Monday, April 11, 2011

ಶ್ರೀ ರಾಮನವಮಿಯ ಶುಭಾಶಯಗಳು.



ಸರ್ವರಿಗೂ ಆ ಶ್ರೀ ರಾಮ ಸನ್ಮಂಗಳವನ್ನುಂಟು ಮಾಡಲಿ.

Wednesday, April 6, 2011

ಮಧ್ವನಾಮ

ಜಯ ಜಯ ಜಗತ್ರಾಣ ಜಗದೊಳಗೆ ಸುತ್ರಾಣ
ಅಖಿಲಗುಣ ಸದ್ಧಾಮ ಮಧ್ವನಾಮ //

ಆವಕಚ್ಚಪ ರೂಪದಿಂದಲಂಡೋದಕದಿ
ಓವಿ ಧರಿಸಿಹ ಶೇಷಮೂರುತಿಯನು
ಆವವನ ಬಲ ಪಿಡಿದು ಹರಿಯ ಸುರರೈದುವರು
ಆ ವಾಯು ನಮ್ಮ ಕುಲ ಗುರುರಾಯನು //೧//

ಆವವನು ದೇಹದಿರೆ ಹರಿಯು ತಾ ನೆಲೆಸಿರುವ
ಆವವನು ತೊಲಗೆ ಹರಿ ತಾ ತೊಲಗುವ
ಆವವನು ದೇಹದೊಳಹೊರಗೆ ನಿಯಾಮಕನು
ಆ ವಾಯು ನಮ್ಮ ಕುಲಗುರುರಾಯನು //೨//

ಕರಣಾಭಿಮಾನಿ ದಿವಿಜರು ದೇಹವ ಬಿಡಲು
ಕುರುಡ ಕಿವುಡನು ಮೂಕನೆಂದೆನಿಸುವ
ಪರಮಮುಖ್ಯಪ್ರಾಣ ತೊಲಗಲಾ ದೇಹವನು
ಅರಿತು ಪೆಣನೆಂದು ಪೇಳ್ವರು ಬುಧಜನ //೩//

ಸುರರೊಳಗೆ ನರರೊಳಗೆ ಸರ್ವ ಭೂತಗಳೊಳಗೆ
ಪರತರನೆನೆಸಿ ನೇಮದಿ ನೆಲೆಸಿಹ
ಹರಿಯನಲ್ಲದೆ ಬಗೆಯ ಅನ್ಯರನು ಲೋಕದೊಳು
ಗುರುಕುಲ ತಿಲಕ ಮುಖ್ಯ ಪವಮಾನನನು //೪//

ತ್ರೇತೆಯಲಿ ರಘುಪತಿಯ ಸೇವೆ ಮಾಡುವೆನೆಂದು
ವಾತಸುತ ಹನುಮಂತನೆಂದೆನಿಸಿದ
ಪೋತಭಾವದಿ ತರಣಿಬಿಂಬಕ್ಕೆ ಲಂಘಿಸಿದ
ಈತಗೆಣೆ ಯಾರು ಮೂರ್ಲೋಕದೊಳಗೆ //೫//

ತರಣಿಗಭಿಮುಖನಾಗಿ ಶಬ್ಧಶಾಸ್ತ್ರವ ಪಠಿಸಿ
ಉರವಣಿಸಿ ಹಿಂದುಮುಂದಾಗಿ ನಡೆದ
ಪರಮ ಪವಮಾನಸುತ ಉದಯಾಸ್ತ್ರಶೈಲಗಳ
ಭರದಿಯೈದಿದಗೀತಗುಪಮೆ ಉಂಟೇ //೬//

ಅಖಿಲ ವೇದಗಳ ಸಾರವ ಧರಿಸಿ ಮುನ್ನ ತಾ
ನಿಖಿಲ ವ್ಯಾಕರಣಶಾಸ್ತ್ರವನು ಪೇಳೆ
ಮುಖದಲ್ಲಿ ಕಿಂಚಿದಪಶಭ್ದ ಇಲಗಿಲ್ಲೆಂದು
ಮುಖ್ಯಪ್ರಾಣನ ರಾಮನನುಕರಿಸಿದ //೭//

ತರಣಿಸುತನನು ಕಾಯ್ದು ಶರಧಿಯನು ನೆರೆ ದಾಟಿ
ಧರಣಿಸುತಯಳ ಕಂಡು ದನುಜರೊಡನೆ
ಭರದಿ ರಣವನೆ ಮಾಡಿ ಗೆಲಿದು ದಿವ್ಯಾಸ್ತ್ರಗಳ
ಉರುಹಿ ಲಂಕೆಗೆ ಬಂದ ಹನುಮಂತನು //೮//

ಹರಿಗೆ ಚೂಡಾಮಣಿಯನಿತ್ತು ಹರಿಗಳ ಕೂಡಿ
ಶರಧಿಯನು ಕಟ್ಟಿ ಬಲು ರಕ್ಕಸರನು
ಒರೆಸಿ ರಣದಲಿ ದಶಶಿರನ ಹುಡಿಗಟ್ಟಿ ತಾ
ಮೆರೆದ ಹನುಮಂತ ಬಲವಂತ ಧೀರ //೯//

ಉರಗಬಂಧಕೆ ಸಿಲುಕಿ ಕಪಿವರರು ಮೈಮರೆಯೆ
ತರುಣಿಕುಲತಿಲಕನಾಜ್ನೆಯನೆ ತಾಳಿ
ಗಿರಿಸಹಿತ ಸಂಜೀವನ ಕಿತ್ತು ತಂದಿತ್ತ
ಸುರನರರೊಳಗೆ ಸರಿಯುಂಟೆ ಹನುಮಂತಗೆ //೧೦//

ವಿಜಯ ರಘುಪತಿ ಮೆಚ್ಚಿ ಧರನಿಸುತೆಯಳಿಗೀಯೇ
ಭಜಿಸಿ ಮೌಕ್ತಿಕದ ಹಾರವನು ಪಡೆದ
ಅಜಪದವಿಯನು ರಾಮ ಕೊಡುವೆನೆನೆ ಹನುಮಂತ
ನಿಜ ಭಕುತಿಯನೆ ಬೇಡಿ ವರವ ಪಡೆದ //೧೧//

ಆ ಮಾರುತನೆ ಭೀಮನೆನೆಸಿ ದ್ವಾಪರದಲಿ
ಸೋಮಕುಲದಲಿ ಜನಿಸಿ ಪಾರ್ಥರೊಡನೆ
ಭೀಮವಿಕ್ರಮ ರಕ್ಕ್ಕಸರ ಮುರಿದೊಟ್ಟಿದ
ಆ ಮಹಿಮ ನಮ್ಮ ಕುಲಗುರುರಾಯನು //೧೨//

ಕರದಿಂದ ಶಿಶುಭಾವನಾದ ಭೀಮನ ಬಿಡಲು
ಗಿರಿಯೊಡೆದು ಶತಶ್ರುಂಗವೆನಿಸಿತು
ಹರಿಗಳ ಹರಿಗಳಿಂ ಕರಿಗಳ ಕರಿಗಳಿಂ
ಅರೇವ ವೀರನಿಗೆ ಸುರನರರು ಸರಿಯೇ //೧೩//

ಕುರುಪ ಗರಳವನಿಕ್ಕೆ ನೆರೆ ಉಂಡು ತೇಗಿ
ಹಸಿದುರಗಗಳ ಮ್ಯಾಲೆ ಬಿದಳದನೊರಸಿದ
ಅರಗಿನಮನೆಯಲ್ಲಿ ಉರಿಯನಿಕ್ಕಲು ವೀರ
ಧರಿಸಿ ಜಾಹ್ನವಿಗೊಯ್ದ ತನ್ನನುಜರ //೧೪//

ಅಲ್ಲಿರ್ದ ಬಕ ಹಿಡಿಂಬಕಬರೆಂಬ ರಕ್ಕಸರ
ನಿಲ್ಲದೊರೆಸಿದ ಲೋಕಕಂಟಕರನು
ಬಲ್ಲಿದಸುರರ ಗೆಲಿದು ದ್ರೌಪದಿಯ ಕೈಪಿಡಿದು
ಎಲ್ಲ ಸುಜನರಿಗೆ ಹರುಷವ ತೋರಿದ //೧೫//

ರಾಜಕುಲವಜ್ರನೆನಿಸಿದ ಮಾಗಧನ ಸೀಳಿ
ರಾಜಸೂಯಯಾಗವನು ಮಾಡಿಸಿದನು
ಆಜಿಯೊಳು ಕೌರವರ ಬಲವ ಸವರುವೆನೆಂದು
ಮೂಜಗವರಿಯೆ ಕಂಕಣ ಕಟ್ಟಿದ //೧೬//

ಕಾನನವ ಪೊಕ್ಕು ಕಿಮ್ಮಿರಾದಿಗಳ ಮುರಿದು
ದಾನವರ ಸವರಬೇಕೆಂದು ಬ್ಯಾಗ
ಮಾನನಿಧಿ ದ್ರೌಪದಿಯ ಮನದಿಂಗಿತವನರಿತು
ಮಾನಿನಿಗೆ ಸೌಗಂಧಿಕವನೆ ತಂದ //೧೭//

ದುರುಳಕೀಚಕನು ದ್ರೌಪದಿಯ ಚೆಲುವಿಕೆಗೆ
ಮರುಳಾಗಿ ಕರೆಕರೆಯ ಮಾಡಲವನ
ಗರಡಿಮನೆಯೊಳು ಬರಸಿ ಸವರಿ ಅವನನ್ವಯವ
ಕುರುಪನಟ್ಟಿದ ಮಲ್ಲ ಕುಲವ ಸದೆದ //೧೮//

ವೈರಿ ದುಶಾಸನ್ನ ತೊಡೆಯ ಮೇಲೆ ಎದೆಗಡಹಿ
ವೀರ ನರಹರಿಯ ಲೀಲೆಯ ತೋರಿದ
ಕೌರವರ ಬಲ ಸವರಿ ವೈರಿಗಳ ನೆಗ್ಗೊತ್ತಿ
ಓರಂತೆ ಕೌರವರ ಮುರಿದು ಮೆರೆದ //೧೯//

ಗುರುಸುತನು ಸಂಗರದಿ ನಾರಾಯಣಾಸ್ತ್ರ ಬಿಡೆ
ಉರವಣಿಸಿ ಬರಲು ಶಸ್ತ್ರವ ಬಿಸುಟದೆ
ಹರಿಯ ಕೃಪೆ ಪಡೆದಿದ್ದ ಭೀಮ ಹುಂಕಾರದಲಿ
ಹರಿಯ ದಿವ್ಯಾಸ್ತ್ರವನು ನೆರೆ ಅಟ್ಟಿದ //೨೦//

ಚಂಡವಿಕ್ರಮನು ಗದೆಗೊಂಡು ರಣದೊಳು
ಭೂಮಂಡಲದೊಳುದ್ಭವಿಸಿದಖಿಲ ಖಳರ
ಹಿಂಡಿ ಬಿಸುಟಿದ ವೃಕೋದರನ ಪ್ರತಾಪವನು
ಕಂಡು ನಿಲ್ಲುವವರಾರು ತ್ರಿಭುವನದೊಳು //೨೧//

ದಾನವರು ಕಲಿಯುಗದೊಳವತರಿಸಿ ವಿಭುದರೊಳು
ವೇನನ ಮತವನರುಹಲದನಿತು
ಜ್ಞಾನಿ ತಾ ಪವಮಾನ ಭೂತಳದೊಳವತರಿಸಿ
ಮಾನನಿಧಿ ಮಧ್ವಾಖ್ಯನೆಂದೆನಿಸಿದ //೨೨//

ಅರ್ಭಕತನವನೈದಿ ಬದರಿಯಲಿ ಮಧ್ವಮುನಿ
ನಿರ್ಭಯದಿ ಸಕಲಶಾಸ್ತ್ರವ ಪಠಿಸಿದ
ಉರ್ಬಿಯೊಳಗಾಮ್ನಾಯತತ್ವದಾ ಮಾರ್ಗವನು
ಸರ್ಬ ಸುಜನರಿಗರುಹಿದ ಮೋದದಿ //೨೩//

ಸರ್ವೇಶ ಹರಿ ವಿಶ್ವ ಎಲ್ಲ ತಾ ಪುಸಿಯೆಂಬ
ದುರ್ವಾದಿಗಳ ಮತವ ನೆರೆ ಖಂಡಿಸಿ
ಸರ್ವೇಶ ಹರಿ, ವಿಶ್ವ ಸತ್ಯವೆಂದರುಹಿದ
ಶರ್ವಾದಿಗೀರ್ವಾಣಸಂತತಿಯಲಿ //೨೪//

ಏಕವಿಂಶತಿ ಕುಭಾಷ್ಯಗಳ ಬೇರನು ತರಿದು
ಶ್ರೀ ಕರಾರ್ಚಿತನೊಲುಮೆ ಶಾಸ್ತ್ರ ರಚಿಸಿ
ಲೋಕತ್ರಯದೊಳಿದ್ದ ಸುರರು ಆಲಿಸುವಂತೆ
ಆ ಕಮಲನಾಭಾದಿಯತಿನಿಕರಕೊರೆದ //೨೫//

ಬದರಿಕಾಶ್ರಮಕೆ ಪುನರಪಿಯೈದಿ ವ್ಯಾಸಮುನಿ
ಪದಕೆರಗಿ ಅಖಿಲವೇದಾರ್ಥಗಳನು
ಪದುಮನಾಭನ ಮುಖದಿ ತಿಳಿದು ಬ್ರಹ್ಮತ್ವವೈದಿದ
ಮಧ್ವಮುನಿರಾಯಗಭಿವಂದಿಪೆ //೨೬//

ಜಯಜಯತು ದುರ್ವಾದಿಮತತಿಮಿರಮಾರ್ತಾಂಡ
ಜಯಜಯತು ವಾದಿಗಜಪಂಚಾನನ
ಜಯಜಯತು ಚಾರ್ವಾಕಗರ್ವಪರ್ವತಕುಲಿಶ
ಜಯಜಯ ಜಗನ್ನಾಥ ಮಧ್ವನಾಥ //೨೭//

ತುಂಗಕುಲಗುರುವರನ ಹೃತ್ಕಮಲದೊಳು ನೆಲೆಸಿ
ಭಂಗವಿಲ್ಲದ ಸುಖವ ಸುಜನಕೆಲ್ಲ
ಹಿಂಗದೆ ಕೊಡುವ ಗುರುಮಧ್ವಾಂತರಾತ್ಮಕ
ರಂಗವಿಠಲನೆಂದು ನೆರೆ ನಂಬಿರೋ //೨೮//