Friday, January 4, 2013

ಶ್ರೀ ಹರಿಕಥಾಮೃತಸಾರ - 6

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಪಂಚಮಹಾಯಜ್ಞ ಸಂಧಿ//

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಜನನಿಪಿತಭೂವಾರಿದಾಂಬರವೆನಿಪ ಪಂಚಾಗ್ನಿಯಲಿ

ನಾರಾಯಣನ ತ್ರಿಂಶತಿ ಮೂರ್ತಿಗಳ ವ್ಯಾಪಾರ ವ್ಯಾಪ್ತಿಗಳ ನೆನೆದು

ದಿವಸಾಳು ಎಂಬ ಸಮಿಧೆಗಳು ನಿರಂತರ ಹೋಮಿಸುತ

ಪಾವನಕೆ ಪಾವನನು ಎನಿಪ ಪರಮನ ಬೇಡು ಪರಮಸುಖ//1//


ಗಗನ ಪಾವಕ ಸಮಿಧೆ ರವಿ ರಶ್ಮಿಗಳೇ ಧೂಮವು ಅರ್ಚಿಯೆನಿಪುದು ಹಗಲು

ನಕ್ಷತ್ರಗಳು ಕಿಡಿಗಳು ಚಂದ್ರಮ ಅಂಗಾರ

ಮೃಗವರ ಉದರನೊಳಗೆ ಐದು ರೂಪಗಳ ಚಿಂತಿಸಿ

ಭಕ್ತಿರಸ ಮಾತುಗಳೆ ಮಂತ್ರವ ಮಾಡಿ ಹೋಮಿಸುವರು ವಿಪಶ್ಚಿತರು//2//


ಪಾವಕನು ಪರ್ಜನ್ಯ ಸಮಿಧೆಯು ಪ್ರಾವಹೀಪತಿ ಧೂಮಗಳು ಮೇಘಾವಳಿಗಳು

ಅರ್ಚಿ ಕ್ಷಣಪ್ರಭೆ ಗರ್ಜನವೆ ಕಿಡಿಯು ಭಾವಿಸುವುದು ಅಂಗಾರ ಸಿಡಿಲೆಂದು

ಈ ವಿಧ ಅಗ್ನಿಯೊಳು ಅಬ್ಧಿ ಜಾತನ ಕೋವಿದರು ಹೋಮಿಸುವರು ಅನುದಿನ

ಪರಮ ಭಕುತಿಯಲಿ//3//


ಧರಣಿಯೆಂಬುದೇ ಅಗ್ನಿ ಸಂವತ್ಸರವೇ ಸಮಿಧೆ ವಿಹಾಯಸವೇ ಪೊಗೆ

ಇರಳು ಉರಿ ದಿಶ ಅಂಗಾರ ಅವಾಂತರ ದಿಗ್ವಲಯ ಕಿಡಿಯು

ವರುಷವೆಂಬ ಆಹುತಿಗಳಿಂದಲಿ ಹರಿಯ ಮೆಚ್ಚಿಸಿ

ಸಕಲರೊಳಗೆ ಅಧ್ವರಿಯನಾಗಿರು ಸರ್ವ ರೂಪಾತ್ಮಕನ ಚಿಂತಿಸುತ//4//


ಪುರುಷ ಶಿಖಿ ವಾಕ್ಸಮಿಧೆ ಧೂಮವು ಪರಣ ಅರ್ಚಿಯು ಜಿಹ್ವೆ ಶ್ರೋತ್ರಗಳು ಎರಡು ಕಿಡಿಗಳು

ಲೋಚನಗಳು ಅಂಗಾರವೆನಿಸುವುವು

ನಿರುತ ಭುಂಜಿಸುವನ್ನ ಯದುಕುಲವರನಿಗೆ ಅವದಾನಗಳೆಂದು

ಈ ಪರಿ ಸಮರ್ಪಣೆಗೈಯೆ ಕೈಗೊಂಡು ಅನುದಿನದಿ ಪೊರೆವ//5//


ಮತ್ತೆ ಯೋಷ ಅಗ್ನಿಯೊಳು ತಿಳಿವುದು ಉಪಸ್ಥ ತತ್ತ್ವವೆ ಸಮಿಧೆ

ಕಾಮೋತ್ಪತ್ತಿ ಪರಮಾತುಗಳು ಧೂಮವು ಯೋನಿ ಮಹದರ್ಚಿ

ತತ್ಪ್ರವೇಶ ಅಂಗಾರ ಕಿಡಿಗಳು ಉತ್ಸಹ ಉತ್ಸರ್ಜನವೆ

ಪುರುಷೋತ್ತಮನಿಗೆ ಅವದಾನವನೆ ಕೈಕೊಂಡು ಮನ್ನಿಸುವ//6//


ಐದಗ್ನಿಗಳಲ್ಲಿ ಮರೆಯದೆ ಐದು ರೂಪಾತ್ಮಕನ ಇಪ್ಪತ್ತೈದು ರೂಪಗಳ

ಅನುದಿನದಿ ನೆನೆವರಿಗೆ ಜನ್ಮಗಳ ಐದಿಸನು ನಳಿನಾಕ್ಷ

ರಣದೊಳು ಮೈದುನನ ಕಾಯ್ದಂತೆ ಸಲಹುವ

ಬೈದವಗೆ ಗತಿಯಿತ್ತ ಭಯಹರ ಭಕ್ತವತ್ಸಲನು//7//


ಪಂಚನಾರೀ ತುರಗದಂದದಿ ಪಂಚರೂಪಾತ್ಮಕನು ತಾ ಷಟ್ಪoಚ ರೂಪವ ಧರಿಸಿ

ತತ್ತನ್ನಾಮದಿಂ ಕರೆಸಿ

ಪಂಚ ಪಾವಕ ಮುಖದಿ ಗುಣಮಯ ಪಂಚಭೂತಾತ್ಮಕ ಶರೀರವ

ಪಂಚ ವಿಧ ಜೀವರಿಗೆ ಕೊಟ್ಟು ಅಲ್ಲಲ್ಲೆ ರಮಿಸುವನು//8//


ವಿಧಿ ಭವಾದಿ ಸಮಸ್ತ ಜೀವರ ಹೃದಯದೊಳಗೆ ಏಕಾತ್ಮನೆನಿಸುವ ಪದುಮನಾಭನು

ಅಚ್ಯುತಾನಂತಾದಿರೂಪದಲಿ

ಅಧಿಸುಭೂತಾಧ್ಯಾತ್ಮವ ಅಧಿದೈವದೊಳು ಕರೆಸುವ

ಪ್ರಾಣನಾಗಾಭಿದನು ದಶರೂಪದಲಿ ದಶವಿಧ ಪ್ರಾಣರೊಳಗಿದ್ದು//9//


ಈರೈದು ಸಾವಿರದ ಇಪ್ಪತ್ತು ಆರಧಿಕ ಮುನ್ನೂರು ರೂಪಗಳ

ಈರೆರೆಡು ಸ್ಥಾನದಲಿ ಚಿಂತಿಪುದು ಅನುದಿನದಿ ಬುಧರು

ನೂರಿಪ್ಪತ್ತೇಳು ಅಧಿಕ ಮೂರಾರುಸಾವಿರ ರೂಪದಿಂ

ದಶ ಮಾರುತರೊಳಿದ್ದು ಅವರವರ ಪೆಸರಿಂದ ಕರೆಸುವನು//10//


ಚಿತ್ತೈಸುವುದು ಎಂಟಧಿಕ ಇಪ್ಪತ್ತು ಸಾವಿರ ನಾಲ್ಕು ಶತದ ಇಪ್ಪತ್ತಮೂರು ಸುಮೂರ್ತಿಗಳು

ಅಹವಲ್ಲೇ ಪರಿಯಂತ

ಹತ್ತು ನಾಲ್ಕು ರೂಪಗಳ ನೆರೆಬಿತ್ತವರೀಪರಿ ತಿಳಿದು

ಪುರುಷೋತ್ತಮನ ಸರ್ವತ್ರ ಪೂಜೆಯ ಮಾಡು ಕೊಂಡಾಡು//11//


ಈರೆರೆಡು ಶತದ್ವಿಷ್ಟ ಅಧಿಕ ಹದಿನಾರು ಸಾವಿರ ರೂಪ ಸರ್ವ ಶರೀರದೊಳು

ಶಬ್ಧಾದಿಗಳ ಅಧಿಷ್ಠಾನದೊಳಗೆ ಇಪ್ಪ

ಮಾರುತನು ನಾಗಾದಿ ರೂಪದಿ

ಮೂರನೇ ಗುಣಮಾನಿ ಶ್ರೀ ದುರ್ಗಾರಮಣ ವಿದ್ಯಾಕುಮೋಹವ ಕೊಡುವ ಕರಣಕ್ಕೆ//12//


ಐದವಿದ್ಯೆಗಳೊಳಗೆ ಇಹ ನಾಗಾದಿಗಳ ಅಧಿಷ್ಠಾನದಲಿ ಲಕ್ಷ್ಮೀಧವನು

ಕೃದ್ಧೋಲ್ಕ ಮೊದಲಾದ ಐದು ರೂಪಗಳ ತಾ ಧರಿಸಿ

ಸಜ್ಜನರ ಅವಿದ್ಯವ ಛೇದಿಸುವ ತಾಮಸರಿಗೆ ಅಜ್ಞಾನಾದಿಗಳ ಕೊಟ್ಟು

ಅವರವರ ಸಾಧನವ ಮಾಡಿಸುವ//13//


ಗೋವುಗಳೊಳು ಉದ್ಗೀಥನಿಹ ಪ್ರಸ್ಥಾವ ಹಿಂಕಾರ ಎರಡೂ ರೂಪದಿ ಅವ್ಯಾಜಗಳೊಳಿಹನು

ಪ್ರತಿಹಾರಾಹ್ವ ಹಯಗಳೊಳು

ಜೀವನಪ್ರದ ನಿಧನ ಮನುಜರೊಳು ಈ ವಿಧದೊಳಿಹ ಪಂಚ ಸಾಮವ

ಝಾವ ಝಾವಕೆ ನೆನೆವರಿಗೆ ಐದಿಸನು ಜನ್ಮಗಳ//14//


ಯುಗ ಚತುಷ್ಟಯಗಳಲಿ ತಾನಿದ್ದು ಯುಗ ಪ್ರವರ್ತಕ ಧರ್ಮ ಕರ್ಮಗಳಿಗೆ ಪ್ರವರ್ತಕ

ವಾಸುದೇವಾದಿ ಈರೆರೆಡು ರೂಪ ತೆಗೆದುಕೊಂಡು

ಯುಗಾದಿ ಕೃತು ತಾ ಯುಗ ಪ್ರವರ್ತಕಯೆನಿಸಿ

ಧರ್ಮ ಪ್ರಘಟಕನು ತಾನಾಗಿ ಭಕುತರಿಗೀವ ಸಂಪದವ//15//


ತಲೆಯೊಳಿಹ ನಾರಾಯಣನು ಗಂಟಲಡಿ ಒಡಲೊಳು ವಾಸುದೇವನು

ಬಲದಲಿಹ ಪ್ರದ್ಯುಮ್ನ ಎಡ ಭಾಗದಲಿ ಅನಿರುದ್ಧ

ಕೆಳಗಿನ ಅಂಗದಿ ಸಂಕರುಷಣನ ತಿಳಿದು

ಈ ಪರಿ ಸಕಲ ದೇಹಗಳೊಳಗೆ ಪಂಚಾತ್ಮಕನ ರೂಪವ ನೋಡು ಕೊಂಡಾಡು//16//


ತನು ವಿಶಿಷ್ಟದಿ ಇಪ್ಪ ನಾರಾಯಣನು ಕಟಿ ಪಾದ ಅಂತ ಸಂಕರುಷಣನು

ಶಿರ ಜಘನ ಅಂತವಾಗಿಹ ವಾಸುದೇವಾಖ್ಯ

ಅನಿಮಿಷ ಈಷ ಅನಿರುದ್ಧ ಪ್ರದ್ಯುಮ್ನನ್ನು ಎಡದಿ ಬಲ ಭಾಗದಿ

ಚಿಂತನೆಯ ಮಾಳ್ಪರಿಗೆ ಉಂಟೆ ಮೈಲಿಗೆ ವಿಧಿ ನಿಷೇಧಗಳು//17//


ಪದುಮನಾಭನು ಪಾಣಿಯೊಳಗಿಹ ವದನದಲಿ ಹೃಷಿಕೇಶ

ನಾಸಿಕ ಸದನದಲಿ ಶ್ರೀಧರನು ಜಿಹ್ವೆಯೊಳು ಇಪ್ಪ ವಾಮನನು

ವಿದಿತ ನೇತ್ರದಿ ತ್ರಿವಿಕ್ರಮನು ತ್ವಕ್ದೇಶದೊಳಗಿಹ

ಕರ್ಣದಲಿ ಇಪ್ಪನು ವಿಷ್ಣುನಾಮಕ ಶ್ರವಣನೆಂದೆನಿಸಿ//18//


ಮನದೊಳಿಹ ಗೋವಿಂದ ಮಾಧವ ಧನಪ ಸಖ ತತ್ವದೊಳು

ನಾರಾಯಣ ಮಹತ್ತತ್ವದೊಳು ಅವ್ಯಕ್ತದೊಳು ಕೇಶವನು

ಇನಿತು ರೂಪವ ದೇಹದೊಳು ಚಿಂತನೆಯ ಗೈವ ಮಹಾತ್ಮರು

ಇಳೆಯೊಳು ಮನುಜರು ಅವರಲ್ಲ ಅಮರರೇ ಸರಿ ಹರಿಕೃಪಾಬಲದಿ//19//


ನೆಲದೊಳು ಇಪ್ಪನು ಕೃಷ್ಣ ರೂಪದಿ ಜಲದೊಳು ಇಪ್ಪನು ಹರಿಯೆನಿಸಿ

ಶಿಖಿಯೊಳಗೆ ಇಪ್ಪನು ಪರಶುರಾಮ ಉಪೆನ್ದ್ರನು ಎಂದೆನಿಸಿ ಎಲ್ಲರೊಳು ಇಪ್ಪನು ಜನಾರ್ಧನನು

ಬಾಂದಲದೊಳು ಅಚ್ಯುತ ಗಂಧ ನರಹರಿ

ಪೊಳೆವ ಅಧೋಕ್ಷಜ ರಸಗಳೊಳು ರಸರೂಪ ತಾನಾಗಿ//20//


ರೂಪ ಪುರುಷೋತ್ತಮನು ಸ್ಪರ್ಶ ಪ್ರಾಪಕನು ಅನಿರುದ್ಧ

ಶಬ್ಧದಿ ವ್ಯಾಪಿಸಿಹ ಪ್ರದ್ಯುಮ್ನ ಉಪಸ್ಥದಿ ವಾಸುದೇವನಿಹ

ತಾ ಪೊಳೆವ ಪಾಯುಸ್ಥನಾಗಿ ಜಯಾಪತಿಯು ಸಂಕರುಷಣನು

ಸುಸ್ಥಾಪಕನೆನಿಸಿ ಪಾದದೊಳು ದಾಮೋದರನು ಪೊಳೆವ//21//


ಚತುರ ವಿಂಶತಿ ತತ್ತ್ವದೊಳು ಶ್ರೀಪತಿಯೆ ಅನಿರುದ್ಧಾದಿ ರೂಪದಿ

ವಿದಿತನಾಗಿದ್ದು ಅಖಿಲ ಜೀವರ ಸಂಹನನದೊಳಗೆ

ಪ್ರತತಿಯಂದದಿ ಸುತ್ತು ಸುತ್ತುತ ಪಿತೃಗಳಿಗೆ ತರ್ಪಕನೆನಿಸಿಕೊಂಡು

ಅತುಳ ಮಹಿಮನು ಷಣ್ಣವತಿ ನಾಮದಲಿ ನೆಲೆಸಿಹನು//22//


ಚತುರ ವಿಂಶತಿ ತತ್ತ್ವದೊಳು ತತ್ಪತಿಗಳೆನಿಸುವ ಬ್ರಹ್ಮ ಮುಖ ದೇವತೆಗಳೊಳು

ಹನ್ನೊಂದು ನೂರೈವತ್ತೆರಡು ರೂಪ

ವಿತತನಾಗಿದ್ದೆಲ್ಲ ಜೀವರ ಜತನ ಮಾಡುವ ಗೋಸುಗ

ಜಗತ್ಪತಿಗೆ ಏನಾದರೂ ಪ್ರಯೋಜನವಿಲ್ಲವಿದರಿಂದ//23//


ಇಂದಿರಾಧವ ಶಕ್ತಿ ಮೊದಲಾದ ಒಂದಧಿಕದಶ ರೂಪದಿಂದಲಿ

ಪೊಂದಿಹನು ಸಕಲ ಇಂದ್ರಿಯಗಳಲ್ಲಿ ಪುರುಷನಾಮಕನು

ಸುಂದರಪ್ರದ ಪೂರ್ಣಜ್ಞಾನಾನಂದಮಯ

ಚಿತ್ದೇಹದೊಳು ತಾನೊಂದರೆಕ್ಷಣ ವಗಲದಲೆ ಪರಮಾಪ್ತನು ಆಗಿಪ್ಪ//24//


ಆರಧಿಕ ದಶ ರೂಪದಿಂದಲಿ ತೋರುತ ಇಪ್ಪನು ವಿಶ್ವ

ಲಿಂಗಶರೀರದೊಳು ತೈಜಸನು ಪ್ರಾಜ್ಞನು ತುರ್ಯನಾಮಕನು

ಮೂರೈದು ರೂಪಗಳ ಧರಿಸುತಲಿ ಈರೈದು ಕರಣದೊಳು ಮಾತ್ರದಿ

ಖೈರ ಶಿಖಿ ಜಲ ಭೂಮಿಯೊಳಗಿಹನು ಆತ್ಮನಾಮದಲಿ//25//


ಮನದೊಳು ಅಹಂಕಾರದೊಳು ಚಿಂತನೆಯ ಮಾಳ್ಪುದು ಅಂತರಾತ್ಮನ

ಘನ ಸುತತ್ತ್ವದಿ ಪರಮನ ಅವ್ಯಕ್ತದಲಿ ಜ್ಞಾನಾತ್ಮ

ಇನಿತು ಪಂಚಾಶಯ್ವರಣ ವೇದ್ಯನ ಅಜಾದ್ಯೈವತ್ತು ಮೂರ್ತಿಗಳನು

ಸದಾ ಸರ್ವತ್ರ ದೇಹಗಳಲ್ಲಿ ಪೂಜಿಪುದು//26//


ಚತುರ ವಿಂಶತಿ ತತ್ತ್ವದೊಳು ತತ್ಪತಿಗಳೆನಿಸುವ ಬ್ರಹ್ಮ ಮುಖ ದೇವತೆಗಳೊಳು

ಹದಿಮೂರು ಸಾವಿರದ ಎಂಟು ನೂರಧಿಕ ಚತುರ ವಿಂಶತಿ ರೂಪದಿಂದಲಿ

ವಿತತನಾಗಿದ್ದು ಎಲ್ಲರೊಳು

ಪ್ರಾಕೃತ ಪುರುಷನಂದದಲಿ ಪಂಚಾತ್ಮಕನು ರಮಿಸುವನು//27//


ಕೇಶವಾದಿ ಸುಮೂರ್ತಿ ದ್ವಾದಶ ಮಾಸ ಪುಂಡ್ರಗಳಲ್ಲಿ

ವೇದವ್ಯಾಸ ಅನಿರುದ್ಧಾದಿ ರೂಪಗಳು ಆರು ಋತುಗಳಲಿ

ವಾಸವಾಗಿಹನೆಂದು ತ್ರಿಂಶತಿ ವಾಸರದಿ ಸತ್ಕರ್ಮ ಧರ್ಮ ನಿರಾಶೆಯಿಂದಲಿ ಮಾಡು

ಕರುಣವ ಬೇಡು ಕೊಂಡಾಡು//28//


ಲೋಷ್ಠ ಕಾಂಚನ ಲೋಹ ಶೈಲಜ ಕಾಷ್ಠ ಮೊದಲಾದ ಅಖಿಳ ಜಡ

ಪರಮೇಷ್ಠಿ ಮೊದಲಾದ ಅಖಿಳ ಚೇತನರೊಳಗೆ ಅನುದಿನವು

ಚೇಷ್ಟೆಗಳ ಮಾಡಿಸುತ ತಿಳಿಸದೆ ಪ್ರೇಷ್ಟನಾಗಿದ್ದು ಎಲ್ಲರಿಗೆ

ಸರ್ವೇಷ್ಟ ಆದಾಯಕ ಸಂತೈಸುವನು ಸರ್ವ ಜೀವರನು//29//


ವಾಸುದೇವಾನಿರುದ್ಧ ರೂಪದಿ ಪುಂ ಶರೀರದೊಳಿಹನು ಸರ್ವದ

ಸ್ತ್ರೀ ಶರೀರದೊಳಿಹನು ಸಂಕರುಷಣನು ಪ್ರದ್ಯುಮ್ನ

ದ್ವಾಸುಪರ್ಣ ಶ್ರುತಿ ವಿನುತ ಸರ್ವಸುನಿಲ ನಾರಾಯಣನ

ಸದುಪಾಸನೆಯ ಗೈವರರು ಜೀವನ್ಮುಕ್ತರು ಎನಿಸುವರು//30//


ತನ್ನನಂತ ಅನಂತ ರೂಪ ಹಿರಣ್ಯ ಗರ್ಭಾದಿಗಳೊಳಗೆ

ಕಾರುಣ್ಯ ಸಾಗರ ಹರಹಿ ಅವರವರ ಅಖಿಳ ವ್ಯಾಪಾರ

ಬನ್ನಬಡದಲೆ ಮಾಡಿ ಮಾಡಿಸಿ ಧನ್ಯರೆನಿಸಿ

ಸಮಸ್ತ ದಿವಿಜರ ಪುಣ್ಯಕರ್ಮವ ಸ್ವೀಕರಿಸಿ ಸುಖವಿತ್ತು ಪಾಲಿಸುವ//31//


ಸಾಗರದೊಳಿಹ ನದಿಯ ಜಲ ಭೇದ ಆಗಸದೊಳು ಇಪ್ಪ ಅಬ್ದ ಬಲ್ಲವು

ಕಾಗೆ ಗುಬ್ಬಿಗಳು ಅರಿಯ ಬಲ್ಲವೇ ನದಿಯ ಜಲಸ್ಥಿತಿಯ

ಭೋಗಿವರ ಪರಿಯಂಕ ಶಯನನೊಳು ಈ ಗುಣತ್ರಯ ಬದ್ಧ ಜಗವಿಹುದು

ಆಗಮಜ್ಞರು ತಿಳಿವರು ಅಜ್ಞಾನಿಗಳಿಗೆ ಅಳವಡದು//32//


ಕರಣ ಗುಣ ಭೂತಗಳೊಳಗೆ ತದ್ವರನೆನಿಪ ಬ್ರಹ್ಮಾದಿ ದಿವಿಜರೊಳರಿತು

ರೂಪ ಚತುಷ್ಟಯಗಳ ಅನುದಿನದಿ ಸರ್ವತ್ರ ಸ್ಮರಿಸುತ ಅನುಮೋದಿಸುತ ಹಿಗ್ಗುತ

ಪರವಶದಿ ಪಾಡುವರಿಗೆ ತನ್ನಿರವ ತೋರಿಸಿ

ಭವವಿಮುಕ್ತರ ಮಾಡಿ ಪೋಷಿಸುವ//33//


ಮೂಲರೂಪನು ಮನದೊಳಿಹ ಶ್ರವಣ ಆಲಿಯೊಳಗಿಹ ಮತ್ಸ್ಯ

ಕೂರ್ಮನು ಕೋಲರೂಪನು ತ್ವಕ್ರಸನದೊಳಗೆ ಇಪ್ಪ ನರಸಿಂಹ

ಬಾಲವಟು ವಾಮನನು ನಾಸಿಕ ನಾಳದೊಳು ವದನದಲಿ ಭಾರ್ಗವ

ವಾಲಿಭಂಜನ ಹಸ್ತದೊಳು ಪಾದ ಶ್ರೀ ಕೃಷ್ಣ//34//


ಜಿನ ವಿಮೋಹಕ ಬುದ್ಧ ಪಾಯುಗ ದನುಜ ಭಂಜನ ಕಲ್ಕಿ ಮೇಡ್ರದಿ

ಇನಿತು ದಶ ರೂಪಗಳ ದಶ ಕರಣಂಗಳಲಿ ತಿಳಿದು

ಅನುಭವಿಪ ವಿಷಯಂಗಳು ಕೃಷ್ಣಾರ್ಪಣವೆನಲು ಕೈಕೊಂಬ

ವೃಜಿನ ಅರ್ದನ ವರ ಜಗನ್ನಾಥ ವಿಠಲ ವಿಶ್ವ ವ್ಯಾಪಕನು//35//


//ಇತಿ ಶ್ರೀ ಪಂಚಮಹಾಯಜ್ಞ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು

Thursday, January 3, 2013

ಶ್ರೀ ಹರಿಕಥಾಮೃತಸಾರ - 5

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ವಿಭೂತಿ ಸಂಧಿ//

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಶ್ರೀ ತರುಣಿ ವಲ್ಲಭನ ಪರಮ ವಿಭೂತಿ ರೂಪ ಕಂಡ ಕಂಡಲ್ಲಿ

ಈ ತೆರದಿ ಚಿಂತಿಸುತ ನೋಡು ಸಂಭ್ರಮದಿ

ನೀತ ಸಾಧಾರಣ ವಿಶೇಷ ಸಜಾತಿ ನೈಜ ಅಹಿತವು ವಿಜಾತಿ ಖಂಡಾಖಂಡ

ಬಗೆಗಳನು ಅರಿತು ಬುಧರಿಂದ//1//


ಜಲಧರಾಗಸದೊಳಗೆ ಚರಿಸುವ ಹಲವು ಜೀವರ ನಿರ್ಮಿಸಿಹನು

ಅದರೊಳು ಸಜಾತಿ ವಿಜಾತಿ ಸಧಾರಣ ವಿಶೇಷಗಳ ತಿಳಿದು

ತತ್ತತ್ ಸ್ಥಾನದಲಿ ವೆಗ್ಗಳಿಸಿ

ಹಬ್ಬಿದ ಮನದಿ ಪೂಜಿಸುತಲಿ ಅವನ ವ್ಯಾಪ್ತ ರೂಪಗಳ ನೋಡುತಲಿ ಹಿಗ್ಗುವುದು//2//


ಪ್ರತಿಮೆ ಶಾಲಗ್ರಾಮ ಗೋ ಅಭ್ಯಾಗತನು ಅತಿಥಿ ಶ್ರೀತುಳಸಿ ಪಿಪ್ಪಲ ಯತಿವನಸ್ಥ

ಗೃಹಸ್ಥ ವಟು ಯಜಮಾನ ಸ್ವಪರ ಜನ

ಪೃಥಿವಿ ಜಲ ಶಿಖಿ ಪವನ ತಾರಾಪಥ ನವಗ್ರಹ ಓಗ ಕರಣ ಭತಿಥಿ

ಸಿತ ಅಸಿತ ಪಕ್ಷ ಸಂಕ್ರಮಣ ಅವನ ಅಧಿಷ್ಠಾನ//3//


ಕಾದ ಕಾಂಚನದೊಳಗೆ ಶೋಭಿಪ ಆದಿತೇಯಾಸ್ಯನ ತೆರದಿ

ಲಕ್ಷ್ಮೀ ಧವನು ಪ್ರತಿದಿನದಿ ಶಾಲಗ್ರಾಮದೊಳಗೆ ಇಪ್ಪ

ಐದು ಸಾವಿರ ಮೇಲೆ ಮೂವತ್ತು ಐದಧಿಕ ಐನೂರು ರೂಪದಿ

ಭೂಧರಗಳಾಭಿಮಾನಿ ದಿವಿಜರೊಳು ಇಪ್ಪನು ಅನವರತ//4//


ಶ್ರೀರಮಣ ಪ್ರತಿಮೆಗಳೊಳಗೆ ಹದಿಮೂರಧಿಕವಾಗಿಪ್ಪ ಮೇಲೆ

ಐನೂರು ರೂಪವ ಧರಿಸಿ ಇಪ್ಪನು ಆಹಿತ ಅಚಲದಿ

ದಾರುಮಥನವ ಗೈಯೈ ಪಾವಕ ತೋರುವಂತೆ

ಪ್ರತೀಕ ಸುರರೊಳು ತೋರುತಿಪ್ಪನು ತತ್ತದಾ ಕಾಲದಲಿ ನೋಳ್ಪರಿಗೆ//5//


ಕರಣ ನಿಯಾಮಕನು ತಾನು ಉಪಕರಣದೊಳಗೆ ಐವತ್ತೆರಡು ಸಾವಿರದ

ಹದಿನಾಲ್ಕು ಅಧಿಕ ಶತ ರೂಪಗಳನು ಧರಿಸಿ

ಇರುತಿಹನು ತದ್ರೂಪ ನಾಮಗಳ ಅರಿತು ಪೂಜಿಸುತಿಹರ ಪೂಜೆಯ ನಿರುತ ಕೈಕೊಂಬ

ತೃಷಾರ್ತನು ಜಲವ ಕೊಂಬಂತೆ//6//


ಬಿಂಬರೂಪನು ಈ ತೆರದಿ ಜಡಪೊಂಬಸಿರ ಮೊದಲಾದ ಸುರರೊಳಗೆ ಇಂಬುಗೊಂಡಿಹನೆಂದು

ಅರಿದು ಧರ್ಮಾರ್ಥ ಕಾಮಗಳ ಹಂಬಲಿಸದೆ ಅನುದಿನದಿ

ವಿಶ್ವಕುಟುಂಬಿ ಕೊಟ್ಟ ಕಣ ಅನ್ನಕುತ್ಸಿತ ಕಂಬಳಿಯೇ

ಸೌಭಾಗ್ಯವೆಂದು ಅವನ ಅಂಘ್ರಿಗಳ ಭಜಿಸು//7//


ವಾರಿಯೊಳಗಿಪ್ಪತ್ತು ನಾಲ್ಕು ಮೂರೆರೆಡು ಸಾವಿರದ ಮೇಲೆ ಮುನ್ನೂರು ಹದಿನೇಳು ಎನಿಪ

ರೂಪವು ಶ್ರೀತುಳಸಿದಳದಿ

ನೂರು ಅರವತ್ತೊಂದು ಪುಷ್ಪದಿ ಮೂರಧಿಕ ದಶ ದೀಪದೊಳು

ನಾನೂರು ಮೂರು ಸುಮೂರ್ತಿಗಳು ಗಂಧದೊಳಗೆ ಇರುತಿಹವು//8//


ಅಷ್ಟದಳ ಸದ್ಹೃದಯ ಕಮಲ ಅಧಿಷ್ಠಿತನು ತಾನಾಗಿ ಸರ್ವ ಉತ್ಕ್ರುಷ್ಟಮಹಿಮನು

ದಳಗಳಲಿ ಸಂಚರಿಸುತ ಒಳಗಿದ್ದು

ದುಷ್ಟರಿಗೆ ದುರ್ಬುದ್ಧಿ ಕರ್ಮ ವಿಶಿಷ್ಟರಿಗೆ ಸುಜ್ಞಾನ ಧರ್ಮ

ಸುಪುಷ್ಟಿಗೈಸುತ ಸಂತೈಪ ನಿರ್ದುಷ್ಟ ಸುಖಪೂರ್ಣ//9//


ವಿತ್ತದೇಹಾಗಾರ ದಾರಾಪತ್ಯ ಮಿತ್ರಾದಿಗಳೊಳಗೆ

ಗುಣಚಿತ್ತಬುದ್ಧಿ ಆದಿ ಇಂದ್ರಿಯಗಳೊಳು ಜ್ಞಾನ ಕರ್ಮದೊಳು

ತತ್ತದಾಹ್ವಯನಾಗಿ ಕರೆಸುತ ಸಂಕಲ್ಪ ಅನುಸಾರದಿ

ನಿತ್ಯದಲಿ ತಾ ಮಾಡಿ ಮಾಡಿಪನು ಎಂದು ಸ್ಮರಿಸುತಿರು//10//


ಭಾವದ್ರವ್ಯಕ್ರಿಯೆಗಳು ಎನಿಸುವ ಈ ವಿಧ ಅದ್ವೈತ ತ್ರಯಂಗಳ

ಭಾವಿಸುತ ಸದ್ಭಕ್ತಿಯಲಿ ಸರ್ವತ್ರ ಮರೆಯದಲೆ

ತಾವಕನು ತಾನೆಂದು ಪ್ರತಿದಿನ ಸೇವಿಸುವ ಭಕ್ತರಿಗೆ

ತನ್ನನೀವ ಕಾವ ಕೃಪಾಳು ಕರಿವರಗೊಲಿದ ತೆರದಂತೆ//11//


ಬಾಂದಳವೆ ಮೊದಲಾದುದರೊಳು ಒಂದೊಂದರಲಿ ಪೂಜಾ ಸುಸಾಧನವೆಂದೆನಿಸುವ

ಪದಾರ್ಥಗಳು ಬಗೆಬಗೆಯ ನೂತನದಿ ಸಂದಣಿಸಿ ಕೊಂಡಿಹವು

ಧ್ಯಾನಕೆ ತಂದಿನಿತು ಚಿಂತಿಸಿ ಸದಾ ಗೋವಿಂದನ ಅರ್ಚಿಸಿ

ನೋಡು ನಲಿನಲಿದಾಡು ಕೊಂಡಾಡು//12//


ಜಲಜನಾಭನ ಮೂರ್ತಿ ಮನದಲಿ ನೆಲೆಗೊಳಿಸಿ ನಿಶ್ಚಲ ಭಕುತಿಯಲಿ

ಚಳಿ ಬಿಸಿಲು ಮಳೆ ಗಾಳಿಗಳ ನಿಂದಿಸದೆ ನಿತ್ಯದಲಿ

ನೆಲೆದೊಳಿಹ ಗಂಧವೇ ಸುಗಂಧವು ಜಲವೆ ರಸ ರೂಪವೆ ಸುದೀಪವು

ಎಲರು ಚಾಮರ ಶಭ್ಧ ವಾದ್ಯಗಳು ಅರ್ಪಿಸಲು ಒಲಿವ//13//


ಗೋಳಕಗಳು ರಮಾ ರಮಣನ ನಿಜ ಆಲಯಗಳು

ಅನುದಿನದಿ ಸಂಪ್ರಕ್ಷಾಲನೆಯೆ ಸಮ್ಮಾರ್ಜನವು ಕರುಣಗಳೆ ದೀಪಗಳು

ಸಾಲು ತತ್ತತ್ ವಿಷಯಗಳ ಸಮ್ಮೇಳನವೇ ಪರಿಯಂಕ

ತತ್ಸುಖದ ಏಳಿಗೆಯೆ ಸುಪ್ಪತ್ತಿಗೆ ಆತ್ಮನಿವೇದನೆ ವಸನ//14//


ಪಾಪಕರ್ಮವು ಪಾದುಕೆಗಳ ಅನುಲೇಪನವು ಸತ್ಪುಣ್ಯ ಶಾಸ್ತ್ರ ಆಲಾಪನವೆ ಶ್ರೀತುಳಸಿ

ಸುಮನೋವೃತ್ತಿಗಳೆ ಸುಮನ

ಕೋಪಧೂಪವು ಭಕ್ತಿ ಭೂಷಣ

ವ್ಯಾಪಿಸಿದ ಸದ್ಬುದ್ಧಿ ಛತ್ರವು ದೀಪವೇ ಸುಜ್ಞಾನ ಆರಾರ್ತಿಗಳೆ ಗುಣಕಥನ//15//


ಮನ ವಚನ ಕಾಯಿಕ ಪ್ರದಕ್ಷಿಣೆ ಅನುದಿನದಿ ಸರ್ವತ್ರ ವ್ಯಾಪಕ ವನರುಹೇಕ್ಷಣಗೆ

ಅರ್ಪಿಸುತ ಮೋದಿಸುತಲಿರು ಸತತ

ಅನುಭವಕೆ ತಂದುಕೋ ಸಕಲ ಸಾಧನಗಳೊಳಗೆ ಇದೆ ಮುಖ್ಯ

ಪಾಮರ ಮನುಜರಿಗೆ ಪೇಳಿದರೆ ತಿಳಿಯದು ಬುಧರಿಗೆ ಅಲ್ಲದಲೆ//16//


ಚತುರ ವಿಧ ಪುರುಷಾರ್ಥ ಪಡೆವರೆ ಚತುರದಶಲೋಕಗಳ ಮಧ್ಯದೊಳು

ಇತರ ಉಪಾಯಗಳು ನೋಡಲು ಸಕಲ ಶಾಸ್ತ್ರದಲಿ

ಸತತ ವಿಷಯ ಇಂದ್ರಿಯಗಳಲಿ ಪ್ರವಿತತನೆನಿಸಿ ರಾಜಿಸುವ ಲಕ್ಷ್ಮೀಪತಿಗೆ

ಸರ್ವ ಸಮರ್ಪಣೆಯೇ ಮಹಾಪೂಜೆ ಸದುಪಾಯ//17//


ಗೋಳಕವೇ ಕುಂಡ ಅಗ್ನಿ ಕರಣವು ಮೇಲೊದಗಿ ಬಹುವಿಷಯ ಸಮಿಧೆಯು

ಗಾಳಿ ಯತ್ನವು ಕಾಮ ಧೂಪವು ಸನ್ನಿಧಾನ ಅರ್ಚಿ

ಮೇಳನವೇ ಪ್ರಜ್ವಾಲೆ ಕಿಡಿಗಳು ತೂಳಿದ ಆನಂದಗಳು

ತತ್ತತ್ಕಾಲ ಮಾತುಗಳು ಎಲ್ಲ ಮಂತ್ರ ಅಧ್ಯಾತ್ಮ ಯಜ್ಞವಿದು//18//


ಮಧು ವಿರೋಧಿಯ ಪಟ್ಟಣಕೆ ಪೂರ್ವದ ಕವಾಟಗಳು ಅಕ್ಷಿನಾಸಿಕವದನ

ಶ್ರೋತೃಗಳು ಎರಡು ದಕ್ಷಿಣ ಉತ್ತರದ್ವಾರ

ಗುದೋಪಸ್ಥಗಳು ಎರಡು ಪಶ್ಚಿಮ ಕದಗಳು ಎನಿಪವು

ಷಟ್ ಸರೋಜವೆ ಸದನ ಹೃದಯವೇ ಮಂಟಪ ತ್ರಿಗುಣoಗಳೆ ಕಲಶ//19//


ಧಾತುಗಳೇ ಸಪ್ತ ಆವರಣ ಉಪವೀಧಿಗಳೇ ನಾಡಿಗಳು ಮದಗಳು ಯೂಥಪಗಳು

ಸುಷುಮ್ನನಾಡಿಯೇ ರಾಜಪಂಥಾನ

ಈ ತನೂರುಹಗಳೇ ವನಂಗಳು ಮಾತರಿಶ್ವನು ಪಂಚರೂಪದಿ

ಪಾತಕಿಗಳೆಂಬ ಅರಿಗಳನು ಸಂಹರಿಪ ತಳವಾರ//20//


ಇನ ಶಶಾಂಕಾದಿಗಳು ಲಕ್ಷ್ಮೀವನಿತೆ ಅರಸನ ದ್ವಾರ ಪಾಲಕರೆನಿಸುತ ಇಪ್ಪರು

ಮನದ ವೃತ್ತಿಗಳೇ ಪದಾತಿಗಳು

ಅನುಭವಿಪ ವಿಷಯoಗಳೇ ಪಟ್ಟಣಕೆ ಬಪ್ಪ ಪಸಾರಗಳು

ಜೀವನೇ ಸುವರ್ತಕ ಕಷ್ಟಗಳ ಕೈಕೊಂಬ ಹರಿ ತಾನು//21//


ಉರುಪರಾಕ್ರಮನ ಅರಮನಿಗೆ ದಶಕರಣಗಳೆ ಕನ್ನಡಿಯ ಸಾಲುಗಳು

ಅರವಿದೂರನ ಸದ್ವಿಹಾರಕೆ ಚಿತ್ತ ಮಂಟಪವು

ಮರಳಿ ಬೀಸುವ ಶ್ವಾಸಗಳು ಚಾಮರ ವಿಲಾಸಿನಿ ಬುದ್ಧಿ

ದಾಮೋದರಗೆ ಸಾಷ್ಟಾಂಗ ಪ್ರಣಾಮಗಳೇ ಸುಶಯನಗಳು//22//


ಮಾರಮಣನ ಅರಮನೆಗೆ ಸುಮಹಾ ದ್ವಾರವೆನಿಸುವ ವದನಕೆ

ಒಪ್ಪುವ ತೋರಣ ಸ್ಮಶ್ರುಗಳು ಕೇಶಗಳೇ ಪತಾಕೆಗಳು

ಊರಿ ನಡೆವ ಅಂಘ್ರಿಗಳು ಜಂಘೆಗಳು ಊರು ಮಧ್ಯ ಉದರ ಶಿರಗಳು

ಆಗಾರದ ಉಪ್ಪರಿಗೆಗಳು ಕೋಶಗಳು ಐದು ಕೋಣೆಗಳು//23//


ಈ ಶರೀರವೇ ರಥ ಪಟಾಕ ಸುವಾಸಗಳು ಪುಂಡ್ರಗಳು ಧ್ವಜ

ಸಿಂಹಾಸನವು ಚಿತ್ತವು ಸುಬುದ್ಧಿಯು ಕಲಶ ಸನ್ಮನವು ಪಾಶ

ಗುಣ ದಂಡತ್ರಯಗಳು ಶುಭಾಶುಭದ್ವಯ ಕರ್ಮ ಚಕ್ರ

ಮಹಾಸಮರ್ಥ ಅಶ್ವಗಳು ದಶಕರಣoಗಳು ಎನಿಸುವುವು//24//


ಮಾತರಿಶ್ವನು ದೇಹರಥದೊಳು ಸೂತನಾಗಿಹ ಸರ್ವಕಾಲದಿ

ಶ್ರೀತರುಣಿ ವಲ್ಲಭ ರಥಿಕನು ಎಂದರಿದು ನಿತ್ಯದಲಿ

ಪ್ರೀತಿಯಿಂದಲಿ ಪೋಷಿಸುತ ವಾತಾತಪ ಆದಿಗಳಿಂದ ಅವಿರತ

ಈ ತನುವಿನೊಳು ಮಮತೆ ಬಿಟ್ಟವನೇ ಮಹಾಯೋಗಿ//25//


ಭವವೆನಿಪ ವನಧಿಯೊಳು ಕರ್ಮ ಪ್ರವಹದೊಳು ಸಂಚರಿಸುತಿಹ

ದೇಹವೆ ಸುನಾವೆಯ ಮಾಡಿ ತನ್ನವರಿಂದ ಒಡಗೂಡಿ

ದಿವಸ ದಿವಸಗಳಲ್ಲಿ ಲಕ್ಷ್ಮೀಧವನು ಕ್ರೀಡಿಪನು ಎಂದು ಚಿಂತಿಸೆ

ಪವನನಯ್ಯ ಭವಾಬ್ಧಿ ದಾಟಿಸಿ ಪರಮಸುಖವ ಈವ//26//


ಆಪಣಾಲಯಗಳ ಪದಾರ್ಥವು ಸ್ತ್ರೀಪುರುಷರ ಇಂದ್ರಿಯಗಳಲಿ

ದೀಪ ಪಾವಕರೊಳಗೆ ಇದುವ ತೈಲಾದಿ ದ್ರವ್ಯಗಳ

ಆ ಪರಮಗೆ ಅವದಾನವು ಎಂದು ಪದೇಪದೇ ಮರೆಯದಲೆ ಸ್ಮರಿಸುತ

ಭೂಪನಂದದಿ ಸಂಚರಿಸು ನಿರ್ಭಯದಿ ಸರ್ವತ್ರ//27//


ವಾರಿಜ ಭವಾಂಡವೆ ಸುಮಂಟಪ ಮೇರುಗಿರಿ ಸಿಂಹಾಸನವು ಭಾಗೀರಥಿಯೇ ಮಜ್ಜನವು

ದಿಕ್ವಸ್ತ್ರಗಳು ನುಡಿ ಮಂತ್ರ

ಭೂರುಹಜ ಫಲಪುಷ್ಪ ಗಂಧ ಸಮೀರ ಶಶಿ ರವಿ ದೀಪ

ಭೂಷಣ ತಾರಕಗಳು ಎಂದು ಅರ್ಪಿಸಲು ಕೈಕೊಂಡು ಮನ್ನಿಸುವ//28//


ಭೂಸುರರೊಳು ಇಪ್ಪ ಅಬ್ಜಭವನನೊಳು ವಾಸುದೇವನು

ವಾಯುಖಗಪ ಸದಾಶಿವ ಅಹಿಪ ಇಂದ್ರನು ವಿವಸ್ವಾನ್ ನಾಮಕ ಸೂರ್ಯ

ಭೇಶಕಾಮ ಅಮರಾಸ್ಯ ವರುಣಾದಿ ಸುರರು ಕ್ಷತ್ರಿಯರೊಳು ಇಪ್ಪರು

ವಾಸವಾಗಿಹ ಸಂಕರುಷಣನ ನೋಡಿ ಮೋದಿಪರು//29//


ಮೀನ ಕೇತನ ತನಯ ಪ್ರಾಣಾಪಾನ ವ್ಯಾನೋದಾನ ಮುಖ್ಯ ಏಕ ಊನ ಪಂಚಾಶತ್

ಮರುದ್ಗಣ ರುದ್ರ ವಸುಗಣರು

ಮೇನಕಾತ್ಮಜ ಕುವರ ವಿಶ್ವಕ್ಸೇನ ಧನಪಾದಿ ಅನಿಮಿಷರನು

ಸದಾನುರಾಗದಿ ಧೇನಿಪುದು ವೈಶ್ಯರೊಳು ಪ್ರದ್ಯುಮ್ನ//30//


ಇರುತಿಹರು ನಾಸತ್ಯ ದಸ್ರರು ನಿರಋತಿಯು ಯಮಧರ್ಮ ಕಿಂಕರರು ಮೇದಿನಿ

ಕಾಲಮೃತ್ಯು ಶನೈಶ್ಚರಾದಿಗಳು

ಕರೆಸಿಕೊಂಬರು ಶೂದ್ರರೆಂದು ಅನವರತ

ಶೂದ್ರರೊಳಿಪ್ಪರು ಇವರೊಳಗೆ ಅರವಿದೂರ ಅನಿರುದ್ಧನು ಇಹನೆಂದರಿದು ಮನ್ನಿಪುದು//31//


ವೀತಭಯ ನಾರಾಯಣ ಚತುಷ್ಪಾತು ತಾನು ಎಂದೆನಿಸಿ

ತತ್ತತ್ ಜಾತಿ ಧರ್ಮ ಸುಕರ್ಮಗಳ ತಾ ಮಾಡಿ ಮಾಡಿಸುತ

ಚೇತನರ ಒಳಹೊರಗೆ ಓತಪ್ರೋತನಾಗಿದ್ದು ಎಲ್ಲರಿಗೆ

ಸಂಪ್ರೀತಿಯಲಿ ಧರ್ಮಾರ್ಥ ಕಾಮಾದಿಗಳ ಕೊಡುತಿಹನು//32//


ನಿಧನ ಧನದ ವಿಧಾತ ವಿಗತಾಭ್ಯಧಿಕ ಸಮಸಮವರ್ತಿ ಸಾಮಗ

ತ್ರಿದಶ ಗಣಸಂಪೂಜ್ಯ ತ್ರಿಕಕುತ್ ಧಾಮ ಶುಭನಾಮ

ಮಧುಮಥನ ಭೃಗುರಾಮ ಘೋಟಕ ವದನ

ಸರ್ವ ಪದಾರ್ಥದೊಳು ತುದಿ ಮೊದಲು ತುಂಬಿಹನು ಎಂದು ಚಿಂತಿಸು ಬಿಂಬರೂಪದಲಿ//33//


ಕನ್ನಡಿಯ ಕೈವಿಡಿದು ನೋಡಲು ತನ್ನ ಇರವು ಸವ್ಯಾಪಸವ್ಯದಿ ಕಣ್ಣಿಗೆ ಒಪ್ಪುವ ತೆರದಿ

ಅನಿರುದ್ಧನಿಗೆ ಈ ಜಗವು ಭಿನ್ನ ಭಿನ್ನವೆ ತೋರುತಿಪ್ಪುದು

ಜನ್ಯವಾದುದರಿಂದ ಪ್ರತಿಬಿಂಬನ್ನ

ಮಯಗಾನು ಎಂದರಿದು ಪೂಜಿಸಲು ಕೈಕೊಂಬ//34//


ಬಿಂಬರೆನಿಪರು ಸ್ವೋತ್ತಮರು ಪ್ರತಿಬಿಂಬರೆನಿಪರು ಸ್ವ ಅವರರು

ಪ್ರತಿಬಿಂಬ ಬಿಂಬಗಳೊಳಗೆ ಕೇವಲ ಬಿಂಬ ಹರಿಯೆಂದು

ಸಂಭ್ರಮದಿ ಪಾಡುತಲಿ ನೋಡುತ ಉಂಬುದು ಉಡುವುದು ಇಡುವುದು ಕೊಡುವುದು ಎಲ್ಲ

ಅಂಬುಜಾoಬುಕನ ಅಂಘ್ರಿ ಪೂಜೆಗಳು ಎಂದು ನಲಿದಾಡು//35//


ನದಿಯ ಜಲ ನದಿಗೆ ಎರೆವ ತೆರೆದಂದದಲಿ

ಭಗವತ್ ದತ್ತ ಧರ್ಮಗಳು ಉದಧಿಶಯನನಿಗೆ ಅರ್ಪಿಸುತ ವ್ಯಾವೃತ್ತ ನೀನಾಗಿ

ವಿಧಿ ನಿಷೇಧಾದಿಗಳಿಗೆ ಒಳಗಾಗದಲೆ ನೋಡುತ

ದರ್ವಿಯಂದದಿ ಪದುಮನಾಭನ ಸಕಲ ಕರ್ಮಗಳಲಿ ನೆನೆವುತಿರು//36//


ಅರಿಯದಿರ್ದರು ಎಮ್ಮೊಳಿದ್ದು ಅನವರತ ವಿಷಯಗಳ ಉಂಬ

ಜ್ಞಾನ ಉತ್ತರದಿ ತನಗರ್ಪಿಸಲು ಚಿತ್ಸುಖವಿತ್ತು ಸಂತೈಪ

ಸರಿತು ಕಾಲಪ್ರವಹಗಳು ಕಂಡರೆಯು ಸರಿ ಕಾಣದಿರೆ ಪರಿವವು

ಮರಳಿ ಮಜ್ಜನ ಪಾನ ಕರ್ಮಗಳಿಂದ ಸುಖವಿಹವು//37//


ಏನು ಮಾಡುವ ಕರ್ಮಗಳು ಲಕ್ಷ್ಮೀ ನಿವಾಸನಿಗೆ ಅರ್ಪಿಸು

ಅನುಸಂಧಾನ ಪೂರ್ವಕದಿಂದ ಸಂದೇಹಿಸದೆ ದಿನದಿನದಿ

ಮಾನನಿಧಿ ಕೈಕೊಂಡು ಸುಖವಿತ್ತು ಅನತರ ಸಂತೈಪ

ತೃಣ ಜಲ ಧೇನು ತಾನುಂಡು ಅನವರತ ಪಾಲ್ಗರೆವ ತೆರದಂತೆ//38//


ಪೂರ್ವ ದಕ್ಷಿಣ ಪಶ್ಚಿಮ ಉತ್ತರ ಪಾರ್ವತೀಪತಿ ಅಗ್ನಿವಾಯು ಸುಶಾರ್ವರೀಚರ

ದಿಗ್ವಲಯದೊಳು ಹಂಸನಾಮಕನು

ಸರ್ವಕಾಲದಿ ಸರ್ವರೊಳು ಸುರ ಸಾರ್ವಭೌಮನು ಸ್ವೇಚ್ಛೆಯಲಿ

ಮತ್ತೋರ್ವರಿಗೆ ಗೋಚರಿಸದ ಅವ್ಯಕ್ತ ಆತ್ಮನು ಎಂದೆನಿಪ//39//


ಪರಿ ಇಡಾವತ್ಸರನು ಸಂವತ್ಸರದೊಳು ಅನಿರುದ್ಧಾದಿ ರೂಪವ ಧರಿಸಿ

ಬಾರ್ಹಸ್ಪತ್ಯ ಸೌರಭ ಚಾಂದ್ರಮನು ಎನಿಸಿ

ಇರುತಿಹ ಜಗನ್ನಾಥ ವಿಠಲ ಸ್ಮರಿಸುವವರನು ಸಂತೈಪನು ಎಂದು

ಉರುಪರಾಕ್ರಮ ಉಚಿತಸಾಧನ ಯೋಗ್ಯತೆಯನರಿತು//40//


//ಇತಿ ಶ್ರೀ ವಿಭೂತಿ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು

Sunday, December 30, 2012

ಶ್ರೀ ಹರಿಕಥಾಮೃತಸಾರ - 4

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ಭೋಜನ ಸಂಧಿ//

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ವನಜಾಂಡದೊಳು ಉಳ್ಳ ಅಖಿಳ ಚೇತನರು ಭುಂಜಿಪ

ಚತುರವಿಧ ಭೋಜನಪದಾರ್ಥದಿ ಚತುರವಿಧ ರಸರೂಪ ತಾನಾಗಿ

ಮನಕೆ ಬಂದಂತೆ ಉಂಡು ಉಣಿಸಿ ಸಂಹನನಕೆ ಉಪಚಯ

ಕರುಣಕೆ ಆನಂದ ಅನಿಮಿಷರಿಗೆ ಆತ್ಮ ಪ್ರದರ್ಶನ ಸುಖವನೀವ ಹರಿ//1//


ನೀಡದಂದದಲೆ ಇಪ್ಪ ಲಿಂಗಕೆ ಷೋಡಶ ಆತ್ಮಕ ರಸ ವಿಭಾಗವ ಮಾಡಿ

ಷೋಡಶ ಕಲೆಗಳಿಗೆ ಉಪಚಯಗಳನೆ ಕೊಡುತ

ಕ್ರೋಡ ಎಪ್ಪತ್ತೆರಡು ಸಾವಿರ ನಾಡಿಗತ ದೇವತೆಗಳೊಳಗೆ ಇದ್ದಾಡುತ ಆನಂದಾತ್ಮ

ಚರಿಸುವ ಲೋಕದೊಳು ತಾನು//2//


ವಾರಿವಾಚ್ಯನು ವಾರಿಯೊಳಗಿದ್ದು ಆರು ರಸವೆಂದೆನಿಸಿ

ಮೂವತ್ತಾರು ಸಾವಿರ ಸ್ತ್ರೀ ಪುರುಷನಾಡಿಯಲಿ ತದ್ರೂಪ ಧಾರಕನು ತಾನಾಗಿ

ಸರ್ವ ಶರೀರಗಳಲಿ ಅಹಶ್ಚರಾತ್ರಿ ವಿಹಾರ ಮಾಳ್ಪನು

ಬೃಹತಿಯೆಂಬ ಸುನಾಮದಿಂ ಕರೆಸಿ//3//


ಆರುರಸ ಸತ್ವಾದಿ ಭೇದದಿ ಆರು ಮೂರಾಗಿ ಇಹವು

ಸಾರಾಸಾರನೀತ ಪ್ರಚುರ ಖಂಡಾಖಂಡ ಚಿತ್ಪ್ರಚುರ

ಈರು ಅಧಿಕ ಎಪ್ಪತ್ತು ಸಾವಿರ ಮಾರಮಣನ ರಸಾಖ್ಯರೂಪ

ಶರೀರದೊಳು ಭೋಜ್ಯ ಸುಪದಾರ್ಥದಿ ತಿಳಿದು ಭುಂಜಿಪುದು//4//


ಕ್ಷೀರಗತ ರಸ ರೂಪಗಳು ಮುನ್ನೂರು ಮೇಲೆ ಐವತ್ತು ನಾಲ್ಕು

ಚಾರು ಘೃತಗತ ರೂಪಗಳು ಇಪ್ಪತ್ತರ ಒಂಭತ್ತು

ಸಾರ ಗುಡದೊಳಗೆ ಐದು ಸಾವಿರ ನೂರಾವೊಂದು

ಸುರೂಪ ದ್ವಿಸಹಸ್ರ ಆರೆರಡು ಶತ ಪಂಚ ವಿಂಶತಿ ರೂಪ ಫಲಗಳಲಿ//5//


ವಿಶದ ಸ್ಥಿರತೀಕ್ಷಣವು ನಿರ್ಹರ ರಸಗಳೊಳು

ಮೂರೈದುಸಾವಿರ ತ್ರಿಶತ ನವರೂಪಗಳ ಚಿಂತಿಸಿ ಭುಂಜಿಪುದು ವಿಷಯ

ಶ್ವಸನ ತತ್ತ್ವೇಶರೊಳಗಿದ್ದು ಈ ಪೆಸರಿನಿಂದಲಿ ಕರೆಸುವನು

ಧೇನಿಸಿದರೀ ಪರಿ ಮನಕೆ ಪೊಳೆವನು ಬಲ್ಲ ವಿಬುಧರಿಗೆ//6//


ಕಪಿಲ ನರಹರಿ ಭಾರ್ಗವತ್ರಯ ವಪುಷ ನೇತ್ರದಿ ನಾಸಿಕಾಸ್ಯದಿ

ಶಫರನಾಮಕ ಜಿಹ್ವೆಯಲಿ ದಂತದಲಿ ಹಂಸಾಖ್ಯ

ತ್ರಿಪದಿಪಾದ್ಯ ಹಯಾಸ್ಯ ವಾಚ್ಯದೊಳು ಅಪರಿಮಿತ ಸುಖಪೂರ್ಣ ಸಂತತ ಕೃಪಣರೊಳಗಿದ್ದು

ಅವರವರ ರಸ ಸ್ವೀಕರಿಸಿ ಕೊಡುವ//7//


ನಿರುಪಮಾನಂದಾತ್ಮ ಹರಿ ಸಂಕರುಷಣ ಪ್ರದ್ಯುಮ್ನರೂಪದಿ ಇರುತಿಹನು ಭೋಕ್ತ್ರುಗಳೊಳಗೆ

ತತ್ಶಕ್ತಿದನುಯೆನಿಸಿ ಕರೆಸುವನು

ನಾರಾಯಣ ಅನಿರುದ್ಧ ಎರಡುನಾಮದಿ ಭೋಜ್ಯವಸ್ತುಗನಿರುತ

ತರ್ಪಕನಾಗಿ ತೃಪ್ತಿಯನೀವ ಚೇತನಕೆ//8//


ವಾಸುದೇವನು ಒಳ ಹೊರಗೆ ಅವಕಾಶ ಕೊಡುವ ನಭಸ್ಥನಾಗಿ

ರಮಾಸಮೇತ ವಿಹಾರ ಮಾಳ್ಪನು ಪಂಚರೂಪದಲಿ

ಆ ಸರೋರುಹ ಸಂಭವಭವವಾಸವಾದಿ ಅಮರಾದಿ ಚೇತನ ರಾಶಿಯೊಳಗೆ

ಇಹನು ಎಂದರಿತವನು ಅವನೇ ಕೋವಿದನು//9//


ವಾಸುದೇವನು ಅನ್ನದೊಳು ನಾನಾ ಸುಭಕ್ಷ್ಯದಿ ಸಂಕರುಷಣ

ಕೃತೀಶ ಪರಮಾನ್ನದೊಳು ಘೃತದೊಳಗೆ ಇಪ್ಪ ಅನಿರುದ್ಧ

ಆ ಸುಪರ್ಣ ಅಂಸಗನು ಸೂಪದಿ ವಾಸವ ಅನುಜ ಶಾಕದೊಳು

ಮೂಲೇಶ ನಾರಾಯಣನು ಸರ್ವತ್ರದಲಿ ನೆಲೆಸಿಹನು//10//


ಅಗಣಿತ ಆತ್ಮ ಸುಭೋಜನ ಪದಾರ್ಥಗಳ ಒಳಗೆ

ಅಖಂಡ ವಾದ ಒಂದು ಅಗಳಿನೊಳು ಅನಂತ ಅಂಶದಲಿ ಖಂಡನೆಂದೆನಿಸಿ

ಜಗದಿ ಜೀವರ ತೃಪ್ತಿ ಪಡಿಸುವ ಸ್ವಗತ ಭೇದ ವಿವರ್ಜಿತನ

ಈರ್ಬಗೆಯ ರೂಪವನರಿತು ಭುಂಜಿಸಿ ಅರ್ಪಿಸು ಅವನಡಿಗೆ//11//


 
ಈ ಪರಿಯಲಿ ಅರಿತು ಉಂಬ ನರ ನಿತ್ಯ ಉಪವಾಸಿ ನಿರಾಮಯನು ನಿಷ್ಪಾಪಿ

ನಿತ್ಯ ಮಹಾ ಸುಯಜ್ಞಗಳು ಆಚರಿಸಿದವನು

ಪೋಪದು ಇಪ್ಪದು ಬಪ್ಪುದು ಎಲ್ಲ ರಮಾಪತಿಗೆ ಅಧಿಷ್ಠಾನವೆನ್ನು

ಕೃಪಾಪಯೋನಿಧಿ ಮಾತಲಾಲಿಸುವನು ಜನನಿಯಂತೆ//12//


 
ಆರೆರೆಡು ಸಾವಿರದ ಮೇಲೆ ಇನ್ನೂರ ಐವತ್ತೊಂದು ರೂಪದಿ

ಸಾರಭೋಕ್ತ ಅನಿರುದ್ಧ ದೇವನು ಅನ್ನಮಯನೆನಿಪ

ಮೂರೆರೆಡುವರೆ ಸಾವಿರದ ಮೇಲೆ ಮೂರಧಿಕ ನಾಲ್ವತ್ತು ರೂಪದಿ

ತೋರುತಿಹ ಪ್ರದ್ಯುಮ್ನ ಜಗದೊಳು ಪ್ರಾಣಮಯನಾಗಿ//13//


 
ಎರಡು ಕೋಶಗಳ ಒಳ ಹೊರಗೆ ಸಂಕರುಷಣ ಇದು ಸುಲಕ್ಷದ ಅರವತ್ತೆರೆಡು ಸಾವಿರದ

ಏಳಧಿಕ ಶತ ರೂಪಗಳ ಧರಿಸಿ ಕರೆಸಿಕೊಂಬ ಮನೋಮಯ ಎಂದು

ಅರವಿದೂರನು ಈರೆರೆಡು ಸಾವಿರದ ಮುನ್ನೂರು

ಅದ ಮೇಲೆ ನಾಲ್ಕಧಿಕ ಎಪ್ಪತ್ತು//14//


 ಹದಿನಾಲ್ಕು ಮತ್ತು ಹದಿನೈದನೆ ಪದ್ಯವನ್ನು ಒಟ್ಟಿಗೆ ಓದುವುದು.


ರೂಪದಿಂ ವಿಜ್ಞಾನಮಯನು ಎಂಬೀ ಪೆಸರಿನಿಂ ವಾಸುದೇವನು

ವ್ಯಾಪಿಸಿಹ ಮಹದಾದಿ ತತ್ತ್ವದಿ ತತ್ಪತಿಗಳೊಳಗೆ

ಈ ಪುರುಷ ನಾಮಕನ ಶುಭ ಸ್ವೇದಾಪಳು ಎನಿಸಿದ ರಮಾಂಬ

ತಾ ಬ್ರಹ್ಮಾಪರೋಕ್ಷಿಗಳು ಆದವರ ಲಿಂಗಾಂಗ ಕೆಡಿಸುವಳು//15//


ಐದು ಸಾವಿರ ನೂರಿಪ್ಪತ್ತೈದು ನಾರಾಯಣ ರೂಪವ ತಾ ಧರಿಸಿಕೊಂಡು

ಅನುದಿನದಿ ಆನಂದಮಯನೆನಿಪ

ಐದು ಲಕ್ಷದ ಮೇಲೆ ಎಂಭತ್ತೈದುಸಾವಿರ ನಾಲ್ಕು ಶತಗಳ

ಐದು ಕೋಶಾತ್ಮಕ ವಿರಿಂಚಾಡದೊಳು ತುಂಬಿಹನು//16//


 
ನೂರಾವೊಂದು ಸುರೂಪದಿಂ ಶಾಂತೀರಮಣ ತಾನು ಅನ್ನನೆನಿಪ

ಐನೂರ ಮೇಲೆ ಮೂರಧಿಕ ದಶ ಪ್ರಾಣಾಖ್ಯ ಪ್ರದ್ಯುಮ್ನ

ತೋರುತಿಹನು ಐವತ್ತೈದುಸಾವಿರ ವಿಕಾರ ಮನದೊಳು ಸಂಕರುಷಣ

ಐನೂರ ಚತುರಾಶೀತಿ ವಿಜ್ಞಾನಾತ್ಮ ವಿಶ್ವಾಖ್ಯ//17//


 
ಮೂರು ಸಾವಿರದ ಅರ್ಧಶತ ಮೇಲೆ ಈರು ಅಧಿಕ ರೂಪಗಳ ಧರಿಸಿ

ಶರೀರದೊಳಗೆ ಆನಂದಮಯ ನಾಯಾಯಣಾಹ್ವಯನು

ಈರೆರೆಡು ಸಾವಿರದ ಮೇಲೆ ಮುನ್ನೂರ ಐದು ಸುರೂಪದಿಂದಲಿ

ಭಾರತೀಶನೊಳು ಇಪ್ಪ ನವನೀತಸ್ಥ ಘೃತದಂತೆ//18//


 
ಮೂರಧಿಕ ಐವತ್ತು ಪ್ರಾಣ ಶರೀರದೊಳಗೆ ಅನಿರುದ್ಧನು ಇಪ್ಪ

ಐನೂರು ಹನ್ನೊಂದು ಅಧಿಕ ಅಪಾನನೊಳು ಇಪ್ಪ ಪ್ರದ್ಯುಮ್ನ

ಮೂರನೇ ವ್ಯಾನನೊಳಗೆ ಐದರೆ ನೂರು ರೂಪದಿ ಸಂಕರುಷಣ

ಐನೂರ ಮೂವತ್ತೈದು ಉದಾನನೊಳು ಇಪ್ಪ ಮಾಯೇಶ//19//

ಮೂಲ ನಾರಾಯಣನು ಐವತ್ತೇಳಧಿಕ ಐನೂರು ರೂಪವ ತಾಳಿ

ಸರ್ವತ್ರದಿ ಸಮಾನನೊಳಿಪ್ಪ ಸರ್ವಜ್ಞ

ಲೀಲೆಗೈವನು ಸಾವಿರದ ಮೇಲೆ ಏಳು ನೂರು ಹನ್ನೊಂದು ರೂಪವ ತಾಳಿ

ಪಂಚಪ್ರಾಣರೊಳು ಲೋಕಗಳ ಸಲಹುವನು//20//


 
ತ್ರಿನವತಿ ಸುರೂಪಾತ್ಮಕ ಅನಿರುದ್ಧನು ಸದಾ ಯಜಮಾನನಾಗಿದ್ದು

ಅನಲ ಯಮ ಸೋಮಾದಿ ಪಿತೃದೇವತೆಗಳಿಗೆ ಅನ್ನನು ಎನಿಪನು

ಆ ಪ್ರದ್ಯುಮ್ನ ಸಂಕರುಷಣ ವಿಭಾಗವ ಮಾಡಿಕೊಟ್ಟು ಉಂಡುಣಿಪ

ನಿತ್ಯಾನಂದ ಭೋಜನದಾಯಿ ತುರ್ಯಾಹ್ವ//21//


 
ಷಣ್ಣವತಿ ನಾಮಕನು ವಸು ಮೂಗಣ್ಣ ಭಾಸ್ಕರರ ಒಳಗೆ ನಿಂತು

ಪ್ರಾಪನ್ನರು ಅನುದಿನ ನಿಷ್ಕಪಟ ಸದ್ಭಕ್ತಿಯಲಿ ಮಾಳ್ಪ ಪುಣ್ಯ ಕರ್ಮವ ಸ್ವೀಕರಿಸಿ

ಕಾರುಣ್ಯ ಸಾಗರನು ಆ ಪಿತೃಗಳಿಗೆ

ಅಗಣ್ಯ ಸುಖವಿತ್ತು ಅವರ ಪೊರೆವನು ಎಲ್ಲ ಕಾಲದಲಿ//22//


 
ಸುತಪ ಏಕ ಉತ್ತರ ಸುಪಂಚಾಶತ ವರಣ ಕರಣದಿ ಚತುರ ವಿಂಶತಿ ಸುತತ್ವದಿ

ಧಾತುಗಳೊಳು ಇದ್ದು ಅವಿರತ ಅನಿರುದ್ಧ

ಜತನ ಮಾಳ್ಪನು ಜಗದಿ ಜೀವ ಪ್ರತತಿಗಳ

ಷಣ್ಣವತಿ ನಾಮಕ ಚತುರ ಮೂರ್ತಿಗಳ ಅರ್ಚಿಸುವರು ಅದರಿಂದ ಬಲ್ಲವರು//23//


ಅಬುಜಾಂಡ ಉದರನು ವಿಪಿನದಿ ಶಬರಿ ಯಂಜಲನುಂಡ ಗೋಕುಲದ ಅಬಲೆಯರನು

ಓಲಿಸಿದನು ಋಷಿಪತ್ನಿಯರು ಕೊಟ್ಟನ್ನ ಸುಭುಜ ತಾ ಭುಂಜಿಸಿದ

ಸ್ವರಮಣ ಕುಬುಜಗಂಧಕೊಲಿದ ಮುನಿಗಣ ವಿಬುಧ ಸೇವಿತ

ಬಿಡುವನೆ ನಾವು ಇತ್ತ ಕರ್ಮಫಲ//24//


 
ಗಣನೆಯಿಲ್ಲದ ಪರಮಸುಖ ಸುದ್ಗುಣ ಗಣಂಗಳ ಲೇಶ ಲೇಶಕೆ ಎಣೆಯೆನಿಸದು

ರಮಾಬ್ಜಭವ ಶಕ್ರಾದಿಗಳ ಸುಖವು

ಉಣುತ ಉಣುತ ಮೈಮರೆದು ಕೃಷ್ಣಾರ್ಪಣವೆನಲು

ಕೈಕೊಂಬನು ಅರ್ಭಕ ಜನನಿ ಭೋಜನ ಸಮಯದಲಿ ಕೈವಡ್ದು ವಂದದಲಿ//25//


 
ಜೀವಕೃತ ಕರ್ಮಗಳ ಬಿಡದೆ ರಮಾವರನು ಸ್ವೀಕರಿಸಿ

ಫಲಗಳನು ಈವನು ಅಧಿಕಾರಾನುಸಾರದಲಿ ಅವರಿಗೆ ಅನವರತ

ಪಾವಕನು ಸರ್ವಸ್ವ ಭುಂಜಿಸಿ ತಾ ವಿಕಾರವನು ಐದನು ಒಮ್ಮೆಗೆ

ಪಾವನಕೆ ಪಾವನನೆನಿಪ ಹರಿಯುಂಬುದು ಎನರಿದು//26//


ಕಳುಷಜಿಹ್ವೆಗೆ ಸುಷ್ಟುಭೋಜನ ಜಲ ಮೊದಲು ವಿಷತೋರುವುದು

ನಿಷ್ಕಲುಷ ಜಿಹ್ವೆಗೆ ಸುರಸ ತೋರುವುದು ಎಲ್ಲ ಕಾಲದಲಿ

ಸುಲಲಿತಾಂಗಗೆ ಸಕಲ ರಸ ಮಂಗಳವೆನಿಸುತಿಹುದು

ಅನ್ನಮಯ ಕೈಕೊಳದೆ ಬಿಡುವನೆ ಪೂತನಿಯ ವಿಷ ಮೊಲೆಯನು ಉಂಡವನು//27//


ಪೇಳಲಿ ಏನು ಸಮೀರ ದೇವನು ಕಾಳಕೂಟವನು ಉಂಡು ಲೋಕವ ಪಾಲಿಸಿದ

ತದ್ದಾಸನು ಓರ್ವನು ಅಮೃತನೆನಿಸಿದನು

ಶ್ರೀ ಲಕುಮಿವಲ್ಲಭ ಶುಭಾಶುಭ ಜಾಲ ಕರ್ಮಗಳ ಉಂಬನು

ಉಪಚಯದ ಏಳಿಗೆಗಳು ಇವಗಿಲ್ಲವೆಂದಿಗು ಸ್ವರಸಗಳ ಬಿಟ್ಟು//28//


ಈ ಪರಿಯಲಿ ಅಚ್ಯುತನ ತತ್ತದ್ರೂಪ ತನ್ನಾಮಗಳ ಸಲೆ

ನಾನಾ ಪದಾರ್ಥದಿ ನೆನೆನೆನೆದು ಭುಂಜಿಸುತಲಿ ಇರು ವಿಷಯ

ಪ್ರಾಪಕ ಸ್ಥಾಪಕ ನಿಯಾಮಕ ವ್ಯಾಪಕನು ಎಂದರಿದು

ನೀ ನಿರ್ಲೇಪನು ಆಗಿರು ಪುಣ್ಯ ಪಾಪಗಳ ಅರ್ಪಿಸು ಅವನ ಅಡಿಗೆ//29//


ಐದು ಲಕ್ಷ ಎಂಭತ್ತರ ಒಂಭತ್ತು ಆದ ಸಾವಿರದ ಏಳುನೂರರ ಐದು ರೂಪವ ಧರಿಸಿ

ಭೋಕ್ತ್ರುಗ ಭೋಜ್ಯನೆಂದೆನಿಸಿ

ಶ್ರೀಧರಾದುರ್ಗಾರಮಣ ಪಾದಾದಿ ಶಿರ ಪರ್ಯಂತ ವ್ಯಾಪಿಸಿ ಕಾದು ಕೊಂಡಿಹ

ಸಂತತ ಜಗನ್ನಾಥ ವಿಠಲನು//30//


//ಇತಿ ಶ್ರೀ ಭೋಜನ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು

Wednesday, December 26, 2012

ಶ್ರೀ ಹರಿಕಥಾಮೃತಸಾರ - 3

//ಶ್ರೀ ಗುರುಭ್ಯೋ ನಮಃ//

//ಪರಮ ಗುರುಭ್ಯೋ ನಮಃ//

//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//

ಶ್ರೀ ಜಗನ್ನಾಥದಾಸ ವಿರಚಿತ

ಶ್ರೀ ಹರಿಕಥಾಮೃತಸಾರ

//ವ್ಯಾಪ್ತಿ ಸಂಧಿ//

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಪುರುಷರೂಪತ್ರಯ ಪುರಾಣ ಪುರುಷ ಪುರುಷೋತ್ತಮ

ಕ್ಷರಾಕ್ಷರ ಪುರುಷ ಪೂಜಿತ ಪಾದ ಪೂರ್ಣಾನಂದ ಜ್ಞಾನಮಯ

ಪುರುಷಸೂಕ್ತ ಸುಮೇಯ ತತ್ತತ್ ಪುರುಷ ಹೃತ್ಪುಷ್ಕರ ನಿಲಯ

ಮಹಾಪುರುಷ ಅಜಾಂಡ ಅಂತರದಿ ಬಹಿರದಿ ವ್ಯಾಪ್ತ ನಿರ್ಲಿಪ್ತ//1//


ಸ್ತ್ರೀ ನಪುಂಸಕ ಪುರುಷ ಭೂ ಸಲಿಲ ಅನಲ ಗಗನ ಮನ ಶಶಿ

ಭಾನು ಕಾಲ ಗುಣ ಪ್ರಕೃತಿಯೊಳಗೆ ಒಂದು ತಾನಲ್ಲ

ಏನು ಇವನ ಮಹಾಮಹಿಮೆ ಕಡೆಗಾಣರು ಅಜಭವ ಶಕ್ರ ಮುಖರು

ನಿಧಾನಿಸಲು ಮಾನವರಿಗೆ ಅಳವಡುವುದೇ ವಿಚಾರಿಸಲು//2//


ಗಂಧ ರಸರೂಪ ಸ್ಪರ್ಶ ಶಬ್ದ ಒಂದು ತಾನಲ್ಲ

ಅದರದರ ಪೆಸರಿಂದ ಕರೆಸುತ ಜೀವರಿಗೆ ತರ್ಪಕನು ತಾನಾಗಿ

ಪೊಂದಿಕೊಂಡಿಹ ಪರಮ ಕರುಣಾಸಿಂಧು ಶಾಶ್ವತ

ಮನವೆ ಮೊದಲಾದ ಇಂದ್ರಿಯಗಳೊಳಗೆ ಇದ್ದು ಭೋಗಿಸುತಿಹನು ವಿಷಯಗಳ//3//


ಶ್ರವಣ ನಯನ ಘ್ರಾಣ ತ್ವಗ್ರಸನ ಇವುಗಳೊಳು

ವಾಕ್ಪಾಣಿ ಪಾದಾದಿ ಅವಯವಗಳೊಳು ತದ್ಗುಣಗಳೊಳು ತತ್ಪತಿಗಳೊಳಗೆ

ಪ್ರವಿತತನು ತಾನಾಗಿ ಕೃತಿಪತಿ ವಿವಿಧ ಕರ್ಮವ ಮಾಡಿ ಮಾಡಿಸಿ

ಭವಕೆ ಕಾರಣನಾಗಿ ತಿರುಗಿಸುತಿಹನು ತಿಳಿಸದಲೆ//4//


ಗುಣಿಗುಣಗಳೊಳಗೆ ಇದ್ದು ಗುಣಿಗುಣನು ಎನಿಸುವನು ಗುಣಬದ್ಧನಾಗದೆ

ಗುಣಜ ಪುಣ್ಯಾಪುಣ್ಯ ಫಲ ಬ್ರಹ್ಮಾದಿಚೇತನಕೆ ಉಣಿಸುತ ಅವರೊಳಗಿದ್ದು

ವೃಜಿನ ಅರ್ದನ ಚಿದಾನಂದೈಕ ದೇಹವನು

ಕೊನೆಗೆ ಸಚರಾಚಾರ ಜಗದ್ಭುಕುವೆನಿಪನು ಅವ್ಯಯನು//5//


ವಿದ್ಯೆ ತಾನೆನೆಸಿಕೊಂಬ ಅನಿರುದ್ಧದೇವನು

ಸರ್ವಜೀವರ ಬುದ್ಧಿಯಲಿ ತಾನಿದ್ದು ಕೃತಿಪತಿ ಬುದ್ಧಿಯೆನಿಸುವನು

ಸಿದ್ಧಿಯೆನಿಸುವ ಸಂಕರುಷನ ಪ್ರಸಿದ್ಧನಾಮಕ ವಾಸುದೇವ

ಅನವದ್ಯ ರೂಪ ಚತುಷ್ಟಯಗಳ ಅರಿತವನೆ ಪಂಡಿತನು//6//


ತನುಚತುಷ್ಟಯಗಳೊಳು ನಾರಾಯಣನು ಹೃತ್ಕಮಲಾಖ್ಯ ಸಿಂಹಾಸನದೊಳು

ಅನಿರುದ್ಧಾದಿ ರೂಪಗಳಿಂದ ಶೋಭಿಸುತ

ತನಗೆ ತಾನೇ ಸೇವ್ಯ ಸೇವಕನೆನೆಸಿ ಸೇವಾಸಕ್ತ ಸುರರೊಳಗೆ

ಅನವರತ ನೆಲೆಸಿದ್ದು ಸೇವೆಯ ಕೊಂಬನವರಂತೆ//7//


ಜಾಗರ ಸ್ವಪ್ನಂಗಳೊಳು ವರಭೋಗೀಶಯನನು ಬಹು ಪ್ರಕಾರ ವಿಭಾಗಗೈಸಿ

ನಿರಂಶಜೀವರ ಚಿತ್ಶರೀರವನು ಭೋಗವಿತ್ತು

ಸುಷುಪ್ತಿಕಾಲದಿ ಸಾಗರವ ನದಿ ಕೂಡುವಂತೆ

ವಿಯೋಗರಹಿತನು ಅಂಶಗಳನು ಏಕತ್ರವೈದಿಸುವ//8//


ಭಾರ್ಯರಿಂದೊಡಗೂಡಿ ಕಾರಣಕಾರ್ಯ ವಸ್ತುಗಳಲ್ಲಿ

ಪ್ರೆರಕಪ್ರೇರ್ಯ ರೂಪಗಳಿಂದ ಪಟತಂತುಗಳವೊಳಿದ್ದು

ಸೂರ್ಯ ಕಿರಣಗಳಂತೆ ತನ್ನಯ ವೀರ್ಯದಿಂದಲಿ ಕೊಡುತ ಕೊಳುತಿಹ

ಅನಾರ್ಯರಿಗೆ ಈತನ ವಿಹಾರವು ಗೋಚರಿಪುದೇನೋ//9//


ಜನಕ ತನ್ನ ಆತ್ಮಜಗೆ ವರ ಭೂಷಣದುಕೂಲವ ತೊಡಿಸಿ

ತಾ ವಂದನೆಯ ಕೈಕೊಳುತ ಹರಸುತ ಹರುಷಬಡುವಂತೆ

ವನರುಹೇಕ್ಷಣ ಪೂಜ್ಯ ಪೂಜಕನು ಎನಿಸಿ ಪೂಜಾಸಾಧನ

ಪದಾರ್ಥವನು ತನಗೆ ತಾನಾಗಿ ಫಲಗಳನೀವ ಭಜಕರಿಗೆ//10//


ತಂದೆ ಬಹು ಸಂಭ್ರಮದಿ ತನ್ನಯ ಬಂಧು ಬಳಗವ ನೆರಹಿ

ಮದುವೆಯ ನಂದನಗೆ ತಾ ಮಾಡಿ ಮನೆಯೊಳಗಿಡುವ ತೆರದಂತೆ

ಇಂದಿರಾಧವ ತನ್ನ ಇಚ್ಚಯಲಿಂದ ಗುಣಗಳ ಚೇತನಕೆ ಸಂಬಂಧಗೈಸಿ

ಸುಖಾಸುಖಾತ್ಮಕ ಸಂಸೃತಿಯೊಳು ಇಡುವ//11//


ತೃಣ ಕೃತ ಆಲಯದೊಳಗೆ ಪೋಗೆ ಸಂದಣಿಸಿ ಪ್ರತಿ ಛಿದ್ರದಲಿ ಪೊರಮಟ್ಟು

ಅನಳ ನಿರವನು ತೋರಿ ತೋರದಲಿಪ್ಪ ತೆರದಂತೆ

ವನಜಾಂಡದೊಳು ಅಖಿಳ ಜೀವರ ತನುವಿನ ಒಳ ಹೊರಗೆ ಇದ್ದು

ಕಾಣಿಸದೆ ಅನಿಮಿಶೇಷನು ಸಕಲ ಕರ್ಮವ ಮಾಳ್ಪನು ಅವರಂತೆ//12//


ಪಾದಪಗಳ ಅಡಿಗೆ ಎರೆಯೆ ಸಲಿಲವು ತೋದು ಕಂಬಿಗಳು ಉಬ್ಬಿ

ಪುಷ್ಪ ಸ್ವಾದು ಫಲವ ಈವಂದದಲಿ ಸರ್ವೇಶ್ವರನು

ಜನರ ಆರಾಧನೆಯ ಕೈಕೊಂಡು ಬ್ರಹ್ಮ ಭವಾದಿಗಳ ನಾಮದಲಿ ಫಲವಿತ್ತು

ಆದರಿಸುವನು ತನ್ನ ಮಹಿಮೆಯ ತೋರಗೊಡ ಜನಕೆ//13//


ಶೃತಿತತಿಗಳಿಗೆ ಗೋಚರಿಸದ ಅಪ್ರತಿಮ ಅಜಾನಂದಾತ್ಮನು ಅಚ್ಯುತ ವಿತತ

ವಿಶ್ವಾಧಾರ ವಿದ್ಯಾಧೀಶ ವಿಧಿ ಜನಕ

ಪ್ರತಿದಿವಸ ಚೇತನರೊಳಗೆ ಪ್ರಾಕೃತ ಪುರುಷನಂದದಲಿ ಸಂಚರಿಸುತ

ನಿಯಮ್ಯ ನಿಯಾಮಕನು ತಾನಾಗಿ ಸಂತೈಪ//14//


ಮನ ವಿಷಯದೊಳಗೆ ಇರಿಸಿ ವಿಷಯವ ಮನದೊಳಗೆ ನೆಲೆಗೊಳಿಸಿ

ಬಲು ನೂತನವು ಸುಸಮೀಚೀನವಿದು ಉಪಾದೇಯವೆಂದೆನಿಸಿ

ಕನಸಿಲಾದರು ತನ್ನ ಪಾದದ ನೆನೆವನು ಈಯದೆ

ಸರ್ವರೊಳಗಿದ್ದು ಅನುಭವಿಸುವನು ಸ್ಥೂಲ ವಿಷಯವ ವಿಶ್ವನೆಂದೆನಿಸಿ//15//


ತೋದಕನು ತಾನಾಗಿ ಮನ ಮೊದಲಾದ ಕರಣದೊಳು ಇದ್ದು ವಿಷಯವ ನೈದುವನು

ನಿಜಪೂರ್ಣ ಸುಖಮಯ ಗ್ರಾಹ್ಯ ಗ್ರಾಹಕನು

ವೇದ ವೇದ್ಯನು ತಿಳಿಯದವನೋಪಾದಿ ಭುಂಜಿಸುತ

ಎಲ್ಲರೊಳಗೆ ಆಹ್ಲಾದ ಪಡುವನು ಭಕ್ತವತ್ಸಲ ಭಾಗ್ಯಸಂಪನ್ನ//16//


ನಿತ್ಯನಿಗಮಾತೀತ ನಿರ್ಗುಣ ಭೃತ್ಯವತ್ಸಲ ಭಯವಿನಾಶನ

ಸತ್ಯಕಾಮ ಶರಣ್ಯ ಶ್ಯಾಮಲ ಕೋಮಲಾಂಗ ಸುಖಿ

ಮತ್ತನಂದದಿ ಮರ್ತ್ಯರ ಒಳ ಹೊರಗೆ ಎತ್ತ ನೋಡಲು ಸುತ್ತುತ ಇಪ್ಪನು

ಅತ್ಯಧಿಕ ಸಂತೃಪ್ತ ತ್ರಿಜಗದ್ವ್ಯಾಪ್ತ ಪರಮಾಪ್ತ//17//


ಪವಿ ಹರಿನ್ಮಣಿ ವಿದ್ರುಮದ ಸಚ್ಛವಿಗಳ ಅಂದದಿ

ರಾಜಿಸುತ ಮಾಧವ ನಿರಂತರ ಮಾನವ ದಾನವರೊಳು ಇದ್ದು

ತ್ರಿವಿಧ ಗುಣ ಕರ್ಮ ಸ್ವಭಾವವ ಪವನಮುಖ ದೇವಾಂತರಾತ್ಮಕ

ದಿವಸ ದಿವಸದಿ ವ್ಯಕ್ತಮಾಡುತಲಿ ಅವರೊಳಿದ್ದು ಉಣಿಪ//18//


ಅಣು ಮಹತ್ತಿನೊಳು ಇಪ್ಪ ಘನ ಪರಮಣುವಿನೊಳು ಅಡಗಿಸುವ

ಸೂಕ್ಷ್ಮವ ಮುಣುಗಿಸುವ ತೇಲಿಸುವ ಸ್ಥೂಲಗಳ ಅವನ ಮಾಯವಿದು

ದನುಜ ರಾಕ್ಷಸರು ಎಲ್ಲರು ಇವನೊಳು ಮುನಿದು ಮಾಡುವುದೇನು

ಉಲೂಖಲ ಒನಕೆಗಳು ಧಾನ್ಯಗಳ ಹಣಿವಂದದಲಿ ಸಂಹರಿಪ//19//


ದೇವ ಮಾನವ ದಾನವರು ಎಂದು ಈ ವಿಧದಲಿ ಆವಾಗಲಿ ಇಪ್ಪರು

ಮೂವರೊಳಗೆ ಇವಗೆ ಇಲ್ಲ ಸ್ನೇಹ ಉದಾಸೀನ ದ್ವೇಷ

ಜೀವರ ಅಧಿಕಾರ ಅನುಸಾರದಲಿ ಈವ ಸುಖ ಸಂಸಾರ ದುಃಖವ

ತಾ ಉಣದಲೆ ಅವರವರಿಗೆ ಉಣಿಸುವ ನಿರ್ಗತಾಶನನು//20//


ಎಲ್ಲಿ ಕೇಳಿದರೆ ಎಲ್ಲಿ ನೋಡಿದರೆ ಎಲ್ಲಿ ಬೇಡಿದರೆ ಎಲ್ಲಿ ನೀಡಿದರೆ

ಎಲ್ಲಿ ಓಡಿದರೆ ಎಲ್ಲಿ ಆಡಿದರೆ ಅಲ್ಲೇ ಇರುತಿಹನು

ಬಲ್ಲಿದರಿಗೆ ಅತಿ ಬಲ್ಲಿದನು ಸರಿಯಿಲ್ಲ ಇವಗೆ ಅಲ್ಲಿ ನೋಡಲು

ಖುಲ್ಲಮಾನವರೊಲ್ಲನು ಅಪ್ರತಿಮಲ್ಲ ಜಗಕೆಲ್ಲ//21//


ತಪ್ತ ಲೋಹವು ನೋಳ್ಪ ಜನರಿಗೆ ಸಪ್ತ ಜಿಹ್ವವ ತೆರದಿ ತೋರ್ಪದು

ಲುಪ್ತ ಪಾವಕ ಲೋಹ ಕಾಂಬುದು ಪೂರ್ವದೋಪಾದಿ

ಸಪ್ತವಾಹನ ನಿಖಿಳ ಜನರೊಳು ವ್ಯಾಪ್ತನು ಆದುದರಿಂದ

ಸರ್ವರೂ ಆಪ್ತರು ಆಗಿಹರು ಎಲ್ಲ ಕಾಲದಿ ಕೈಕೊಂಡು//22//


ವಾರಿದನು ಮಳೆಗರೆಯೆ ಬೆಳೆದಿಹ ಭೂರುಹಂಗಳು ಚಿತ್ರ ಫಲರಸ

ಬೇರೆ ಬೇರೆ ಇಪ್ಪಂತೆ ಬಹುವಿಧ ಜೀವರೊಳಗೆ ಇದ್ದು ಮಾರಮಣನು

ಅವರವರ ಯೋಗ್ಯತೆ ಮೀರದಲೆ ಗುಣಕರ್ಮಗಳ ಅನುಸಾರ ನಡೆಸುವ

ದೇವನಿಗೆ ವೈಷಮ್ಯವೆಲ್ಲಿಹುದೋ//23//


ವಾರಿಜಾಪ್ತನ ಕಿರಣ ಮಣಿಗಳ ಸೇರಿ ತತ್ತತ್ ವರ್ಣಗಳನು

ವಿಕಾರಗೈಸದೆ ನೋಳ್ಪರಿಗೆ ಕಂಗೊಳಿಸುವಂದದಲಿ

ಮಾರಮಣ ಲೋಕತ್ರಯದೊಳು ಇಹ ಮೂರುವಿಧ ಜೀವರೊಳಗೆ

ಇದ್ದು ವಿಹಾರಮಾಡುವನು ಅವರ ಯೋಗ್ಯತೆ ಕರ್ಮವ ಅನುಸರಿಸಿ//24//


ಜಲವನು ಅಪಹರಿಸುವ ಘಳಿಗೆ ಬಟ್ಟಲನು ಉಳಿದು

ಜಯಘಂಟೆ ಕೈಪಿಡಿದು ಎಳೆದು ಹೊಡೆವಂದದಲಿ

ಸಂತತ ಕರ್ತೃ ತಾನಾಗಿ ಹಲಧರಾನುಜ ಪುಣ್ಯ ಪಾಪದ ಫಲಗಳನು

ದೇವಾಸುರರ ಗಣದೊಳು ವಿಭಾಗವ ಮಾಡಿ ಉಣಿಸುತ ಸಾಕ್ಷಿಯಾಗಿಪ್ಪ//25//


ಪೊಂದಿಕೊಂಡಿಹ ಸರ್ವರೊಳು ಸಂಬಂಧವಾಗದೆ

ಸಕಲಕರ್ಮವ ಅರಂದದಲಿ ತಾ ಮಾಡಿಮಾಡಿಪ ತತ್ಫಲಗಳುಣದೆ

ಕುಂದದೆ ಅಣುಮಾಹತ್ತು ಎನಿಪ ಘಟಮಂದಿರದಿ ಸರ್ವತ್ರ ತುಂಬಿಹ

ಬಾಂದಳದ ತೆರೆದಂತೆ ಇರುತಿಪ್ಪನು ರಮಾರಮಣ//26//


ಕಾದ ಕಬ್ಬಿಣ ಹಿಡಿದು ಬಡಿಯಲು ವೇದನೆಯು ಲೋಹಗಳಿಗೆ ಅಲ್ಲವೆ

ಆದುದೇನೈ ಅನಳಗಾ ವ್ಯಥೆ ಏನು ಮಾಡಿದರು

ಆದಿದೇವನು ಸರ್ವ ಜೀವರ ಕಾದುಕೊಂಡಿಹನು ಒಳಹೊರಗೆ

ದುಃಖಾದಿಗಳು ಸಂಬಂಧವಾಗುವವೇನೋ ಚಿನ್ಮಯಗೆ//27//


ಮಳಲ ಮನೆಗಳ ಮಾಡಿ ಮಕ್ಕಳು ಕಾಲದಲಾಡಿ ಮೋದದಿ ತುಳಿದು ಕೆಡಿಸುವ ತೆರದಿ

ಲಕ್ಷ್ಮೀರಮಣ ಲೋಕಗಳ ಹಲವು ಬಗೆಯಲಿ ನಿರ್ಮಿಸುವ

ನಿಶ್ಚಲನು ತಾನಾಗಿದ್ದು ಸಲಹುವ

ಎಲರುಣಿಯವೋಳ್ ನುಂಗುವಗೆ ಎಲ್ಲಿಹುದೋ ಸುಖ ದುಃಖ//28//


ವೇಷಭಾಷೆಗಳಿಂದ ಜನರ ಪ್ರಮೋಷಗೈಸುವ ನಟಪುರುಷನೋಳ್

ದೋಷದೂರನು ಲೋಕದೊಳು ಬಹುರೂಪ ಮಾತಿನಲಿ ತೋಷಿಸುವನು

ಅವರವರ ಮನದ ಅಭಿಲಾಷೆಗಳ ಪೂರೈಸುತ ಅನುದಿನ ಪೋಷಿಸುವ

ಪೂತಾತ್ಮ ಪೂರ್ಣ ಆನಂದ ಜ್ಞಾನಮಯ//29//


ಅಧಮ ಮಾನವನು ಓರ್ವ ಮಂತ್ರೌಷಧಗಳನು ತಾನರಿತು

ಪಾವಕೋದಕಗಳ ಸಂಬಂಧವಿಲ್ಲದಲಿಪ್ಪನು ಅದರೊಳಗೆ

ಪದುಮಜ ಅಂಡ ಉದರನು ಸರ್ವರ ಹೃದಯದೊಳಗೆ ಇರೆ

ಕಾಲಗುಣಕರ್ಮದ ಕಲುಷ ಸಂಬಂಧವಾಗುವುದೇ ನಿರಂಜನಗೆ//30//


ಒಂದು ಗುಣದೊಳು ಅನಂತ ಗುಣಗಳು ಒಂದು ರೂಪದೊಳು ಇಹವು

ಲೋಕಗಳ ಒಂದೇ ರೂಪದಿ ಧರಿಸಿ ತದ್ಗತ ಪದಾರ್ಥದ ಒಳ ಹೊರಗೆ

ಬಾಂದಳದೊಳಿದ್ದು ಬಹು ಪೆಸರಿಂದ ಕರೆಸುತ

ಪೂರ್ಣ ಜ್ನಾನಾನಂದಮಯ ಪರಿಪರಿ ವಿಹಾರವ ಮಾಡಿ ಮಾಡಿಸುವ//31//


ಎಲ್ಲರೊಳು ತಾನಿಪ್ಪ ತನ್ನೊಳಗೆ ಎಲ್ಲರನು ಧರಿಸಿಹನು

ಅಪ್ರತಿಮಲ್ಲ ಮನ್ಮಥಜನಕ ಜಗದ ಆದಿ ಅಂತ ಮಧ್ಯಗಳ ಬಲ್ಲ

ಬಹುಗುಣ ಭರಿತ ದಾನವ ದಲ್ಲಣ ಜಗನ್ನಾಥ ವಿಠಲ

ಸೊಲ್ಲು ಲಾಲಿಸಿ ಸ್ತಂಭದಿಂದಲಿ ಬಂದ ಭಕುತನಿಗೆ//32//


 
//ಇತಿ ಶ್ರೀ ವ್ಯಾಪ್ತಿ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು

Wednesday, December 19, 2012

ಶ್ರೀ ಹರಿಕಥಾಮೃತಸಾರ - 2

//ಶ್ರೀ ಗುರುಭ್ಯೋ ನಮಃ//


//ಪರಮ ಗುರುಭ್ಯೋ ನಮಃ//


//ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ//


ಶ್ರೀ ಜಗನ್ನಾಥದಾಸ ವಿರಚಿತ


ಶ್ರೀ ಹರಿಕಥಾಮೃತಸಾರ


//ಕರುಣಾ ಸಂಧಿ//


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//


ಶ್ರವಣ ಮನಕಾನಂದವೀವುದು ಭವಜನಿತ ದುಃಖಗಳ ಕಳೆವುದು

ವಿವಿಧ ಭೋಗಗಳು ಇಹಪರಂಗಳಲಿ ಇತ್ತು ಸಲಹುವುದು

ಭುವನ ಪಾವನವೆನಿಪ ಲಕ್ಷ್ಮೀ ಧವನ ಮಂಗಳ ಕಥೆಯ

ಪರಮ ಉತ್ಸವದಿ ಕಿವಿಗೊಟ್ಟು ಆಲಿಪುದು ಭೂಸುರರು ದಿನದಿನದಿ//1//


ಮಳೆಯ ನೀರು ಓಣಿಯೊಳು ಪರಿಯಲು, ಬಳಸರು ಊರೊಳಗೆ ಇದ್ದ ಜನರು

ಆ ಜಲವು ಹೆದ್ದೊರೆಗೂಡೆ ಮಜ್ಜನಪಾನ ಗೈದಪರು

ಕಲುಷ ವಚನಗಳ ಆದಡೆಯು, ಬಾಂಬೊಳೆಯ ಪೆತ್ತನ ಪಾದ ಮಹಿಮ

ಆ ಜಲದಿ ಪೊಕ್ಕದರಿಂದ ಮಾಣ್ದಪರೆ ಮಹೀಸುರರು//2//


ಶೃತಿತತಿಗಳ ಅಭಿಮಾನಿ ಲಕ್ಷ್ಮೀಸ್ತುತಿಗಳಿಗೆ ಗೋಚರಿಸದ

ಅಪ್ರತಿಹತ ಮಹೈಶ್ವರ್ಯಾದಿ ಅಖಿಲ ಸದ್ಗುಣ ಗಣಾಂಭೋಧಿ

ಪ್ರತಿದಿವಸ ತನ್ನಂಘ್ರಿ ಸೇವಾರತ ಮಹಾತ್ಮರು ಮಾಡುತಿಹ

ಸಂಸ್ತುತಿಗೆವಶನಾಗುವೆನು ಇವನ ಕಾರುಣ್ಯಕೆ ಏನೆಂಬೆ//3//


ಮನವಚನಕೆ ಅತಿದೂರ ನೆನೆವರನು ಅನುಸರಿಸಿ ತಿರುಗುವನು ಜಾಹ್ನವಿ ಜನಕ

ಜನರೊಳಗಿದ್ದು ಜನಿಸುವ ಜಗದುದರ ತಾನು

ಘನಮಹಿಮ ಗಾಂಗೇಯನುತ ಗಾಯನವ ಕೇಳುತ

ಗಗನಚರ ವಾಹನ ದಿವೌಕಸರೊಡನೆ ಚರಿಸುವ ಮನೆಮನೆಗಳಲ್ಲಿ//4//


ಮಲಗಿ ಪರಮಾದರದಿ ಪಾಡಲು ಕುಳಿತು ಕೇಳುವ

ಕುಳಿತು ಪಾಡಲು ನಿಲುವ ನಿಂತರೆ ನಲಿವ ನಲಿದರೆ ಒಲಿವ ನಿಮಗೆಂಬ

ಸುಲಭನೋ ಹರಿ ತನ್ನವರನು ಅರಘಳಿಗೆ ಬಿಟ್ಟಗಲನು

ರಮಾಧವನ ಒಲಿಸಲರಿಯದೆ ಪಾಮರರು ಬಳಲುವರು ಭವದೊಳಗೆ//5//


 
ಮನದೊಳಗೆ ತಾನಿದ್ದು ಮನವೆಂದು ಎನಿಸಿಕೊಂಬನು

ಮನದ ವೃತ್ತಿಗಳ ಅನುಸರಿಸಿ ಭೋಗಂಗಳೀವನು ತ್ರಿವಿಧ ಚೇತನಕೆ

ಮನವಿತ್ತರೆ ತನ್ನನೀವನು ತನುವ ದಂಡಿಸಿ ದಿನದಿನದಿ ಸಾಧನವ ಮಾಳ್ಪರಿಗೆ

ಇತ್ತಪನು ಸ್ವರ್ಗಾದಿ ಭೋಗಗಳ//6//


ಪರಮ ಸತ್ಪುರುಷಾರ್ಥರೂಪವನು ಹರಿಯು ಲೋಕಕೆ ಎಂದು

ಪರಮಾದರದಿ ಸದುಪಾಸನೆಯ ಗೈವರಿಗೆ ಇತ್ತಪನು ತನ್ನ

ಮರೆದು ಧರ್ಮಾರ್ಥಗಳ ಕಾಮಿಸುವರಿಗೆ ನಗುತ ಅತಿಶೀಘ್ರದಿಂದಲಿ

ಸುರಪತನಯ ಸುಯೋಧನರಿಗೆ ಇತ್ತಂತೆ ಕೊಡುತಿಪ್ಪ //7//


ಜಗವನೆಲ್ಲವ ನಿರ್ಮಿಸುವ ನಾಲ್ಮೊಗನೊಳಗೆ ತಾನಿದ್ದು ಸಲಹುವ

ಗಗನಕೇಶನೊಳಿದ್ದು ಸಂಹರಿಸುವನು ಲೋಕಗಳ

ಸ್ವಗತಭೇದ ವಿವರ್ಜಿತನು ಸರ್ವಗ ಸದಾನಂದೈಕ ದೇಹನು

ಬಗೆಬಗೆಯ ನಾಮದಲಿ ಕರೆಸುವ ಭಕುತರನು ಪೊರೆವ//8//


ಒಬ್ಬನಲಿ ನಿಂದಾಡುವನು ಮತ್ತೊಬ್ಬನಲಿ ನೋಡುವನು

ಬೇಡುವನು ಒಬ್ಬನಲಿ ನೀಡುವನು ಮಾತಾಡುವನು ಬೆರಗಾಗಿ

ಅಬ್ಬರದ ಹೆದ್ದೈವನು ಇವ ಮತ್ತೊಬ್ಬರನ ಲೆಕ್ಕಿಸನು

ಲೋಕದೊಳು ಒಬ್ಬನೇ ತಾ ಬಾಧ್ಯ ಬಾಧಕನಾಹ ನಿರ್ಭೀತ//9//


ಶರಣಜನ ಮಂದಾರ ಶಾಶ್ವತ ಕರುಣಿ ಕಮಲಾಕಾಂತ ಕಾಮದ

ಪರಮ ಪಾವನತರ ಸುಮಂಗಳ ಚರಿತ ಪಾರ್ಥಸಖ

ನಿರುಪಮಾನಂದಾತ್ಮ ನಿರ್ಗತ ದುರಿತ ದೇವವರೇಣ್ಯನೆಂದು

ಆದರದಿ ಕರೆಯಲು ಬಂದೊದಗುವನು ತನ್ನವರ ಬಳಿಗೆ//10//


ಜನನಿಯನು ಕಾಣದಿಹ ಬಾಲಕ ನೆನೆನೆನದು ಹಲುಬುತಿರೆ

ಕತ್ತಲೆ ಮನೆಯೊಳು ಅಡಗಿದ್ದು ಅವನ ನೋಡುತ ನಗುತ ಹರುಷದಲಿ

ತನಯನಂ ಬಿಗಿದಪ್ಪಿ ರಂಬಿಸಿ ಕನಲಿಕೆಯ ಕಳೆವಂತೆ

ಮಧುಸೂದನನು ತನ್ನವರು ಇದ್ದೆಡೆಗೆ ಬಂದೊದಗಿ ಸಲಹುವನು//11//


ಇಟ್ಟಿಕಲ್ಲನು ಭಕುತಿಯಿಂದಲಿ ಕೊಟ್ಟ ಭಕುತಗೆ ಮೆಚ್ಚಿ ತಣ್ಣನೆ ಕೊಟ್ಟ

ಬಡಬ್ರಾಹ್ಮಣನ ಒಪ್ಪಿಡಿಯವಲಿಗೆ ಅಖಿಳಾರ್ಥ

ಕೆಟ್ಟ ಮಾತುಗಳೆಂದ ಚೈದ್ಯನ ಪೊಟ್ಟೆಯೊಳಗಿಂಬಿಟ್ಟ

ಬಾಣದಲಿಟ್ಟ ಭೀಷ್ಮನ ಅವಗುಣಗಳೆಣಿಸಿದನೆ ಕರುಣಾಳು//12//


ಧನವ ಸಂರಕ್ಷಿಸುವ ಫಣಿ ತಾನುಣದೆ ಮತ್ತೊಬ್ಬರಿಗೆ ಕೊಡದೆ

ಅನುದಿನದಿ ನೋಡುತ ಸುಖಿಸುವಂದದಿ

ಲಕುಮಿವಲ್ಲಭನು ಪ್ರಣತರನು ಕಾಯ್ದಿಹನು ನಿಷ್ಕಾಮನದಿ

ನಿತ್ಯಾನಂದಮಯ ದುರ್ಜನರ ಸೇವೆಯನು ಒಲ್ಲನು ಅಪ್ರತಿಮಲ್ಲ ಜಗಕೆಲ್ಲ//13//


ಬಾಲಕನ ಕಲಭಾಷೆ ಜನನಿ ಕೇಳಿ ಸುಖಪಡುವಂತೆ

ಲಕ್ಷ್ಮೀಲೋಲ ಭಕ್ತರು ಮಾಡುತಿಹ ಸಂಸ್ತುತಿಗೆ ಹಿಗ್ಗುವನು

ತಾಳ ತನ್ನವರಲ್ಲಿ ಮಾಡ್ವ ಅವಹೇಳನವ

ಹೆದ್ದೈವ ವಿದುರನ ಆಲಯದಿ ಪಾಲುಂಡು ಕುರುಪನ ಮಾನವನೆ ಕೊಂಡ//14//


ಸ್ಮರಿಸುವವರ ಅಪರಾಧಗಳ ತಾಸ್ಮರಿಸ ಸಕಲ ಇಷ್ಟ ಪ್ರದಾಯಕ

ಮರಳಿ ತನಗೆ ಅರ್ಪಿಸಲು ಕೊಟ್ಟುದ ಅನಂತಮಡಿ ಮಾಡಿ ಪರಿಪರಿಯಲಿಂದ ಉಣಿಸಿ

ಸುಖ ಸಾಗರದಿ ಲೋಲಾಡಿಸುವ ಮಂಗಳಚರಿತ

ಚಿನ್ಮಯಗಾತ್ರ ಲೋಕಪವಿತ್ರ ಸುಚರಿತ್ರ//15//


ಏನು ಕರುಣನಿಧಿಯೋ ಹರಿ ಮತ್ತೇನು ಭಕ್ತಾಧೀನನೋ

ಇನ್ನೇನು ಈತನ ಲೀಲೆ ಇಚ್ಚಾಮಾತ್ರದಲಿ ಜಗವ ತಾನೇ ಸೃಜಿಸುವ ಪಾಲಿಸುವ

ನಿರ್ವಾಣ ಮೊದಲಾದ ಅಖಿಲ ಲೋಕಸ್ಥಾನದಲಿ

ಮತ್ತೆ ಅವರನು ಇಟ್ಟು ಆನಂದ ಬಡಿಸುವನು//16//


ಜನಪ ಮೆಚ್ಚಿದರೆ ಈವ ಧನವಾಹನ ವಿಭೂಷಣ ವಸನಭೂಮಿ

ತನುಮನಗಳ ಇತ್ತು ಆದರಿಪರು ಉಂಟೇನೋ ಲೋಕದೊಳು

ಅನವರತ ನೆನೆವವರ ಅನಂತಾಸನವೆ ಮೊದಲಾದ ಆಲಯದೊಳಿಟ್ಟು

ಅಣುಗನಂದದಲಿ ಅವರ ವಶನಾಗುವ ಮಹಾಮಹಿಮ//17//


ಭುವನ ಪಾವನ ಚರಿತ ಪುಣ್ಯಶ್ರವಣಕೀರ್ತನ ಪಾಪನಾಶನ

ಕವಿಭಿರೀಡಿತ ಕೈರವದಳಶ್ಯಾಮ ನಿಸ್ಸೀಮ

ಯುವತಿವೇಷದಿ ಹಿಂದೆ ಗೌರೀಧವನ ಮೋಹಿನಿ ಕೆಡಿಸಿ ಉಳಿಸಿದ

ಇವನ ಮಾಯವ ಗೆಲುವನಾವನು ಈ ಜಗತ್ರಯದಿ//18//


ಪಾಪಕರ್ಮವ ಸಹಿಸುವಡೆ ಲಕ್ಷ್ಮೀಪತಿಗೆ ಸಮರಾದ ದಿವಿಜರನು

ಈ ಪಯೋಜಭವಾಂಡದೊಳಗೆ ಆವಲ್ಲಿ ನಾ ಕಾಣೆ

ಗೊಪಗುರುವಿನ ಮಡದಿಭೃಗುನಗಚಾಪ ಮೊದಲಾದವರು ಮಾಡ್ದ

ಮಹಾಪರಾಧಗಳ ಎಣಿಸಿದನೆ ಕರುಣಾ ಸಮುದ್ರ ಹರಿ//19//


ಅಂಗುಟಾಗ್ರದಿ ಜನಿಸಿದ ಅಮರತರಂಗಿಣಿಯು ಲೋಕತ್ರಯಗಳ ಅಘಹಿಂಗಿಸುವಳು

ಅವ್ಯಾಕೃತಾಶಾಂತ ವ್ಯಾಪಿಸಿದ ಇಂಗಡಲ ಮಗಳ ಒಡೆಯನ

ಅಂಗೋಪಾಂಗಗಳಲಿ ಇಪ್ಪ

ಅಮಲಾನಂತ ಸುಮಂಗಳಪ್ರದ ನಾಮ ಪಾವನಮಾಳ್ಪದೇನರಿದು//20//


ಕಾಮಧೇನು ಸುಕಲ್ಪತರು ಚಿಂತಾಮಣಿಗಳು

ಅಮರೇಂದ್ರ ಲೋಕದಿ ಕಾಮಿತಾರ್ಥಗಳು ಈವವಲ್ಲದೆ ಸೇವೆ ಮಾಳ್ಪರಿಗೆ

ಶ್ರೀಮುಕುಂದನ ಪರಮ ಮಂಗಳನಾಮ ನರಕಸ್ಥರನು ಸಲಹಿತು

ಪಾಮರರ ಪಂಡಿತರೆನಿಸಿ ಪುರುಷಾರ್ಥ ಕೊಡುತಿಹುದು//21//


ಮನದೊಳಗೆ ಸುಂದರ ಪದಾರ್ಥವ ನೆನೆದು ಕೊಡೆ ಕೈಕೊಂಡು

ಬಲು ನೂತನ ಸುಶೋಭಿತ ಗಂಧ ಸುರಸೋಪೇತ ಫಲರಾಶಿ

ದ್ಯುನದಿ ನಿವಹಗಳಂತೆ ಕೊಟ್ಟು ಅವರನು ಸದಾ ಸಂತೈಸುವನು

ಸದ್ಗುಣವ ಕದ್ದವರ ಅಘವ ಕದಿವನು ಅನಘನೆಂದೆನಿಸಿ//22//


ಚೇತನಾ ಚೇತನ ವಿಲಕ್ಷಣ ನೂತನ ಪದಾರ್ಥಗಳೊಳಗೆ ಬಲುನೂತನ

ಅತಿಸುಂದರಕೆ ಸುಂದರ ರಸಕೆ ರಸರೂಪ

ಜಾತರೂಪೋದರ ಭವ ಆದ್ಯರೊಳು ಆತತ ಪ್ರತಿಮ ಪ್ರಭಾವ

ಧರಾತಳದೊಳು ಎಮ್ಮೊಡನೆ ಆಡುತಲಿಪ್ಪ ನಮ್ಮಪ್ಪ//23//


ತಂದೆ ತಾಯ್ಗಳು ತಮ್ಮ ಶಿಶುವಿಗೆ ಬಂದ ಭಯಗಳ ಪರಿಹರಿಸಿ

ನಿಜ ಮಂದಿರದಿ ಬೇಡಿದುದನು ಇತ್ತು ಆದರಿಸುವಂದದಲಿ

ಹಿಂದೆ ಮುಂದೆ ಎಡಬಲದಿ ಒಳಹೊರಗೆ ಇಂದಿರೇಶನು ತನ್ನವರನು

ಎಂದೆಂದು ಸಲಹುವನು ಆಗಸದೊಳ್ ಎತ್ತ ನೋಡಿದರು//24//


ಒಡಲ ನೆಳಲಂದದಲಿ ಹರಿ ನಮ್ಮೊಡನೆ ತಿರುಗುವನು

ಒಂದರೆಕ್ಷಣ ಬಿಡದೆ ಬೆಂಬಲವಾಗಿ ಭಕ್ತಾದೀನನೆಂದೆನಿಸಿ

ತಡೆವ ದುರಿತೌಘಗಳ ಕಾಮದ ಕೊಡುವ ಸಕಲೇಷ್ಟಗಳ

ಸಂತತ ನಡೆವ ನಮ್ಮಂದದಲಿ ನವಿಸು ವಿಶೇಷ ಸನ್ಮಹಿಮ//25//


ಬಿಟ್ಟವರ ಭವಪಾಶದಿಂದಲಿ ಕಟ್ಟುವನು ಬಹುಕಠಿಣನಿವ

ಶಿಷ್ಟೇಷ್ಟನೆಂದರಿದು ಅನವರತ ಸದ್ಭಕ್ತಿ ಪಾಶದಲಿ ಕಟ್ಟುವರ

ಭವಕಟ್ಟು ಬಿಡಿಸುವ ಸಿಟ್ಟಿನವನು ಇವನಲ್ಲ

ಕಾಮದ ಕೊಟ್ಟುಕಾವನು ಸಕಲ ಸೌಖ್ಯವನು ಇಹಪರಂಗಗಳಲಿ //26//


ಕಣ್ಣಿಗೆ ಎವೆಯಂದದಲಿ ಕೈ ಮೈ ತಿಣ್ಣಿಗೊದಗುವ ತೆರದಿ

ಪಲ್ಗಳು ಪಣ್ಣು ಫಲಗಳನಗಿದು ಜಿಹ್ವೆಗೆ ರಸವನೀವಂತೆ

ಪುಣ್ಯ ಫಲವ ಈವಂದದಲಿ ನುಡಿವೆಣ್ಣಿ ನಾಣ್ಮಾoಡದೊಳು

ಲಕ್ಷ್ಮಣನ ಅಣ್ಣನು ಒದಗುವ ಭಕ್ತರ ಅವಸರಕೆ ಅಮರಗಣ ಸಹಿತ//27//


ಕೊಟ್ಟದನು ಕೈಕೊಂಬ ಅರೆಕ್ಷಣಬಿಟ್ಟಗಲ ತನ್ನವರ

ದುರಿತಗಳ ಅಟ್ಟುವನು ದೂರದಲಿ ದುರಿತಾರಣ್ಯ ಪಾವಕನು

ಬೆಟ್ಟ ಬೆನ್ನಿಲಿ ಹೊರಿಸಿದವರೊಳು ಸಿಟ್ಟು ಮಾಡಿದನೇನೋ ಹರಿ

ಕಂಗೆಟ್ಟ ಸುರರಿಗೆ ಸುಧೆಯನು ಉಣಿಸಿದ ಮುರಿದನಹಿತರನಾ//28//


ಖೇದ ಮೋದ ಜಯಾಪಾಜಯ ಮೊದಲಾದ ದೋಷಗಳಿಲ್ಲ ಚಿನ್ಮಯ ಸಾದರದಿ

ತನ್ನಂಘ್ರಿಕಮಲವ ನಂಬಿ ಸ್ತುತಿಸುವರ ಕಾದುಕೊಂಡಿಹ

ಪರಮಕರುಣ ಮಹೋದಧಿಯು ತನ್ನವರು ಮಾಡ್ದ

ಮಹಾಪರಾಧಗಳ ನೋಡದಲೆ ಸಲಹುವ ಸರ್ವಕಾಮದನು//29//


ಮೀನಕೂರ್ಮ ವರಾಹ ನರಪಂಚಾನನ ಅತುಳ ಶೌರ್ಯ

ವಾಮನ ರೇಣುಕಾತ್ಮಜ ರಾವಣಾದಿನಿಶಾಚರಧ್ವಂಸಿ

ಧೇನುಕಾಸುರಮಥನ ತ್ರಿಪುರವ ಹಾನಿಗೈನಿಸಿದ ನಿಪುಣ

ಕಲಿಮುಖ ದಾನವರ ಸಂಹರಿಸಿ ಧರ್ಮದಿ ಕಾಯ್ದ ಸುಜನರನಾ//30//


ಶ್ರೀ ಮನೋರಮ ಶಮಲ ವರ್ಜಿತ ಕಾಮಿತಪ್ರದ

ಕೈರವದಳ ಶ್ಯಾಮ ಶಬಲ ಶರಣ್ಯ ಶಾಶ್ವತ ಶರ್ಕರಾಕ್ಷ ಸಖ

ಸಾಮಸನ್ನುತ ಸಕಲ ಗುಣಗಣಧಾಮ

ಶ್ರೀ ಜಗನ್ನಾಥ ವಿಠಲನು ಈ ಮಹಿಯೊಳು ಅವತರಿಸಿ ಸಲಹಿದ ಸಕಲ ಸುಜನರನಾ//31//


//ಇತಿ ಶ್ರೀ ಕರುಣಾ ಸಂಧಿ ಸಂಪೂರ್ಣಂ//

ಶ್ರೀ ಕೃಷ್ಣಾರ್ಪಣಮಸ್ತು