Monday, January 21, 2013

ಶ್ರೀ ಹರಿಕಥಾಮೃತಸಾರ - 18

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಶ್ರೀ ಬಿಂಬಾಪರೋಕ್ಷ ಸಂಧಿ//


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಮುಕ್ತ ಬಿಂಬನು ತುರಿಯ ಜೀವನ್ಮುಕ್ತ ಬಿಂಬನು ವಿಶ್ವ

ಶ್ರುತಿ ಸಂಸಕ್ತ ಬಿಂಬನು ತೈಜಸನು ಅಸೃಜ್ಯರಿಗೆ ಪ್ರಾಜ್ಞ

ಶಕ್ತನಾದರು ಸರಿಯೆ ಸರ್ವ ಉದ್ರಕ್ತ ಮಹಿಮನು

ದುಃಖ ಸುಖಗಳ ವಕ್ತೃ ಮಾಡುತಲಿಪ್ಪ ಕಲ್ಪಾಂತದಲಿ ಬಪ್ಪರಿಗೆ//1//


ಅಣ್ಣ ನಾಮಕ ಪ್ರಕೃತಿಯೊಳಗೆ ಅಚ್ಚಿನ್ನನು ಆಗಿಹ ಪ್ರಾಜ್ಞನಾಮದಿ

ಸೊನ್ನ ಒಡಲ ಮೊದಲಾದ ಅವರೊಳು ಅನ್ನಾದ ತೈಜಸನು

ಅನ್ನದ ಅಂಬುದ ನಾಭ ವಿಶ್ವನು ಭಿನ್ನ ನಾಮ ಕ್ರಿಯೆಗಳಿಂದಲಿ

ತನ್ನೊಳಗೆ ತಾ ರಮಿಪ ಪೂರ್ಣಾನಂದ ಜ್ಞಾನಮಯ//2//


ಬೂದಿಯೊಳಗೆ ಅಡಗಿಪ್ಪ ಅನಳನ ಉಪಾದಿ ಚೇತನ ಪ್ರಕೃತಿಯೊಳು

ಅನ್ನಾದ ಅನ್ನಾಹ್ವಯದಿ ಕರೆಸುವ ಬ್ರಹ್ಮ ಶಿವ ರೂಪಿ

ಓದನ ಪ್ರದ ವಿಷ್ಣು ಪರಮ ಆಹ್ಲಾದವ ಈವುತ

ತೃಪ್ತಿ ಬಡಿಸುವ ಅಗಾಧ ಮಹಿಮನ ಚಿತ್ರ ಕರ್ಮವನು ಆವ ಬಣ್ಣಿಸುವ//3//


ನಾದ ಭೋಜನ ಶಬ್ದದೊಳು ಬಿಂಬು ಓದನ ಉದಕದೊಳಗೆ

ಘೋಷ ಅನುವಾದದೊಳು ಶಾಂತಾಖ್ಯ ಜಠರಾಗ್ನಿಯೊಳಗೆ ಇರುತಿಪ್ಪ

ವೈದಿಕ ಸುಶಬ್ದದೊಳು ಪುತ್ರ ಸಹೋದರ ಅನುಗರೊಳು ಅತಿ ಶಾಂತನ ಪಾದ ಕಮಲ

ಅನವರತ ಚಿಂತಿಸು ಈ ಪರಿಯಲಿಂದ//4//


ವೇದ ಮಾನಿ ರಮಾ ಅನುಪಾಸ್ಯ ಗುಣ ಉದಧಿ ಗುಣ ತ್ರಯ ವಿವರ್ಜಿತ

ಸ್ವೋದರಸ್ಥಿತ ನಿಖಿಳ ಬ್ರಹ್ಮಾಂಡ ಆದಿ ವಿಲಕ್ಷಣನು

ಸಾಧು ಸಮ್ಮತವೆನಿಸುತಿಹ ನಿಷುಸೀದ ಗಣಪತಿಯೆಂಬ ಶ್ರುತಿ ಪ್ರತಿಪಾದಿಸುವುದು

ಅನವರತ ಅವನ ಗುಣ ಪ್ರಾಂತ ಗಾಣದಲೆ//5//


ಕರೆಸುವನು ಮಾಯಾ ರಮಣ ತಾ ಪುರುಷ ರೂಪದಿ ತ್ರಿಸ್ಥಳಗಳೊಳು

ಪರಮ ಸತ್ಪುರುಷಾರ್ಥದ ಮಹತ್ತತ್ವದೊಳಗಿದ್ದು

ಸರಸಿಜ ಭವಾಂಡ ಸ್ಥಿತ ಸ್ತ್ರೀ ಪುರುಷ ತನ್ಮಾತ್ರಗಳ

ಏಕೋತ್ತರ ದಶ ಇಂದ್ರಿಯಗಳ ಮಹಾ ಭೂತಗಳ ನಿರ್ಮಿಸಿದ//6//


ಈ ಶರೀರಗ ಪುರುಷ ತ್ರಿ ಗುಣದಿ ಸ್ತ್ರೀ ಸಹಿತ ತಾನಿದ್ದು

ಜೀವರಿಗೆ ಆಶೆ ಲೋಭ ಅಜ್ಞಾನ ಮದ ಮತ್ಸರ ಕುಮೋಹ ಕ್ಷುಧ

ಹಾಸ ಹರ್ಷ ಸುಷುಪ್ತಿ ಸ್ವಪ್ನ ಪಿಪಾಸ ಜಾಗ್ರತಿ ಜನ್ಮ ಸ್ಥಿತಿ ಮೃತಿ

ದೋಷ ಪುಣ್ಯ ಜಯಾಪಜಯ ದ್ವಂದ್ವಗಳ ಕಲ್ಪಿಸಿದ//7//


ತ್ರಿವಿಧ ಗುಣಮಯ ದೇಹ ಜೀವಕೆ ಕವಚದಂದದಿ ತೊಡಿಸಿ

ಕರ್ಮ ಪ್ರವಹದೊಳು ಸಂಚಾರ ಮಾಡಿಸುತಿಪ್ಪ ಜೇವರನಾ

ಕವಿಸಿ ಮಾಯಾರಮಣ ಮೋಹವ ಭವಕೆ ಕಾರಣನಾಗುವನು

ಸಂಶ್ರವಣ ಮನನವ ಮಾಳ್ಪರಿಗೆ ಮೋಚಕನು ಎನಿಸುತಿಪ್ಪ//8//


ಸಾಶನಾಹ್ವಯ ಸ್ತ್ರೀ ಪುರುಷರೊಳು ವಾಸವಾಗಿಹನು ಎಂದರಿದು

ವಿಶ್ವಾಸಪೂರ್ವಕ ಭಜಿಸಿ ತೋಷಿಸು ಸ್ವಾವರೋತ್ತಮರ

ಕ್ಲೇಶ ನಾಶನ ಅಚಲಗಳೊಳು ಪ್ರಕಾಶಿಸುತಲಿಹ

ಅನಶನ ರೂಪ ಉಪಾಸನವ ಮಾಳ್ಪರಿಗೆ ತೋರ್ಪನು ತನ್ನ ನಿಜರೂಪ//9//


ಪ್ರಕಾರಾಂತರ ಚಿಂತಿಸುವುದು ಈ ಪ್ರಕೃತಿಯೊಳು ವಿಶ್ವಾದಿ ರೂಪವ

ಪ್ರಕಟ ಮಾಳ್ಪೆನು ಯಥಾ ಮತಿಯೊಳು ಗುರುಕೃಪಾಬಲದಿ

ಮುಕುರ ನಿರ್ಮಿತ ಸದನದೊಳು ಪೊಗೆ ಸ್ವಕೀಯ ರೂಪವ ಕಾಂಬ ತೆರದಂತೆ

ಅಕುಟಿಲಾತ್ಮ ಚರಾಚರದಿ ಸರ್ವತ್ರ ತೋರುವನು//10//


ಪರಿಚ್ಛೇದ ತ್ರಯ ಪ್ರಕೃತಿಯೊಳಗೆ ಇರುತಿಹನು ವಿಶ್ವಾದಿ ರೂಪಕ

ಧರಿಸಿ ಆತ್ಮಾದಿ ತ್ರಿ ರೂಪವ ಈಷಣತ್ರಯದಿ

ಸುರುಚಿ ಜ್ಞಾನಾತ್ಮ ಸ್ವರೂಪದಿ ತುರಿಯ ನಾಮಕ ವಾಸುದೇವನ ಸ್ಮರಿಸು

ಮುಕ್ತಿ ಸುಖ ಪ್ರದಾಯಕನು ಈತನಹುದೆಂದು//11//


ಕಮಲಸಂಭವ ಜನಕ ಜಡ ಜಂಗಮರ ಒಳಗೆ ನೆಲೆಸಿದ್ದು

ಕ್ರಮ ವ್ಯುತ್ಕ್ರಮದಿ ಕರ್ಮವ ಮಾಡಿ ಮಾಡಿಸುತಿಪ್ಪ ಬೇಸರದೆ

ಕ್ಷಮ ಕ್ಷಾಮ ಕ್ಷಮೀಹನಾಹ್ವಯ ಸುಮನಸ ಅಸುರರೊಳಗೆ

ಅಹಂ ಮಮನಮಮ ಎಂದು ಈ ಉಪಾಸನೆ ಏವ ಪ್ರಾಂತದಲಿ//12//


ಈ ಸಮಸ್ತ ಜಗತ್ತು ಈಶಾವ್ಯಾಸವು ಎನಿಪುದು

ಕಾರ್ಯ ರೂಪವು ನಾಶವಾದರು ನಿತ್ಯವೇ ಸರಿ ಕಾರಣ ಪ್ರಕೃತಿ

ಶ್ರೀಶಗೆ ಜಡ ಪ್ರತಿಮೆಯೆನಿಪುದು ಮಾಸದು ಒಮ್ಮಿಗು ಸನ್ನಿಧಾನವು

ವಾಸವಾಗಿಹ ನಿತ್ಯ ಶಾಲಗ್ರಾಮದ ಉಪಾದಿ//13//


ಏಕಮೇವಾದ್ವಿತೀಯ ರೂಪ ಅನೇಕ ಜೀವರೊಳಿದ್ದು

ತಾ ಪ್ರತ್ಯೇಕ ಕರ್ಮವ ಮಾಡಿ ಮೋಹಿಸುತಿಪ್ಪ ತಿಳಿಸದಲೆ

ಮೂಕ ಬಧಿರ ಅಂಧಾದಿ ನಾಮಕ ಈ ಕಳೇವರದೊಳಗೆ ಕರೆಸುವ

ಮಾಕಳತ್ರನ ಲೌಕಿಕ ಮಹಾ ಮಹಿಮೆಗೆ ಏನೆಂಬೆ//14//


ಲೋಕ ಬಂಧು ಲೋಕನಾಥ ವಿಶೋಕ ಭಕ್ತರ ಶೋಕ ನಾಶನ

ಶ್ರೀ ಕರಾರ್ಚಿತ ಸೋಕದಂದದಲಿಪ್ಪ ಸರ್ವರೊಳು

ಸಾಕುವನು ಸಜ್ಜನರ ಪರಮ ಕೃಪಾಕರ ಈಶ ಪಿನಾಕಿ ಸನ್ನುತ

ಸ್ವೀಕರಿಸುವ ಅನತರು ಕೊಟ್ಟ ಸಮಸ್ತ ಕರ್ಮಗಳ//15//


ಅಹಿತ ಪ್ರತಿಮೆಗಳು ಎನಿಸುವವು ದೇಹ ಗೇಹ ಅಪತ್ಯ ಸತಿ ಧನ

ಲೋಹ ಕಾಷ್ಠ ಶಿಲಾಮೃದ್ ಆತ್ಮಕವು ಆದ ದ್ರವ್ಯಗಳು

ನೇಹ್ಯದಲಿ ಪರಮಾತ್ಮ ಎನಗೆ ಇತ್ತೀಹನು ಎಂದರಿದು ಅನುದಿನದಿ

ಸಮ್ಮೋಹಕೆ ಒಳಗಾಗದಲೆ ಪೂಜಿಸು ಸರ್ವ ನಾಮಕನ//16//


ಶ್ರೀ ತರುಣಿ ವಲ್ಲಭಗೆ ಜೀವರು ಚೇತನ ಪ್ರತಿಮೆಗಳು

ಓತಪ್ರೋತನಾಗಿದ್ದು ಎಲ್ಲರೊಳು ವ್ಯಾಪಾರ ಮಾಡುತಿಹ

ಹೋತ ಸರ್ವ ಇಂದ್ರಿಯಗಳೊಳು ಸಂಪ್ರೀತಿಯಿಂದ ಉಂಡುಣಿಸಿ ವಿಷಯ

ನಿರ್ವಾತ ದೇಶಗ ದೀಪದಿಂದಲಿಪ್ಪ ನಿರ್ಭಯದಿ//17//


ಭೂತ ಸೋಕಿದ ಮಾನವನು ಬಹು ಮಾತನಾಡುವ ತೆರದಿ

ಮಹಾ ಭೂತ ವಿಷ್ಣ್ವಾವೇಷದಿಂದಲಿ ವರ್ತಿಪುದು ಜಗವು

ಕೈತವೋಕ್ತಿಗಳಲ್ಲ ಶೇಷ ಫಣಾತ ಪತ್ರಗೆ

ಜೀವ ಪಂಚಕ ವ್ರಾತವೆಂದಿಗು ಭಿನ್ನ ಪಾದಾಹ್ವಯದಿ ಕರೆಸುವುದು//18//


ದಿವಿಯೊಳಿಪ್ಪವು ಮೂರು ಪಾದಗಳು ಅವನಿಯೊಳಗಿಹುದೊಂದು

ಈ ವಿಧ ಕವಿಭಿರೀಡಿತ ಕರೆಸುವ ಚತುಷ್ಪಾತು ತಾನೆಂದು

ಇವನ ಪಾದ ಚತುಷ್ಟಯಗಳ ಅನುಭವಕೆ ತಂದು ನಿರಂತರದಿ

ಉದ್ಧವನ ಸಖ ಸರ್ವಾಂತರಾತ್ಮಕನು ಎಂದು ಸ್ಮರಿಸುತಿರು//19//


ವಂಶ ಬಾಗಿಲು ಬೆಳೆಯೆ ಕಂಡು ನರಾಂಶದಲಿ ಶೋಭಿಪುದು

ಬಾಗದ ವಂಶ ಪಾಶದಿ ಕಟ್ಟಿ ಏರುಪ ಡೊಂಬ ಮಸ್ತಕಕೆ

ಕಂಸ ಮರ್ದನ ದಾಸರಿಗೆ ನಿಸ್ಸಂಶಯದಿ ಎರಗದಲೆ

ನಾ ವಿದ್ವಾಂಸನು ಎಂದು ಅಹಂಕರಿಸೆ ಭವಗುಣದಿ ಬಂಧಿಸುವ//20//


ಜ್ಯೋತಿ ರೂಪಗೆ ಪ್ರತಿಮೆಗಳು ಸಾಂಕೇತಿಕ ಆರೋಪಿತ

ಸುಪೌರುಷ ಧಾತು ಸಪ್ತಕ ಧೈರ್ಯ ಶೌರ್ಯ ಔದಾರ್ಯ ಚಾತುರ್ಯ

ಮಾತು ಮಾನ ಮಹತ್ವ ಸಹನ ಸುನೀತಿ ನಿರ್ಮಲ ದೇಶ ಬ್ರಾಹ್ಮಣ

ಭೂತ ಪಂಚಕ ಬುದ್ಧಿ ಮೊದಲಾದ ಇಂದ್ರಿಯ ಸ್ಥಾನ//21//


ಜೀವ ರಾಶಿಯೊಳು ಅಮೃತ ಶಾಶ್ವತ ಸ್ಥಾವರಗಳೊಳು ಸ್ಥಾಣು ನಾಮಕ

ಆವಕಾಲದಲಿಪ್ಪ ಅಜಿತಾನಂತನು ಎಂದೆನಿಸಿ

ಗೋವಿದಾಂಪತಿ ಗಾಯನಪ್ರಿಯ ಸಾವಯವ ಸಹಸ್ರ ನಾಮ

ಪರಾವರೇಶ ಪವಿತ್ರಕರ್ಮ ವಿಪಶ್ಚಿತ ಸುಸಾಮ//22//


ಮಾಧವನ ಪೂಜಾರ್ಥವಾಗಿ ನಿಷೇಧ ಕರ್ಮವ ಮಾಡಿ

ಧನ ಸಂಪಾದಿಸಲು ಸತ್ಪುಣ್ಯ ಕರ್ಮಗಳು ಎನಿಸಿಕೊಳುತಿಹವು

ಸ್ವೋದರಂಭರಣಾರ್ಥ ನಿತ್ಯಡಿ ಸಾಧು ಕರ್ಮವ ಮಾಡಿದರು ಸರಿ

ಯೈದುವನು ದೇಹಾಂತರವ ಸಂದೇಹವು ಇನಿತಿಲ್ಲ//23//


ಅಪಗತಾಶ್ರಯ ಎಲ್ಲರೊಳಗಿದ್ದು ಉಪಮನು ಎನಿಪ ಅನುಪಮ ರೂಪನು

ಶಫರ ಕೇತನ ಜನಕ ಮೋಹಿಪ ಮೋಹಕನ ತೆರದಿ

ತಪನ ಕೋಟಿ ಸಮಪ್ರಭಾ ಸಿತವಪುವು ಎನಿಪ ಕೃಷ್ಣಾದಿ ರೂಪಕ

ವಿಪಗಳಂತೆ ಉಂಡುಣಿಪ ಸರ್ವತ್ರದಲಿ ನೆಲೆಸಿದ್ದು//24//


ಅಡವಿಯೊಳು ಬಿತ್ತದಲೆ ಬೆಳೆದಿಹ ಗಿಡದ ಮೂಲಿಕೆ

ಸಕಲ ಜೀವರ ಒಡಲೊಳಿಪ್ಪ ಆಮಯವ ಪರಿಹರಗೈಸುವಂದದಲಿ

ಜಡಜ ಸಂಭವ ಜನಕ ತ್ರಿಜಗದ್ವಡೆಯ ಸಂತೈಸೆನಲು

ಅವರು ಇದ್ದೆಡೆಗೆ ಬಂದೊದಗುವನು ಭಕ್ತರ ಭಿಡೆಯ ಮೀರದಲೆ//25//


ಶ್ರೀ ನಿಕೇತನ ತನ್ನವರ ದೇಹ ಅನುಬಂಧಿಗಳಂತೆ ಅವ್ಯವಧಾನದಲಿ ನೆಲೆಸಿಪ್ಪ

ಸರ್ವದ ಸಕಲ ಕಾಮದನು

ಕೊಟ್ಟರು ಭುಂಜಿಸುತ ಮದ್ದಾನೆಯಂದದಿ ಸಂಚರಿಸು

ಮತ್ತೇನು ಬೇಡದೆ ಭಜಿಸುತಿರು ಅವನ ಅಂಘ್ರಿ ಕಮಲಗಳ//26//


ಬೇಡದಲೆ ಕೊಡುತಿಪ್ಪ ಸುರರಿಗೆ ಬೇಡಿದರೆ ಕೊಡುತಿಹನು ನರರಿಗೆ

ಬೇಡಿ ಬಳಲುವ ದೈತ್ಯರಿಗೆ ಕೊಡನು ಒಮ್ಮೆ ಪುರುಷಾರ್ಥ

ಮೂಢರು ಅನುದಿನ ಧರ್ಮ ಕರ್ಮವ ಮಾಡಿದರು ಸರಿ

ಅಹಿಕ ಫಲಗಳ ನೀಡಿ ಉನ್ಮತ್ತರನು ಮಾಡಿ ಮಹಾ ನಿರಯವೀವ//27//


ತರಣಿ ಸರ್ವತ್ರದಲಿ ಕಿರಣವ ಹರಹಿ ತತ್ತದ್ ವಸ್ತುಗಳನು ಸರಿಸಿ

ಅದರ ಅದರಂತೆ ಛಾಯವ ಕಂಗೊಳಿಪ ತೆರದಿ

ಅರಿಧರ ಏಜಾನೇಜ ಜಗದೊಳಗಿರುವ ಛಾಯಾ ತಪವೆನಿಸಿ

ಸಂಕರುಷಣಾಹ್ವಯ ಅವರವರ ಯೋಗ್ಯತೆಗಳಂತೆ ಇಪ್ಪ//28//


ಈ ವಿಧದಿ ಸರ್ವತ್ರ ಲಕ್ಷ್ಮೀ ಭೂ ವನಿತೆಯರ ಕೂಡಿ

ತನ್ನ ಕಳಾ ವಿಶೇಷಗಳ ಎಲ್ಲ ಕಡೆಯಲಿ ತುಂಬಿ ಸೇವ್ಯತಮ

ಸೇವಕನು ತಾನೆನಿಸಿ ಮಾಯಾದೇವಿ ರಮಣ

ಪ್ರವಿಷ್ಟ ರೂಪವ ಸೇವೆ ಮಾಳ್ಪ ಶರಣ್ಯ ಶಾಶ್ವತ ಕರುಣಿ ಕಮಲಾಕ್ಷ//29//


ಪ್ರಣವ ಕಾರಣ ಕಾರ್ಯ ಪ್ರತಿಪಾದ್ಯನು ಪರಾತ್ಪರ

ಚೇತನಾಚೇತನ ವಿಲಕ್ಷಣ ಅನಂತ ಸತ್ಕಲ್ಯಾಣ ಗುಣಪೂರ್ಣ

ಅನುಪಮನು ಉಪಾಸಿತ ಗುಣ ಉದಧಿ ಅನಘ ಅಜಿತ ಅನಂತ

ನಿಷ್ಕಿಂಚನ ಜನಪ್ರಿಯ ನಿರ್ವಿಕಾರ ನಿರಾಶ್ರಯ ಅವ್ಯಕ್ತಾ//30//


ಗೋಪ ಭೀಯ ಭವಾಂಧಕಾರಕೆ ದೀಪವಟ್ಟಿಗೆ

ಸಕಲ ಸುಖ ಸದನ ಉಪರಿಗ್ರಹವು ಎನಿಸುತಿಪ್ಪುದು ಹರಿಕಥಾಮೃತವು

ಗೋಪತಿ ಜಗನ್ನಾಥ ವಿಠಲ ಸಮೀಪದಲಿ ನೆಲೆಸಿದ್ದು

ಭಕ್ತರನು ಆಪವರ್ಗರ ಮಾಡುವನು ಮಹ ದುಃಖ ಭಯದಿಂದ//31//


//ಇತಿ ಶ್ರೀ ಬಿಂಬಾಪರೋಕ್ಷ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು

Thursday, January 17, 2013

ಶ್ರೀ ಹರಿಕಥಾಮೃತಸಾರ - 17

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಶ್ರೀ ದತ್ತಸ್ವಾತಂತ್ರ್ಯ ಸಂಧಿ//


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಕಾರುಣಿಕ ಹರಿ ತನ್ನೊಳಿಪ್ಪ ಅಪಾರ ಸ್ವಾತಂತ್ರ್ಯ ಗುಣವ ನಾನೂರು ತೆಗೆದು

ಸಪಾದ ಆರೊಂದಧಿಕ ಅರವತ್ತು ನಾರಿಗಿತ್ತ

ದ್ವಿ ಷೋಡಶ ಅಧಿಕ ನೂರು ಪಾದತ್ರಯವ ತನ್ನ ಶರೀರದೊಳಗೆ

ಈಪರಿ ವಿಭಾಗವ ಮಾಡಿ ತ್ರಿಪದಾಹ್ವ//1//


ಸತ್ಯ ಲೋಕಾಧಿಪನೊಳಗೆ ಐವತ್ತೆರೆಡು ಪವಮಾನನೊಳು ನಾಲ್ವತ್ತು ಮೇಲೆಂಟು

ಅಧಿಕ ಶಿವನೊಳಗಿಟ್ಟನಿಪ್ಪತ್ತು ಚಿತ್ತಜ ಇಂದ್ರರೊಳು ಐದಧಿಕ ದಶ

ತತ್ವಮಾನಿಗಳು ಎನಿಪ ಸುರರೊಳು ಹತ್ತು

ಈರೈದು ಅಖಿಳ ಜೀವರೊಳಿಟ್ಟ ನಿರವದ್ಯ//2//


ಕಲಿ ಮೊದಲುಗೊಂಡ ಅಖಿಳ ದಾನವರೊಳಗೆ ನಾಲ್ವತ್ತೈದು

ಈ ಪರಿ ತಿಳಿದು ಉಪಾಸನೆ ಮಾಡು ಮರೆಯದೆ ಪರಮ ಭಕುತಿಯಲಿ

ಇಳೆಯೊಳಗೆ ಸಂಚರಿಸು ಲಕ್ಷ್ಮೀ ನಿಲಯನ ಆಳಾನೆಂದು

ಸರ್ವ ಸ್ಥಳಗಳಲಿ ಸಂತೈಸುತಿಪ್ಪನು ಗೆಳೆಯನಂದದಲಿ//3//


ಅವನಿಪ ಸ್ವಾಮಿತ್ವ ಧರ್ಮವ ಸ್ವವಶ ಮಾತ್ಯರಿಗಿತ್ತು

ತಾ ಮತ್ತವರ ಮುಖದಲಿ ರಾಜ ಕಾರ್ಯಾವ ಮಾಡಿಸುವ ತೆರದಿ

ಕವಿಭಿರೀಡಿತ ತನ್ನ ಕಳೆಗಳ ದಿವಿಜ ದಾನವ ಮಾನವರೊಳಿಟ್ಟು

ಅವಿರತ ಗುಣತ್ರಯಜ ಕರ್ಮವ ಮಾಡಿ ಮಾಡಿಸುವ//4//


ಪುಣ್ಯ ಪಾಪಗಳು ಈ ತೆರದಿ ಕಾರುಣ್ಯ ಸಾಗರ ದೇವದಾನವ ಮಾನವರೊಳಿಟ್ಟು

ಅವರ ಫಲ ವ್ಯತ್ಯಾಸವನೆ ಮಾಡಿ

ಬನ್ನ ಬಡಿಸುವ ಭಕ್ತಿಹೀನರ ಸನ್ನುತ ಸುಕರ್ಮ ಫಲತೆಗೆದು

ಪ್ರಪನ್ನರಿಗೆ ಕೊಟ್ಟು ಅವರ ಸುಖಪಡಿಸುವನು ಸುಭುಜಾಹ್ವ//5//


ಮಾಣಿಕವ ಕೊಂಡು ಅಂಗಡಿಯೊಳು ಅಜಿವಾನ ಕೊಟ್ಟು ಆ ಪುರುಷನ

ಸಮಾಧಾನ ಮಾಡುವ ತೆರದಿ ದೈತ್ಯರು ನಿತ್ಯದಲಿ ಮಾಳ್ಪ

ದಾನ ಯಜ್ಞಾದಿಗಳ ಫಲ ಪವಮಾನ ಪಿತನು ಅಪಹರಿಸಿ

ಅಸಮೀಚೀನ ಸುಖಗಳ ಕೊಟ್ಟು ಅಸುರರ ಮತ್ತರನು ಮಾಳ್ಪ//6//


ಏಣ ಲಾಂಛನನ ಅಮಲ ಕಿರಣ ಕ್ರಮೇಣ ವೃದ್ಧಿಯನು ಐದಿ

ಲೋಗರ ಕಾಣಗೊಡದಿಹ ಕತ್ತಲೆಯ ಭಂಗಿಸುವ ತೆರದಂತೆ

ವೈನತೇಯಾಂಗಸನ ಮೂರ್ತಿ ಧ್ಯಾನವುಳ್ಳ ಮಹಾತ್ಮರಿಗೆ

ಸುಜ್ಞಾನ ಭಕ್ತ್ಯಾದಿಗಳು ವರ್ಧಿಸಿ ಸುಖವೇ ಕೊಡುತಿಹರು//7//


ಜನಪನ ಅರಿಕೆಯ ಚೋರ ಪೊಳಲೊಳು ಧನವ ಕದ್ದೊಯ್ದ ಈಯಲು

ಅವನ ಅವಗುಣಗಳು ಎಣಿಸದೆ ಪೊರೆವ ಕೊಡದಿರೆ ಶಿಕ್ಷಿಸುವ ತೆರದಿ

ಅನುಚಿತೋಚಿತ ಕರ್ಮ ಕೃಷ್ಣಾರ್ಪಣವೆನಲು

ಕೈಕೊಂಡು ತನ್ನರಮನೆಯೊಳಿಟ್ಟು ಆನಂದ ಬಡಿಸುವ ಮಾಧವಾನತರ//8//


ಅನ್ನದ ಅನ್ನಾದ ಅನ್ನ ನಾಮಕ ಮುನ್ನ ಪೇಳ್ದ ಪ್ರಕಾರ

ಜೀವರೊಳು ಅನ್ನ ರೂಪ ಪ್ರವೇಶಗೈದು ಅವರವರ ವ್ಯಾಪಾರ

ಬನ್ನಬಡದಲೆ ಮಾಡಿ ಮಾಡಿಸಿ ಧನ್ಯರಿವರು ಅಹುದು ಎಂದೆನಿಸಿ

ತ್ರೈಗುಣ್ಯ ವರ್ಜಿತ ತತ್ತದಾಹ್ವಯನು ಆಗಿ ಕರೆಸುವನು//9//


ಸಲಿಲಬಿಂದು ಪಯಾಬ್ಧಿಯೊಳು ಬೀಳಲು ವಿಕಾರವನು ಐದ ಬಲ್ಲದೆ

ಜಲವು ತದ್ರೂಪವನೆ ಐದುವುದು ಎಲ್ಲ ಕಾಲದಲಿ

ಕಲಿಲಮಲಾಪಹನ ಅರ್ಚಿಸುವ ಸತ್ಕುಲಜರ ಕುಕರ್ಮಗಳು

ತಾನಿಷ್ಕಲುಷ ಕರ್ಮಗಳಾಗಿ ಪುರುಷಾರ್ಥಗಳ ಕೊಡುತಿಹರು//10//


ಮೊಗದೊಳಗೆ ಮೊಗವಿಟ್ಟು ಮುದ್ದಿಸಿ ಮಗುವಿನಂ ಬಿಗಿದಪ್ಪಿ ರಂಬಿಸಿ

ನೇಹದಿ ತೆಗೆದು ತನ್ನಯ ಸ್ತನಗಳು ಉಣಿಸುವ ಜನನಿಯಂದದಲಿ

ಅಗಣಿತಾತ್ಮನು ತನ್ನ ಪಾದಾಬ್ಜಗಳ ಧೇನಿಪ ಭಕ್ತ ಜನರಿಗೆ

ಪ್ರಘಟಕನು ತಾನಾಗಿ ಸೌಖ್ಯಗಳು ಏವ ಸರ್ವತ್ರ//11//


ತೋಟಿಗನು ಭೂಮಿಯೊಳು ಬೀಜವ ನಾಟಬೇಕೆಂದೆನುತ

ಹಿತದಲಿ ಮೋಟೆಯಿಂ ನೀರೆತ್ತಿ ಸಸಿಗಳ ಸಂತೈಸುವಂತೆ

ಪಾಟುಬಡದಲೆ ಜಗದಿ ಜೀವರ ಘೋಟಕಾಸ್ಯನು ಸೃಜಿಸಿ

ಯೋಗ್ಯತೆ ದಾಟಗೊಡದಲೆ ಸಲಹುತಿಪ್ಪನು ಸರ್ವ ಕಾಲದಲಿ//12//


ಭೂಮಿಯೊಳು ಜಲವಿರೆ ತೃಷಾರ್ತನು ತಾ ಮರೆದು

ಮೊಗವೆತ್ತಿ ಎಣ್ದೆಸೆವ್ಯೋಮ ಮಂಡಲದೊಳಗೆ ಕಾಣದೆ ಮಿಡುಕುವಂದದಲಿ

ಶ್ರೀ ಮನೋರಮ ಸರ್ವರ ಅಂತರ್ಯಾಮಿಯು ಆಗಿರೆ ತಿಳಿಯಲರಿಯದೆ

ಭ್ರಾಮಕರು ಭಜಿಸುವರು ಭಕುತಿಯಲಿ ಅನ್ಯ ದೇವತೆಯ//13//


ಮುಖ್ಯ ಫಲ ವೈಕುಂಠ ಮುಖ್ಯಾಮುಖ್ಯ ಫಲ ಮಹದಾದಿ ಲೋಕಾ

ಅಮುಖ್ಯ ಫಲ ವೈಷಯಿಕವು ಎಂದರಿದು ಅತಿ ಭಕುತಿಯಿಂದ

ರಕ್ಕಸ ಅರಿಯ ಭಜಿಸುತಲಿ ನಿರ್ದುಃಖನಾಗು

ನಿರಂತರದಿ ಮೊರೆ ಪೊಕ್ಕವರ ಬಿಡ ಭೃತ್ಯವತ್ಸಲ ಭಾರತೀಶ ಪಿತ//14//


ವ್ಯಾಧಿಯಿಂ ಪೀಡಿತ ಶಿಶುವಿಗೆ ಗುಡೋದಕವ ನೆರೆದು ಅದಕೆ ಔಷಧ ತೇದು

ಕುಡಿಸುವ ತಾಯಿಯ ಉಪಾದಿಯಲಿ

ಸರ್ವಜ್ಞ ಬಾದರಾಯಣ ಭಕ್ತ ಜನಕೆ ಪ್ರಸಾದ ರೂಪಕನಾಗಿ

ಭಾಗವತಾದಿಯಲಿ ಪೇಳಿದನು ಧರ್ಮಾದಿಗಳೇ ಫಲವೆಂದು//15//


ದೂರದಲ್ಲಿಹ ಪರ್ವತ ಘನಾಕಾರ ತೋರ್ಪುದು ನೋಳ್ಪ ಜನರಿಗೆ

ಸಾರಗೈಯಲು ಸರ್ವ ವ್ಯಾಘ್ರಗಳಿಂದ ಭಯವಿಹುದು

ಘೋರತರ ಸಂಸಾರ ಸೌಖ್ಯ ಅಸಾರತರವೆಂದು ಅರಿತು

ನಿತ್ಯ ರಮಾರಮಣನ ಆರಾಧಿಸುವರು ಅದರಿಂದ ಬಲ್ಲವರು//16//


ಕೆಸರ ಘಟಗಳ ಮಾಡಿ ಬೇಸಿಗೆ ಬಿಸಿಲೊಳಗೆ ಇಟ್ಟು ಒಣಗಿಸಿದರು ಅದು

ಘನ ರಸವು ತುಂಬಲು ಬಹುದೇ? ಸರ್ವ ಸ್ವಾತಂತ್ರ ನಾನೆಂಬ

ಪಶುಪ ನರನು ಏನೇನು ಮಾಳ್ಪ ಅನಶನ ದಾನ ಸ್ನಾನ ಕರ್ಮಗಳು

ಒಸರಿ ಪೋಪವು ಬರಿದೆ ದೇಹ ಆಯಾಸವನೆ ಕೊಟ್ಟು//17//


ಎರಡು ದೀಕ್ಷೆಗಳಿಹವು ಬಾಹ್ಯಾಂತರವು ಎನಿಪ ನಾಮದಲಿ

ಬುಧರಿಂದರಿತು ದೀಕ್ಷಿತನು ಆಗು ದೀರ್ಘ ದ್ವೇಷಗಳ ಬಿಟ್ಟು

ಹರಿಯೇ ಸರ್ವೋತ್ತಮ ಕ್ಷರಾಕ್ಷರ ಪುರುಷ ಪೂಜಿತ ಪಾದ

ಜನ್ಮಾದಿ ಅರವಿ ದೂರ ಸುಖಾತ್ಮ ಸರ್ವಗನು ಎಂದು ಸ್ಮರಿಸುತಿರು//18//


ಹೇಯವಸ್ತುಗಳಿಲ್ಲವು ಉಪಾದೇಯ ವಸ್ತುಗಳಿಲ್ಲ

ನ್ಯಾಯಾನ್ಯಾಯ ಧರ್ಮಗಳಿಲ್ಲ ದ್ವೇಷ ಅಸೂಯೆ ಮೊದಲಿಲ್ಲ

ತಾಯಿ ತಂದೆಗಳಿಲ್ಲ ಕಮಲದಳಾಯತ ಅಕ್ಷಗೆಯೆನಲು

ಈಸುವ ಕಾಯಿಯಂದದಿ ಮುಳಗಗೊಡದೆ ಭವಾಬ್ಧಿ ದಾಟಿಸುವ//19//


ಮಂದನಾದರು ಸರಿಯೆ ಗೋಪೀಚಂದನ ಶ್ರೀ ಮುದ್ರೆಗಳ ನಲಿವಿಂದ ಧರಿಸುತ

ಶ್ರೀ ತುಳಸಿ ಪದುಮಾಕ್ಷಿ ಸರಗಳನು ಕಂಧರದ ಮಧ್ಯದಲಿ ಧರಿಸಿ

ಮುಕುಂದ ಶ್ರೀ ಭೂರಮಣ ತ್ರಿಜಗದ್ವಂದ್ಯ

ಸರ್ವ ಸ್ವಾಮಿ ಮಮ ಕುಲದೈವವು ಎನೆ ಪೊರೆವ//20//


ಪ್ರಾಯ ಧನ ಮದದಿಂದ ಜನರಿಗೆ ನಾಯಕ ಪ್ರಭುವೆಂಬಿ

ಪೂರ್ವದಿ ತಾಯಿ ಪೊಟ್ಟೆಯೊಳಿರಲು ಪ್ರಭುವೆಂದೇಕೆ ಕರೆಯರಲೈ?

ಕಾಯ ನಿನ್ನನು ಬಿಟ್ಟು ಪೋಗಲು ರಾಯಾ ನೀನೆಂಬುವ ಪ್ರಭುತ್ವ

ಪಲಾಯನವನೈದಿತು ಸಮೀಪದಲಿದ್ದರೆ ಅದು ತೋರು//21//


ವಾಸುದೇವ ಏಕ ಪ್ರಕಾರದಿ ಈಶನೆನಿಸುವ

ಬ್ರಹ್ಮ ರುದ್ರ ಶಚಿ ಈಶ ಮೊದಲಾದ ಅಮರರೆಲ್ಲರು ದಾಸರೆನಿಸುವರು

ಈ ಸುಮಾರ್ಗವ ಬಿಟ್ಟು ಸೋಹಮುಪಾಸನೆಯಗೈವ ನರ

ದೇಹಜ ದೈಶಿಕ ಕ್ಲೇಶಗಳು ಬರಲು ಅವನು ಏಕೆ ಬಿಡಿಸಿಕೊಳ//22//


ಆ ಪರ ಬ್ರಹ್ಮನಲಿ ತ್ರಿಜಗದ್ವ್ಯಾಪಕಾತ್ವ ನಿಯಾಮಕಾತ್ವ

ಸ್ಥಾಪಕಾತ್ವ ವಶಾತ್ವ ಈಶಾತ್ವಾದಿ ಗುಣಗಳಿಗೆ ಲೋಪವಿಲ್ಲ

ಏಕ ಪ್ರಕಾರ ಸ್ವರೂಪವು ಎನಿಪವು ಸರ್ವ ಕಾಲದಿ ಪೋಪವಲ್ಲವು

ಜೀವರಿಗೆ ದಾಸಾತ್ವದುಪಾದಿ//23//


ನಿತ್ಯನೂತನ ನಿರ್ವಿಕಾರ ಸುಹೃತ್ತಮ ಪ್ರಣವಸ್ಥ

ವರ್ಣೋತ್ಪತ್ತಿ ಕಾರಣ ವಾಗ್ಮನಃಮಯ ಸಾಮಗಾನರತ

ದತ್ತ ಕಪಿಲ ಹಯಾಸ್ಯ ರೂಪದಿ ಪೃಥ್ ಪ್ರುತಗ್ ಜೀವರೊಳಗಿದ್ದು ಪ್ರವರ್ತಿಸುವನು

ಅವರವರ ಯೋಗ್ಯತೆ ಕರ್ಮವ ಅನುಸರಿಸಿ//24//


ಶೃತಿಗಳು ಆತನ ಮಾತು ವಿಮಲಾ ಸ್ಮೃತಿಗಳು ಆತನ ಶಿಕ್ಷೆ

ಜೀವ ಪ್ರತತಿ ಪ್ರಕೃತಿಗಳು ಎರಡು ಪ್ರತಿಮೆಗಳು ಎನಿಸಿಕೊಳುತಿಹವು

ಇತರ ಕರ್ಮಗಳು ಎಲ್ಲ ಲಕ್ಷ್ಮೀ ಪತಿಗೆ ಪೂಜೆಗಳೆಂದು ಸ್ಮರಿಸುತ

ಚತುರ ವಿಧ ಪುರುಷಾರ್ಥಗಳ ಬೇಡದಿರು ಸ್ವಪ್ನದಲಿ//25//


ಭೂತಳಾಧಿಪನು ಆಜ್ಞ ಧಾರಕ ದೂತರಿಗೆ

ಸೇವಾನುಸಾರದಿ ವೇತನವ ಕೊಟ್ಟು ಅವರ ಸಂತೋಷಿಸುವ ತೆರದಂತೆ

ಮಾತರಿಶ್ವ ಪ್ರಿಯನು ಪರಮ ಪ್ರೀತಿ ಪೂರ್ವಕ

ಸದ್ಗುಣಂಗಳ ಗಾಧಕರ ಸಂತೋಷ ಪಡಿಸುವ ಇಹ ಪರಂಗಳಲಿ//26//


ದೀಪ ದಿವದಲಿ ಕಂಡರಾದಡೆ ಲೋಪಗೈಸುವರು ಆ ಕ್ಷಣ

ಹರಿ ಸಮೀಪದಲ್ಲಿರೆ ನಂದ ನಾಮ ಸುನಂದವು ಎನಿಸುವವು

ಔಪಚಾರಿಕವಲ್ಲ ಸುಜನರ ಪಾಪ ಕರ್ಮವು ಪುಣ್ಯವು ಎನಿಪವು

ಪಾಪಿಗಳ ಸತ್ಪುಣ್ಯ ಕರ್ಮವು ಪಾಪವು ಎನಿಸುವವು//27//


ಧನವ ಸಂಪಾದಿಸುವ ಪ್ರದ್ರಾವಣಿಕರಂದದದಿ

ಕೋವಿದರ ಮನೆಮನೆಗಳಲಿ ಸಂಚರಿಸು ಶಾಸ್ತ್ರ ಶ್ರವಣ ಗೋಸುಗದಿ

ಮನನಗೈದು ಉಪದೇಶಿಸುತ ದುರ್ಜನರ ಕೂಡಿ ಆಡದಿರು ಸ್ವಪ್ನದಿ

ಪ್ರಣತ ಕಾಮದ ಕೊಡುವ ಸೌಖ್ಯಗಳ ಇಹ ಪರಂಗಳಲಿ//28//


ಕಾರಕ ಕ್ರಿಯ ದ್ರವ್ಯ ವಿಭ್ರಮ ಮೂರು ವಿಧ ಜೀವರಿಗೆ

ಬಹು ಸಂಸಾರಕೆ ಇವು ಕಾರಣವು ಎನಿಸುವವು ಎಲ್ಲ ಕಾಲದಲಿ ದೂರ ಓಡಿಸಿ

ಭ್ರಾಮಕತ್ರಯ ಮಾರಿಗೆ ಒಳಗಾಗದಲೆ

ಸರ್ವಾರಾಧಕನ ಚಿಂತಿಸುತಲಿರು ಸರ್ವತ್ರ ಮರೆಯದಲೆ//29//


ಕರಣ ಕರ್ಮವ ಮಾಡಿದರೆ ವಿಸ್ಮರಣೆ ಕಾಲದಿ ಮಾತುಗಳಿಗೆ

ಉತ್ತರವ ಕೊಡದಲೆ ಸುಮ್ಮನಿಪ್ಪನು

ಜಾಗರಾವಸ್ಥೆ ಕರುಣಿಸಲು ವ್ಯಾಪಾರ ಮಾಡುವ

ಬರಲು ನಾಲ್ಕವಸ್ಥೆಗಳು ಪರಿಹರಿಸಿ ಕೊಳನು ಏತಕೆ? ಸ್ವತಂತ್ರನು ತಾನೆಯೆಂಬುವನು//30//


ಯುಕ್ತಿ ಮಾತುಗಳಲ್ಲ ಶ್ರುತಿ ಸ್ಮೃತಿ ಉಕ್ತ ಮಾತುಗಳಿವು

ವಿಚಾರಿಸಿ ಮುಕ್ತಿಗಿವು ಸೋಪಾನವು ಎನಿಪವು ಪ್ರತಿಪ್ರತಿ ಪದವು

ಭಕ್ತಿಪೂರ್ವಕ ಪಠಿಸುವವರಿಗೆ ವ್ಯಕ್ತಿ ಕೊಡುವ ಸ್ವರೂಪ ಸುಖ

ಪ್ರವಿವಿರಕ್ತನ ಮಾಡುವನು ಭವಭಯದಿಂದ ಬಹು ರೂಪ//31//


ಶ್ರೀನಿವಾಸನ ಸುಗುಣ ಮಣಿಗಳ ಪ್ರಾಣಮಾತ ವಯುನಾಖ್ಯ ಸೂತ್ರದಿ ಪೋಣಿಸಿದ ಮಾಲಿಕೆಯ

ವಾಗ್ಮಯಗೆ ಸಮರ್ಪಿಸಿದ

ಜ್ಞಾನಿಗಳ ದೃಕ್ ವಿಷಯವುಹುದ ಅಜ್ಞಾನಿಗಳಿಗೆ ಅಸಹ್ಯ ತೋರ್ಪುದು

ಮಾಣಿಕವ ಮರ್ಕಟನ ಕೈಯಲಿ ಕೊಟ್ಟ ತೆರದಂತೆ//32//


ಶ್ರೀವಿಧಿ ಈರ ವಿಪಾಹಿಪ ಈಶ ಶಚೀ ವರಾತ್ಮಭವ ಅರ್ಕ ಶಶಿ

ದಿಗ್ದೇವ ಋಷಿ ಗಂಧರ್ವ ಕಿನ್ನರ ಸಿದ್ಧ ಸಾಧ್ಯ ಗಣ ಸೇವಿತ ಪದಾಂಬುಜ

ತ್ವತ್ಪಾದಾಲವಂಬಿಗಳು ಆದ ಭಕ್ತರ ಕಾವ

ಕರುಣಾ ಸಾಂದ್ರ ಲಕ್ಷ್ಮೀ ಹೃತ್ಕುಮುದ ಚಂದ್ರ//33//


ಆದರಿಶ ಅಗತಾಕ್ಷ ಭಾಷಾ ಭೇದದಿಂದಲಿ ಕರೆಯಲು ಅದನು

ನಿಷೇಧಗೈದು ಅವಲೋಕಿಸದೆ ಬಿಡುವರೆ ವಿವೇಕಿಗಳು

ಮಾಧವನ ಗುಣ ಪೇಳ್ವ ಪ್ರಾಕೃತವು ಆದರೆಯು ಸರಿ

ಕೇಳಿ ಪರಮ ಆಹ್ಲಾದಬಡದಿಪ್ಪರೆ? ನಿರಂತರ ಬಲ್ಲ ಕೋವಿದರು//34//


ಭಾಸ್ಕರನ ಮಂಡಲವ ಕಂಡು ನಮಸ್ಕರಿಸಿ ಮೋದಿಸದೆ

ದ್ವೇಷದಿ ತಸ್ಕರನು ನಿಂದಿಸಲು ಕುಂದಹುದೇ ದಿವಾಕರಗೆ

ಸಂಸ್ಕೃತವು ಇದಲ್ಲ ಎಂದು ಕುಹಕ ತಿರಸ್ಕರಿಸಲು ಏನಹುದು?

ಭಕ್ತಿ ಪುರಸ್ಕರದಿ ಕೇಳ್ವರಿಗೊಲಿವನು ಪುಷ್ಕರಾಕ್ಷ ಸದಾ//35//


ಪತಿತನ ಕಪಾಲದೊಳು ಭಾಗೀರಥಿಯ ಜಲವಿರೆ ಪೇಯವು ಎನಿಪುದೆ?

ಇತರ ಕವಿ ನಿರ್ಮಿತ ಕುಕಾವ್ಯ ಅಶ್ರಾವ್ಯ ಬುಧರಿಂದ

ಕೃತಿ ಪತಿಕಥಾನ್ವಿತವು ಎನಿಪ ಪ್ರಾಕೃತವೆ ತಾ ಸಂಸ್ಕೃತವು ಎನಿಸಿ

ಸದ್ಗತಿಯನೀವುದು ಭಕ್ತಿ ಪೂರ್ವಕ ಕೇಳಿ ಪೇಳ್ವರಿಗೆ//36//


ಶಾಸ್ತ್ರ ಸಯುಕ್ತಿ ಗ್ರಂಥಗಳು ಓದಿ ಕೇಳ್ದವನಲ್ಲ

ಸಂತತ ಸಾಧುಗಳ ಸಹವಾಸ ಸಲ್ಲಾಪಗಳು ಮೊದಲಿಲ್ಲ

ಮೋದ ತೀರ್ಥ ಆರ್ಯರ ಮತಾನುಗರು ಆದವರ ಕರುಣದಲಿ ಪೇಳ್ದೆ

ರಮಾಧವ ಜಗನ್ನಾಥ ವಿಠಲ ತಿಳಿಸಿದದರೊಳಗೆ//37//


//ಶ್ರೀ ದತ್ತಸ್ವಾತಂತ್ರ್ಯ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು

ಶ್ರೀ ಹರಿಕಥಾಮೃತಸಾರ - 16

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಶ್ರೀ ಸ್ವಗತಸ್ವಾತಂತ್ರ್ಯ ಸಂಧಿ//


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಸ್ವಗತಸ್ವಾತಂತ್ರ್ಯ ಗುಣವ ಹರಿ ತೆಗೆದು ಬ್ರಹ್ಮಾದ್ಯರಿಗೆ ಕೊಟ್ಟದು

ಭೃಗು ಮುನಿಪ ಪೇಳಿದನು ಇಂದ್ರದ್ಯುಮ್ನ ಕ್ಷಿತಿಪನಿಗೆ//


ಪರಮ ವಿಷ್ಣು ಸ್ವತಂತ್ರ ಮಾಯಾ ತರುಣಿ ವಕ್ಷಸ್ಥಳ ನಿವಾಸಿ

ಸರಸಿಜೋದ್ಭವ ಪ್ರಾಣರೀರ್ವರು ಸಚಿವರು ಎನಿಸುವರು

ಸರ್ವ ಕರ್ಮಗಳಲ್ಲಿ ತತ್ಪ್ರಿಯರು ಉರಗ ಭೂಷಣ ಅಹಂಕೃತಿತ್ರಯ

ಕರೆಸುವ ಅಮರೇಂದ್ರ ಅರ್ಕ ಮುಖರು ಇಂದ್ರಿಯಪರು ಎನಿಸುವರು//1//


ಈ ದಿವೌಕಸರ ಅಂತೆ ಕಲಿ ಮೊದಲಾದ ದೈತ್ಯರು ಸರ್ವ ದೇಹದಿ ತೋದಕರು ತಾವಾಗಿ

ವ್ಯಾಪಾರಗಳ ಮಾಡುವರು

ವೇಧನಾಂದದಿ ಕಲಿಯು ಅಹಂಕಾರಾಧಿಪ ಅಧಮ ಮಧುಕುಕೈಟಭ

ಕ್ರೋಧಿಶಂಭರ ಮುಖರು ಮನಸಿಗೆ ಸ್ವಾಮಿಯೆನಿಸುವರು//2//


ದೇವತೆಗಳ ಉಪಾಧಿ ನಿತ್ಯದಿ ಏವಮಾದಿ ನಾಮದಿಂದಲಿ

ಯಾವದಿಂದ್ರಿಯಗಳಲಿ ವ್ಯಾಪಾರಗಳ ಮಾಡುವರು

ಸೇವಕರ ಸೇವ ಅನುಗುಣ ಫಲವೀವ ನ್ರುಪನಂದದಲಿ

ತನ್ನ ಸ್ವಭಾವ ಸ್ವಾತಂತ್ರ್ಯ ವಿಭಾಗವ ಮಾಡಿಕೊಟ್ಟ ಹರಿ//3//


ಅಗಣಿತ ಸ್ವಾತಂತ್ರ್ಯವ ನಾಲ್ಬಗೆ ವಿಭಾಗವ ಮಾಡಿ

ಒಂದನುತೆಗೆದು ದಶವಿಧಗೈಸಿ ಪಾದರೆ ಪಂಚ ಪ್ರಾಣನಲಿ

ಮೊಗ ಚತುಷ್ಟಯನೊಳು ಸಪಾದೈದು ಗುಣವಿರಸಿದ

ಮತ್ತೆ ದಶ ವಿಧಯುಗಳ ಗುಣವನ್ನು ಮಾಡಿ ಎರಡು ಸದಾ ಶಿವನೊಳಿಟ್ಟ//4//


ಪಾಕಶಾಸನ ಕಾಮರೊಳು ಸಾರ್ಧೈಕವಿಟ್ಟ ದಶ ಇಂದ್ರಿಯರ

ಸುದಿವೌಕಸಾದ್ಯರೊಳೊಂದು ಯಾವಜ್ಜೀವರೊಳಗೊಂದು

ನಾಲ್ಕೂವರೆ ಕಲ್ಯಾದಿ ದೈತ್ಯಾನೀಕಕಿತ್ತನು

ಎರಡು ತ್ರಿವಿಧ ವಿವೇಕಗೈಸಿ ಇಂದಿರಗೊಂದು ಎರಡು ಆತ್ಮ ತನ್ನೊಳಗೆ//5//


ಈ ವಿಧದಿ ಸ್ವಾತಂತ್ರ್ಯವ ದೇವ ಮಾನವ ದಾನವರೊಳು

ರಮಾ ವಿನೋದಿ ವಿಭಾಗ ಮಾಡಿಟ್ಟು ಅಲ್ಲೇ ರಮಿಸುವನು

ಮೂವರೊಳಗಿದ್ದು ಅವರ ಕರ್ಮವ ತಾ ವಿಕಾರವಗೈಸದಲೆ

ಕಲ್ಪವಸಾನಕೆ ಕೊಡುವನು ಅನಾಯಾಸ ಅವರ ಗತಿಯ//6//


ಆಲಯಗಳೊಳಿಪ್ಪ ದೀಪ ಜ್ವಾಲೆ ವರ್ತಿಗಳನುಸರಿಸಿ ಜನರ ಆಲಿಗೊಪ್ಪುವ ತೆರದಿ

ಹರಿ ತಾ ತೋರ್ಪ ಸರ್ವತ್ರ

ಕಾಲ ಕಾಲದಿ ಶ್ರೀಧರಾ ದುರ್ಗಾ ಲಲನೆಯರ ಕೂಡಿ ಸುಖಮಯ ಲೀಲೆಗೈಯಲು

ತ್ರಿಗುಣ ಕಾರ್ಯಗಳಿಹವು ಜೀವರಿಗೆ//7//


ಇಂದ್ರಿಯಗಳಿಂ ಮಾಳ್ಪ ಕರ್ಮ ದ್ವಂದ್ವಗಳ ತನಗರ್ಪಿಸಲು

ಗೋವಿಂದ ಪುಣ್ಯವ ಕೊಂಡು ಪಾಪವ ಭಸ್ಮವನೆ ಮಾಳ್ಪ

ಇಂದಿರೇಶನು ಭಕ್ತ ಜನರನು ನಿಂದಿಸುವರೊಳಗಿಪ್ಪ

ಪುಣ್ಯವ ತಂದು ತನ್ನವಗೀವ ಪಾಪಗಳ ಅವರಿಗುಣಿಸುವನು//8//


ಹೊತ್ತು ಒಟ್ಟಿಗೆ ಪಾಪ ಕರ್ಮ ಪ್ರವರ್ತಕರ ನಿಂದಿಸದೆ

ತನಗಿಂದ ಉತ್ತಮರ ಗುಣ ಕರ್ಮಗಳ ಕೊಂಡಾಡದಲಿಪ್ಪ ಮರ್ತ್ಯರಿಗೆ

ಗೋಬ್ರಾಹ್ಮಣ ಸ್ತ್ರೀ ಹತ್ಯ ಮೊದಲಾದ ಅಖಿಳ ದೋಷಗಳಿತ್ತಪನು

ಸಂದೇಹ ಪಡಸಲ್ಲ ಅಖಿಳ ಶಾಸ್ತ್ರಮತ//9//


ತನ್ನ ಸ್ವಾತಂತ್ರ್ಯ ಗುಣಗಳ ಹಿರಣ್ಯ ಗರ್ಭಾದ್ಯರಿಗೆ

ಕಲಿಮುಖ ದಾನವರ ಸಂತತಿಗೆ ಅವರಧಿಕಾರವ ಅನುಸರಿಸಿ

ಪುಣ್ಯ ಪಾಪಗಳೀವ ಬಹು ಕಾರುಣ್ಯ ಸಾಗರನು

ಅಲ್ಪಶಕ್ತಿಗಳ ಉಣ್ಣಲರಿಯದಿರಲು ಉಣ ಕಲಿಸಿದನು ಜೀವರಿಗೆ//10//


ಸತ್ಯ ವಿಕ್ರಮ ಪುಣ್ಯ ಪಾಪ ಸಮಸ್ತರಿಗೆ ಕೊಡಲೋಸುಗದಿ

ನಾಲ್ವತ್ತು ಭಾಗವ ಮಾಡಿ ಲೇಶಾಂಶವನು ಜನಕೀವ

ಅತ್ಯಲ್ಪ ಪರಮಾಣು ಜೀವಗೆ ಸಾಮರ್ಥ್ಯವನು ತಾ ಕೊಟ್ಟು

ಸ್ಥೂಲ ಪದಾರ್ಥಗಳ ಉಂಡು ಉಣಿಪ ಸರ್ವದಾಸರ್ವ ಜೀವರಿಗೆ//11//


ತಿಮಿರ ತರಣಿಗಳು ಏಕ ದೇಶದಿ ಸಮನಿಸಿಪ್ಪವೆ ಎಂದಿಗಾದರು?

ಭ್ರಮಣ ಛಳಿ ಬಿಸಲು ಅಂಜಿಕೆಗಳುಂಟೇನೋ ಪರ್ವತಕೆ?

ಅಮಿತ ಜೀವರೊಳಿದ್ದು ಲಕ್ಷ್ಮೀ ರಮಣ ವ್ಯಾಪಾರಗಳ ಮಾಡುವ

ಕಮಲಪತ್ರ ಸರೋವರಗಳೊಳಗಿಪ್ಪ ತೆರದಂತೆ//12//


ಅಂಬುಜೋದ್ಭವ ಮುಖ್ಯ ಸುರಾ ಕಲಿ ಶಂಬರಾದಿ ಸಮಸ್ತ ದೈತ್ಯ ಕದಂಬಕೆ

ಅನುದಿನ ಪುಣ್ಯ ಪಾಪ ವಿಭಾಗವನೆ ಮಾಡಿ

ಅಂಬುಧಿಯ ಜಲವನು ಮಹದ್ಘಟ ದಿಂಬನಿತು ತುಂಬುವ ತೆರದಿ

ಪ್ರತಿ ಬಿಂಬರೊಳು ತಾನಿದ್ದು ಯೋಗ್ಯತೆಯಂತೆ ಫಲವೀವ//13//


ಇನಿತು ವಿಷ್ಣು ರಹಸ್ಯದೊಳು ಭ್ರುಮು ಮುನಿಪ ಇಂದ್ರದ್ಯುಮ್ನಗೆ ಅರುಪಿದದನು

ಬುಧರು ಕೇಳುವುದು ನಿತ್ಯದಿ ಮತ್ಸರವ ಬಿಟ್ಟು

ಅನುಚಿತೋಕ್ತಿಗಳಿದ್ದರೆಯು ಸರಿಯೆ ಗಣನೆ ಮಾಡದಿರೆಂದು

ವಿದ್ವದ್ ಜನಕೆ ವಿಜ್ಞಾಪನೆಯ ಮಾಡುವೆ ವಿನಯ ಪೂರ್ವಕದಿ//13//


ವೇತ ಭಯ ವಿಶ್ವೇಶ ವಿಧಿ ಪಿತ ಮಾತುಳಾಂತಕ ಮಧ್ವ ವಲ್ಲಭ

ಭೂತ ಭಾವನ ಅನಂತ ಭಾಸ್ಕರ ತೇಜ ಮಹಾರಾಜ

ಗೌತಮನ ಮಡದಿಯನು ಕಾಯ್ದ ಅನಾಥ ರಕ್ಷಕ

ಗುರುತಮ ಜಗನ್ನಾಥ ವಿಠಲ ತನ್ನ ನಂಬಿದ ಭಕುತರನು ಪೊರೆವ//14//


//ಇತಿ ಶ್ರೀ ಸ್ವಗತಸ್ವಾತಂತ್ರ್ಯ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು

ಶ್ರೀ ಹರಿಕಥಾಮೃತಸಾರ - 15

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಶ್ರೀ ಶ್ವಾಸ ಸಂಧಿ//


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಭಾರತೀಶನು ಘಳಿಗೆಯೊಳು ಮುನ್ನೂರ ಅರವತ್ತು ಸುರ ಜಪಗಳ ತಾ ರಚಿಸುವನು

ಸರ್ವ ಜೀವರೊಳಿದ್ದು ಬೇಸರದೆ

ಕಾರುಣಿಕ ಅವರವರ ಸಾಧನ ಪೂರೈಸಿ ಭೂ ಸ್ವರ್ಗ ನರಕವ ಸೇರಿಸುವ

ಸರ್ವಜ್ಞ ಸಕಲೇಷ್ಟ ಪ್ರದಾಯಕನು//1//


ತಾಸಿಗೆ ಒಂಭೈನೂರು ಶ್ವಾಸೋಚ್ಚಾಸಗಳ ನಡೆಸುತಲಿ

ಚೇತನ ರಾಶಿಯೊಳು ಹಗಲಿರುಳು ಜಾಗೃತನಾಗಿ ನಿತ್ಯದಲಿ

ಈ ಸುಮನಸೋತ್ತಂಸ ಲೇಶ ಆಯಾಸವಿಲ್ಲದೆ ಪೋಷಿಸುತ

ಮೂಲೇಶನ ಅಂಘ್ರಿ ಸರೋಜ ಮೂಲದಲಿಪ್ಪ ಕಾಣಿಸದೆ//2//


ಅರಿವುದೊಂದು ಯಾಮದೊಳು ಶ್ವಾಸಗಳು ಎರಡು ಸಾವಿರದ ಏಳು ನೂರನು

ಶರ ಸಹಸ್ರದ ಮೇಲೆ ನಾನೂರು ಅಹವು ದ್ವಿತೀಯಕ್ಕೆ

ಮರಳಿ ಯಾಮತ್ರಯಕೆ ವಸು ಸಾವಿರದ ಮೇಲೆ ನೂರು ಎಣಿಕೆಯಲಿ

ಹನ್ನೆರೆಡು ತಾಸಿಗೆ ಹತ್ತು ಸಾವಿರದ ಎಂಟು ನೂರ ಅಹವು//3//


ಒಂದು ದಿನದೊಳಗೆ ಅನಿಳ ಇಪ್ಪ್ಪತ್ತೊಂದು ಸಾವಿರದ ಆರು ನೂರು

ಮುಕುಂದನಾಜ್ಞದಿ ಮಾಡಿ ಮಾಡಿಸಿ ಲೋಕಗಳ ಪೊರೆವನೆಂದು ಪವನನ ಪೊಗಳುತಿರು

ಎಂದೆಂದೂ ಮರೆಯದೆ ಈ ಮಹಿಮೆ ಸಂಕ್ರಂದನಾದ್ಯರಿಗುಂಟೆ

ನೋಡಲು ಸರ್ವ ಕಾಲದಲಿ//4//


ಮೂರು ಲಕ್ಷದ ಮೇಲೆ ವಿಂಶತಿ ಈರೆರೆಡು ಸಾವಿರವು ಪಕ್ಷಕೆ

ಆರು ಲಕ್ಷದ ಮೇಲೆ ನಾಲ್ವತ್ತೆಂಟು ಸಾವಿರವು ಮಾರುತನು ಮಾಸಕೆ ಜಪಿಸಿ

ಸಂಸಾರ ಸಾಗರದಿಂದ ಸುಜನರ ಪಾರುಗಾಣಿಸಿ

ಸಲಹುವನು ಬಹು ಭೋಗಗಳನಿತ್ತು//5//


ಎರಡು ತಿಂಗಳಿಗೆ ಅಹುದು ಋತು ಭೂ ಸುರರು ತಿಳಿವುದು

ಶ್ವಾಸ ಜಪ ಹನ್ನೆರಡು ಲಕ್ಷದ ಮೇಲೆ ತೊಂಭತ್ತಾರು ಸಹಸ್ರ

ಕರೆಸುವದು ಅಯನ ಅಹ್ವಯದಿ ಅರೆ ವರುಷ

ಮೂವತ್ತೆಂಟು ಲಕ್ಷ ಈ ಪರಿ ತಿಳಿವುದು ಎಂಭತ್ತೆಂಟು ಸಹಸ್ರ ಕೋವಿದರು//6//


ವರುಷಕೆ ಇದರ ಇಮ್ಮಡಿ ಜಪಂಗಳ ಗುರುವರಿಯ ತಾ ಮಾಡಿ ಮಾಡಿಸಿ

ದುರಿತಗಳ ಪರಿಹರಿಸುವನು ಚಿಂತಿಸುವ ಸಜ್ಜನರ

ಸುರ ವಿರೋಧಿಗಳೊಳಗೆ ನೆಲೆಸಿದ್ದು ಅರವಿದೂರ

ತಮ ಅಧಿಕಾರಿಗಳ ಇರವರಿತು ಸೋಹಂ ಉಪಾಸನೆ ಮಾಳ್ಪನು ಅವರಂತೆ//7//


ಇನಿತು ಉಪಾಸನೆ ಸರ್ವ ಜೀವರೊಳು ಅನಿಲದೇವನು ಮಾಡುತಿರೆ

ಚಿಂತನೆಯ ಮಾಡದೆ ಕಂಡ ನೀರೊಳು ಮುಳುಗಿ ನಿತ್ಯದಲಿ ಮನೆಯೊಳಗೆ ಕೃಷ್ಣಾಜಿನಾದಿ

ಆಸನದಿ ಕುಳಿತು ವಿಶಿಷ್ಟ ಬಹು ಸಜ್ಜನನು ಎನಿಸಿ

ಜಪ ಮಣಿಗಳ ಎಣಿಸಿದರೇನು ಬೇಸರದೆ//8//


ಓದನೋದಕವು ಎರಡು ತೇಜದೊಳು ಐದುವವು ಲಯ

ತದಭಿಮಾನಿಗಳಾದ ಶಿವ ಪವನರು ರಮಾಧೀನತ್ವ ಐದಿಹರು

ಈ ದಿವಿಜರ ಒಡಗೂಡಿ ಶ್ರೀ ಮಧುಸೂದನನ ಐದುವಳೆಂದರಿದು

ಆದರದಲಿ ಅನ್ನೋದಕವ ಕೊಡುತ ಉಣುತ ಸುಖಿಸುತಿರು//9//


ಜಾಲಿ ತೊಪ್ಪಲ ಅಜಾವಿಗಳು ಮೆದ್ದು ಆಲಯದಿ ಸ್ವೆಚ್ಚಾನುಸಾರದಿ

ಪಾಲಗರೆವ ಅಂದದಲಿ ಲಕ್ಷ್ಮೀ ರಮಣ ತನ್ನವರ ಕೀಳು ಕರ್ಮವ ಸ್ವೀಕರಿಸಿ

ತನ್ನ ಆಲಯದೊಳಿಟ್ಟು ಅವರ ಪೊರೆವ

ಕೃಪಾಳು ಕಾಮದ ಕೈರವದಳ ಶ್ಯಾಮ ಶ್ರೀರಾಮ//10//


ಶಶಿ ದಿವಾಕರ ಪಾವಕರೊಳಿಹ ಅಸಿತಸಿತಲೋಹಿತಗಳಲಿ

ಶಿವಸ್ವಸನ ಭಾರ್ಗವಿ ಮೂವರೊಳು ಶ್ರೀ ಕೃಷ್ಣ ಹಯವದನ ವಸುಧಿಪಾರ್ದನ

ತ್ರಿವೃತುಯೆನಿಸಿ ವಸುಮತಿಯೊಳು ಅನ್ನೋದಕ ಅನಳ ಪೆಸರಿನಿಂದಲಿ

ಸರ್ವ ಜೀವರ ಸಲಹುವನು ಕರುಣಿ//11//


ದೀಪ ಕರದಲಿ ಪಿಡಿದು ಕಾಣದೆ ಕೂಪದೊಳು ಬಿದ್ದಂತೆ

ವೇದ ಮಹೋಪನಿಷದ್ ಅರ್ಥಗಳ ನಿತ್ಯದಿ ಪೇಳುವವರೆಲ್ಲ

ಶ್ರೀ ಪವನಮುಖ ವಿನುತನ ಅಮಲ ಸುರೂಪಗಳ ವ್ಯಾಪಾರ ತಿಳಿಯದೆ

ಪಾಪ ಪುಣ್ಯಕೆ ಜೀವ ಕರ್ತೃ ಆಕರ್ತೃ ಹರಿಯೆಂಬ//12//


ಅನಿಲದೇವನು ವಾಗ್ಮನಃ ಮಯನು ಎನಿಸಿ ಪಾವಕ ವರುಣ

ಸಂಕ್ರಂದನ ಮುಖಾದ್ಯರೊಳಿದ್ದು ಭಗವದ್ರೂಪ ಗುಣಗಳನು

ನೆನೆನೆನೆದು ಉಚ್ಚರಿಸುತಲಿ ನಮ್ಮನು ಸದಾ ಸಂತೈಸುವನು

ಸನ್ಮುನಿ ಗಣ ಆರಾಧಿತ ಪದಾಂಬುಜ ಗೋಜ ಸುರರಾಜ//13//


ಪಾದವು ಎನಿಪವು ವಾಗ್ಮನಃಮಯ ಪಾದರೂಪ ದ್ವಯಗಳೊಳು

ಪ್ರಹ್ಲಾದ ಪೋಷಕ ಸಂಕರುಷಣಾಹ್ವಯದಿ ನೆಲೆಸಿದ್ದು

ವೇದ ಶಾಸ್ತ್ರ ಪುರಾಣಗಳ ಸಂವಾದ ರೂಪದಿ ಮನನಗೈವುತ

ಮೋದಮಯ ಸುಖವಿತ್ತು ಸಲಹುವ ಸರ್ವ ಸಜ್ಜನರ//14//


ಗಂಧವಹ ದಶ ದಿಶಗಳೊಳಗೆ ಅರವಿಂದ ಸೌರಭ ಪಸರಿಸುತ

ಘ್ರಾಣ ಇಂದ್ರಿಯಗಳಿಗೆ ಸುಖವನೀವುತ ಸಂಚರಿಸುವಂತೆ

ಇಂದಿರೇಶನ ಸುಗುಣಗಳ ದೈನಂದಿನದಿ ತುತಿಸುತ ಅನುಮೋದಿಸುತ

ಅಂಧಬಧಿರ ಸುಮೂಕನಂತಿರು ಮಂದ ಜನರೊಡನೆ//15//


ಶ್ರೀರಮಣನ ಅರಮನೆಯ ಪೂರ್ವ ದ್ವಾರದಲಿ ಇಹ ಸಂಜ್ಞಸೂರ್ಯಗ

ಭಾರತೀಪತಿ ಪ್ರಾಣನ ಒಳಗಿಹ ಲಕುಮಿ ನಾರಾಯಣನ ಸೇರಿ ಮನುಜೋತ್ತಮರು

ಸರ್ವ ಶರೀರಗತ ನಾರಾಯಣನ ಅವತಾರ ಗುಣಗಳ ತುತಿಸುತಲಿ

ಮೋದಿಪರು ಮುಕ್ತಿಯಲಿ//16//


ಪ್ರಣವ ಪ್ರತಿಪಾದ್ಯನ ಪುರದ ದಕ್ಷಿಣ ಕವಾಟದಲಿಪ್ಪ

ಶಶಿ ರೋಹಿಣಿಗತ ವ್ಯಾನಸ್ಥ ಕೃತಿ ಪ್ರದ್ಯುಮ್ನ ರೂಪವನು

ಗುಣಗಳನು ಸಂಸ್ತುತಿಸುತಲಿ ಪಿತೃ ಗಣ ಗಧಾಧರನ ಅತಿವಿಮಲ ಪಟ್ಟಣದ ಒಳಗೆ

ಸ್ವೇಚ್ಚಾನುಸಾರದಿ ಸಂಚರಿಸುತಿಹರು//17//


ಅಮಿತ ವಿಕ್ರಮನ ಆಲಯದ ಪಶ್ಚಿಮ ಕವಾಟದಿ ಸತಿಸಹಿತ ಸಂಭ್ರಮದಿ

ಭಗವದ್ಗುಣಗಳನೆ ಪೊಗಳುತಲೇ ಮೋದಿಸುವ

ಸುಮನಸಾಸ್ಯನೊಳಿಪ್ಪ ಅಪಾನಗ ದಮನ ಸಂಕರುಷಣನ

ನಿಹ ಹೃತ್ಕಮಲದೊಳು ಧೇನಿಸುವ ಋಷಿಗಣವ ಐದಿ ಸುಖಿಸುವರು//18//


ಸ್ವರಮಣನ ಗುಣ ರೂಪ ಸಪ್ತಸ್ವರಗಳಿಂದಲಿ ಪಾಡುತಿಹ

ತುಂಬುರನೆ ಮೊದಲಾದ ಅಖಿಳ ಗಂಧರ್ವರು

ರಮಾಪತಿಯ ಪುರದ ಉತ್ತರ ಬಾಗಿಲಧಿಪ ಸುರಪ ಶಚಿಗ ಸಮಾನ ವಾಯುಗ

ಹರಿನ್ಮಣಿನಿಭ ಶಾಂತಿಪತಿ ಅನಿರುದ್ಧನ ಐದುವರು//19//


ಗರುಡ ಶೇಷ ಅಮರ ಇಂದ್ರಮುಖ ಪುಷ್ಕರನೆ ಕಡೆಯಾಗಿಪ್ಪ ಅಖಿಳ ನಿರ್ಜನರು

ಊರ್ಧ್ವ ದ್ವಾರಗತ ಭಾರತಿ ಉದಾನದೊಳು ಮೆರೆವ ಮಾಯಾ ವಾಸುದೇವನ

ಪರಮ ಮಂಗಳ ಅವಯವಗಳ ಮಂದಿರವನು ಐದಿ

ಸದಾ ಮುಕುಂದನ ನೋಡಿ ಸುಖಿಸುವರು//20//


ದ್ವಾರ ಪಂಚಕ ಪಾಲರೊಳಗಿಹ ಭಾರತೀ ಪ್ರಾಣಾಂತರಾತ್ಮಕ

ಮಾರಮಣನ ಐ ರೂಪ ತತ್ತತ್ದ್ವಾರದಲಿ ಬಪ್ಪ

ಮೂರೆರೆಡು ವಿಧ ಮುಕ್ತಿ ಯೋಗ್ಯರ ತಾರತಮ್ಯವನರಿತು ಅವರ

ಕಂಸಾರಿ ಸಂಸಾರಾಬ್ಧಿ ದಾಟಿಸಿ ಮುಕ್ತರಣ ಮಾಳ್ಪ//21//


ಬೆಳಗಿದ ಹೂಜಿಯು ನೋಳ್ಪರಿಗೆ ಥಳಥಳಿಸುತಲಿ ಕಂಗೊಳಿಸುವ ಅಂದದಿ

ತೊಳೆದು ದೇಹವ ನಾಮ ಮುದ್ರೆಗಳಿಂದ ಅಲಂಕರಿಸಿ ಒಲಿಸಿ

ನಿತ್ಯ ಕುತರ್ಕ ಯುಕ್ತಿಗಳ ಅಲವಬೋಧರ ಶಾಸ್ತ್ರ ಮರ್ಮವ ತಿಳಿಯದಿಹ ನರ

ಬರಿದೆ ಇದರೊಳು ಶಂಕಿಸಿದರೇನು//22//


ಉದಧಿಯೊಳು ಊರ್ವಿಗಳು ತೋರ್ಪಂದದಲಿ ಹಂಸೋದ್ಗೀಥ ಹರಿ

ಹಯವದನ ಕೃಷ್ಣಾದಿ ಅಮಿತ ಅವತಾರಗಳು ನಿತ್ಯದಲಿ

ಪದುಮನಾಭನೊಳು ಇರುತಿಹವು ಸರ್ವದ ಸಮಸ್ತ ಪ್ರಾಣಿಗಳ ಚಿತ್ಹೃದಯಗತ ರೂಪಗಳು

ಅವ್ಯವಧಾನದಲಿ ಬಿಡದೆ//23//


ಶರಧಿಯೊಳು ಮಕರಾದಿ ಜೀವರು ಇರುಳು ಹಗಲು ಏಕ ಪ್ರಕಾರದಿ

ಚರಿಸುತ ಅನುಮೋದಿಸುತ ಇಪ್ಪಂದದಿ

ಜಗತ್ರಯವು ಇರುತಿಹುದು ಜಗದೀಶನುದರದಿ

ಕರೆಸುವುದು ಪ್ರತಿಬಿಂಬ ನಾಮದಿ ಧರಿಸಿಹುದು ಹರಿ ನಾಮ ರೂಪಂಗಳನು ಅನವರತ//24//


ಜನನಿ ಸೌಷ್ಠ ಪದಾರ್ಥಗಳು ಭೋಜನವ ಮಾಡಲು ಗರ್ಭಗತ ಶಿಶು ದಿನದಿನದಿ

ಅಭಿವೃದ್ಧಿಯೈದುವ ತೆರದಿ

ಜೀವರಿಗೆ ಪದುಮನಾಭನು ಸರ್ವ ರಸ ಉಂಡುಣಿಸಿ ಸಂರಕ್ಷಿಸುವ

ಜಾಹ್ನವಿ ಜನಕ ಜನ್ಮಾದಿ ಅಖಿಳ ದೋಷ ವಿದೂರ ಗಂಭೀರ//25//


ಆಶೆಗೆ ಒಳಗಾದವನು ಜನರಿಗೆ ದಾಸನೆನಿಸುವ

ಆಶೆಯನು ನಿಜ ದಾಸಗೆ ಐದಿಹ ಪುಂಸಗೆ ಎಲ್ಲರು ದಾಸರೆನಿಸುವರು

ಶ್ರೀಶನ ಅಂಘ್ರಿ ಸರೋಜಯುಗಳ ನಿರಾಶೆಯಿಂದಲಿ ಭಜಿಸೆ ಒಲಿದು

ರಮಾ ಸಹಿತ ತನ್ನನೆ ಕೊಡುವ ಕರುಣಾ ಸಮುದ್ರ ಹರಿ//26//


ದ್ಯುನದಿ ಆದ್ಯಂತವನು ಕಾಣದೆ ಮನುಜನು ಏಕತ್ರದಲಿ ತಾ ಮಜ್ಜನವ ಗೈಯೆ

ಸಮಸ್ತ ದೋಷದಿ ಮುಕ್ತನಹ ತೆರದಿ

ಅನಘನ ಅಮಲಾನಂತನಂತ ಸುಗುಣಗಳೊಳಗೆ ಒಂದೇ ಗುಣ

ಉಪಾಸನೆಯಗೈವ ಮಹಾತ್ಮ ಧನ್ಯ ಕೃತಾರ್ಥನು ಎನಿಸುವನು//27//


ವಾಸುದೇವನು ಕರೆಸುವನು ಕಾರ್ಪಾಸ ನಾಮದಿ ಸಂಕರುಷಣನು ವಾಸವಾಗಿಹ ತೂಲದೊಳು

ತಂತುಗನು ಪ್ರದ್ಯುಮ್ನ

ವಾಸ ರೂಪ ಅನಿರುದ್ಧ ದೇವನು

ಭೂಷಣನು ತಾನಾಗಿ ತೋರ್ಪ ಪರೇಶ ನಾರಾಯಣನು ಸರ್ವದ ಮಾನ್ಯ ಮಾನದನು//28//


ಲಲನೆಯಿಂದೊಡಗೂಡಿ ಚೈಲಗಳೊಳಗೆ ಓತಪ್ರೋತ ರೂಪದಿ

ನೆಲೆಸಿಹನು ಚತುರಾತ್ಮಕ ಜಗನ್ನಾಥ ವಿಠಲನು

ಛಳಿ ಬಿಸಿಲು ಮಳೆ ಗಾಳಿಯಿಂದ ಅರ ಘಳಿಗೆ ಬಿಡದಲೇ ಕಾವನು ಎಂದರಿದು

ಇಳೆಯೊಳು ಅರ್ಚಿಸುತಿರು ಸದಾ ಸರ್ವಾಂತರಾತ್ಮಕನ//29//


//ಇತಿ ಶ್ರೀ ಶ್ವಾಸ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು

ಶ್ರೀ ಹರಿಕಥಾಮೃತಸಾರ - 14

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಶ್ರೀ ಪಿತೃಗಣ ಸಂಧಿ//


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಕೃತಿರಮಣ ಪ್ರದ್ಯುಮ್ನ ವಸುದೇವತೆಗಳು ಅಹಂಕಾರ ತ್ರಯದೊಳು

ಚತುರವಿಂಶತಿ ರೂಪದಿಂದಲಿ ಭೋಜ್ಯನೆನಿಸುವನು

ಹುತವಹಾಕ್ಷ ಅಂತರ್ಗತ ಜಯಾಪತಿಯು ತಾನೇ ಮೂರಧಿಕ ತ್ರಿಂಶತಿ ಸುರೂಪದಿ

ಭೋಕ್ತ್ರು ಎನಿಸುವ ಭೋಕ್ತ್ರುಗಳೊಳಿದ್ದು//1//


ಆರಧಿಕ ಮೂವತ್ತು ರೂಪದಿ ವಾರಿಜಾಪ್ತನೊಳು ಇರುತಿಹನು

ಮಾಯಾರಮಣ ಶ್ರೀ ವಾಸುದೇವನು ಕಾಲನಾಮದಲಿ

ಮೂರುವಿಧ ಪಿತೃಗಳೊಳು ವಸು ತ್ರಿಪುರಾರಿ ಆದಿತ್ಯಗ ಅನಿರುದ್ಧನು

ತೋರಿಕೊಳ್ಳದೆ ಕರ್ತೃ ಕರ್ಮ ಕ್ರಿಯನು ಎನಿಸಿಕೊಂಬ//2//


ಸ್ವವಶ ನಾರಾಯಣನು ತಾ ಷಣ್ಣವತಿ ನಾಮದಿ ಕರೆಸುತಲಿ

ವಸು ಶಿವ ದಿವಾಕರ ಕರ್ತೃ ಕರ್ಮ ಕ್ರಿಯೆಗಳೊಳಗಿದ್ದು

ನೆವನವಿಲ್ಲದೆ ನಿತ್ಯದಲಿ ತನ್ನವರು ಮಾಡುವ ಸೇವೆ ಕೈಕೊಂಡು

ಅವರ ಪಿತೃಗಳಿಗೀವ ಅನಂತಾನಂತ ಸುಖಗಳನು//3//


ತಂತು ಪಟದಂದದಲಿ ಲಕ್ಷ್ಮೀಕಾಂತ ಪಂಚಾತ್ಮಕನು ಎನಿಸಿ

ವಸು ಕಂತು ಹರ ರವಿ ಕರ್ತೃಗಳೊಳಿದ್ದು

ಅನವರತ ತನ್ನ ಚಿಂತಿಸುತ ಸಂತರನು ಗುರು ಮಧ್ವಾಂತರಾತ್ಮಕ ಸಂತೈಸುವನು

ಸಂತತ ಅಖಿಳಾರ್ಥಗಳ ಪಾಲಿಸಿ ಇಹ ಪರಂಗಳಲಿ//4//


ತಂದೆ ತಾಯ್ಗಳ ಪ್ರೀತಿಗೋಸುಗ ನಿಂದ್ಯ ಕರ್ಮವ ತೊರೆದು

ವಿಹಿತಗಳು ಒಂದು ಮೀರದೆ ಸಾಂಗ ಕರ್ಮಗಳನು ಆಚರಿಸುವವರು

ವಂದನೀಯರಾಗಿ ಇಳೆಯೊಳಗೆ ದೈನಂದಿನದಿ ದೈಶಿಕ ದೈಹಿಕ ಸುಖದಿಂದ ಬಾಳ್ವರು

ಬಹು ದಿವಸದಲಿ ಕೀರ್ತಿಯುತರಾಗಿ//5//


ಅಂಶಿ ಅಂಶ ಅಂತರ್ಗತತ್ರಯ ಹಂಸವಾಹನ ಮುಖ್ಯ ದಿವಿಜರ ಅಸಂಶಯದಿ ತಿಳಿದು

ಅಂತರಾತ್ಮಕ ಶ್ರೀ ಜನಾರ್ಧನನ ಸಂಸ್ಮರಣೆ ಪೂರ್ವಕದಿ

ಷಡಾಧಿಕ ತ್ರಿಂಶತಿತ್ರಯ ರೂಪವರಿತು

ವಿಪಾಂಸಗನ ಪೂಜಿಸುವರು ಅವರೇ ಕೃತಾರ್ಥರು ಎನಿಸುವರು//6//


ಮೂರುವರೆ ಸಾವಿರದ ಮೇಲೆ ಅರೆ ನೂರೈದು ರೂಪದಿ ಜನಾರ್ಧನ

ಸೂರಿಗಳು ಮಾಡುವ ಸಮಾರಾಧನೆಗೆ ವಿಘ್ನಗಳು ಬಾರದಂತೆ

ಬಹುಪ್ರಕಾರ ಖರಾರಿ ಕಾಪಾಡುವನು ಸರ್ವ ಶರೀರಗಳೊಳಿದ್ದು

ಅವರವರ ಪೆಸರಿಂದ ಕರೆಸುತಲಿ//7//


ಜಯ ಜಯ ಜಯಾಕಾಂತ ದತ್ತಾತ್ರಯ ಕಪಿಲ ಮಹಿದಾಸ ಭಕ್ತಪ್ರಿಯ

ಪುರಾತನ ಪುರುಷ ಪೂರ್ಣಾನಂದ ಮಾನಘನ

ಹಯವದನ ಹರಿ ಹಂಸ ಲೋಕತ್ರಯ ವಿಲಕ್ಷಣ

ನಿಖಿಳ ಜಗದಾಶ್ರಯ ನಿರಾಮಯ ದಯದಿ ಸಂತೈಸೆಂದು ಪ್ರಾರ್ಥಿಸುವನು//8//


ಷಣ್ಣವತಿಯೆಂಬ ಅಕ್ಷರ ಈಡ್ಯನು ಷಣ್ಣವತಿ ನಾಮದಲಿ ಕರೆಸುತ

ತನ್ನವರು ಸದ್ಭಕ್ತಿ ಪೂರ್ವಕದಿಂದ ಮಾಡುತಿಹ ಪುಣ್ಯ ಕರ್ಮವ ಸ್ವೀಕರಿಸಿ

ಕಾರುಣ್ಯ ಸಾಗರ ಸಲಹುವನು

ಬ್ರಹ್ಮಣ್ಯದೇವ ಭವಾಬ್ಧಿಪೋತ ಬಹು ಪ್ರಕಾರದಲಿ//9//


ದೇಹಗಳ ಕೊಡುವವನು ಅವರವರ ಅಹರಗಳ ಕೊಡದಿಹನೆ

ಸುಮನಸ ಮಹಿತ ಮಂಗಳ ಚರಿತ ಸದ್ಗುಣ ಭರಿತನು

ಅನವರತ ಅಹಿಕ ಪಾರತ್ರಿಕ ಸುಖಪ್ರದ ವಹಿಸಿ ಬೆನ್ನಿಲಿ ಬೆಟ್ಟವ

ಅಮೃತವ ದ್ರುಹಿಣ ಮೊದಲಾದವರಿಗೆ ಉಣಿಸಿದ ಮುರಿದ ನಹಿತರನ//10//


ದ್ರುಹಿಣ ಮೊದಲಾದ ಅಮರರಿಗೆ ಸನ್ಮಹಿತ ಮಾಯಾರಮಣ

ತಾನೇ ಸ್ವಹನೆನಿಸಿ ಸಂತೃಪ್ತಿಪಡಿಸುವ ಸರ್ವಕಾಲದಲಿ

ಪ್ರಹಿತ ಸಂಕರುಷಣನು ಪಿತೃಗಳಿಗೆ ಅಹರನೆನಿಪ ಸ್ವಧಾಖ್ಯರೂಪದಿ

ಮಹಿಜ ಫಲ ತೃಣ ಪೆಸರಿನಲಿ ಪ್ರದ್ಯುಮ್ನ ಅನಿರುದ್ಧ//11//


ಅನ್ನನೆನಿಸುವ ನೃಪಶುಗಳಿಗೆ ಹಿರಣ್ಯ ಗರ್ಭಾಂಡದೊಳು

ಸಂತತ ತನ್ನನ ಈಪರಿಯಿಂದ ಉಪಾಸನೆಗೈವ ಭಕ್ತರನ ಬನ್ನಬಡಿಸದೆ

ಭವ ಸಮುದ್ರ ಮಹ ಉನ್ನತಿಯ ದಾಟಿಸಿ

ಚತುರ್ವಿಧ ಅನ್ನಮಯನು ಆತ್ಮ ಪ್ರದರ್ಶನ ಸುಖವನೀವ ಹರಿ//12//


ಮನವಚನ ಕಾಯಗಳ ದೆಶೆಯಿಂದ ಅನುದಿನದಿ ಬಿಡದೆ ಆಚರಿಸುತಿಪ್ಪ

ಅನುಚಿತೋಚಿತ ಕರ್ಮಗಳ ಸದ್ಭಕ್ತಿ ಪೂರ್ವಕದಿ ಅನಿಳ ದೇವನೊಳಿಪ್ಪ

ನಾರಾಯಣಗೆ ಇದು ಅನ್ನವೆಂದು ಕೃಷ್ಣಾರ್ಪಣವೆನುತ ಕೊಡು

ಸ್ವೀಕರಿಸಿ ಸಂತೈಪ ಕರುಣಾಳು//13//


ಏಳು ವಿಧ ಅನ್ನ ಪ್ರಕರಣವ ಕೇಳಿ ಕೋವಿದರ ಆಸ್ಯದಿಂದಲಿ

ಆಲಸವ ಮಾಡದಲೆ ಅನಿರುದ್ಧಾದಿ ರೂಪಗಳ

ಕಾಲಕಾಲದಿ ನೆನೆದು ಪೂಜಿಸು ಸ್ಥೂಲ ಮತಿಗಳಿಗೆ ಇದನು ಪೇಳದೆ

ಶ್ರೀ ಲಕುಮಿ ವಲ್ಲಭನೆ ಅನ್ನಾದನ್ನಾದನು//14//


ಎಂದರಿದು ಸಪ್ತಾನ್ನಗಳ ದೈನಂದಿನದಿ ಮರೆಯದೆ

ಸದಾ ಗೋವಿಂದಗೆ ಅರ್ಪಿಸು ನಿರ್ಭಯದಿ ಮಹಾಯಜ್ಞವು ಇದೆಂದು

ಇಂದಿರೇಶನು ಸ್ವೀಕರಿಸಿ ದಯದಿಂದ ಬೇಡಿಸಿಕೊಳದೆ

ತವಕದಿ ತಂದು ಕೊಡುವನು ಪರಮ ಮಂಗಳ ತನ್ನ ದಾಸರಿಗೆ//15//


ಸೂಜಿ ಕರದಲಿ ಪಿಡಿದು ಸಮರವ ನಾ ಜಯಿಸುವೆನು ಎಂಬ ನರನಂತೆ

ಈ ಜಗತ್ತಿನೊಳು ಉಳ್ಳ ಅಜ್ಞಾನಿಗಳು ನಿತ್ಯದಲಿ

ಶ್ರೀ ಜಗತ್ಪತಿ ಚರಣ ಯುಗಳ ಸರೋಜ ಭಕ್ತಿ ಜ್ಞಾನ ಪೂರ್ವಕ ಪೂಜಿಸದೆ

ಧರ್ಮಾರ್ಥ ಕಾಮವ ಬಯಸಿ ಬಳಲುವರು//16//


ಶಕಟ ಭಂಜನ ಸಕಲ ಜೀವರ ನಿಕಟಗನು ತಾನಾಗಿ

ಲೋಕಕೆ ಪ್ರಕಟನಾಗದೆ ಸಕಲ ಕರ್ಮವ ಮಾಡಿ ಮಾಡಿಸುತ

ಅಕುಟಿಲಾತ್ಮಕ ಭಕುತ ಜನರಿಗೆ ಸುಖದನೆನಿಸುವ ಸರ್ವಕಾಲದಿ

ಅಕಟಕಟ ಈತನ ಮಹಾ ಮಹಿಮೆಗಳಿಗೆ ಏನೆಂಬೆ//17//


ಶ್ರೀ ಲಕುಮಿವಲ್ಲಭನು ವೈಕುಂಠ ಆಲಯದಿ ಪ್ರಣವ ಪ್ರಕೃತಿ

ಕೀಲಾಲಜಾಸನ ಮುಖ್ಯ ಚೇತನರೊಳಗೆ ನೆಲೆಸಿದ್ದು

ಮೂಲ ಕಾರಣಾoಶಿ ನಾಮದಿ ಲೀಲೆಗೈಸುತ ತೋರಿ ಕೊಳ್ಳದೆ

ಪಾಲಿನೊಳು ಘೃತವಿದ್ದ ತೆರದಂತೆ ಇಪ್ಪ ತ್ರಿಸ್ಥಳದಿ//18//


ಮೂರು ಯುಗದಲಿ ಮೂಲ ರೂಪನು ಸೂರಿಗಳ ಸಂತೈಸಿ

ದಿತಿಜ ಕುಮಾರಕರ ಸಂಹರಿಸಿ ಧರ್ಮವನು ಉಳುಹಬೇಕೆಂದು

ಕಾರುಣಿಕ ಭೂಮಿಯೊಳು ನಿಜ ಪರಿವಾರ ಸಹಿತ ಅವತರಿಸಿ

ಬಹು ವಿಧ ತೋರಿದನು ನರವತ್ ಪ್ರವೃತ್ತಿಯ ಸಕಲ ಚೇತನಕೆ//19//


ಕಾರಣಾಹ್ವಯ ಪ್ರಕೃತಿಯೊಳಗಿದ್ದು ಆರಧಿಕ ಹದಿನೆಂಟು ತತ್ತ್ವವ

ತಾ ರಚಿಸಿ ತದ್ರೂಪ ತನ್ನಾಮಗಳನೆ ಧರಿಸಿ

ನೀರಜ ಭವಾಂಡವನು ನಿರ್ಮಿಸಿ ಕಾರುಣಿಕ ಕಾರ್ಯಾಖ್ಯ ರೂಪದಿ ತೋರುವನು

ಸಹಜಾಹಿತಾಚಲಗಳಲಿ ಪ್ರತಿದಿನದಿ//20//


ಜೀವರಂತರ್ಯಾಮಿ ಅಂಶಿ ಕಳೇವರಗಳೊಳಗೆ ಇಂದ್ರಿಯಗಳಲಿ

ತಾ ವಿಹಾರವ ಗೈಯುತ ಅನುದಿನ ಅಂಶ ನಾಮದಲಿ

ಈ ವಿಷಯಗಳನುಂಡು ಸುಖಮಯವೀವ ಸುಖ ಸಂಸಾರ ದುಃಖವ

ದೇವ ಮಾನವ ದಾನವರಿಗೆ ಅವಿರತ ಸುಧಾಮ ಸಖ//21//


ದೇಶ ದೇಶವ ಸುತ್ತಿ ದೇಹಾಯಾಸಗೊಳಿಸದೆ ಕಾಮ್ಯ ಕರ್ಮ ದುರಾಶೆಗೊಳಗಾಗದಲೆ

ಬ್ರಹ್ಮಾದಿ ಅಖಿಳ ಚೇತನರು

ಭೂ ಸಲಿಲ ಪಾವಕ ಸಮೀರ ಆಕಾಶ ಮೊದಲಾದ ಅಖಿಳ ತತ್ತ್ವ

ಪರೇಶಗೆ ಇವು ಅಧಿಷ್ಠಾನವು ಎಂದರಿತು ಅರ್ಚಿಸು ಅನವರತ//22//


ಎರಡು ವಿಧದಲಿ ಲೋಕದೊಳು ಜೀವರುಗಳು ಇಪ್ಪರು ಸಂತತ

ಕ್ಷರಾಕ್ಷರ ವಿಲಿಂಗ ಸಲಿಂಗ ಸೃಜ್ಯ ಅಸೃಜ್ಯ ಭೇದದಲಿ ಕರೆಸುವದು

ಜಡ ಪ್ರಕೃತಿ ಪ್ರಣವಾಕ್ಷರ ಮಹದಣು ಕಾಲ ನಾಮದಿ

ಹರಿ ಸಹಿತ ಭೇದಗಳ ಪಂಚಕ ಸ್ಮರಿಸು ಸರ್ವತ್ರ//23//


ಜೀವ ಜೀವರ ಭೇದ ಜಡ ಜಡ ಜೀವ ಜಡಗಳ ಭೇದ

ಪರಮನು ಜೀವ ಜಡ ಸುವಿಲಕ್ಷಣನು ಎಂದರಿದು ನಿತ್ಯದಲಿ

ಈ ವಿರಿಂಚಿ ಅಂಡದೊಳು ಎಲ್ಲ ಟಾವಿನಲಿ ತಿಳಿದೈದು ಭೇದ

ಕಳೇವರದೊಳರಿತು ಅಚ್ಯುತನ ಪದವೈದು ಶೀಘ್ರದಲಿ//24//


ಆದಿಯಲ್ಲಿ ಕ್ಷರಾಕ್ಷರಾಖ್ಯ ದ್ವೇಧ ಅಕ್ಷರದೊಳು ರಮಾ ಮಧುಸೂದನರು

ಕ್ಷರಗಳೊಳು ಪ್ರಕೃತಿ ಪ್ರಣವ ಕಾಲಗಳು ವೇದ ಮುಖ್ಯ ತೃಣಾoತ ಜೀವರ

ಭೇದಗಳನರಿತು ಈ ರಹಸ್ಯವ ಭೋದಿಸದೇ ಮಂದರಿಗೆ

ಸರ್ವತ್ರದಲಿ ಚಿಂತಿಪುದು//25//


ದೀಪದಿಂ ದೀಪಗಳು ಪೊರಮಟ್ಟು ಆಪಣ ಆಲಯಗಳ ತಿಮಿರಗಳ ತಾ ಪರಿಹರಗೈಸಿ

ತದ್ಗತ ಪದಾರ್ಥ ತೋರ್ಪಂತೆ

ಸೌಪರಣಿ ವರವಹನು ತಾ ಬಹು ರೂಪ ನಾಮದಿ ಎಲ್ಲ ಕಡೆಯಲಿ ವ್ಯಾಪಿಸಿದ್ದು

ಯಥೇಷ್ಟ ಮಹಿಮೆಯ ತೋರ್ಪ ತಿಳಿಸದಲೆ//26//


ನಳಿನ ಮಿತ್ರಗೆ ಇಂದ್ರಧನು ಪ್ರತಿ ಫಲಿಸುವಂತೆ

ಜಗತ್ರಯವು ಕಂಗೊಳಿಪುದು ಅಣು ಉಪಾಧಿಯಲಿ ಪ್ರತಿಬಿಂಬ ಅಹ್ವಯದಿ ಹರಿಗೆ

ತಿಳಿಯೆ ತ್ರಿಕಕುದ್ಧಾಮನ ಅತಿ ಮಂಗಳ ಸುರೂಪವ

ಸರ್ವ ಟಾವಿಲಿ ಪೊಳೆವ ಹೃದಯಕೆ ಪ್ರತಿದಿವಸ ಪ್ರಹ್ಲಾದ ಪೋಷಕನು//27//


ರಸ ವಿಶೇಷದೊಳು ಅತಿ ವಿಮಲಾ ಸಿತವಸನ ತೋಯಿಸಿ ಅಗ್ನಿಯೊಳಗಿಡೆ

ಪಸರಿಸುವುದು ಪ್ರಕಾಶ ನಸಗುಂದದಲೆ ಸರ್ವತ್ರ

ತ್ರಿಶಿರ ದೂಷಣ ವೈರಿ ಭಕ್ತಿ ಸುರಸದಿ ತೋಯ್ದ ಮಹಾತ್ಮರನು

ಬಾಧಿಸವು ಭವದೊಳಗೆ ಇದ್ದರೆಯು ಸರಿ ದುರಿತ ರಾಶಿಗಳು//28//


ವಾರಿನಿಧಿಯೊಳಗುಳ್ಳ ಅಖಿಳ ನದಿಗಳು ಬೇರೆ ಬೇರೆ ನಿರಂತರದಿ ವಿಹಾರಗೈಯುತ

ಪರಮ ಮೋದದಲಿಪ್ಪ ತೆರದಂತೆ

ಮೂರು ಗುಣಗಳ ಮಾನಿನಿಯೆನಿಸುವ ಶ್ರೀ ರಮಾ ರೂಪಗಳು ಹರಿಯಲಿ ತೋರಿತಿಪ್ಪವು

ಸರ್ವ ಕಾಲದಿ ಸಮರಹಿತವೆನಿಸಿ//29//


ಕೋಕನದ ಸಖನ ಉದಯ ಘೋಕಾಲೋಕನಕೆ ಸೊಗಸದಿರೆ

ಭಾಸ್ಕರ ತಾ ಕಳಂಕನೆ? ಈ ಕೃತೀಪತಿ ಜಗನ್ನಾಥನಿರೆ

ಸ್ವೀಕರಿಸಿ ಸುಖಪಡಲು ಅರಿಯದ ಅವಿವೇಕಿಗಳು ನಿಂದಿಸಿದರೆ ಏನಹುದು

ಈ ಕವಿತ್ವವ ಕೇಳಿ ಸುಖಪಡದಿಹರೆ ಕೋವಿದರು//30//


ಚೇತನಾಚೇತನಗಳಲಿ ಗುರು ಮಾತರಿಶ್ವಾಂತರ್ಗತ ಜಗನ್ನಾಥ ವಿಠಲ

ನಿರಂತರದಿ ವ್ಯಾಪಿಸಿ ತಿಳಿಸಿ ಕೊಳ್ಳದಲೇ

ಕಾತರವ ಪುಟ್ಟಿಸಿ ವಿಷಯದಲಿ ಧಾನರ ಮೋಹಿಸುವ

ನಿರ್ಭೀತ ನಿತ್ಯಾನಂದಮಯ ನಿರ್ದೋಷ ನಿರವದ್ಯ//31//


//ಇತಿ ಶ್ರೀ ಪಿತೃಗಣ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು

Wednesday, January 16, 2013

ಶ್ರೀ ಹರಿಕಥಾಮೃತಸಾರ - 13

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಶ್ರೀ ನಾಮಸ್ಮರಣ ಸಂಧಿ//


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಮಕ್ಕಳಾಡಿಸುವಾಗ ಮಡದಿಯೊಳು ಅಕ್ಕರದಿ ನಗುವಾಗ

ಹಯ ಪಲ್ಲಕ್ಕಿ ಗಜ ಮೊದಲಾದ ವಾಹನಗಳು ಏರಿ ಮೆರೆವಾಗ

ಬಿಕ್ಕುವಾಗ ಆಕಳಿಸುತಲಿ ದೇವಕ್ಕಿ ತನಯನ ಸ್ಮರಿಸುತಿಹ ನರ

ಸಿಕ್ಕ ಯಮದೂತರಿಗೆ ಆವ ಆವಲ್ಲಿ ನೋಡಿದರು//1//


ಸಾರಿತು ಪ್ರವಹಗಳಲ್ಲಿ ದಿವ್ಯಾಂಬರದಿ ಪತ್ರಾದಿಯಲಿ

ಹರುಷಾ ಮರುಷ ವಿಸ್ಮ್ರುತಿಯಂದಲಿ ಆಗಲಿ ಒಮ್ಮೆ ಬಾಯಿ ತೆರೆದು

ಹರಿ ಹರೀ ಹರಿಯೆಂಬ ಎರಡಕ್ಷರ ನುಡಿದ ಮಾತ್ರದಲಿ

ದುರಿತಗಳು ಇರದೇ ಪೋಪವು ತೂಲ ರಾಶಿಯೊಳು ಅನಲ ಪೊಕ್ಕಂತೆ//2//


ಮಲಗುವಾಗಲಿ ಏಳುವಾಗಲಿ ಕುಳಿತು ಮಾತಾಡುತಲಿ

ಮನೆಯೊಳು ಕೆಲಸಗಳ ಮಾಡುತಲಿ ಮೈದೊಳೆವಾಗ ಮೆಲುವಾಗ

ಕಲುಷ ದೂರನ ಸಕಲ ಟಾವಿಲಿ ತಿಳಿಯೆ ತತ್ತನ್ನಾಮ ರೂಪವ ಬಳಿಯಲಿಪ್ಪನು

ಒಂದರೆಕ್ಷಣ ಬಿಟ್ಟಗಲನು ಅವರ//3//


ಆವ ಕುಲದವನು ಆದಡೆ ಏನು ಇನ್ನಾವ ದೇಶದೊಳು ಇದ್ದಡೇನು

ಇನ್ನಾವ ಕರ್ಮವ ಮಾಡಲೇನು ಇನ್ನಾವ ಕಾಲದಲಿ

ಶ್ರೀವರನ ಸರ್ವತ್ರದಲಿ ಸಂಭಾವಿಸುತ ಪೂಜಿಸುತ ಮೋದಿಪ

ಕೋವಿದರಿಗೆ ಉಂಟೇನೋ ಭಯ ದುಃಖಾದಿ ದೋಷಗಳು//4//


ವಾಸುದೇವನ ಗುಣ ಸಮುದ್ರದೊಳು ಈಸಬಲ್ಲವ ಭವ ಸಮುದ್ರ

ಆಯಾಸವಿಲ್ಲದೆ ದಾಟುವನು ಶೀಘ್ರದಲಿ ಜಗದೊಳಗೆ

ಬೇಸರದೆ ದುರ್ವಿಷಯಗಳ ಅಭಿಲಾಷೆಯಲಿ ಬಳಲುವವ

ನಾನಾ ಕ್ಲೇಷಗಳನು ಅನುಭವಿಪ ಭಕ್ತಿ ಸುಮಾರ್ಗ ಕಾಣದಲೇ//5//


ಸ್ನಾನ ಜಪ ದೇವಾರ್ಚನೆಯು ವ್ಯಾಖ್ಯಾನ ಭಾರತ ಮುಖ ಮಹೋಪಪುರಾಣ ಕಥೆಗಳ

ಪೇಳಿ ಕೇಳಿದರೇನು ದಿನದಿನದಿ

ಜ್ಞಾನ ಕರ್ಮ ಇಂದ್ರಿಯಗಳಿಂದ ಏನೇನು ಮಾಡುವ ಕರ್ಮಗಳು

ಲಕ್ಷ್ಮೀ ನಿವಾಸನ ಪೂಜೆಯೆಂದು ಅರ್ಪಿಸದ ಮಾನವನು//6//


ದೇವ ಗಂಗೆಯೊಳು ಉಳ್ಳವಗೆ ದುರಿತ ಅವಳಿಗಳು ಉಂಟೇ ವಿಚಾರಿಸೆ

ಪಾವುಗಳ ಭಯವುಂಟೆ ವಿಹಗಾಧಿಪನ ಮಂದಿರದಿ

ಜೀವ ಕರ್ತೃತ್ವವನು ಮರೆದು ಪರಾವರೇಶನೆ ಕರ್ತೃ ಎಂದರಿದು

ಆವ ಕರ್ಮವ ಮಾಡಿದರು ಲೆಪಿಸವು ಕರ್ಮಗಳು//7//


ಏನು ಮಾಡುವ ಪುಣ್ಯ ಪಾಪಗಳು ಆಣೆ ಮಾಡುವೆನೆಂಬ ಅಧಮ

ಹೀನ ಕರ್ಮಕೆ ಪಾತ್ರ ನಾ ಪುಣ್ಯಕ್ಕೆ ಹರಿಯೆಂಬ ಮಾನವನು ಮಧ್ಯಮನು

ದ್ವಂದ್ವಕೆ ಶ್ರೀನಿವಾಸನೆ ಕರ್ತೃವೆಂದು

ಸದಾನುರಾಗದಿ ನೆನೆದು ಸುಖಿಸುವರೇ ನರೋತ್ತಮರು//8//


ಈ ಉಪಾಸನೆಗೈವರು ಇಳೆಯೊಳು ದೇವತೆಗಳು ಅಲ್ಲದಲೇ ನರರಲ್ಲ

ಆವ ಬಗೆಯಿಂದಾದರು ಅವರ ಅರ್ಚನೆಯು ಹರಿಪೂಜೆ

ಕೇವಲ ಪ್ರತಿಮೆಗಳು ಎನಿಪರು ರಮಾ ವಿನೋದಗೆ

ಇವರ ಅನುಗ್ರಹವೇ ವರಾನುಗ್ರಹವೆನಿಸುವುದು ಮುಕ್ತಿ ಯೋಗ್ಯರಿಗೆ//9//


ತನುವೆ ನಾನೆಂಬುವೆನು ಸತಿ ಸುತ ಮನೆ ಧನಾದಿಗಳು ಎನ್ನದೆಂಬುವ

ದ್ಯುನದಿ ಮೊದಲಾದ ಉದಕಗಳೆ ಸತ್ ತೀರ್ಥವು ಎಂಬುವನು

ಅನಲ ಲೋಹಾದಿ ಪ್ರತೀಕ ಅರ್ಚನವೆ ದೇವರ ಪೂಜೆ

ಸುಜನರ ಮನುಜರು ಅಹುದು ಎಂಬುವನು ಗೋಖರನೆನಿಪ ಬುಧರಿಂದ//10//


ಅನಲ ಸೋಮಾರ್ಕ ಇಂದು ತಾರ ಅವನಿ ಸುರಾಪಗ ಮುಖ್ಯ ತೀರ್ಥಗಳು

ಅನಿಲ ಗಗನ ಮನಾಡಿ ಇಂದ್ರಿಯಗಳಿಗಭಿಮಾನಿ ಎನಿಪ ಸುರರು

ವಿಪಶ್ಚಿತರ ಸನ್ಮನದಿ ಭಜಿಸದೆಯಿಪ್ಪರನ

ಪಾವನವ ಮಾಡರು ತಮ್ಮ ಪೂಜೆಯ ಮಾಡಿದರು ಸರಿಯೇ//11//


ಕೆಂಡ ಕಾಣದೆ ಮುಟ್ಟಿದರು ಸರಿಕಂಡು ಮುಟ್ಟಲು ದಹಿಸದೆ ಇಪ್ಪುದೆ

ಪುಂಡರೀಕ ದಳಾಯತಾಕ್ಷನ ವಿಮಲ ಪದ ಪದ್ಮ

ಬಂಡುಣಿಗಳು ಎಂದೆನಿಪ ಭಕ್ತರ ಹಿಂಡು ನೋಡಿದ ಮಾತ್ರದಲಿ

ತನುದಿಂಡುಗೆಡಹಿದ ನರನ ಪಾವನ ಮಾಳ್ಪರು ಆ ಕ್ಷಣದಿ//12//


ಈ ನಿಮಿತ್ತ ಪುನಃ ಪುನಃ ಸುಜ್ಞಾನಿಗಳ ಸಹವಾಸ ಮಾಡು

ಕುಮಾನವರ ಕೂಡಿ ಆಡದಿರು ಲೌಕಿಕಕೆ ಮರುಳಾಗಿ

ವೈನತೇಯ ಅಂಸಗನ ಸರ್ವ ಸ್ಥಾನದಲಿ ತನ್ನಾಮ ರೂಪವ ಧೇನಿಸುತ ಸಂಚರಿಸು

ಇತರ ಆಲೋಚನೆಯ ಬಿಟ್ಟು//13//


ಈ ನಳಿನಜಾಂಡದೊಳು ಸರ್ವ ಪ್ರಾಣಿಗಳೊಳಗಿದ್ದು ಅನವರತ

ವಿಜ್ಞಾನಮಯ ವ್ಯಾಪಾರಗಳ ಮಾಡುವನು ತಿಳಿಸದಲೆ

ಏನು ಕಾಣದೆ ಸಕಲ ಕರ್ಮಗಳು ಆನೆ ಮಾಡುವೆನೆಂಬ ನರನು

ಕುಯೋನಿ ಐದುವ ಕರ್ತೃ ಹರಿ ಎಂದವನೇ ಮುಕ್ತನಹ//14//


ಕಲಿಮಲಾಪಹಳು ಎನಿಸುತಿಹ ಬಾಂಬೊಳೆಯೊಳಗೆ ಸಂಚರಿಸಿ ಬದುಕುವ

ಜಲಚರ ಪ್ರಾಣಿಗಳು ಬಲ್ಲವೆ ತೀರ್ಥ ಮಹಿಮೆಯನು

ಹಲವು ಬಗೆಯಲಿ ಹರಿಯ ಕರುಣಾ ಬಲದಿ ಬಲ್ಲಿದರು ಆದ

ಬ್ರಹ್ಮಾನಿಲ ವಿಪ ಈಶಾದಿ ಅಮರರು ಅರಿಯರು ಅನಂತನ ಅಮಲ ಗುಣ//15//


ಶ್ರೀಲಕುಮಿ ವಲ್ಲಭನು ಹೃತ್ಕೀಲಾಲಜದೊಳಿದ್ದು ಅಖಿಳ ಚೇತನ ಜಾಲವನು ಮೋಹಿಸುವ

ತ್ರಿಗುಣದಿ ಬದ್ಧರನು ಮಾಡಿ

ಸ್ಥೂಲ ಕರ್ಮದಿ ರತರ ಮಾಡಿ ಸ್ವಲೀಲೆಗಳ ತಿಳಿಸದಲೆ

ಭವಾದಿ ಕುಲಾಲ ಚಕ್ರದ ತೆರದಿ ತಿರುಗಿಸುತಿಹನು ಮಾನವರ//16//


ವೇದ ಶಾಸ್ತ್ರ ವಿಚಾರಗೈದು ನಿಷೇಧ ಕರ್ಮವ ತೊರೆದು ನಿತ್ಯದಿ

ಸಾಧು ಕರ್ಮವ ಮಾಳ್ಪರಿಗೆ ಸ್ವರ್ಗಾದಿ ಸುಖವ ಈವ

ಐದಿಸುವ ಪಾಪಿಅಗಲ ನಿರಯವ ಖೇದ ಮೋದ ಮನುಷ್ಯರಿಗೆ

ದುರ್ವಾದಿಗಳಿಗೆ ಅಂಧಂತಮದಿ ಮಹಾ ದುಃಖಗಳನು ಉಣಿಪ//17//


ನಿರ್ಗುಣ ಉಪಾಸಕಗೆ ಗುಣ ಸಂಸರ್ಗ ದೋಷಗಳು ಈಯದಲೆ

ಅಪವರ್ಗದಲಿ ಸುಖವಿತ್ತು ಪಾಲಿಸುವನು ಕೃಪಾಸಾಂದ್ರ

ದುರ್ಗಮನು ಎಂದೆನಿಪ ತ್ರೈವಿಧ್ಯರ್ಗೆ ತ್ರಿಗುಣಾತೀತ

ಸಂತತ ಸ್ವರ್ಗ ಭೂ ನರಕದಲಿ ಸಂಚಾರವನೆ ಮಾಡಿಸುವ//18//


ಮೂವರೊಳಗಿದ್ದರು ಸರಿಯೆ ಸುಖ ನೋವುಗಳು ಸಂಬಂಧವಾಗವು

ಪಾವನಕೆ ಪಾವನ ಪರಾತ್ಪರ ಪೂರ್ಣ ಸುಖವನದಿ

ಈ ವನರುಹ ಭವಾಂಡದೊಳು ಸ್ವ ಕಳೇವರ ತದಾಕಾರ ಮಾಡಿ ಪರಾವರೇಶ

ಚರಾಚರಾತ್ಮಕ ಲೋಕಗಳ ಪೊರೆವ//19//


ಈ ನಿಮಿತ್ತ ನಿರಂತರ ಸ್ವಾಧೀನ ಕರ್ತೃತ್ವವನು ಮರೆದು

ಏನೇನು ಮಾಡುವುದು ಎಲ್ಲ ಹರಿ ಒಳಹೊರಗೆ ನೆಲೆಸಿದ್ದು ತಾನೇ ಮಾಡುವೆನೆಂದು

ಮದ್ದಾನೆಯಂದದಿ ಸಂಚರಿಸು

ಪವಮಾನ ವಂದಿತ ಒಂದರೆಕ್ಷಣ ಬಿಟ್ಟಗಲ ನಿನ್ನ//20//


ಹಲವು ಕರ್ಮವ ಮಾಡಿ ದೇಹವ ಬಳಲಿಸದೆ ದಿನದಿನದಿ ಹೃದಯ ಕಮಲ ಸದನದಿ

ವಿರಾಜಿಸುವ ಹರಿ ಮೂರ್ತಿಯನೆ ಭಜಿಸು

ತಿಳಿಯದೆ ಈ ಪೂಜಾ ಪ್ರಕರಣವ ಫಲ ಸುಪುಷ್ಪ ಅಗ್ರೋದಕ

ಶ್ರೀ ತುಳಸಿಗಳನು ಅರ್ಪಿಸಲು ಒಪ್ಪನು ವಾಸುದೇವ ಸದಾ//21//


ಧರಣಿ ನಾರಾಯಣನು ಉದಕದಿ ತುರ್ಯ ನಾಮಕ ಅಗ್ನಿಯೊಳು ಸಂಕರುಷಣ ಆಹ್ವಯ

ವಾಯುಗನು ಪ್ರದ್ಯುಮ್ನ ಅನಿರುದ್ಧ ಇರುತಿಹನು ಆಕಾಶದೊಳು

ಮೂರೆರೆಡು ರೂಪವ ಧರಿಸಿ ಭೂತಗ ಕರೆಸುವನು

ತನ್ನಾಮ ರೂಪದಿ ಪ್ರಜರ ಸಂತೈಪ//22//


ಘನಗತನು ತಾನಾಗಿ ನಾರಾಯಣನು ತನ್ನಾಮದಲಿ ಕರೆಸುತ

ವನದ ಗರ್ಭ ಉದಕದಿ ನೆಲೆಸಿಹ ವಾಸುದೇವಾಖ್ಯ

ಧ್ವನಿ ಸಿಡಿಲು ಸಂಕರುಷಣನು ಮಿಂಚಿನೊಳು ಶ್ರೀ ಪ್ರದ್ಯುಮ್ನ

ವೃಷ್ಟಿಯ ಹನಿಗಳೊಳಗೆ ಅನಿರುದ್ಧನಿಪ್ಪನು ವರುಷನೆಂದೆನಿಸಿ//23//


ಗೃಹ ಕುಟುಂಬ ಧನಾದಿಗಳ ಸನ್ನಹಗಳನು ಉಳ್ಳವರಾಗಿ

ವಿಹಿತಾವಿಹಿತ ಧರ್ಮ ಸುಕರ್ಮಗಳ ತಿಳಿಯದಲೆ ನಿತ್ಯದಲಿ

ಅಹರ ಮೈಥುನ ನಿದ್ರೆಗೊಳಗಾಗಿ ಇಹರು ಸರ್ವ ಪ್ರಾಣಿಗಳು

ಹೃದ್ಗುಹ ನಿವಾಸಿಯನು ಅರಿಯದಲೆ ಭವದೊಳಗೆ ಬಳಲುವರು//24//


ಜಡಜ ಸಂಭವ ಖಗ ಫಣಿಪ ಕೆಂಜೆಡೆಯರಿಂದ ಒಡಗೂಡಿ

ರಾಜಿಸುತ ಅಡವಿಯೊಳಗಿಪ್ಪನು ಸದಾ ಗೋಜಾದ್ರಿಜನೆನಿಸಿ

ಉಡುಪನಿಂದ ಅಭಿವೃದ್ಧಿಗಳ ತಾ ಕೊಡುತ ಪಕ್ಷಿ ಮೃಗಾಹಿಗಳ

ಕಾರೊಡಲ ಕಾವನು ತತ್ತದಾಹ್ವಯನು ಆಗಿ ಜೇವರನ//25//


ಅಪರಿಮಿತ ಸನ್ಮಹಿಮ ನರಹರಿ ವಿಪಿನದೊಳು ಸಂತೈಸುವನು

ಕಾಶ್ಯಪಿಯನು ಅಳಿದವ ಸ್ಥಳಗಳಲಿ ಸರ್ವತ್ರ ಕೇಶವನು

ಖಪತಿ ಗಗನದಿ ಜಲಗಳಲಿ ಮಹ ಶಫರನಾಮಕ

ಭಕ್ತರನು ನಿಷ್ಕಪಟದಿಂದಲಿ ಸಲಹುವನು ಕರುಣಾಳು ದಿನದಿನದಿ//26//


ಕಾರಣಾಂತರ್ಯಾಮಿ ಸ್ಥೂಲ ಅವತಾರ ವ್ಯಾಪ್ತಾಂಶ ಆದಿ ರೂಪಕೆ

ಸಾರ ಶುಭ ಪ್ರವಿವಿಕ್ತ ಆನಂದ ಸ್ಥೂಲ ನಿಸ್ಸಾರ

ಆರು ರಸಗಳನು ಅರ್ಪಿಸಲ್ಪರಿಗೆ ಈ ರಹಸ್ಯವ ಪೇಳದೆ

ಸದಾಪಾರ ಮಹಿಮನ ರೂಪ ಗುಣಗಳ ನೆನೆದು ಸುಖಿಸುತಿರು//27//


ಜಲಗತ ಉಡುಪನ ಅಮಲ ಬಿಂಬವ ಮೆಲುವೆವು ಎಂಬ ಅತಿ ಹರುಷದಿಂದಲಿ

ಜಲಚರ ಪ್ರಾಣಿಗಳು ನಿತ್ಯದಿ ಯತ್ನಗೈವಂತೆ

ಹಲಧರಾನುಜ ಭೋಗ್ಯ ರಸಗಳ ನೆಲೆಯನರಿಯದೆ ಪೂಜಿಸುತ

ಹಂಬಲಿಸುವರು ಪುರುಷಾರ್ಥಗಳ ಸತ್ಕುಲಜರು ಆವೆಂದು//28//


ದೇವ ಋಷಿ ಗಂಧರ್ವ ಪಿತೃ ನರ ದೇವ ಮಾನವ ದನುಜ ಗೋ ಅಜ

ಖರಾವಿ ಮೊದಲಾದ ಅಖಿಳ ಚೇತನ ಭೋಗ್ಯ ರಸಗಳನು

ಯಾವದವಯವಗಳೊಳಗಿದ್ದು ರಮಾವರನು ಸ್ವೀಕರಿಪ

ಯಾವಜ್ಜೀವ ಗಣಕೆ ಸ್ವಯೋಗ್ಯ ರಸಗಳನು ಈವನು ಎಂದೆಂದು//29//


ಒರಟು ಬುದ್ಧಿಯ ಬಿಟ್ಟು ಲೌಕಿಕ ಹರಟೆಗಳ ನೀಡಾಡಿ

ಕಾಂಚನ ಪರಟಿ ಲೋಷ್ಟ ಆದಿಗಳು ಸಮವೆಂದರಿದು ನಿತ್ಯದಲಿ

ಪುರುಟ ಗರ್ಭಾಂಡ ಉದರನು ಸತ್ಪುರುಷನು ಎಂದೆನಿಸಿ

ಎಲ್ಲರೊಳಗಿದ್ದು ಉರುಟ ಕರ್ಮವ ಮಾಳ್ಪನು ಎಂದು ಅಡಿಗಡಿಗೆ ನೆನೆವುತಿರು//30//


ಭೂತಳದಿ ಜನರುಗಳು ಮರ್ಮಕ ಮಾತುಗಳನಾಡಿದರೆ ಸಹಿಸದೆ

ಘಾತಿಸುವರು ಅತಿ ಕೋಪದಿಂದಲಿ ಹೆಚ್ಚರಿಪ ತೆರದಿ

ಮಾತುಳಾಂತಕ ಜಾರ ಹೇ ನವನೀತ ಚೋರನೆನಲು

ತನ್ನ ನಿಕೇತನದೊಳಿಟ್ಟು ಅವರ ಸಂತೈಸುವನು ಕರುಣಾಳು//31//


ಹರಿಕಥಾಮೃತ ಸಾರವಿದು ಸಂತರು ಸದಾ ಚಿತ್ತೈಸುವುದು

ನಿಷ್ಠುರಿಗಳಿಗೆ ಪಿಶುನರಿಗೆ ಅಯೋಗ್ಯರಿಗೆ ಇದನು ಪೇಳದಲೇ

ನಿರುತ ಸದ್ಭಕ್ತಿಯಲಿ ಭಗವತ್ ಚರಿತೆಗಳ ಕೊಂಡಾಡಿ ಹಿಗ್ಗುವ

ಪರಮ ಭಗವತ್ ದಾಸರಿಗೆ ತಿಳಿಸುವುದು ಈ ರಹಸ್ಯ//32//


ಸತ್ಯ ಸಂಕಲ್ಪನು ಸದಾ ಏನು ಇತ್ತದೆ ಪುರುಷಾರ್ಥವೆoದರಿದು

ಅತ್ಯಧಿಕ ಸಂತೋಷದಿಂ ನೆನೆವುತ್ತ ಭುಂಜಿಪುದು

ನಿತ್ಯ ಸುಖ ಸಂಪೂರ್ಣ ಪರಮ ಸುಹೃತ್ತಮ ಜಗನ್ನಾಥ ವಿಠಲ

ಬತ್ತಿಸಿ ಭವಾಂಬುಧಿಯ ಚಿತ್ಸುಖ ವ್ಯಕ್ತಿ ಕೊಡುತಿಪ್ಪ//33//


//ಇತಿ ಶ್ರೀ ನಾಮಸ್ಮರಣ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು