಅಂದು ಗುರುಗಳ ಛಂದದಿಂದಲಿ

ಒಂದು ಬೃಂದಾವನದಿ ಪೂಜಿಸಿ

ಬಂದ ಭೂಸುರತತಿಗೆ ಭೋಜನ ಕನಕ ದಕ್ಷಿಣೆಯ

ಛಂದದಿಂದಲಿಯಿತ್ತು ದಿನದಿನ

ಇಂದಿರೇಶನ ಭಜಿಸುತಲಿ ತಾನಂದು

ಗುರುಗಳ ಪ್ರೀತಿಪಡಿಸಿದ ವ್ಯಾಸಮುನಿರಾಯ//೫//


ಮುಳಬಾಗಿಲ ಮಠದ ಮಧ್ಯದಿ

ಒಳ್ಳೆಮುತ್ತಿನ ಚಿತ್ರದಾಸನದಲ್ಲಿ

ತಾ ಕುಳಿತಿರ್ದು ಶಿಷ್ಯರ ತತಿಗೆ ನಿತ್ಯದಲಿ

ಖುಲ್ಲಮಾಯ್ಗಿಳ ಮತವಿಚಾರವ

ಸುಳ್ಳು ಮಾಡಿದ ಮಧ್ವಶಾಸ್ತ್ರಗಳೆಲ್ಲ

ಬೋಧಿಸಿ ಹರಿಯೇ ಸರ್ವೋತ್ತಮನು ನಿಜವೆಂದ//೬//


ಏಕೋನಾರಾಯಣನೆ ಲಯದಲನೇಕ

ಜೀವರ ತನ್ನ ಜಠರದಿ

ಎಕಭಾಗದಲ್ಲಿಟ್ಟು ಲಕುಮಿಯ ಭುಜಗಳಾಂತರದಿ

ಶ್ರೀಕರನು ತಾ ಶೂನ್ಯನಾಮದಿ

ಏಕರೂಪದಿ ಪೊಂದುಗೊಳಿಸುತ

ಶ್ರೀಕರಾತ್ಮಕವಟದ ಪತ್ರದಿ ಯೋಗನಿದ್ರೆಯನು//೭//


ಮಾಡುತಿರಲಾಕಾಲಕಂಭ್ರಣಿ

ಪಾಡಿ ಜಯಜಯವೆಂದು ಸ್ತವನವ

ಮಾಡಿ ಬೋಧಿಸಿ ಸೃಷ್ಟಿಕಾಲವು ಪ್ರಾಪ್ತವಾಗಿಹುದೋ

ನೋಡಿ ಜೀವರ ಉದರದಿರುವರ

ಮಾಡಿ ಭಾಗವ ಮೂರುಮುಷ್ಟಿಯ

ಒಡೆಯ ತಾನೇ ಸೃಷ್ಟಿ ಮಾಡಿದ ಸೃಜ್ಯಜೀವರನ//೮//


ಆದಿನಾರಾಯಣನೆ ಮೂಲನು

ವೇದಗಮ್ಯಾನಂತನಾಮಕ

ಆದನಾತನು ಅಂಶಿರೂಪನು ವಿಶ್ವತೋಮುಖನು

ಪಾದಹಸ್ತಾದ್ಯವಯಂಗಳು

ವೇದರಾಶಿಗೆ ನಿಲುಕಲಾರವು

ವೇದಮಾನಿಯು ಲಕುಮಿ ತಿಳಿಯಲು ತಿಳಿವ ಸರ್ವಜ್ಞ//೯//


ವಿಶ್ವತೋಮುಖ ಚಕ್ಷು ಕರ್ಣನು

ವಿಶ್ವತೋದರ ನಾಭಿ ಕುಕ್ಷನು

ವಿಶ್ವತೋಕಟಿ ಊರು ಜಾನೂ ಜಂಘೆಯುಗ ಗುಲ್ಫ

ವಿಶ್ವತೋಮಯ ಪಾದವಾರಿಜ

ವಿಶ್ವತಾಂಗುಲಿರಾಜಿನಖಗಳು

ವಿಶ್ವಕಾಯನು ವಿಶ್ವದೊಳಗಿಹ ವಿಶ್ವ ವಿಶ್ವೇಶ//೧೦//


ಅಪದಪಾಣಿಯು ಜವನಪಿಡವನು

ಲುಪಿತಶ್ರುತಿಕಣ್ಕೇಳಿನೊಡ್ವನು

ಅಪರಮಹಿಮನ ಶಿರಿಯು ಅರಿಯಳು ಸುರರ ಪಾಡೇನು

ಜಪಿಸಿ ಕಾಣುವೆನೆಂದು ಲಕುಮಿಯು

ಅಪರಿಮಿತ ತಾ ರೂಪಧರಿಸೀ

ತಪಿಸಿ ಗುಣಗಳ ರಾಶಿಯೊಳು ತಾನೊಂದು ತಿಳಿಲಿಲ್ಲ//೧೧//


ಅಂದುಪೋಗಿಹ ಲಕುಮಿ

ರೂಪಗಳಿಂದಿಗೂ ಬರಲಿಲ್ಲ ಕಾರಣ

ಛಂದದಿಂದಲಿ ವೇದಪೇಳ್ವದನಂತ ಮಹಿಮೆಂದು

ಒಂದೆರೂಪದಿ ಹಲವು ರೂಪವು

ಒಂದೆಗುಣದೊಳನಂತಗುಣಗಳು

ಎಂದಿಗಾದರುಪೊಂದಿಯಿಪ್ಪವನಂತಕಾಲದಲಿ//೧೨//


ಪೂರ್ಣವೆನಿಪವು ಗುಣಗಣ೦ಗಳು

ಪೂರ್ಣವೆನಿಪವು ಅವಯವಂಗಳು

ಪೂರ್ಣವೆನಿಪವು ರೂಪಕರ್ಮಗಳಾವಕಾಲದಲಿ

ಪೂರ್ಣನಗುಮುಖ ಕಂಠಹೃದಯನು

ಪೂರ್ಣಜಾನು ಸುಕಕ್ಷ ಕುಕ್ಷನು

ಪೂರ್ಣಕಟಿ ತಟ ನಾಭಿ ಊರು ಜಾನು ಜಂಘೆಗಳು//೧೩//


ಪೂರ್ಣಗುಲ್ಫ ಸುಪಾದಪದುಮವು

ಪೂರ್ಣವಾದ೦ಗುಲಿಯ ಸಂಘವು

ಪೂರ್ಣ ನಖ ಧ್ವಜ ವಕ್ರ ಚಕ್ರ ಸುಶಂಖ ರೇಖೆಗಳು

ಪೂರ್ಣವಾದುದು ಅಂಶಿರೂಪವು

ಪೂರ್ಣವಾದುದು ಅಂಶಿರೂಪವು

ಪೂರ್ಣವಾಗಿಹವೆಲ್ಲ ಜೀವರ ಬಿಂಬರೂಪಗಳು//೧೪//


ಪುರುಷ ಸ್ತ್ರೀಯಳುಯೆಂಬ ಬೇಧದಿ

ಎರಡುರೂಪಗಳುಂಟು ಈತಗೆ

ಪುರುಷನಾಮಕ ನಂದಮಯ ಬಲಭಾಗ ತಾನೆನಿಪ

ಕರಸುವನು ವಿಜ್ಞಾನಮಯ

ತಾನರಸಿಯೆನಿಸುತ ವಾಮಭಾಗದಿ

ಇರುವ ಕಾರಣ ಸ್ವರಮಣನು ತಾನಾಗಿಯಿರುತಿಪ್ಪ//೧೫//


ನಾರಾಯಣನು ಪುರುಷರೂಪದಿ

ನಾರಾಯಣಿಯು ಸ್ತ್ರೀಯ ರೂಪದಿ

ಬೇರೆಯಲ್ಲವು ತಾನೆ ಈವಿಧ ಎರಡುರೂಪದಲಿ

ತೋರುತಿಪ್ಪನು ಸ್ತ್ರೀಯ ರೂಪವೆ

ಚಾರುತರ ಶ್ರೀವತ್ಸನಾಮದಿ

ಸೇರಿಯಪ್ಪದು ಪುರುಷರೂಪದ ವಕ್ಷೊಮಂದಿರದಿ//೧೬//


ಲಕುಮಿದೇವಿಗೆ ಬಿಂಬವೆನಿಪುದು

ಸಕಲ ಸ್ತ್ರೀಯರ ಗಣದಲಿಪ್ಪುದು

ವ್ಯಕುತವಾಗಿಹುದಾದಿಕಾಲದಿ ಮುಕುತಿ ಸೇರಿದರು

ವಿಕಲವಾಗದು ಎಂದಿಗಾದರು

ನಿಖಿಳಜಗದಲಿ ವ್ಯಾಪಿಸಿಪ್ಪುದು

ಲಕುಮಿರಮಣಿಯ ಲಕ್ಷ್ಯವಿಲ್ಲದೆ ಸೃಜಿಪ ತಾನೆಲ್ಲ//೧೭//


ಪುರುಷಜೀವರ ಹೃದಯದಲಿ ತಾ

ಪುರುಷರೂಪದಿ ಬಿಂಬನೆನಿಸುವ

ಇರುಅ ಸರ್ವದ ಪ್ರಳಯದಲಿ ಸಹ ಬಿಡನು ತ್ರಿವಿಧರನು

ಕರಸುತಿಪ್ಪನು ಜೇವನಾಮದಿ

ಬೆರೆತು ಕರ್ಮವ ಮಾಡಿ ಮಾಡಿಸಿ

ನಿರುತಜೀವರ ಕರ್ಮರಾಶಿಗೆ ಗುರಿಯ ಮಾಡುವನು//೧೮//


ಮೂಲನಾರಾಯಣನು ತಾ ಬಲು

ಲೀಲೆ ಮಾಡುವ ನೆವದಿ ತಾನೆ

ವಿಶಾಲಗುಣಗಣ ಸಾಂಶ ಜ್ಞಾನಾನಂದ ಶುಭಕಾಯ

ಬಾಲರೂಪವ ಧರಿಸಿ ವಟದೆಲೆ

ಆಲಯದಿ ಸಿರಿ ಭೂಮಿ ದುರ್ಗೆರ

ಲೋಲನಾದಾ ಪದುಮನಾಭನೆ ವ್ಯಕುತ ತಾನಾದ//೧೯//


ನಾನಾವಿಧದವತಾರಗಳಿಗೆ ನಿಧಾನ

ಬೀಜವುಯೆನಿಸುತಿಪ್ಪೊದು

ಮೀನ ಕೂರ್ಮ ವರಾಹ ಮೊದಲೂ ಸ್ವಾಂಶಕಳೆರೂಪ

ತಾನೆ ಸಕಲಕೆ ಮೂಲಕಾರಣ

ತಾನೆ ತನ್ನಯ ರೂಪ ಸಮುದಯ

ತಾನೆ ತನ್ನಲಿಯಿಡುವ ಪ್ರಲಯದಲೇಕನೆನಿಸುವನು//೨೦//

ರಾಮರೂಪವನಂತಯಿಪ್ಪದು

ವಾಮನಾದಿಯನಂತ ಕೃಷ್ಣರು

ಸೀಮವಿಲ್ಲದೆ ರೂಪಸಂತತಿ ಬೇರೆ ತೋರುವದು

ಹೇಮನಿರ್ಮತ ಮೂರ್ತಿಗೊಪ್ಪುವ

ಚಾಮಿಕರಮಯಚಾರುಭೂಷಣ

ಸ್ತೋಮ ನೋಡುವ ಜನರ ಸಂಘಕೆ ಬೇರೆ ತೋರ್ಪಂತೆ//೨೧//


ಅಂಶಿಯಲಿ ಸಂಶ್ಲೇಷ ಐಕ್ಯವು

ಅಂಶ ಸಮುಹವು ಎಯ್ದು ತೋರ್ಪುದು

ಸಂಶಯೇನಿದರಲ್ಲಿ ತೆನೆಯೊಳು ಕಾಳ್ಗಳಿದ್ದಂತೆ

ಭ್ರಂಶರಾಗದೆ ಸುಮತಗಳನು

ಪ್ರಶಂಸಮಾಳ್ಪ ಸುಶಾಸ್ತ್ರದಲಿ

ನಿಸ್ಸಂಶಯಾತ್ಮಕರಾಗಿ ಮನದೃಢ ಮಾಡಿ ನೋಡುವದು//೨೨//


ಬಿಂಬಹರಿ ಪ್ರತಿಬಿಂಬಜೀವರು

ಬಿಂಬನೆ ತಾ ಮೂಲ ಕಾರಣ

ಇಂಬುಯೆನಿಪ ಸ್ವರೂಪದೇಹೊಪಾಧಿಯೆನಿಸುವದು

ಎಂಬ ವಾಕ್ಯದ ಭಾವ ತಿಳಿಯದೆ

ಶುಂಭರಾದರು ದ್ವಿಜರು ಕೆಲವರು

ಗುಂಭವಾಗಿದರರ್ಥಯಿರುವದು ಪರಮಗೋಪಿತವು//೨೩//


ಸತ್ಯವಾಗಿಹ ಆತ್ಮರೂಪವೆ

ನಿತ್ಯವಾದ ಉಪಾಧಿಯೆನಿಪದು

ವ್ಯತ್ಯಯವು ಏನಿಲ್ಲ ನೋಡಲು ಗೊತ್ತು ತಿಳಿಯದಲೆ

ವ್ಯತ್ಯಯಾರ್ಥವಮಾಡಿ ಕೆಡಿಸದೆ

ಸತ್ಯವಾದುದು ತಿಳಿಯಲಾ ಹರಿ

ಭೃತ್ಯರಾಗ್ರಣಿಯಾಗಿ ಪರಸುಖವೈದಿ ಮೋದಿಪನು//೨೪//


ಅಂತರಾತ್ಮನು ಸಕಲಜೀವರ

ಅಂತರಂಗಸ್ವರೂಪ ದೇಹದಿ

ನಿಂತು ತಾ ಸರ್ವಾಂಗವ್ಯಾಪಕನಾಗಿಯಿರುತಿಪ್ಪ

ಸಂತತದಿ ತಾ ನಂದರೂಪನನಂತ

ಜೀವಸ್ವರೂಪಬಹಿರದಿ

ನಿಂತು ಸದ್ವಿಜ್ಞಾನರೂಪದಿ ಆತ್ಮನೆನಿಸಿಪ್ಪ//೨೫//


ಈತನಂತಾನಂತರೂಪದಿ

ಪ್ರೀತಿಪೂರ್ವಕ ದಾಸಜನರಿಗೆ

ನೀತಫಲಗಳ ಸರ್ವವ್ಯಾಪಕ ತಾನೆ ಕೊಡುತಿಹನು

ಜಾತ ಸೂರ್ಯಾನಂತನಿಭ

ನಿಜಜ್ಯೋತಿಮಯ ಸತ್ತೇಜೋಮೂರುತಿದಾತ

ಗುರುಜಗನ್ನಾಥವಿಠಲನು ತಾನೆ ಪರಿಪೂರ್ಣ//೨೬//


//ಇತಿ ಶ್ರೀ ರಾಘವೇಂದ್ರ ವಿಜಯ ಚತುರ್ಥ ಸಂಧಿ ಸಮಾಪ್ತಂ//


Wednesday, March 6, 2013

ರಾಘವೇಂದ್ರ ವಿಜಯ - ತೃತೀಯ ಸಂಧಿ

ತೃತೀಯ ಸಂಧಿ

ರಾಘವೇಂದ್ರರ ವಿಜಯ ಪೇಳುವೆ
ರಾಘವೇಂದ್ರರ ಕರುಣ ಬಲದಲಿ
ರಾಘವೇಂದ್ರರ ಭಕುತರಾದವರಿದನು ಕೇಳುವುದು//

ಆ ನಮಿಪೆ ಗುರುರಾಯನಂಘ್ರಿಗೆ
ಸಾನುರಾಗದಿ ಸರ್ವಕಾಲಕೆ
ದೀನಜನರುದ್ಧಾರಿ ಜನರಘ ಹಾರಿ ಶುಭಕಾರಿ
ನೀನೆ ಎನುತಲಿ ದೀನನಾಗೀ
ನಾನೇ ನಿನ್ನನು ಬೇಡಿಕೊಂಬೆನೋ
ನೀನೆ ಪಾಲಿಸು ಪ್ರಭುವೇ ಸ್ವಾಶ್ರಿತಜನರ ಸುರತರುವೆ//೧//

ಆ ಯುಗದಿ ಪ್ರಹ್ಲಾದನಾಮಕ
ರಾಯನೀ ಯುಗದಲ್ಲಿ
ವ್ಯಾಸರಾಯನಾಗ್ಯವತರಿಸಿ ದಶಮತಿಮತವ ಸ್ಥಾಪಿಸಿ
ತೋಯಜಾಂಬಕ ಲಕುಮಿಪತಿ
ನಾರಾಯಣನೆ ತಾ ಸರ್ವರುತ್ತಮ
ತೋಯಜಾಸನದಿವಿಜರೆಲ್ಲರು ಹರಿಗೆ ಸೇವಕರು//೨//

ಇನಿತು ಶಾಸ್ತ್ರದ ಸಾರ ತೆಗೆದೂ
ವಿನಯದಿಂದಲಿ ತನ್ನ ಭಜಿಸುವ
ಜನರ ಸಂತತಿಗರುಹಿ ಮುಕುತಿಯ ಪಥವ ತೋರಿಸಿದ
ಮುನಿಕುಲೋತ್ತಮ ಯತಿಶಿರೋಮಣಿ
ಕನಕದಾಸನ ಪ್ರಿಯನು ಸಂಯಮಿಗಣಕೆ
ರಾಜನು ಯದುವರೇಶನ ಭಜಿಸಿ ತಾ ಮೆರೆದ//೩//

ಈತ ಪುಟ್ಟಿದ ಚರ್ಯವರುಹುವೆ
ಭೂತಳದೊಳಾಶ್ಚರ್ಯವೆಂದಿಗು
ಭೂತಭಾವಿಪ್ರವರ್ತಕಾಲದಲಿಲ್ಲ ನರರೊಳಗೆ
ಜಾತನಾದರು ಜನವಿಲಕ್ಷಣ
ವೀತದೋಷ ವಿಶೇಷ ಮಹಿಮನು
ಖ್ಯಾತನಾದನು ಜಗದಿ ಸರ್ವದ ಜನನ ಮೊದಲಾಗಿ//೪//

ದಕ್ಷಿಣದಿ ಬನ್ನೂರು ಗ್ರಾಮದಿ
ದಕ್ಷನೆನಿಸಿದ ದೇಶಮುಖರಲಿ
ಲಕ್ಷ್ಮಿನಾಯಕನೆನಿಸಿ ಲೋಕದಿ ಖ್ಯಾತನಾಗಿಪ್ಪ
ಯಕ್ಷನಾಥನ ಧನದಿ ತಾನೂ
ಲಕ್ಷಿಕರಿಸನು ಎನಿಪನಾತಗೆ
ಲಕ್ಷಣಾ೦ಕಿತಳಾದ ಜಯವತಿಯೆಂಬ ಸತಿಯುಂಟು//೫//

ಜಲಜಜಯಿಸುವ ವದನನೈದಲಿ
ಗೆಲುವ ನಿರ್ಮಲ ನಯನಯುಗಳವು
ಲಲಿತಚಂಪಕನಾಸ ದರ್ಪಣಕದವು ಶುಭಕರಣ
ಚಲುವದಾಡಿಯ ರದನಪಂಕ್ತಿಯು
ಕಲಿತರಕ್ತಾಧರದಿ ಮಿನುಗುತ
ಚಲಿಪ ಮಂದಸ್ಮಿತದಿ ಶೋಭಿಪ ಚುಬುಕ ರಾಜಿಪುದು//೬//

ಕಂಬು ಪೋಲುವ ಕಂಠದೇಶವು
ಕುಂಭಿ ಶುಂಡ ಸಮಾನ ಬಾಹೂ
ಅಂಬುಜೋಪಮ ಹಸ್ತಯುಗಳವು ಕಾಂಚನಾಭರಣ
ರಂಭೆಯಳ ಕುಚಯುಗಳ ಸುಂದರ
ಕುಂಭ ಪೋಲ್ವವು ಉದರದೇಶವು
ರಂಭಪರಣ ಸುರೋಮರಾಜಿತಮೂರುವಳಿಯೊಪ್ಪೆ//೭//

ಗುಂಭನಾಭಿಯ ಸುಳಿಯು ಸುರನದಿ
ಯಂಬುಸುಳಿಯಂದದಲಿ ನಾರಿ
ನಿತಂಬಪುಲಿನವು ಕದಲಿವೂರೂ ಜಾನುಕನ್ನಡಿಯು
ಶಂಬರಾರಿಯ ತೂಣ ಜಂಘೆಯು
ಅಂಬುಜೋಪಮಚರಣ ಪುತ್ಥಳಿ
ಬೊಂಬೆಯಂದದಿ ಸಕಲಭೂಷಣದಿಂದಲೊಪ್ಪಿದಳು//೮//

ಶಿರಿಯೋ ಭಾಗ್ಯದಿ ಚಲ್ಟಿನಿಂದಪ್ಸರೆಯೋ
ರೂಪದಿ ರತಿಯೋ ಕ್ಷಮದಲಿ
ಧರೆಯೋ ದಯದಲಿ ನಿರುತ ವರಮುನಿಸತಿಯೋ ಪೇಳ್ವೆರ್ಗೆ
ಅರಿಯದಂತಾ ನಾರಿ ಶಿರೋಮಣಿ
ಪ್ರಿಯ ಸಿರಿಗುಣರೂಪದಂದದಲಿ
ಮೆರೆಯುತಿಪ್ಪಳು ರಾಜಸದನದಿ ಲಕುಮಿ ತೆರದಂತೆ//೯//

ದೇಶಪತಿಯವೃದ್ಧನಾತಗೆ
ಕೂಸುಯಿಲ್ಲದೆ ಬಹಳ ಯೋಚಿಸೆ
ದೇಶತಿರುಗುತ ಬಂದನಾ ಬ್ರಹ್ಮಣ್ಯಮುನಿರಾಯ
ವಾಸಗೈಸಲು ತನ್ನ ಮನಿಯಲಿ
ಮಾಸನಾಲಕರಲ್ಲಿ ಯತಿವರೇಶ
ಸೇವೆಯ ಮಾಡಿ ತಾನಾ ಮುನಿಯ ಬೆಸಗೊಂಡ//೧೦//

ಎನಗೆ ಸುತ ಸಂತಾನವಿಲ್ಲವೋ
ಜನುಮಸಾರ್ಥಕವಾಗೋ ಬಗೆಯು
ಎನಗೆ ತೋರದು ನೀವೇ ಯೋಚಿಸಿ ಸುತನ ನೀಡುವುದು
ಎನಲು ನರವರ ವಚನಲಾಲಿಸಿ
ಮುನಿವರೋತ್ತಮ ನುಡಿದ ನರವರ
ನಿನಗೆ ಸಂತತಿಯುಂಟು ಕೃಷ್ಣನ ಭಜಿಸು ಸತಿಸಹಿತ//೧೧//

ಎಂದು ಮುನಿವರ ಚಂದದಿಂದಲಿ
ಒಂದು ಫಲವಭಿಮಂತ್ರಿಸಿತ್ತೂ
ಮುಂದಿನೀದಿನಕೊಬ್ಬ ತನಯನು ನಿನಗೆ ಪುಟ್ಟುವನು
ನೀವಾಸುತನ ನಮಗೇ
ಪೊಂದಿಸುವದೂ ನಿಮಗೆ ಮತ್ತೂ
ಕಂದನಾಗುವ ನಿಜವು ವಚನವು ಕೇಳೋ ನರಪತಿಯೆ//೧೨//

ಯಾದವೇಶನ ಭಜನೆಗರ್ಹನು
ಆದ ಬಾಲಕ ಗರ್ಭದಿರುವನು
ಆದರಿಸಿ ಪರಿಪಾಲಿಸುವುದು ನಮ್ಮದಾಗಮನ
ವಾದನಂತರ ನಿನ್ನ ಸದನದಿ
ಹಾದಿ ನೋಡುತ ನಾಲ್ಕು ತಿಂಗಳು
ಸಾಧಿಸೂವೆವುಯೆಂದು ಯತಿವರ ನುಡಿದು ತಾ ನಡೆದ//೧೩//

ಪೋಗಲಾ ಯತಿನಾಥ ಮುಂದಕೆ
ಆಗಲಾತನ ಸತಿಯು ಗರ್ಭವ
ಜಾಗು ಮಾಡದೆ ಧರಿಸಿ ಮೆರೆದಳು ಆಯತಾಂಬಕೆಯು
ನಾಗರೀಯರ ಸತಿಯರೆಲ್ಲರು
ಆಗ ಸಂತಸದಿಂದ ನೆರೆದರು
ಬ್ಯಾಗ ರಾಜನ ರಾಣಿ ಗರ್ಭಿಣಿಯಾದುದಾಶ್ಚರ್ಯ//೧೪//

ಸಣ್ಣ ನಡು ತಾ ಬೆಳೆಯೆ ತ್ರಿವಳಿಯು
ಕಣ್ಣುಗಳಿಗೆ ಕಾಣದಾಗಲು
ನುಣ್ಣನೆ ಮೊಗವರಿಯೇ ಚೂಚುಕವೆರೆಡು ಕಪ್ಪಾಗೆ
ತಿಣ್ಣಪಚ್ಚಳ ಬೆಳೆಯೆ ಗಮನವು
ಸಣ್ಣದಾಗಲು ಬಿಳಿಪು ಒಡೆಯೇ
ಕಣ್ಣು ಪೂರ್ಬಿನ ಮಿಂಚು ಬೆಳೆಯಲು ಗರ್ಭಲಾಂಛನವು//೧೫//

ಬಿಳಿಯ ತಾವರೆಯೊಳಗೆ ಇರುತಿಹ
ಅಲಿಯ ಸಮುದಯವೇನೋ ಆಗಸದೊಳಗೆ
ದಿನದಿನ ಬೆಳೆಯೋ ಚಂದ್ರನ ಕಳೆಯೋ ಕನಕಾದ್ರಿಯೊಳಗೆ
ರಾಜಿಪ ಅಂಬುಧರತೆರ
ಪೊಳೆವ ಕಾಂತಿಯ ಚಲ್ಟಿನಾನನದೊಳಗೆ
ಮಿರುಗುವ ಗುರುಳುಗಳೊ ಸಲೆನಡುವಿನೊಳ್ತಾನೆ//೧೬//

ಪೊಳೆವ ಗರ್ಭವಿದೇನೋ ಕುಚಯುಗ
ತೊಳಪು ಚೂಚುಕ ಕಪ್ಪಿನಿಂದಲಿ
ಪೊಳೆಯುತಿರ್ದಳು ಗರ್ಭಧಾರಣೆ ಮಾಡಿ ವನಜಾಕ್ಷಿ
ತಳಿರುಪೋಲುವ ಅಡಿಗಳಿಂದಲಿ
ಚಲುವಕದಳೀ ಊರುಯುಗದೀ
ಬಳುಕಿ ಬಾಗುತ ನಡೆಯೋ ಲಲನೆಯ ನಡಿಗೆ ಶೋಭಿಪದು//೧೭//

ಚಂದ್ರಮುಖಿಯಳ ಜಠರವೆಂಬಾ
ಚಂದ್ರಕಾಂತದ ಮಣಿಯ ಮಧ್ಯದಿ
ಚಂದ್ರನಂದದಿ ಸಕಲಲೋಕಕೆ ನಂದಕರವಾದ
ಚಂದ್ರಬಿಂಬವ ಜೈಪ ಶಿಶು ತಾ
ಇಂದ್ರನಂದದಿ ಗರ್ಭದಿರಲೂ
ಸಾಂದ್ರತನುರುಚಿಯಿಂದಲೊಪ್ಪುತ ಮೆರೆದಳಾ ಜನನೀ//೧೮//

ಕಾಂಚನಾಂಗಿಯ ಗರ್ಭಧಾರಣ
ಲಾಂಛನೀಪರಿ ನೋಡಿ ನೃಪ ರೋಮಾಂಚನಾಂಚಿತ
ಹರುಷದಿಂದಲಿ ಭೂಮಿ ದಿವಿಜರಿಗೆ
ವಾಂಛಿತಾರ್ಥವನಿತ್ತು ಮನದಲಿ
ಚಂಚಲಿಲ್ಲದೆ ನಾರಿಮಣಿಗೇ
ಪಂಚಮಾಸಕೆ ಕುಸುಮಮುಡಿಸೀ ಮಾಡ್ದ ಸೀಮಂತ//೧೯//

ನಾರಿಗಾಗಲು ಬಯಕೆ ಪರಿಪರಿ
ಆರುತಿಂಗಳು ಪೋಗುತಿರಲೂ
ದೂರ ದೇಶದಲಿಂದಾಗಲೇ ಬಂದ ಮುನಿರಾಯ
ವಾರಿಜಾಕ್ಷಿಯು ಯತಿಯ ಪಾದಕೆ
ಸಾರಿ ಮನವ ಮಾಡೆ ಗುರುವರ
ಧೀರತನಯನ ಬ್ಯಾಗ ನೀ ಪಡಿಯೆಂದು ಹರಸಿದನು//೨೦//

ಬಾಲೆ ಬಸಿರೊಳಗಿಪ್ಪ ಶಿಶು
ಗೋಪಾಲಪದಯುಗಭಕ್ತನವನಿಗೆ
ಪಾಲಕಾಗಿಹ ಹರಿಯ ಮಜ್ಜನಮಾಡಿ ನಿತ್ಯದಲಿ
ಪಾಲಿನಿಂದಲಿ ಗರ್ಭದಲೆ ತಾ
ಬಾಲಗೀಪರಿ ಜ್ಞಾನವಿತ್ತೂ
ಪಾಲಿಸೀ ಬ್ರಹ್ಮಣ್ಯತೀರ್ಥರು ನಿಂತರಾಗಲ್ಲೇ//೨೧//

ಬಳಿಕ ಬರಲಾಪ್ರಸವಕಾಲದಿ
ಪೊಳೆವ ಮಿಸುಣಿಯ ಪಾತ್ರೆಯೊಳಗೆ
ತೊಳಪು ಸುಂದರ ಬೊಂಬೆಯಂದದಿ ಶಿಶುವು ಕಣ್ಗೊಪ್ಪೆ
ಕಳೆಗಳಿಂದಲಿ ನಭದಿ ದಿನದಿನ
ಬೆಳೆವ ಚಂದ್ರನೊ ಎನಿಪ ಬಾಲಕ
ಬೆಳಗುತೋರಿದ ಸೂತಿಕಾಗೃಹದೊಳಗೆ ತಾ ಜನಿಸೀ//೨೨//

ಅಂಬುಜಾಪ್ತನು ತಾನೇ ಇಳದೀ
ಕುಂಭಿಣೀಯಲಿ ಬಂದನೇನೋ
ತುಂಬಿಸೂಸುವ ತೇಜದಿಂದಲಿ ಬಾಲ ಶೋಭಿಸಿದ
ಸಂಭ್ರಮಾಯಿತು ಮುನಿಗೆ ಹರಿಪ್ರತಿ-
ಬಿಂಬನಾಗಿಹ ಬಾಲರೂಪವ
ನಂಬಕದ್ವಯದಿಂದ ನೋಡೀ ಹರುಷಪುಲಕಾಂಕ//೨೩//

ಆಗ ಯತಿವರ ಬಂದು ಶಿಶುವಿನ
ಬೇಗ ತಾ ಸ್ವೀಕರಿಸಿ ನಡೆದನು
ಸಾಗರೋದ್ಭವ ಸುಧೆಯ ಕಲಶವ ಗರುಡನೊಯ್ದಂತೆ
ಜಾಗುಮಾಡದೆ ಮುನಿಪ ತಾನನು
ರಾಗದಿಂದಲಿ ಶಿಶುವಿನೀ ಪರಿ
ತೂಗಿ ಲಾಲಿಸಿ ಪಾಲುಬೆಣ್ಣೆಯ ತಾನೇ ನೀಡುತಲಿ//೨೪//

ಇಂದು ತೆರದಲಿ ಬಾಲ ಕಳೆಗಳ
ಹೊಂದಿ ದಿನದಿನ ವೃದ್ಧಿಯೈಯ್ದಿದ
ಕಂದರಂದದಿ ಹಠಗಳಿಲ್ಲವೋ ಮೂರ್ಖತನವಿಲ್ಲ
ಮಂದಮತಿ ತಾನಲ್ಲ ಬುಧವರ
ವೃಂದವಂದಿತಪಾದಪಂಕಜದಿಂದ
ಶೋಭಿತನಾಗಿ ಮಠದಲಿ ಪೊಂದಿಯಿರುತಿಪ್ಪ//೨೫//

ಮೊಳೆದ ಪಲ್ಗಳು ಬಾಯೊಳೊಪ್ಪಿರೆ
ತೊಳಪು ನಗೆಮುಖ ಸೊಬಗು ಸೂಸುವ
ಹೊಳೆವ ಕಂಗಳು ನುಣುಪುಪೆಣೆ ಮುಂಗುರುಳು ತಾ ಹೊಳೆಯೆ
ಸುಳಿಯನಾಭಿಯು ಉದರವಳಿತ್ರಯ
ಎಳೆಯ ಶಂಕರಿ ತೋಳು ಯುಗಳವು
ಜೋಲಿದಂಬೇಗಾಲು ನಡಿಗೆಯ ಸೊಗಸು ಶೋಭಿಪದೂ//೨೬//

ದೂಳಿಸೋಕಲು ಸುಂದರಾಂಗವು
ನೀಲಮೇಘದ ತೆರನೆ ತೋರ್ಪದು
ನೀಳಮಾರ್ಗದಿ ನಲಿದು ನಡೆವನು ಬೀಳುತೇಳುತಲಿ
ತಿಳಿಯದತಿಸಂತೋಷವಾರಿಧಿಯೊಳಗೆ
ಸಂತತ ಮುನಿಪ ಮುಳುಗಿದ
ಪೇಳಲೆನವಶವಲ್ಲ ಬಾಲನ ಲೀಲೆ ಸುಖಮಾಲೆ//೨೭//

ಬಾಲ ಲೀಲೆಯ ನೋಡಿ ಹಿಗ್ಗುವ
ಲಾಲನೆಯ ತಾ ಮಾಡಿ ಪಾಡುವ
ಲೋಲಕುಂತಲ ಮುಖವ ಚುಂಬಿಪ ಗೋಪಿಯಂದದಲಿ
ಪಾಲಸಾಗರಶಯನ ಪದಯುಗ
ಲೋಲ ಬಾಲಕ ಎನಗೆ ದೊರೆತನು
ಪೇಳಲೇನಿಹದೆನ್ನ ಪುಣ್ಯದ ಫಲವೇ ಫಲಿಸಿಹುದೋ//೨೮//

ಆಡುತಿಹನೆಳೆ ಮಕ್ಕಳೊಡನೆ
ಮಾಡುತಿಹ ತಾನೊಮ್ಮೆ ಲೀಲೆಯ
ನೋಡುತಿಹ ಆಶ್ಚರ್ಯಗೊಳುತಲಿ ಬಾಲರಾಟವನೂ
ಕೂಡೆ ಮನಿಮನಿ ತಿರುಗುತಿಪ್ಪನು
ರೂಢಿಜನರನು ಮೋಹಗೊಳಿಸುವ
ಗಾಡಿಕಾರನು ಕೃಷ್ಣತೆರದಲಿ ಲೀಲೆಮಾಡಿದನು//೨೯//

ಪಾಡುವಂ ಜನರನ್ನು ಪರಿಪರಿ
ನೋಡುವಂ ಥರಥರದಿ ಹಾಸ್ಯವ
ಮಾಡುವಂ ತಾನರ್ಥಿಸುತಲವರೊಡನೆ ಇರುತಿಪ್ಪ
ಕ್ರೀಡಿಸುತಲಾಪುರದ ಬಾಲರ
ಕೂಡಿ ಈ ಪರಿ ಬೀದಿಯೊಳು ತಾ
ಮೂಢಬಾಲನ ತೆರದಿ ತೋರಿದ ಗೂಢಬಾಲಕನೂ//೩೦//

ಪಿಂತೆ ನಾರದಮುನಿಯ ವಚನವ
ಚಿಂತಸೀಪರಿ ತನ್ನ ಮನದಲಿ
ಕಂತುಜನಕ ಸರ್ವಕಾಳದಿ ನೋಡಿ ನಲಿತಿಪ್ಪ
ಅಂತರಂಗದಿ ಶಿರಿಯ ರಮಣನ
ಇಂತು ಭಜನೆಯಗೈದು ಬಾಲಕ
ಅಂತು ತಿಳಿಸದೆ ತಾನೇ ಪ್ರಾಕೃತರಂತೆಯಿರುತಿಪ್ಪ//೩೧//

ಪೋತಗಾಯಿತು ಪಂಚವತ್ಸರ
ನೀತವೇಸರಿ ಧೂಳಿಯಕ್ಷರ
ಪ್ರೀತಿಯಿಂದಲಿ ಬರೆದು ತೋರಲು ಬಾಲ ತಾ ನುಡಿದ
ತಾತ ಎನ್ನಯ ಮಾತು ಕೇಳೆಲೋ
ಧಾತನಾಂಡಕೆ ಮುಖ್ಯ ಗುರುಜಗನ್ನಾಥವಿಠಲನು
ತಾನೇ ಪೂರ್ಣನು ಸರ್ವರುತ್ತಮನು//೩೨//

//ಇತಿ ಶ್ರೀ ರಾಘವೇಂದ್ರ ವಿಜಯ ತೃತೀಯ ಸಂಧಿ ಸಮಾಪ್ತಂ//