Thursday, January 17, 2013

ಶ್ರೀ ಹರಿಕಥಾಮೃತಸಾರ - 15

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಶ್ರೀ ಶ್ವಾಸ ಸಂಧಿ//


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಭಾರತೀಶನು ಘಳಿಗೆಯೊಳು ಮುನ್ನೂರ ಅರವತ್ತು ಸುರ ಜಪಗಳ ತಾ ರಚಿಸುವನು

ಸರ್ವ ಜೀವರೊಳಿದ್ದು ಬೇಸರದೆ

ಕಾರುಣಿಕ ಅವರವರ ಸಾಧನ ಪೂರೈಸಿ ಭೂ ಸ್ವರ್ಗ ನರಕವ ಸೇರಿಸುವ

ಸರ್ವಜ್ಞ ಸಕಲೇಷ್ಟ ಪ್ರದಾಯಕನು//1//


ತಾಸಿಗೆ ಒಂಭೈನೂರು ಶ್ವಾಸೋಚ್ಚಾಸಗಳ ನಡೆಸುತಲಿ

ಚೇತನ ರಾಶಿಯೊಳು ಹಗಲಿರುಳು ಜಾಗೃತನಾಗಿ ನಿತ್ಯದಲಿ

ಈ ಸುಮನಸೋತ್ತಂಸ ಲೇಶ ಆಯಾಸವಿಲ್ಲದೆ ಪೋಷಿಸುತ

ಮೂಲೇಶನ ಅಂಘ್ರಿ ಸರೋಜ ಮೂಲದಲಿಪ್ಪ ಕಾಣಿಸದೆ//2//


ಅರಿವುದೊಂದು ಯಾಮದೊಳು ಶ್ವಾಸಗಳು ಎರಡು ಸಾವಿರದ ಏಳು ನೂರನು

ಶರ ಸಹಸ್ರದ ಮೇಲೆ ನಾನೂರು ಅಹವು ದ್ವಿತೀಯಕ್ಕೆ

ಮರಳಿ ಯಾಮತ್ರಯಕೆ ವಸು ಸಾವಿರದ ಮೇಲೆ ನೂರು ಎಣಿಕೆಯಲಿ

ಹನ್ನೆರೆಡು ತಾಸಿಗೆ ಹತ್ತು ಸಾವಿರದ ಎಂಟು ನೂರ ಅಹವು//3//


ಒಂದು ದಿನದೊಳಗೆ ಅನಿಳ ಇಪ್ಪ್ಪತ್ತೊಂದು ಸಾವಿರದ ಆರು ನೂರು

ಮುಕುಂದನಾಜ್ಞದಿ ಮಾಡಿ ಮಾಡಿಸಿ ಲೋಕಗಳ ಪೊರೆವನೆಂದು ಪವನನ ಪೊಗಳುತಿರು

ಎಂದೆಂದೂ ಮರೆಯದೆ ಈ ಮಹಿಮೆ ಸಂಕ್ರಂದನಾದ್ಯರಿಗುಂಟೆ

ನೋಡಲು ಸರ್ವ ಕಾಲದಲಿ//4//


ಮೂರು ಲಕ್ಷದ ಮೇಲೆ ವಿಂಶತಿ ಈರೆರೆಡು ಸಾವಿರವು ಪಕ್ಷಕೆ

ಆರು ಲಕ್ಷದ ಮೇಲೆ ನಾಲ್ವತ್ತೆಂಟು ಸಾವಿರವು ಮಾರುತನು ಮಾಸಕೆ ಜಪಿಸಿ

ಸಂಸಾರ ಸಾಗರದಿಂದ ಸುಜನರ ಪಾರುಗಾಣಿಸಿ

ಸಲಹುವನು ಬಹು ಭೋಗಗಳನಿತ್ತು//5//


ಎರಡು ತಿಂಗಳಿಗೆ ಅಹುದು ಋತು ಭೂ ಸುರರು ತಿಳಿವುದು

ಶ್ವಾಸ ಜಪ ಹನ್ನೆರಡು ಲಕ್ಷದ ಮೇಲೆ ತೊಂಭತ್ತಾರು ಸಹಸ್ರ

ಕರೆಸುವದು ಅಯನ ಅಹ್ವಯದಿ ಅರೆ ವರುಷ

ಮೂವತ್ತೆಂಟು ಲಕ್ಷ ಈ ಪರಿ ತಿಳಿವುದು ಎಂಭತ್ತೆಂಟು ಸಹಸ್ರ ಕೋವಿದರು//6//


ವರುಷಕೆ ಇದರ ಇಮ್ಮಡಿ ಜಪಂಗಳ ಗುರುವರಿಯ ತಾ ಮಾಡಿ ಮಾಡಿಸಿ

ದುರಿತಗಳ ಪರಿಹರಿಸುವನು ಚಿಂತಿಸುವ ಸಜ್ಜನರ

ಸುರ ವಿರೋಧಿಗಳೊಳಗೆ ನೆಲೆಸಿದ್ದು ಅರವಿದೂರ

ತಮ ಅಧಿಕಾರಿಗಳ ಇರವರಿತು ಸೋಹಂ ಉಪಾಸನೆ ಮಾಳ್ಪನು ಅವರಂತೆ//7//


ಇನಿತು ಉಪಾಸನೆ ಸರ್ವ ಜೀವರೊಳು ಅನಿಲದೇವನು ಮಾಡುತಿರೆ

ಚಿಂತನೆಯ ಮಾಡದೆ ಕಂಡ ನೀರೊಳು ಮುಳುಗಿ ನಿತ್ಯದಲಿ ಮನೆಯೊಳಗೆ ಕೃಷ್ಣಾಜಿನಾದಿ

ಆಸನದಿ ಕುಳಿತು ವಿಶಿಷ್ಟ ಬಹು ಸಜ್ಜನನು ಎನಿಸಿ

ಜಪ ಮಣಿಗಳ ಎಣಿಸಿದರೇನು ಬೇಸರದೆ//8//


ಓದನೋದಕವು ಎರಡು ತೇಜದೊಳು ಐದುವವು ಲಯ

ತದಭಿಮಾನಿಗಳಾದ ಶಿವ ಪವನರು ರಮಾಧೀನತ್ವ ಐದಿಹರು

ಈ ದಿವಿಜರ ಒಡಗೂಡಿ ಶ್ರೀ ಮಧುಸೂದನನ ಐದುವಳೆಂದರಿದು

ಆದರದಲಿ ಅನ್ನೋದಕವ ಕೊಡುತ ಉಣುತ ಸುಖಿಸುತಿರು//9//


ಜಾಲಿ ತೊಪ್ಪಲ ಅಜಾವಿಗಳು ಮೆದ್ದು ಆಲಯದಿ ಸ್ವೆಚ್ಚಾನುಸಾರದಿ

ಪಾಲಗರೆವ ಅಂದದಲಿ ಲಕ್ಷ್ಮೀ ರಮಣ ತನ್ನವರ ಕೀಳು ಕರ್ಮವ ಸ್ವೀಕರಿಸಿ

ತನ್ನ ಆಲಯದೊಳಿಟ್ಟು ಅವರ ಪೊರೆವ

ಕೃಪಾಳು ಕಾಮದ ಕೈರವದಳ ಶ್ಯಾಮ ಶ್ರೀರಾಮ//10//


ಶಶಿ ದಿವಾಕರ ಪಾವಕರೊಳಿಹ ಅಸಿತಸಿತಲೋಹಿತಗಳಲಿ

ಶಿವಸ್ವಸನ ಭಾರ್ಗವಿ ಮೂವರೊಳು ಶ್ರೀ ಕೃಷ್ಣ ಹಯವದನ ವಸುಧಿಪಾರ್ದನ

ತ್ರಿವೃತುಯೆನಿಸಿ ವಸುಮತಿಯೊಳು ಅನ್ನೋದಕ ಅನಳ ಪೆಸರಿನಿಂದಲಿ

ಸರ್ವ ಜೀವರ ಸಲಹುವನು ಕರುಣಿ//11//


ದೀಪ ಕರದಲಿ ಪಿಡಿದು ಕಾಣದೆ ಕೂಪದೊಳು ಬಿದ್ದಂತೆ

ವೇದ ಮಹೋಪನಿಷದ್ ಅರ್ಥಗಳ ನಿತ್ಯದಿ ಪೇಳುವವರೆಲ್ಲ

ಶ್ರೀ ಪವನಮುಖ ವಿನುತನ ಅಮಲ ಸುರೂಪಗಳ ವ್ಯಾಪಾರ ತಿಳಿಯದೆ

ಪಾಪ ಪುಣ್ಯಕೆ ಜೀವ ಕರ್ತೃ ಆಕರ್ತೃ ಹರಿಯೆಂಬ//12//


ಅನಿಲದೇವನು ವಾಗ್ಮನಃ ಮಯನು ಎನಿಸಿ ಪಾವಕ ವರುಣ

ಸಂಕ್ರಂದನ ಮುಖಾದ್ಯರೊಳಿದ್ದು ಭಗವದ್ರೂಪ ಗುಣಗಳನು

ನೆನೆನೆನೆದು ಉಚ್ಚರಿಸುತಲಿ ನಮ್ಮನು ಸದಾ ಸಂತೈಸುವನು

ಸನ್ಮುನಿ ಗಣ ಆರಾಧಿತ ಪದಾಂಬುಜ ಗೋಜ ಸುರರಾಜ//13//


ಪಾದವು ಎನಿಪವು ವಾಗ್ಮನಃಮಯ ಪಾದರೂಪ ದ್ವಯಗಳೊಳು

ಪ್ರಹ್ಲಾದ ಪೋಷಕ ಸಂಕರುಷಣಾಹ್ವಯದಿ ನೆಲೆಸಿದ್ದು

ವೇದ ಶಾಸ್ತ್ರ ಪುರಾಣಗಳ ಸಂವಾದ ರೂಪದಿ ಮನನಗೈವುತ

ಮೋದಮಯ ಸುಖವಿತ್ತು ಸಲಹುವ ಸರ್ವ ಸಜ್ಜನರ//14//


ಗಂಧವಹ ದಶ ದಿಶಗಳೊಳಗೆ ಅರವಿಂದ ಸೌರಭ ಪಸರಿಸುತ

ಘ್ರಾಣ ಇಂದ್ರಿಯಗಳಿಗೆ ಸುಖವನೀವುತ ಸಂಚರಿಸುವಂತೆ

ಇಂದಿರೇಶನ ಸುಗುಣಗಳ ದೈನಂದಿನದಿ ತುತಿಸುತ ಅನುಮೋದಿಸುತ

ಅಂಧಬಧಿರ ಸುಮೂಕನಂತಿರು ಮಂದ ಜನರೊಡನೆ//15//


ಶ್ರೀರಮಣನ ಅರಮನೆಯ ಪೂರ್ವ ದ್ವಾರದಲಿ ಇಹ ಸಂಜ್ಞಸೂರ್ಯಗ

ಭಾರತೀಪತಿ ಪ್ರಾಣನ ಒಳಗಿಹ ಲಕುಮಿ ನಾರಾಯಣನ ಸೇರಿ ಮನುಜೋತ್ತಮರು

ಸರ್ವ ಶರೀರಗತ ನಾರಾಯಣನ ಅವತಾರ ಗುಣಗಳ ತುತಿಸುತಲಿ

ಮೋದಿಪರು ಮುಕ್ತಿಯಲಿ//16//


ಪ್ರಣವ ಪ್ರತಿಪಾದ್ಯನ ಪುರದ ದಕ್ಷಿಣ ಕವಾಟದಲಿಪ್ಪ

ಶಶಿ ರೋಹಿಣಿಗತ ವ್ಯಾನಸ್ಥ ಕೃತಿ ಪ್ರದ್ಯುಮ್ನ ರೂಪವನು

ಗುಣಗಳನು ಸಂಸ್ತುತಿಸುತಲಿ ಪಿತೃ ಗಣ ಗಧಾಧರನ ಅತಿವಿಮಲ ಪಟ್ಟಣದ ಒಳಗೆ

ಸ್ವೇಚ್ಚಾನುಸಾರದಿ ಸಂಚರಿಸುತಿಹರು//17//


ಅಮಿತ ವಿಕ್ರಮನ ಆಲಯದ ಪಶ್ಚಿಮ ಕವಾಟದಿ ಸತಿಸಹಿತ ಸಂಭ್ರಮದಿ

ಭಗವದ್ಗುಣಗಳನೆ ಪೊಗಳುತಲೇ ಮೋದಿಸುವ

ಸುಮನಸಾಸ್ಯನೊಳಿಪ್ಪ ಅಪಾನಗ ದಮನ ಸಂಕರುಷಣನ

ನಿಹ ಹೃತ್ಕಮಲದೊಳು ಧೇನಿಸುವ ಋಷಿಗಣವ ಐದಿ ಸುಖಿಸುವರು//18//


ಸ್ವರಮಣನ ಗುಣ ರೂಪ ಸಪ್ತಸ್ವರಗಳಿಂದಲಿ ಪಾಡುತಿಹ

ತುಂಬುರನೆ ಮೊದಲಾದ ಅಖಿಳ ಗಂಧರ್ವರು

ರಮಾಪತಿಯ ಪುರದ ಉತ್ತರ ಬಾಗಿಲಧಿಪ ಸುರಪ ಶಚಿಗ ಸಮಾನ ವಾಯುಗ

ಹರಿನ್ಮಣಿನಿಭ ಶಾಂತಿಪತಿ ಅನಿರುದ್ಧನ ಐದುವರು//19//


ಗರುಡ ಶೇಷ ಅಮರ ಇಂದ್ರಮುಖ ಪುಷ್ಕರನೆ ಕಡೆಯಾಗಿಪ್ಪ ಅಖಿಳ ನಿರ್ಜನರು

ಊರ್ಧ್ವ ದ್ವಾರಗತ ಭಾರತಿ ಉದಾನದೊಳು ಮೆರೆವ ಮಾಯಾ ವಾಸುದೇವನ

ಪರಮ ಮಂಗಳ ಅವಯವಗಳ ಮಂದಿರವನು ಐದಿ

ಸದಾ ಮುಕುಂದನ ನೋಡಿ ಸುಖಿಸುವರು//20//


ದ್ವಾರ ಪಂಚಕ ಪಾಲರೊಳಗಿಹ ಭಾರತೀ ಪ್ರಾಣಾಂತರಾತ್ಮಕ

ಮಾರಮಣನ ಐ ರೂಪ ತತ್ತತ್ದ್ವಾರದಲಿ ಬಪ್ಪ

ಮೂರೆರೆಡು ವಿಧ ಮುಕ್ತಿ ಯೋಗ್ಯರ ತಾರತಮ್ಯವನರಿತು ಅವರ

ಕಂಸಾರಿ ಸಂಸಾರಾಬ್ಧಿ ದಾಟಿಸಿ ಮುಕ್ತರಣ ಮಾಳ್ಪ//21//


ಬೆಳಗಿದ ಹೂಜಿಯು ನೋಳ್ಪರಿಗೆ ಥಳಥಳಿಸುತಲಿ ಕಂಗೊಳಿಸುವ ಅಂದದಿ

ತೊಳೆದು ದೇಹವ ನಾಮ ಮುದ್ರೆಗಳಿಂದ ಅಲಂಕರಿಸಿ ಒಲಿಸಿ

ನಿತ್ಯ ಕುತರ್ಕ ಯುಕ್ತಿಗಳ ಅಲವಬೋಧರ ಶಾಸ್ತ್ರ ಮರ್ಮವ ತಿಳಿಯದಿಹ ನರ

ಬರಿದೆ ಇದರೊಳು ಶಂಕಿಸಿದರೇನು//22//


ಉದಧಿಯೊಳು ಊರ್ವಿಗಳು ತೋರ್ಪಂದದಲಿ ಹಂಸೋದ್ಗೀಥ ಹರಿ

ಹಯವದನ ಕೃಷ್ಣಾದಿ ಅಮಿತ ಅವತಾರಗಳು ನಿತ್ಯದಲಿ

ಪದುಮನಾಭನೊಳು ಇರುತಿಹವು ಸರ್ವದ ಸಮಸ್ತ ಪ್ರಾಣಿಗಳ ಚಿತ್ಹೃದಯಗತ ರೂಪಗಳು

ಅವ್ಯವಧಾನದಲಿ ಬಿಡದೆ//23//


ಶರಧಿಯೊಳು ಮಕರಾದಿ ಜೀವರು ಇರುಳು ಹಗಲು ಏಕ ಪ್ರಕಾರದಿ

ಚರಿಸುತ ಅನುಮೋದಿಸುತ ಇಪ್ಪಂದದಿ

ಜಗತ್ರಯವು ಇರುತಿಹುದು ಜಗದೀಶನುದರದಿ

ಕರೆಸುವುದು ಪ್ರತಿಬಿಂಬ ನಾಮದಿ ಧರಿಸಿಹುದು ಹರಿ ನಾಮ ರೂಪಂಗಳನು ಅನವರತ//24//


ಜನನಿ ಸೌಷ್ಠ ಪದಾರ್ಥಗಳು ಭೋಜನವ ಮಾಡಲು ಗರ್ಭಗತ ಶಿಶು ದಿನದಿನದಿ

ಅಭಿವೃದ್ಧಿಯೈದುವ ತೆರದಿ

ಜೀವರಿಗೆ ಪದುಮನಾಭನು ಸರ್ವ ರಸ ಉಂಡುಣಿಸಿ ಸಂರಕ್ಷಿಸುವ

ಜಾಹ್ನವಿ ಜನಕ ಜನ್ಮಾದಿ ಅಖಿಳ ದೋಷ ವಿದೂರ ಗಂಭೀರ//25//


ಆಶೆಗೆ ಒಳಗಾದವನು ಜನರಿಗೆ ದಾಸನೆನಿಸುವ

ಆಶೆಯನು ನಿಜ ದಾಸಗೆ ಐದಿಹ ಪುಂಸಗೆ ಎಲ್ಲರು ದಾಸರೆನಿಸುವರು

ಶ್ರೀಶನ ಅಂಘ್ರಿ ಸರೋಜಯುಗಳ ನಿರಾಶೆಯಿಂದಲಿ ಭಜಿಸೆ ಒಲಿದು

ರಮಾ ಸಹಿತ ತನ್ನನೆ ಕೊಡುವ ಕರುಣಾ ಸಮುದ್ರ ಹರಿ//26//


ದ್ಯುನದಿ ಆದ್ಯಂತವನು ಕಾಣದೆ ಮನುಜನು ಏಕತ್ರದಲಿ ತಾ ಮಜ್ಜನವ ಗೈಯೆ

ಸಮಸ್ತ ದೋಷದಿ ಮುಕ್ತನಹ ತೆರದಿ

ಅನಘನ ಅಮಲಾನಂತನಂತ ಸುಗುಣಗಳೊಳಗೆ ಒಂದೇ ಗುಣ

ಉಪಾಸನೆಯಗೈವ ಮಹಾತ್ಮ ಧನ್ಯ ಕೃತಾರ್ಥನು ಎನಿಸುವನು//27//


ವಾಸುದೇವನು ಕರೆಸುವನು ಕಾರ್ಪಾಸ ನಾಮದಿ ಸಂಕರುಷಣನು ವಾಸವಾಗಿಹ ತೂಲದೊಳು

ತಂತುಗನು ಪ್ರದ್ಯುಮ್ನ

ವಾಸ ರೂಪ ಅನಿರುದ್ಧ ದೇವನು

ಭೂಷಣನು ತಾನಾಗಿ ತೋರ್ಪ ಪರೇಶ ನಾರಾಯಣನು ಸರ್ವದ ಮಾನ್ಯ ಮಾನದನು//28//


ಲಲನೆಯಿಂದೊಡಗೂಡಿ ಚೈಲಗಳೊಳಗೆ ಓತಪ್ರೋತ ರೂಪದಿ

ನೆಲೆಸಿಹನು ಚತುರಾತ್ಮಕ ಜಗನ್ನಾಥ ವಿಠಲನು

ಛಳಿ ಬಿಸಿಲು ಮಳೆ ಗಾಳಿಯಿಂದ ಅರ ಘಳಿಗೆ ಬಿಡದಲೇ ಕಾವನು ಎಂದರಿದು

ಇಳೆಯೊಳು ಅರ್ಚಿಸುತಿರು ಸದಾ ಸರ್ವಾಂತರಾತ್ಮಕನ//29//


//ಇತಿ ಶ್ರೀ ಶ್ವಾಸ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು

ಶ್ರೀ ಹರಿಕಥಾಮೃತಸಾರ - 14

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಶ್ರೀ ಪಿತೃಗಣ ಸಂಧಿ//


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಕೃತಿರಮಣ ಪ್ರದ್ಯುಮ್ನ ವಸುದೇವತೆಗಳು ಅಹಂಕಾರ ತ್ರಯದೊಳು

ಚತುರವಿಂಶತಿ ರೂಪದಿಂದಲಿ ಭೋಜ್ಯನೆನಿಸುವನು

ಹುತವಹಾಕ್ಷ ಅಂತರ್ಗತ ಜಯಾಪತಿಯು ತಾನೇ ಮೂರಧಿಕ ತ್ರಿಂಶತಿ ಸುರೂಪದಿ

ಭೋಕ್ತ್ರು ಎನಿಸುವ ಭೋಕ್ತ್ರುಗಳೊಳಿದ್ದು//1//


ಆರಧಿಕ ಮೂವತ್ತು ರೂಪದಿ ವಾರಿಜಾಪ್ತನೊಳು ಇರುತಿಹನು

ಮಾಯಾರಮಣ ಶ್ರೀ ವಾಸುದೇವನು ಕಾಲನಾಮದಲಿ

ಮೂರುವಿಧ ಪಿತೃಗಳೊಳು ವಸು ತ್ರಿಪುರಾರಿ ಆದಿತ್ಯಗ ಅನಿರುದ್ಧನು

ತೋರಿಕೊಳ್ಳದೆ ಕರ್ತೃ ಕರ್ಮ ಕ್ರಿಯನು ಎನಿಸಿಕೊಂಬ//2//


ಸ್ವವಶ ನಾರಾಯಣನು ತಾ ಷಣ್ಣವತಿ ನಾಮದಿ ಕರೆಸುತಲಿ

ವಸು ಶಿವ ದಿವಾಕರ ಕರ್ತೃ ಕರ್ಮ ಕ್ರಿಯೆಗಳೊಳಗಿದ್ದು

ನೆವನವಿಲ್ಲದೆ ನಿತ್ಯದಲಿ ತನ್ನವರು ಮಾಡುವ ಸೇವೆ ಕೈಕೊಂಡು

ಅವರ ಪಿತೃಗಳಿಗೀವ ಅನಂತಾನಂತ ಸುಖಗಳನು//3//


ತಂತು ಪಟದಂದದಲಿ ಲಕ್ಷ್ಮೀಕಾಂತ ಪಂಚಾತ್ಮಕನು ಎನಿಸಿ

ವಸು ಕಂತು ಹರ ರವಿ ಕರ್ತೃಗಳೊಳಿದ್ದು

ಅನವರತ ತನ್ನ ಚಿಂತಿಸುತ ಸಂತರನು ಗುರು ಮಧ್ವಾಂತರಾತ್ಮಕ ಸಂತೈಸುವನು

ಸಂತತ ಅಖಿಳಾರ್ಥಗಳ ಪಾಲಿಸಿ ಇಹ ಪರಂಗಳಲಿ//4//


ತಂದೆ ತಾಯ್ಗಳ ಪ್ರೀತಿಗೋಸುಗ ನಿಂದ್ಯ ಕರ್ಮವ ತೊರೆದು

ವಿಹಿತಗಳು ಒಂದು ಮೀರದೆ ಸಾಂಗ ಕರ್ಮಗಳನು ಆಚರಿಸುವವರು

ವಂದನೀಯರಾಗಿ ಇಳೆಯೊಳಗೆ ದೈನಂದಿನದಿ ದೈಶಿಕ ದೈಹಿಕ ಸುಖದಿಂದ ಬಾಳ್ವರು

ಬಹು ದಿವಸದಲಿ ಕೀರ್ತಿಯುತರಾಗಿ//5//


ಅಂಶಿ ಅಂಶ ಅಂತರ್ಗತತ್ರಯ ಹಂಸವಾಹನ ಮುಖ್ಯ ದಿವಿಜರ ಅಸಂಶಯದಿ ತಿಳಿದು

ಅಂತರಾತ್ಮಕ ಶ್ರೀ ಜನಾರ್ಧನನ ಸಂಸ್ಮರಣೆ ಪೂರ್ವಕದಿ

ಷಡಾಧಿಕ ತ್ರಿಂಶತಿತ್ರಯ ರೂಪವರಿತು

ವಿಪಾಂಸಗನ ಪೂಜಿಸುವರು ಅವರೇ ಕೃತಾರ್ಥರು ಎನಿಸುವರು//6//


ಮೂರುವರೆ ಸಾವಿರದ ಮೇಲೆ ಅರೆ ನೂರೈದು ರೂಪದಿ ಜನಾರ್ಧನ

ಸೂರಿಗಳು ಮಾಡುವ ಸಮಾರಾಧನೆಗೆ ವಿಘ್ನಗಳು ಬಾರದಂತೆ

ಬಹುಪ್ರಕಾರ ಖರಾರಿ ಕಾಪಾಡುವನು ಸರ್ವ ಶರೀರಗಳೊಳಿದ್ದು

ಅವರವರ ಪೆಸರಿಂದ ಕರೆಸುತಲಿ//7//


ಜಯ ಜಯ ಜಯಾಕಾಂತ ದತ್ತಾತ್ರಯ ಕಪಿಲ ಮಹಿದಾಸ ಭಕ್ತಪ್ರಿಯ

ಪುರಾತನ ಪುರುಷ ಪೂರ್ಣಾನಂದ ಮಾನಘನ

ಹಯವದನ ಹರಿ ಹಂಸ ಲೋಕತ್ರಯ ವಿಲಕ್ಷಣ

ನಿಖಿಳ ಜಗದಾಶ್ರಯ ನಿರಾಮಯ ದಯದಿ ಸಂತೈಸೆಂದು ಪ್ರಾರ್ಥಿಸುವನು//8//


ಷಣ್ಣವತಿಯೆಂಬ ಅಕ್ಷರ ಈಡ್ಯನು ಷಣ್ಣವತಿ ನಾಮದಲಿ ಕರೆಸುತ

ತನ್ನವರು ಸದ್ಭಕ್ತಿ ಪೂರ್ವಕದಿಂದ ಮಾಡುತಿಹ ಪುಣ್ಯ ಕರ್ಮವ ಸ್ವೀಕರಿಸಿ

ಕಾರುಣ್ಯ ಸಾಗರ ಸಲಹುವನು

ಬ್ರಹ್ಮಣ್ಯದೇವ ಭವಾಬ್ಧಿಪೋತ ಬಹು ಪ್ರಕಾರದಲಿ//9//


ದೇಹಗಳ ಕೊಡುವವನು ಅವರವರ ಅಹರಗಳ ಕೊಡದಿಹನೆ

ಸುಮನಸ ಮಹಿತ ಮಂಗಳ ಚರಿತ ಸದ್ಗುಣ ಭರಿತನು

ಅನವರತ ಅಹಿಕ ಪಾರತ್ರಿಕ ಸುಖಪ್ರದ ವಹಿಸಿ ಬೆನ್ನಿಲಿ ಬೆಟ್ಟವ

ಅಮೃತವ ದ್ರುಹಿಣ ಮೊದಲಾದವರಿಗೆ ಉಣಿಸಿದ ಮುರಿದ ನಹಿತರನ//10//


ದ್ರುಹಿಣ ಮೊದಲಾದ ಅಮರರಿಗೆ ಸನ್ಮಹಿತ ಮಾಯಾರಮಣ

ತಾನೇ ಸ್ವಹನೆನಿಸಿ ಸಂತೃಪ್ತಿಪಡಿಸುವ ಸರ್ವಕಾಲದಲಿ

ಪ್ರಹಿತ ಸಂಕರುಷಣನು ಪಿತೃಗಳಿಗೆ ಅಹರನೆನಿಪ ಸ್ವಧಾಖ್ಯರೂಪದಿ

ಮಹಿಜ ಫಲ ತೃಣ ಪೆಸರಿನಲಿ ಪ್ರದ್ಯುಮ್ನ ಅನಿರುದ್ಧ//11//


ಅನ್ನನೆನಿಸುವ ನೃಪಶುಗಳಿಗೆ ಹಿರಣ್ಯ ಗರ್ಭಾಂಡದೊಳು

ಸಂತತ ತನ್ನನ ಈಪರಿಯಿಂದ ಉಪಾಸನೆಗೈವ ಭಕ್ತರನ ಬನ್ನಬಡಿಸದೆ

ಭವ ಸಮುದ್ರ ಮಹ ಉನ್ನತಿಯ ದಾಟಿಸಿ

ಚತುರ್ವಿಧ ಅನ್ನಮಯನು ಆತ್ಮ ಪ್ರದರ್ಶನ ಸುಖವನೀವ ಹರಿ//12//


ಮನವಚನ ಕಾಯಗಳ ದೆಶೆಯಿಂದ ಅನುದಿನದಿ ಬಿಡದೆ ಆಚರಿಸುತಿಪ್ಪ

ಅನುಚಿತೋಚಿತ ಕರ್ಮಗಳ ಸದ್ಭಕ್ತಿ ಪೂರ್ವಕದಿ ಅನಿಳ ದೇವನೊಳಿಪ್ಪ

ನಾರಾಯಣಗೆ ಇದು ಅನ್ನವೆಂದು ಕೃಷ್ಣಾರ್ಪಣವೆನುತ ಕೊಡು

ಸ್ವೀಕರಿಸಿ ಸಂತೈಪ ಕರುಣಾಳು//13//


ಏಳು ವಿಧ ಅನ್ನ ಪ್ರಕರಣವ ಕೇಳಿ ಕೋವಿದರ ಆಸ್ಯದಿಂದಲಿ

ಆಲಸವ ಮಾಡದಲೆ ಅನಿರುದ್ಧಾದಿ ರೂಪಗಳ

ಕಾಲಕಾಲದಿ ನೆನೆದು ಪೂಜಿಸು ಸ್ಥೂಲ ಮತಿಗಳಿಗೆ ಇದನು ಪೇಳದೆ

ಶ್ರೀ ಲಕುಮಿ ವಲ್ಲಭನೆ ಅನ್ನಾದನ್ನಾದನು//14//


ಎಂದರಿದು ಸಪ್ತಾನ್ನಗಳ ದೈನಂದಿನದಿ ಮರೆಯದೆ

ಸದಾ ಗೋವಿಂದಗೆ ಅರ್ಪಿಸು ನಿರ್ಭಯದಿ ಮಹಾಯಜ್ಞವು ಇದೆಂದು

ಇಂದಿರೇಶನು ಸ್ವೀಕರಿಸಿ ದಯದಿಂದ ಬೇಡಿಸಿಕೊಳದೆ

ತವಕದಿ ತಂದು ಕೊಡುವನು ಪರಮ ಮಂಗಳ ತನ್ನ ದಾಸರಿಗೆ//15//


ಸೂಜಿ ಕರದಲಿ ಪಿಡಿದು ಸಮರವ ನಾ ಜಯಿಸುವೆನು ಎಂಬ ನರನಂತೆ

ಈ ಜಗತ್ತಿನೊಳು ಉಳ್ಳ ಅಜ್ಞಾನಿಗಳು ನಿತ್ಯದಲಿ

ಶ್ರೀ ಜಗತ್ಪತಿ ಚರಣ ಯುಗಳ ಸರೋಜ ಭಕ್ತಿ ಜ್ಞಾನ ಪೂರ್ವಕ ಪೂಜಿಸದೆ

ಧರ್ಮಾರ್ಥ ಕಾಮವ ಬಯಸಿ ಬಳಲುವರು//16//


ಶಕಟ ಭಂಜನ ಸಕಲ ಜೀವರ ನಿಕಟಗನು ತಾನಾಗಿ

ಲೋಕಕೆ ಪ್ರಕಟನಾಗದೆ ಸಕಲ ಕರ್ಮವ ಮಾಡಿ ಮಾಡಿಸುತ

ಅಕುಟಿಲಾತ್ಮಕ ಭಕುತ ಜನರಿಗೆ ಸುಖದನೆನಿಸುವ ಸರ್ವಕಾಲದಿ

ಅಕಟಕಟ ಈತನ ಮಹಾ ಮಹಿಮೆಗಳಿಗೆ ಏನೆಂಬೆ//17//


ಶ್ರೀ ಲಕುಮಿವಲ್ಲಭನು ವೈಕುಂಠ ಆಲಯದಿ ಪ್ರಣವ ಪ್ರಕೃತಿ

ಕೀಲಾಲಜಾಸನ ಮುಖ್ಯ ಚೇತನರೊಳಗೆ ನೆಲೆಸಿದ್ದು

ಮೂಲ ಕಾರಣಾoಶಿ ನಾಮದಿ ಲೀಲೆಗೈಸುತ ತೋರಿ ಕೊಳ್ಳದೆ

ಪಾಲಿನೊಳು ಘೃತವಿದ್ದ ತೆರದಂತೆ ಇಪ್ಪ ತ್ರಿಸ್ಥಳದಿ//18//


ಮೂರು ಯುಗದಲಿ ಮೂಲ ರೂಪನು ಸೂರಿಗಳ ಸಂತೈಸಿ

ದಿತಿಜ ಕುಮಾರಕರ ಸಂಹರಿಸಿ ಧರ್ಮವನು ಉಳುಹಬೇಕೆಂದು

ಕಾರುಣಿಕ ಭೂಮಿಯೊಳು ನಿಜ ಪರಿವಾರ ಸಹಿತ ಅವತರಿಸಿ

ಬಹು ವಿಧ ತೋರಿದನು ನರವತ್ ಪ್ರವೃತ್ತಿಯ ಸಕಲ ಚೇತನಕೆ//19//


ಕಾರಣಾಹ್ವಯ ಪ್ರಕೃತಿಯೊಳಗಿದ್ದು ಆರಧಿಕ ಹದಿನೆಂಟು ತತ್ತ್ವವ

ತಾ ರಚಿಸಿ ತದ್ರೂಪ ತನ್ನಾಮಗಳನೆ ಧರಿಸಿ

ನೀರಜ ಭವಾಂಡವನು ನಿರ್ಮಿಸಿ ಕಾರುಣಿಕ ಕಾರ್ಯಾಖ್ಯ ರೂಪದಿ ತೋರುವನು

ಸಹಜಾಹಿತಾಚಲಗಳಲಿ ಪ್ರತಿದಿನದಿ//20//


ಜೀವರಂತರ್ಯಾಮಿ ಅಂಶಿ ಕಳೇವರಗಳೊಳಗೆ ಇಂದ್ರಿಯಗಳಲಿ

ತಾ ವಿಹಾರವ ಗೈಯುತ ಅನುದಿನ ಅಂಶ ನಾಮದಲಿ

ಈ ವಿಷಯಗಳನುಂಡು ಸುಖಮಯವೀವ ಸುಖ ಸಂಸಾರ ದುಃಖವ

ದೇವ ಮಾನವ ದಾನವರಿಗೆ ಅವಿರತ ಸುಧಾಮ ಸಖ//21//


ದೇಶ ದೇಶವ ಸುತ್ತಿ ದೇಹಾಯಾಸಗೊಳಿಸದೆ ಕಾಮ್ಯ ಕರ್ಮ ದುರಾಶೆಗೊಳಗಾಗದಲೆ

ಬ್ರಹ್ಮಾದಿ ಅಖಿಳ ಚೇತನರು

ಭೂ ಸಲಿಲ ಪಾವಕ ಸಮೀರ ಆಕಾಶ ಮೊದಲಾದ ಅಖಿಳ ತತ್ತ್ವ

ಪರೇಶಗೆ ಇವು ಅಧಿಷ್ಠಾನವು ಎಂದರಿತು ಅರ್ಚಿಸು ಅನವರತ//22//


ಎರಡು ವಿಧದಲಿ ಲೋಕದೊಳು ಜೀವರುಗಳು ಇಪ್ಪರು ಸಂತತ

ಕ್ಷರಾಕ್ಷರ ವಿಲಿಂಗ ಸಲಿಂಗ ಸೃಜ್ಯ ಅಸೃಜ್ಯ ಭೇದದಲಿ ಕರೆಸುವದು

ಜಡ ಪ್ರಕೃತಿ ಪ್ರಣವಾಕ್ಷರ ಮಹದಣು ಕಾಲ ನಾಮದಿ

ಹರಿ ಸಹಿತ ಭೇದಗಳ ಪಂಚಕ ಸ್ಮರಿಸು ಸರ್ವತ್ರ//23//


ಜೀವ ಜೀವರ ಭೇದ ಜಡ ಜಡ ಜೀವ ಜಡಗಳ ಭೇದ

ಪರಮನು ಜೀವ ಜಡ ಸುವಿಲಕ್ಷಣನು ಎಂದರಿದು ನಿತ್ಯದಲಿ

ಈ ವಿರಿಂಚಿ ಅಂಡದೊಳು ಎಲ್ಲ ಟಾವಿನಲಿ ತಿಳಿದೈದು ಭೇದ

ಕಳೇವರದೊಳರಿತು ಅಚ್ಯುತನ ಪದವೈದು ಶೀಘ್ರದಲಿ//24//


ಆದಿಯಲ್ಲಿ ಕ್ಷರಾಕ್ಷರಾಖ್ಯ ದ್ವೇಧ ಅಕ್ಷರದೊಳು ರಮಾ ಮಧುಸೂದನರು

ಕ್ಷರಗಳೊಳು ಪ್ರಕೃತಿ ಪ್ರಣವ ಕಾಲಗಳು ವೇದ ಮುಖ್ಯ ತೃಣಾoತ ಜೀವರ

ಭೇದಗಳನರಿತು ಈ ರಹಸ್ಯವ ಭೋದಿಸದೇ ಮಂದರಿಗೆ

ಸರ್ವತ್ರದಲಿ ಚಿಂತಿಪುದು//25//


ದೀಪದಿಂ ದೀಪಗಳು ಪೊರಮಟ್ಟು ಆಪಣ ಆಲಯಗಳ ತಿಮಿರಗಳ ತಾ ಪರಿಹರಗೈಸಿ

ತದ್ಗತ ಪದಾರ್ಥ ತೋರ್ಪಂತೆ

ಸೌಪರಣಿ ವರವಹನು ತಾ ಬಹು ರೂಪ ನಾಮದಿ ಎಲ್ಲ ಕಡೆಯಲಿ ವ್ಯಾಪಿಸಿದ್ದು

ಯಥೇಷ್ಟ ಮಹಿಮೆಯ ತೋರ್ಪ ತಿಳಿಸದಲೆ//26//


ನಳಿನ ಮಿತ್ರಗೆ ಇಂದ್ರಧನು ಪ್ರತಿ ಫಲಿಸುವಂತೆ

ಜಗತ್ರಯವು ಕಂಗೊಳಿಪುದು ಅಣು ಉಪಾಧಿಯಲಿ ಪ್ರತಿಬಿಂಬ ಅಹ್ವಯದಿ ಹರಿಗೆ

ತಿಳಿಯೆ ತ್ರಿಕಕುದ್ಧಾಮನ ಅತಿ ಮಂಗಳ ಸುರೂಪವ

ಸರ್ವ ಟಾವಿಲಿ ಪೊಳೆವ ಹೃದಯಕೆ ಪ್ರತಿದಿವಸ ಪ್ರಹ್ಲಾದ ಪೋಷಕನು//27//


ರಸ ವಿಶೇಷದೊಳು ಅತಿ ವಿಮಲಾ ಸಿತವಸನ ತೋಯಿಸಿ ಅಗ್ನಿಯೊಳಗಿಡೆ

ಪಸರಿಸುವುದು ಪ್ರಕಾಶ ನಸಗುಂದದಲೆ ಸರ್ವತ್ರ

ತ್ರಿಶಿರ ದೂಷಣ ವೈರಿ ಭಕ್ತಿ ಸುರಸದಿ ತೋಯ್ದ ಮಹಾತ್ಮರನು

ಬಾಧಿಸವು ಭವದೊಳಗೆ ಇದ್ದರೆಯು ಸರಿ ದುರಿತ ರಾಶಿಗಳು//28//


ವಾರಿನಿಧಿಯೊಳಗುಳ್ಳ ಅಖಿಳ ನದಿಗಳು ಬೇರೆ ಬೇರೆ ನಿರಂತರದಿ ವಿಹಾರಗೈಯುತ

ಪರಮ ಮೋದದಲಿಪ್ಪ ತೆರದಂತೆ

ಮೂರು ಗುಣಗಳ ಮಾನಿನಿಯೆನಿಸುವ ಶ್ರೀ ರಮಾ ರೂಪಗಳು ಹರಿಯಲಿ ತೋರಿತಿಪ್ಪವು

ಸರ್ವ ಕಾಲದಿ ಸಮರಹಿತವೆನಿಸಿ//29//


ಕೋಕನದ ಸಖನ ಉದಯ ಘೋಕಾಲೋಕನಕೆ ಸೊಗಸದಿರೆ

ಭಾಸ್ಕರ ತಾ ಕಳಂಕನೆ? ಈ ಕೃತೀಪತಿ ಜಗನ್ನಾಥನಿರೆ

ಸ್ವೀಕರಿಸಿ ಸುಖಪಡಲು ಅರಿಯದ ಅವಿವೇಕಿಗಳು ನಿಂದಿಸಿದರೆ ಏನಹುದು

ಈ ಕವಿತ್ವವ ಕೇಳಿ ಸುಖಪಡದಿಹರೆ ಕೋವಿದರು//30//


ಚೇತನಾಚೇತನಗಳಲಿ ಗುರು ಮಾತರಿಶ್ವಾಂತರ್ಗತ ಜಗನ್ನಾಥ ವಿಠಲ

ನಿರಂತರದಿ ವ್ಯಾಪಿಸಿ ತಿಳಿಸಿ ಕೊಳ್ಳದಲೇ

ಕಾತರವ ಪುಟ್ಟಿಸಿ ವಿಷಯದಲಿ ಧಾನರ ಮೋಹಿಸುವ

ನಿರ್ಭೀತ ನಿತ್ಯಾನಂದಮಯ ನಿರ್ದೋಷ ನಿರವದ್ಯ//31//


//ಇತಿ ಶ್ರೀ ಪಿತೃಗಣ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು

Wednesday, January 16, 2013

ಶ್ರೀ ಹರಿಕಥಾಮೃತಸಾರ - 13

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಶ್ರೀ ನಾಮಸ್ಮರಣ ಸಂಧಿ//


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಮಕ್ಕಳಾಡಿಸುವಾಗ ಮಡದಿಯೊಳು ಅಕ್ಕರದಿ ನಗುವಾಗ

ಹಯ ಪಲ್ಲಕ್ಕಿ ಗಜ ಮೊದಲಾದ ವಾಹನಗಳು ಏರಿ ಮೆರೆವಾಗ

ಬಿಕ್ಕುವಾಗ ಆಕಳಿಸುತಲಿ ದೇವಕ್ಕಿ ತನಯನ ಸ್ಮರಿಸುತಿಹ ನರ

ಸಿಕ್ಕ ಯಮದೂತರಿಗೆ ಆವ ಆವಲ್ಲಿ ನೋಡಿದರು//1//


ಸಾರಿತು ಪ್ರವಹಗಳಲ್ಲಿ ದಿವ್ಯಾಂಬರದಿ ಪತ್ರಾದಿಯಲಿ

ಹರುಷಾ ಮರುಷ ವಿಸ್ಮ್ರುತಿಯಂದಲಿ ಆಗಲಿ ಒಮ್ಮೆ ಬಾಯಿ ತೆರೆದು

ಹರಿ ಹರೀ ಹರಿಯೆಂಬ ಎರಡಕ್ಷರ ನುಡಿದ ಮಾತ್ರದಲಿ

ದುರಿತಗಳು ಇರದೇ ಪೋಪವು ತೂಲ ರಾಶಿಯೊಳು ಅನಲ ಪೊಕ್ಕಂತೆ//2//


ಮಲಗುವಾಗಲಿ ಏಳುವಾಗಲಿ ಕುಳಿತು ಮಾತಾಡುತಲಿ

ಮನೆಯೊಳು ಕೆಲಸಗಳ ಮಾಡುತಲಿ ಮೈದೊಳೆವಾಗ ಮೆಲುವಾಗ

ಕಲುಷ ದೂರನ ಸಕಲ ಟಾವಿಲಿ ತಿಳಿಯೆ ತತ್ತನ್ನಾಮ ರೂಪವ ಬಳಿಯಲಿಪ್ಪನು

ಒಂದರೆಕ್ಷಣ ಬಿಟ್ಟಗಲನು ಅವರ//3//


ಆವ ಕುಲದವನು ಆದಡೆ ಏನು ಇನ್ನಾವ ದೇಶದೊಳು ಇದ್ದಡೇನು

ಇನ್ನಾವ ಕರ್ಮವ ಮಾಡಲೇನು ಇನ್ನಾವ ಕಾಲದಲಿ

ಶ್ರೀವರನ ಸರ್ವತ್ರದಲಿ ಸಂಭಾವಿಸುತ ಪೂಜಿಸುತ ಮೋದಿಪ

ಕೋವಿದರಿಗೆ ಉಂಟೇನೋ ಭಯ ದುಃಖಾದಿ ದೋಷಗಳು//4//


ವಾಸುದೇವನ ಗುಣ ಸಮುದ್ರದೊಳು ಈಸಬಲ್ಲವ ಭವ ಸಮುದ್ರ

ಆಯಾಸವಿಲ್ಲದೆ ದಾಟುವನು ಶೀಘ್ರದಲಿ ಜಗದೊಳಗೆ

ಬೇಸರದೆ ದುರ್ವಿಷಯಗಳ ಅಭಿಲಾಷೆಯಲಿ ಬಳಲುವವ

ನಾನಾ ಕ್ಲೇಷಗಳನು ಅನುಭವಿಪ ಭಕ್ತಿ ಸುಮಾರ್ಗ ಕಾಣದಲೇ//5//


ಸ್ನಾನ ಜಪ ದೇವಾರ್ಚನೆಯು ವ್ಯಾಖ್ಯಾನ ಭಾರತ ಮುಖ ಮಹೋಪಪುರಾಣ ಕಥೆಗಳ

ಪೇಳಿ ಕೇಳಿದರೇನು ದಿನದಿನದಿ

ಜ್ಞಾನ ಕರ್ಮ ಇಂದ್ರಿಯಗಳಿಂದ ಏನೇನು ಮಾಡುವ ಕರ್ಮಗಳು

ಲಕ್ಷ್ಮೀ ನಿವಾಸನ ಪೂಜೆಯೆಂದು ಅರ್ಪಿಸದ ಮಾನವನು//6//


ದೇವ ಗಂಗೆಯೊಳು ಉಳ್ಳವಗೆ ದುರಿತ ಅವಳಿಗಳು ಉಂಟೇ ವಿಚಾರಿಸೆ

ಪಾವುಗಳ ಭಯವುಂಟೆ ವಿಹಗಾಧಿಪನ ಮಂದಿರದಿ

ಜೀವ ಕರ್ತೃತ್ವವನು ಮರೆದು ಪರಾವರೇಶನೆ ಕರ್ತೃ ಎಂದರಿದು

ಆವ ಕರ್ಮವ ಮಾಡಿದರು ಲೆಪಿಸವು ಕರ್ಮಗಳು//7//


ಏನು ಮಾಡುವ ಪುಣ್ಯ ಪಾಪಗಳು ಆಣೆ ಮಾಡುವೆನೆಂಬ ಅಧಮ

ಹೀನ ಕರ್ಮಕೆ ಪಾತ್ರ ನಾ ಪುಣ್ಯಕ್ಕೆ ಹರಿಯೆಂಬ ಮಾನವನು ಮಧ್ಯಮನು

ದ್ವಂದ್ವಕೆ ಶ್ರೀನಿವಾಸನೆ ಕರ್ತೃವೆಂದು

ಸದಾನುರಾಗದಿ ನೆನೆದು ಸುಖಿಸುವರೇ ನರೋತ್ತಮರು//8//


ಈ ಉಪಾಸನೆಗೈವರು ಇಳೆಯೊಳು ದೇವತೆಗಳು ಅಲ್ಲದಲೇ ನರರಲ್ಲ

ಆವ ಬಗೆಯಿಂದಾದರು ಅವರ ಅರ್ಚನೆಯು ಹರಿಪೂಜೆ

ಕೇವಲ ಪ್ರತಿಮೆಗಳು ಎನಿಪರು ರಮಾ ವಿನೋದಗೆ

ಇವರ ಅನುಗ್ರಹವೇ ವರಾನುಗ್ರಹವೆನಿಸುವುದು ಮುಕ್ತಿ ಯೋಗ್ಯರಿಗೆ//9//


ತನುವೆ ನಾನೆಂಬುವೆನು ಸತಿ ಸುತ ಮನೆ ಧನಾದಿಗಳು ಎನ್ನದೆಂಬುವ

ದ್ಯುನದಿ ಮೊದಲಾದ ಉದಕಗಳೆ ಸತ್ ತೀರ್ಥವು ಎಂಬುವನು

ಅನಲ ಲೋಹಾದಿ ಪ್ರತೀಕ ಅರ್ಚನವೆ ದೇವರ ಪೂಜೆ

ಸುಜನರ ಮನುಜರು ಅಹುದು ಎಂಬುವನು ಗೋಖರನೆನಿಪ ಬುಧರಿಂದ//10//


ಅನಲ ಸೋಮಾರ್ಕ ಇಂದು ತಾರ ಅವನಿ ಸುರಾಪಗ ಮುಖ್ಯ ತೀರ್ಥಗಳು

ಅನಿಲ ಗಗನ ಮನಾಡಿ ಇಂದ್ರಿಯಗಳಿಗಭಿಮಾನಿ ಎನಿಪ ಸುರರು

ವಿಪಶ್ಚಿತರ ಸನ್ಮನದಿ ಭಜಿಸದೆಯಿಪ್ಪರನ

ಪಾವನವ ಮಾಡರು ತಮ್ಮ ಪೂಜೆಯ ಮಾಡಿದರು ಸರಿಯೇ//11//


ಕೆಂಡ ಕಾಣದೆ ಮುಟ್ಟಿದರು ಸರಿಕಂಡು ಮುಟ್ಟಲು ದಹಿಸದೆ ಇಪ್ಪುದೆ

ಪುಂಡರೀಕ ದಳಾಯತಾಕ್ಷನ ವಿಮಲ ಪದ ಪದ್ಮ

ಬಂಡುಣಿಗಳು ಎಂದೆನಿಪ ಭಕ್ತರ ಹಿಂಡು ನೋಡಿದ ಮಾತ್ರದಲಿ

ತನುದಿಂಡುಗೆಡಹಿದ ನರನ ಪಾವನ ಮಾಳ್ಪರು ಆ ಕ್ಷಣದಿ//12//


ಈ ನಿಮಿತ್ತ ಪುನಃ ಪುನಃ ಸುಜ್ಞಾನಿಗಳ ಸಹವಾಸ ಮಾಡು

ಕುಮಾನವರ ಕೂಡಿ ಆಡದಿರು ಲೌಕಿಕಕೆ ಮರುಳಾಗಿ

ವೈನತೇಯ ಅಂಸಗನ ಸರ್ವ ಸ್ಥಾನದಲಿ ತನ್ನಾಮ ರೂಪವ ಧೇನಿಸುತ ಸಂಚರಿಸು

ಇತರ ಆಲೋಚನೆಯ ಬಿಟ್ಟು//13//


ಈ ನಳಿನಜಾಂಡದೊಳು ಸರ್ವ ಪ್ರಾಣಿಗಳೊಳಗಿದ್ದು ಅನವರತ

ವಿಜ್ಞಾನಮಯ ವ್ಯಾಪಾರಗಳ ಮಾಡುವನು ತಿಳಿಸದಲೆ

ಏನು ಕಾಣದೆ ಸಕಲ ಕರ್ಮಗಳು ಆನೆ ಮಾಡುವೆನೆಂಬ ನರನು

ಕುಯೋನಿ ಐದುವ ಕರ್ತೃ ಹರಿ ಎಂದವನೇ ಮುಕ್ತನಹ//14//


ಕಲಿಮಲಾಪಹಳು ಎನಿಸುತಿಹ ಬಾಂಬೊಳೆಯೊಳಗೆ ಸಂಚರಿಸಿ ಬದುಕುವ

ಜಲಚರ ಪ್ರಾಣಿಗಳು ಬಲ್ಲವೆ ತೀರ್ಥ ಮಹಿಮೆಯನು

ಹಲವು ಬಗೆಯಲಿ ಹರಿಯ ಕರುಣಾ ಬಲದಿ ಬಲ್ಲಿದರು ಆದ

ಬ್ರಹ್ಮಾನಿಲ ವಿಪ ಈಶಾದಿ ಅಮರರು ಅರಿಯರು ಅನಂತನ ಅಮಲ ಗುಣ//15//


ಶ್ರೀಲಕುಮಿ ವಲ್ಲಭನು ಹೃತ್ಕೀಲಾಲಜದೊಳಿದ್ದು ಅಖಿಳ ಚೇತನ ಜಾಲವನು ಮೋಹಿಸುವ

ತ್ರಿಗುಣದಿ ಬದ್ಧರನು ಮಾಡಿ

ಸ್ಥೂಲ ಕರ್ಮದಿ ರತರ ಮಾಡಿ ಸ್ವಲೀಲೆಗಳ ತಿಳಿಸದಲೆ

ಭವಾದಿ ಕುಲಾಲ ಚಕ್ರದ ತೆರದಿ ತಿರುಗಿಸುತಿಹನು ಮಾನವರ//16//


ವೇದ ಶಾಸ್ತ್ರ ವಿಚಾರಗೈದು ನಿಷೇಧ ಕರ್ಮವ ತೊರೆದು ನಿತ್ಯದಿ

ಸಾಧು ಕರ್ಮವ ಮಾಳ್ಪರಿಗೆ ಸ್ವರ್ಗಾದಿ ಸುಖವ ಈವ

ಐದಿಸುವ ಪಾಪಿಅಗಲ ನಿರಯವ ಖೇದ ಮೋದ ಮನುಷ್ಯರಿಗೆ

ದುರ್ವಾದಿಗಳಿಗೆ ಅಂಧಂತಮದಿ ಮಹಾ ದುಃಖಗಳನು ಉಣಿಪ//17//


ನಿರ್ಗುಣ ಉಪಾಸಕಗೆ ಗುಣ ಸಂಸರ್ಗ ದೋಷಗಳು ಈಯದಲೆ

ಅಪವರ್ಗದಲಿ ಸುಖವಿತ್ತು ಪಾಲಿಸುವನು ಕೃಪಾಸಾಂದ್ರ

ದುರ್ಗಮನು ಎಂದೆನಿಪ ತ್ರೈವಿಧ್ಯರ್ಗೆ ತ್ರಿಗುಣಾತೀತ

ಸಂತತ ಸ್ವರ್ಗ ಭೂ ನರಕದಲಿ ಸಂಚಾರವನೆ ಮಾಡಿಸುವ//18//


ಮೂವರೊಳಗಿದ್ದರು ಸರಿಯೆ ಸುಖ ನೋವುಗಳು ಸಂಬಂಧವಾಗವು

ಪಾವನಕೆ ಪಾವನ ಪರಾತ್ಪರ ಪೂರ್ಣ ಸುಖವನದಿ

ಈ ವನರುಹ ಭವಾಂಡದೊಳು ಸ್ವ ಕಳೇವರ ತದಾಕಾರ ಮಾಡಿ ಪರಾವರೇಶ

ಚರಾಚರಾತ್ಮಕ ಲೋಕಗಳ ಪೊರೆವ//19//


ಈ ನಿಮಿತ್ತ ನಿರಂತರ ಸ್ವಾಧೀನ ಕರ್ತೃತ್ವವನು ಮರೆದು

ಏನೇನು ಮಾಡುವುದು ಎಲ್ಲ ಹರಿ ಒಳಹೊರಗೆ ನೆಲೆಸಿದ್ದು ತಾನೇ ಮಾಡುವೆನೆಂದು

ಮದ್ದಾನೆಯಂದದಿ ಸಂಚರಿಸು

ಪವಮಾನ ವಂದಿತ ಒಂದರೆಕ್ಷಣ ಬಿಟ್ಟಗಲ ನಿನ್ನ//20//


ಹಲವು ಕರ್ಮವ ಮಾಡಿ ದೇಹವ ಬಳಲಿಸದೆ ದಿನದಿನದಿ ಹೃದಯ ಕಮಲ ಸದನದಿ

ವಿರಾಜಿಸುವ ಹರಿ ಮೂರ್ತಿಯನೆ ಭಜಿಸು

ತಿಳಿಯದೆ ಈ ಪೂಜಾ ಪ್ರಕರಣವ ಫಲ ಸುಪುಷ್ಪ ಅಗ್ರೋದಕ

ಶ್ರೀ ತುಳಸಿಗಳನು ಅರ್ಪಿಸಲು ಒಪ್ಪನು ವಾಸುದೇವ ಸದಾ//21//


ಧರಣಿ ನಾರಾಯಣನು ಉದಕದಿ ತುರ್ಯ ನಾಮಕ ಅಗ್ನಿಯೊಳು ಸಂಕರುಷಣ ಆಹ್ವಯ

ವಾಯುಗನು ಪ್ರದ್ಯುಮ್ನ ಅನಿರುದ್ಧ ಇರುತಿಹನು ಆಕಾಶದೊಳು

ಮೂರೆರೆಡು ರೂಪವ ಧರಿಸಿ ಭೂತಗ ಕರೆಸುವನು

ತನ್ನಾಮ ರೂಪದಿ ಪ್ರಜರ ಸಂತೈಪ//22//


ಘನಗತನು ತಾನಾಗಿ ನಾರಾಯಣನು ತನ್ನಾಮದಲಿ ಕರೆಸುತ

ವನದ ಗರ್ಭ ಉದಕದಿ ನೆಲೆಸಿಹ ವಾಸುದೇವಾಖ್ಯ

ಧ್ವನಿ ಸಿಡಿಲು ಸಂಕರುಷಣನು ಮಿಂಚಿನೊಳು ಶ್ರೀ ಪ್ರದ್ಯುಮ್ನ

ವೃಷ್ಟಿಯ ಹನಿಗಳೊಳಗೆ ಅನಿರುದ್ಧನಿಪ್ಪನು ವರುಷನೆಂದೆನಿಸಿ//23//


ಗೃಹ ಕುಟುಂಬ ಧನಾದಿಗಳ ಸನ್ನಹಗಳನು ಉಳ್ಳವರಾಗಿ

ವಿಹಿತಾವಿಹಿತ ಧರ್ಮ ಸುಕರ್ಮಗಳ ತಿಳಿಯದಲೆ ನಿತ್ಯದಲಿ

ಅಹರ ಮೈಥುನ ನಿದ್ರೆಗೊಳಗಾಗಿ ಇಹರು ಸರ್ವ ಪ್ರಾಣಿಗಳು

ಹೃದ್ಗುಹ ನಿವಾಸಿಯನು ಅರಿಯದಲೆ ಭವದೊಳಗೆ ಬಳಲುವರು//24//


ಜಡಜ ಸಂಭವ ಖಗ ಫಣಿಪ ಕೆಂಜೆಡೆಯರಿಂದ ಒಡಗೂಡಿ

ರಾಜಿಸುತ ಅಡವಿಯೊಳಗಿಪ್ಪನು ಸದಾ ಗೋಜಾದ್ರಿಜನೆನಿಸಿ

ಉಡುಪನಿಂದ ಅಭಿವೃದ್ಧಿಗಳ ತಾ ಕೊಡುತ ಪಕ್ಷಿ ಮೃಗಾಹಿಗಳ

ಕಾರೊಡಲ ಕಾವನು ತತ್ತದಾಹ್ವಯನು ಆಗಿ ಜೇವರನ//25//


ಅಪರಿಮಿತ ಸನ್ಮಹಿಮ ನರಹರಿ ವಿಪಿನದೊಳು ಸಂತೈಸುವನು

ಕಾಶ್ಯಪಿಯನು ಅಳಿದವ ಸ್ಥಳಗಳಲಿ ಸರ್ವತ್ರ ಕೇಶವನು

ಖಪತಿ ಗಗನದಿ ಜಲಗಳಲಿ ಮಹ ಶಫರನಾಮಕ

ಭಕ್ತರನು ನಿಷ್ಕಪಟದಿಂದಲಿ ಸಲಹುವನು ಕರುಣಾಳು ದಿನದಿನದಿ//26//


ಕಾರಣಾಂತರ್ಯಾಮಿ ಸ್ಥೂಲ ಅವತಾರ ವ್ಯಾಪ್ತಾಂಶ ಆದಿ ರೂಪಕೆ

ಸಾರ ಶುಭ ಪ್ರವಿವಿಕ್ತ ಆನಂದ ಸ್ಥೂಲ ನಿಸ್ಸಾರ

ಆರು ರಸಗಳನು ಅರ್ಪಿಸಲ್ಪರಿಗೆ ಈ ರಹಸ್ಯವ ಪೇಳದೆ

ಸದಾಪಾರ ಮಹಿಮನ ರೂಪ ಗುಣಗಳ ನೆನೆದು ಸುಖಿಸುತಿರು//27//


ಜಲಗತ ಉಡುಪನ ಅಮಲ ಬಿಂಬವ ಮೆಲುವೆವು ಎಂಬ ಅತಿ ಹರುಷದಿಂದಲಿ

ಜಲಚರ ಪ್ರಾಣಿಗಳು ನಿತ್ಯದಿ ಯತ್ನಗೈವಂತೆ

ಹಲಧರಾನುಜ ಭೋಗ್ಯ ರಸಗಳ ನೆಲೆಯನರಿಯದೆ ಪೂಜಿಸುತ

ಹಂಬಲಿಸುವರು ಪುರುಷಾರ್ಥಗಳ ಸತ್ಕುಲಜರು ಆವೆಂದು//28//


ದೇವ ಋಷಿ ಗಂಧರ್ವ ಪಿತೃ ನರ ದೇವ ಮಾನವ ದನುಜ ಗೋ ಅಜ

ಖರಾವಿ ಮೊದಲಾದ ಅಖಿಳ ಚೇತನ ಭೋಗ್ಯ ರಸಗಳನು

ಯಾವದವಯವಗಳೊಳಗಿದ್ದು ರಮಾವರನು ಸ್ವೀಕರಿಪ

ಯಾವಜ್ಜೀವ ಗಣಕೆ ಸ್ವಯೋಗ್ಯ ರಸಗಳನು ಈವನು ಎಂದೆಂದು//29//


ಒರಟು ಬುದ್ಧಿಯ ಬಿಟ್ಟು ಲೌಕಿಕ ಹರಟೆಗಳ ನೀಡಾಡಿ

ಕಾಂಚನ ಪರಟಿ ಲೋಷ್ಟ ಆದಿಗಳು ಸಮವೆಂದರಿದು ನಿತ್ಯದಲಿ

ಪುರುಟ ಗರ್ಭಾಂಡ ಉದರನು ಸತ್ಪುರುಷನು ಎಂದೆನಿಸಿ

ಎಲ್ಲರೊಳಗಿದ್ದು ಉರುಟ ಕರ್ಮವ ಮಾಳ್ಪನು ಎಂದು ಅಡಿಗಡಿಗೆ ನೆನೆವುತಿರು//30//


ಭೂತಳದಿ ಜನರುಗಳು ಮರ್ಮಕ ಮಾತುಗಳನಾಡಿದರೆ ಸಹಿಸದೆ

ಘಾತಿಸುವರು ಅತಿ ಕೋಪದಿಂದಲಿ ಹೆಚ್ಚರಿಪ ತೆರದಿ

ಮಾತುಳಾಂತಕ ಜಾರ ಹೇ ನವನೀತ ಚೋರನೆನಲು

ತನ್ನ ನಿಕೇತನದೊಳಿಟ್ಟು ಅವರ ಸಂತೈಸುವನು ಕರುಣಾಳು//31//


ಹರಿಕಥಾಮೃತ ಸಾರವಿದು ಸಂತರು ಸದಾ ಚಿತ್ತೈಸುವುದು

ನಿಷ್ಠುರಿಗಳಿಗೆ ಪಿಶುನರಿಗೆ ಅಯೋಗ್ಯರಿಗೆ ಇದನು ಪೇಳದಲೇ

ನಿರುತ ಸದ್ಭಕ್ತಿಯಲಿ ಭಗವತ್ ಚರಿತೆಗಳ ಕೊಂಡಾಡಿ ಹಿಗ್ಗುವ

ಪರಮ ಭಗವತ್ ದಾಸರಿಗೆ ತಿಳಿಸುವುದು ಈ ರಹಸ್ಯ//32//


ಸತ್ಯ ಸಂಕಲ್ಪನು ಸದಾ ಏನು ಇತ್ತದೆ ಪುರುಷಾರ್ಥವೆoದರಿದು

ಅತ್ಯಧಿಕ ಸಂತೋಷದಿಂ ನೆನೆವುತ್ತ ಭುಂಜಿಪುದು

ನಿತ್ಯ ಸುಖ ಸಂಪೂರ್ಣ ಪರಮ ಸುಹೃತ್ತಮ ಜಗನ್ನಾಥ ವಿಠಲ

ಬತ್ತಿಸಿ ಭವಾಂಬುಧಿಯ ಚಿತ್ಸುಖ ವ್ಯಕ್ತಿ ಕೊಡುತಿಪ್ಪ//33//


//ಇತಿ ಶ್ರೀ ನಾಮಸ್ಮರಣ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು

ಶ್ರೀ ಹರಿಕಥಾಮೃತಸಾರ - 12

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಶ್ರೀ ಸ್ಥಾವರಜಂಗಮ ಸಂಧಿ//


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ವಾಸುದೇವನು ಪ್ರಾಣಮುಖ ತತ್ವ ಈಶರಿಂದಲಿ ಸೇವೆ ಕೈಕೊಳುತ

ಈ ಶರೀರದೊಳು ಇಪ್ಪ ಮೂವತ್ತಾರು ಸಾವಿರ ಈ ಸುನಾಡಿಗಳೊಳಗೆ

ಈ ಭೂಮೀ ಸಮೇತ ವಿಹಾರಗೈವ

ಪರ ಈಶನ ಅಮಲ ಸುಮೂರ್ತಿಗಳ ಚಿಂತಿಸುತ ಹಿಗ್ಗುತಿರು//1//


ಚರಣಗಳೊಳಿಹ ನಾಡಿಗಳು ಹನ್ನೆರೆಡು ಸಾವಿರ ಮಧ್ಯ ದೇಹದೊಳು ಇರುತಿಹವು ಹದಿನಾಲ್ಕು

ಬಾಹುಗಳೊಳಗೆ ಈರೆರೆಡು ಶಿರದೊಳು ಆರು ಸಹಸ್ರ ಚಿಂತಿಸಿ

ಇರುಳು ಹಗಲು ಅಭಿಮಾನಿ ದಿವಿಜರನರಿತು

ಉಪಾಸನೆಗೈವರು ಇಳೆಯೊಳು ಸ್ವರ್ಗ ವಾಸಿಗಳು//2//


ಬೃಹತಿನಾಮಕ ವಾಸುದೇವನು ವಹಿಸಿ ಸ್ತ್ರೀ ರೂಪ

ದೋಷ ವಿರಹಿತ ಎಪ್ಪತ್ತೆರೆಡು ಸಾವಿರ ನಾಡಿಗಳೊಳಗಿದ್ದು

ದ್ರುಹಿಣ ಮೊದಲಾದ ಅಮರಗಣ ಸನ್ಮಹಿಮ

ಸರ್ವ ಪ್ರಾಣಿಗಳ ಮಹಾಮಹಿಮ ಸಂತೈಸುವನು ಸಂತತ ಪರಮ ಕರುಣಾಳು//3//


ನೂರು ವರ್ಷಕೆ ದಿವಸ ಮೂವತ್ತಾರು ಸಾವಿರ ವಹವು

ನಾಡಿ ಶರೀರದೊಳಗೆ ಇನಿತಿಹವು ಎಂದರಿತು ಒಂದು ದಿವಸದಲಿ

ಸೂರಿಗಳ ಸತ್ಕರಿಸಿದವ ಪ್ರತಿ ವಾರದಲಿ ದಂಪತಿಗಳ ಅರ್ಚನೆ ತಾ ರಚಿಸಿದವ

ಸತ್ಯ ಸಂಶಯವು ಇಲ್ಲವೆಂದೆಂದು//4//


ಚತುರ ವಿಂಶತಿ ತತ್ತ್ವಗಳು ತತ್ಪತಿಗಳು ಎನಿಸುವ

ಬ್ರಹ್ಮ ಮುಖ ದೇವತೆಗಳು ಅನುದಿನ ಪ್ರತಿ ಪ್ರತಿ ನಾಡಿಗಳೊಳು ಇರುತಿದ್ದು

ಚತುರ ದಶ ಲೋಕದೊಳು ಜೀವ ಪ್ರತತಿಗಳ ಸಂರಕ್ಷಿಸುವ

ಶಾಶ್ವತನ ತತ್ತತ್ ಸ್ಥಾನದಲಿ ನೋಡುತಲೇ ಮೋದಿಪರು//5//


ಸತ್ಯ ಸಂಕಲ್ಪನು ಸದಾ ಎಪ್ಪತ್ತೆರೆಡು ಸಹಸ್ರದೊಳು

ಮೂವತ್ತು ನಾಲ್ಕು ಲಕ್ಷದ ಐವತ್ತಾರು ಸಹಸ್ರ

ಚಿತ್ಪ್ರಕ್ರುತಿಯ ಒಡಗೂಡಿ ಪರಮನು ನಿತ್ಯ ಮಂಗಳಮೂರ್ತಿ

ಭಕ್ತರ ತೆತ್ತಿಗನು ತಾನಾಗಿ ಸರ್ವತ್ರದಲಿ ಸಂತೈಪ//6//


ಮಣಿಗಳೊಳಗಿಹ ಸೂತ್ರದಂದದಿ ಪ್ರಣವ ಪಾದ್ಯನು

ಸರ್ವ ಚೇತನ ಗಣದೊಳಿದ್ದು ಅನವರತ ಸಂತೈಸುವನು ತನ್ನವರ

ಪ್ರಣತ ಕಾಮದ ಭಕ್ತ ಚಿಂತಾಮಣಿ ಚಿದಾನಂದೈಕ ದೇಹನು

ಅಣು ಮಹದ್ಗತನು ಅಲ್ಪರೋಪಾದಿಯಲಿ ನೆಲೆಸಿಪ್ಪ//7//


ಈ ಸುಷುಮ್ನ ಆದಿ ಅಖಿಳ ನಾಡೀ ಕೋಶ ನಾಭೀ ಮೂಲದಲಿ

ವೃಷಣಾ ಸದನ ಮಧ್ಯದಲಿಪ್ಪದು ತುಂದಿ ನಾಮದಲಿ

ಆ ಸರೋಜಾಸನ ಮುಖರು ಮೂಲೇಶನ ಅನಂದಾದಿ ಸುಗುಣ ಉಪಾಸನೆಯ ಗೈವುತಲಿ

ದೇಹದೊಳಗೆ ಇರುತಿಹರು//8//


ಸೂರಿಗಳು ಚಿತ್ತೈಸುವುದು ಭಾಗೀರಥಿಯೆ ಮೊದಲಾದ ತೀರ್ಥಗಳು

ಏರಧಿಕ ಎಪ್ಪತ್ತು ಸಾವಿರ ನಾಡಿಗಳೊಳಿಹವು

ಈ ರಹಸ್ಯವನು ಅಲ್ಪ ಜನರಿಗೆ ತೋರಿ ಪೇಳದೆ

ನಾಡಿ ನದಿಯೊಳು ಧೀರರು ಅನುದಿನ ಮಜ್ಜನವ ಮಾಡುತಲೇ ಸುಖಿಸುವರು//9//


ತಿಳಿವುದು ಈ ದೇಹದೊಳಗಿಹ ಎಡ ಬಲದ ನಾಡಿಗಳೊಳಗೆ ದಿವಿಜರು

ಜಲಜ ಸಂಭವ ವಾಯು ವಾಣಿ ಆದಿಗಳು ಬಲದಲ್ಲಿ

ಎಲರುಣಿಗ ವಿಹಗ ಇಂದ್ರ ಚಳಿವೆಟ್ಟಳಿಯ ಷಣ್ಮಹಿಶಿಯರು

ವಾರುಣಿ ಕುಲಿಶ ಧರ ಕಾಮಾದಿಗಳು ಎಡ ಭಾಗದೊಳಿಹರು//10//


ಇಕ್ಕಲದೊಳಿಹ ನಾಡಿಯೊಳು ದೇವರ್ಕಳಿಂದ ಒಡನಾಡುತಲಿ

ಪೊಂಬಕ್ಕಿ ದೇರನು ಜೀವರ ಅಧಿಕಾರಾನುಸಾರದಲಿ

ತಕ್ಕ ಸಾಧನವ ಮಾಡಿ ಮಾಡಿಸುತ ಅಕ್ಕರದಿ ಸಂತೈಪ ಭಕ್ತರ

ದಕ್ಕಗೊಡನು ಅಸುರರ್ಗೆ ಸತ್ಪುಣ್ಯಗಳನು ಅಪಹರಿಪ//11//


ತುಂದಿವಿಡಿದು ಆಶಿರದ ಪರಿಯಂತ ಒಂದು ವ್ಯಾಪಿಸಿಹುದು

ತಾವರ ಕಂದನಿಹನು ಅದರೊಳಗೆ ಅದಕೆ ಈರೈದು ಶಾಖೆಗಳು

ಒಂದಧಿಕ ದಶ ಕರಣದೊಳು ಸಂಬಂಧಗೈದಿಹವಲ್ಲಿ

ರವಿ ಶಶಿ ಸಿಂಧು ನಾಸತ್ಯಾದಿಗಳು ನೆಲೆಗೊಂಡಿಹರು ಸತತ//12//


ಪೊಕ್ಕಳದಿವಿಡಿದು ಒಂದೇ ನಾಡಿಯು ಸುಕ್ಕದಲೆ ಧಾರಾಳ ರೂಪದಿ

ಸಿಕ್ಕಿಹುದು ಈ ದೇಹದೊಳಗೆ ಸುಷುಮ್ನ ನಾಮದಲಿ

ರಕ್ಕಸರನು ಒಳ ಪೋಗಗೊಡದೆ ದಶ ದಿಕ್ಕಿನೊಳಗೆ ಸಮೀರ ದೇವನು

ಲೆಕ್ಕಿಸದೆ ಮತ್ತೊಬ್ಬರನು ಸಂಚರಿಪ ದೇಹದೊಳು//13//


ಇನಿತು ನಾಡೀ ಶಾಖೆಗಳು ತನುವಿನೊಳಗೆ ಇಹವೆಂದರಿದು ಏಕಾತ್ಮನು

ದ್ವಿ ಸಪ್ತತಿ ಸಾವಿರ ಆತ್ಮಕನು ಆಗಿ ನಾಡಿಯೊಳು

ವನಿತೆಯಿಂದ ಒಡಗೂಡಿ ನಾರಾಯಣ ದಿವಾ ರಾತ್ರಿಗಳಲಿ

ಈ ಪರಿ ವನಜಾಂಡದೊಳು ಅಖಿಳ ಜೀವರೊಳಿದ್ದು ಮೋಹಿಸುವ//14//


ದಿನದಿನದಿ ವರ್ಧಿಸುವ ಕುಮುದಾಪ್ತನ ಮಯೂಖದ ಸೊಬಗ

ಗತ ಲೋಚನ ವಿಲೋಕಿಸಿ ಮೋದ ಪಡಬಲ್ಲನೆ ನಿರಂತರದಿ

ಕುನರಗೆ ಈ ಸುಕಥ ಅಮೃತದ ಭೋಜನದ ಸುಖ ದೊರಕುವುದೇ

ಲಕ್ಷ್ಮೀ ಮನೋಹರನ ಸದ್ಗುಣವ ಕೀರ್ತಿಪ ಭಕುತಗೆ ಅಲ್ಲದಲೆ//15//


ಈ ತನುವಿನೊಳಗಿಹವು ಓತ ಪ್ರೋತ ರೂಪದಿ ನಾಡಿಗಳು

ಪುರುಹೂತ ಮುಖರು ಅಲ್ಲಿಹರು ತಮ್ಮಿಂದ ಅಧಿಕಾರ ಒಡಗೂಡಿ

ಭೀತಿಗೊಳಿಸುತ ದಾನವರ ಸಂಘಾತ ನಾಮಕ ಹರಿಯ ಗುಣ

ಸಂಪ್ರೀತಿಯಲಿ ಸದುಪಾಸನೆಯ ಗೈವುತಲೆ ಮೋದಿಪರು//16//


ಜಲಾಟ ಕುಕ್ಕಾಟ ಖಾಟ ಜೀವರ ಕಳೇವರಗಳೊಳು ಇದ್ದು ಕಾಣಿಸಿಕೊಳದೆ

ತತ್ತದ್ರೂಪ ನಾಮಗಳಿಂದ ಕರೆಸುತಲಿ

ಜಲರುಹೇಕ್ಷಣ ವಿವಿಧ ಕರ್ಮಗಳ ಅನುದಿನದಿ ಮಾಡಿ

ತತ್ತತ್ಫಲಗಳ ಉಣ್ಣದೆ ಸಂಚರಿಸುವನು ನಿತ್ಯ ಸುಖ ಪೂರ್ಣ//17//


ತಿಳಿದುಪಾಸನೆಗೈವುತ ಈಪರಿ ಮಲಿನನಂತಿರು ದುರ್ಜನರ ಕಂಗಳಿಗೆ ಗೋಚರಿಸದೆ

ವಿಪಶ್ಚಿತರ ಒಡವೆ ಗರ್ವಿಸದೆ

ಮಳೆ ಬಿಸಿಲು ಹಸಿ ತೃಷಿ ಜಯಾಜಯ ಖಳರ ನಿಂದ್ಯಾನಿಂದ್ಯ ಭಯಗಳಿಗೆ

ಅಳುಕದಲೆ ಮದ್ದಾನೆಯಂದದಿ ಚರಿಸು ಧರೆಯೊಳಗೆ//18//


ಕಾನನ ಗ್ರಾಮಸ್ಥ ಸರ್ವ ಪ್ರಾಣಿಗಳು ಪ್ರತಿ ದಿವಸದಲಿ

ಏನೇನು ಮಾಡುವ ಕರ್ಮಗಳು ಹರಿ ಪೂಜೆಯಂದರಿದು ದೇನಿಸುತ

ಸದ್ಭಕ್ತಿಯಲಿ ಪವಮಾನವಂದಿತ ದೇವಾಂತರಾತ್ಮಕ

ಶ್ರೀನಿವಾಸನಿಗೆ ಅರ್ಪಿಸುತ ಮೋದಿಸುತ ನಲಿವುತಿರು//19//


ನೋಕನೀಯನು ಲೋಕದೊಳು ಶುನಿಸೂಕರಾದಿಗಳೊಳಗೆ ನೆಲೆಸಿದ್ದು

ಏಕಮೇವಾದ್ವಿತೀಯ ಬಹುರೂಪಾಹ್ವಯಗಳಿಂದ

ತಾ ಕರೆಸುತ ಒಳಗಿದ್ದು ತಿಳಿಸದೆ ಶ್ರೀ ಕಮಲಭವ ಮುಖ್ಯ ಸಕಲ

ದಿವೌಕಸಗಣ ಆರಾಧ್ಯ ಕೈಕೊಂಡು ಅನವರತ ಪೊರೆವ//20//


ಇನಿತು ಉಪಾಸನೆಗೈವುತಿಹ ಸಜ್ಜನರು ಸಂಸಾರದಲಿ ಪ್ರತಿಪ್ರತಿ ದಿನಗಳಲಿ

ಏನೇನು ಮಾಡುವುದು ಎಲ್ಲ ಹರಿಪೂಜೆ ಎನಿಸಿಕೊಂಬುದು ಸತ್ಯವು

ಈ ಮಾತಿನಲಿ ಸಂಶಯಪಡುವ ನರನು ಅಲ್ಪನು ಸುನಿಶ್ಚಯ

ಬಾಹ್ಯ ಕರ್ಮವ ಮಾಡಿ ಫಲವೇನು//21//


ಭೋಗ್ಯ ಭೋಕ್ಟ್ರುಗ ಳೊಳಗೆ ಹರಿ ತಾ ಭೋಗ್ಯ ಭೋಕ್ತನು ಎನಿಸಿ

ಯೋಗ್ಯಾಯೋಗ್ಯ ರಸಗಳ ದೇವ ದಾನವ ಗಣಕೆ ಉಣಿಸುವನು

ಭಾಗ್ಯನಿಧಿ ಭಕ್ತರಿಗೆ ಸದ್ವೈರಾಗ್ಯ ಭಕ್ತಿ ಜ್ಞಾನವೀವ

ಅಯೋಗ್ಯರಿಗೆ ದ್ವೇಷಾದಿಗಳ ತನ್ನಲ್ಲಿ ಕೊಡುತಿಪ್ಪ//22//


ಈ ಚತುರ್ದಶ ಭುವನದೊಳಗೆ ಚರಾಚರಾತ್ಮಕ ಜೀವರಲ್ಲಿ

ವಿರೋಚನಾತ್ಮಜ ವಂಚಕನು ನೆಲೆಸಿದ್ದು ದಿನದಿನದಿ

ಯಾಚಕನುಯೆಂದೆನಿಸಿಕೊಂಬ ಮರೀಚಿರ್ದಮನ ಸುಹಂಸ ರೂಪ

ನಿಷೇಚಕ ಆಹ್ವಯನು ಆಗಿ ಜನರಭಿಲಾಷೆ ಪೂರೈಪ//23//


ಅನ್ನದನ್ನಾದನ್ನಮಯ ಸ್ವಯಂ ಅನ್ನ ಬ್ರಹ್ಮಾದಿ ಅಖಿಳ ಚೇತನಕೆ

ಅನ್ನ ಕಲ್ಪಕನಾಹನು ಅನಿರುದ್ಧಾದಿ ರೂಪದಲಿ

ಅನ್ಯರನು ಅಪೇಕ್ಷಿಸದೆ ಗುಣ ಕಾರುಣ್ಯ ಸಾಗರ ಸೃಷ್ಟಿಸುವನು

ಹಿರಣ್ಯ ಗರ್ಭನೊಳಿದ್ದು ಪಾಲಿಸುವನು ಜಗತ್ರಯವ//24//


ತ್ರಿಪದ ತ್ರಿದಶಾಧ್ಯಕ್ಷ ತ್ರಿಸ್ಥ ತ್ರಿಪಥಗಾಮಿನಿ ಪಿತ ತ್ರಿವಿಕ್ರಮ

ಕೃಪಣ ವತ್ಸಲ ಕುವಲಯ ದಳ ಶ್ಯಾಮ ನಿಸ್ಸೀಮ

ಅಪರಿಮಿತ ಚಿತ್ಸುಖ ಗುಣಾತ್ಮಕ ವಪುಷ ವೈಕುಂಠ ಆದಿ ಲೋಕಾಧಿಪ

ತ್ರಯೀಮಯ ತನ್ನವರ ನಿಷ್ಕಪಟದಿಂ ಪೊರೆವ//25//


ಲವಣ ಮಿಶ್ರಿತ ಜಲವು ತೋರ್ಪದು ಲವಣದೋಪಾದಿಯಲಿ ಜಿಹ್ವೆಗೆ

ವಿವರಗೈಸಲು ಶಕ್ಯವಾಗುವದೇನೋ ನೋಳ್ಪರಿಗೆ

ಸ್ವವಶ ವ್ಯಾಪಿಯೆನಿಸಿ ಲಕ್ಷ್ಮೀಧವ ಚರಾಚರದೊಳಗೆ ತುಂಬಿಹನು

ಅವಿದಿತನ ಸಾಕಲ್ಯ ಬಲ್ಲವರು ಆರು ಸುರರೊಳಗೆ//26//


ವ್ಯಾಪ್ಯನಂದದಿ ಸರ್ವಜೀವರೊಳಿಪ್ಪ ಚಿನ್ಮಯ ಘೋರ ಭವ

ಸಂತಪ್ಯ ಮಾನರು ಭಜಿಸೆ ಭಕುತಿಯಳಿಂದಲಿ ಇಹಪರದಿ ಪ್ರಾಪ್ಯನಾಗುವನು

ಅವರವಗುಣಗಳ ಒಪ್ಪುಗೊಂಬನು ಭಕ್ತವತ್ಸಲ ತಪ್ಪಿಸುವ

ಜನ್ಮಾದಿ ದೋಷಗಳ ಅವರಿಗೆ ಅನವರತ//27//


ಹಲವು ಬಗೆಯಲಿ ಹರಿಯ ಮನದಲಿ ಒಲಿಸಿ ನಿಲ್ಲಿಸಿ

ಏನು ಮಾಡುವ ಕೆಲಸಗಳು ಅವನಂಘ್ರಿ ಪೂಜೆಗಳು ಎಂದು ನೆನೆವುತಿರು

ಹಲಧರನುಜ ತಾನೇ ಸರ್ವ ಸ್ಥಳಗಳಲಿ ನೆಲೆಸಿದ್ದು

ನಿಶ್ಚಂಚಲ ಭಕುತಿ ಸುಜ್ಞಾನ ಭಾಗ್ಯವ ಕೊಟ್ಟು ಸಂತೈಪ//28//


ದೋಷ ಗಂಧ ವಿದೂರ ನಾನಾ ವೇಷ ಧಾರಕ ಈ ಜಗತ್ರಯ ಪೋಷಕ

ಪುರಾತನ ಪುರುಷ ಪುರುಹೂತ ಮುಖ ವಿನುತ

ಶೇಷವರ ಪರಿಯಂಕ ಶಯನ ವಿಭೀಷಣ ಪ್ರಿಯ ವಿಜಯ ಸಖ

ಸಂತೋಷಬಡಿಸುವ ಜನರಿಗೆ ಇಷ್ಟಾರ್ಥಗಳ ಪೂರೈಸಿ//29//


ಶ್ರೀ ಮಹೀ ಸೇವಿತ ಪದಾಂಬುಜ ಭೂಮ ಸದ್ಭಕ್ತಿ ಐಕ ಲಭ್ಯ

ಪಿತಾಮಹಾದಿ ಅಮರಾಸುರ ಪಾದ ಪಂಕಜ

ವಾಮ ವಾಮನ ರಾಮ ಸಂಸಾರಮಯ ಔಷಧ ಹೇ ಮಮ ಕುಲಸ್ವಾಮಿ

ಸಂತೈಸೆನಲು ಬಂದೊದಗುವನು ಕರುಣಾಳು//30//


ದುನುಜ ದಿವಿಜರೊಳಿದ್ದು ಅವರವರ ಅನುಸರಿಸಿ ಕರ್ಮಗಳ ಮಾಳ್ಪನು

ಜನನ ಮರಣಾದಿ ಅಖಿಳ ದೋಷ ವಿದೂರ

ಎಮ್ಮೊಡನೆ ಜನಿಸುವನು ಜೀವಿಸುವ ಸಂರಕ್ಷಣೆಯ ಮಾಡುವ ಎಲ್ಲ ಕಾಲದಿ

ಧನವ ಕಾಯ್ದಿಹ ಸರ್ಪನಂತೆ ಅನಿಮಿತ್ತ ಬಾಂಧವನು//31//


ಬಿಸರುಹ ಆಪ್ತ ಆಗಸದಿ ತಾನು ಉದಯಿಸಲು ವೃಕ್ಷಂಗಳ ನೆಳಲು ಪಸರಿಸುವವು

ಇಳೆಯೊಳು ಅಸ್ತಮಿಸಲಲ್ಲ ಅಲ್ಲೇ ಲೀನಹವು

ಶ್ವಸನ ಮುಖ್ಯ ಅಮರಾಂತರಾತ್ಮಕನ ಒಷದೊಳು ಇರುತಿಪ್ಪವು

ಈ ಜಗತ್ರಯ ಬಸಿರೊಳು ಇಂಬಿಟ್ಟು ಎಲ್ಲ ಕರ್ಮವ ತೋರ್ಪ ನೋಳ್ಪರಿಗೆ//32//


ತ್ರಿಭುವನ ಐಕ ಆರಾಧ್ಯ ಲಕ್ಷ್ಮೀ ಸುಭುಜ ಯುಗಳ ಆಲಂಗಿತಾಂಗ

ಸ್ವಭು ಸುಖಾತ್ಮ ಸುವರ್ಣವರ್ಣ ಸುಪರ್ಣ ವರವಾಹನ

ಅಭಯದ ಅನಂತಾರ್ಕ ಶಶಿ ಸನ್ನಿಭ ನಿರಂಜನ ನಿತ್ಯದಲಿ ತನಗೆ

ಅಭಿನಮಿಸುವರಿಗೆ ಏವ ಸರ್ವಾರ್ಥಗಳ ತಡೆಯದಲೆ//33//


ಕವಿಗಳಿಂದಲಿ ತಿಳಿದು ಪ್ರಾತಃ ಸವನ ಮಧ್ಯಂ ದಿನವು

ಸಾಯಮ ಸವನಗಳ ವಸು ರುದ್ರರು ಆದಿತ್ಯರೊಳು ರಾಜಿಸುವ

ಪವನನೊಳು ಕೃತಿ ಜಯ ಸುಮಾಯಾಧವನ ಮೂರ್ತಿತ್ರಯವ ಚಿಂತಿಸಿ

ದಿವಸವೆಂಬ ಆಹುತಿಗಳಿಂದ ಅರ್ಚಿಸುತ ಸುಖಿಸುತಿರು//34//


ಚತುರ ವಿಂಶತಿ ಅಬ್ಧ ವಸು ದೇವತೆಗಳೊಳು ಪ್ರದ್ಯುಮ್ನನು ಇಪ್ಪನು

ಚತುರ ಚತ್ವಾರಿಂಶತಿಗಳಲಿ ಸಂಕರುಷಣಾಖ್ಯ

ಹುತವಹ ಅಕ್ಷನೊಳಿಹನು ಮಾಯಪತಿಯು ಹದಿನಾರಧಿಕ

ದ್ವಾತ್ರಿಂಶತಿ ವರುಷಗಳಲಿಪ್ಪನು ಆದಿತ್ಯನೊಳು ಸಿತಕಾಯ//35//


ಷೋಡಶ ಉತ್ತರ ಶತ ವರುಷದಲಿ ಷೋಡಶ ಉತ್ತರ ಶತ ಸುರೂಪದಿ

ಕ್ರೀಡಿಸುವ ವಸು ರುದ್ರರು ಆದಿತ್ಯರೊಳು ಸತಿಸಹಿತ

ವ್ರೀಡವಿಲ್ಲದೆ ಭಜಿಪ ಭಕ್ತರ ಪೀಡಿಸುತ ದುರಿತ ಔಘಗಳ

ದೂರ ಓಡಿಸುತ ಬಳಿಯಲಿ ಬಿಡದೆ ನೆಲೆಸಿಪ್ಪ ಭಯಹಾರಿ//36//


ಮೂರಧಿಕ ಎಂಭತ್ತು ಸಹಸ್ರ ಐನೂರಿಪ್ಪತ್ತು ಎನಿಪ ರೂಪದಿ

ತೋರುತಿಪ್ಪ ದಿವಾ ನಿಶಾಧಿಪರೊಳಗೆ ನಿತ್ಯದಲಿ

ಭಾರತೀ ಪ್ರಾಣರೊಳಗಿದ್ದು ನಿವಾರಿಸುತ ಭಕ್ತರ ದುರಿತ

ಹಿಂಕಾರ ನಿಧನ ಪ್ರಥಮ ರೂಪದಿ ಪಿತೃಗಳನೆ ಪೊರೆವ//37//


ಬುದ್ಧಿ ಪೂರ್ವಕ ಉತ್ತಮೋತ್ತಮ ಶುದ್ಧ ಊರ್ಣ ಅಂಬರವ

ಪಂಕದೊಳು ಅಡ್ಡಿ ತೆಗೆಯಲು ಲೇಪವಾಗುವದೇ ಪರೀಕ್ಷಿಸಲು

ಪದ್ಮನಾಭನು ಸರ್ವಜೀವರೊಳಿದ್ದರೇನು

ಗುಣತ್ರಯಗಳಿಂ ಬದ್ಧನು ಆಗುವನೇನೋ? ನಿತ್ಯ ಸುಖಾತ್ಮ ಚಿನ್ಮಯನು//38//


ಸಕಲ ದೋಷ ವಿದೂರ ಶಶಿ ಪಾವಕ ಸಹಸ್ರ ಅನಂತ ಸೂರ್ಯ ಪ್ರಕಾರ ಸನ್ನಿಭ ಗಾತ್ರ

ಲಕುಮಿ ಕಳತ್ರ ಸುರಮಿತ್ರ

ವಿಖನ ಸಾಂಡದೊಳಿಪ್ಪ ಬ್ರಹ್ಮಾದಿ ಅಖಿಳ ಚೇತನ ಗಣಕೆ

ತಾನೇ ಸಖನು ಎನಿಸಿಕೊಂಡು ಅಕುಟಿಲ ಆತ್ಮಕನು ಇಪ್ಪನು ಅವರಂತೆ//39//


ದೇಶ ಭೇದಗಳಲ್ಲಿ ಇಪ್ಪ ಆಕಾಶದೋಪಾದಿಯಲಿ ಚೇತನ ರಾಶಿಯೊಳು ನೆಲೆಸಿಪ್ಪನು

ಅವ್ಯವಧಾನದಲಿ ನಿರುತ

ಶ್ರೀ ಸಹಿತ ಸರ್ವತ್ರದಿ ನಿರವಾಕಾಶ ಕೊಡುವಂದದಲಿ ಕೊಡುತ

ನಿರಾಶೆಯಲಿ ಸರ್ವಾಂತರಾತ್ಮಕ ಶೋಭಿಸುವ ಸುಖದ//40//


ಶ್ರೀ ವಿರಿಂಚಿ ಆದಿ ಅಮರಗಣ ಸಂಸೇವಿತ ಅಂಘ್ರಿ ಸರೋಜ

ಈ ಜಡ ಜೀವ ರಾಶಿಗಳ ಒಳ ಹೊರಗೆ ನೆಲೆಸಿದ್ದು ನಿತ್ಯದಲಿ

ಸಾವಕಾಶನು ಎನಿಸಿ ತನ್ನ ಕಳೇವರದೊಳು ಇಂಬಿಟ್ಟು ಸಲಹುವ

ದೇವ ದೇವಕೀ ರಮಣ ದಾನವ ಹರಣ ಜಿತಾಮರಣ//41//


ಮಾಸ ಒಂದಕೆ ಪ್ರತಿ ದಿವಸದಲಿ ಶ್ವಾಸಗಳು ಅಹವು

ಅಷ್ಟ ಚತ್ವಾರಿಂಶತಿ ಸಹಸ್ರಾಧಿಕ ಆರು ಸುಲಕ್ಷ ಸಂಖ್ಯೆಯಲಿ

ಹಂಸನಾಮಕ ಹರಿಯ ಷೋಡಶ ಈ ಶತಾಬ್ದದಿ ಭಜಿಸೆ ಒಲಿವ

ದಯಾಸಮುದ್ರ ಕುಚೇಲಗೆ ಒಲಿದಂದದಲಿ ದಿನದಿನದಿ//42//


ಸ್ಥೂಲ ದೇಹದೊಳಿದ್ದು ವರುಷಕೆ ಏಳಧಿಕ ಎಪ್ಪತ್ತು ಲಕ್ಷದ

ಮೇಲೆ ಎಪ್ಪತ್ತಾರು ಸಾವಿರ ಶ್ವಾಸ ಜಪಗಳನು

ಗಾಳಿ ದೇವನು ಕರುಣದಲಿ ಈರೇಳು ಲೋಕದೊಳುಳ್ಳ

ಚೇತನ ಜಾಲದೊಳು ಮಾಡುವನು ತ್ರಿಜಗದ್ವ್ಯಾಪ್ತ ಪರಮಾಪ್ತ//43//


ಈರೆರೆಡು ದೇಹಗಳೊಳಗಿದ್ದು ಸಮೀರ ದೇವನು ಶ್ವಾಸ ಜಪ

ನಾನೂರು ಅಧಿಕವು ಆಗಿಪ್ಪ ಎಂಭತ್ತಾರು ಸಹಸ್ರ ತಾ ರಚಿಸುವನು ದಿವಸ ಒಂದಕೆ

ಮೂರು ವಿಧ ಜೀವರೊಳಗಿದ್ದು

ಖರಾರಿ ಕರುಣಾಬಲವು ಅದೆಂತುಟೊ ಪವನ ರಾಯನೊಳು//44//


ಶ್ರೀಧವ ಜಗನ್ನಾಥ ವಿಠಲ ತಾ ದಯದಿ ವದನದೊಳು ನುಡಿದ ಉಪಾದಿಯಲಿ

ನಾ ನುಡಿದೆನು ಅಲ್ಲದೆ ಕೇಳಿ ಬುಧ ಜನರು

ಸಾಧು ಲಿಂಗ ಪ್ರದರ್ಶಕರು ನಿಷೇಧಗೈಸಿದರೆ ಏನಹುದು

ಎನ್ನಪರಾಧವು ಏನಿದರೊಳಗೆ ಪೇಳ್ವುದು ತಿಳಿದು ಕೋವಿದರು//45//


//ಇತಿ ಶ್ರೀ ನಾಡೀಪ್ರಕರಣ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು

Tuesday, January 15, 2013

ಶ್ರೀ ಹರಿಕಥಾಮೃತಸಾರ - 11

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಶ್ರೀ ಸ್ಥಾವರಜಂಗಮ ಸಂಧಿ//


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಪಾದುಕೆಯ ಕಂಟಕಸಿಕ್ತ ಮೊದಲಾದವು ಅನುದಿನ ಬಾಧಿಸುವನೆ

ಏಕಾದಶ ಇಂದ್ರಿಯಗಳಲಿ ಬಿಡದೆ ಹೃಷೀಕಪನ ಮೂರ್ತಿ ಸಾದರದಿ ನೆನೆವವನು

ಏನಪರಾಧಗಳ ಮಾಡಿದರು ಸರಿಯೇ

ನಿರೋಧಗೈಸವು ಮೋಕ್ಷಮಾರ್ಗಕೆ ದುರಿತ ರಾಶಿಗಳು//1//


ಹಗಲು ನಂದಾದೀಪದಂದದಿ ನಿಗಮ ವೇದ್ಯನ ಪೂಜಿಸುತ

ಕೈ ಮುಗಿದು ನಾಲ್ಕರೊಳು ಒಂದು ಪುರುಷಾರ್ಥವನು ಬೇಡದಲೇ

ಜಗದುದರ ಕೊಟ್ಟುದನು ಭುಂಜಿಸು ಮಗ ಮಡದಿ ಪ್ರಾಣ ಇಂದ್ರಿಯ ಆತ್ಮಾದಿಗಳು

ಭಗವಧೀನವೆಂದು ಅಡಿಗಡಿಗೆ ನೆನೆವುತಿರು//2//


ಅಸ್ವತಂತ್ರನು ಜೀವ ಹರಿ ಸರ್ವ ಸ್ವತಂತ್ರನು ನಿತ್ಯ ಸುಖಮಯ

ನಿ:ಸ್ವ ಬದ್ಧ ಅಲ್ಪಜ್ಞ ಶಕ್ತ ಸದುಃಖ ನಿರ್ವಿಣ್ಣ

ಹ್ರಸ್ವ ದೇಹಿ ಸನಾಥಜೀವನು ವಿಶ್ವ ವ್ಯಾಪಕ ಕರ್ತೃ

ಬ್ರಹ್ಮ ಸರಸ್ವತಿ ಈಶಾದಿ ಅಮರನುತ ಹರಿಯೆಂದು ಕೊಂಡಾಡು//3//


ಮತ್ತೆ ವಿಶ್ವಾದಿ ಎಂಟು ರೂಪ ಒಂಭತ್ತರಿಂದಲಿ ಪೆಚ್ಚಿಸಲು

ಎಪ್ಪತ್ತೆರಡು ರೂಪಗಳು ಅಹವು ಒಂದೊಂದೆ ಸಾಹಸ್ರ

ಪೃಥ್ ಪೃಥಕು ನಾಡಿಗಳೊಳಗೆ ಸರ್ವೋತ್ತಮನ ತಿಳಿಯೆಂದು

ಭೀಷ್ಮನು ಬಿತ್ತರಿಸಿದನು ಧರ್ಮ ತನಯಗೆ ಶಾಂತಿ ಪರ್ವದಲಿ//4//


ಎಂಟು ಪ್ರಕೃತಿಗಳೊಳಗೆ ವಿಶ್ವಾದಿ ಎಂಟು ರೂಪದಲಿದ್ದು

ಭಕ್ತರ ಕಂಟಕವ ಪರಿಹರಿಸುತಲಿ ಪಾಲಿಸುವ ಪ್ರತಿದಿನದಿ

ನೆಂಟನಂದದಿ ಎಡಬಿಡದೆ ವೈಕುಂಠರಮಣನು

ತನ್ನವರ ನಿಷ್ಕಂಟಕ ಸುಮಾರ್ಗದಲಿ ನಡೆಸುವ ದುರ್ಜನರ ಬಡಿವ//5//


ಸ್ವರಮಣನು ಶಕ್ತಿ ಆದಿ ರೂಪದಿ ಮಾನಿಗಳೊಳಗೆ ನೆಲೆಸಿದ್ದು

ಅರವಿದೂರನು ಸ್ಥೂಲ ವಿಷಯಗಳ ಉಂಡುಣಿಪ ನಿತ್ಯ

ಅರಿಯದಲೆ ನಾನುಂಬೆನು ಎಂಬುವ ನಿರಯಗಳ ಉಂಬುವನು

ನಿಶ್ಚಯ ಮರಳಿ ಮರಳಿ ಭವಾಟವಿಯ ಸಂಚರಿಸಿ ಬಳಲುವನು//6//


ಸುರುಚಿರುಚಿರ ಸುಗಂಧ ಸುಚಿಯೆಂದು ಇರುತಿಹನು ಷಡ್ರಸಗಳೊಳು

ಹನ್ನೆರಡು ರೂಪದಲಿ ಇಪ್ಪ ಶ್ರೀ ಭೂ ದುರ್ಗೆಯರ ಸಹಿತ

ಸ್ವರಮಣನು ಎಪ್ಪತ್ತೆರಡು ಸಾವಿರ ಸಮೀರನ ರೂಪದೊಳಗಿದ್ದು

ಉರುಪರಾಕ್ರಮ ಕರ್ತೃ ಎನಿಸುವ ನಾಡಿಯೊಳಗಿದ್ದು//7//


ಸರ್ವತ್ರದಲಿ ನೆನೆವರನು ಅನ್ಯ ಕರ್ಮವ ಮಾಡಿದರು ಸರಿ

ಪುಣ್ಯ ಕರ್ಮಗಳು ಎನಿಸುವವು ಸಂದೇಹವಿನಿತಿಲ್ಲ

ನಿನ್ನ ಸ್ಮರಿಸದೆ ಸ್ನಾನ ಜಪ ಹೋಮ ಅನ್ನ ವಸ್ತ್ರ ಗಜ ಅಶ್ವ ಭೂ ಧನ ಧಾನ್ಯ

ಮೊದಲಾದ ಅಖಿಳ ಧರ್ಮವ ಮಾಡಿ ಫಲವೇನು//8//


ಇಷ್ಟ ಭೋಗ್ಯ ಪದಾರ್ಥದೊಳು ಶಿಪಿವಿಷ್ಟ ನಾಮದಿ ಸರ್ವ ಜೀವರ ತುಷ್ಟಿ ಬಡಿಸುವ

ದಿನದಿನದಿ ಸಂತುಷ್ಟ ತಾನಾಗಿ

ಕೋಷ್ಟದೊಳು ನೆಲೆಸಿದ್ದು ರಸಯಮಯ ಪುಷ್ಟಿಯೈದಿಸುತ ಇಂದ್ರಿಯಗಳೊಳು

ಪ್ರೇಷ್ಟನಾಗಿದ್ದು ಎಲ್ಲ ವಿಷಯಗಳ ಉಂಬ ತಿಳಿಸದಲೆ//9//


ಕಾರಣಾಹ್ವಯ ಜ್ಞಾನ ಕರ್ಮ ಪ್ರೇರಕನು ತಾನಾಗಿ ಕ್ರಿಯೆಗಳ ತೋರುವನು

ಕರ್ಮ ಇಂದ್ರಿಯ ಅಧಿಪರೊಳಗೆ ನೆಲೆಸಿದ್ದು

ಮೂರು ಗುಣಮಯ ದ್ರವ್ಯಗ ತದಾಕಾರ ತನ್ನಾಮದಲಿ ಕರೆಸುವ

ತೋರಿಕೊಳ್ಳದೆ ಜನರ ಮೋಹಿಪ ಮೋಹಕಲ್ಪಕನು//10//


ದ್ರವ್ಯನು ಎನಿಸುವ ಭೂತ ಮಾತ್ರದೊಳು ಅವ್ಯಯನು

ಕರ್ಮ ಇಂದ್ರಿಯಗಳೊಳು ಭವ್ಯ ಸತ್ಕ್ರಿಯನೆನಿಪ ಜ್ಞಾನ ಇಂದ್ರಿಯಗಳೊಳಗಿದ್ದು

ಸ್ತವ್ಯಕಾರಕನು ಎನಿಸಿ ಸುಖಮಯ ಸೇವ್ಯ ಸೇವಕನು ಎನಿಸಿ ಜಗದೊಳು

ಹವ್ಯವಾಹನನು ಅರಣಿಯೊಳಗೆ ಇಪ್ಪಂತೆ ಇರುತಿಪ್ಪ//11//


ಮನವೇ ಮೊದಲಾದ ಇಂದ್ರಿಯಗಳೊಳಗೆ ಅನಿಲದೇವನು ಶುಚಿಯೆನಿಸಿಕೊಂಡು

ಅನವರತ ನೆಲೆಸಿಪ್ಪ ಶುಚಿಷತ್ ಹೋತನೆಂದೆನಿಸಿ ತನುವಿನೊಳಗಿಪ್ಪನು

ಸದಾ ವಾಮನ ಹೃಷೀಕೇಶಾಖ್ಯ ರೂಪದಲಿ

ಅನುಭವಕೆ ತಂದೀವ ವಿಷಯಜ ಸುಖವ ಜೀವರಿಗೆ//12//


ಪ್ರೇರಕ ಪ್ರೇರ್ಯರೊಳು ಪ್ರೇರ್ಯ ಪ್ರೇರಕನು ತಾನಾಗಿ

ಹರಿ ನಿರ್ವೈರದಿಂದ ಪ್ರವರ್ತಿಸುವ ತನ್ನಾಮ ರೂಪದಲಿ

ತೋರಿಕೊಳ್ಳದೆ ಸರ್ವರೊಳು ಭಾಗೀರಥೀ ಜನಕನು

ಸಕಲ ವ್ಯಾಪಾರಗಳ ತಾ ಮಾಡಿ ಮಾಡಿಸಿ ನೋಡಿ ನಗುತಿಪ್ಪ//13//


ಹರಿಯೆ ಮುಖ್ಯ ನಿಯಾಮಕನು ಎಂದರಿದು ಪುಣ್ಯಾಪುಣ್ಯ ಹರುಷಾಹರುಷ

ಲಾಭಾಲಾಭ ಸುಖದುಃಖಾದಿ ದ್ವಂದ್ವಗಳ

ನಿರುತ ಅವರಂಘ್ರಿಗೆ ಸಮರ್ಪಿಸಿ ನರಕ ಭೂ ಸ್ವರ್ಗಾಪ ವರ್ಗದಿ

ಕರಣ ನಿಯಾಮಕನ ಸರ್ವತ್ರದಲಿ ನೆನೆವುತಿರು//14//


ಮಾಣವಕ ತತ್ಫಲಗಳ ಅನುಸಂಧಾನವಿಲ್ಲದೆ

ಕರ್ಮಗಳ ಸ್ವ ಇಚ್ಚಾನುಸಾರದಿ ಮಾಡಿ ಮೋದಿಸುವಂತೆ

ಪ್ರತಿದಿನದಿ ಜ್ಞಾನ ಪೂರ್ವಕ ವಿಧಿ ನಿಷೇಧಗಳು ಏನು ನೋಡದೆ ಮಾಡು

ಕರ್ಮ ಪ್ರಧಾನ ಪುರುಷೇಶನಲಿ ಭಕುತಿಯ ಮಾಡು ಕೊಂಡಾಡು//15//


ಹಾನಿ ವೃದ್ಧಿ ಜಯಾಪಜಯಗಳು ಏನು ಕೊಟ್ಟುದ ಭುಂಜಿಸುತ

ಲಕ್ಷ್ಮೀ ನಿವಾಸನ ಕರುಣವನೆ ಸಂಪಾದಿಸು ಅನುದಿನದಿ

ಜ್ಞಾನ ಸುಖಮಯ ತನ್ನವರ ಪರಮ ಅನುರಾಗದಿ ಸಂತೈಪ

ದೇಹಾನುಬಂಧಿಗಳಂತೆ ಒಳಹೊರಗಿದ್ದು ಕರುಣಾಳು//16//


ಆ ಪರಮ ಸಕಲ ಇಂದ್ರಿಯಗಳೊಳು ವ್ಯಾಪಕನು ತಾನಾಗಿ

ವಿಷಯವ ತಾ ಪರಿಗ್ರಹಿಸುವನು ತಿಳಿಸದೆ ಸರ್ವಜೀವರೊಳು

ಪಾಪ ರಹಿತ ಪುರಾಣ ಪುರುಷ ಸಮೀಪದಲಿ ನೆಲೆಸಿದ್ದು

ನಾನಾ ರೂಪಕ ಧಾರಕ ತೋರಿಕೊಳ್ಳದೆ ಕರ್ಮಗಳ ಮಾಳ್ಪ//17//


ಖೇಚರರು ಭೂಚರರು ವಾರಿ ನಿಶಾಚರರೊಳಿದ್ದು ಅವರ ಕರ್ಮಗಳ

ಆಚರಿಸುವನು ಘನ ಮಹಿಮ ಪರಮ ಅಲ್ಪನೋಪಾದಿ

ಗೋಚರಿಸು ಬಹು ಪ್ರಕಾರ ಆಲೋಚನೆಯ ಮಾಡಿದರು ಮನಸಿಗೆ

ಕೀಚಕಾರಿ ಪ್ರೀಯ ಕವಿಜನಗೇಯ ಮಹರಾಯ//18//


ಒಂದೇ ಗೋತ್ರ ಪ್ರವರ ಸಂಧ್ಯಾವಂದನೆಗಳು ಮಾಡಿ

ಪ್ರಾಂತಕೆ ತಂದೆ ತನಯರು ಬೇರೆ ತಮ್ಮಯ ಪೆಸರುಗೊಂಬoತೆ

ಒಂದೇ ದೇಹದೊಳಿದ್ದು ನಿಂದ್ಯಾನಿಂದ್ಯ ಕರ್ಮವ ಮಾಡಿ ಮಾಡಿಸಿ

ಇಂದಿರೇಶನು ಸರ್ವಜೀವರೊಳು ಈಶನೆನಿಸುವನು//19//


ಕಿಟ್ಟಗಟ್ಟಿದ ಲೋಹ ಪಾವಕ ಸುತ್ತು ವಿಂಗಡ ಮಾಡುವಂತೆ

ಘರಟ್ಟ ವ್ರೀಹಿಗಳು ಇಪ್ಪ ತಂಡುಲ ಕಡೆಗೆ ತೆಗೆವಂತೆ

ವಿಠಲಾ ಎಂದೊಮ್ಮೆ ಮೈಮರೆದು ಅಟ್ಟಹಾಸದಿ ಕರೆಯೆ

ದುರಿತಗಳು ಅಟ್ಟುಳಿಯ ಬಿಡಿಸೆವನ ತನ್ನೊಳಗಿಟ್ಟು ಸಲಹುವನು//20//


ಜಲಧಿಯೊಳಗೆ ಸ್ವೇಚ್ಚಾನುಸಾರದಿ ಜಲಚರ ಪ್ರಾಣಿಗಳು

ತತ್ತತ್ ಸ್ಥಳಗಳಲಿ ಸಂತೋಷಪಡುತಲಿ ಸಂಚರಿಸುವಂತೆ

ನಲ್ಲಿನ ನಾಭನೊಳು ಅಬ್ಜ ಭವ ಮುಪ್ಪೊಳಲ ಉರಿಗಮೈಗಣ್ಣ ಮೊದಲಾದ

ಹಲವು ಜೀವರಗಣವು ವರಿಸುತಿಹುದು ನಿತ್ಯದಲಿ//21//


ವಾಸುದೇವನು ಒಳಹೊರಗೆ ಅವಕಾಶದನು ತಾನಾಗಿ

ಬಿಂಬ ಪ್ರಕಾಶಿಸುವ ತದ್ರೂಪ ತನ್ನಾಮದಲಿ ಸರ್ವತ್ರ

ಈ ಸಮನ್ವಯವೆಂದೆನಿಪ ಸದುಪಾಸನವಗೈವವನು

ಮೋಕ್ಷ ಅನ್ವೇಷಿಗಳೊಳುತ್ತಮನು ಜೀವನ್ಮುಕ್ತನ ಅವನಿಯೊಳು//22//


ಭೋಗ್ಯ ವಸ್ತುಗಳೊಳಗೆ ಯೋಗ್ಯಾಯೋಗ್ಯ ರಸಗಳನರಿತು

ಯೋಗ್ಯಾಯೋಗ್ಯರಲಿ ನೆಲೆಸಿಪ್ಪ ಹರಿಗೆ ಸಮರ್ಪಿಸು ಅನುದಿನದಿ

ಭಾಗ್ಯ ಬಡತನ ಬರಲು ಹಿಗ್ಗದೆ ಕುಗ್ಗಿ ಸೊರಗದೆ

ಸದ್ಭಕ್ತಿ ವೈರಾಗ್ಯಗಳನೆ ಮಾಡು ನೀ ನಿರ್ಭಾಗ್ಯನೆನಿಸದಲೆ//23//


ಸ್ಥಳ ಜಲಾದ್ರಿಗಳಲ್ಲಿ ಜನಿಸುವ ಫಲ ಸುಪುಷ್ಪಜ ಗಂಧರಸ

ಶ್ರೀ ತುಳಸಿ ಮೊದಲಾದ ಅಖಿಳ ಪೂಜಾ ಸಾಧನ ಪದಾರ್ಥ

ಹಲವು ಬಗೆಯಿಂದ ಅರ್ಪಿಸುತ ಬಾಂಬೊಳೆಯ ಜನಕಗೆ

ನಿತ್ಯಾನಿತ್ಯದಿ ತಿಳಿವುದಿದು ವ್ಯತಿರೇಕ ಪೂಜೆಗಳೆಂದು ಕೋವಿದರು//24//


ಶ್ರೀಕರನ ಸರ್ವತ್ರದಲಿ ಅವಲೋಕಿಸುತ ಗುಣ ರೂಪ ಕ್ರಿಯ

ವ್ಯತಿರೇಕ ತಿಳಿಯದಲೆ ಅನ್ವಯಿಸು ಬಿಂಬನಲಿ ಮರೆಯದಲೆ

ಸ್ವೀಕರಿಸುವನು ಕರುಣದಿಂದ ನಿರಾಕರಿಸದೆ ಕೃಪಾಳು

ಭಕ್ತರ ಶೋಕಗಳ ಪರಿಹರಿಸಿ ಸುಖವಿತ್ತು ಅನವರತ ಪೊರೆವ//25//


ಇನಿತು ವ್ಯತಿರೇಕ ಅನ್ವಯಗಳು ಎಂದೆನಿಪ ಪೂಜಾ ವಿಧಿಗಳನೆ ತಿಳಿದು

ಅನಿಮಿಷ ಈಶನ ತೃಪ್ತಿ ಪಡಿಸುತಲಿರು ನಿರಂತರದಿ

ಘನ ಮಹಿಮ ಕೈಕೊಂಡು ಸ್ಥಿತಿ ಮೃತಿ ಜನುಮಗಳ ಪರಿಹರಿಸಿ

ಸೇವಕ ಜನರೊಳಿಟ್ಟು ಆನಂದ ಪಡಿಸುವ ಭಕ್ತವತ್ಸಲನು//26//


ಜಲಜನಾಭನಿಗೆ ಎರಡು ಪ್ರತಿಮೆಗಳು ಇಳೆಯೊಳಗೆ ಜಡ ಚೇತನಾತ್ಮಕ

ಚಲದೊಳು ಇರ್ಬಗೆ ಸ್ತ್ರೀ ಪುರುಷ ಭೇದದಲಿ ಜಡದೊಳಗೆ ತಿಳಿವುದು ಆಹಿತ ಪ್ರತಿಮೆ

ಸಹಜ ಆಚಲಗಳು ಎಂದು ಇರ್ಬಗೆ ಪ್ರತೀಕದಿ

ಲಲಿತ ಪಂಚತ್ರಯ ಸುಗೋಳಕವ ಅರಿತು ಭಜಿಸುತಿರು//27//


ವಾರಿಜಾಸನ ವಾಯುವೀಂದ್ರ ಉಮಾರಮಣ ನಾಕೇಶ ಸಮರ ಅಹಂಕಾರಿಕ

ಪ್ರಾಣಾದಿಗಳು ಪುರುಷರ ಕಳೇವರದಿ

ತೋರಿಕೊಳದೆ ಅನಿರುದ್ಧ ದೋಷ ವಿದೂರ ನಾರಾಯಣನ ರೂಪ

ಶರೀರಮಾನಿಗಳು ಆಗಿ ಭಜಿಸುತ ಸುಖವ ಕೊಡುತಿಹರು//28//


ಸಿರಿ ಸರಸ್ವತಿ ಭಾರತೀ ಸೌಪರಣೀ ವಾರುಣಿ ಪಾರ್ವತೀ ಮುಖರು ಇರುತಿಹರು

ಸ್ತ್ರೀಯರೊಳಗೆ ಅಬಿಮಾನಿಗಳು ತಾವೆನಿಸಿ

ಅರುಣ ವರ್ಣ ನಿಭಾಂಗ ಶ್ರೀ ಸಂಕರುಷಣ ಪ್ರದ್ಯುಮ್ನ ರೂಪಗಳ

ಇರುಳು ಹಗಲು ಉಪಾಸನವ ಗೈವುತಲೆ ಮೋದಿಪರು//29//


ಕೃತ ಪ್ರತೀಕದಿ ಟಂಕಿ ಭಾರ್ಗವ ಹುತವಹ ಅನಿಲ ಮುಖ್ಯ ದಿವಿಜರು

ತುತಿಸಿಕೊಳುತ ಅಭಿಮಾನಿಗಳು ತಾವಾಗಿ ನೆಲೆಸಿದ್ದು

ಪ್ರತಿ ದಿವಸ ಶ್ರೀ ತುಳಸಿ ಗಂಧಾಕ್ಷತೆ ಕುಸುಮ ಫಲ ದೀಪ ಪಂಚಾಮೃತದಿ

ಪೂಜಿಪ ಭಕುತರಿಗೆ ಕೊದುತಿಹನು ಪುರುಷಾರ್ಥ//30//


ನಗಗಳ ಅಭಿಮಾನಿಗಳು ಎನಿಪ ಸುರರುಗಳು

ಸಹಜ ಅಚಲಗಳಿಗೆ ಮಾಣಿಗಳು ಎನಿಸಿ ಶ್ರೀ ವಾಸುದೇವನ ಪೂಜಿಸುತಲಿ ಇಹರು

ಸ್ವಾಗತ ಭೇದ ವಿವರ್ಜಿತನ ನಾಲ್ಬಗೆ ಪ್ರತೀಕದಿ ತಿಳಿದು ಪೂಜಿಸೆ

ವಿಗತ ಸಂಸಾರಾಬ್ಧಿ ದಾಟಿಸಿ ಮುಕ್ತರನು ಮಾಳ್ಪ//31//


ಆವ ಕ್ಷೇತ್ರಕೆ ಪೋದರೇನು? ಇನ್ನಾವ ತೀರ್ಥದಿ ಮುಳುಗಲೇನು?

ಇನ್ನಾವ ಜಪ ತಪ ಹೋಮ ದಾನವ ಮಾಡಿ ಫಲವೇನು?

ಶ್ರೀವರ ಜಗನ್ನಾಥ ವಿಠಲ ಈ ವಿಧದಿ ಜಂಗಮ ಸ್ಥಾವರ ಜೀವರೊಳು

ಪರಿಪೂರ್ಣನೆಂದು ಅರಿಯದಿಹ ಮಾನವನು//32//


//ಇತಿ ಶ್ರೀ ಸ್ಥಾವರಜಂಗಮ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು