Monday, January 21, 2013

ಶ್ರೀ ಹರಿಕಥಾಮೃತಸಾರ - 19

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಶ್ರೀ ಗುಣತಾರತಮ್ಯ ಸಂಧಿ//


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಶ್ರೀಧರಾ ದುರ್ಗಾ ಮನೋರಮ ವೇಧಮುಖ ಸುಮನಸ ಗಣ ಸಮಾರಾಧಿತ ಪದಾಂಬುಜ

ಜಗದಂತರ್ ಬಹಿರ್ವ್ಯಾಪ್ತ

ಗೋಧರ ಫಣಿಪ ವರಾತಪತ್ರ ನಿಷೇಧ ಶೇಷ ವಿಚಿತ್ರ ಕರ್ಮ

ಸುಬೋಧ ಸುಖಮಯ ಗಾತ್ರ ಪರಮ ಪವಿತ್ರ ಸುಚರಿತ್ರ//1//


ನಿತ್ಯ ನಿರ್ಮಲ ನಿಗಮ ವೇದಯ ಉತ್ಪತ್ತಿ ಸ್ಥಿತಿ ಲಯ ದೂರವರ್ಜಿತ

ಸ್ತುತ್ಯ ಪೂಜ್ಯ ಪ್ರಸಿದ್ಧ ಮುಕ್ತಾಮುಕ್ತ ಗಣ ಸೇವ್ಯ

ಸತ್ಯಕಾಮ ಸ=ಶರಣ್ಯ ಶಾಶ್ವತ ಭೃತ್ಯವತ್ಸಲ ಭಯ ನಿವಾರಣ

ಅತ್ಯಧಿಕ ಸಂಪ್ರಿಯತಮ ಜಗನ್ನಾಥ ಮಾಂ ಪಾಹಿ//2//


ಪರಮ ಪುರುಷನ ರೂಪ ಗುಣವ ಅನುಸರಿಸಿ ಕಾಂಬಳು ಪ್ರವಹದಂದದಿ

ನಿರುಪಮಳು ನಿರ್ದುಷ್ಟ ಸುಖ ಸಂಪೂರ್ಣಳು ಎನಿಸುವಳು

ಹರಿಗೆ ಧಾಮತ್ರಯಳು ಎನಿಸಿ ಆಭರಣ ವಸನ ಆಯುಧಗಳು ಆಗಿದ್ದು

ಅರಿಗಳನು ಸಂಹರಿಸುವಳು ಅಕ್ಷರಳು ಎನಿಸಿಕೊಂಡು//3//


ಈತಗಿಂತ ಅನಂತ ಗುಣದಲಿ ಶ್ರೀ ತರುಣಿ ತಾ ಕಡಿಮೆಯೆನಿಪಳು

ನಿತ್ಯಮುಕ್ತಳು ನಿರ್ವಿಕಾರಳು ತ್ರಿಗುಣ ವರ್ಜಿತಳು

ಧೌತ ಪಾಪ ವಿರಿಂಚಿ ಪವನರ ಮಾತೆಯೆನಿಪ ಮಹಾಲಕುಮಿ

ವಿಖ್ಯಾತಳು ಆಗಿಹಳು ಎಲ್ಲ ಕಾಲದಿ ಶ್ರುತಿ ಪುರಾಣದೊಳು//4//


ಕಮಲ ಸಂಭವ ಪವನರೀರ್ವರು ಸಮರು ಸಮವರ್ತಿಗಳು

ರುದ್ರಾದಿ ಅಮರಗಣ ಸೇವಿತರು ಅಪರಬ್ರಹ್ಮ ನಾಮಕರು

ಯಮಳರಿಗೆ ಮಹಾಲಕ್ಷ್ಮಿ ತಾನುತ್ತಮಳು ಕೋಟಿ ಸಜಾತಿ ಗುಣದಿಂದ

ಅಮಿತ ಸುವಿಜಾತಿ ಅಧಮರು ಎನಿಪರು ಬ್ರಹ್ಮ ವಾಯುಗಳು//5//


ಪತಿಗಳಿಂದ ಸರಸ್ವತೀ ಭಾರತಿಗಳು ಅಧಮರು ನೂರು ಗುಣ ಪರಿಮಿತ ವಿಜಾತಿ ಅವರರು

ಬಲ ಜ್ಞಾನಾದಿ ಗುಣದಿಂದ ಅತಿಶಯರು ವಾಗ್ದೇವಿ ಶ್ರೀ ಭಾರತಿಗೆ

ಪದಪ್ರಯುಕ್ತ ವಿಧಿ ಮಾರುತರವೋಳ್ ಚಿಂತಿಪುದು

ಸದ್ಭಕ್ತಿಯಲಿ ಕೋವಿದರು//6//


ಖಗಪ ಫಣಿಪತಿ ಮ್ರುಡರು ಸಮ ವಾಣಿಗೆ ಶತಗುಣ ಅವರರು ಮೂವರು

ಮಿಗಿಲೆನಿಸುವನು ಶೇಷ ಪದದಿಂದಲಿ ತ್ರಿಯಂಬಕಗೆ

ನಗಧರನ ಷಣ್ಮ ಹಿಷಿಯರು ಪನ್ನಗ ವಿಭೂಷಣಗೈದು

ಮೇನಕಿ ಮಗಳು ವಾರುಣಿ ಸೌಪರ್ಣಿಗಳಿಗೆ ಅಧಿಕವು ಎರಡು ಗುಣ//7//


ಗರುಡ ಶೇಷ ಮಹೇಷರಿಗೆ ಸೌಪರಣಿ ವಾರುಣಿ ಪಾರ್ವತಿ ಮೂರರು ದಶಾಧಮ

ವಾರುಣಿಗೆ ಕಡಿಮೆ ಎನಿಸುವಳು ಗೌರೀ

ಹರನ ಮಡದಿಗೆ ಹತ್ತು ಗುಣದಲಿ ಸುರಪ ಕಾಮರು ಕಡಿಮೆ

ಇಂದ್ರಗೆ ಕೊರತೆಯೆನಿಸುವ ಮನ್ಮಥನು ಪದದಿಂದಲಿ ಆವಾಗ//8//


ಈರೈದು ಗುಣ ಕಡಿಮೆ ಅಹಂಕಾರಿಕ ಪ್ರಾಣನು ಮನೋಜ ನಗಾರಿಗಳಿಗೆ

ಅನಿರುದ್ಧ ರತಿ ಮನು ದಕ್ಷ ಗುರು ಶಚಿಯು ಆರು ಜನ ಸಮ

ಪ್ರಾಣನಿಂದಲಿ ಹೌರಗ ಎನಿಪರು ಹತ್ತು ಗುಣದಲಿ

ಮಾರಜಾದ್ಯರಿಗೆ ಐದು ಗುಣದಿಂದ ಅಧಮ ಪ್ರವಹಾಖ್ಯ//9//


ಗುಣದ್ವಯದಿಂ ಕಡಿಮೆ ಪ್ರವಹಗೆ ಿನ ಶಶಾಂಕಯಮ ಸ್ವಯಂಭುವ ಮನು ಮಡದಿ ಶತರೂಪ

ನಾಲ್ವರು ಪಾದ ಪಾದಾರ್ಧ ವನಧಿ ನೀಚ

ಪಾದಾರ್ಧ ನಾರದ ಮುನಿಗೆ ಭೃಗು ಅಗ್ನಿ ಪ್ರಸೂತಿಗಳು

ಎನಿಸುವರು ಪಾದಾರ್ಧ ಗುಣದಿಂದ ಅಧಮರಹುದೆಂದು//10//


ಹುತವಹಗೆ ದ್ವಿಗುಣ ಅಧಮರು ವಿಧಿಸುತ ಮರೀಚಾದಿಗಳು

ವೈವಸ್ವತನು ವಿಶ್ವಾಮಿತ್ರರಿಗೆ ಕಿಂಚಿದ್ ಗುಣಾಧಮನು

ವ್ರತಿವರ ಜಗನ್ಮಿತ್ರ ವರ ನಿರ್ಋತಿ ಪ್ರಾವಹಿ ತಾರರಿಗೆ

ಕಿಂಚಿತ್ ಗುಣ ಅಧಮ ಧನಪ ವಿಶ್ವಕ್ಸೇನರು ಎನಿಸುವರು//11//


ಧನಪ ವಿಶ್ವಕ್ಸೇನ ಗೌರೀ ತನಯರಿಗೆ ಉಕ್ತ ಇತರರು ಸಮರೆನಿಸುವರು

ಎಂಭತ್ತೈದು ಜನ ಶೇಷ ಶತರೆಂದು

ದಿನಪರಾರು ಏಳಧಿಕ ನಾಲ್ವತ್ತನಿಲರು ಏಳು ವಸು

ರುದ್ರರೀರೈದು ಅನಿತು ವಿಶ್ವೇ ದೇವ ಋಭು ಅಶ್ವಿನೀ ಪಿತೃ ಧರಣೀ//12//


ಇವರಿಗಿಂತಲಿ ಕೊರತೆಯೆನಿಪರು ಚ್ಯವನ ಸನಕಾದಿಗಳು

ಪಾವಕ ಕವಿ ಉಚಿಥ್ಥ್ಯ ಜಯಂತ ಕಶ್ಯಪ ಮನುಗಳು ಎಕದಶ

ಧ್ರುವ ನಹುಷ ಶಶಿಬಿಂದು ಹೈಹಯ ದೌಷ್ಯಂತಿ ವಿರೋಚನನ ನಿಜ ಕುವರ

ಬಲಿ ಮೊದಲಾದ ಸಪ್ತ ಇಂದ್ರರು ಕಕುತ್ಸ್ಥ ಗಯ//13//


ಪೃಥು ಭರತ ಮಾಂಧಾತ ಪ್ರಿಯವ್ರತ ಮರುತ ಪ್ರಹ್ಲಾದ ಸುಪರೀಕ್ಷಿತ

ಹರಿಶ್ಚಂದ್ರ ಅಂಬರೀಷ ಉತ್ತನಪಾದ ಮುಖ

ಶತ ಸುಪುಣ್ಯ ಶ್ಲೋಕರು ಗದಾ ಭ್ರುತಗೆ ಅಧಿಷ್ಠಾನರು

ಸುಪ್ರಿಯವ್ರತಗೆ ದ್ವಿಗುಣ ಅಧಮರು ಕರ್ಮಜರು ಎಂದು ಕರೆಸುವರು//14//


ನಳಿನಿ ಸಂಜ್ಞಾ ರೋಹಿಣೀ ಶ್ಯಾಮಲ ವಿರಾಟ್ ಪರ್ಜನ್ಯರು ಅಧಮರು

ಯಲರು ಮಿತ್ರನ ಮಡದಿ ದ್ವಿಗುಣ ಅಧಮಳು ಬಾಂಬೊಳಗೆ

ಜಲ ಮಯ ಬುಧ ಅಧಮನು ದ್ವಿಗುಣದಿ ಕೆಳಗೆನಿಸುವಳು ಉಷಾ

ಶನೈಶ್ಚರಳಿಗೆ ಈರು ಗುಣಾಧಮರು ಉಷಾ ದೇವಿ ದ್ಯಸಿಯಿಂದಾ//15//


ಎರಡು ಗುಣ ಕರ್ಮಾಧಿಪತಿ ಪುಷ್ಕರ ಕಡಿಮೆ

ಆಜಾನು ದಿವಿಜರು ಚಿರ ಪಿತೃಗಳಿಂದ ಉತ್ತಮರು ಕಿಂಕರರು ಪುಷ್ಕರಗೆ

ಸುರಪನಾಲಯ ಗಾಯಕ ಉತ್ತಮ ಎರಡೈದು ಗುಣದಿಂದಾಧಮ

ತುಂಬುರಗೆ ಸಮ ನೂರುಕೋಟಿ ಋಷಿಗಳು ನೂರುಜನರುಳಿದು//16//


ಅವರವರ ಪತ್ನಿಯರು ಅಪ್ಸರ ಯುವತಿಯರು ಸಮ

ಉತ್ತಮರನುಳಿದು ಅವರರೆನಿಪರು ಮನುಜ ಗಂಧರ್ವರು ದ್ವಿಷಡ್ಗುಣದಿ

ಕುವಲಯಾಧಿಪರು ಈರು ಐದು ಗುಣ ಅವನಿಪ ಸ್ತ್ರೀಯರು

ದಶೋತ್ತರ ನವತಿ ಗುಣದಿಂದ ಅಧಮರು ಎನಿಪರು ಮಾನುಷೋತ್ತಮರು//17//


ಸತ್ವಸತ್ವರು ಸತ್ವರಾಜಸ ಸತ್ವತಾಮಸ ಮೂವರು

ರಜಸ್ಸತ್ವ ಅಧಿಕಾರಿಗಳು ಭಗವದ್ಭಕ್ತರು ಎನಿಸುವರು

ನಿತ್ಯ ಬದ್ಧರು ರಜೋರಜರು ಉತ್ಪತ್ತಿ ಭೂಸ್ವರ್ಗದೊಳು

ನರಕದಿ ಪೃಥ್ವಿಯೊಳು ಸಂಚರಿಸುತಿಪ್ಪರು ರಜಸ್ತಾಮಸರು//18//


ತಮಸ್ಸಾತ್ವಿಕರು ಎನಿಸಿಕೊಂಬರು ಅಮಿತನ ಆಖ್ಯಾತ ಅಸುರರ ಗಣ

ತಮೋ ರಾಜಸರು ಎನಿಸಿಕೊಂಬರು ದೈತ್ಯ ಸಮುದಾಯ

ತಮಸ್ತಾಮಸ ಕಲಿ ಪುರಂಧ್ರಿಯು ಅಮಿತ ದುರ್ಗುಣ ಪೂರ್ಣ

ಸರ್ವಾಧಮರೊಳು ಅಧಮಾಧಮ ದುರಾತ್ಮನು ಕಲಿಯೆನಿಸಿಕೊಂಬ//19//


ಇವನ ಪೋಲುವ ಪಾಪಿ ಜೀವರು ಭುವನ ಮೂವರೊಳಿಲ್ಲ ನೋಡಲು

ನವ ವಿಧ ದ್ವೇಷಗಳಿಗೆ ಆಕಾರನು ಎನಿಸಿಕೊಳುತಿಪ್ಪ

ಬವರದೊಳು ಬಂಗಾರದೊಳು ನಟ ಯುವತಿ ದ್ಯೂತಾ ಪೇಯ ಮೃಷದೊಳು

ಕವಿಸಿ ಮೋಹದಿ ಕೆಡಿಸುವನುಯೆಂದರಿದು ತ್ಯಜಿಸುವದು//20//


ತ್ರಿವಿಧ ಜೀವ ಪ್ರತತಿಗಳ ಸಗ್ಗ ಆವೊಳೆಯಾಣ್ಮ ಆಲಯನು ನಿರ್ಮಿಸಿ

ಯುವತಿಯರೊಡಗೂಡಿ ಕ್ರೀಡಿಸುವನು ಕೃಪಾಸಾಂದ್ರ

ದಿವಿಜ ದಾನವ ತಾರತಮ್ಯದ ವಿವರ ತಿಳಿವ ಮಹಾತ್ಮರಿಗೆ

ಬಾನ್ನವಿರ ಸಖ ತಾನೊಲಿದು ಉದ್ಧರಿಸುವನು ದಯದಿಂದ//21//


ದೇವ ದೈತ್ಯರ ತಾರತಮ್ಯವು ಪಾವಮಾನಿ ಮತಾನುಗರಿಗೆ ಇದು ಕೇವಲ ಅವಶ್ಯಕವು

ತಿಳಿವುದು ಸರ್ವ ಕಾಲದಲಿ

ದಾವಶಿಖಿ ಪಾಪಾಟವಿಗೆ ನವ ನಾವೆಯೆನಿಪುದು ಭವ ಸಮುದ್ರಕೆ

ಪಾವಟಿಗೆ ವೈಕುಂಠ ಲೋಕಕೆ ಇದೆಂದು ಕರೆಸುವುದು//22//


ತಾರತಮ್ಯ ಜ್ಞಾನ ಮುಕ್ತಿ ದ್ವಾರವು ಎನಿಪುದು ಭಕ್ತ ಜನರಿಗೆ ತೋರಿ ಪೇಳಿ

ಸುಖಾಬ್ಧಿಯೊಳು ಲೋಲ್ಯಾಡುವುದು ಬುಧರು

ಕ್ರೂರ ಮಾನವರಿಗಿದು ಕರ್ಣ ಕಟೋರವು ಎನಿಪುದು

ನಿತ್ಯದಲಿ ಅಧಿಕಾರಿಗಳಿಗಿದನ ಅರುಪುವುದು ದುಸ್ತರ್ಕಿಗಳ ಬಿಟ್ಟು//23//


ಹರಿಸಿರಿವಿರಿಂಚಿ ಈರಭಾರತಿ ಗರುಡ ಫಣಿ ಪತಿ ಷಣ್ಮಹಿಷಿಯರು

ಗಿರಿಜನಾಕ ಈಶ ಸ್ಮರ ಪ್ರಾಣ ಅನಿರುದ್ಧ ಶಚೀದೇವೀ

ಗುರು ರತೀ ಮನು ದಕ್ಷ ಪ್ರವಹಾ ಮರುತ ಮಾನವಿ ಯಮ ಶಶಿ ದಿವಾಕರ

ವರುಣ ನಾರದ ಸುರಾಸ್ಯ ಪ್ರಸೂತಿ ಭೃಗು ಮುನಿಪ//24//


ವ್ರತತಿಜಾಸನ ಪುತ್ರರೆನಿಸುವ ವ್ರತಿವರ ಮರೀಚಿ ಅತ್ರಿ

ವೈವಸ್ವತನು ತಾರಾ ಮಿತ್ರ ನಿರ್ಋತಿ ಪ್ರವಹ ಮಾರುತನ ಸತಿ

ಧನ ಈಶ ಅಶ್ವಿನಿಗಳ ಈರ್ಗಣಪತಿಯು ವಿಶ್ವಕ್ಸೇನ ಶೇಷನು ಶತರು

ಮನುಗಳು ಉಚಿಥ್ಯ ಛಾವಣ ಮುನಿಗಳಿಗೆ ನಮಿಪೆ//25//


ಶತ ಸುಪುಣ್ಯ ಶ್ಲೋಕರು ಎನಿಸುವ ಕ್ಷಿತಿಪರಿಗೆ ನಮಿಸುವೆನು

ಬಾಗೀರಥಿ ವಿರಾಟ್ ಪರ್ಜನ್ಯ ರೋಹಿಣಿ ಶ್ಯಾಮಲಾ ಸಂಜ್ಞಾಹುತ ವಹನ ಮಹಿಳಾ

ಬುಧ ಉಷಾ ಕ್ಷಿತಿ ಶನೈಶ್ಚರ ಪುಷ್ಕರರಿಗೆ

ಆನತಿಸಿ ಬಿನ್ನಯಿಸುವೆನು ಭಕ್ತಿ ಜ್ಞಾನ ಕೊಡಲೆಂದು//26//


ನೂರಧಿಕವು ಆಗಿಪ್ಪ ಮತ್ತೆ ಹದಿನಾರು ಸಾವಿರ ನಂದ ಗೋಪ ಕುಮಾರನ

ಅರ್ಧಾಂಗಿಯರು ಅಗಸ್ತ್ಯ ಆದೇ ಮುನೀಶ್ವರರು

ಊರ್ವಶೀ ಮೊದಲಾದ ಅಪ್ಸರ ನಾರಿಯರು ಶತ ತುಂಬುರರು

ಕಂಸಾರಿ ಗುಣಗಳ ಕೀರ್ತನೆಯ ಮಾಡಿಸಲಿ ಎನ್ನಿಂದ//27//


ಪಾವನರು ಶುಚಿ ಶುದ್ಧ ನಾಮಕ ದೇವತೆಗಳು ಆಜಾನ ಚಿರ ಪಿತೃ

ದೇವ ನರ ಗಂಧರ್ವರು ಅವನಿಪ ಮಾನುಷೋತ್ತಮರು

ಈ ವಸುಮತಿಯೊಳು ಉಳ್ಳ ವೈಷ್ಣವರ ಅವಳಿಯೊಳು ಇಹನೆಂದು

ನಿತ್ಯಡಿ ಸೇವಿಪುದು ಸಂತೋಷದಿಂ ಸರ್ವ ಪ್ರಕಾರದಲಿ//28//


ಮಾನುಷೋತ್ತಮರನ ವಿಡಿದು ಚತುರಾನನ ಅಂತ ಶತ ಉತ್ತಮತ್ವ

ಕ್ರಮೇಣ ಚಿಂತಿಪ ಭಕ್ತರಿಗೆ ಚತುರ ವಿಧ ಪುರುಷಾರ್ಥ

ಶ್ರೀನಿಧಿ ಜಗನ್ನಾಥ ವಿಠಲ ತಾನೇ ಒಲಿದು ಈವನು

ನಿರಂತರ ಸಾನುರಾಗದಿ ಪಠಿಸುವುದು ಸಂತರಿದ ಮರೆಯದಲೆ//29//


//ಇತಿ ಶ್ರೀ ಗುಣತಾರತಮ್ಯ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು

ಶ್ರೀ ಹರಿಕಥಾಮೃತಸಾರ - 18

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಶ್ರೀ ಬಿಂಬಾಪರೋಕ್ಷ ಸಂಧಿ//


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಮುಕ್ತ ಬಿಂಬನು ತುರಿಯ ಜೀವನ್ಮುಕ್ತ ಬಿಂಬನು ವಿಶ್ವ

ಶ್ರುತಿ ಸಂಸಕ್ತ ಬಿಂಬನು ತೈಜಸನು ಅಸೃಜ್ಯರಿಗೆ ಪ್ರಾಜ್ಞ

ಶಕ್ತನಾದರು ಸರಿಯೆ ಸರ್ವ ಉದ್ರಕ್ತ ಮಹಿಮನು

ದುಃಖ ಸುಖಗಳ ವಕ್ತೃ ಮಾಡುತಲಿಪ್ಪ ಕಲ್ಪಾಂತದಲಿ ಬಪ್ಪರಿಗೆ//1//


ಅಣ್ಣ ನಾಮಕ ಪ್ರಕೃತಿಯೊಳಗೆ ಅಚ್ಚಿನ್ನನು ಆಗಿಹ ಪ್ರಾಜ್ಞನಾಮದಿ

ಸೊನ್ನ ಒಡಲ ಮೊದಲಾದ ಅವರೊಳು ಅನ್ನಾದ ತೈಜಸನು

ಅನ್ನದ ಅಂಬುದ ನಾಭ ವಿಶ್ವನು ಭಿನ್ನ ನಾಮ ಕ್ರಿಯೆಗಳಿಂದಲಿ

ತನ್ನೊಳಗೆ ತಾ ರಮಿಪ ಪೂರ್ಣಾನಂದ ಜ್ಞಾನಮಯ//2//


ಬೂದಿಯೊಳಗೆ ಅಡಗಿಪ್ಪ ಅನಳನ ಉಪಾದಿ ಚೇತನ ಪ್ರಕೃತಿಯೊಳು

ಅನ್ನಾದ ಅನ್ನಾಹ್ವಯದಿ ಕರೆಸುವ ಬ್ರಹ್ಮ ಶಿವ ರೂಪಿ

ಓದನ ಪ್ರದ ವಿಷ್ಣು ಪರಮ ಆಹ್ಲಾದವ ಈವುತ

ತೃಪ್ತಿ ಬಡಿಸುವ ಅಗಾಧ ಮಹಿಮನ ಚಿತ್ರ ಕರ್ಮವನು ಆವ ಬಣ್ಣಿಸುವ//3//


ನಾದ ಭೋಜನ ಶಬ್ದದೊಳು ಬಿಂಬು ಓದನ ಉದಕದೊಳಗೆ

ಘೋಷ ಅನುವಾದದೊಳು ಶಾಂತಾಖ್ಯ ಜಠರಾಗ್ನಿಯೊಳಗೆ ಇರುತಿಪ್ಪ

ವೈದಿಕ ಸುಶಬ್ದದೊಳು ಪುತ್ರ ಸಹೋದರ ಅನುಗರೊಳು ಅತಿ ಶಾಂತನ ಪಾದ ಕಮಲ

ಅನವರತ ಚಿಂತಿಸು ಈ ಪರಿಯಲಿಂದ//4//


ವೇದ ಮಾನಿ ರಮಾ ಅನುಪಾಸ್ಯ ಗುಣ ಉದಧಿ ಗುಣ ತ್ರಯ ವಿವರ್ಜಿತ

ಸ್ವೋದರಸ್ಥಿತ ನಿಖಿಳ ಬ್ರಹ್ಮಾಂಡ ಆದಿ ವಿಲಕ್ಷಣನು

ಸಾಧು ಸಮ್ಮತವೆನಿಸುತಿಹ ನಿಷುಸೀದ ಗಣಪತಿಯೆಂಬ ಶ್ರುತಿ ಪ್ರತಿಪಾದಿಸುವುದು

ಅನವರತ ಅವನ ಗುಣ ಪ್ರಾಂತ ಗಾಣದಲೆ//5//


ಕರೆಸುವನು ಮಾಯಾ ರಮಣ ತಾ ಪುರುಷ ರೂಪದಿ ತ್ರಿಸ್ಥಳಗಳೊಳು

ಪರಮ ಸತ್ಪುರುಷಾರ್ಥದ ಮಹತ್ತತ್ವದೊಳಗಿದ್ದು

ಸರಸಿಜ ಭವಾಂಡ ಸ್ಥಿತ ಸ್ತ್ರೀ ಪುರುಷ ತನ್ಮಾತ್ರಗಳ

ಏಕೋತ್ತರ ದಶ ಇಂದ್ರಿಯಗಳ ಮಹಾ ಭೂತಗಳ ನಿರ್ಮಿಸಿದ//6//


ಈ ಶರೀರಗ ಪುರುಷ ತ್ರಿ ಗುಣದಿ ಸ್ತ್ರೀ ಸಹಿತ ತಾನಿದ್ದು

ಜೀವರಿಗೆ ಆಶೆ ಲೋಭ ಅಜ್ಞಾನ ಮದ ಮತ್ಸರ ಕುಮೋಹ ಕ್ಷುಧ

ಹಾಸ ಹರ್ಷ ಸುಷುಪ್ತಿ ಸ್ವಪ್ನ ಪಿಪಾಸ ಜಾಗ್ರತಿ ಜನ್ಮ ಸ್ಥಿತಿ ಮೃತಿ

ದೋಷ ಪುಣ್ಯ ಜಯಾಪಜಯ ದ್ವಂದ್ವಗಳ ಕಲ್ಪಿಸಿದ//7//


ತ್ರಿವಿಧ ಗುಣಮಯ ದೇಹ ಜೀವಕೆ ಕವಚದಂದದಿ ತೊಡಿಸಿ

ಕರ್ಮ ಪ್ರವಹದೊಳು ಸಂಚಾರ ಮಾಡಿಸುತಿಪ್ಪ ಜೇವರನಾ

ಕವಿಸಿ ಮಾಯಾರಮಣ ಮೋಹವ ಭವಕೆ ಕಾರಣನಾಗುವನು

ಸಂಶ್ರವಣ ಮನನವ ಮಾಳ್ಪರಿಗೆ ಮೋಚಕನು ಎನಿಸುತಿಪ್ಪ//8//


ಸಾಶನಾಹ್ವಯ ಸ್ತ್ರೀ ಪುರುಷರೊಳು ವಾಸವಾಗಿಹನು ಎಂದರಿದು

ವಿಶ್ವಾಸಪೂರ್ವಕ ಭಜಿಸಿ ತೋಷಿಸು ಸ್ವಾವರೋತ್ತಮರ

ಕ್ಲೇಶ ನಾಶನ ಅಚಲಗಳೊಳು ಪ್ರಕಾಶಿಸುತಲಿಹ

ಅನಶನ ರೂಪ ಉಪಾಸನವ ಮಾಳ್ಪರಿಗೆ ತೋರ್ಪನು ತನ್ನ ನಿಜರೂಪ//9//


ಪ್ರಕಾರಾಂತರ ಚಿಂತಿಸುವುದು ಈ ಪ್ರಕೃತಿಯೊಳು ವಿಶ್ವಾದಿ ರೂಪವ

ಪ್ರಕಟ ಮಾಳ್ಪೆನು ಯಥಾ ಮತಿಯೊಳು ಗುರುಕೃಪಾಬಲದಿ

ಮುಕುರ ನಿರ್ಮಿತ ಸದನದೊಳು ಪೊಗೆ ಸ್ವಕೀಯ ರೂಪವ ಕಾಂಬ ತೆರದಂತೆ

ಅಕುಟಿಲಾತ್ಮ ಚರಾಚರದಿ ಸರ್ವತ್ರ ತೋರುವನು//10//


ಪರಿಚ್ಛೇದ ತ್ರಯ ಪ್ರಕೃತಿಯೊಳಗೆ ಇರುತಿಹನು ವಿಶ್ವಾದಿ ರೂಪಕ

ಧರಿಸಿ ಆತ್ಮಾದಿ ತ್ರಿ ರೂಪವ ಈಷಣತ್ರಯದಿ

ಸುರುಚಿ ಜ್ಞಾನಾತ್ಮ ಸ್ವರೂಪದಿ ತುರಿಯ ನಾಮಕ ವಾಸುದೇವನ ಸ್ಮರಿಸು

ಮುಕ್ತಿ ಸುಖ ಪ್ರದಾಯಕನು ಈತನಹುದೆಂದು//11//


ಕಮಲಸಂಭವ ಜನಕ ಜಡ ಜಂಗಮರ ಒಳಗೆ ನೆಲೆಸಿದ್ದು

ಕ್ರಮ ವ್ಯುತ್ಕ್ರಮದಿ ಕರ್ಮವ ಮಾಡಿ ಮಾಡಿಸುತಿಪ್ಪ ಬೇಸರದೆ

ಕ್ಷಮ ಕ್ಷಾಮ ಕ್ಷಮೀಹನಾಹ್ವಯ ಸುಮನಸ ಅಸುರರೊಳಗೆ

ಅಹಂ ಮಮನಮಮ ಎಂದು ಈ ಉಪಾಸನೆ ಏವ ಪ್ರಾಂತದಲಿ//12//


ಈ ಸಮಸ್ತ ಜಗತ್ತು ಈಶಾವ್ಯಾಸವು ಎನಿಪುದು

ಕಾರ್ಯ ರೂಪವು ನಾಶವಾದರು ನಿತ್ಯವೇ ಸರಿ ಕಾರಣ ಪ್ರಕೃತಿ

ಶ್ರೀಶಗೆ ಜಡ ಪ್ರತಿಮೆಯೆನಿಪುದು ಮಾಸದು ಒಮ್ಮಿಗು ಸನ್ನಿಧಾನವು

ವಾಸವಾಗಿಹ ನಿತ್ಯ ಶಾಲಗ್ರಾಮದ ಉಪಾದಿ//13//


ಏಕಮೇವಾದ್ವಿತೀಯ ರೂಪ ಅನೇಕ ಜೀವರೊಳಿದ್ದು

ತಾ ಪ್ರತ್ಯೇಕ ಕರ್ಮವ ಮಾಡಿ ಮೋಹಿಸುತಿಪ್ಪ ತಿಳಿಸದಲೆ

ಮೂಕ ಬಧಿರ ಅಂಧಾದಿ ನಾಮಕ ಈ ಕಳೇವರದೊಳಗೆ ಕರೆಸುವ

ಮಾಕಳತ್ರನ ಲೌಕಿಕ ಮಹಾ ಮಹಿಮೆಗೆ ಏನೆಂಬೆ//14//


ಲೋಕ ಬಂಧು ಲೋಕನಾಥ ವಿಶೋಕ ಭಕ್ತರ ಶೋಕ ನಾಶನ

ಶ್ರೀ ಕರಾರ್ಚಿತ ಸೋಕದಂದದಲಿಪ್ಪ ಸರ್ವರೊಳು

ಸಾಕುವನು ಸಜ್ಜನರ ಪರಮ ಕೃಪಾಕರ ಈಶ ಪಿನಾಕಿ ಸನ್ನುತ

ಸ್ವೀಕರಿಸುವ ಅನತರು ಕೊಟ್ಟ ಸಮಸ್ತ ಕರ್ಮಗಳ//15//


ಅಹಿತ ಪ್ರತಿಮೆಗಳು ಎನಿಸುವವು ದೇಹ ಗೇಹ ಅಪತ್ಯ ಸತಿ ಧನ

ಲೋಹ ಕಾಷ್ಠ ಶಿಲಾಮೃದ್ ಆತ್ಮಕವು ಆದ ದ್ರವ್ಯಗಳು

ನೇಹ್ಯದಲಿ ಪರಮಾತ್ಮ ಎನಗೆ ಇತ್ತೀಹನು ಎಂದರಿದು ಅನುದಿನದಿ

ಸಮ್ಮೋಹಕೆ ಒಳಗಾಗದಲೆ ಪೂಜಿಸು ಸರ್ವ ನಾಮಕನ//16//


ಶ್ರೀ ತರುಣಿ ವಲ್ಲಭಗೆ ಜೀವರು ಚೇತನ ಪ್ರತಿಮೆಗಳು

ಓತಪ್ರೋತನಾಗಿದ್ದು ಎಲ್ಲರೊಳು ವ್ಯಾಪಾರ ಮಾಡುತಿಹ

ಹೋತ ಸರ್ವ ಇಂದ್ರಿಯಗಳೊಳು ಸಂಪ್ರೀತಿಯಿಂದ ಉಂಡುಣಿಸಿ ವಿಷಯ

ನಿರ್ವಾತ ದೇಶಗ ದೀಪದಿಂದಲಿಪ್ಪ ನಿರ್ಭಯದಿ//17//


ಭೂತ ಸೋಕಿದ ಮಾನವನು ಬಹು ಮಾತನಾಡುವ ತೆರದಿ

ಮಹಾ ಭೂತ ವಿಷ್ಣ್ವಾವೇಷದಿಂದಲಿ ವರ್ತಿಪುದು ಜಗವು

ಕೈತವೋಕ್ತಿಗಳಲ್ಲ ಶೇಷ ಫಣಾತ ಪತ್ರಗೆ

ಜೀವ ಪಂಚಕ ವ್ರಾತವೆಂದಿಗು ಭಿನ್ನ ಪಾದಾಹ್ವಯದಿ ಕರೆಸುವುದು//18//


ದಿವಿಯೊಳಿಪ್ಪವು ಮೂರು ಪಾದಗಳು ಅವನಿಯೊಳಗಿಹುದೊಂದು

ಈ ವಿಧ ಕವಿಭಿರೀಡಿತ ಕರೆಸುವ ಚತುಷ್ಪಾತು ತಾನೆಂದು

ಇವನ ಪಾದ ಚತುಷ್ಟಯಗಳ ಅನುಭವಕೆ ತಂದು ನಿರಂತರದಿ

ಉದ್ಧವನ ಸಖ ಸರ್ವಾಂತರಾತ್ಮಕನು ಎಂದು ಸ್ಮರಿಸುತಿರು//19//


ವಂಶ ಬಾಗಿಲು ಬೆಳೆಯೆ ಕಂಡು ನರಾಂಶದಲಿ ಶೋಭಿಪುದು

ಬಾಗದ ವಂಶ ಪಾಶದಿ ಕಟ್ಟಿ ಏರುಪ ಡೊಂಬ ಮಸ್ತಕಕೆ

ಕಂಸ ಮರ್ದನ ದಾಸರಿಗೆ ನಿಸ್ಸಂಶಯದಿ ಎರಗದಲೆ

ನಾ ವಿದ್ವಾಂಸನು ಎಂದು ಅಹಂಕರಿಸೆ ಭವಗುಣದಿ ಬಂಧಿಸುವ//20//


ಜ್ಯೋತಿ ರೂಪಗೆ ಪ್ರತಿಮೆಗಳು ಸಾಂಕೇತಿಕ ಆರೋಪಿತ

ಸುಪೌರುಷ ಧಾತು ಸಪ್ತಕ ಧೈರ್ಯ ಶೌರ್ಯ ಔದಾರ್ಯ ಚಾತುರ್ಯ

ಮಾತು ಮಾನ ಮಹತ್ವ ಸಹನ ಸುನೀತಿ ನಿರ್ಮಲ ದೇಶ ಬ್ರಾಹ್ಮಣ

ಭೂತ ಪಂಚಕ ಬುದ್ಧಿ ಮೊದಲಾದ ಇಂದ್ರಿಯ ಸ್ಥಾನ//21//


ಜೀವ ರಾಶಿಯೊಳು ಅಮೃತ ಶಾಶ್ವತ ಸ್ಥಾವರಗಳೊಳು ಸ್ಥಾಣು ನಾಮಕ

ಆವಕಾಲದಲಿಪ್ಪ ಅಜಿತಾನಂತನು ಎಂದೆನಿಸಿ

ಗೋವಿದಾಂಪತಿ ಗಾಯನಪ್ರಿಯ ಸಾವಯವ ಸಹಸ್ರ ನಾಮ

ಪರಾವರೇಶ ಪವಿತ್ರಕರ್ಮ ವಿಪಶ್ಚಿತ ಸುಸಾಮ//22//


ಮಾಧವನ ಪೂಜಾರ್ಥವಾಗಿ ನಿಷೇಧ ಕರ್ಮವ ಮಾಡಿ

ಧನ ಸಂಪಾದಿಸಲು ಸತ್ಪುಣ್ಯ ಕರ್ಮಗಳು ಎನಿಸಿಕೊಳುತಿಹವು

ಸ್ವೋದರಂಭರಣಾರ್ಥ ನಿತ್ಯಡಿ ಸಾಧು ಕರ್ಮವ ಮಾಡಿದರು ಸರಿ

ಯೈದುವನು ದೇಹಾಂತರವ ಸಂದೇಹವು ಇನಿತಿಲ್ಲ//23//


ಅಪಗತಾಶ್ರಯ ಎಲ್ಲರೊಳಗಿದ್ದು ಉಪಮನು ಎನಿಪ ಅನುಪಮ ರೂಪನು

ಶಫರ ಕೇತನ ಜನಕ ಮೋಹಿಪ ಮೋಹಕನ ತೆರದಿ

ತಪನ ಕೋಟಿ ಸಮಪ್ರಭಾ ಸಿತವಪುವು ಎನಿಪ ಕೃಷ್ಣಾದಿ ರೂಪಕ

ವಿಪಗಳಂತೆ ಉಂಡುಣಿಪ ಸರ್ವತ್ರದಲಿ ನೆಲೆಸಿದ್ದು//24//


ಅಡವಿಯೊಳು ಬಿತ್ತದಲೆ ಬೆಳೆದಿಹ ಗಿಡದ ಮೂಲಿಕೆ

ಸಕಲ ಜೀವರ ಒಡಲೊಳಿಪ್ಪ ಆಮಯವ ಪರಿಹರಗೈಸುವಂದದಲಿ

ಜಡಜ ಸಂಭವ ಜನಕ ತ್ರಿಜಗದ್ವಡೆಯ ಸಂತೈಸೆನಲು

ಅವರು ಇದ್ದೆಡೆಗೆ ಬಂದೊದಗುವನು ಭಕ್ತರ ಭಿಡೆಯ ಮೀರದಲೆ//25//


ಶ್ರೀ ನಿಕೇತನ ತನ್ನವರ ದೇಹ ಅನುಬಂಧಿಗಳಂತೆ ಅವ್ಯವಧಾನದಲಿ ನೆಲೆಸಿಪ್ಪ

ಸರ್ವದ ಸಕಲ ಕಾಮದನು

ಕೊಟ್ಟರು ಭುಂಜಿಸುತ ಮದ್ದಾನೆಯಂದದಿ ಸಂಚರಿಸು

ಮತ್ತೇನು ಬೇಡದೆ ಭಜಿಸುತಿರು ಅವನ ಅಂಘ್ರಿ ಕಮಲಗಳ//26//


ಬೇಡದಲೆ ಕೊಡುತಿಪ್ಪ ಸುರರಿಗೆ ಬೇಡಿದರೆ ಕೊಡುತಿಹನು ನರರಿಗೆ

ಬೇಡಿ ಬಳಲುವ ದೈತ್ಯರಿಗೆ ಕೊಡನು ಒಮ್ಮೆ ಪುರುಷಾರ್ಥ

ಮೂಢರು ಅನುದಿನ ಧರ್ಮ ಕರ್ಮವ ಮಾಡಿದರು ಸರಿ

ಅಹಿಕ ಫಲಗಳ ನೀಡಿ ಉನ್ಮತ್ತರನು ಮಾಡಿ ಮಹಾ ನಿರಯವೀವ//27//


ತರಣಿ ಸರ್ವತ್ರದಲಿ ಕಿರಣವ ಹರಹಿ ತತ್ತದ್ ವಸ್ತುಗಳನು ಸರಿಸಿ

ಅದರ ಅದರಂತೆ ಛಾಯವ ಕಂಗೊಳಿಪ ತೆರದಿ

ಅರಿಧರ ಏಜಾನೇಜ ಜಗದೊಳಗಿರುವ ಛಾಯಾ ತಪವೆನಿಸಿ

ಸಂಕರುಷಣಾಹ್ವಯ ಅವರವರ ಯೋಗ್ಯತೆಗಳಂತೆ ಇಪ್ಪ//28//


ಈ ವಿಧದಿ ಸರ್ವತ್ರ ಲಕ್ಷ್ಮೀ ಭೂ ವನಿತೆಯರ ಕೂಡಿ

ತನ್ನ ಕಳಾ ವಿಶೇಷಗಳ ಎಲ್ಲ ಕಡೆಯಲಿ ತುಂಬಿ ಸೇವ್ಯತಮ

ಸೇವಕನು ತಾನೆನಿಸಿ ಮಾಯಾದೇವಿ ರಮಣ

ಪ್ರವಿಷ್ಟ ರೂಪವ ಸೇವೆ ಮಾಳ್ಪ ಶರಣ್ಯ ಶಾಶ್ವತ ಕರುಣಿ ಕಮಲಾಕ್ಷ//29//


ಪ್ರಣವ ಕಾರಣ ಕಾರ್ಯ ಪ್ರತಿಪಾದ್ಯನು ಪರಾತ್ಪರ

ಚೇತನಾಚೇತನ ವಿಲಕ್ಷಣ ಅನಂತ ಸತ್ಕಲ್ಯಾಣ ಗುಣಪೂರ್ಣ

ಅನುಪಮನು ಉಪಾಸಿತ ಗುಣ ಉದಧಿ ಅನಘ ಅಜಿತ ಅನಂತ

ನಿಷ್ಕಿಂಚನ ಜನಪ್ರಿಯ ನಿರ್ವಿಕಾರ ನಿರಾಶ್ರಯ ಅವ್ಯಕ್ತಾ//30//


ಗೋಪ ಭೀಯ ಭವಾಂಧಕಾರಕೆ ದೀಪವಟ್ಟಿಗೆ

ಸಕಲ ಸುಖ ಸದನ ಉಪರಿಗ್ರಹವು ಎನಿಸುತಿಪ್ಪುದು ಹರಿಕಥಾಮೃತವು

ಗೋಪತಿ ಜಗನ್ನಾಥ ವಿಠಲ ಸಮೀಪದಲಿ ನೆಲೆಸಿದ್ದು

ಭಕ್ತರನು ಆಪವರ್ಗರ ಮಾಡುವನು ಮಹ ದುಃಖ ಭಯದಿಂದ//31//


//ಇತಿ ಶ್ರೀ ಬಿಂಬಾಪರೋಕ್ಷ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು

Thursday, January 17, 2013

ಶ್ರೀ ಹರಿಕಥಾಮೃತಸಾರ - 17

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಶ್ರೀ ದತ್ತಸ್ವಾತಂತ್ರ್ಯ ಸಂಧಿ//


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಕಾರುಣಿಕ ಹರಿ ತನ್ನೊಳಿಪ್ಪ ಅಪಾರ ಸ್ವಾತಂತ್ರ್ಯ ಗುಣವ ನಾನೂರು ತೆಗೆದು

ಸಪಾದ ಆರೊಂದಧಿಕ ಅರವತ್ತು ನಾರಿಗಿತ್ತ

ದ್ವಿ ಷೋಡಶ ಅಧಿಕ ನೂರು ಪಾದತ್ರಯವ ತನ್ನ ಶರೀರದೊಳಗೆ

ಈಪರಿ ವಿಭಾಗವ ಮಾಡಿ ತ್ರಿಪದಾಹ್ವ//1//


ಸತ್ಯ ಲೋಕಾಧಿಪನೊಳಗೆ ಐವತ್ತೆರೆಡು ಪವಮಾನನೊಳು ನಾಲ್ವತ್ತು ಮೇಲೆಂಟು

ಅಧಿಕ ಶಿವನೊಳಗಿಟ್ಟನಿಪ್ಪತ್ತು ಚಿತ್ತಜ ಇಂದ್ರರೊಳು ಐದಧಿಕ ದಶ

ತತ್ವಮಾನಿಗಳು ಎನಿಪ ಸುರರೊಳು ಹತ್ತು

ಈರೈದು ಅಖಿಳ ಜೀವರೊಳಿಟ್ಟ ನಿರವದ್ಯ//2//


ಕಲಿ ಮೊದಲುಗೊಂಡ ಅಖಿಳ ದಾನವರೊಳಗೆ ನಾಲ್ವತ್ತೈದು

ಈ ಪರಿ ತಿಳಿದು ಉಪಾಸನೆ ಮಾಡು ಮರೆಯದೆ ಪರಮ ಭಕುತಿಯಲಿ

ಇಳೆಯೊಳಗೆ ಸಂಚರಿಸು ಲಕ್ಷ್ಮೀ ನಿಲಯನ ಆಳಾನೆಂದು

ಸರ್ವ ಸ್ಥಳಗಳಲಿ ಸಂತೈಸುತಿಪ್ಪನು ಗೆಳೆಯನಂದದಲಿ//3//


ಅವನಿಪ ಸ್ವಾಮಿತ್ವ ಧರ್ಮವ ಸ್ವವಶ ಮಾತ್ಯರಿಗಿತ್ತು

ತಾ ಮತ್ತವರ ಮುಖದಲಿ ರಾಜ ಕಾರ್ಯಾವ ಮಾಡಿಸುವ ತೆರದಿ

ಕವಿಭಿರೀಡಿತ ತನ್ನ ಕಳೆಗಳ ದಿವಿಜ ದಾನವ ಮಾನವರೊಳಿಟ್ಟು

ಅವಿರತ ಗುಣತ್ರಯಜ ಕರ್ಮವ ಮಾಡಿ ಮಾಡಿಸುವ//4//


ಪುಣ್ಯ ಪಾಪಗಳು ಈ ತೆರದಿ ಕಾರುಣ್ಯ ಸಾಗರ ದೇವದಾನವ ಮಾನವರೊಳಿಟ್ಟು

ಅವರ ಫಲ ವ್ಯತ್ಯಾಸವನೆ ಮಾಡಿ

ಬನ್ನ ಬಡಿಸುವ ಭಕ್ತಿಹೀನರ ಸನ್ನುತ ಸುಕರ್ಮ ಫಲತೆಗೆದು

ಪ್ರಪನ್ನರಿಗೆ ಕೊಟ್ಟು ಅವರ ಸುಖಪಡಿಸುವನು ಸುಭುಜಾಹ್ವ//5//


ಮಾಣಿಕವ ಕೊಂಡು ಅಂಗಡಿಯೊಳು ಅಜಿವಾನ ಕೊಟ್ಟು ಆ ಪುರುಷನ

ಸಮಾಧಾನ ಮಾಡುವ ತೆರದಿ ದೈತ್ಯರು ನಿತ್ಯದಲಿ ಮಾಳ್ಪ

ದಾನ ಯಜ್ಞಾದಿಗಳ ಫಲ ಪವಮಾನ ಪಿತನು ಅಪಹರಿಸಿ

ಅಸಮೀಚೀನ ಸುಖಗಳ ಕೊಟ್ಟು ಅಸುರರ ಮತ್ತರನು ಮಾಳ್ಪ//6//


ಏಣ ಲಾಂಛನನ ಅಮಲ ಕಿರಣ ಕ್ರಮೇಣ ವೃದ್ಧಿಯನು ಐದಿ

ಲೋಗರ ಕಾಣಗೊಡದಿಹ ಕತ್ತಲೆಯ ಭಂಗಿಸುವ ತೆರದಂತೆ

ವೈನತೇಯಾಂಗಸನ ಮೂರ್ತಿ ಧ್ಯಾನವುಳ್ಳ ಮಹಾತ್ಮರಿಗೆ

ಸುಜ್ಞಾನ ಭಕ್ತ್ಯಾದಿಗಳು ವರ್ಧಿಸಿ ಸುಖವೇ ಕೊಡುತಿಹರು//7//


ಜನಪನ ಅರಿಕೆಯ ಚೋರ ಪೊಳಲೊಳು ಧನವ ಕದ್ದೊಯ್ದ ಈಯಲು

ಅವನ ಅವಗುಣಗಳು ಎಣಿಸದೆ ಪೊರೆವ ಕೊಡದಿರೆ ಶಿಕ್ಷಿಸುವ ತೆರದಿ

ಅನುಚಿತೋಚಿತ ಕರ್ಮ ಕೃಷ್ಣಾರ್ಪಣವೆನಲು

ಕೈಕೊಂಡು ತನ್ನರಮನೆಯೊಳಿಟ್ಟು ಆನಂದ ಬಡಿಸುವ ಮಾಧವಾನತರ//8//


ಅನ್ನದ ಅನ್ನಾದ ಅನ್ನ ನಾಮಕ ಮುನ್ನ ಪೇಳ್ದ ಪ್ರಕಾರ

ಜೀವರೊಳು ಅನ್ನ ರೂಪ ಪ್ರವೇಶಗೈದು ಅವರವರ ವ್ಯಾಪಾರ

ಬನ್ನಬಡದಲೆ ಮಾಡಿ ಮಾಡಿಸಿ ಧನ್ಯರಿವರು ಅಹುದು ಎಂದೆನಿಸಿ

ತ್ರೈಗುಣ್ಯ ವರ್ಜಿತ ತತ್ತದಾಹ್ವಯನು ಆಗಿ ಕರೆಸುವನು//9//


ಸಲಿಲಬಿಂದು ಪಯಾಬ್ಧಿಯೊಳು ಬೀಳಲು ವಿಕಾರವನು ಐದ ಬಲ್ಲದೆ

ಜಲವು ತದ್ರೂಪವನೆ ಐದುವುದು ಎಲ್ಲ ಕಾಲದಲಿ

ಕಲಿಲಮಲಾಪಹನ ಅರ್ಚಿಸುವ ಸತ್ಕುಲಜರ ಕುಕರ್ಮಗಳು

ತಾನಿಷ್ಕಲುಷ ಕರ್ಮಗಳಾಗಿ ಪುರುಷಾರ್ಥಗಳ ಕೊಡುತಿಹರು//10//


ಮೊಗದೊಳಗೆ ಮೊಗವಿಟ್ಟು ಮುದ್ದಿಸಿ ಮಗುವಿನಂ ಬಿಗಿದಪ್ಪಿ ರಂಬಿಸಿ

ನೇಹದಿ ತೆಗೆದು ತನ್ನಯ ಸ್ತನಗಳು ಉಣಿಸುವ ಜನನಿಯಂದದಲಿ

ಅಗಣಿತಾತ್ಮನು ತನ್ನ ಪಾದಾಬ್ಜಗಳ ಧೇನಿಪ ಭಕ್ತ ಜನರಿಗೆ

ಪ್ರಘಟಕನು ತಾನಾಗಿ ಸೌಖ್ಯಗಳು ಏವ ಸರ್ವತ್ರ//11//


ತೋಟಿಗನು ಭೂಮಿಯೊಳು ಬೀಜವ ನಾಟಬೇಕೆಂದೆನುತ

ಹಿತದಲಿ ಮೋಟೆಯಿಂ ನೀರೆತ್ತಿ ಸಸಿಗಳ ಸಂತೈಸುವಂತೆ

ಪಾಟುಬಡದಲೆ ಜಗದಿ ಜೀವರ ಘೋಟಕಾಸ್ಯನು ಸೃಜಿಸಿ

ಯೋಗ್ಯತೆ ದಾಟಗೊಡದಲೆ ಸಲಹುತಿಪ್ಪನು ಸರ್ವ ಕಾಲದಲಿ//12//


ಭೂಮಿಯೊಳು ಜಲವಿರೆ ತೃಷಾರ್ತನು ತಾ ಮರೆದು

ಮೊಗವೆತ್ತಿ ಎಣ್ದೆಸೆವ್ಯೋಮ ಮಂಡಲದೊಳಗೆ ಕಾಣದೆ ಮಿಡುಕುವಂದದಲಿ

ಶ್ರೀ ಮನೋರಮ ಸರ್ವರ ಅಂತರ್ಯಾಮಿಯು ಆಗಿರೆ ತಿಳಿಯಲರಿಯದೆ

ಭ್ರಾಮಕರು ಭಜಿಸುವರು ಭಕುತಿಯಲಿ ಅನ್ಯ ದೇವತೆಯ//13//


ಮುಖ್ಯ ಫಲ ವೈಕುಂಠ ಮುಖ್ಯಾಮುಖ್ಯ ಫಲ ಮಹದಾದಿ ಲೋಕಾ

ಅಮುಖ್ಯ ಫಲ ವೈಷಯಿಕವು ಎಂದರಿದು ಅತಿ ಭಕುತಿಯಿಂದ

ರಕ್ಕಸ ಅರಿಯ ಭಜಿಸುತಲಿ ನಿರ್ದುಃಖನಾಗು

ನಿರಂತರದಿ ಮೊರೆ ಪೊಕ್ಕವರ ಬಿಡ ಭೃತ್ಯವತ್ಸಲ ಭಾರತೀಶ ಪಿತ//14//


ವ್ಯಾಧಿಯಿಂ ಪೀಡಿತ ಶಿಶುವಿಗೆ ಗುಡೋದಕವ ನೆರೆದು ಅದಕೆ ಔಷಧ ತೇದು

ಕುಡಿಸುವ ತಾಯಿಯ ಉಪಾದಿಯಲಿ

ಸರ್ವಜ್ಞ ಬಾದರಾಯಣ ಭಕ್ತ ಜನಕೆ ಪ್ರಸಾದ ರೂಪಕನಾಗಿ

ಭಾಗವತಾದಿಯಲಿ ಪೇಳಿದನು ಧರ್ಮಾದಿಗಳೇ ಫಲವೆಂದು//15//


ದೂರದಲ್ಲಿಹ ಪರ್ವತ ಘನಾಕಾರ ತೋರ್ಪುದು ನೋಳ್ಪ ಜನರಿಗೆ

ಸಾರಗೈಯಲು ಸರ್ವ ವ್ಯಾಘ್ರಗಳಿಂದ ಭಯವಿಹುದು

ಘೋರತರ ಸಂಸಾರ ಸೌಖ್ಯ ಅಸಾರತರವೆಂದು ಅರಿತು

ನಿತ್ಯ ರಮಾರಮಣನ ಆರಾಧಿಸುವರು ಅದರಿಂದ ಬಲ್ಲವರು//16//


ಕೆಸರ ಘಟಗಳ ಮಾಡಿ ಬೇಸಿಗೆ ಬಿಸಿಲೊಳಗೆ ಇಟ್ಟು ಒಣಗಿಸಿದರು ಅದು

ಘನ ರಸವು ತುಂಬಲು ಬಹುದೇ? ಸರ್ವ ಸ್ವಾತಂತ್ರ ನಾನೆಂಬ

ಪಶುಪ ನರನು ಏನೇನು ಮಾಳ್ಪ ಅನಶನ ದಾನ ಸ್ನಾನ ಕರ್ಮಗಳು

ಒಸರಿ ಪೋಪವು ಬರಿದೆ ದೇಹ ಆಯಾಸವನೆ ಕೊಟ್ಟು//17//


ಎರಡು ದೀಕ್ಷೆಗಳಿಹವು ಬಾಹ್ಯಾಂತರವು ಎನಿಪ ನಾಮದಲಿ

ಬುಧರಿಂದರಿತು ದೀಕ್ಷಿತನು ಆಗು ದೀರ್ಘ ದ್ವೇಷಗಳ ಬಿಟ್ಟು

ಹರಿಯೇ ಸರ್ವೋತ್ತಮ ಕ್ಷರಾಕ್ಷರ ಪುರುಷ ಪೂಜಿತ ಪಾದ

ಜನ್ಮಾದಿ ಅರವಿ ದೂರ ಸುಖಾತ್ಮ ಸರ್ವಗನು ಎಂದು ಸ್ಮರಿಸುತಿರು//18//


ಹೇಯವಸ್ತುಗಳಿಲ್ಲವು ಉಪಾದೇಯ ವಸ್ತುಗಳಿಲ್ಲ

ನ್ಯಾಯಾನ್ಯಾಯ ಧರ್ಮಗಳಿಲ್ಲ ದ್ವೇಷ ಅಸೂಯೆ ಮೊದಲಿಲ್ಲ

ತಾಯಿ ತಂದೆಗಳಿಲ್ಲ ಕಮಲದಳಾಯತ ಅಕ್ಷಗೆಯೆನಲು

ಈಸುವ ಕಾಯಿಯಂದದಿ ಮುಳಗಗೊಡದೆ ಭವಾಬ್ಧಿ ದಾಟಿಸುವ//19//


ಮಂದನಾದರು ಸರಿಯೆ ಗೋಪೀಚಂದನ ಶ್ರೀ ಮುದ್ರೆಗಳ ನಲಿವಿಂದ ಧರಿಸುತ

ಶ್ರೀ ತುಳಸಿ ಪದುಮಾಕ್ಷಿ ಸರಗಳನು ಕಂಧರದ ಮಧ್ಯದಲಿ ಧರಿಸಿ

ಮುಕುಂದ ಶ್ರೀ ಭೂರಮಣ ತ್ರಿಜಗದ್ವಂದ್ಯ

ಸರ್ವ ಸ್ವಾಮಿ ಮಮ ಕುಲದೈವವು ಎನೆ ಪೊರೆವ//20//


ಪ್ರಾಯ ಧನ ಮದದಿಂದ ಜನರಿಗೆ ನಾಯಕ ಪ್ರಭುವೆಂಬಿ

ಪೂರ್ವದಿ ತಾಯಿ ಪೊಟ್ಟೆಯೊಳಿರಲು ಪ್ರಭುವೆಂದೇಕೆ ಕರೆಯರಲೈ?

ಕಾಯ ನಿನ್ನನು ಬಿಟ್ಟು ಪೋಗಲು ರಾಯಾ ನೀನೆಂಬುವ ಪ್ರಭುತ್ವ

ಪಲಾಯನವನೈದಿತು ಸಮೀಪದಲಿದ್ದರೆ ಅದು ತೋರು//21//


ವಾಸುದೇವ ಏಕ ಪ್ರಕಾರದಿ ಈಶನೆನಿಸುವ

ಬ್ರಹ್ಮ ರುದ್ರ ಶಚಿ ಈಶ ಮೊದಲಾದ ಅಮರರೆಲ್ಲರು ದಾಸರೆನಿಸುವರು

ಈ ಸುಮಾರ್ಗವ ಬಿಟ್ಟು ಸೋಹಮುಪಾಸನೆಯಗೈವ ನರ

ದೇಹಜ ದೈಶಿಕ ಕ್ಲೇಶಗಳು ಬರಲು ಅವನು ಏಕೆ ಬಿಡಿಸಿಕೊಳ//22//


ಆ ಪರ ಬ್ರಹ್ಮನಲಿ ತ್ರಿಜಗದ್ವ್ಯಾಪಕಾತ್ವ ನಿಯಾಮಕಾತ್ವ

ಸ್ಥಾಪಕಾತ್ವ ವಶಾತ್ವ ಈಶಾತ್ವಾದಿ ಗುಣಗಳಿಗೆ ಲೋಪವಿಲ್ಲ

ಏಕ ಪ್ರಕಾರ ಸ್ವರೂಪವು ಎನಿಪವು ಸರ್ವ ಕಾಲದಿ ಪೋಪವಲ್ಲವು

ಜೀವರಿಗೆ ದಾಸಾತ್ವದುಪಾದಿ//23//


ನಿತ್ಯನೂತನ ನಿರ್ವಿಕಾರ ಸುಹೃತ್ತಮ ಪ್ರಣವಸ್ಥ

ವರ್ಣೋತ್ಪತ್ತಿ ಕಾರಣ ವಾಗ್ಮನಃಮಯ ಸಾಮಗಾನರತ

ದತ್ತ ಕಪಿಲ ಹಯಾಸ್ಯ ರೂಪದಿ ಪೃಥ್ ಪ್ರುತಗ್ ಜೀವರೊಳಗಿದ್ದು ಪ್ರವರ್ತಿಸುವನು

ಅವರವರ ಯೋಗ್ಯತೆ ಕರ್ಮವ ಅನುಸರಿಸಿ//24//


ಶೃತಿಗಳು ಆತನ ಮಾತು ವಿಮಲಾ ಸ್ಮೃತಿಗಳು ಆತನ ಶಿಕ್ಷೆ

ಜೀವ ಪ್ರತತಿ ಪ್ರಕೃತಿಗಳು ಎರಡು ಪ್ರತಿಮೆಗಳು ಎನಿಸಿಕೊಳುತಿಹವು

ಇತರ ಕರ್ಮಗಳು ಎಲ್ಲ ಲಕ್ಷ್ಮೀ ಪತಿಗೆ ಪೂಜೆಗಳೆಂದು ಸ್ಮರಿಸುತ

ಚತುರ ವಿಧ ಪುರುಷಾರ್ಥಗಳ ಬೇಡದಿರು ಸ್ವಪ್ನದಲಿ//25//


ಭೂತಳಾಧಿಪನು ಆಜ್ಞ ಧಾರಕ ದೂತರಿಗೆ

ಸೇವಾನುಸಾರದಿ ವೇತನವ ಕೊಟ್ಟು ಅವರ ಸಂತೋಷಿಸುವ ತೆರದಂತೆ

ಮಾತರಿಶ್ವ ಪ್ರಿಯನು ಪರಮ ಪ್ರೀತಿ ಪೂರ್ವಕ

ಸದ್ಗುಣಂಗಳ ಗಾಧಕರ ಸಂತೋಷ ಪಡಿಸುವ ಇಹ ಪರಂಗಳಲಿ//26//


ದೀಪ ದಿವದಲಿ ಕಂಡರಾದಡೆ ಲೋಪಗೈಸುವರು ಆ ಕ್ಷಣ

ಹರಿ ಸಮೀಪದಲ್ಲಿರೆ ನಂದ ನಾಮ ಸುನಂದವು ಎನಿಸುವವು

ಔಪಚಾರಿಕವಲ್ಲ ಸುಜನರ ಪಾಪ ಕರ್ಮವು ಪುಣ್ಯವು ಎನಿಪವು

ಪಾಪಿಗಳ ಸತ್ಪುಣ್ಯ ಕರ್ಮವು ಪಾಪವು ಎನಿಸುವವು//27//


ಧನವ ಸಂಪಾದಿಸುವ ಪ್ರದ್ರಾವಣಿಕರಂದದದಿ

ಕೋವಿದರ ಮನೆಮನೆಗಳಲಿ ಸಂಚರಿಸು ಶಾಸ್ತ್ರ ಶ್ರವಣ ಗೋಸುಗದಿ

ಮನನಗೈದು ಉಪದೇಶಿಸುತ ದುರ್ಜನರ ಕೂಡಿ ಆಡದಿರು ಸ್ವಪ್ನದಿ

ಪ್ರಣತ ಕಾಮದ ಕೊಡುವ ಸೌಖ್ಯಗಳ ಇಹ ಪರಂಗಳಲಿ//28//


ಕಾರಕ ಕ್ರಿಯ ದ್ರವ್ಯ ವಿಭ್ರಮ ಮೂರು ವಿಧ ಜೀವರಿಗೆ

ಬಹು ಸಂಸಾರಕೆ ಇವು ಕಾರಣವು ಎನಿಸುವವು ಎಲ್ಲ ಕಾಲದಲಿ ದೂರ ಓಡಿಸಿ

ಭ್ರಾಮಕತ್ರಯ ಮಾರಿಗೆ ಒಳಗಾಗದಲೆ

ಸರ್ವಾರಾಧಕನ ಚಿಂತಿಸುತಲಿರು ಸರ್ವತ್ರ ಮರೆಯದಲೆ//29//


ಕರಣ ಕರ್ಮವ ಮಾಡಿದರೆ ವಿಸ್ಮರಣೆ ಕಾಲದಿ ಮಾತುಗಳಿಗೆ

ಉತ್ತರವ ಕೊಡದಲೆ ಸುಮ್ಮನಿಪ್ಪನು

ಜಾಗರಾವಸ್ಥೆ ಕರುಣಿಸಲು ವ್ಯಾಪಾರ ಮಾಡುವ

ಬರಲು ನಾಲ್ಕವಸ್ಥೆಗಳು ಪರಿಹರಿಸಿ ಕೊಳನು ಏತಕೆ? ಸ್ವತಂತ್ರನು ತಾನೆಯೆಂಬುವನು//30//


ಯುಕ್ತಿ ಮಾತುಗಳಲ್ಲ ಶ್ರುತಿ ಸ್ಮೃತಿ ಉಕ್ತ ಮಾತುಗಳಿವು

ವಿಚಾರಿಸಿ ಮುಕ್ತಿಗಿವು ಸೋಪಾನವು ಎನಿಪವು ಪ್ರತಿಪ್ರತಿ ಪದವು

ಭಕ್ತಿಪೂರ್ವಕ ಪಠಿಸುವವರಿಗೆ ವ್ಯಕ್ತಿ ಕೊಡುವ ಸ್ವರೂಪ ಸುಖ

ಪ್ರವಿವಿರಕ್ತನ ಮಾಡುವನು ಭವಭಯದಿಂದ ಬಹು ರೂಪ//31//


ಶ್ರೀನಿವಾಸನ ಸುಗುಣ ಮಣಿಗಳ ಪ್ರಾಣಮಾತ ವಯುನಾಖ್ಯ ಸೂತ್ರದಿ ಪೋಣಿಸಿದ ಮಾಲಿಕೆಯ

ವಾಗ್ಮಯಗೆ ಸಮರ್ಪಿಸಿದ

ಜ್ಞಾನಿಗಳ ದೃಕ್ ವಿಷಯವುಹುದ ಅಜ್ಞಾನಿಗಳಿಗೆ ಅಸಹ್ಯ ತೋರ್ಪುದು

ಮಾಣಿಕವ ಮರ್ಕಟನ ಕೈಯಲಿ ಕೊಟ್ಟ ತೆರದಂತೆ//32//


ಶ್ರೀವಿಧಿ ಈರ ವಿಪಾಹಿಪ ಈಶ ಶಚೀ ವರಾತ್ಮಭವ ಅರ್ಕ ಶಶಿ

ದಿಗ್ದೇವ ಋಷಿ ಗಂಧರ್ವ ಕಿನ್ನರ ಸಿದ್ಧ ಸಾಧ್ಯ ಗಣ ಸೇವಿತ ಪದಾಂಬುಜ

ತ್ವತ್ಪಾದಾಲವಂಬಿಗಳು ಆದ ಭಕ್ತರ ಕಾವ

ಕರುಣಾ ಸಾಂದ್ರ ಲಕ್ಷ್ಮೀ ಹೃತ್ಕುಮುದ ಚಂದ್ರ//33//


ಆದರಿಶ ಅಗತಾಕ್ಷ ಭಾಷಾ ಭೇದದಿಂದಲಿ ಕರೆಯಲು ಅದನು

ನಿಷೇಧಗೈದು ಅವಲೋಕಿಸದೆ ಬಿಡುವರೆ ವಿವೇಕಿಗಳು

ಮಾಧವನ ಗುಣ ಪೇಳ್ವ ಪ್ರಾಕೃತವು ಆದರೆಯು ಸರಿ

ಕೇಳಿ ಪರಮ ಆಹ್ಲಾದಬಡದಿಪ್ಪರೆ? ನಿರಂತರ ಬಲ್ಲ ಕೋವಿದರು//34//


ಭಾಸ್ಕರನ ಮಂಡಲವ ಕಂಡು ನಮಸ್ಕರಿಸಿ ಮೋದಿಸದೆ

ದ್ವೇಷದಿ ತಸ್ಕರನು ನಿಂದಿಸಲು ಕುಂದಹುದೇ ದಿವಾಕರಗೆ

ಸಂಸ್ಕೃತವು ಇದಲ್ಲ ಎಂದು ಕುಹಕ ತಿರಸ್ಕರಿಸಲು ಏನಹುದು?

ಭಕ್ತಿ ಪುರಸ್ಕರದಿ ಕೇಳ್ವರಿಗೊಲಿವನು ಪುಷ್ಕರಾಕ್ಷ ಸದಾ//35//


ಪತಿತನ ಕಪಾಲದೊಳು ಭಾಗೀರಥಿಯ ಜಲವಿರೆ ಪೇಯವು ಎನಿಪುದೆ?

ಇತರ ಕವಿ ನಿರ್ಮಿತ ಕುಕಾವ್ಯ ಅಶ್ರಾವ್ಯ ಬುಧರಿಂದ

ಕೃತಿ ಪತಿಕಥಾನ್ವಿತವು ಎನಿಪ ಪ್ರಾಕೃತವೆ ತಾ ಸಂಸ್ಕೃತವು ಎನಿಸಿ

ಸದ್ಗತಿಯನೀವುದು ಭಕ್ತಿ ಪೂರ್ವಕ ಕೇಳಿ ಪೇಳ್ವರಿಗೆ//36//


ಶಾಸ್ತ್ರ ಸಯುಕ್ತಿ ಗ್ರಂಥಗಳು ಓದಿ ಕೇಳ್ದವನಲ್ಲ

ಸಂತತ ಸಾಧುಗಳ ಸಹವಾಸ ಸಲ್ಲಾಪಗಳು ಮೊದಲಿಲ್ಲ

ಮೋದ ತೀರ್ಥ ಆರ್ಯರ ಮತಾನುಗರು ಆದವರ ಕರುಣದಲಿ ಪೇಳ್ದೆ

ರಮಾಧವ ಜಗನ್ನಾಥ ವಿಠಲ ತಿಳಿಸಿದದರೊಳಗೆ//37//


//ಶ್ರೀ ದತ್ತಸ್ವಾತಂತ್ರ್ಯ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು

ಶ್ರೀ ಹರಿಕಥಾಮೃತಸಾರ - 16

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಶ್ರೀ ಸ್ವಗತಸ್ವಾತಂತ್ರ್ಯ ಸಂಧಿ//


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಸ್ವಗತಸ್ವಾತಂತ್ರ್ಯ ಗುಣವ ಹರಿ ತೆಗೆದು ಬ್ರಹ್ಮಾದ್ಯರಿಗೆ ಕೊಟ್ಟದು

ಭೃಗು ಮುನಿಪ ಪೇಳಿದನು ಇಂದ್ರದ್ಯುಮ್ನ ಕ್ಷಿತಿಪನಿಗೆ//


ಪರಮ ವಿಷ್ಣು ಸ್ವತಂತ್ರ ಮಾಯಾ ತರುಣಿ ವಕ್ಷಸ್ಥಳ ನಿವಾಸಿ

ಸರಸಿಜೋದ್ಭವ ಪ್ರಾಣರೀರ್ವರು ಸಚಿವರು ಎನಿಸುವರು

ಸರ್ವ ಕರ್ಮಗಳಲ್ಲಿ ತತ್ಪ್ರಿಯರು ಉರಗ ಭೂಷಣ ಅಹಂಕೃತಿತ್ರಯ

ಕರೆಸುವ ಅಮರೇಂದ್ರ ಅರ್ಕ ಮುಖರು ಇಂದ್ರಿಯಪರು ಎನಿಸುವರು//1//


ಈ ದಿವೌಕಸರ ಅಂತೆ ಕಲಿ ಮೊದಲಾದ ದೈತ್ಯರು ಸರ್ವ ದೇಹದಿ ತೋದಕರು ತಾವಾಗಿ

ವ್ಯಾಪಾರಗಳ ಮಾಡುವರು

ವೇಧನಾಂದದಿ ಕಲಿಯು ಅಹಂಕಾರಾಧಿಪ ಅಧಮ ಮಧುಕುಕೈಟಭ

ಕ್ರೋಧಿಶಂಭರ ಮುಖರು ಮನಸಿಗೆ ಸ್ವಾಮಿಯೆನಿಸುವರು//2//


ದೇವತೆಗಳ ಉಪಾಧಿ ನಿತ್ಯದಿ ಏವಮಾದಿ ನಾಮದಿಂದಲಿ

ಯಾವದಿಂದ್ರಿಯಗಳಲಿ ವ್ಯಾಪಾರಗಳ ಮಾಡುವರು

ಸೇವಕರ ಸೇವ ಅನುಗುಣ ಫಲವೀವ ನ್ರುಪನಂದದಲಿ

ತನ್ನ ಸ್ವಭಾವ ಸ್ವಾತಂತ್ರ್ಯ ವಿಭಾಗವ ಮಾಡಿಕೊಟ್ಟ ಹರಿ//3//


ಅಗಣಿತ ಸ್ವಾತಂತ್ರ್ಯವ ನಾಲ್ಬಗೆ ವಿಭಾಗವ ಮಾಡಿ

ಒಂದನುತೆಗೆದು ದಶವಿಧಗೈಸಿ ಪಾದರೆ ಪಂಚ ಪ್ರಾಣನಲಿ

ಮೊಗ ಚತುಷ್ಟಯನೊಳು ಸಪಾದೈದು ಗುಣವಿರಸಿದ

ಮತ್ತೆ ದಶ ವಿಧಯುಗಳ ಗುಣವನ್ನು ಮಾಡಿ ಎರಡು ಸದಾ ಶಿವನೊಳಿಟ್ಟ//4//


ಪಾಕಶಾಸನ ಕಾಮರೊಳು ಸಾರ್ಧೈಕವಿಟ್ಟ ದಶ ಇಂದ್ರಿಯರ

ಸುದಿವೌಕಸಾದ್ಯರೊಳೊಂದು ಯಾವಜ್ಜೀವರೊಳಗೊಂದು

ನಾಲ್ಕೂವರೆ ಕಲ್ಯಾದಿ ದೈತ್ಯಾನೀಕಕಿತ್ತನು

ಎರಡು ತ್ರಿವಿಧ ವಿವೇಕಗೈಸಿ ಇಂದಿರಗೊಂದು ಎರಡು ಆತ್ಮ ತನ್ನೊಳಗೆ//5//


ಈ ವಿಧದಿ ಸ್ವಾತಂತ್ರ್ಯವ ದೇವ ಮಾನವ ದಾನವರೊಳು

ರಮಾ ವಿನೋದಿ ವಿಭಾಗ ಮಾಡಿಟ್ಟು ಅಲ್ಲೇ ರಮಿಸುವನು

ಮೂವರೊಳಗಿದ್ದು ಅವರ ಕರ್ಮವ ತಾ ವಿಕಾರವಗೈಸದಲೆ

ಕಲ್ಪವಸಾನಕೆ ಕೊಡುವನು ಅನಾಯಾಸ ಅವರ ಗತಿಯ//6//


ಆಲಯಗಳೊಳಿಪ್ಪ ದೀಪ ಜ್ವಾಲೆ ವರ್ತಿಗಳನುಸರಿಸಿ ಜನರ ಆಲಿಗೊಪ್ಪುವ ತೆರದಿ

ಹರಿ ತಾ ತೋರ್ಪ ಸರ್ವತ್ರ

ಕಾಲ ಕಾಲದಿ ಶ್ರೀಧರಾ ದುರ್ಗಾ ಲಲನೆಯರ ಕೂಡಿ ಸುಖಮಯ ಲೀಲೆಗೈಯಲು

ತ್ರಿಗುಣ ಕಾರ್ಯಗಳಿಹವು ಜೀವರಿಗೆ//7//


ಇಂದ್ರಿಯಗಳಿಂ ಮಾಳ್ಪ ಕರ್ಮ ದ್ವಂದ್ವಗಳ ತನಗರ್ಪಿಸಲು

ಗೋವಿಂದ ಪುಣ್ಯವ ಕೊಂಡು ಪಾಪವ ಭಸ್ಮವನೆ ಮಾಳ್ಪ

ಇಂದಿರೇಶನು ಭಕ್ತ ಜನರನು ನಿಂದಿಸುವರೊಳಗಿಪ್ಪ

ಪುಣ್ಯವ ತಂದು ತನ್ನವಗೀವ ಪಾಪಗಳ ಅವರಿಗುಣಿಸುವನು//8//


ಹೊತ್ತು ಒಟ್ಟಿಗೆ ಪಾಪ ಕರ್ಮ ಪ್ರವರ್ತಕರ ನಿಂದಿಸದೆ

ತನಗಿಂದ ಉತ್ತಮರ ಗುಣ ಕರ್ಮಗಳ ಕೊಂಡಾಡದಲಿಪ್ಪ ಮರ್ತ್ಯರಿಗೆ

ಗೋಬ್ರಾಹ್ಮಣ ಸ್ತ್ರೀ ಹತ್ಯ ಮೊದಲಾದ ಅಖಿಳ ದೋಷಗಳಿತ್ತಪನು

ಸಂದೇಹ ಪಡಸಲ್ಲ ಅಖಿಳ ಶಾಸ್ತ್ರಮತ//9//


ತನ್ನ ಸ್ವಾತಂತ್ರ್ಯ ಗುಣಗಳ ಹಿರಣ್ಯ ಗರ್ಭಾದ್ಯರಿಗೆ

ಕಲಿಮುಖ ದಾನವರ ಸಂತತಿಗೆ ಅವರಧಿಕಾರವ ಅನುಸರಿಸಿ

ಪುಣ್ಯ ಪಾಪಗಳೀವ ಬಹು ಕಾರುಣ್ಯ ಸಾಗರನು

ಅಲ್ಪಶಕ್ತಿಗಳ ಉಣ್ಣಲರಿಯದಿರಲು ಉಣ ಕಲಿಸಿದನು ಜೀವರಿಗೆ//10//


ಸತ್ಯ ವಿಕ್ರಮ ಪುಣ್ಯ ಪಾಪ ಸಮಸ್ತರಿಗೆ ಕೊಡಲೋಸುಗದಿ

ನಾಲ್ವತ್ತು ಭಾಗವ ಮಾಡಿ ಲೇಶಾಂಶವನು ಜನಕೀವ

ಅತ್ಯಲ್ಪ ಪರಮಾಣು ಜೀವಗೆ ಸಾಮರ್ಥ್ಯವನು ತಾ ಕೊಟ್ಟು

ಸ್ಥೂಲ ಪದಾರ್ಥಗಳ ಉಂಡು ಉಣಿಪ ಸರ್ವದಾಸರ್ವ ಜೀವರಿಗೆ//11//


ತಿಮಿರ ತರಣಿಗಳು ಏಕ ದೇಶದಿ ಸಮನಿಸಿಪ್ಪವೆ ಎಂದಿಗಾದರು?

ಭ್ರಮಣ ಛಳಿ ಬಿಸಲು ಅಂಜಿಕೆಗಳುಂಟೇನೋ ಪರ್ವತಕೆ?

ಅಮಿತ ಜೀವರೊಳಿದ್ದು ಲಕ್ಷ್ಮೀ ರಮಣ ವ್ಯಾಪಾರಗಳ ಮಾಡುವ

ಕಮಲಪತ್ರ ಸರೋವರಗಳೊಳಗಿಪ್ಪ ತೆರದಂತೆ//12//


ಅಂಬುಜೋದ್ಭವ ಮುಖ್ಯ ಸುರಾ ಕಲಿ ಶಂಬರಾದಿ ಸಮಸ್ತ ದೈತ್ಯ ಕದಂಬಕೆ

ಅನುದಿನ ಪುಣ್ಯ ಪಾಪ ವಿಭಾಗವನೆ ಮಾಡಿ

ಅಂಬುಧಿಯ ಜಲವನು ಮಹದ್ಘಟ ದಿಂಬನಿತು ತುಂಬುವ ತೆರದಿ

ಪ್ರತಿ ಬಿಂಬರೊಳು ತಾನಿದ್ದು ಯೋಗ್ಯತೆಯಂತೆ ಫಲವೀವ//13//


ಇನಿತು ವಿಷ್ಣು ರಹಸ್ಯದೊಳು ಭ್ರುಮು ಮುನಿಪ ಇಂದ್ರದ್ಯುಮ್ನಗೆ ಅರುಪಿದದನು

ಬುಧರು ಕೇಳುವುದು ನಿತ್ಯದಿ ಮತ್ಸರವ ಬಿಟ್ಟು

ಅನುಚಿತೋಕ್ತಿಗಳಿದ್ದರೆಯು ಸರಿಯೆ ಗಣನೆ ಮಾಡದಿರೆಂದು

ವಿದ್ವದ್ ಜನಕೆ ವಿಜ್ಞಾಪನೆಯ ಮಾಡುವೆ ವಿನಯ ಪೂರ್ವಕದಿ//13//


ವೇತ ಭಯ ವಿಶ್ವೇಶ ವಿಧಿ ಪಿತ ಮಾತುಳಾಂತಕ ಮಧ್ವ ವಲ್ಲಭ

ಭೂತ ಭಾವನ ಅನಂತ ಭಾಸ್ಕರ ತೇಜ ಮಹಾರಾಜ

ಗೌತಮನ ಮಡದಿಯನು ಕಾಯ್ದ ಅನಾಥ ರಕ್ಷಕ

ಗುರುತಮ ಜಗನ್ನಾಥ ವಿಠಲ ತನ್ನ ನಂಬಿದ ಭಕುತರನು ಪೊರೆವ//14//


//ಇತಿ ಶ್ರೀ ಸ್ವಗತಸ್ವಾತಂತ್ರ್ಯ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು

ಶ್ರೀ ಹರಿಕಥಾಮೃತಸಾರ - 15

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಶ್ರೀ ಶ್ವಾಸ ಸಂಧಿ//


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಭಾರತೀಶನು ಘಳಿಗೆಯೊಳು ಮುನ್ನೂರ ಅರವತ್ತು ಸುರ ಜಪಗಳ ತಾ ರಚಿಸುವನು

ಸರ್ವ ಜೀವರೊಳಿದ್ದು ಬೇಸರದೆ

ಕಾರುಣಿಕ ಅವರವರ ಸಾಧನ ಪೂರೈಸಿ ಭೂ ಸ್ವರ್ಗ ನರಕವ ಸೇರಿಸುವ

ಸರ್ವಜ್ಞ ಸಕಲೇಷ್ಟ ಪ್ರದಾಯಕನು//1//


ತಾಸಿಗೆ ಒಂಭೈನೂರು ಶ್ವಾಸೋಚ್ಚಾಸಗಳ ನಡೆಸುತಲಿ

ಚೇತನ ರಾಶಿಯೊಳು ಹಗಲಿರುಳು ಜಾಗೃತನಾಗಿ ನಿತ್ಯದಲಿ

ಈ ಸುಮನಸೋತ್ತಂಸ ಲೇಶ ಆಯಾಸವಿಲ್ಲದೆ ಪೋಷಿಸುತ

ಮೂಲೇಶನ ಅಂಘ್ರಿ ಸರೋಜ ಮೂಲದಲಿಪ್ಪ ಕಾಣಿಸದೆ//2//


ಅರಿವುದೊಂದು ಯಾಮದೊಳು ಶ್ವಾಸಗಳು ಎರಡು ಸಾವಿರದ ಏಳು ನೂರನು

ಶರ ಸಹಸ್ರದ ಮೇಲೆ ನಾನೂರು ಅಹವು ದ್ವಿತೀಯಕ್ಕೆ

ಮರಳಿ ಯಾಮತ್ರಯಕೆ ವಸು ಸಾವಿರದ ಮೇಲೆ ನೂರು ಎಣಿಕೆಯಲಿ

ಹನ್ನೆರೆಡು ತಾಸಿಗೆ ಹತ್ತು ಸಾವಿರದ ಎಂಟು ನೂರ ಅಹವು//3//


ಒಂದು ದಿನದೊಳಗೆ ಅನಿಳ ಇಪ್ಪ್ಪತ್ತೊಂದು ಸಾವಿರದ ಆರು ನೂರು

ಮುಕುಂದನಾಜ್ಞದಿ ಮಾಡಿ ಮಾಡಿಸಿ ಲೋಕಗಳ ಪೊರೆವನೆಂದು ಪವನನ ಪೊಗಳುತಿರು

ಎಂದೆಂದೂ ಮರೆಯದೆ ಈ ಮಹಿಮೆ ಸಂಕ್ರಂದನಾದ್ಯರಿಗುಂಟೆ

ನೋಡಲು ಸರ್ವ ಕಾಲದಲಿ//4//


ಮೂರು ಲಕ್ಷದ ಮೇಲೆ ವಿಂಶತಿ ಈರೆರೆಡು ಸಾವಿರವು ಪಕ್ಷಕೆ

ಆರು ಲಕ್ಷದ ಮೇಲೆ ನಾಲ್ವತ್ತೆಂಟು ಸಾವಿರವು ಮಾರುತನು ಮಾಸಕೆ ಜಪಿಸಿ

ಸಂಸಾರ ಸಾಗರದಿಂದ ಸುಜನರ ಪಾರುಗಾಣಿಸಿ

ಸಲಹುವನು ಬಹು ಭೋಗಗಳನಿತ್ತು//5//


ಎರಡು ತಿಂಗಳಿಗೆ ಅಹುದು ಋತು ಭೂ ಸುರರು ತಿಳಿವುದು

ಶ್ವಾಸ ಜಪ ಹನ್ನೆರಡು ಲಕ್ಷದ ಮೇಲೆ ತೊಂಭತ್ತಾರು ಸಹಸ್ರ

ಕರೆಸುವದು ಅಯನ ಅಹ್ವಯದಿ ಅರೆ ವರುಷ

ಮೂವತ್ತೆಂಟು ಲಕ್ಷ ಈ ಪರಿ ತಿಳಿವುದು ಎಂಭತ್ತೆಂಟು ಸಹಸ್ರ ಕೋವಿದರು//6//


ವರುಷಕೆ ಇದರ ಇಮ್ಮಡಿ ಜಪಂಗಳ ಗುರುವರಿಯ ತಾ ಮಾಡಿ ಮಾಡಿಸಿ

ದುರಿತಗಳ ಪರಿಹರಿಸುವನು ಚಿಂತಿಸುವ ಸಜ್ಜನರ

ಸುರ ವಿರೋಧಿಗಳೊಳಗೆ ನೆಲೆಸಿದ್ದು ಅರವಿದೂರ

ತಮ ಅಧಿಕಾರಿಗಳ ಇರವರಿತು ಸೋಹಂ ಉಪಾಸನೆ ಮಾಳ್ಪನು ಅವರಂತೆ//7//


ಇನಿತು ಉಪಾಸನೆ ಸರ್ವ ಜೀವರೊಳು ಅನಿಲದೇವನು ಮಾಡುತಿರೆ

ಚಿಂತನೆಯ ಮಾಡದೆ ಕಂಡ ನೀರೊಳು ಮುಳುಗಿ ನಿತ್ಯದಲಿ ಮನೆಯೊಳಗೆ ಕೃಷ್ಣಾಜಿನಾದಿ

ಆಸನದಿ ಕುಳಿತು ವಿಶಿಷ್ಟ ಬಹು ಸಜ್ಜನನು ಎನಿಸಿ

ಜಪ ಮಣಿಗಳ ಎಣಿಸಿದರೇನು ಬೇಸರದೆ//8//


ಓದನೋದಕವು ಎರಡು ತೇಜದೊಳು ಐದುವವು ಲಯ

ತದಭಿಮಾನಿಗಳಾದ ಶಿವ ಪವನರು ರಮಾಧೀನತ್ವ ಐದಿಹರು

ಈ ದಿವಿಜರ ಒಡಗೂಡಿ ಶ್ರೀ ಮಧುಸೂದನನ ಐದುವಳೆಂದರಿದು

ಆದರದಲಿ ಅನ್ನೋದಕವ ಕೊಡುತ ಉಣುತ ಸುಖಿಸುತಿರು//9//


ಜಾಲಿ ತೊಪ್ಪಲ ಅಜಾವಿಗಳು ಮೆದ್ದು ಆಲಯದಿ ಸ್ವೆಚ್ಚಾನುಸಾರದಿ

ಪಾಲಗರೆವ ಅಂದದಲಿ ಲಕ್ಷ್ಮೀ ರಮಣ ತನ್ನವರ ಕೀಳು ಕರ್ಮವ ಸ್ವೀಕರಿಸಿ

ತನ್ನ ಆಲಯದೊಳಿಟ್ಟು ಅವರ ಪೊರೆವ

ಕೃಪಾಳು ಕಾಮದ ಕೈರವದಳ ಶ್ಯಾಮ ಶ್ರೀರಾಮ//10//


ಶಶಿ ದಿವಾಕರ ಪಾವಕರೊಳಿಹ ಅಸಿತಸಿತಲೋಹಿತಗಳಲಿ

ಶಿವಸ್ವಸನ ಭಾರ್ಗವಿ ಮೂವರೊಳು ಶ್ರೀ ಕೃಷ್ಣ ಹಯವದನ ವಸುಧಿಪಾರ್ದನ

ತ್ರಿವೃತುಯೆನಿಸಿ ವಸುಮತಿಯೊಳು ಅನ್ನೋದಕ ಅನಳ ಪೆಸರಿನಿಂದಲಿ

ಸರ್ವ ಜೀವರ ಸಲಹುವನು ಕರುಣಿ//11//


ದೀಪ ಕರದಲಿ ಪಿಡಿದು ಕಾಣದೆ ಕೂಪದೊಳು ಬಿದ್ದಂತೆ

ವೇದ ಮಹೋಪನಿಷದ್ ಅರ್ಥಗಳ ನಿತ್ಯದಿ ಪೇಳುವವರೆಲ್ಲ

ಶ್ರೀ ಪವನಮುಖ ವಿನುತನ ಅಮಲ ಸುರೂಪಗಳ ವ್ಯಾಪಾರ ತಿಳಿಯದೆ

ಪಾಪ ಪುಣ್ಯಕೆ ಜೀವ ಕರ್ತೃ ಆಕರ್ತೃ ಹರಿಯೆಂಬ//12//


ಅನಿಲದೇವನು ವಾಗ್ಮನಃ ಮಯನು ಎನಿಸಿ ಪಾವಕ ವರುಣ

ಸಂಕ್ರಂದನ ಮುಖಾದ್ಯರೊಳಿದ್ದು ಭಗವದ್ರೂಪ ಗುಣಗಳನು

ನೆನೆನೆನೆದು ಉಚ್ಚರಿಸುತಲಿ ನಮ್ಮನು ಸದಾ ಸಂತೈಸುವನು

ಸನ್ಮುನಿ ಗಣ ಆರಾಧಿತ ಪದಾಂಬುಜ ಗೋಜ ಸುರರಾಜ//13//


ಪಾದವು ಎನಿಪವು ವಾಗ್ಮನಃಮಯ ಪಾದರೂಪ ದ್ವಯಗಳೊಳು

ಪ್ರಹ್ಲಾದ ಪೋಷಕ ಸಂಕರುಷಣಾಹ್ವಯದಿ ನೆಲೆಸಿದ್ದು

ವೇದ ಶಾಸ್ತ್ರ ಪುರಾಣಗಳ ಸಂವಾದ ರೂಪದಿ ಮನನಗೈವುತ

ಮೋದಮಯ ಸುಖವಿತ್ತು ಸಲಹುವ ಸರ್ವ ಸಜ್ಜನರ//14//


ಗಂಧವಹ ದಶ ದಿಶಗಳೊಳಗೆ ಅರವಿಂದ ಸೌರಭ ಪಸರಿಸುತ

ಘ್ರಾಣ ಇಂದ್ರಿಯಗಳಿಗೆ ಸುಖವನೀವುತ ಸಂಚರಿಸುವಂತೆ

ಇಂದಿರೇಶನ ಸುಗುಣಗಳ ದೈನಂದಿನದಿ ತುತಿಸುತ ಅನುಮೋದಿಸುತ

ಅಂಧಬಧಿರ ಸುಮೂಕನಂತಿರು ಮಂದ ಜನರೊಡನೆ//15//


ಶ್ರೀರಮಣನ ಅರಮನೆಯ ಪೂರ್ವ ದ್ವಾರದಲಿ ಇಹ ಸಂಜ್ಞಸೂರ್ಯಗ

ಭಾರತೀಪತಿ ಪ್ರಾಣನ ಒಳಗಿಹ ಲಕುಮಿ ನಾರಾಯಣನ ಸೇರಿ ಮನುಜೋತ್ತಮರು

ಸರ್ವ ಶರೀರಗತ ನಾರಾಯಣನ ಅವತಾರ ಗುಣಗಳ ತುತಿಸುತಲಿ

ಮೋದಿಪರು ಮುಕ್ತಿಯಲಿ//16//


ಪ್ರಣವ ಪ್ರತಿಪಾದ್ಯನ ಪುರದ ದಕ್ಷಿಣ ಕವಾಟದಲಿಪ್ಪ

ಶಶಿ ರೋಹಿಣಿಗತ ವ್ಯಾನಸ್ಥ ಕೃತಿ ಪ್ರದ್ಯುಮ್ನ ರೂಪವನು

ಗುಣಗಳನು ಸಂಸ್ತುತಿಸುತಲಿ ಪಿತೃ ಗಣ ಗಧಾಧರನ ಅತಿವಿಮಲ ಪಟ್ಟಣದ ಒಳಗೆ

ಸ್ವೇಚ್ಚಾನುಸಾರದಿ ಸಂಚರಿಸುತಿಹರು//17//


ಅಮಿತ ವಿಕ್ರಮನ ಆಲಯದ ಪಶ್ಚಿಮ ಕವಾಟದಿ ಸತಿಸಹಿತ ಸಂಭ್ರಮದಿ

ಭಗವದ್ಗುಣಗಳನೆ ಪೊಗಳುತಲೇ ಮೋದಿಸುವ

ಸುಮನಸಾಸ್ಯನೊಳಿಪ್ಪ ಅಪಾನಗ ದಮನ ಸಂಕರುಷಣನ

ನಿಹ ಹೃತ್ಕಮಲದೊಳು ಧೇನಿಸುವ ಋಷಿಗಣವ ಐದಿ ಸುಖಿಸುವರು//18//


ಸ್ವರಮಣನ ಗುಣ ರೂಪ ಸಪ್ತಸ್ವರಗಳಿಂದಲಿ ಪಾಡುತಿಹ

ತುಂಬುರನೆ ಮೊದಲಾದ ಅಖಿಳ ಗಂಧರ್ವರು

ರಮಾಪತಿಯ ಪುರದ ಉತ್ತರ ಬಾಗಿಲಧಿಪ ಸುರಪ ಶಚಿಗ ಸಮಾನ ವಾಯುಗ

ಹರಿನ್ಮಣಿನಿಭ ಶಾಂತಿಪತಿ ಅನಿರುದ್ಧನ ಐದುವರು//19//


ಗರುಡ ಶೇಷ ಅಮರ ಇಂದ್ರಮುಖ ಪುಷ್ಕರನೆ ಕಡೆಯಾಗಿಪ್ಪ ಅಖಿಳ ನಿರ್ಜನರು

ಊರ್ಧ್ವ ದ್ವಾರಗತ ಭಾರತಿ ಉದಾನದೊಳು ಮೆರೆವ ಮಾಯಾ ವಾಸುದೇವನ

ಪರಮ ಮಂಗಳ ಅವಯವಗಳ ಮಂದಿರವನು ಐದಿ

ಸದಾ ಮುಕುಂದನ ನೋಡಿ ಸುಖಿಸುವರು//20//


ದ್ವಾರ ಪಂಚಕ ಪಾಲರೊಳಗಿಹ ಭಾರತೀ ಪ್ರಾಣಾಂತರಾತ್ಮಕ

ಮಾರಮಣನ ಐ ರೂಪ ತತ್ತತ್ದ್ವಾರದಲಿ ಬಪ್ಪ

ಮೂರೆರೆಡು ವಿಧ ಮುಕ್ತಿ ಯೋಗ್ಯರ ತಾರತಮ್ಯವನರಿತು ಅವರ

ಕಂಸಾರಿ ಸಂಸಾರಾಬ್ಧಿ ದಾಟಿಸಿ ಮುಕ್ತರಣ ಮಾಳ್ಪ//21//


ಬೆಳಗಿದ ಹೂಜಿಯು ನೋಳ್ಪರಿಗೆ ಥಳಥಳಿಸುತಲಿ ಕಂಗೊಳಿಸುವ ಅಂದದಿ

ತೊಳೆದು ದೇಹವ ನಾಮ ಮುದ್ರೆಗಳಿಂದ ಅಲಂಕರಿಸಿ ಒಲಿಸಿ

ನಿತ್ಯ ಕುತರ್ಕ ಯುಕ್ತಿಗಳ ಅಲವಬೋಧರ ಶಾಸ್ತ್ರ ಮರ್ಮವ ತಿಳಿಯದಿಹ ನರ

ಬರಿದೆ ಇದರೊಳು ಶಂಕಿಸಿದರೇನು//22//


ಉದಧಿಯೊಳು ಊರ್ವಿಗಳು ತೋರ್ಪಂದದಲಿ ಹಂಸೋದ್ಗೀಥ ಹರಿ

ಹಯವದನ ಕೃಷ್ಣಾದಿ ಅಮಿತ ಅವತಾರಗಳು ನಿತ್ಯದಲಿ

ಪದುಮನಾಭನೊಳು ಇರುತಿಹವು ಸರ್ವದ ಸಮಸ್ತ ಪ್ರಾಣಿಗಳ ಚಿತ್ಹೃದಯಗತ ರೂಪಗಳು

ಅವ್ಯವಧಾನದಲಿ ಬಿಡದೆ//23//


ಶರಧಿಯೊಳು ಮಕರಾದಿ ಜೀವರು ಇರುಳು ಹಗಲು ಏಕ ಪ್ರಕಾರದಿ

ಚರಿಸುತ ಅನುಮೋದಿಸುತ ಇಪ್ಪಂದದಿ

ಜಗತ್ರಯವು ಇರುತಿಹುದು ಜಗದೀಶನುದರದಿ

ಕರೆಸುವುದು ಪ್ರತಿಬಿಂಬ ನಾಮದಿ ಧರಿಸಿಹುದು ಹರಿ ನಾಮ ರೂಪಂಗಳನು ಅನವರತ//24//


ಜನನಿ ಸೌಷ್ಠ ಪದಾರ್ಥಗಳು ಭೋಜನವ ಮಾಡಲು ಗರ್ಭಗತ ಶಿಶು ದಿನದಿನದಿ

ಅಭಿವೃದ್ಧಿಯೈದುವ ತೆರದಿ

ಜೀವರಿಗೆ ಪದುಮನಾಭನು ಸರ್ವ ರಸ ಉಂಡುಣಿಸಿ ಸಂರಕ್ಷಿಸುವ

ಜಾಹ್ನವಿ ಜನಕ ಜನ್ಮಾದಿ ಅಖಿಳ ದೋಷ ವಿದೂರ ಗಂಭೀರ//25//


ಆಶೆಗೆ ಒಳಗಾದವನು ಜನರಿಗೆ ದಾಸನೆನಿಸುವ

ಆಶೆಯನು ನಿಜ ದಾಸಗೆ ಐದಿಹ ಪುಂಸಗೆ ಎಲ್ಲರು ದಾಸರೆನಿಸುವರು

ಶ್ರೀಶನ ಅಂಘ್ರಿ ಸರೋಜಯುಗಳ ನಿರಾಶೆಯಿಂದಲಿ ಭಜಿಸೆ ಒಲಿದು

ರಮಾ ಸಹಿತ ತನ್ನನೆ ಕೊಡುವ ಕರುಣಾ ಸಮುದ್ರ ಹರಿ//26//


ದ್ಯುನದಿ ಆದ್ಯಂತವನು ಕಾಣದೆ ಮನುಜನು ಏಕತ್ರದಲಿ ತಾ ಮಜ್ಜನವ ಗೈಯೆ

ಸಮಸ್ತ ದೋಷದಿ ಮುಕ್ತನಹ ತೆರದಿ

ಅನಘನ ಅಮಲಾನಂತನಂತ ಸುಗುಣಗಳೊಳಗೆ ಒಂದೇ ಗುಣ

ಉಪಾಸನೆಯಗೈವ ಮಹಾತ್ಮ ಧನ್ಯ ಕೃತಾರ್ಥನು ಎನಿಸುವನು//27//


ವಾಸುದೇವನು ಕರೆಸುವನು ಕಾರ್ಪಾಸ ನಾಮದಿ ಸಂಕರುಷಣನು ವಾಸವಾಗಿಹ ತೂಲದೊಳು

ತಂತುಗನು ಪ್ರದ್ಯುಮ್ನ

ವಾಸ ರೂಪ ಅನಿರುದ್ಧ ದೇವನು

ಭೂಷಣನು ತಾನಾಗಿ ತೋರ್ಪ ಪರೇಶ ನಾರಾಯಣನು ಸರ್ವದ ಮಾನ್ಯ ಮಾನದನು//28//


ಲಲನೆಯಿಂದೊಡಗೂಡಿ ಚೈಲಗಳೊಳಗೆ ಓತಪ್ರೋತ ರೂಪದಿ

ನೆಲೆಸಿಹನು ಚತುರಾತ್ಮಕ ಜಗನ್ನಾಥ ವಿಠಲನು

ಛಳಿ ಬಿಸಿಲು ಮಳೆ ಗಾಳಿಯಿಂದ ಅರ ಘಳಿಗೆ ಬಿಡದಲೇ ಕಾವನು ಎಂದರಿದು

ಇಳೆಯೊಳು ಅರ್ಚಿಸುತಿರು ಸದಾ ಸರ್ವಾಂತರಾತ್ಮಕನ//29//


//ಇತಿ ಶ್ರೀ ಶ್ವಾಸ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು

ಶ್ರೀ ಹರಿಕಥಾಮೃತಸಾರ - 14

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಶ್ರೀ ಪಿತೃಗಣ ಸಂಧಿ//


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಕೃತಿರಮಣ ಪ್ರದ್ಯುಮ್ನ ವಸುದೇವತೆಗಳು ಅಹಂಕಾರ ತ್ರಯದೊಳು

ಚತುರವಿಂಶತಿ ರೂಪದಿಂದಲಿ ಭೋಜ್ಯನೆನಿಸುವನು

ಹುತವಹಾಕ್ಷ ಅಂತರ್ಗತ ಜಯಾಪತಿಯು ತಾನೇ ಮೂರಧಿಕ ತ್ರಿಂಶತಿ ಸುರೂಪದಿ

ಭೋಕ್ತ್ರು ಎನಿಸುವ ಭೋಕ್ತ್ರುಗಳೊಳಿದ್ದು//1//


ಆರಧಿಕ ಮೂವತ್ತು ರೂಪದಿ ವಾರಿಜಾಪ್ತನೊಳು ಇರುತಿಹನು

ಮಾಯಾರಮಣ ಶ್ರೀ ವಾಸುದೇವನು ಕಾಲನಾಮದಲಿ

ಮೂರುವಿಧ ಪಿತೃಗಳೊಳು ವಸು ತ್ರಿಪುರಾರಿ ಆದಿತ್ಯಗ ಅನಿರುದ್ಧನು

ತೋರಿಕೊಳ್ಳದೆ ಕರ್ತೃ ಕರ್ಮ ಕ್ರಿಯನು ಎನಿಸಿಕೊಂಬ//2//


ಸ್ವವಶ ನಾರಾಯಣನು ತಾ ಷಣ್ಣವತಿ ನಾಮದಿ ಕರೆಸುತಲಿ

ವಸು ಶಿವ ದಿವಾಕರ ಕರ್ತೃ ಕರ್ಮ ಕ್ರಿಯೆಗಳೊಳಗಿದ್ದು

ನೆವನವಿಲ್ಲದೆ ನಿತ್ಯದಲಿ ತನ್ನವರು ಮಾಡುವ ಸೇವೆ ಕೈಕೊಂಡು

ಅವರ ಪಿತೃಗಳಿಗೀವ ಅನಂತಾನಂತ ಸುಖಗಳನು//3//


ತಂತು ಪಟದಂದದಲಿ ಲಕ್ಷ್ಮೀಕಾಂತ ಪಂಚಾತ್ಮಕನು ಎನಿಸಿ

ವಸು ಕಂತು ಹರ ರವಿ ಕರ್ತೃಗಳೊಳಿದ್ದು

ಅನವರತ ತನ್ನ ಚಿಂತಿಸುತ ಸಂತರನು ಗುರು ಮಧ್ವಾಂತರಾತ್ಮಕ ಸಂತೈಸುವನು

ಸಂತತ ಅಖಿಳಾರ್ಥಗಳ ಪಾಲಿಸಿ ಇಹ ಪರಂಗಳಲಿ//4//


ತಂದೆ ತಾಯ್ಗಳ ಪ್ರೀತಿಗೋಸುಗ ನಿಂದ್ಯ ಕರ್ಮವ ತೊರೆದು

ವಿಹಿತಗಳು ಒಂದು ಮೀರದೆ ಸಾಂಗ ಕರ್ಮಗಳನು ಆಚರಿಸುವವರು

ವಂದನೀಯರಾಗಿ ಇಳೆಯೊಳಗೆ ದೈನಂದಿನದಿ ದೈಶಿಕ ದೈಹಿಕ ಸುಖದಿಂದ ಬಾಳ್ವರು

ಬಹು ದಿವಸದಲಿ ಕೀರ್ತಿಯುತರಾಗಿ//5//


ಅಂಶಿ ಅಂಶ ಅಂತರ್ಗತತ್ರಯ ಹಂಸವಾಹನ ಮುಖ್ಯ ದಿವಿಜರ ಅಸಂಶಯದಿ ತಿಳಿದು

ಅಂತರಾತ್ಮಕ ಶ್ರೀ ಜನಾರ್ಧನನ ಸಂಸ್ಮರಣೆ ಪೂರ್ವಕದಿ

ಷಡಾಧಿಕ ತ್ರಿಂಶತಿತ್ರಯ ರೂಪವರಿತು

ವಿಪಾಂಸಗನ ಪೂಜಿಸುವರು ಅವರೇ ಕೃತಾರ್ಥರು ಎನಿಸುವರು//6//


ಮೂರುವರೆ ಸಾವಿರದ ಮೇಲೆ ಅರೆ ನೂರೈದು ರೂಪದಿ ಜನಾರ್ಧನ

ಸೂರಿಗಳು ಮಾಡುವ ಸಮಾರಾಧನೆಗೆ ವಿಘ್ನಗಳು ಬಾರದಂತೆ

ಬಹುಪ್ರಕಾರ ಖರಾರಿ ಕಾಪಾಡುವನು ಸರ್ವ ಶರೀರಗಳೊಳಿದ್ದು

ಅವರವರ ಪೆಸರಿಂದ ಕರೆಸುತಲಿ//7//


ಜಯ ಜಯ ಜಯಾಕಾಂತ ದತ್ತಾತ್ರಯ ಕಪಿಲ ಮಹಿದಾಸ ಭಕ್ತಪ್ರಿಯ

ಪುರಾತನ ಪುರುಷ ಪೂರ್ಣಾನಂದ ಮಾನಘನ

ಹಯವದನ ಹರಿ ಹಂಸ ಲೋಕತ್ರಯ ವಿಲಕ್ಷಣ

ನಿಖಿಳ ಜಗದಾಶ್ರಯ ನಿರಾಮಯ ದಯದಿ ಸಂತೈಸೆಂದು ಪ್ರಾರ್ಥಿಸುವನು//8//


ಷಣ್ಣವತಿಯೆಂಬ ಅಕ್ಷರ ಈಡ್ಯನು ಷಣ್ಣವತಿ ನಾಮದಲಿ ಕರೆಸುತ

ತನ್ನವರು ಸದ್ಭಕ್ತಿ ಪೂರ್ವಕದಿಂದ ಮಾಡುತಿಹ ಪುಣ್ಯ ಕರ್ಮವ ಸ್ವೀಕರಿಸಿ

ಕಾರುಣ್ಯ ಸಾಗರ ಸಲಹುವನು

ಬ್ರಹ್ಮಣ್ಯದೇವ ಭವಾಬ್ಧಿಪೋತ ಬಹು ಪ್ರಕಾರದಲಿ//9//


ದೇಹಗಳ ಕೊಡುವವನು ಅವರವರ ಅಹರಗಳ ಕೊಡದಿಹನೆ

ಸುಮನಸ ಮಹಿತ ಮಂಗಳ ಚರಿತ ಸದ್ಗುಣ ಭರಿತನು

ಅನವರತ ಅಹಿಕ ಪಾರತ್ರಿಕ ಸುಖಪ್ರದ ವಹಿಸಿ ಬೆನ್ನಿಲಿ ಬೆಟ್ಟವ

ಅಮೃತವ ದ್ರುಹಿಣ ಮೊದಲಾದವರಿಗೆ ಉಣಿಸಿದ ಮುರಿದ ನಹಿತರನ//10//


ದ್ರುಹಿಣ ಮೊದಲಾದ ಅಮರರಿಗೆ ಸನ್ಮಹಿತ ಮಾಯಾರಮಣ

ತಾನೇ ಸ್ವಹನೆನಿಸಿ ಸಂತೃಪ್ತಿಪಡಿಸುವ ಸರ್ವಕಾಲದಲಿ

ಪ್ರಹಿತ ಸಂಕರುಷಣನು ಪಿತೃಗಳಿಗೆ ಅಹರನೆನಿಪ ಸ್ವಧಾಖ್ಯರೂಪದಿ

ಮಹಿಜ ಫಲ ತೃಣ ಪೆಸರಿನಲಿ ಪ್ರದ್ಯುಮ್ನ ಅನಿರುದ್ಧ//11//


ಅನ್ನನೆನಿಸುವ ನೃಪಶುಗಳಿಗೆ ಹಿರಣ್ಯ ಗರ್ಭಾಂಡದೊಳು

ಸಂತತ ತನ್ನನ ಈಪರಿಯಿಂದ ಉಪಾಸನೆಗೈವ ಭಕ್ತರನ ಬನ್ನಬಡಿಸದೆ

ಭವ ಸಮುದ್ರ ಮಹ ಉನ್ನತಿಯ ದಾಟಿಸಿ

ಚತುರ್ವಿಧ ಅನ್ನಮಯನು ಆತ್ಮ ಪ್ರದರ್ಶನ ಸುಖವನೀವ ಹರಿ//12//


ಮನವಚನ ಕಾಯಗಳ ದೆಶೆಯಿಂದ ಅನುದಿನದಿ ಬಿಡದೆ ಆಚರಿಸುತಿಪ್ಪ

ಅನುಚಿತೋಚಿತ ಕರ್ಮಗಳ ಸದ್ಭಕ್ತಿ ಪೂರ್ವಕದಿ ಅನಿಳ ದೇವನೊಳಿಪ್ಪ

ನಾರಾಯಣಗೆ ಇದು ಅನ್ನವೆಂದು ಕೃಷ್ಣಾರ್ಪಣವೆನುತ ಕೊಡು

ಸ್ವೀಕರಿಸಿ ಸಂತೈಪ ಕರುಣಾಳು//13//


ಏಳು ವಿಧ ಅನ್ನ ಪ್ರಕರಣವ ಕೇಳಿ ಕೋವಿದರ ಆಸ್ಯದಿಂದಲಿ

ಆಲಸವ ಮಾಡದಲೆ ಅನಿರುದ್ಧಾದಿ ರೂಪಗಳ

ಕಾಲಕಾಲದಿ ನೆನೆದು ಪೂಜಿಸು ಸ್ಥೂಲ ಮತಿಗಳಿಗೆ ಇದನು ಪೇಳದೆ

ಶ್ರೀ ಲಕುಮಿ ವಲ್ಲಭನೆ ಅನ್ನಾದನ್ನಾದನು//14//


ಎಂದರಿದು ಸಪ್ತಾನ್ನಗಳ ದೈನಂದಿನದಿ ಮರೆಯದೆ

ಸದಾ ಗೋವಿಂದಗೆ ಅರ್ಪಿಸು ನಿರ್ಭಯದಿ ಮಹಾಯಜ್ಞವು ಇದೆಂದು

ಇಂದಿರೇಶನು ಸ್ವೀಕರಿಸಿ ದಯದಿಂದ ಬೇಡಿಸಿಕೊಳದೆ

ತವಕದಿ ತಂದು ಕೊಡುವನು ಪರಮ ಮಂಗಳ ತನ್ನ ದಾಸರಿಗೆ//15//


ಸೂಜಿ ಕರದಲಿ ಪಿಡಿದು ಸಮರವ ನಾ ಜಯಿಸುವೆನು ಎಂಬ ನರನಂತೆ

ಈ ಜಗತ್ತಿನೊಳು ಉಳ್ಳ ಅಜ್ಞಾನಿಗಳು ನಿತ್ಯದಲಿ

ಶ್ರೀ ಜಗತ್ಪತಿ ಚರಣ ಯುಗಳ ಸರೋಜ ಭಕ್ತಿ ಜ್ಞಾನ ಪೂರ್ವಕ ಪೂಜಿಸದೆ

ಧರ್ಮಾರ್ಥ ಕಾಮವ ಬಯಸಿ ಬಳಲುವರು//16//


ಶಕಟ ಭಂಜನ ಸಕಲ ಜೀವರ ನಿಕಟಗನು ತಾನಾಗಿ

ಲೋಕಕೆ ಪ್ರಕಟನಾಗದೆ ಸಕಲ ಕರ್ಮವ ಮಾಡಿ ಮಾಡಿಸುತ

ಅಕುಟಿಲಾತ್ಮಕ ಭಕುತ ಜನರಿಗೆ ಸುಖದನೆನಿಸುವ ಸರ್ವಕಾಲದಿ

ಅಕಟಕಟ ಈತನ ಮಹಾ ಮಹಿಮೆಗಳಿಗೆ ಏನೆಂಬೆ//17//


ಶ್ರೀ ಲಕುಮಿವಲ್ಲಭನು ವೈಕುಂಠ ಆಲಯದಿ ಪ್ರಣವ ಪ್ರಕೃತಿ

ಕೀಲಾಲಜಾಸನ ಮುಖ್ಯ ಚೇತನರೊಳಗೆ ನೆಲೆಸಿದ್ದು

ಮೂಲ ಕಾರಣಾoಶಿ ನಾಮದಿ ಲೀಲೆಗೈಸುತ ತೋರಿ ಕೊಳ್ಳದೆ

ಪಾಲಿನೊಳು ಘೃತವಿದ್ದ ತೆರದಂತೆ ಇಪ್ಪ ತ್ರಿಸ್ಥಳದಿ//18//


ಮೂರು ಯುಗದಲಿ ಮೂಲ ರೂಪನು ಸೂರಿಗಳ ಸಂತೈಸಿ

ದಿತಿಜ ಕುಮಾರಕರ ಸಂಹರಿಸಿ ಧರ್ಮವನು ಉಳುಹಬೇಕೆಂದು

ಕಾರುಣಿಕ ಭೂಮಿಯೊಳು ನಿಜ ಪರಿವಾರ ಸಹಿತ ಅವತರಿಸಿ

ಬಹು ವಿಧ ತೋರಿದನು ನರವತ್ ಪ್ರವೃತ್ತಿಯ ಸಕಲ ಚೇತನಕೆ//19//


ಕಾರಣಾಹ್ವಯ ಪ್ರಕೃತಿಯೊಳಗಿದ್ದು ಆರಧಿಕ ಹದಿನೆಂಟು ತತ್ತ್ವವ

ತಾ ರಚಿಸಿ ತದ್ರೂಪ ತನ್ನಾಮಗಳನೆ ಧರಿಸಿ

ನೀರಜ ಭವಾಂಡವನು ನಿರ್ಮಿಸಿ ಕಾರುಣಿಕ ಕಾರ್ಯಾಖ್ಯ ರೂಪದಿ ತೋರುವನು

ಸಹಜಾಹಿತಾಚಲಗಳಲಿ ಪ್ರತಿದಿನದಿ//20//


ಜೀವರಂತರ್ಯಾಮಿ ಅಂಶಿ ಕಳೇವರಗಳೊಳಗೆ ಇಂದ್ರಿಯಗಳಲಿ

ತಾ ವಿಹಾರವ ಗೈಯುತ ಅನುದಿನ ಅಂಶ ನಾಮದಲಿ

ಈ ವಿಷಯಗಳನುಂಡು ಸುಖಮಯವೀವ ಸುಖ ಸಂಸಾರ ದುಃಖವ

ದೇವ ಮಾನವ ದಾನವರಿಗೆ ಅವಿರತ ಸುಧಾಮ ಸಖ//21//


ದೇಶ ದೇಶವ ಸುತ್ತಿ ದೇಹಾಯಾಸಗೊಳಿಸದೆ ಕಾಮ್ಯ ಕರ್ಮ ದುರಾಶೆಗೊಳಗಾಗದಲೆ

ಬ್ರಹ್ಮಾದಿ ಅಖಿಳ ಚೇತನರು

ಭೂ ಸಲಿಲ ಪಾವಕ ಸಮೀರ ಆಕಾಶ ಮೊದಲಾದ ಅಖಿಳ ತತ್ತ್ವ

ಪರೇಶಗೆ ಇವು ಅಧಿಷ್ಠಾನವು ಎಂದರಿತು ಅರ್ಚಿಸು ಅನವರತ//22//


ಎರಡು ವಿಧದಲಿ ಲೋಕದೊಳು ಜೀವರುಗಳು ಇಪ್ಪರು ಸಂತತ

ಕ್ಷರಾಕ್ಷರ ವಿಲಿಂಗ ಸಲಿಂಗ ಸೃಜ್ಯ ಅಸೃಜ್ಯ ಭೇದದಲಿ ಕರೆಸುವದು

ಜಡ ಪ್ರಕೃತಿ ಪ್ರಣವಾಕ್ಷರ ಮಹದಣು ಕಾಲ ನಾಮದಿ

ಹರಿ ಸಹಿತ ಭೇದಗಳ ಪಂಚಕ ಸ್ಮರಿಸು ಸರ್ವತ್ರ//23//


ಜೀವ ಜೀವರ ಭೇದ ಜಡ ಜಡ ಜೀವ ಜಡಗಳ ಭೇದ

ಪರಮನು ಜೀವ ಜಡ ಸುವಿಲಕ್ಷಣನು ಎಂದರಿದು ನಿತ್ಯದಲಿ

ಈ ವಿರಿಂಚಿ ಅಂಡದೊಳು ಎಲ್ಲ ಟಾವಿನಲಿ ತಿಳಿದೈದು ಭೇದ

ಕಳೇವರದೊಳರಿತು ಅಚ್ಯುತನ ಪದವೈದು ಶೀಘ್ರದಲಿ//24//


ಆದಿಯಲ್ಲಿ ಕ್ಷರಾಕ್ಷರಾಖ್ಯ ದ್ವೇಧ ಅಕ್ಷರದೊಳು ರಮಾ ಮಧುಸೂದನರು

ಕ್ಷರಗಳೊಳು ಪ್ರಕೃತಿ ಪ್ರಣವ ಕಾಲಗಳು ವೇದ ಮುಖ್ಯ ತೃಣಾoತ ಜೀವರ

ಭೇದಗಳನರಿತು ಈ ರಹಸ್ಯವ ಭೋದಿಸದೇ ಮಂದರಿಗೆ

ಸರ್ವತ್ರದಲಿ ಚಿಂತಿಪುದು//25//


ದೀಪದಿಂ ದೀಪಗಳು ಪೊರಮಟ್ಟು ಆಪಣ ಆಲಯಗಳ ತಿಮಿರಗಳ ತಾ ಪರಿಹರಗೈಸಿ

ತದ್ಗತ ಪದಾರ್ಥ ತೋರ್ಪಂತೆ

ಸೌಪರಣಿ ವರವಹನು ತಾ ಬಹು ರೂಪ ನಾಮದಿ ಎಲ್ಲ ಕಡೆಯಲಿ ವ್ಯಾಪಿಸಿದ್ದು

ಯಥೇಷ್ಟ ಮಹಿಮೆಯ ತೋರ್ಪ ತಿಳಿಸದಲೆ//26//


ನಳಿನ ಮಿತ್ರಗೆ ಇಂದ್ರಧನು ಪ್ರತಿ ಫಲಿಸುವಂತೆ

ಜಗತ್ರಯವು ಕಂಗೊಳಿಪುದು ಅಣು ಉಪಾಧಿಯಲಿ ಪ್ರತಿಬಿಂಬ ಅಹ್ವಯದಿ ಹರಿಗೆ

ತಿಳಿಯೆ ತ್ರಿಕಕುದ್ಧಾಮನ ಅತಿ ಮಂಗಳ ಸುರೂಪವ

ಸರ್ವ ಟಾವಿಲಿ ಪೊಳೆವ ಹೃದಯಕೆ ಪ್ರತಿದಿವಸ ಪ್ರಹ್ಲಾದ ಪೋಷಕನು//27//


ರಸ ವಿಶೇಷದೊಳು ಅತಿ ವಿಮಲಾ ಸಿತವಸನ ತೋಯಿಸಿ ಅಗ್ನಿಯೊಳಗಿಡೆ

ಪಸರಿಸುವುದು ಪ್ರಕಾಶ ನಸಗುಂದದಲೆ ಸರ್ವತ್ರ

ತ್ರಿಶಿರ ದೂಷಣ ವೈರಿ ಭಕ್ತಿ ಸುರಸದಿ ತೋಯ್ದ ಮಹಾತ್ಮರನು

ಬಾಧಿಸವು ಭವದೊಳಗೆ ಇದ್ದರೆಯು ಸರಿ ದುರಿತ ರಾಶಿಗಳು//28//


ವಾರಿನಿಧಿಯೊಳಗುಳ್ಳ ಅಖಿಳ ನದಿಗಳು ಬೇರೆ ಬೇರೆ ನಿರಂತರದಿ ವಿಹಾರಗೈಯುತ

ಪರಮ ಮೋದದಲಿಪ್ಪ ತೆರದಂತೆ

ಮೂರು ಗುಣಗಳ ಮಾನಿನಿಯೆನಿಸುವ ಶ್ರೀ ರಮಾ ರೂಪಗಳು ಹರಿಯಲಿ ತೋರಿತಿಪ್ಪವು

ಸರ್ವ ಕಾಲದಿ ಸಮರಹಿತವೆನಿಸಿ//29//


ಕೋಕನದ ಸಖನ ಉದಯ ಘೋಕಾಲೋಕನಕೆ ಸೊಗಸದಿರೆ

ಭಾಸ್ಕರ ತಾ ಕಳಂಕನೆ? ಈ ಕೃತೀಪತಿ ಜಗನ್ನಾಥನಿರೆ

ಸ್ವೀಕರಿಸಿ ಸುಖಪಡಲು ಅರಿಯದ ಅವಿವೇಕಿಗಳು ನಿಂದಿಸಿದರೆ ಏನಹುದು

ಈ ಕವಿತ್ವವ ಕೇಳಿ ಸುಖಪಡದಿಹರೆ ಕೋವಿದರು//30//


ಚೇತನಾಚೇತನಗಳಲಿ ಗುರು ಮಾತರಿಶ್ವಾಂತರ್ಗತ ಜಗನ್ನಾಥ ವಿಠಲ

ನಿರಂತರದಿ ವ್ಯಾಪಿಸಿ ತಿಳಿಸಿ ಕೊಳ್ಳದಲೇ

ಕಾತರವ ಪುಟ್ಟಿಸಿ ವಿಷಯದಲಿ ಧಾನರ ಮೋಹಿಸುವ

ನಿರ್ಭೀತ ನಿತ್ಯಾನಂದಮಯ ನಿರ್ದೋಷ ನಿರವದ್ಯ//31//


//ಇತಿ ಶ್ರೀ ಪಿತೃಗಣ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು